- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಯಾವ ಮೋಹನ ಮುರಳಿ ಕರೆಯಿತು
ನಿರ್ದೇಶನ: ವಿಶ್ವಾಸ ಕೃಷ್ಣ
ನಿರ್ಮಾಣ: ಶರಣಪ್ಪ ಗೌರಮ್ಮ
ತಾರಾಗಣ: ಪ್ರಕೃತಿ ಶರಣ್, ಮಾಧವ್ ಹೆಚ್, ಸ್ವಪ್ನಾ ಶೆಟ್ಟಿಗಾರ, ಪಟೇಲ್ ವರುಣ್ ರಾಜ್, ಶಶಿಧರ್ ಭಟ್ ಮುಂತಾದವರು.
ರೇಟಿಂಗ್: 3/5
ಜೀವನದ ಪಯಣದಲ್ಲಿ ಯಾರು ಹೇಗೆ ಸಿಗುತ್ತಾರೆ, ಯಾಕೆ ಸಿಗುತ್ತಾರೆ ಎಂಬುದು ಯಾರಿಗೂ ಗೊತ್ತಾಗಲ್ಲ. ಸಿಕ್ಕ ಮೇಲೆ ಏನಾಯಿತು ಎಂಬುದಷ್ಟೇ ಉಳಿಯುತ್ತದೆ. ಅದು ವ್ಯಕ್ತಿ ಆಗಿರಬಹುದು, ಪ್ರಾಣಿ ಆಗಿರಬಹುದು ಅಥವಾ ವಸ್ತು ಆಗಿರಬಹುದು. ಇಂತಹುದೇ ಒಂದು ಆಕಸ್ಮಿಕವಾಗಿ ಸಿಗುವ ವ್ಯಕ್ತಿ ಹಾಗೂ ಪ್ರಾಣಿಯನ್ನು ಇಟ್ಟುಕೊಂಡು ಅಚ್ಚುಕಟ್ಟಾದ ಕಥೆಯನ್ನು ಹೊತ್ತು ಬಂದಿರುವ ಸಿನಿಮಾ 'ಯಾವ ಮೋಹನ ಮುರಳಿ ಕರೆಯಿತು'.
ತಾಯಿ ಇಲ್ಲದೆ ತಂದೆಯ ಪ್ರೀತಿಯಲ್ಲಿ ಅವರ ಆದರ್ಶದ ಮಾತುಗಳನ್ನು ಮೈಗೂಡಿಸಿಕೊಂಡು ಬೆಳೆದವ ಮೋಹನ (ಮಾಧವ ಹೆಚ್). ಪ್ರೀತಿ ಮಾಡು ಪ್ರೀತಿ ಹಂಚು ಎಂಬ ತಂದೆಯ ಮಾತಿಗೆ ಹೆಚ್ಚು ಬೆಲೆ ಕೊಡುವವ. ಹೆಂಡತಿ ಸಿಂಧು (ಸ್ವಪ್ನಾ ಶೆಟ್ಟಿಗಾರ) ಮಗಳು ಪ್ರಕೃತಿ (ಪ್ರಕೃತಿ ಶರಣ್) ಜೊತೆ ಹಾಯಾಗಿ ಸಂಸಾರ ನಡೆಸುವ ಮೋಹನ್ದು ಸುಖಿ ಸಂಸಾರ. ಗಂಡ ಹೆಂಡತಿಗೆ ಒಂದೆ ಕೊರಗು ಎಲ್ಲಾ ಮಕ್ಕಳ ತರ ನಮ್ಮ ಮಗಳು ನಡೆಯಲ್ಲ ಆಟವಾಡಲ್ಲ ಎಂಬುದು. ಹುಟ್ಟಿನಿಂದಲೇ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ಪ್ರಕೃತಿ ವೀಲ್ ಚೇರ್ನಲ್ಲಿಯೇ ಬಾಲ್ಯ ಕಳೆಯುತ್ತಿದ್ದಾಳೆ. ಇಂತಹ ಸುಂದರ ಸಂಸಾರಕ್ಕೆ ಹೊಸ ಅಥಿತಿ ಎನ್ನುವಂತೆ ಆಕಸ್ಮಿಕವಾಗಿ ಎಂಟ್ರಿ ಕೊಡುತ್ತಾನೆ ರಾಕಿ (ನಾಯಿ). ಯಾವ ಕುಂದು ಕೊರತೆ ಬಾರದೆ ಸುಂದರವಾಗಿ ಸಾಗುತ್ತಿರುವ ಸಂಸಾರಕ್ಕೆ ಮತ್ತೋಬ್ಬ ಅಥಿತಿಯಾಗಿ ಮುರಳಿ ಬರುತ್ತಾನೆ. 8 ವರ್ಷಗಳ ಹಿಂದೆ ಹೆಂಡತಿಯಿಂದ ದೂರ ಆಗಿದ್ದ ಮುರಳಿ (ಪಟೇಲ್ ವರುಣ್ ರಾಜ್) ಆ ಊರಿಗೆ ಬಂದದ್ದೇ ಮಗಳನ್ನು ಹುಡುಕಿಕೊಂಡು. ಮುರಳಿಯ ಹೆಂಡತಿ ಯಾರು? ಮೋಹನ್ಗೂ ಮುರಳಿಗೂ ಏನು ಸಂಬಂಧ. ಕಥೆಯಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ತಿಳಿಯಲು ಈ ಸಿನಿಮಾ ನೋಡಲೇ ಬೇಕು.
ಮಲೆನಾಡಿನ ಸುಂದರ ಪರಿಸರ ಈ ಚಿತ್ರದ ಹೈಲೈಟ್ ಎನ್ನಬಹುದು. ಸಿನಿಮಾ ನೋಡುಗರಿಗೆ ಹಚ್ಚ ಹಸಿರಿನ ಪರಿಸರ ಕಣ್ಣಿಗೆ ತಂಪು, ಮನಸ್ಸಿಗೆ ಮುದ ನೀಡುತ್ತದೆ. ಅಷ್ಟು ಚನ್ನಾಗಿ ಕಟ್ಟಿ ಕೊಟ್ಟಿದ್ದಾರೆ ಛಾಯಾಗ್ರಾಹಕ ಕೀರ್ತನ್ ಪೂಜಾರಿ. ಚಿತ್ರದ ಸ್ಕ್ರೀನ್ ಪ್ಲೇ ಮೇಲೆ ನಿರ್ದೇಶಕರು ಇನ್ನಷ್ಟು ಕೆಲಸ ಮಾಡಿದ್ದರೇ ಸಿನಿಮಾಗೆ ಇನ್ನಷ್ಟು ಶಕ್ತಿ ಬರುತಿತ್ತು. ನಿರ್ಮಾಪಕರೇ ಹೇಳಿಕೊಂಡಂತೆ ಈ ಚಿತ್ರವನ್ನು ಅವರು ತಮ್ಮ ಮಗಳಿಗಾಗಿ ನಿರ್ಮಾಣ ಮಾಡಿದ್ದಾರೆ. ಅವರ ಶ್ರಮ ಸ್ಕ್ರೀನ್ನಲ್ಲಿ ಕಾಣಿಸುತ್ತದೆ. ಒಟ್ಟಿನಲ್ಲಿ ಇದೊಂದು ಪ್ರಾಣಿ-ಮನುಷ್ಯ ಪ್ರೀತಿಯ ಭಾವನಾತ್ಮಕ ಸಿನಿಮಾ. ಅದರಲ್ಲೂ ಪೆಟ್ (ಸ್ವಾನ) ಲವ್ವರ್ಗಳಿಗೆ ಈ ಸಿನಿಮಾ ಹೆಚ್ಚಾಗಿ ಇಷ್ಟವಾಗುತ್ತದೆ.