ಬದರಿನಾಥ (Badrinath)
"ದೇವ ಭೂಮಿ" ಎಂದಎ ಕರೆಯಲ್ಪಡುವ ಉತ್ತರಾಖಂಡ ರಾಜ್ಯವು ಸಾಕಷ್ಟು ಮಹತ್ವ ಪಡೆದ ಧಾರ್ಮಿಕ ಆಕರ್ಷಣೆಗಳನ್ನು ಹೊತ್ತು ನಿಂತ, ಹಿಮಾಲಯ ಪರ್ವತಗಳ ಬುಡದಲ್ಲಿ ನೆಲೆಸಿರುವ ಸುಂದರವಾದ ರಾಜ್ಯವಾಗಿದೆ. ಇಲ್ಲಿ ಸಾಕಷ್ಟು ತೀರ್ಥ ಯಾತ್ರಾ ಕ್ಷೇತ್ರಗಳಿರುವುದು ವಿಶೇಷ. ಹಿಂದುಗಳು ತಮ್ಮ ಜೀವಮಾನದಲ್ಲೊಮ್ಮೆಯಾದರೂ ಭೇಟಿ ನೀಡಲೇಬೇಕಾದ ತೀರ್ಥ ಕ್ಷೇತ್ರಗಳ ಪೈಕಿ ಚಾರ್ ಧಾಮ್ ಯಾತ್ರೆಯಲ್ಲಿ ಬರುವ ಬದರಿನಾಥ, ಕೂಡ ಒಂದಾಗಿದೆ ಬದರಿನಾಥ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿರುವ ಧಾರ್ಮಿಕ ಮಹತ್ವವಿರುವ ಪಟ್ಟಣವಾಗಿದೆ. ಬದರಿನಾಥ ದೇವಾಲಯವು 50 ಅಡಿಗಳಷ್ಟು ಎತ್ತರವಿರುವ ರಚನೆಯಾಗಿದ್ದು ಬಂಗಾರದ ಪುಟ್ಟ ಗೋಪುರವನ್ನು ಹೊಂದಿದೆ. ಕಲ್ಲುಗಳಿಂದ ನಿರ್ಮಿಸಲಾಗಿರುವ ದೇವಾಲಯವು ಕಮಾನಿನಾಕಾರದ ಕಿಟಕಿಗಳನ್ನು ಹಾಗೂ ಪ್ರವೇಶಿಸಲು ಮೆಟ್ಟಿಲುಗಳನ್ನು ಹೊಂದಿದೆ. ದೇವಾಲಯವು ಅಲಕಾನಂದ ನದಿಯ ದಡದಲ್ಲಿರುವ ಎರಡು ಪರ್ವತ ಶ್ರೇಣಿಗಳ ಮಧ್ಯೆದಲ್ಲಿದೆ. ಬದ್ರಿನಾಥ ದೇವಾಲಯದಲ್ಲಿನ ವಿಷ್ಣುವಿನ ವಿಗ್ರಹವನ್ನು ಶಾಲಿಗ್ರಾಮ ಕಲ್ಲಿನಿಂದ ನಿರ್ಮಿಸಲಾಗಿದೆ. ವಿಗ್ರಹವನ್ನು ದೇವಸ್ಥಾನದ ಬದ್ರಿ ಮರದ ಕೆಳಗೆ ಚಿನ್ನದ ಆವರಣದಲ್ಲಿ ಇರಿಸಲಾಗಿದೆ. ಈ ವಿಗ್ರಹವು ಯೋಗಮುದ್ರೆಯಲ್ಲಿದ್ದು, ವಿಗ್ರಹದಲ್ಲಿನ ದೇವರಿಗೆ 4 ಕೈಗಳಿವೆ. ಒಂದು ಕೈಯಲ್ಲಿ ಚಕ್ರವನ್ನು, ಇನ್ನೊಂದು ಕೈಯಲ್ಲಿ ಶಂಖವನ್ನು ಹಾಗೂ ಇನ್ನೆರೆಡು ಕೈಗಳಲ್ಲಿ ಯೋಗ ಮುದ್ರೆಯನ್ನು ನೋಡಬಹುದಾಗಿದೆ. ಬದ್ರಿನಾಥ ವಿಗ್ರಹದಲ್ಲಿನ ದೇವರ ಹಣೆಯ ಮೇಲೆ ವಜ್ರವನ್ನು ಕೆತ್ತಲಾಗಿದ್ದು, ಇದು ನೋಡುತ್ತಿದ್ದಂತೆ ದೇವರು ಭಕ್ತರನ್ನು ಆಶೀರ್ವದಿಸುವಂತೆ ಕಾಣುತ್ತದೆ. ಬದ್ರನಾಥನ ವಿಗ್ರಹವನ್ನು ಹೊರತುಪಡಿಸಿ ಇಲ್ಲಿ ಏಕಾದಶಿ ದೇವಿಯ ವಿಗ್ರಹವನ್ನು ಕೂಡ ನೋಡಬಹುದಾಗಿದೆ.
