Tuesday, December 16, 2025

ವಿಷ್ಣುವರ್ಧನ್ 75 - ದಾದಾ ಸ್ಮಾರಕ ವಿವಾದ ಒಂದು ಕಿರು ನೋಟ

 - ರಾಘವೇಂದ್ರ ಅಡಿಗ ಎಚ್ಚೆನ್.



ಕರ್ನಾಟಕ ಮಾತ್ರವಲ್ಲ ಇಡೀ ಭಾರತ ದೇಶದ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಅವರಿಗೊಂದು ಗೌರವ ಸ್ಥಾನಮಾನವಿದೆ. ಆದರೆ ಬದುಕಿದಾಗ ಮಾತ್ರವಲ್ಲ ಸಾವಿನ ನಂತರ ಕುಡ ನಾನಾ ರೀತಿಯ ನೋವು, ವಿವಾದಗಳಿಗೆ ಈಡಾದ ಮತ್ತೊಬ್ಬ ನಟ ಬಹುಷಃ ಬೇರೊಬ್ಬರಿಲ್ಲ. ವಿಷ್ಣುವರ್ಧನ್ ಸಮಾಧಿ ಅಥವಾ ಸ್ಮಾರಕ ಅವರ ಸಾವಿನ ನಂತರದಲ್ಲಿ ನಾನಾ ಕಾರಣಗಳಿಗೆ ಸುದ್ದಿಯಾಗಿದ್ದು ಇತ್ತೀಚೆಗೆ ಕೆಂಗೇರಿಯ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸ್ಮಾರಕವನ್ನು ನೆಲಸಮಗೊಳಿಸಿರುವುದು ಒಂದು ದುರದೃಷ್ಟಕರ ಘಟನೆ.  ಇದನ್ನು ವಿರೋಧಿಸಿ ಈಗ ವಿಷ್ಣುವರ್ಧನ್ ಅಭಿಮಾನಿ ಸಂಘಗಳು ನಾನಾ ರೀತಿಯಲ್ಲಿ ಕ್ರಮಕ್ಕೆ ಮುಂದಾಗಿದೆ.   ಇದೇ ಸೆಪ್ಟೆಂಬರ್ ೧೮ಕ್ಕೆ ವಿಷ್ಣುವರ್ಧನ್ ಅವರ ೭೫ನೇ ಹುಟ್ಟಿದ ದಿನ ಇದ್ದು ಈ ಹಿನ್ನೆಲೆಯಲ್ಲಿ ವಿಷ್ಣು ಸ್ಮಾರಕ ಕುರಿತಂತೆ ಪುಟ್ಟ ಪರಿಚಯ ಲೇಖನ ಇಲ್ಲಿದೆ-
ಅಭಿಮಾನ್ ಸ್ಟುಡಿಯೋವನ್ನು ಸರ್ಕಾರವು ಅರಣ್ಯ ಪ್ರದೇಶವೆಂದು ಘೋಷಿಸಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಇತ್ತೀಚೆಗೆ ಪ್ರಾರಂಭಿಸಿದೆ. ಈ ಪ್ರಕ್ರಿಯೆ ಹೊಸದಲ್ಲ. ಈ ಹಿಂದೆಯೂ ನಡೆದಿತ್ತು. ಆದರೆ ಸರ್ಕಾರದ ವತಿಯಿಂದ ಸರಿಯಾದ ರೀತಿಯಲ್ಲಿ ವಾದ ಮಂಡನೆ ಆಗದ ಕಾರಣದಿಂದ ಅಭಿಮಾನ್ ಸ್ಟುಡಿಯೋದ ಮಾಲೀಕರು ಆ ಪ್ರಕ್ರಿಯೆ ವಿರುದ್ಧ ತಡೆಯಾಜ್ಞೆ ತಂದು ಅದನ್ನು ಖಾಸಗಿ ಸ್ವತ್ತು ಎಂದು ಬಿಂಬಿಸಿ ಅವ್ಯವಹಾರ ನಡೆಸಲಾಗುತ್ತಿತ್ತು. ಈ ಬಾರಿಯೂ ಅದೇ ಮರುಕಳಿಸಬಾರದೆಂದು ಡಾ. ವಿಷ್ಣುಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಮತ್ತು ಪದಾಧಿಕಾರಿಗಳು, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಒತ್ತಾಯ ಮಾಡಿದ್ದಾರೆ. ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಸರ್ಕಾರ ಆದೇಶ ಹೊರಡಿಸಿದ ನಂತರ ಬಾಲಕೃಷ್ಣ ಅವರ ಮಕ್ಕಳು ಸರ್ಕಾರದ ಈ ಮುಟ್ಟುಗೋಲು ಪ್ರಕ್ರಿಯೆಗೆ ತಡೆಯಾಜ್ಞೆ ತರಲು ಉದ್ದೇಶಿಸಿರುವುದರಿಂದ ಕೂಡಲೆ ಕೆವಿಎಟ್ ಅನ್ನು ದಾಖಲಿಸಬೇಕೆಂದು ಕೋರಲಾಗಿದೆ. ಜೊತೆಗೆ ಅರಣ್ಯ ಭೂಮಿ ಎಂದು ಘೋಷಿಸಿದ ನಂತರವೂ ಅಲ್ಲಿ ಡಾ. ವಿಷ್ಣುವರ್ಧನ್ ಮತ್ತು ಬಾಲಕೃಷ್ಣ ಅವರ ಪುಣ್ಯಭೂಮಿ ಅಥವಾ ಪರಿಸರ ಸ್ನೇಹಿ ಸ್ಮಾರಕ ನಿರ್ಮಾಣಕ್ಕೆ ಅವಕಾಶವನ್ನು ಕಲ್ಪಿಸಬೇಕೆಂದು ವಿನಂತಿಸಲಾಗಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು, ಅಭಿಮಾನ್ ಸ್ಟುಡಿಯೋವನ್ನು ಸರ್ಕಾರ ಅಧೀನಕ್ಕೆ ತೆಗೆದುಕೊಂಡು, ಅಲ್ಲಿ ಒಂದು ಜೈವಿಕ ಶ್ವಾಶಕೋಶ ಉದ್ಯಾನವನವನ್ನು ನಿರ್ಮಿಸುವುದಾಗಿಯೂ ಮತ್ತು ವಿಷ್ಣುವರ್ಧನ್ ಅವರ ಸಮಾಧಿಗೆ ಸ್ಥಳವನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಆಶ್ವಾಸನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿನ ವಿಷ್ಣುವರ್ಧನ್ ಸ್ಮಾರಕದ ಇತಿಹಾಸವನ್ನೊಮ್ಮೆ ನೋಡುವುದಾದರೆ 2009ರ ಡಿ.30ರಂದು ವಿಷ್ಣುವರ್ಧನ್‌ ನಿಧನರಾಗಿದ್ದರು. ಬಳಿಕ ಅಭಿಮಾನ್‌ ಸ್ಟುಡಿಯೊದಲ್ಲಿ ಅವರ ಅಂತ್ಯಸಂಸ್ಕಾರ ನಡೆಸಲಾಗಿತ್ತು.  ಡಾ ರಾಜ್‌ಕುಮಾರ್ ಸ್ಮಾರಕದಂತೆ, ಡಾ ವಿಷ್ಣುವರ್ಧನ್ ಹೆಸರಿನಲ್ಲೂ ಸ್ಮಾರಕ ನಿರ್ಮಾಣ ಆಗಬೇಕೆಂಬ ನಿರ್ಧಾರವಾಯಿತು. ಆಗ ಚಿತ್ರರಂಗದ ಹಲವರಿಗೆ ಮತ್ತು ಸರ್ಕಾರಕ್ಕೆ ಹೊಳೆದಿದ್ದು ‘ಅಭಿಮಾನ್ ಸ್ಟುಡಿಯೋ’!  