Sunday, April 06, 2025

ದ್ವಾದಶ ಜ್ಯೋತಿರ್ಲಿಂಗಗಳ ನಡುವಿನ ನಿಗೂಢ ರಹಸ್ಯ

 ಹಿಂದುಗಳ ಪವಿತ್ರ 12 ಜ್ಯೋತಿರ್ಲಿಂಗಗಳ ನಡುವಿನ‌ ಈ ರಹಸ್ಯ ಕಂಡು ವಿಜ್ಞಾನಿಗಳೇ ಬೆಚ್ಚಿಬಿದ್ದಾದ್ದಾರೆ!!! ಏನು ಆ ವಿಸ್ಮಯ ಗೊತ್ತೆ?

ಭಾರತದ ಅಪರೂಪದ ಸಂಸ್ಕೃತಿ, ನಮ್ಮ ಪೂರ್ವಜರಿಗಿದ್ದ ಅದ್ವಿತೀಯ ವಿಜ್ಞಾನ ಹಾಗು ಖಗೋಳಶಾಸ್ತ್ರದಲ್ಲಿ ಅವರಿಗಿದ್ದ ಪಾಂಡಿತ್ಯವನ್ನು ಒಂದೇ ಒಂದು ಉದಾಹರಣೆಯ ಮೂಲಕ ತಿಳಿಸಿ ನಮ್ಮಲ್ಲಿ ಚಾಣಾಕ್ಷತನ ಎಷ್ಟಿದೆ ಅನ್ನೋದನ್ನ ಹೇಳುತ್ತೇನೆ.
ಇದನ್ನ ಓದಿದ ನಂತರ ನಿಮಗೆ ನಮ್ಮ ಸಂಸ್ಕೃತಿ, ಬುದ್ಧಿಮತ್ತೆಯಿಂದ ನಿಮಗೆ ಹಿಂದೂ ಅಂತ ಹೇಳಿಕೊಳ್ಳೋಕೆ ಹೆಮ್ಮೆಯಂತೂ ಇಮ್ಮಡಿಯಾಗುತ್ತೆ.
‘ಮಹಾಕಾಲ’ದಿಂದ ಭಾರತದಲ್ಲಿರುವ ಶಿವನ ಜ್ಯೋತಿರ್ಲಿಂಗಗಳ ನಡುವಿನ ಅದ್ಭುತ ಸಂಬಂಧ ರಹಸ್ಯ, ರೋಚಕ ಹಾಗು ನಂಬಲಸಾಧ್ಯ.
ಈ ಭೂಮಂಡಲ ಅಥವಾ ಪೃಥ್ವಿಯ ಕೇಂದ್ರಸ್ಥಾನ(Centre of the Earth) ಉಜ್ಜಯಿನಿ ಅನ್ನೋದನ್ನ ನಮ್ಮ ಸನಾತನಿಗಳು ಯಾವಾಗಲೋ ಸಾವಿರಾರು ವರ್ಷಗಳ ಹಿಂದೆಯೇ ತಿಳಿಸಿದ್ದರು, ಅದು ನಿಜವಂತ ಇತ್ತೀಚಿನ ಅನೇಕ ಸಂಶೋಧನೆಗಳೂ ಒಪ್ಪಿವೆ. ಈ ಉಜ್ಜಯಿನಿಗೂ ನಮ್ಮ ಪೂರ್ವಜರಿಗೂ ಅವರಿಗಿದ್ದ ಖಗೋಳಶಾಸ್ತ್ರದ ಪಾಂಡಿತ್ಯಕ್ಕೂ ಸಂಬಂಧವೇನಂತ ಯೋಚಸುತ್ತಿದೀರಾ.
ಅದಕ್ಕೂ ಕಾರಣವಿದೆ. ಭಾರತದಲ್ಲಿರುವ ಶೇಷ ಜ್ಯೋತಿರ್ಲಿಂಗಗಳ ಸಂಬಂಧ ಉಜ್ಜಯಿನಿಯೊಂದಿಗಿದೆ.
ಅದನ್ನು ತಿಳಿಯೋಣ ಬನ್ನಿ
ಉಜ್ಜಯಿನಿಯಿಂದ ಶೇಷ ಜ್ಯೋತಿರ್ಲಿಂಗಗಳಿಗಿರುವ ದೂರವೂ(in KM’s) ಕೂಡ ಒಂದು ರೋಚಕವೇ.
ಉಜ್ಜಯಿನಿಯಿಂದ
ಸೋಮನಾಥ – 777km
ಓಂಕಾರೇಶ್ವರ – 111km
ಭೀಮಾಶಂಕರ – 666km
ಕಾಶಿವಿಶ್ವನಾಥ – 999km
ಶ್ರೀಶೈಲ ಮಲ್ಲಿಕಾರ್ಜುನ – 999km
ಕೇದಾರನಾಥ – 888km
ತ್ರಿಯಂಬಕೇಶ್ವರ – 555km
ಬೈಜನಾಥ – 999km
ರಾಮೇಶ್ವರಂ – 1999km
ಘೃಷ್ಣೇಶ್ವರ -555km
ಸನಾತನ ಧರ್ಮದಲ್ಲಿ ಕಾರಣವಿಲ್ಲದ ಯಾವ ಸಂಗತಿಗಳೂ ಇಲ್ಲ ಅನ್ನೋದಕ್ಕೆ ಇದೊಂದು ಉದಾಹರಣೆ ಹಾಗು ಇದನ್ನ ನಮ್ಮ ಪೂರ್ವಜರು ಎರಡೂವರೆ ಸಾವಿರ ವರ್ಷ ಅದಕ್ಕಿಂತ ಮುಂಚೆಯೇ ತಿಳಿಸಿದ್ದರು.
ಜ್ಯೋತಿರ್ಲಿಂಗಗಳು ಹಾಗು ಅವುಗಳು ಸ್ಥಾಪಿಸಿರುವ ಜಾಗಗಳು ನಿಜಕ್ಕೂ ವೈಜ್ಞಾನಿಕವಾಗಿ ಭಾರತದ ರಕ್ಷಣೆ ಮಾಡುತ್ತಿವೆ ಎಂದರೆ ನೀವು ನಂಬುತ್ತೀರಾ?

