- ರಾಘವೇಂದ್ರ ಅಡಿಗ ಎಚ್ಚೆನ್.
ಶಿಕ್ಷಣ ಕ್ಷೇತ್ರದಿಂದ ಬಂದು ಚಿತ್ರ ನಿರ್ಮಾಪಕಿಯಾದ ದಿಟ್ಟ ಮಹಿಳೆ ಗೀತಪ್ರಿಯಾರ ಸಾಹಸ ನಿಜಕ್ಕೂ ಮೆಚ್ಚತಕ್ಕದ್ದು. 'ತಾಯವ' ಚಿತ್ರದ ಮೂಲಕ ಇವರು ಮಹಿಳಾ ಪ್ರೇಕ್ಷಕರಿಗೆ ಏನು ಹೇಳಬಯಸುತ್ತಾರೆ.....?
ಇತ್ತಿಚೆಗೆ ಕನ್ನಡವೂ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಸಾಕಷ್ಟು ಸಂಖ್ಯೆಯ ಪ್ರಯೋಗಾತ್ಮಕ ಸಿನಿಮಾಗಳು ಬರುತ್ತಿವೆ. ಅದರಲ್ಲಿಯೂ ಹೊಸ ಪ್ರತಿಭಾವಂತ ನಟ ನಟಿಯರು, ನಿರ್ದೇಶಕರು ಚಿತ್ರೋದ್ಯಮಕ್ಕೆ ಬರುತ್ತಿದ್ದಾರೆ. ಅದರಂತೆ ಚಿತ್ರ ನಿರ್ಮಾಣ ಕ್ಷೇತ್ರದಲ್ಲಿಯೂ ಬಹು ಸಂಖ್ಯೆಯಲ್ಲಿ ಹೊಸಬರ ಆಗಮನವಾಗಿದೆ. ಅದರಲ್ಲಿ ಐಟಿ ಕ್ಷೇತ್ರದವರು, ಶಿಕ್ಷಣ ಕ್ಷೇತ್ರ, ರಿಯಲ್ ಎಸ್ಟೇಟ್ ಸೇರಿದಂತೆ ನಾನಾ ಕ್ಷೇತ್ರದ ವ್ಯಕ್ತಿಗಳು ಚಿತ್ರ ನಿರ್ಮಾಣ ಮಾಡಿದ್ದಾರೆ, ಮಾಡುತ್ತಿದ್ದಾರೆ.
ಇತ್ತೀಚೆಗೆ ಬಂದಿರುವ ನವೀನ ಚಿತ್ರಗಳಲ್ಲಿ ಮಾಮೂಲಿಯಾದ ಪ್ರೀತಿ, ಪ್ರೇಮ, ಗ್ಯಾಂಗ್ ವಾರ್ ಅಂತಹ ವಿಷಯಗಳಲ್ಲದೆ ವೈದ್ಯಕೀಯ ಸಂಶೋಧನೆ, ಶಿಕ್ಷಣದ ಮಹತ್ವ, ಅನ್ಯಾಯದ ವಿರುದ್ಧ ನ್ಯಾಯಾಲದಲ್ಲಿ ಕಾನೂನಿನ ಸಮರ ಹೀಗೆ ನಾನಾ ಮಹತ್ವದ ವಿಷಯ ವೈವಿಧ್ಯತೆಗಳಿರುತ್ತವೆ. ಅಂತಹುದೇ ಸಾಲಿನಲ್ಲಿ ಸೇರಬಹುದಾದ ಇತ್ತೀಚಿನ ಒಂದು ಹೊಸಾ ಸಿನಿಮಾ ಎಂದರೆ 'ತಾಯವ್ವ.
ಗ್ರಾಮೀಣ ಸೂಲಗಿತ್ತಿ
'ತಾಯವ್ವ' ಎಂದರೆ ಗ್ರಾಮಗಳಲ್ಲಿರುವ ಸೂಲಗಿತ್ತಿ. ಈ ಸಿನಿಮಾ ಹೇಳಹೊರಟಿರುವುದು ಸಹ ಅದೇ ಸೂಲಗಿತ್ತಿಯ ಕಥೆ. ಇಂದಿನ ಯುವ ಪೀಳಿಗೆಗೆ ಹೆರಿಗೆಗಳೆಂದರೆ ಆಸ್ಪತ್ರೆಗಳಲ್ಲಿ ನಡೆಸುವ ಸಹಜ ಅಥವಾ ಸಿಸೇರಿಯನ್ ಹೆರಿಗೆಗಳ ಕುರಿತಂತೆ ಅರಿವಿರುತ್ತದೆ. ಆದರೆ ನಮ್ಮ ಹಿಂದಿನ ತಲೆಮಾರಿನಲ್ಲಿ ಯಾರೂ ಹೆರಿಗೆಗಾಗಿ ಆಸ್ಪತ್ರೆಗೆ ಹೋದವರಲ್ಲ. ಬದಲಿಗೆ ಆಯಾ ಗ್ರಾಮಗಳಲಿದ್ದ ಸೂಲಗಿತ್ತಿಯರೇ ಹೆರಿಗೆಯನ್ನು ಮಾಡಿಸುತ್ತಿದ್ದರು. ಅವೆಲ್ಲವೂ ಸಹಜ ಹೆರಿಗೆಗಳಾಗಿರುತ್ತಿದ್ದವು.