ಆಗ ಅದು ವಿವಾದಿತ ಜಾಗವೆಂಬ ಬಗ್ಗೆ ಯಾರೂ ಆಲೋಚಿಸಿರಲಿಲ್ಲ. ಬಳಿಕ ಆ ಜಾಗದಲ್ಲೇ ಸ್ಮಾರಕ ನಿರ್ಮಿಸಬೇಕೆಂಬ ಒತ್ತಾಯ ಕೇಳಿ ಬಂತು. ಅಂತ್ಯಸಂಸ್ಕಾರದ ಸ್ಥಳದಲ್ಲೇ ಸ್ಮಾರಕ ಮಾಡಬೇಕೆಂದು ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳು ಒತ್ತಾಯಿಸಿದರು. ಇದಕ್ಕೆ ಮಣಿದ ರಾಜ್ಯ ಸರಕಾರ 2010-11ರ ಬಜೆಟ್‌ನಲ್ಲಿ 11 ಕೋಟಿ ರೂ. ಅನುದಾನ ಘೋಷಿಸಿತು. ಆದರೆ, ಅಭಿಮಾನ್‌ ಸ್ಟುಡಿಯೊದ ವಿವಾದಿತ ಜಾಗದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಹಿರಿಯ ನಟ ಬಾಲಕೃಷ್ಣ ಕುಟುಂಬವು ವಿರೋಧ ವ್ಯಕ್ತಪಡಿಸಿತು. ಅಭಿಮಾನ್‌ ಸ್ಟುಡಿಯೊಗೆ ಸಂಬಂಧಿಸಿದ ಪ್ರಕರಣವು 2004ರಿಂದಲೂ ಕೋರ್ಟ್‌ನಲ್ಲಿತ್ತು. ಬಾಲಕೃಷ್ಣ ಅವರು ಅಭಿಮಾನ್‌ ಸ್ಟುಡಿಯೊಗಾಗಿ 20 ಎಕರೆ ಜಾಗ ಪಡೆದಿದ್ದರು. ಅದರಲ್ಲಿ 10 ಎಕರೆ ಜಾಗವನ್ನು ಬಾಲಕೃಷ್ಣ ಕುಟುಂಬವು ಮಾರಾಟ ಮಾಡಿ, ಉಳಿದ 10 ಎಕರೆಯಲ್ಲಿ ಸ್ಟುಡಿಯೊ ಅಭಿವೃದ್ಧಿ ಮಾಡುತ್ತೇವೆ ಎಂದಿತ್ತು. ಆ ಸಂದರ್ಭದಲ್ಲಿ ಸ್ಟುಡಿಯೊ ಅಭಿವೃದ್ಧಿಪಡಿಸದಿದ್ದರೆ ಜಾಗ ವಶಪಡಿಸಿಕೊಳ್ಳುವ ಅಧಿಕಾರ ಸರಕಾರಕ್ಕಿತ್ತು. ಆದರೆ, ಸ್ಟುಡಿಯೊ ಅಭಿವೃದ್ಧಿಯೂ ಆಗಲಿಲ್ಲ. ಸರಕಾರ ಆ ಜಾಗವನ್ನೂ ವಶಪಡಿಸಿಕೊಳ್ಳಲಿಲ್ಲ. ಈ ಸ್ಟುಡಿಯೊ ಜಾಗ ವ್ಯಾಜ್ಯದಲ್ಲಿರುವುದೇ ಸ್ಮಾರಕ ನಿರ್ಮಾಣದ ಹಿನ್ನಡೆಗೆ ಕಾರಣವಾಯಿತು. ಸರಕಾರ, ಸ್ಟುಡಿಯೊ ಕಾರ್ಯನಿರ್ವಹಣೆ ಸಂಬಂಧ ತನಿಖೆ ನಡೆಸಿತ್ತು. ತನಿಖಾ ತಂಡವು ಸ್ಟುಡಿಯೊದ 10 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿತ್ತು. ಆದರೆ, ಸರಕಾರವು ಬಾಲಕೃಷ್ಣರ ಮಕ್ಕಳಿಂದ ಭೂಮಿ ಪರಭಾರೆಯ ದಾಖಲೆಗಳು ಹಾಗೂ ದೃಢೀಕರಣ ಪತ್ರವನ್ನು ಮಾಡಿಸಿಕೊಳ್ಳಲಿಲ್ಲ. ನಂತರ ಬಾಲಕೃಷ್ಣರ ಮಕ್ಕಳು, ಸರಕಾರದ ಮುಟ್ಟುಗೋಲು ಆದೇಶದ ವಿರುದ್ಧ 2015ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿ ತಡೆಯಾಜ್ಞೆ ತಂದರು.