ಹೌದು ಭಾರತದಲ್ಲಿನ ಜ್ಯೋತಿರ್ಲಿಂಗಗಳಿರುವ ಪ್ರದೇಶಗಳು ಅತಿ ಹೆಚ್ಚು ರೇಡಿಯೋ ಆ್ಯಕ್ಟಿವ್ ಕಿರಣಗಳನ್ನ ಸೂಸುವ ಪ್ರದೇಶಗಳಾಗಿವೆ. ಈ ರೇಡಿಯೋ ಆ್ಯಕ್ಟಿವ್ ಕಿರಣಗಳಿಂದ ಮನುಷ್ಯನಿಗೆ ಅತಿ ಅಪಾಯಕಾರಿಯಾಗಿದ್ದು ಇವುಗಳ ನಿಯಂತ್ರಣಕ್ಕೆಂದೇ ನಮ್ಮ ಪೂರ್ವಜರು ರೇಡಿಯೋ ಆ್ಯಕ್ಟಿವ್ ತರಂಗಗಳಿರುವ ಪ್ರದೇಶಗಳಲ್ಲಿ ಜ್ಯೋತಿರ್ಲಿಂಗಗಳ ಪ್ರತಿಷ್ಠಾಪನೆ ಮಾಡಿದ್ದರು.
ಪಂಚಾಮೃತವೆಂದು ನಾವು ಶಿವಲಿಂಗಕ್ಕೆ ಅಭಿಷೇಕ ಮಾಡೋದರ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ, ಆದರೆ ಜ್ಯೋತಿರ್ಲಿಂಗಗಳಿಗೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸತತವಾಗಿ ಅಭಿಷೇಕ ಮಾಡುವುದರ ಉದ್ದೇಶವಾದರೂ ಏನು ಅನ್ನೋದು ನಿಮಗೆ ಗೊತ್ತೆ?
ಅತಿ ಹೆಚ್ಚು ರೇಡಿಯೋ ಆ್ಯಕ್ಟಿವ್ ತರಂಗಗಳನ್ನ ಸೂಸುವ ಪ್ರದೇಶದಲ್ಲಿ ಶಿವಲಿಂಗವನ್ನ ಸ್ಥಾಪನೆ ಮಾಡಿ ಅದಕ್ಕೆ ಪಂಚಾಮೃತ ಅಭಿಷೇಕ, ಅಂದರೆ ಹಾಲು ತುಪ್ಪ ಮೊಸರು ಗೋಮಯ ಬೆಣ್ಣೆ ಹೀಗೆ ಅಭಿಷೇಕ ಮಾಡುವುದರಿಂದ ರೇಡಿಯೋ ಆ್ಯಕ್ಟಿವ್ ತರಂಗಗಳನ್ನ ತಡೆಯಬಹುದು.
ಈ ಕಾರಣಕ್ಕಾಗೇ ಜ್ಯೋತಿರ್ಲಿಂಗಗಳಿರೋ ಪ್ರದೇಶಗಳಲ್ಲಿ ನಿರಂತರವಾಗಿ ಅಭಿಷೇಕ ಮಾಡುತ್ತ ತರಂಗಗಳ ನಿಯಂತ್ರಣ ಮಾಡಬಹುದೆಂದು ಹಾಗು ಈ ವೈಜ್ಞಾನಿಕತೆಯನ್ನ ಸಾಮಾನ್ಯ ಜನರಿಗೆ ಹೇಳಿದರೆ ಅರ್ಥವಾಗುವುದಿಲ್ಲ ಅನ್ನೋ ಕಾರಣಕ್ಕೆ ನಮ್ಮ ಪೂರ್ವಜರು ದೇವರು, ಶಿವಲಿಂಗ ಅಂತ ಆಧ್ಯಾತ್ಮಿಕ, ಪೌರಾಣಿಕ ಕತೆಗಳ ಮೂಲಕ ನಮಗೆ ಇದರ ಅರಿವು ಮಾಡಿಸಿದ್ದರು.
ಉಜ್ಜಯಿನಿ ಈ ಭೂಮಂಡಲದ ಮಧ್ಯಭಾಗ ಎಂದು ನಮ್ಮ ಪೂರ್ವಜರೂ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದರು, ನಂತರ ಬಂದ ಬ್ರಿಟಿಷ್ ವಿಜ್ಞಾನಿಗಳು 100 ವರ್ಷಗಳ ಹಿಂದೆ ಪೃಥ್ವಿಯ ಮೇಲೆ ಎಳೆದ ಕಾಲ್ಪನಿಕ ರೇಖೆಯ ಮಧ್ಯಭಾಗವು(center place of the earth) ಕೂಡ ಉಜ್ಜಯಿನಿಯನ್ನೇ ಸೂಚಿಸಿತ್ತು ಅನ್ನುವುದು ಕೂಡ ಸಾವಿರಾರು ವರ್ಷಗಳ ಹಿಂದೆಯೇ ನಮ್ಮಲ್ಲಿದ್ದ ಖಗೋಳ ಶಾಸ್ತ್ರ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಈಗಲೂ ಸೂರ್ಯನ ಹಾಗು ಅಂತರಿಕ್ಷದ ಮಾಹಿತಿಗಾಗಿ ಜಗತ್ತಿನ ವಿಜ್ಞಾನಿಗಳು ಭಾರತದ ಉಜ್ಜಯಿನಿಗೇ ಬರುತ್ತಾರೆ.
ಇಲ್ಲಿ ಇನ್ನೊಂದು ಇಂಟರೆಸ್ಟಿಂಗ್ ವಿಷ್ಯ ಏನಂದ್ರೆ ದೇಶದಲ್ಲಿರುವ ಹನ್ನೆರಡೂ ಜ್ಯೋತಿರ್ಲಿಂಗಗಳಿರುವ ಜಾಗವನ್ನ ಮ್ಯಾಪಿನಲ್ಲಿ ಗುರುತು ಹಾಕಿ ಅವುಗಳನ್ನೊಮ್ಮೆ ಪೆನ್ಸಸಿಲ್ ಮೂಲಕ ಗೆರೆಯೆಳೆದು ಜೋಡಿಸಿ,‌ ಆಗ ನಿಮ್ಮ ಕಣ್ಣಿಗೆ ಕಾಣುವುದೇ ಶಂಖ!! ಹೌದು ಬೇಕಿದ್ದರೆ ಟ್ರೈ ಮಾಡಿ ನೋಡಿ
ಭಾರತದಲ್ಲಿ ಇಲ್ಲಿಯವರೆಗೂ ಆಯುರ್ವೇದ, ವಿಜ್ಞಾನ, ಖಗೋಳಶಾಸ್ತ್ರ, ಪ್ಲಾಸ್ಟಿಕ್ ಸರ್ಜರಿ, ಜೀವನ ಪದ್ಧತಿ ಸಮೇತ ಸಿಕ್ಕ ಸುಮಾರು 12,000 ಪುರಾತನ ಗ್ರಂಥಗಳಲ್ಲಿ ಅಮೇರಿಕ ನಾಲ್ಕು ಸಾವಿರ ಹಾಗು ಜರ್ಮನಿ ಎರಡು ಸಾವಿರದ ಏಳು ನೂರು ಗ್ರಂಥಗಳ ಮೇಲೆ ಪೆಟೆಂಟ್ ಪಡೆದು ನಮ್ಮ ಭಾರತದ ಸಂಸ್ಕೃತಿಯನ್ನ ವಿಶ್ವವ್ಯಾಪಿ ಮಾಡುತ್ತ ಲಾಭ ಮಾಡಿಕೊಳ್ಳುತ್ತಿವೆ
ಆದರೆ ನಮ್ಮದೇ ಇತಿಹಾಸವನ್ನ ನಮ್ಮದೇ ಪ್ರಾಚೀನ ಗ್ರಂಥಗಳ ಬಗ್ಗೆ ನಮಗೆ ಗೊತ್ತರದಿರುವುದು ಅಥವಾ ತಿಳಿದುಕೊಳ್ಳಲೂ ಪ್ರಯತ್ನ ಮಾಡದಿರುವುದು ಮಾತ್ರ ನಿಜಕ್ಕೂ ವಿಷಾದನೀಯ ಹಾಗು ನಾಚಿಕೆಗೇಡಿನ ಸಂಗತಿಯೇ.
ಇದರಿಂದ ಸ್ಪಷ್ಟವಾಗುವ ವಿಚಾರವೆಂದರೆ ನಮ್ಮ ಸನಾತನ ಹಿಂದೂ ಧರ್ಮ ವೈಜ್ಞಾನಿಕವಾಗಿಯೇ ನಿರ್ಮಿಸಿದಂತ ಧರ್ಮವಾಗಿದ್ದು ಇದನ್ನ ಯಾರು ಎಷ್ಟೇ ಹೀಗಳೆದರು, ನಿರಾಕರಿಸಿದರೂ ಇದು ವಿಶ್ವವ್ಯಾಪಿ ಸಾರ್ವತ್ರಿಕ ಸತ್ಯ ಆದರೆ ಇದನ್ನ ನಾವು ಪೆಟೆಂಟ್ ಮಾಡಿಸಿಲ್ಲ ಅಷ್ಟೇ.
ನಮ್ಮತನ, ಇತಿಹಾಸ, ಸಂಸ್ಕೃತಿ ಆಚಾರ ವಿಚಾರ ನಾವು ಮರೆತರೆ ನಾವು ಜಗತ್ತಿನಲ್ಲಿ ಕಾಲ ಕಸಕ್ಕಿಂತ ಕಡೆಯಾಗುತ್ತೇವೆ. ಬನ್ನಿ ಈಗಲಾದರೂ ಇದರ ಬಗ್ಗೆ ಗಮನಹರಿಸಿ ನಮ್ಮ ಶಕ್ತಿಯನ್ನ ಬೌದ್ಧಿಕ ಸಾಮರ್ಥ್ಯವನ್ನ ಜಗತ್ತಿನೆದುರು ಅನಾವರಣವಗೊಳಿಸೋಣ.

Friday, March 28, 2025

ಠಾಣೆ" ಚಿತ್ರದ "ಬಾಳಿನಲ್ಲಿ ಭರವಸೆಯ ಬೆಳಕು" ಹಾಡನ್ನು ಮುಕ್ತಕಂಠದಿಂದ ಶ್ಲಾಘಿಸಿದ ಕ.ರ.ವೇ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ.


 ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿರುವ, ಎಸ್.ಭಗತ್ ರಾಜ್ ನಿರ್ದೇಶನದ ಹಾಗೂ ಪ್ರವೀಣ್ ನಾಯಕನಾಗಿ ನಟಿಸಿರುವ "ಠಾಣೆ" ಚಿತ್ರಕ್ಕಾಗಿ ಖ್ಯಾತ ಗಾಯಕಿ ಮಜಾಟಾಕೀಸ್ ಖ್ಯಾತಿಯ ರೆಮೊ ಅವರು ಬರೆದಿರುವ "ಬಾಳಿನಲ್ಲಿ ಭರವಸೆಯ ಬೆಳಕು" ಎಂಬ ಅರ್ಥಗರ್ಭಿತ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಟ್ರೆಂಡಿಂಗ್ ನಲ್ಲಿದೆ.  ಮಾನಸ ಹೊಳ್ಳ ಸಂಗೀತ ಸಂಯೋಜಿಸಿ, ಜ್ಞಾನ, ಅನುಷ್ಕ, ಜನ್ಯ ಆದರ್ಶ್ ಹಾಗೂ ಮೌಲ್ಯ ಅಚಿಂತ್ಯ ಎಂಬ ಬಾಲ ಪ್ರತಿಭೆಗಳು ಹಾಡಿರುವ ಈ ಸುಂದರ ಹಾಡಿಗೆ ಕನ್ನಡ ಕಲಾಭಿಮಾನಿಗಳು ಫಿದಾ ಆಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ ಅವರಿಗೂ ಸಹ ಈ ಹಾಡು ಅಚ್ಚುಮೆಚ್ಚಂತೆ. ಬಾಲ ಪ್ರತಿಭೆಗಳ ಗಾಯನದಲ್ಲಿ ಮೂಡಿಬಂದಿರುವ ಈ ಹಾಡನ್ನು ಮೆಚ್ಚಿಕೊಂಡ ನಾರಾಯಣ ಗೌಡ ಅವರು ಚಿತ್ರತಂಡದವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಅಭಿನಂದಿಸಿದರು. 


 ಬಾಲ ಪ್ರತಿಭೆಗಳು ಹಾಡಿರುವ "ಠಾಣೆ" ಚಿತ್ರದ ಅರ್ಥಗರ್ಭಿತ ಈ ಹಾಡನ್ನು ನಾನು ದಿನಕ್ಕೆ ನಾಲ್ಕೈದು ಬಾರಿ ಕೇಳುತ್ತಲೇ ಇರುತ್ತೇನೆ. ಅಷ್ಟು ಇಷ್ಟವಾಗಿದೆ ನನಗೆ ಈ ಹಾಡು. ಮಕ್ಕಳು ತುಂಬಾ ಚೆನ್ನಾಗಿ ಹಾಡಿದ್ದಾರೆ. ರೆಮೊ ಅವರ ಸಾಹಿತ್ಯ ಹಾಗೂ ಮಾನಸ ಹೊಳ್ಳ ಅವರ ಸಂಗೀತ ನಿರ್ದೇಶನ ಕೂಡ ಬಹಳ ಸುಂದರವಾಗಿದೆ. ಮಾನಸ ಹೊಳ್ಳ ಅವರು ನಮ್ಮ ಹಿರಿಯ ನಟ ಶಂಖನಾದ ಅರವಿಂದ್ ಅವರ ಪುತ್ರಿ. ಅವರ ತಂದೆ ಅದ್ಭುತ ಕಲಾವಿದರು. ಮಗಳು ಸಹ ಉತ್ತಮ‌ ಸಂಗೀತ ನಿರ್ದೇಶಕಿ. ಇಂತಹ ಮನಮುಟ್ಟುವ ಹಾಡನ್ನು ನೀಡಿದ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು. ನಿಮ್ಮ ತಂಡದ ಜೊತೆಗೆ ಸದಾ ನಾನು ಇರುತ್ತೇನೆ‌. ಹಾಡಿನಷ್ಟೇ ಚಿತ್ರ ಕೂಡ ಯಶಸ್ವಿಯಾಗಲಿ ಎಂದು ನಾರಾಯಣ ಗೌಡ ಅವರು ಹಾರೈಸಿದರು. ನಿರ್ದೇಶಕ  ಎಸ್ .ಭಗತ್ ರಾಜ್, ನಾಯಕ ಪ್ರವೀಣ್, ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಮುಂತಾದ "ಠಾಣೆ" ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. "ಠಾಣೆ" ಚಿತ್ರಕ್ಕಾಗಿ ಖ್ಯಾತ ಗಾಯಕ  ರಾಜೇಶ್ ಕೃಷ್ಣ ಅವರು ಹಾಡಿರುವ ಹಾಡೊಂದು ಸದ್ಯದಲ್ಲೇ ಲೇಖಾ ಆಡಿಯೋ ಮೂಲಕ ಬಿಡುಗಡೆಯಾಗಲಿದೆ.

Monday, March 24, 2025

ಇದು ನಿಮ್ಮ ವಾಹಿನಿ ಕಲಾ ವೇದಿಕೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ೫೦ನೆಯ ಜನ್ಮ ದಿನಾಚರಣೆ

 ಇದು ನಿಮ್ಮ ವಾಹಿನಿ ಕಲಾ ವೇದಿಕೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ೫೦ನೆಯ  ಜನ್ಮ ದಿನಾಚರಣೆ

ಅಂತರಾಷ್ಟ್ರೀಯ ಮಹಿಳಾ ದಿನ  ೧೫ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ


ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ೫೦ನೆಯ  ಜನ್ಮ ದಿನಾಚರಣೆಯ ಹಗೂ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿನ ನಯನ ಸಭಾಂಗಣದಲ್ಲಿ   ೧೫ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.


ಕಳೆದ ಐದು ವರ್ಷಗಳಿಂದ ಇದು ನಿಮ್ಮ ವಾಹಿನಿ ಕಲಾ ವೇದಿಕೆಯು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಎಲೆಮರೆಯ ಕಾಯಿಗಳನ್ನು ಗುರುತಿಸುವ ವಿಶೇಷ ಕಾರ್ಯವನ್ನು ಮಾಡುತ್ತಾ ಬಂದಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗಂಡಸಿ ಸದಾನಂದ ಸ್ವಾಮಿ, ಕಿರಣ್ ಸೂರ್ಯ, ಶಶಿಧರ ಕೋಟೆ, ಡಾ. ಕರ್ಣ, ಶ್ರೀಮತಿ ರೂಪ , ಪ್ರಮೀಳಾ ನೇಸರ್ಗಿ, ಲಯ ಕೋಕಿಲಾ, ಕೊರಿಯೋಗ್ರಾಫರ್ ವಿನೋದ್ ಎ.ಕೆ. ಬೇಬಿ ರಿತು ಸಿಂಗ್ ಮತ್ತು ಚಂದ್ರಿಕಾ ಬಿ.ವಿ. ಭಾಗವಹಿಸಿದ್ದರು.




ಕಾರ್ಯಕ್ರಮದಲ್ಲಿ ಹನ್ನೆರಡಕ್ಕೂ ಹೆಚ್ಚು ಡ್ಯಾನ್ಸ್ ಅಕಾಡಮಿಗಳು ವೈವಿದ್ಯಮಯ ನೃತ್ಯ ಪ್ರದರ್ಶನ ನೀಡಿದವು. ಅವುಗಳಲ್ಲಿ ಭರತನಾಟ್ಯ, ಕೂಚುಪುಡಿ, ಕಥಕ್ಕಳಿ ಮೊದಲಾದ ನೃತ್ಯವು ಒಳಗೊಂಡಿತ್ತು. ಇದಲ್ಲದೆ ಮಸ್ಕಿ ತಂಡದವರಿಂದ ರಾಮಾಯಣದ ಪ್ರದರ್ಶನವನ್ನೂ ಸಹ ಈ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು. 

ಈ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಇನ್ನೂರಕ್ಕೂ ಹೆಚ್ಚು ಜನ ಸಾಧಕರಿಗೆ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿಯನ್ನು ನೀಡಿ ಗೌರವಿಸಲಾಯಿತು. 



ಕಾರ್ಯಕ್ರಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಸಭಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 


ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಕೆ.ಎಸ್.  ಹಾಗೂ ಪ್ರಧಾನ ಕಾರ್ಯದರ್ಶಿಗಳು ಈ ಸಂದರ್ಭ ಹಾಜರಿದ್ದರು.


Saturday, March 22, 2025

ನಮ್ಮಲ್ಲಿನ ಸ್ಥಳ ಪುರಾಣಗಳು(Myths) - 124

ದರ್ಶನ್  ಕೇರಳದ ಪ್ರಸಿದ್ಧ ದೇವಸ್ಥಾನ ಮಡಾಯಿಕಾವಿಗೆ ಭೇಟಿ ಕೊಟ್ಟಿದ್ದಾರೆ. ಕೇರಳದ ಕಣ್ಣೂರು  ಜಿಲ್ಲೆಯಲ್ಲಿರುವ ಈ ದೇವಸ್ಥಾನ ಅತ್ಯಂತ ಪ್ರಸಿದ್ಧವಾಗಿದ್ದು ಬಹಳಷ್ಟು ದೂರ ದೂರದಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ನಟ ದರ್ಶನ್ ಅವರು ಪತ್ನಿ ಹಾಗೂ ಮಗನೊಂದಿಗೆ ಮಡಾಯಿಕಾವು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಈ ದೇವಸ್ಥಾನದ ಕುರಿತು ಈಗ ನಮ್ಮಲ್ಲಿನ ಸ್ಥಳ ಪುರಾಣಗಳು ಸರಣಿಯಲ್ಲಿ ತಿಳಿಯೋಣ...