ತಮಿಳು ಅಳ್ವರರು ನಮೂದಿಸಿರುವ ದಿವ್ಯ ದೇಸಂನ, ವಿಷ್ಣುವಿಗೆ ಮುಡಿಪಾದ 108 ಪವಿತ್ರ ಕ್ಷೇತ್ರಗಳ ಪೈಕಿ ಒಂದಾಗಿರುವ ಬದರಿನಾಥ ದೇವಾಲಯವು ವೈಷ್ಣವರ ಪ್ರಮುಖ ಯಾತ್ರಾ ಕೇಂದ್ರವಾಗಿ ಗಮನ ಸೆಳೆಯುತ್ತದೆ. ಬದರಿನಾಥಕ್ಕೆ ತೆರಳಲು ದೆಹಲಿ, ಹರಿದ್ವಾರ ಹಾಗೂ ರಿಶಿಕೇಷಗಳು ಪ್ರಮುಖ ಪಟ್ಟಣಗಳಾಗಿವೆ. ಈ ಸ್ಥಳಗಳಿಂದ ಕ್ರಮವಾಗಿ ಬದರಿನಾಥ 525 ಕಿ.ಮೀ, 325 ಕಿ.ಮೀ ಹಾಗೂ 296 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.
ಬದರಿನಾಥ ಕ್ಷೇತ್ರದ ಮಹಿಮೆ ಏನು, ಮಹತ್ವ ಏನು, ಎನ್ನುವುದನ್ನು ತಿಳಿಯಲು ಮುಂದೆ ಓದಿ-
ಸಂಸ್ಕೃತದಲ್ಲಿ ಬದರಿ ಅಥವಾ ಬದ್ರಿ ಎಂದರೆ ಎಲಚಿ ಕಾಯಿ / ಬೋರೆ ಕಾಯಿ (ಬಾರಿ ಕಾಯಿ) ಎಂದಾಗುತ್ತದೆ. ಕೆಲವು ಪೌರಾಣಿಕ ಉಲ್ಲೇಖಗಳಲ್ಲಿ ಹೇಳಿರುವಂತೆ ಒಂದೊಮ್ಮೆ ಈ ಸ್ಥಳದಲ್ಲಿ ಬೋರೆಕಾಯಿಗಳು ಅತ್ಯಂತ ಹೆಚ್ಚಾಗಿ ಬೆಳೆಯುತ್ತಿದ್ದವಂತೆ. ಹಾಗಾಗಿ ಇದಕ್ಕೆ ಬದರಿ ಅಥವಾ ಬದ್ರಿ ಎಂಬ ಹೆಸರು ಬಂದಿತೆನ್ನಲಾಗಿದೆ. ಲ್ಲಿರುವ ವಿಷ್ಣುವಿನ ದೇವಾಲಯದಿಂದಾಗಿ ಇದಕ್ಕೆ ಬದರಿನಾಥ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಬದರಿಗಳಿರುವ ನಾಡಿನ ನಾಥ (ಒಡೆಯ) ನಾಗಿ ಬದರಿನಾಥನನ್ನು ಕೊಂಡಾಡಲಾಗುತ್ತದೆ.