ಸರಕಾರ ಸ್ಮಾರಕಕ್ಕೆ ಪಕ್ಕದಲ್ಲೇ ಮತ್ತೊಂದು ಜಾಗ ಗುರುತಿಸಿತು. ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆಯೂ ನಡೆಯಿತು. ಆದರೆ, ಅದು ಅರಣ್ಯ ಪ್ರದೇಶವೆಂಬ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತರೊಬ್ಬರು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಅಭಿಮಾನಿಗಳು ಬಾಲಕೃಷ್ಣರ ಕುಟುಂಬದ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. 2023ರಲ್ಲಿ ಕೋರ್ಟ್‌, ಈ ಪ್ರಕರಣದಲ್ಲಿ ಅಭಿಮಾನಿಗಳಿಗೆ ಹಕ್ಕು ಇಲ್ಲಎಂದು ಹೇಳಿತ್ತು.
ಈ ನಡುವೆ ವಿಷ್ಣು ಕುಟುಂಬ ಮೈಸೂರಿಗೆ ಸ್ಮಾರಕ ಸ್ಥಳಾಂತರಕ್ಕೆ ಪಟ್ಟು ಹಿಡಿಯಿತು. ಇದರ ಮಧ್ಯೆ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ಆಗಲಿ ಎಂದು ಪಟ್ಟು ಹಿಡಿದರು. ಕುಟುಂಬದವರ ಆಶಯದಂತೆ ಮೈಸೂರಿನ ಹೆಚ್.ಡಿ.ಕೋಟೆ ರಸ್ತೆಯಲ್ಲಿ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಜಾಗ ಕೊಡ್ತು. ಮೈಸೂರಿನಲ್ಲಿ ಭೂಮಿ ಮಂಜೂರಾದರೂ, ರೈತರ ವಿರೋಧದಿಂದಾಗಿ ನಿರ್ಮಾಣ ವಿಳಂಬವಾಯಿತು. ಕೊನೆಗೂ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣವಾಗಿದೆ ಮತ್ತು ಲೋಕಾರ್ಪಣೆ ಕೂಡ ಆಗಿದೆ. . ಮೈಸೂರಿನ ಮಾನಂದವಾಡಿ ರಸ್ತೆಯ ಹಾಲಾಳು ಗ್ರಾಮದ ಉದ್ಬೂರ್ ಗೇಟ್ ಬಳಿ ನಿರ್ಮಿಸಲಾದ ಸ್ಮಾರಕದಲ್ಲಿ 'ಆಪ್ತರಕ್ಷಕ' ಚಲನಚಿತ್ರದ ಪಾತ್ರದ ಮಾದರಿಯಲ್ಲಿ ನಿರ್ಮಿಸಲಾದ 7 ಅಡಿ ಎತ್ತರದ ಪ್ರತಿಮೆಯ ಅನಾವರಣವಾಗಿದೆ.