ಮಡಾಯಿಯ ಕಾವು(Madayikavu)



ಭಕ್ತರು ಭಕ್ತಿಯಿಂದ ಕೈಮುಗಿದರೆ ಸಾಕು; ತಮ್ಮ ಇಷ್ಟಾರ್ಥ ಸಿದ್ಧಿಯನ್ನು ತಕ್ಷಣ ನೆರವೇರಿಸುತ್ತಾಳೆ
 ಭದ್ರಕಾಳಿ ದೇವಸ್ಥಾನದಲ್ಲಿ ಪಾರ್ವತಿ ದೇವಿಯು ಭದ್ರಕಾಳಿಯಾಗಿ ಸಂಚರಿಸುತ್ತಾಳಂತೆ, ಅಂತಹ ಮಹಿಮಾನ್ವೀತ ದೇವಾಲಯವೇ ತಿರುವಾರಾಡು ಭಗವತಿ ದೇವಸ್ಥಾನ, ಅಥವಾ ಮಡಾಯಿಯ ಕಾವು ದೇವಸ್ಥಾನ. ಇದು ಉತ್ತರ ಕೇರಳದ ಎಲ್ಲಾ ಭದ್ರಕಾಳಿ ದೇವಾಲಯಗಳ ತಾಯಿ ದೇವಸ್ಥಾನವಾಗಿದೆ. ಇಲ್ಲಿನ ದೇವತೆಯು ಭದ್ರಾಕಳಿಯು ಉಗ್ರ ರೂಪವಾಗಿದೆ. ಬನ್ನಿ ಈ ದೇವಾಲಯದ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ ತಲಿಪರಂಬದ ರಾಜರಾಜೇಶ್ವರ ದೇವಸ್ಥಾನದಲ್ಲಿ ಶಿವ, ಪಾರ್ವತಿ ನೆಲೆಸಿದ್ದಾರೆ. ಇಲ್ಲಿಗೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ. ರಾತ್ರಿ ಎಂಟು ಗಂಟೆಯ ನಂತರ ದೇವಸ್ಥಾನದ ಹೊರ ಆವರಣದಲ್ಲಿ ಯಾರೂ ಪ್ರದಕ್ಷಿಣೆ ಹಾಕುವಂತಿಲ್ಲ, ಈ ದೇವಸ್ಥಾನದ ಅರ್ಚಕರು ಹಾಗೂ ಕಾವಲುಗಾರರನ್ನು ಹೊರತುಪಡಿಸಿ ಬೇರೆ ಯಾರು ಇಲ್ಲಿ ಇರುವಂತಿಲ್ಲ. ಯಾಕೆಂದರೆ ರಾತ್ರಿ ಎಂಟು ಗಂಟೆಯ ನಂತರ ದೇವಿ ಪಾರ್ವತಿ ರುದ್ರಕಾಳಿಯಾಗಿ ಇಲ್ಲಿ ಸಂಚರಿಸುತ್ತಾಳಂತೆ
ದೇವಾಲಯವಿರುವುದು ಕಣ್ಣೂರು ಜಿಲ್ಲೆಯಲ್ಲಿರುವ ಮಾಡಾಯಿ ಕಾವುನಲ್ಲಿ.
ಪಯಂಗಡಿ ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದ್ದು, ಇದು ಮಡಾಯಿಕಾವು ಭಗವತಿ ದೇವಸ್ಥಾನದಿಂದ 2 ಕಿ.ಮೀ ದೂರದಲ್ಲಿದೆ. ಪಯಂಗಡಿ ರೈಲು ನಿಲ್ದಾಣದ ಮೂಲಕ ಹಾದು ಹೋಗುವ ಕೆಲವು ಪ್ರಮುಖ ರೈಲುಗಳು ಪರಶುರಾಮ್ ಎಕ್ಸ್ಪ್ರೆಸ್, ಮಂಗಳೂರು ಮೇಲ್, ಮಂಗಳಾ ಲಕ್ಷದ್ವೀಪ ಎಕ್ಸ್ಪ್ರೆಸ್, ಮಲಬಾರ್ ಎಕ್ಸ್ಪ್ರೆಸ್, ಚೆನ್ನೈ ಮೇಲ್, ಮಾವೆಲಿ ಎಕ್ಸ್ಪ್ರೆಸ್, ತಿರುವನಂತಪುರ ಎಕ್ಸ್ಪ್ರೆಸ್ ಇತ್ಯಾದಿ ಕಣ್ಣೂರು, ಪಯ್ಯನೂರು, ತಲಿಪರಂಬ ನಿಂದ ಬಸ್ಸುಗಳು ಪಯಾಂಗಡಿಗೆ ತಲುಪುತ್ತವೆ. ಇದು ಪಯಂಗಡಿ ಬಸ್ ನಿಲ್ದಾಣದಿಂದ ಕೇವಲ 1 ಕಿ.ಮೀ ದೂರದಲ್ಲಿದೆ.
ಇಲ್ಲಿನ ಆವರಣದ ಒಳಗೆ ಐದು ದೇವಾಲಯವಿದೆ . ಶಿವನದ್ದು ಶಿವ ಪೂರ್ವಕ್ಕೆ ಮುಖಮಾಡಿದ್ದರೆ ಭದ್ರಕಾಳಿಯು ಪಶ್ವಿಮಕ್ಕೆ ಮುಖ ಮಾಡಿದ್ದಾಳೆ.ಭದ್ರಕಾಳಿಗೆ ಪೂಜೆ ಮಾಡುವ ಬ್ರಾಹ್ಮಣರು ಮಾಂಸ ಸೇವನೆ ಮಾಡುತ್ತಾರೆ. ಕೋಟಿ ಕಲಶಂ ಎನ್ನುವ ಪೂಜೆ ನಡೆಸುವಾಗ ಕೋಳಿಗಳನ್ನು ಬಲಿ ಕೊಡಲಾಗುತ್ತದೆ. ಇಲ್ಲಿ ಭಕ್ತರಿಗೆ ಪ್ರಸಾದವಾಗಿ ಕೋಳಿ ಮಾಂಸವನ್ನು ನೀಡಲಾಗುತ್ತದೆ. ಮಾಂಸಾಹಾರ ತಿನ್ನದವರಿಗೆ ಬೇಯಿಸಿದ ಹೆಸರು ಕಾಳು, ಅಕ್ಕಿ, ಬೆಲ್ಲದಿಂದ ಮಾಡಲಾದ ಪ್ರಸಾದವನ್ನು ನೀಡಲಾಗುತ್ತದೆ. ಬಂಗಾರದ ಕವಚದ ಖಡ್ಗವಿದೆ. ಇದು ಶತ್ರು ಸಂಹಾರದ ಸಂಖೇತವಾಗಿದೆ. ವರ್ಷಕ್ಕೊಮ್ಮೆ ಇದನ್ನು ಹೊರತರಲಾಗುತ್ತದೆ. ಪೂಜೆ ನಡೆಸಿ ಭಕ್ತರ ದರ್ಶನಕ್ಕೆ ಇಡಲಾಗುತ್ತದೆ. ಪೂಜೆ ಆದ ನಂತರ ಮತ್ತೆ ಈ ಖಡ್ಗವನ್ನು ಅಲ್ಲೇ ಇಡಲಾಗುತ್ತದೆ. ಚರಕಲ ರಾಜರು ಯುದ್ಧಕ್ಕೆ ಹೋಗುವ ಮುನ್ನ ಭದ್ರಕಾಳಿಯನ್ನು ಪೂಜಿಸುತ್ತಿದ್ದರು. ಭದ್ರಕಾಳಿ ಶತ್ರು ಸಂಹಾರ ನಡೆಸುತ್ತಾಳಂತೆ.
ಇಲ್ಲಿ ಎಂಟು ವಿಧಧ ಪೂಜೆ ಮಾಡುತ್ತಾರೆ. ಬೆಲ್ಲದ ಪಾಯಸ ಪೂಜೆ 5 ರೂ. ಪುಷ್ಪಾಂಜಲಿ 3 ರೂ. ತ್ರಿಕಾಲ ಪುಷ್ಪಾಂಜಲಿ 15 ರೂ., ರಕ್ತ ಪುಷ್ಪಾಂಜಲಿ ಮುಂತಾದ ಪೂಜೆಗಳನ್ನು ನಡೆಸಲಾಗುತ್ತದೆ. ಶತ್ರು ಸಂಹಾರ ಪೂಜೆಗೆ ಕೇವಲ 50 ರೂ. ಮಧ್ಯಾಹ್ನ 12 ಗಂಟೆ ಹಾಗೂ ಸಂಜೆ 6 ಗಂಟೆಗೆ ಈ ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿ ಪೂಜೆ ಮಾಡೊಸುವವರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇವಿಲ್ಲ. ಪೂಜೆ ವಿಧಿ ವಿಧಾನಗಳು ಗೌಪ್ಯವಾಗಿರುತ್ತವೆ