ಇನ್ನು ಆದಿ ಶಂಕರಾಚಾರ್ಯರು ಧರ್ಮ ಪ್ರಸಾರಕ್ಕಾಗಿ ಭಾರತ ಸಂಚರಿಸುವ ಸಂದರ್ಭದಲ್ಲಿ ಈ ಸ್ಥಳಕ್ಕೆ ಬಂದಾಗ ಅಲಕನಂದಾ ನದಿಯಲ್ಲಿ ಕಪ್ಪು ಸಾಲಿಗ್ರಾಮ ಶಿಲೆಯಲ್ಲಿ ಒಡಮೂಡಿದ ಬದರಿನಾರಾಯಣನ ವಿಗ್ರಹವು ದೊರೆತಿತ್ತು. ಹೀಗೆ ದೊರೆತ ನಾರಾಯಣನನ್ನು ಅವರು ತಪ್ತ ಕುಂಡ ಎಂಬ ಬಿಸಿ ನೀರಿನ ಬುಗ್ಗೆ ಬಳಿಯಿರುವ ಗುಹೆಯೊಂದರಲ್ಲಿ ಪ್ರತಿಷ್ಠಾಪಿಸಿ ಪ್ರವರ್ಧಮಾನಕ್ಕೆ ಬರುವಂತೆ ಮಾಡಿದ್ದರು. ನಂತರ ಹದಿನೈದನೇಯ ಶತಮಾನದಲ್ಲಿ ಇಲ್ಲಿನ ಗಡ್ವಾಲ್ ಪ್ರಾಂತವನ್ನಾಳುತ್ತಿದ್ದ ಅರಸನು ಈ ವಿಗ್ರಹವನ್ನು ಈಗಿರುವ ದೇವಾಲಯಕ್ಕೆ ಸ್ಥಳಾಂತರಿಸಿದನು.
***
ಒಮ್ಮೆ ವಿಷ್ಣು ಲೋಕ ಕಲ್ಯಾಣಾರ್ಥವಾಗಿ ಥುಲಿಂಗ್ ಎಂಬ ಹಿಮಾಲಯ ಪರ್ವತಗಳಲ್ಲಿ ತಪಗೈಯುತ್ತಿರುವಾಗ ಅಲ್ಲಿನ ಮಾಂಸಾಹಾರಿಗಳು ಹಾಗೂ ಅಪವಿತ್ರರನ್ನು ಕುಂಡು ಬೇಸರಗೊಂಡು ಬದರಿ ಸ್ಥಳಕ್ಕೆ ಬಂದು ತಪಗೈಯಲು ಪ್ರಾರಂಭಿಸಿದ. ಆದರೆ ಈ ಸ್ಥಳದಲ್ಲಿ ವಿಷ್ಣುವಿಗೆ ಸಾಕಷ್ಟು ಚಳಿಯುಂಟಾದಾಗ ಲಕ್ಷ್ಮಿ ದೇವಿಯು ಸ್ವತಃ ಜೂಜುಬಿ/ಬೋರೆ ಕಾಯಿಯ ಗಿಡಗಳ ಕಾಡಿನ ರೂಪ ತಳೆದು ವಿಷ್ಣುವನ್ನು ಕಾಯತೊಡಗಿದಳು. ಇದರಿಂದ ಪ್ರಸನ್ನನಾದ ನಾರಾಯಣ ಬದ್ರಿಕಾ ಆಶ್ರಮ ಎಂದು ಕರೆದ.