ಇದಕ್ಕೂ ಮಿಗಿಲಾಗಿ ವಿಷ್ಣುವರ್ಧನ್ ಹಗೂ ನಟ ಬಾಲಕೃಷ್ಣ ಅವರ ಸಂಬಂಧ ಬಲವಾದದ್ದು. ಇಬ್ಬರ ಮಧ್ಯೆ ತಂದೆ - ಮಗನ ಬಾಂಧವ್ಯ, ಅನುಬಂಧ ಇತ್ತು. ಬಾಲಣ್ಣ ‘ಅಭಿಮಾನ್ ಸ್ಟುಡಿಯೋ’ ಆರಂಭಿಸಬೇಕು ಎಂದಾಗ ಅಲ್ಲಿಗೆ ಬಂದು ಗಣೇಶನ ವಿಗ್ರಹ ಪ್ರತಿಷ್ಠಾಪನೆ ಮಾಡಿ, ಸಣ್ಣ ಗುಡಿ ಕಟ್ಟಲು ಅಡಿಗಲ್ಲು ಹಾಕಿದ್ದೇ ಡಾ ವಿಷ್ಣುವರ್ಧನ್‌.. ಈ ಗಣಪತಿ ದೇವಸ್ಥಾನವನ್ನೂ ಸಹ ಈಗ ನೆಲಸಮ ಮಡಲಾಗಿದೆ!  ಅಷ್ಟು ಮಾತ್ರವಲ್ಲ ನಟ ಬಾಲಕೃಷ್ಣ ಕನಸಿನ ಅಭಿಮಾನ್ ಸ್ಟುಡಿಯೋದಲ್ಲಿ ಬಾಲಣ್ಣ ಮತ್ತವರ ಪತ್ನಿ ಸ್ಮಾರಕವಿದ್ದಿತ್ತು.  ಅದನ್ನೂ ಸಹ ಈಗ ಧ್ವಂಸ ಮಾಡಲಾಗಿದೆ. ಈ ಬಾಲಕೃಷ್ಣ ದಂಪತಿಗಳ ಸ್ಮಾರಕ ನಿರ್ಮಾಣ ಮಾಡಿದ್ದು ನಟ ಕಿಚ್ಚ ಸುದೀಪ್.


ಇದಾಗಿ ಅಭಿಮಾನ್ ಸ್ಟುಡಿಯೋ ಸ್ಥಾಪನೆ ಆಗಿದ್ದು ಹೇಗೆ ಎನ್ನುವ ಷಯ ನೋಡುವುದಾದರೆ  ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿಯ ಮೈಲಸಂದ್ರ ಗ್ರಾಮದಲ್ಲಿ ಮಾರ್ಚ್ 27, 1970 ರಂದು ಸ್ಟುಡಿಯೋಗಾಗಿ ಬಾಲಕೃಷ್ಣ ಅವರಿಗೆ ಸರ್ಕಾರ 20 ಎಕರೆ ಜಮೀನು ಮಂಜೂರು ಮಾಡಿತ್ತು. ಅಭಿಮಾನಿಗಳಿಂದ ಬಾಲಣ್ಣ ದೇಣಿಗೆ ಸಂಗ್ರಹಿಸಿ, ತಾವು ಜೀವತಾವಧಿಯಲ್ಲಿ ದುಡಿದಿದ್ದನ್ನೆಲ್ಲಾ ಸುರಿದು, ತೀವ್ರ ಕಷ್ಟದಿಂದ ಬಾಲಣ್ಣ ಕಟ್ಟಿದ ಸ್ಟುಡಿಯೋ ‘ಆಭಿಮಾನ್’. ಈ ಸ್ಟುಡಿಯೋ ಮೇಲೆ ಬಾಲಣ್ಣ ಬಹಳ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದರು. ಆದರೆ, ಅಂದುಕೊಂಡಂತೆ ಯಾವುದೂ ಸಾಗಲಿಲ್ಲ. ಬಾಲಣ್ಣ ನಿಧನದ ಬಳಿಕ ಅಭಿಮಾನ್ ಸ್ಟುಡಿಯೋದ ಆಡಳಿತವನ್ನ ಮಗ ಗಣೇಶ್ ವಹಿಸಿಕೊಂಡರು. ಬಾಲಣ್ಣ ಸಾವನ್ನಪ್ಪಿದ ಕೆಲವೇ ವರ್ಷಗಳಲ್ಲಿ ಸ್ಟುಡಿಯೋದ ಜಾಗವನ್ನ ತಮ್ಮ ಹೆಸರಿಗೆ ವರ್ಗಾವಣೆ ಆಗಬೇಕು ಅಂತ ಮಕ್ಕಳಾದ ಗಣೇಶ್ ಮತ್ತು ಶ್ರೀನಿವಾಸ್‌ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು. 20 ಎಕರೆ ಜಮೀನನ್ನು ತಲಾ 10 ಎಕರೆಯಂತೆ ಪಾರ್ಟಿಷನ್ ಡೀಡ್ ಮಾಡಿಸಿಕೊಂಡರು. ಅದರಲ್ಲಿ ಹೆಣ್ಣು ಮಕ್ಕಳಿಗೆ ಗೊತ್ತಾಗದಂತೆ 10 ಎಕರೆಯನ್ನ ಮಾರಿಬಿಟ್ಟರು. ಹೀಗಾಗಿ, 2004ರಲ್ಲಿ ಗೀತಾ ಬಾಲಿ ಕೋರ್ಟ್ ಮೆಟ್ಟಿಲೇರಿದರು. ಇನ್ಜಂಕ್ಷನ್ ಆರ್ಡರ್ ತಂದರು.