ಪೂಜೆಯಿಂದ ಮನಸ್ಸಿನ ಬೇಡಿಕೆ ಈಡೇರುತ್ತದೆ. ಸಂಕಷ್ಟ ಪರಿಹಾರವಾಗುತ್ತದೆ. ಉದ್ಯೋಗ, ವ್ಯವಹಾರ, ವಿವಾಹಕ್ಕಾಗಿ ಈ ಪೂಜೆಯನ್ನು ಮಾಡಿಸುತ್ತಾರೆ. ಸಾಕಷ್ಟು ರಾಜಕಾರಣಿಗಳು ಇಲ್ಲಿಗೆ ಬಂದು ಶತ್ರು ಸಂಹಾರ ಪೂಜೆ ಮಾಡಿಸುತ್ತಾರೆ. ಇದರಿಂದ ಅಡೆತಡೆಗಳು ನಿವಾರಣೆಯಾಗುತ್ತವಂತೆ. ಸಾವಿರಾರು ವರ್ಷಗಳಿಂದ ಭಕ್ತರ ಬೇಡಿಕೆಯನ್ನು ಈಡೇರಿಸುತ್ತಿದ್ದಾಳೆ ಈ ಭಗವತಿ ದೇವಿ.
***
ಕೇರಳ ದೇವರನಾಡಿನ ಕಣ್ಣೂರಿನ ಮಡಾಯಿ ಕಾವಿನ ಭಗವತಿ ಅಮ್ಮನವರ ಚರಿತ್ರೆ ಹೇಳೋದಾದ್ರೆ ಮೊದಲು ಕಡಲಿದ್ದ ಜಾಗವಾಗಿತ್ತು. ಪರಶುರಾಮರು ಶಂಖದಲ್ಲಿ ದೇವಿಯನ್ನು ಆವಾಹಿಸಿ ಎಸೆದುದರಿಂದ ಕಡಲು ಸರಿದು ಭೂ ಪ್ರದೇಶವಾಯಿತು,ಎನ್ನುವುದು ಉಲ್ಲೇಖ.ಮೊದಲು ಈ ದೇವತೆ ತಳಿಪರಂಬು ರಾಜಾರಾಜೇಶ್ವರಿ ಮಾತೆಯಾಗಿದ್ದರು. ಅಲ್ಲಿ ಶಾಂತ ಪೂಜೆಯಲ್ಲಿ ದೇವಿಯನ್ನು ಆರಾಧಿಸಿಕೊಂಡು ಬರ್ತಾರೆ. ಆದ್ರೆ ಅದರಲ್ಲಿ ಸಂತೃಪ್ತಿ ಕಾಣದ ದೇವಿ ಅಲ್ಲಿ ನಾನಾ ರೀತಿ ತನ್ನ ಅತೃಪ್ತಿಯನ್ನು ತೋರ್ಪಡಿಸಿದ್ದು ಜ್ಯೋತಿಷ್ಯ ಪ್ರಶ್ನೆ ಚಿಂತನೆಯಲ್ಲಿ ನೋಡಿದಾಗ ಅಲ್ಲಿ ಇನ್ನು ಮುಂದೆ ಈ ದೇವಿ ಚೈತನ್ಯ ಆರಾಧಿಸಿಕೊಂಡು ಬರುವುದು ಆಪತ್ತಿಗೆ ದಾರಿ ಎಂದುಕೊಂಡ ಪರಶುರಾಮರು ಶಂಖದಲ್ಲಿ ದೇವಿ ಚೈತನ್ಯವನ್ನು ಆವಾಹಿಸಿ ಎಸೆದ ಜಾಗವೇ ಮಡಾಯಿಕಾವು ಎಂದು ಕರೆಯಲಾಗಿದೆ.ಕೋಲತಿರಿ ಮಹಾರಾಜ ದೇವಿಯನ್ನು ಪ್ರತಿಷ್ಠಾಪನೆಗೆ ನೇತೃತ್ವ ನೀಡಿದರು.ಕಾಟುಮಡಂ ಈಶನ್ ನಂಬೂದಿರಿಪ್ಪಾಡ್ ಕ್ಷೇತ್ರ ಪ್ರತಿಷ್ಠಾ ಕಾರ್ಯ ನೆರವೇರಿಸಿದರು.ಉತ್ತರ ಕೇರಳದಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸಿದ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಈ ಮಾಡಯಿ ಕಾವ್ ಕ್ಷೇತ್ರ.ಚಿರಕಲ್ ರಾಜ ವಂಶದ ಸ್ವಾಧೀನದಲ್ಲಿ ಇರುವ ಕ್ಷೇತ್ರವಿದು.ಕೋಲತಿರಿ ರಾಜ ಮನೆತನದ ಕುಲ ದೇವತೆಯಾಗಿದ್ದಾರೆ ಈ ಕ್ಷೇತ್ರದ ಭಗವತಿ ಅಮ್ಮ.ಈಗಲೂ ರಾಜವಂಶದ ಸಾನಿಧ್ಯದಲ್ಲೇ ದೇವಿ ಉತ್ಸವಾದಿ ಕರ್ಮಗಳು ನಡೆಯುತ್ತಿದೆ.ಮಲಬಾರ್ ದೇವಸ್ವಂ ಬೋರ್ಡ್ ಆಡಳಿತದಡಿಯಲ್ಲಿ ಕ್ಷೇತ್ರ ಕಾರ್ಯನಿರ್ವಹಿಸುತ್ತಿದೆ.ಸುಮಾರು 700ಎಕರೆಯಲ್ಲಿ ಕ್ಷೇತ್ರ ಭೂಮಿ ಪುರಾತನ ಕಾಲದಿಂದಲೂ  ಸ್ಥಿತಿಗೊಂಡಿತ್ತು. ಆದ್ರೆ ಕಾಲ ಕ್ರಮೇಣ ಅನ್ಯ ಸ್ವಾಧೀನವಾಗಿ ಈಗ ಕ್ಷೇತ್ರವು 300ಎಕೆರೆ ಜಾಗವನ್ನಷ್ಟೇ ಉಳಿಸಿಕೊಂಡಿದೆ.ಕ್ಷೇತ್ರ ಆಡಳಿತ ಮತ್ತೆ ಉಳಿದ ಜಾಗವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ. ಕೇರಳ ಕರ್ನಾಟಕ ಅಲ್ಲದೆ ಇತರ ರಾಜ್ಯಗಳಿಂದಲೂ ಇಲ್ಲಿಗೆ ಸಾವಿರಕ್ಕೂ ಅಧಿಕ ಭಕ್ತಾಭಿಮಾನಿಗಳು ಬರುತ್ತಿದ್ದಾರೆ.ಶತ್ರು ದೋಷ ಪರಿಹಾರ ಅಥವಾ ಶತ್ರು ಸಂಹಾರ, ಸರ್ವಭಿಷ್ಠ ಪೂಜೆ, ರಕ್ತ ಪುಷ್ಪಅಂಜಲಿ ಪೂಜೆ ಇಲ್ಲಿನ ಪ್ರಧಾನ ಪೂಜೆಯಾಗಿದೆ.ಮಂಗಳವಾರ, ಶುಕ್ರವಾರ ಮತ್ತು ಆದಿತ್ಯವಾರ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚು.ರಾಜಕೀಯ ಮುಖಂಡರು ಹೆಚ್ಚಾಗಿ ಈ ಕ್ಷೇತ್ರವನ್ನು ಆಶ್ರಯಿಸುತ್ತಾರೆ. ಅವರಿಗೆಲ್ಲ ಫಲ ಸಿದ್ಧಿ ಪ್ರಾಪ್ತವಾಗಿದೆ ಎಂದು ತಿಳಿದುಬರುತ್ತದೆ.