- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ – ವಲವಾರ
ನಿರ್ಮಾಪಕರು – ಜೆ. ಗಿರಿಧರ್, ಅನಿರುದ್ ಗೌತಮ್, ಸಹನ ನಾಗರಾಜ್, ಸಾನ್ಯಾ ಅರೋರ.
ನಿರ್ದೇಶನ – ಸುತಾನ್ ಗೌಡ
ಕಲಾವಿದರು – ವೇದಿಕ್ ಕೌಶಲ್, ಶಯನ್, ಮಾಲತೇಶ್, ಹರ್ಷಿತಾ ಗೌಡ, ಅಭಯ್ ಮುಂತಾದವರು.
ರೇಟಿಂಗ್: 3.5/5
“ವಲವಾರ” ಚಿತ್ರವು ಈವಾರ ಬಿಡುಗಡೆಯಾದ ಕನ್ನಡ ಸಿನಿಮಾವಾಗಿದ್ದು, ಸುತಾನ್ ಗೌಡ ನಿರ್ದೇಶನದಲ್ಲಿ ತಯಾರಾಗಿದೆ. ಇದು ಬಡ ಕುಟುಂಬದಲ್ಲಿನ ಮಕ್ಕಳ ಮನಸ್ಥಿತಿ ಹಾಗೂ ಮಕ್ಕಳಿನ ನಡುವಿನ ತಾರತಮ್ಯದ ಬಗ್ಗೆ ಹೆಣೆಯಲಾದ ಕಥೆಯಾಗಿದೆ.
ಚಿಕ್ಕಹಳ್ಳಿ ಊರಿನ ಬಡ ಕುಟುಂಬದಲ್ಲಿ ಕುಂಡೇಸಿ (ವೇದಿಕ್ ಕೌಶಲ್) ಮತ್ತು ಚಿಕ್ಕ ತಮ್ಮ ಕೊಸುಡಿ (ಶಯನ್) ಅಣ್ಣ-ತಮ್ಮಂದಿರು. ತಂದೆ (ಮಾಲತೇಶ್) ಚಿಕ್ಕ ಮಗನಿಗೆ ಹೆಚ್ಚು ಪ್ರೀತಿ ತೋರುತ್ತಾನೆ, ಹಿರಿಯ ಮಗ ಕುಂಡೇಸಿಯನ್ನು ಕಂಡರೆ ಸಿಡುಕುವುದು, ಹೊಡೆಯುವುದು, ರೇಗುವುದೆ ಮಾಡುತ್ತಾನೆ ಇದರಿಂದ ಕುಂಡೇಸಿ ಮಾನಸಿಕವಾಗಿ ನೋವು ಅನುಭವಿಸುತ್ತಾನೆ. ತಂದೆಯನ್ನು ಕಟ್ಟಿಹಾಕಿ ಹೊಡೆಯಬೇಕೆಂಬ ಅವನ ಸುಪ್ತ ಮನಸ್ಸಿನ ವ್ಯಾಕುಲತೆಯನ್ನು ನಿರ್ದೇಶಕರು ಮೊದಲ ದೃಶ್ಯದಲ್ಲೇ ಕನಸಿನ ಮೂಲಕ ತೋರಿಸಿದ್ದಾರೆ. ತಂದೆ ಮಾಲತೇಶ್ ಗೆ ಅವರ ಅಪ್ಪನ ಕಡೆಯಿಂದ ಬಂದ ಒಂದಷ್ಟು ಭೂಮಿಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಲು ಶತಾಯ ಗತಾಯ ಕಷ್ಟ ಪಡುತ್ತಲೇ ಇರುತ್ತಾನೆ. ಹಾಗೆ ರಿಜಿಸ್ಟ್ರಾರ್ ಕಛೇರಿಯ ಅಧಿಕಾರಿ ನಿಮ್ಮ ಮನೆಯ ಹಸು ಕರು ಹಾಕಿದ ಕೂಡಲೇ ಅದರ ಮೊದಲ ಗಿಣ್ಣು ಹಾಲು