ಇಂತಹ ಸೂಲಗಿತ್ತಿಯರ ಜೀವನ ಹೇಗಿರುತ್ತದೆ ಎನ್ನುವುದನ್ನು ಇಂದಿನ ಆಧುನಿಕ ಸಮಾಜಕ್ಕೆ ಪರಿಚಯಿಸುವುದಕ್ಕಾಗಿ ಇರುವ ಸಿನಿಮಾ 'ತಾಯವ್ವ.' ಗ್ರಾಮೀಣ ಸೊಗಡಿನ ಕಥಾಹಂದರ, ಸೂಲಗಿತ್ತಿಯ ಬದುಕಿನ ಮೇಲೊಂದು ಚಿತ್ರ ಈ 'ತಾಯವ್ವ.'
ತಾಯವ್ವನಾಗಿ ಉಮಾಶ್ರೀ
ಈ ಹಿಂದೆ ಕಿಚ್ಚ ಸುದೀಪ್ ಹಾಗೂ ಉಮಾಶ್ರೀ ಅಭಿನಯದ 'ತಾಯವ್ವ' ಸಿನಿಮಾ ತೆರೆಗೆ ಬಂದಿತ್ತು. ಆದು ಸುದೀಪ್ ಚೊಚ್ಚಲ ಸಿನಿಮಾ ಸಹ ಹೌದು. ಈಗ ಮತ್ತೆ ಅದೇ ಹೆಸರಿನಲ್ಲಿ ಈ ಸಿನಿಮಾ ಬಂದಿದೆ. ಈ ಬಾರಿ 'ತಾಯವ್ವ'ನಾಗಿ ಗೀತಪ್ರಿಯಾ ಕಾಣಿಸಿಕೊಂಡಿದ್ದಾರೆ.
'ಆಮರ ಫಿಲಂಸ್ ಮತ್ತು 'ಜಯಶಂಕರ ಟಾಕೀಸ್ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗಿರುವ 'ತಾಯವ್ವ' ಸಿನಿಮಾಕ್ಕೆ ಸಾತ್ವಿಕ್ ಪವನ್ ಕುಮಾರ್ ನಿರ್ದೇಶನ ನೀಡಿದ್ದಾರೆ. ಅನಂತ್ ಆರ್ಯನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ 'ತಾಯವ್ವ' ಚಿತ್ರದ ಗೀತೆಗಳಿಗೆ ಸ್ವತಃ ಗೀತಪ್ರಿಯಾ ಆವರೇ ಧ್ವನಿಯಾಗಿದ್ದಾರೆ.
ಬಹುಮುಖ ಪ್ರತಿಭೆ ಗೀತಪ್ರಿಯಾ
ಅಂದಹಾಗೆ ಈ ಗೀತಪ್ರಿಯಾ ಅವರದು ಬಹುಮುಖ ಪ್ರತಿಭೆ. ಶಿಕ್ಷಣ, ಸಮಾಜಸೇವೆ, ಮಹಿಳಾಪರ ಹೋರಾಟ, ಇತರ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಈಕೆ 'ತಾಯವ್ವ' ಚಿತ್ರದ ಮೂಲಕ ನಟಿ, ನಿರ್ಮಾಪಕಿ, ಗಾಯಕಿಯಾಗಿ ಚಿತ್ರರಂಗಕ್ಕೆ ಬಂದಿದ್ದಾರೆ.
ಸಾಮಾನ್ಯ ಕುಟುಂಬದಿಂದ ಬಂದು ಇಷ್ಟೆಲ್ಲಾ ಸಾಧನೆ ಮಾಡಿ ಇನ್ನಷ್ಟು ಮಹಿಳೆಯರಿಗೆ ಸ್ಫೂರ್ತಿಯಾಗಬಲ್ಲ ಗೀತಪ್ರಿಯಾರ ಕಿರುಪರಿಚಯ ಈ ಮುಂದಿದೆ.