ಕರ್ನಾಟಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಕ್ಷೇತ್ರಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ರಾಜಕೀಯ ನೇತಾರರಲ್ಲದೆ, ಕೇರಳ ಕರ್ನಾಟಕದ ಸಿನೆಮಾ ನಟ ನಟಿಯರು  ಕೂಡಾ ಈ ಕ್ಷೇತ್ರದ ಸ್ಥಿರ ಭಕ್ತರಾಗಿದ್ದಾರೆ.ಧನು ಮಾಸ ಬಿಟ್ಟು ಮಿಕ್ಕಿ ಉಳಿದ ಎಲ್ಲ ಮಾಸದಲ್ಲೂ ಇಲ್ಲಿ ಪ್ರತೀ ಮಾಸವು ಉತ್ಸವ ಕಳೆಯನ್ನು ಕಾಣಬಹುದಾಗಿದೆ. ಧಾರಿಕಾಸುರನನ್ನ ವಧಿಸಿದ ಸ್ಥಳವಿದೆ ಇಲ್ಲಿ ಧರಿಕಾ ಕೋಟೆ ಎಂದು ಕರೆಯಲ್ಪಡುವ ಸ್ಥಳದಲ್ಲಿ ಉತ್ಸವ ಪರ್ವದಲ್ಲಿ ಆ ಸ್ಥಳದಲ್ಲಿ ಪೂಜಾ ವಿಧಿ ವಿಧಾನಗಳು ಜರಗುತ್ತವೆ.ಕಾರ್ತಿಕ ಮಾಸದ ಒಂಬತ್ತು ದಿನ ಈ ಉತ್ಸವ ಜರಗುತ್ತೆ. ದೇವಿ ಮತ್ತು ಧಾರಿಕನ ನಡುವಿನ ಯುದ್ಧವನ್ನು ಸೂಚಿಸುವ ಉತ್ಸವವಾಗಿದೆ.ಧಾರಿಕನಾ ವಧೆಯನ್ನು ಸುಚಿಸೋ ದೇವಿ ಆನಂದ ನೃತ್ಯಾದಿ ಕಾರ್ಯಗಳು ನಡೆಯುವುದು ಬ್ರಾಹ್ಮೀ ಮುಹೂರ್ತದಲ್ಲಿ ಎನ್ನುವುದು ವಿಶೇಷ.ಏಪ್ರಿಲ್ ನಲ್ಲಿ ನಡೆಯುವ ವಿಷು ಹಬ್ಬದ 11 ದಿನದ ಪೂಜಾ ವಿಧಾನ ಕೂಡಾ ವಿಶೇಷ.ಮಿಥುನ ಮಾಸದಲ್ಲಿ ಪ್ರತಿಷ್ಠಾಪನೆ ದಿನವಾಗಿ ಆಚರಿಸಲಾಗುತ್ತದೆ.ಕೇರಳದಲ್ಲೇ ಅತೀ ಅಪರೂಪದ ಕಡು ಶರ್ಕರದಿಂದ ನಿರ್ಮಿಸಿದಾಗಿದೆ ಇಲ್ಲಿನ ವಿಗ್ರಹ.ಅತೀ ಮಹಿಮೆ ಶಕ್ತಿ ಇರುವ ವಿಗ್ರಹ ಎಂದು ಪ್ರಸಿದ್ಧಿ ಪಡೆದಿದೆ.ಕೇರಳದ ದೈವಾರಾಧನೆಯಲ್ಲಿ ಕ್ಷೇತ್ರದ ಉಲೇಖಿಸುವ ತೋತಂ ಪಾಟುಗಳು ಒಂದು ಗೆರೆಯಾದರೂ ಇದ್ದೆ ಇರುತ್ತೆ. ದೈವಾರಾಧನೆಗೂ ಕ್ಷೇತ್ರಕೂ ಸಂಬಂಧವಿದೆ ಅನ್ನೋದು ಐತಿಹ್ಯ.ಇಲ್ಲಿ ನಡೆಯುವ ಪೂರಂ ಉತ್ಸವ ಬಹಳ ಪ್ರಸಿದ್ಧ. ಧಾರಿಕ ಸುರ ವಧೆ ನಂತರ ದೇವಿಯನ್ನು ಸಮಾಧಾನಪಡಿಸಲು ದೇವಾನು ದೇವತೆಗಳ ಪ್ರಯತ್ನಿಸುತ್ತಾರೆ. ಆದ್ರೆ ಸಾಧ್ಯ ಆಗದೇ ಇರುವಾಗ ದೇವಿ ಕೋಪವನ್ನು ನಿಯಂತ್ರಣ ಮಾಡದೇ ಹೋದರೆ ಲೋಕಕ್ಕೆ ಆಪತ್ತು ಎಂದು ತಿಳಿದ ದೇವಾನು ದೇವತೆಗಳು   ಪರಶಿವರನ್ನು ಮೊರೆ ಹೋಗುತ್ತಾರೆ. ಭಯಾನಕ ರೂಪದಲ್ಲಿ ಕುಣಿಯುತ ನಡೆಯುವ ಭದ್ರಕಾಳಿ ಪಾದದ ಅಡಿಯಲ್ಲಿ ಓರ್ವ ಬ್ರಾಹ್ಮಣ ವಟು ರೂಪದಲ್ಲಿ ಶಿವ ದೇವರು ಮಲಗುತ್ತಾರೆ. ಇದನ್ನು ನೋಡಿ ದೇವಿಯು ಕರುಣೆಯಿಂದ ಕೋಪಶಮನವಾಗುತ್ತೆ ಅನ್ನೋದು ಕ್ಷೇತ್ರ ಪುರಾಣ.ಅದಕ್ಕೆ ಸಾಕ್ಷಿ ಎಂಬತೆ ಮಾಡಯಿಕಾವ್ ಕ್ಷೇತ್ರದ ಬಳಿಯಲ್ಲೇ ವಡಗುಂದ ಶಿವ ಕ್ಷೇತ್ರವನ್ನು ಕಾಣಬಹುದು.ದೇವಿ ಕೋಪದಾ ತಾಪವನ್ನು ತಣಿಸಲು ಪರಶಿವ ತ್ರಿಶೂಲದಿಂದ ಕೊಳ ನಿರ್ಮಿಸಿದರು ಎಂದು ನಂಬಿಕೆ. ಆ ಕೊಳದ ವಿಶೇಷ ಏನೆಂದರೆ ಎಂತಹ ಬೇಸಿಗೆಯಲ್ಲೂ ಜಲ ಸ್ವಲ್ಪವೂ ಕುಗ್ಗುವುದಿಲ್ಲ.ಆ ಕೊಳ ಭಗವತಿ ಅಮ್ಮ ಅವಬೃತ, ಆರಾಟು ಉತ್ಸವದಾ ಸ್ನಾನಕ್ಕೆ ಮಹಾದೇವ ಶಿವ ದೇವರೇ ನಿರ್ಮಿಸಿ ನೀಡಿದ ಪವಿತ್ರ ಕೊಳವಾಗಿದೆ. ನಿತ್ಯ ದೇವಾಲಯದಾ ಬಾಗಿಲು ಮುಂಜಾನೆ ಐದು ಗಂಟೆಗೆ ತೆರೆಯುತ್ತದೆ.ಬೆಳಗಿನ ಉಷಾ ಪೂಜೆ ಮುಗಿಸಿ 5.40ಕ್ಕೆ ಕ್ಷೇತ್ರ ನಡೆ ಬಾಗಿಲು ಮುಚ್ಚುತ್ತಾರೆ.ನಂತರ ಬೆಳಗ್ಗೆ 7ಗಂಟೆಗೆ ಕ್ಷೇತ್ರದ ನಡೆ ಬಾಗಿಲು ತೆರೆದರೆ 11.30ರ ಪೂಜೆಗಾಗಿ ನಡೆ ಮುಚ್ಚಿ 12ಗಂಟೆ ಪೂಜೆಗೆ ನಡೆ ಬಾಗಿಲು ತೆರೆದರೆ ಜನ ಸಂದಣಿ ನೋಡಿ 1.ಅಥವಾ 1.30ಕ್ಕೆ ನಡೆ ಬಾಗಿಲು ಮುಚ್ಚುತ್ತಾರೆ.ಸಂಜೆ 5ಗಂಟೆಗೆ ನಡೆ ತೆರೆಯುತ್ತೆ ದೀಪರಾಧನೆ ಕೂಡಾ ನಡೆಯುತ್ತದೆ.7.30ಕ್ಕೆ ಕ್ಷೇತ್ರ ನಡೆ ಬಾಗಿಲು ಮುಚ್ಚುತ್ತಾರೆ. ಉತ್ಸವ ಮತ್ತು ವಿಶೇಷ  ದಿನಗಳಲ್ಲಿ ಸಮಯದಲ್ಲಿ ವ್ಯತ್ಯಾಸಗಳು ಇರುತ್ತವೆ.