ತಂದು ಕೊಡುವಂತೆ ಹೇಳಿರುತ್ತಾನೆ. ಆದರೆ ಹಸು ಕರು ಹಾಕಬಾಕಾದ ನಿಗದಿತ ದಿನಾಂಕ ಮುಗಿದು 15 ದಿನವಾಗಿದ್ದರೂ ಕರು ಹಾಕಿರುವುದಿಲ್ಲ. ಈ ಎಲ್ಲಾ ಗೊಂದಲಗಳಿಂದ ಬೇಸತ್ತಿದ್ದ ಮಾಲತೇಶ್ ತನ್ನ ಕೋಪ, ದುಗುಡವನ್ನೆಲ್ಲಾ ಮಗ ಕುಂಡೇಸಿ ಮೇಲೆ ತೀರಿಸಿ ಕೊಳ್ಳುತ್ತಿರುತ್ತಾನೆ. ಆದರೆ ಕುಂಡೇಸಿಗೆ ಎಲ್ಲಾ ರೀತಿಯಲ್ಲಿ ಸಮಾಧಾನ ಮಾಡಿ, ಪ್ರೀತಿ ತೋರಿಸಿ ಸಂತೈಸುವುದು ಅವನ ತಾಯಿ. ಒಂದು ದಿನ ಅಪ್ಪ ಸಿಟಿಗೆ ಹೋದಾಗ ಹಸುವನ್ನು ಮೇಯಿಸಲು ಅಣ್ಣ, ತಮ್ಮರಾದ ಕುಂಡೇಸಿ ಮಾತ್ತು ಕೋಸೂಡಿ ಇಬ್ಬರು ಹೋಗುತ್ತಾರೆ. ತಮ್ಮನ ಎಡವಟ್ಟಿನಿಂದ ಗೌರಿ ಹಸು ಕಾಣೆಯಾದಾಗ, ಕುಂಡೇಸಿ ಅಪ್ಪನಿಗೆ ಗೊತ್ತಾದರೆ ಏನು ಮಾಡುವುದು ಎಂದು ನನೆದು ಹೆದರುತ್ತಾನೆ. ಒಂದೇ ರಾತ್ರಿಯಲ್ಲಿ ಬದುಕಿನ ಹಲವು ಕಷ್ಟಗಳನ್ನು ಎದುರಿಸುತ್ತಾನೆ.
ಚಿತ್ರವು ಮಗುವಿನ ಭಯ, ಅತಂಕದ ನಿರ್ಧಾರಗಳನ್ನು ಒಳಗೊಂಡಿದೆ. ನಟನೆ ಮತ್ತು ತಂತ್ರಗಾರಿಕೆ ವೇದಿಕ್ ಕೌಶಲ್ನ ಕುಂಡೇಸಿ ಪಾತ್ರ ಹಾಗೂ ಕೋಸೂಡಿ ಶಯನ್ ಪಾತ್ರಗಳ ಅಭಿನಯ ಅಚ್ಚುಕಟ್ಟಾಗಿ ಮತ್ತು ಭಾವನಾತ್ಮಕವಾಗಿದೆ, ಹರ್ಷಿತಾ ಗೌಡ ತಾಯಿಯಾಗಿ ಮತ್ತು ಮಾಲತೇಶ್ ತಂದೆಯಾಗಿ ಸಹಜವಾಗಿ ಕಾಣುತ್ತಾರೆ. ಅಭಯ್ ಕೋಳಿ ಕಳ್ಳನಾಗಿ ನೈಜವಾಗಿ ಅಭಿನಯಿಸಿದ್ದಾರೆ.
ಬಾಲರಾಜ್ ಗೌಡ ರವರ ಛಾಯಾಗ್ರಹಣ, ಕದ್ರಿ ಮಣಿಕಾಂತ್ ರವರ ಸಂಗೀತ ಮತ್ತು ಸರಳ ಚಿತ್ರಕಥೆ ಚಿತ್ರದ ಶಕ್ತಿಯಾಗಿದೆ. ಮಕ್ಕಳಲ್ಲಿ ತಾರತಮ್ಯ ಮಾಡಬಾರದು ಮತ್ತು ಮಕ್ಕಳ ಚಿಕ್ಕ ಚಿಕ್ಕ ಆಸೆಗಳನ್ನು ಕಡೆಗಣಿಸ ಬಾರದು ಎಂಬುದನ್ನು ನಿರ್ದೇಶಕರು ಚನ್ನಾಗಿ ತೋರಿಸಿದ್ದಾರೆ.