***
ಅತ್ಯಂತ ಹಿಂದೆ ಪರಶಿವನು ತನ್ನ ಕುಟುಂಬದೊಂದಿಗೆ ಬದ್ರಿನಾಥದಲ್ಲಿ ವಾಸಿಸುತ್ತಿದ್ದನಂತೆ. ಒಮ್ಮೆ ಶ್ರೀಹರಿಯು ತಾನು ಏಕಾಂತವಾಗಿ ಧ್ಯಾನ ಮಾಡಲು ಪ್ರಶಾಂತ ಸ್ಥಳವನ್ನು ಹುಡುಕುತ್ತಿರುವಾಗ ಶ್ರೀಹರಿಗೆ ಬಲು ಇಷ್ಟವಾಗಿದ್ದು ಇದೇ ಬದ್ರಿನಾಥ. ಆದರೆ ಶ್ರೀಹರಿ ವಿಷ್ಣುವಿಗೆ ಬದ್ರಿನಾಥ ದೇವಾಲಯದಲ್ಲಿ ಪರಶಿವನು ನೆಲೆಸಿದ್ದಾನೆನ್ನುವುದು ತಿಳಿದಿತ್ತು ಆದ್ದರಿಂದ ಪರಶಿವನನ್ನು ಅಲ್ಲಿಂದ ಬೇರೆಡೆಗೆ ಕಳುಹಿಸಲು ಉಪಾಯವೊಂದನ್ನು ಹೂಡಿದನು.
ವಿಷ್ಣುವು ಮಗುವಿನ ಅವತಾರವನ್ನು ಧರಿಸಿ ಬದ್ರಿನಾಥದಲ್ಲಿ ಜೋರಾಗಿ ಅಳಲು ಆರಂಭಿಸಿದನು. ಪುಟ್ಟ ಮಗು ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಕಂಡ ಪಾರ್ವತಿಯು ಆ ಮಗುವನ್ನು ಸಮಾಧಾನಗೊಳಿಸಲು ಮುಂದಾದಳು ಆದರೆ ಮಗುವಿನ ರೂಪದಲ್ಲಿದ್ದ ವಿಷ್ಣು ಸಮಾಧಾನಗೊಳ್ಳದೇ ಮತ್ತಷ್ಟು ಜೋರಾಗಿ ಅಳತೊಡಗಿದನು. ಪಾರ್ವತಿಗೆ ಆ ಮಗು ಯಾರೆಂದು ಗುರುತಿಸಲು ಸಾಧ್ಯವಾಗದಿದ್ದರೂ ಪರಶಿವನಿಗೆ ಆ ಮಗು ವಿಷ್ಣುವೇ ಎಂದು ತಿಳಿಯಿತು. ಪಾರ್ವತಿ ಮಗುವನ್ನು ಸಮಾಧಾನಗೊಳಿಸಲು ಕೋಣೆಯೊಳಗೆ ಕರೆದುಕೊಂಡು ಹೋಗುವಾಗ ಪರಶಿವನು ಬೇಡವೆಂದು ತಡೆಯುತ್ತಾನೆ. ಆದರೆ ಶಿವನ ಮಾತನ್ನು ಅಲ್ಲಗಳೆದ ಪಾರ್ವತಿಯು ಮಗುವನ್ನು ಸಮಾಧಾನಗೊಳಿಸಲು ಒಳಗೆ ಕರೆದುಕೊಂಡು ಹೋಗಿ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸಮಾಧಾನಪಡಿಸುತ್ತಾಳೆ. ವಿಷ್ಣು ಪಾರ್ವತಿ ಹೊರಗಡೆ ಹೋಗಲೆಂದು ನಿದ್ರಿಸುವಂತೆ ನಾಟಕವಾಡುತ್ತಾನೆ. ಆಗ ಪಾರ್ವತಿಯು ಮಗು ಮಲಗಿದೆಯೆಂದು ಬಾಗಿಲಿನಿಂದ ಹೊರಗಡೆ ಹೋಗುತ್ತಾಳೆ. ಆ ಸಂದರ್ಭದಲ್ಲಿ ವಿಷ್ಣು ಬಾಗಿಲನ್ನು ಮುಚ್ಚಿ ಶಿವನಿಗೆ ಮತ್ತು ಪಾರ್ವತಿಗೆ ಕೇದರನಾಥದಲ್ಲಿ ನೆಲೆಸುವಂತೆ ಹೇಳುತ್ತಾನೆ. ಅಂದಿನಿಂದ ಬದ್ರಿನಾಥದಲ್ಲಿ ವಿಷ್ಣುವು ನೆಲೆಸುತ್ತಾನೆ. ಹಾಗೂ ಪರಶಿವನು ತನ್ನ ಕುಟುಂಬದೊಂದಿಗೆ ಕೇದರನಾಥದಲ್ಲಿ ನೆಲೆಯಾಗುತ್ತಾನೆ.