Thursday, March 13, 2025

ಸ್ಯಾಂಡಲ್ ವುಡ್ ಗೊಂದು ಅಪ್ಪಟ ಹೊಸ ಪ್ರತಿಭೆ - ಪ್ರಕೃತಿ ಸೌಂದರ್ಯ

 ಭೀಮ ಚೆಲುವೆ ಪ್ರಕೃತಿ ಸೌಂದರ್ಯಗೆ

 ಬಿಗ್ ಪ್ರಾಜೆಕ್ಟ್ ನಲ್ಲಿ ಅವಕಾಶ...


ಕನ್ನಡ ಚಿತ್ರರಂಗದಲ್ಲಿ ಇದೀಗ ಸಾಕಷ್ಟು ಹೊಸ, ಯುವ  ಪ್ರತಿಭೆಗಳ ಆಗಮನವಾಗುತ್ತಿದೆ. ಹಾಗೆ ಬಂದವರಲ್ಲಿ  ಸರಳ ಸೌಂರ್ಯವತಿಯಾದ ಪ್ರಕೃತಿ ಸೌಂದರ್ಯ ಕೂಡ ಒಬ್ಬರು. ದುನಿಯಾ ವಿಜಯ್ ನಿರ್ದೇಶನದ ಭೀಮ ಚಿತ್ರದಲ್ಲಿ ಡ್ರಾಗನ್ ಮಂಜು ಪತ್ನಿಯಾಗಿ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದ ಇವರ ಪಾತ್ರ ಎಲ್ಲರ ಗಮನ ಸೆಳೆದಿತ್ತು. 
  ಮೂಲತ: ತುಮಕೂರಿನವರಾದ ಪ್ರಕೃತಿ ಸೌಂದರ್ಯ ಚಿಕ್ಕಂದಿನಿಂದಲೇ ಕಲೆಯ ನಂಟು ಬೆಳೆಸಿಕೊಂಡವರು. ಇವರ ತಾತ ಕೂಡ ರಂಗಭೂಮಿ ಕಲಾವಿದರಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ಕಾಲೇಜು ದಿನಗಳಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದ ಪ್ರಕೃತಿ ಸೌಂದರ್ಯಗೆ ಸ್ನೇಹಿತೆಯರೆಲ್ಲ ನೀನು ಚೆನ್ನಾಗಿದ್ದೀಯ, ಹಾಡುವುದಕ್ಕಿಂತ ಆ್ಯಕ್ಟಿಂಗ್ ಮಾಡಿದರೆ ಚೆನ್ನಾಗಿರುತ್ತೆ ಎಂದು ಸಲಹೆ ನೀಡಿದರಂತೆ. ಆ ಮಾತನ್ನೇ ಆಳವಾಗಿ ತೆಗೆದುಕೊಂಡ ಪ್ರಕೃತಿ ನಾನು ಕಲಾವಿದೆಯಾಗಿ ಬೆಳೆಯಬೇಕು ಎಂದು ಕನಸು ಕಟ್ಟಿಕೊಂಡಿದ್ದಾರೆ.
   ನಂತರ ಸ್ನೇಹಿತರೊಬ್ಬರ ಸಹಾಯದಿಂದ ಕಿರುತೆರೆಯ  ಗೀತಾ ಧಾರಾವಾಹಿಯಲ್ಲಿ ಸಣ್ಣದೊಂದು ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಆನಂತರ ಸಿಕ್ಕ ದೊಡ್ಡ ಅವಕಾಶವೇ ಕನ್ಯಾದಾನ. ಈ  ಸೀರಿಯಲ್ ನ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡ ಪ್ರಕೃತಿ ಸೌಂದರ್ಯ ಅವರ ಪಾತ್ರ, ಅಭಿನಯ ಎಲ್ಲರ ಗಮನ ಸೆಳೆಯಿತು. ಅದಾದ ನಂತರ ದುನಿಯಾ ವಿಜಯ್ ಅವರು, ತಮ್ಮ ಭೀಮ ಚಿತ್ರದ ಪ್ರಮುಖ ಪಾತ್ರಕ್ಕೆ ಇವರೇ ಸೂಕ್ತ ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಭೀಮ ಚಿತ್ರದ ಪಾತ್ರ ನೋಡಿ, ತೆಲುಗು ಚಿತ್ರರಂಗದ ಕಡೆಯಿಂದಲೂ ಇವರಿಗೆ ಹಲವಾರು ಆಫರ್ ಗಳು ಬರುತ್ತಿವೆ‌. ಈಗಾಗಲೇ ತೆಲುಗು ಸೀರಿಯಲ್ ಒಂದರಲ್ಲಿ ಕೂಡ ಪ್ರಕೃತಿ ಸೌಂದರ್ಯ ಅಭಿನಯಿಸಿದ್ದಾರೆ ಕೂಡ. ಸದ್ಯ ಕನ್ನಡದ  ಬಿಗ್ ಪ್ರಾಜೆಕ್ಟ್ ವೊಂದರಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು, ಅದರ ಬಗ್ಗೆ ಶೀಘ್ರದಲ್ಲೇ  ಮಾಹಿತಿ ನೀಡುವುದಾಗಿ ಹೇಳಿದ ಪ್ರಕೃತಿ  ಸೌಂದರ್ಯ ಅವರಿಗೆ ತಾನು ಜನರು  ಗುರುತಿಸುವಂಥ ಹಾಗೂ ಅಭಿನಯಕ್ಕೆ ಹೆಚ್ಚು ಅವಕಾಶ ಇರುವಂಥ  ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸಿದೆ. ಇದೇ ತಿಂಗಳ 24ರಂದು ಪ್ರಕೃತಿ ಸೌಂದರ್ಯ ಅವರ ಹುಟ್ಟುಹಬ್ಬವಿದ್ದು ಇದೇ ಸಂದರ್ಭದಲ್ಲಿ ಹೊಸ ಚಿತ್ರಗಳ ಆಫರ್ ಬರುತ್ತಿರುವುದು ಅವರಿಗೆ ಡಬಲ್ ಖುಷಿ ನೀಡಿದೆ.

ಈ ನನ್ನ ಲೇಖನ ಜನವರಿ 2025 ಗೃಹ ಶೋಭಾ ಪತ್ರಿಕೆಯಲ್ಲಿ ಪ್ರಕಟವಾಯಿತು 

Friday, March 07, 2025

ಮಿಥ್ಯ Movie Review: ಹನ್ನೊಂದರ ಹರೆಯದ ಬಾಲಕನ ಮಾನಸಿಕ ತೊಳಲಾಟದ ಜೀವನಗಾಥೆ

 ಮಿಥ್ಯ Movie Review: ಹನ್ನೊಂದರ ಹರೆಯದ ಬಾಲಕನ ಮಾನಸಿಕ ತೊಳಲಾಟದ ಜೀವನಗಾಥೆ

 - ರಾಘವೇಂದ್ರ ಅಡಿಗ ಎಚ್ಚೆನ್. 


ಸುಮಂತ್ ಭಟ್ ನಿರ್ದೇಶನದ, ಮಿಥ್ಯ ಸಿನಿಮಾವನ್ನು  ರಕ್ಷಿತ್ ಶೆಟ್ಟಿ ತಮ್ಮ ಹೋಮ್ ಬ್ಯಾನರ್ ಪರಂವಹ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. 2023ರ ಸಿನಿಮಾ ಇದಾಗಿದ್ದು 024ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಅನೇಕ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಚಿತ್ರದಲ್ಲಿ ಬಾಲಕನ ದೃಷ್ಟಿಕೋನದಿಂದ ಕೌಟುಂಬಿಕ ಕಲಹ ಪ್ರಕರಣವನ್ನು ಪ್ರಸ್ತುತಪಡಿಸಲಾದ ರೀತಿಯು ಅದರ ಪ್ರಬುದ್ದ ಭಾವನಾತ್ಮಕ ಕಥೆಯ ಕಾರಣ ಪ್ರಶಂಸೆಗೆ ಪಾತ್ರವಾಗಿತ್ತು. 

ಸಿನಿಮಾವು  ತನ್ನ ಜೀವನದ ಅತ್ಯಂತ ನಿರ್ಣಾಯಕ ಹಂತದಲ್ಲಿ ಹೊಸ ಸ್ಥಳ, ಹೊಸ ಭಾಷೆ ಮತ್ತು ಹೊಸ ಕುಟುಂಬಕ್ಕೆ ಹೊಂದಿಕೊಳ್ಳುವ ಸಮಯದಲ್ಲಿ ತಂದೆ ತಾಯಿ ಇಬ್ಬರೂ ಇಲ್ಲದೆ ಹೊಸ ಕುಟುಂಬದೊಡನೆ ಹೊಂದಿಕೊಳ್ಳಬೇಕಾದ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಹನ್ನೊಂದು ವರ್ಷದ ಬಾಲಕನ ಜೀವನವನ್ನು ತೆರೆ ಮೇಲೆ ತಂದಿದೆ. 