ಗೀತಪ್ರಿಯಾರ ಹಿನ್ನೆಲೆ
ಮೂಲತಃ ಚಿಕ್ಕಮಗಳೂರಿನವರಾದ ಗೀತಪ್ರಿಯಾ ಉನ್ನತ ವ್ಯಾಸಂಗ, ವೃತ್ತಿಕ್ಷೇತ್ರದಲ್ಲಿ ಸಾಧನೆ ಮಾಡಿರುವುದೆಲ್ಲವೂ ಬೆಂಗಳೂರಿನಲ್ಲಿಯೇ. 'ಕೃಪಾನಿಧಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಮೂಲಕ ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ ಹಾಗೂ ಸಮಾಜಮುಖಿ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರ ಈ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶದಾದಾದ್ಯಂತ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ರಾಪು ಮೂಡಿಸಿದ್ದಾರೆ.
ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಎಲ್ಲಾ ಹಂತದ ಶಿಕ್ಷಣವನ್ನು ಒಂದೇ ಕಡೆ ಸಿಗುವಂಥ ಸೌಕರ್ಯವನ್ನು ಇಲ್ಲಿ ಕಲ್ಪಿಸಲಾಗಿದೆ. ಇಂಥ ಸಾಧನೆಗಾಗಿ
ಗೀತಪಿ ಯಾರಿಗೆ ದೇಶ ವಿದೇಶಗಳ, ನೂರಾರು ಪ್ರತಿಷ್ಠಿತ ಸಂಘ-ಸಂಸ್ಥೆಗಳು, ಸರ್ಕಾರಗಳು ಪ್ರಶಸ್ತಿ ನೀಡಿ ಗೌರವಿಸಿದೆ.
ಇಂತಹ ಗೀತಪ್ರಿಯಾ ಈಗ 'ತಾಯವ್ವ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಗ್ರಾಮೀಣ ಮಹಿಳೆಯೊಬ್ಬರು ಹೆಣ್ಣುಮಕ್ಕಳ ರಕ್ಷಣೆಗಾಗಿ ಹೇಗೆಲ್ಲಾ ಹೋರಾಟ ನಡೆಸುತ್ತಾರೆ ಎನ್ನುವ ಕಥೆಯನ್ನು 'ತಾಯವ್ವ' ನಮಗೆ ಸಾರಿ ಹೇಳುತ್ತದೆ.
ಇಂಥ ಸಿನಿಮಾ ಮಾಡುವುದಕ್ಕೆ ನಿಮಗೇನು ಪ್ರೇರಣೆ ಎಂದು ಕೇಳಿದಾಗ - ''ನನಗೆ ಮೊದಲಿನಿಂದಲೂ ಕಲಾತ್ಮಕ ಸಿನಿಮಾಗಳ ಕಡೆ ಒಲವಿತ್ತು. ಸಾಮಾಜಿಕ ಸಂದೇಶವಿರುವ ಚಿತ್ರಗಳು ವಿಶೇಷವಾಗಿ ಮಹಿಳಾ ಪ್ರೇಕ್ಷಕರ ಮನ ಮುಟ್ಟುತ್ತದೆ ಎಂದು ನಾನು ಭಾವಿಸಿದ್ದೇನೆ. ಹಾಗಾಗಿ 'ತಾಯವ್ವ' ಸಿನಿಮಾ ನಿರ್ಮಿಸಿದ್ದೇನೆ,'' ಎಂದರು. 'ತಾಯವ್ವ' ಸಿನಿಮಾ ಎಲ್ಲಿಯೂ ಕೃತಕತೆಯಿಂದ ಕೂಡಿಲ್ಲ. ಎಲ್ಲವನ್ನೂ ಸಹಜವಾಗಿ ತೋರಿಸಲಾಗಿದೆ. ಈ ಸಿನಿಮಾ ಪ್ರೇಕ್ಷಕರಿಗೆ ಆಲೋಚಿಸುವಂತೆ ಮಾಡುತ್ತದೆ. ಸಾಮಾನ್ಯ ಮಹಿಳೆಯೊಬ್ಬಳ ಹಿಂದಿನ ಮಹಾನ್ ಶಕ್ತಿಯ ಕುರಿತು ಇಲ್ಲಿ ತೋರಿಸಿರುವುದಾಗಿ ನಿರ್ಮಾಪಕಿ, ನಟಿ ಗೀತಪ್ರಿಯಾ ಹೇಳಿದ್ದಾರೆ.