ಇನ್ನು ಪರಶಿವನು ಹಾಗೆ ಕೇದಾರಕ್ಕೆ ತೆರಳುವ ಸಮಯದಲ್ಲಿ ಇಲ್ಲಿ ತನ್ನೊಂದು ಅಂಶವನ್ನು ಉಳಿಸಿ ಹೋಗಿದ್ದು ಅದನ್ನು ಇಂದು ಆದಿ ಕೇದಾರ ಎನ್ನಲಾಗುತ್ತದೆ. ಬದರಿನಾರಾಯಣನ ದೇವಾಲಯದ ಎಡಭಾಗದಿಂದ ಸ್ವಲ್ಪ ಕೆಳಗಿಳಿದರೆ ಅಲ್ಲಿ ಆದಿ ಕೇದಾರ ಮಂದಿರವಿದ್ದು ಕೇದಾರನಾಥಕ್ಕೆ ಹೋಗಲಾಗದವರು ಇಲ್ಲಿಯೇ ದರ್ಶನ ಮಾಡಿ ಕೇದಾರನಾಥನ ದರ್ಶನ ಫಲ ಪಡೆಯಬಹುದಾಗಿದೆ.
***
ಒಮ್ಮೆ ಲಕ್ಷ್ಮಿ ದೇವಿಯು ತನ್ನ ತವರಿಗೆ ಹೋದಾಗ ವಿಷ್ಣುವಿಗೆ ತನ್ನ ಸತಿಯಿಲ್ಲದೇ ದಿನವನ್ನು ಹೇಗೆ ಕಳೆಯುವುದೆನ್ನುವುದರ ಕುರಿತು ಚಿಂತೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ವಿಷ್ಣು ಧ್ಯಾನ ಮಾಡಲು ಕುಳಿತುಕೊಳ್ಳುತ್ತಾನೆ. ಲಕ್ಷ್ಮಿಯು ತವರು ಮನೆಯಿಂದ ಹಿದಿರುಗಿ ವಿಷ್ಣುವಲ್ಲಿಗೆ ಬರುತ್ತಾಳೆ. ಆಗ ವಿಷ್ಣು ಎಲ್ಲಿಯೂ ಕೂಡ ಕಾಣಿಸುವುದಿಲ್ಲ. ಲಕ್ಷ್ಮಿ ತುಂಬಾ ಸಮಯಗಳ ಕಾಲ ಹುಡುಕಿದ ನಂತರ ವಿಷ್ಣು ಆಲದ ಮರದ ಬಳಿ ಧ್ಯಾನ ಮಾಡುತ್ತಿರುವುದನ್ನು ನೋಡುತ್ತಾಳೆ. ಆಗ ಲಕ್ಷ್ಮಿ ವಿಷ್ಣುವನ್ನು ಬದ್ರಿನಾಥ ಎನ್ನುವ ಹೆಸರಿನಿಂದ ಕೂಗಿ ಕರೆದ ಕಾರಣ ಆ ಸ್ಥಳವು ಬದ್ರಿನಾಥವಾಗಿದೆ ಎನ್ನಲಾಯಿತು.