ಸರ್ಕಾರಿ ಆದೇಶ ಸಂಖ್ಯೆ AFD-54-FGL-69 (09-04-1969) ಅನ್ವಯ, ಮೈಲಸಂದ್ರ ಗ್ರಾಮದ ಸರ್ವೆ ನಂ 26ರಲ್ಲಿ 20 ಎಕರೆ ಪ್ರದೇಶವನ್ನು ಬಾಲಕೃಷ್ಣ ಅವರಿಗೆ ಅಭಿಮಾನ್ ಸ್ಟುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ ಮೇಲೆ ನೀಡಲಾಗಿತ್ತು. RD-37-GNA-69 (21-03-1970) ಅನ್ವಯ, ಅಭಿಮಾನ್ ಸ್ಟುಡಿಯೋ ಅಭಿವೃದ್ಧಿ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸದಿರಲು, ಸರ್ಕಾರದ ಪೂರ್ವಾನುಮತಿ ಇಲ್ಲದೆ ಮಾರಾಟ/ಪರಭಾರೆ ಮಾಡದಿರಲು ಷರತ್ತು ವಿಧಿಸಲಾಗಿತ್ತು. ಒಂದು ವೇಳೆ ಷರತ್ತು ಉಲ್ಲಂಘನೆಯಾದರೆ ಮಂಜೂರಾತಿಯನ್ನ ರದ್ದುಪಡಿಸಿ, ಭೂಮಿಯನ್ನು ಸರ್ಕಾರಕ್ಕೆ ಹಿಂಪಡೆಯಲಾಗುವುದು ಎಂದು ಆದೇಶದಲ್ಲಿ ನಮೂದಾಗಿತ್ತು. 20 ಎಕರೆ ಪೈಕಿ 10 ಎಕರೆ ಜಮೀನನ್ನು ಮಾರಾಟ ಮಾಡಿ, ಬಂದ ಹಣದಿಂದ ಸ್ಟುಡಿಯೋವನ್ನು ಆಧುನಿಕ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಬೇಕೆಂಬ ಷರತ್ತುಗಳೊಂದಿಗೆ ಬಾಲಣ್ಣ ಅವರ ಮಕ್ಕಳಾದ ಶ್ರೀನಿವಾಸ್ ಹಾಗೂ ಗಣೇಶ್‌ಗೆ ವಿಶೇಷ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಅನುಮತಿ ನೀಡಿದ್ದರು. ಪರಿಣಾಮ, ಶ್ರೀನಿವಾಸ್ ಹಾಗೂ ಗಣೇಶ್ ಜಮೀನು ಮಾರಾಟ ಮಾಡಿದರು. ಮಾರಾಟ ಮಾಡಿದ ಹಣ ಎಲ್ಲಿ ಹೋಗಿದೆ? ಏನಕ್ಕಾಗಿ ಬಳಕೆ ಆಗಿದೆ?  ಯಾರಿಗೂ ಗೊತ್ತಿಲ್ಲ. ಅಭಿಮಾನ್ ಸ್ಟುಡಿಯೋ ಮಾತ್ರ ಅಭಿವೃದ್ಧಿ ಕಾಣಲಿಲ್ಲ.