ಗೀತಪ್ರಿಯಾರ ಮೊದಲ ಚಿತ್ರ
'ಈ ಚಿತ್ರದ ಮೂಲಕ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ. ಇದು ನನಗೆ ಮೊದಲು ಸಿನಿಮಾ ಆಗಿದ್ದರೂ ಸಹ ಕಥೆ, ಕಲಾವಿದರ ಆಯ್ಕೆಯಿಂದ ಹಿಡಿದು ಸಿನಿಮಾ ಬಿಡುಗಡೆಗಾಗಿ ಏನೆಲ್ಲಾ ಪರಿಶ್ರಮ ಪಡಬೇಕಾಗುತ್ತದೆ ಎನ್ನುವುದನ್ನು ನಾನು ಈ 'ತಾಯವ್ವ'ನಿಂದ ಕಲಿತಿದ್ದೇನೆ," ಎಂದು ಹೇಳುತ್ತಾರೆ.
ಇನ್ನು 'ತಾಯವ್ವ' ಸಿನಿಮಾ ಆರಂಭವಾದಾಗಿನಿಂದ ಬಿಡುಗಡೆಯಾಗುವವರೆಗೂ ಸಾಕಷ್ಟು ಸಂಖ್ಯೆಯ ಗಣ್ಯರು ಗೀತಪ್ರಿಯಾರ ಬೆಂಬಲಕ್ಕೆ ನಿಂತಿದ್ದಾರೆ. ಇವರಿಗೆಲ್ಲಾ ಗೀತಪ್ರಿಯಾ ಧನ್ಯವಾದ ಹೇಳುತ್ತಾರೆ.
ಗಣ್ಯರ ಹಾರೈಕೆ
'ನನಗೆ ಮೊದಲಿನಿಂದ ಇಲ್ಲಿಯವರೆಗೆ ಹಲವಾರು ಗಣ್ಯರು ಬೆಂಬಲಿಸಿದ್ದಾರೆ. ನನ್ನ ಈ ಕೆಲಸಕ್ಕೆ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ. ಹಿರಿಯ ನಟಿ ಉಮಾಶ್ರೀ ಮತ್ತು ಮಾಜಿ ಡಿಸಿಎಂ ಆರ್. ಅಶೋಕ್, ನಟ ಕಿಚ್ಚ ಸುದೀಪ್, ಹಿರಿಯ ನಟ ಪ್ರಯಣರಾಜ ಶ್ರೀನಾಥ್, ಪದ್ಮಶ್ರೀ ಪ್ರಶಸ್ತಿ ವಿಜೇತ ವೈದ್ಯೆ ಡಾ. ಕಾಮಿನಿ ರಾವ್ ಇಂತಹವರಲ್ಲಿ ಕೆಲವರು. ಇವರೆಲ್ಲಾ ನನ್ನ 'ತಾಯವ್ವ' ಸಿನಿಮಾವನ್ನು ನಾನಾ ಹಂತಗಳಲ್ಲಿ ಬೆಂಬಲಿಸಿ ಬೆನ್ನು ತಟ್ಟಿದ್ದಾರೆ. ಅವರಿಗೆ ನನ್ನ ಹೃತ್ತೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ,'' ಎಂದು ಗೀತಪ್ರಿಯಾ ಹೇಳುತ್ತಾರೆ.
ಕನ್ನಡ ಚಿತ್ರರಂಗದಲ್ಲಿ ಇಂದು ಚಿತ್ರಗಳ ಪೈಪೋಟಿ ಸಂಖ್ಯೆ ದೊಡ್ಡದಾಗಿದೆ. ಆದರೆ ಮೌಲ್ಯಯುತ ಸಿನಿಮಾಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರವೇ ಎಂದರೆ ಅದು ತಪ್ಪಲ್ಲ. ಅಂತಹ ಒಂದು ಮೌಲ್ಯಯುತವಾದ ಸಿನಿಮಾ 'ತಾಯವ್ವ' ಈಗ ಪ್ರೇಕ್ಷಕರ ಬೆಂಬಲ ಬಯಸಿದೆ. ನಮ್ಮಸಿನಿ ರಸಿಕರು ಇಂಥ ಸಿನಿಮಾಗಳನ್ನು ಬೆಂಬಲಿಸುವ ಮೂಲಕ ಮುಂಬರುವ ದಿನಗಳಲ್ಲಿ ಗೀತಪ್ರಿಯಾ ಹಾಗೂ ಅವರಂಥ ಇತರೆ ಸಾಧಕಿಯರ ಸಾಕಷ್ಟು ಸಂಖ್ಯೆಯಲ್ಲಿ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಕಾರಣವಾಗಬೇಕಿದೆ.
ಇದೇ ಸಂದರ್ಭದಲ್ಲಿ ಬಹುಮುಖ ಪ್ರತಿಭಾವಂತ ಮಹಿಳೆಯ ಗೀತಪ್ರಿಯಾರ ಮು೦ದಿನ ಯೋಜನೆಗಳು ಸಫಲವಾಗಲಿ ಎಂದು 'ಗೃಹಶೋಭಾ' ಹಾರೈಸುತ್ತಾಳೆ.