ಇನ್ನೊಂದು ಕಥೆಯ ಪ್ರಕಾರ ದೀರ್ಘ ಕಾಲ ನಾರಾಯಣನನ್ನು ಬಿಟ್ಟಿರಲಾಗದ ಲಕ್ಷ್ಮಿ ತಪಸ್ಸಿಗೆ ಕುಳಿತ ವಿಷ್ಣುವಿಗೆ ಆಹಾರ, ರಕ್ಷಣೆ, ನೆರಳು ನೀಡಲು ಮುಳ್ಳುಗಳಿಂದ ಕೂಡಿದ ಬದರಿ ವೃಕ್ಷವಾಗಿ ಈ ಸ್ಥಳದಲ್ಲಿ ನೆಲೆಯಾಗಿದ್ದಾಳೆ. ಆ ವೃಕ್ಷ ವಿಶಾಲವಾಗಿ ಹರಡಿಕೊಂಡು ವಿಶಾಲ ಬದರಿ ಎಂದು ಹೆಸರಾಯಿತು ಹಿಂದೆ ಕ್ಷೇತ್ರದ ತುಂಬಾ ಎಲ್ಲೆಲ್ಲೂ ಕಂಡು ಬರುತ್ತಿದ್ದ ಬದರಿ ವೃಕ್ಷ ಇಂದು ಲಕ್ಷ್ಮಿ ಸ್ತಂಭ ಎನ್ನುವ ಗುರುತಿನಲ್ಲಿ ಮಾತ್ರವೇ ಉಳಿದುಕೊಂಡಿದೆ.
***
ಕ್ಷೇತ್ರಪಾಲ ಘಂಟಾಕರ್ಣ
ಬದರಿ ಕ್ಷೇತ್ರದ ಕ್ಷೇತ್ರಪಾಲ ಘಂಟಕರ್ಣನ ಕಥೆ ಸಹ ಸ್ವಾರಸ್ಯವಾಗಿದೆ. ಘಂತಕರ್ಣ ಒಬ್ಬ ರಾಕ್ಷಸನಾಗಿದ್ದು ಅವನು ರಾಮಾಯಣದಲ್ಲಿ ಬರುವ ರಾವಣನಂತೆ ಶಿವಭಕ್ತನಾಗಿದ್ದನು. ಅವನು ಶಿವನನ್ನು ಕುರಿತು ಸಾವಿರಾರು ವರ್ಷ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಳ್ಳುತ್ತಾನೆ. ಆಗ ಅವನಿಗೆ ಶಿವನು ಪ್ರತ್ಯಕ್ಷ್ಯವಾಗಿ "ವರವೇನು ಬೇಕು" ಎಂದು ಕೇಳಲು ತನಗೆ ಮುಕ್ತಿ ಕರುಣಿಸು ಎನ್ನುತ್ತಾನೆ. ಆದರೆ ಶಿವನು ಈ ಬದರಿ ಕ್ಷೇತ್ರವು ನಾರಾಯಣನಿಗೆ ಸೇರಿದೆ, ನಾನು ಇಲ್ಲಿ ನಿನಗೆ ಮುಕ್ತಿ ಕೊಡುವ ಅಧಿಕಾರ ಹೊಂದಿಲ್ಲ. ಅದಕ್ಕಾಗಿ ನೀನು ನಾರಾಯಣನ್ನ್ನು ಕೇಳಿಕೊಳ್ಲಬೇಕು ಎಂದಾಗ ಘಂಟಾಕರ್ಣನಿಗೆ ನಾರಾಯಣನನ್ನು ಕೇಳಲು ಮನಸ್ಸಾಗುವುದಿಲ್ಲ ಆಗ ಶಿವನು ಹಾಗಿದ್ದರೆ ನೀನಿಲ್ಲಿ ಕ್ಷೇತ್ರಪಾಲಕನಾಗಿ ಇರುವವನಾಗು ಎಂದಾಗ ಅವನು ಅದಕ್ಕೆ ಒಪ್ಪಿ ಇಲ್ಲಿಯ ಕ್ಷೇತ್ರಪಾಲಕನಾಗುತ್ತಾನೆ. ವಿಷ್ಣುವಿನ ಶತ್ರುವಾಗಿದ್ದ ಘಂಟಾಕರ್ಣ ವಿಷ್ಣುವಿನ ಹೆಸರು ಕೇಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಯಾವಾಗಲೂ ತನ್ನ ಕಿವಿಗಳಿಗೆ ಗಂಟೆ ಕಟ್ಟಿಕೊಂಡು ಓಡಾಡುತ್ತಿದ್ದನು. ಮತ್ತು ಈ ರೀತಿಯಾಗಿ ಕಿವಿಗಳಿಗೆ ಗಂಟೆ ಕಟ್ಟಿಕೊಂಡ ಕಾರಣ ಅವನಿಗೆ ಘಂಟಾಕರ್ಣ ಎನ್ನುವ ಹೆಸರಾಗಿದೆ.