ಚಲಿಸುವ ರೈಲಿನ ಬಾಗಿಲಲ್ಲಿ ನಿಂತಿರುವ ಹುಡುಗನೊಂದಿಗೆ ಕಥೆ ಪ್ರಾರಭವಾಗುತ್ತದೆ. ಚಿಕ್ಕ ಹುಡುಗಿಯನ್ನು ಹೊತ್ತ ಮಹಿಳೆ ಆ ಹುಡುಗನನ್ನು ಬಾಗಿಲಿನಿಂದ ಒಳಗೆ ಕರೆದೊಯ್ಯುತ್ತಾಳೆ. ಅಲ್ಲೇಕೆ ಒಬ್ಬನೇ ನಿಂತಿದ್ದೆ ಎಂದು ಕೇಳುವಾಗಲೂ ಆ ಹುಡುಗ ಏನೂ ಮಾತನಾಡುವುದಿಲ್ಲ. 


ಮಿಥುನ್  (ಅಥಿಶ್ ಶೆಟ್ಟಿ) ಯನ್ನು ಎಲ್ಲರೂ ಪ್ರೀತಿಯಿಂದ ಮಿಥ್ಯ ಎಂದು ಕರೆಯುತ್ತಿರುತ್ತಾರೆ. ಅವನ ಹೆತ್ತ ತಂದೆ ತಾಯಿ ಸಾವನ್ನಪ್ಪಿದ ನಂತರ ಮುಂಬೈನಿಂದ ಉಡುಪಿಗೆಅವನನ್ನು ಕರೆತರಲಾಗಿದೆ.  ತನ್ನ ಗಂಡನ ಮರಣದ ನಂತರ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಮಿಥ್ಯನ ತಾಯಿ  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಗ ಮಿಥ್ಯ ಹಾಗೂ ಅವನ ತಂಗಿ ವಂದನಾಳನ್ನು ಚಿಕ್ಕಮ್ಮ ಮತ್ತು ಆಕೆಯ ಕುಟುಂಬ ಸಾಕಲು ತೊಡಗುತ್ತದೆ.  ಮಿಥ್ಯ  ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದಂತೆ ಅವನ ಮನದಾಳದ ನೋವು ಹಾಗೂ ದುಃಖವನ್ನು ಸಹ ಚಿತ್ರ ಎಳೆ ಎಳೆಯಾಗಿ ಬಿಡಿಸುತ್ತಾ ಹೋಗುತ್ತದೆ. 

ಪ್ರಮುಖ ಪಾತ್ರದಲ್ಲಿ ಬಾಲನಟನಿರುವ ಕಾರಣ ಚಿತ್ರದ ನಿರೂಪಣೆ ಸರಳವಾಗಿದೆ. , ಆಗಾಗ್ಗೆ ದುಃಖ ಮತ್ತು ಭಾವನಾತ್ಮಕ ಸನ್ನಿವೇಶ  ಚಿತ್ರದ ಪ್ರಮುಖ ಅಂಶವಾಗಿದೆ. ಮಿಥ್ಯ ಪಾತ್ರದ ಮನದಾಲದ ದುಃಖವನ್ನೇ ಹೆಚ್ಚು ಪ್ರತಿಫಲಿಸುವಂತೆ ಕಥೆ ಹೆಣೆಯಲಾಗಿದೆ. ಸವಾಲುಗಳನ್ನು ಎದುರಿಸುವ ಹನ್ನೊಂದು ವರ್ಷದ ಮಗುವಿನ ಮನಸ್ಥಿತಿಯ ಮೂಲಕ ಅದನ್ನು ಅನ್ವೇಷಿಸುತ್ತದೆ.

ಸುಮಂತ್ ಭಟ್ ಅವರ ಕಥೆ ಮತ್ತು 11 ವರ್ಷದ ಬಾಲಕನ ಕಠಿಣ ಮಾನಸಿಕ ಯಾತನೆಯನ್ನು ಚಿತ್ರಿಸುವ "ಮಿಥ್ಯ" ನಾವು ನೀವೆಲ್ಲಾ ನೋಡಬೇಕಾದ ಸಿನಿಮಾ.  ಮಕ್ಕಳ ಅಭಿನಯವನ್ನೊಳಗೊಂಡ ಈ ಚಿತ್ರವು ಕೇವಲ ಮಕ್ಕಳ ಚಲನಚಿತ್ರವಲ್ಲ, ಇದು ಪ್ರೇಕ್ಷಕರ ಹೃದಯವನ್ನು ತಟ್ಟುತ್ತದೆ ಮತ್ತು ಅನೇಕ ಪ್ರಶ್ನೆಗಳನ್ನು ಉ:ಳಿಸಿ ಹೋಗುತ್ತದೆ.


Wednesday, March 05, 2025

"ನೀ ನಂಗೆ ಅಲ್ಲವಾ" ಚಿತ್ರದ ನಾಯಕಿಯಾದ ಕಾಶಿಮಾ

"ನೀ ನಂಗೆ ಅಲ್ಲವಾ" ಚಿತ್ರದ ನಾಯಕಿಯಾದ ಕಾಶಿಮಾ

ಕನ್ನಡ, ತಮಿಳು, ತೆಲುಗು ಸೇರಿ ಬಹು ಭಾಷಾ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಕಾಶಿಮಾ ರಫಿ ಈಗ ಕನ್ನಡದ ಮತ್ತೊಂದು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲು ಸಿದ್ದವಾಗಿದ್ದಾರೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಅಪ್ಪಟ ಕನ್ನಡ ಪ್ರತಿಭೆ ಕಾಶಿಮಾ  "ನೀ ನಂಗೆ ಅಲ್ಲವಾ" ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.  ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ವಿದ್ಯಾ ಶ್ರೀಮುರಳಿ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದರೆ  "ಮ್ಯಾಟ್ನಿ" ಚಿತ್ರದ ಖ್ಯಾತಿಯ ನಿರ್ಮಾಪಕರಾದ  ಎಸ್ ಪಾರ್ವತಿ ಗೌಡ, ಪವನ್ ಪರಮಶಿವಂ ಹಾಗೂ ಮನೋಹರ್ ಕಾಂಪಲ್ಲಿ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ.   ಮನೋಜ್ ಪಿ ನಡಲುಮನೆ ನಿರ್ದೇಶನ ಈ ಸಿನಿಮಾಗಿದೆ.
ಕಾಶಿಮಾ ರಫಿ ಇದಕ್ಕೆ ಮುನ್ನ ಸೌತ್ ಇಂಡಿಯನ್ ಹೀರೋಸಿನಿಮಾದ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಮಿಂಚಿದ್ದರು. ಅಲ್ಲದೆ ಟೆಂಪರ್, ಕಸ್ತೂರಿ ಮಹಲ್ ನಲ್ಲಿ ಸಹ ಕಾಣಿಸಿಕೊಂಡಿದ್ದರು.
ಕಾಶಿಮಾ ಅವರ ತಂದೆ ರಫಿ ನಿರ್ಮಾಣ ಮತ್ತು ಗುತ್ತಿಗೆ ಕ್ಷೇತ್ರದ ಉದ್ಯಮಿಯಾಗಿದ್ದು ಕಾಶಿಮಾ ತಾವು ಮಾಡಲಿಂಗ್ ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಬಂದವರು, ಅವರು ಈ ಮುನ್ನ ಮಿಸ್ ಬೆಂಗಳೂರು ಸೌಂದರ್ಯ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು.  
ಗಾಡ್ವಿನ್ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ,  ಬೆಂಗಳೂರಿನ ಸಿಂಧಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಕಾಶಿಮಾ "ಕಳಾಪುರಂ" ಎನ್ನುವ ತೆಲುಗು ಸಿನಿಮಾದಲ್ಲಿ ಹಾಗೂ "ಕಾದಂಬರಿ" ಎನ್ನುವ ತಮಿಳು ಸಿನಿಮಾಗಳಲ್ಲಿ ಸಹ ಅಭಿನಯಿಸಿದ್ದಾರೆ.  


"ನೀ ನಂಗೆ ಅಲ್ಲವಾ" ಚಿತ್ರದ ಮೂಲಕ  ರಾಹುಲ್ ಅರ್ಕಾಟ್ ಎಂಬ ನೂತನ ಪ್ರತಿಭೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರತಂಡ, ಈಗ ಚಿತ್ರದ ನಾಯಕಿಯ ಬಗ್ಗೆ ಮಾಹಿತಿ ನೀಡಿದೆ.  ಬೆಡಗಿ ಕಾಶಿಮಾ "ನೀ ನಂಗೆ ಅಲ್ಲವಾ" ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನೂತನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕಿ ಕಾಶಿಮಾ‌ ಅವರಿಗೆ ಚಿತ್ರತಂಡ ಸ್ವಾಗತ ಹೇಳಿದೆ.

-ರಾಘವೇಂದ್ರ ಅಡಿಗ ಎಚ್ಚೆನ್
2025 ಫೆಬ್ರವರಿ ತಿಂಗಳಲ್ಲಿ ಗೃಹ ಶೋಭಾ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