ಇನ್ನು ಈ ಘಂಟಾಕರ್ಣನ ಜನನದ ಬಗ್ಗೆ ಹೇಳುವುದಾದರೆ ದಾರುಕನು ಬ್ರಹ್ಮನಿಂದ ವರವನ್ನು ಪಡೆದ ನಂತರ , ಲೋಕಕ್ಕೆ ತುಂಬಾ ಕಿರುಕುಳ ಕೊಡುತ್ತಿದ್ದನು ಮತ್ತು ಅವನ ಉಪಟಳ ಅಸಹನೀಯವಾದಾಗ ಶಿವನು ತನ್ನ ಮೂರನೇ ಕಣ್ಣಿನಿಂದ ಭದ್ರಕಾಳಿಯನ್ನು ಸೃಷ್ಟಿಸಿದನು ಮತ್ತು ಅವಳು ಅಸುರನನ್ನು ಕೊಂದಳು . ದಾರುಕನ ಪತ್ನಿ ಮತ್ತು ಮಾಯಾಳ ಮಗಳು ಮಂಡೋದರಿ ತನ್ನ ಪತಿಯ ಮರಣದಿಂದ ದುಃಖದಲ್ಲಿ ಮುಳುಗಿದಳು. ಅವಳು ತಪಸ್ಸನ್ನು ಮಾಡಲು ಪ್ರಾರಂಭಿಸಿದಳು . ಶಿವನು ಕಾಣಿಸಿಕೊಂಡು ತನ್ನ ದೇಹದಿಂದ ಕೆಲವು ಹನಿ ಬೆವರನ್ನು ಅವಳಿಗೆ ಕೊಟ್ಟನು, ಅವಳು ಯಾರ ಮೇಲೆ ಬೆವರು ಹನಿಗಳನ್ನು ಸಿಂಪಡಿಸುತ್ತಾಳೋ ಅವರು ಸಿಡುಬಿನಿಂದ ಬಳಲುತ್ತಾರೆ ಮತ್ತು ಅಂತಹ ರೋಗಿಗಳು ಅವಳನ್ನು (ಮಂಡೋದರಿ) ಪೂಜಿಸುತ್ತಾರೆ ಮತ್ತು ಅವಳಿಗೆ ಅಗತ್ಯವಾದ ಆಹಾರವನ್ನು ನೀಡುತ್ತಾರೆ ಎಂದು ಹೇಳಿದನು. ಆ ದಿನದಿಂದ ಮಂಡೋದರಿ ಸಿಡುಬಿನ ಅಧಿದೇವತೆಯಾದಳು. ಬೆವರಿನ ಹನಿಗಳೊಂದಿಗೆ ಭೂಮಿಗೆ ಹಿಂತಿರುಗುವಾಗ ಮಂಡೋದರಿ ಭದ್ರಕಾಳಿಯನ್ನು ಭೇಟಿಯಾದಳು, ಅವಳ ಗಂಡನ ಸಾವಿಗೆ ಸೇಡು ತೀರಿಸಿಕೊಳ್ಳಲು ಅವಳು ಆ ಬೆವರಿನ ಹನಿಗಳನ್ನು ಎಸೆದಳು. ತಕ್ಷಣವೇ ಭದ್ರಕಾಳಿ ಸಿಡುಬಿನ ದಾಳಿಯಿಂದ ಕೆಳಗೆ ಬಿದ್ದಳು. ಈ ಘಟನೆಯ ಬಗ್ಗೆ ಕೇಳಿದ ಶಿವನು ಘಂಟಾಕರ್ಣ ಎಂಬ ಭಯಾನಕ ರಾಕ್ಷಸನನ್ನು ಸೃಷ್ಟಿಸಿದನು. ಶಿವನ ನಿರ್ದೇಶನದ ಪ್ರಕಾರ ಘಂಟಾಕರ್ಣ ಭದ್ರಕಾಳಿಯ ದೇಹದಿಂದ ಸಿಡುಬನ್ನು ನೆಕ್ಕಿದನು. ಆದರೆ, ಅವನು ಅದನ್ನು ಆಕೆಯ ಮುಖದಿಂದ ನೆಕ್ಕಲು ಪ್ರಯತ್ನಿಸಿದಾಗ ಅವಳು ಅವನನ್ನು ತಡೆದಳು, ತಾನು ಮತ್ತು ಘಂಟಾಕರ್ಣ ಸೋದರ್ ಸೋದರಿಯರು ಮತ್ತು ಸೋದರಿಯ ಮುಖವನ್ನು ಸೋದರ ನೆಕ್ಕುವುದು ಅನುಚಿತ ಎಂದು ಹೇಳಿದಳು. ಮತ್ತು, ಇಂದಿಗೂ ಸಹ ಭದ್ರಕಾಳಿಯ ಮುಖದ ಮೇಲಿನ ಸಿಡುಬು ಅವಳಿಗೆ ಆಭರಣವಾಗಿ ಉಳಿದಿದೆ.
ದ್ವಾಪರ ಯುಗದಲ್ಲಿ ಕೃಷ್ಣನು ಕ್ಷೇತ್ರ ಪರ್ಯಟನೆಯ ನಿಮಿತ್ತ ಬದರಿ ಕ್ಷೇತ್ರಕ್ಕೆ ಬಂದಾಗ ಅಲ್ಲಿ ಘಂಟಾಕರ್ಣನ ಬೇಟಿಯಾಗುತ್ತದೆ. ಅವನು ಕೃಷ್ಣನಿಗೆ ತಾನು ನಾರಾಯಣನ ದರ್ಶನ ಪಡೆಯಬೇಕು ಎನ್ನುವ ಉದ್ದೇಶ ಹೊಂದಿದ್ದಾಗಿ ಹೇಳುತ್ತಾನೆ. ಅದಕಾಗಿ ಅವನು ರಾಕ್ಷಕಸರು ಸಾಮಾನ್ಯವಾಗಿ ನೀಡುವ ಅತ್ಯುನ್ನತ ಗೌರವದ ಉಡುಗೊರೆಯಾದ ಸತ್ತ ಬ್ರಾಹ್ಮಣನ ಅರ್ಧ ಶವವನ್ನು ಕೃಷ್ಣನಿಗೆ ಅರ್ಪಿಸುತ್ತಾನೆ. ಅದರಿಂದ ಸಂತುಷ್ಟನಾದ ಕೃಷ್ಣ ಅವನ ಬೆನ್ನಿನ ಮೇಲೆ ತಟ್ಟುತ್ತಾನೆ. ಅದರಿಂದಾಗಿ ಘಂಟಾಕರ್ಣ ತನ್ನ ದೇಹವನ್ನು ತ್ಯಜಿಸಿ ವೈಕುಂಠಕ್ಕೆ ತೆರಳುತ್ತಾನೆ ಮುಕ್ತಿ ಪಡೆಯುತ್ತಾನೆ ಎಂದು ಭವಿಷ್ಯ ಪುರಾಣ ಕಥೆ ಹೇಳಿದೆ. ಹೀಗೆ ರಾಕ್ಷಸನೊಬ್ಬ ದೇವತೆಯಾಗಿ ಬದಲಾಗಿ ಇಂದಿಊ ಸಿಡುಬನ್ನು ಗುಣಪಡಿಸುತ್ತಾನೆ ಎಂದು ನಂಬಲಾಗುತ್ತದೆ.