‘’1965ರಲ್ಲಿ ಸ್ಟುಡಿಯೋಗಾಗಿ ನಮ್ಮ ತಂದೆಗೆ ಸರ್ಕಾರ 5 ಎಕರೆ ಜಮೀನು ನೀಡಿತ್ತು. 1970ರಲ್ಲಿ 15 ಎಕರೆ ಹೆಚ್ಚುವರಿಯಾಗಿ ಕೊಟ್ಟು ಒಟ್ಟು 20 ಎಕರೆ ಮಂಜೂರು ಮಾಡಿತ್ತು. ಇದಕ್ಕಾಗಿ ನಮ್ಮ ತಂದೆ ಒಟ್ಟು 6 ಸಾವಿರ ರೂಪಾಯಿ ಹಣ ಕಟ್ಟಿದ್ದರು. ನನ್ನ ತಂದೆಯ ಹೆಸರಿಗೆ ಪಾಣಿಯನ್ನೂ ಮಾಡಿಕೊಟ್ಟರು. ಮೊದಲು ಜಮೀನನ್ನು ಕೊಟ್ಟಿದ್ದು ಲೀಸ್‌ಗೆ. 6 ಸಾವಿರ ರೂಪಾಯಿ ಕಟ್ಟಿದ್ಮೇಲೆ ನಮ್ಮ ತಂದೆಯ ಹೆಸರಿಗಾಗಿದೆ. ದಾಖಲೆಗಳ ಪ್ರಕಾರ, 20 ಎಕರೆ ಜಾಗ ನಮ್ಮ ತಂದೆಯ ಹೆಸರಲ್ಲಿತ್ತು. ಪಾಣಿ ನಮ್ಮ ತಂದೆಯ ಹೆಸರಿನಲ್ಲಿತ್ತು. ತಂದೆಯ ಹೆಸರಿನಲ್ಲೇ ಟ್ಯಾಕ್ಸ್ ಕಟ್ಟಲಾಗಿದೆ. 1995ರಲ್ಲಿ ತಂದೆ ತೀರಿಕೊಂಡರು. ಅಪ್ಪ ತೀರಿಕೊಂಡ ಬಳಿಕ ಸ್ಟುಡಿಯೋವನ್ನ ನಮಗೆ ಗೊತ್ತಿಲ್ಲದೆ ಶ್ರೀನಿವಾಸ್ ಹಾಗೂ ಗಣೇಶ್‌ ತಲಾ 10 ಎಕರೆಯಂತೆ ಪಾರ್ಟಿಷನ್ ಡೀಡ್ ಮಾಡಿಸಿಕೊಂಡಿದ್ದಾರೆ. ಇದು ಕಾನೂನಿಗೆ ವಿರುದ್ಧ. ಶ್ರೀನಿವಾಸ್ ಹೆಸರಿಗೆ ಬಂದ 10 ಎಕರೆಯನ್ನ 2003 ರಿಂದ 4 ಮಂದಿಗೆ ಮಾರಾಟ ಮಾಡಲಾಗಿದೆ. ಇದರಲ್ಲಿ ರಾಜಕಾರಣಿಗಳ ಕೈವಾಡ ಇದೆ. ಗಣೇಶನ ಹೆಸರಿನಲ್ಲಿದ್ದ 10 ಎಕರೆ ಜಾಗ ಮಾತ್ರ ಉಳಿದಿದೆ. ಹೆಣ್ಮಕ್ಕಳಿಗೂ ಅಧಿಕಾರ ಇದೆ ಅಂತ ನಾನು 2004ರಲ್ಲಿ ಕೋರ್ಟ್‌ನಲ್ಲಿ ಕೇಸ್‌ ಹಾಕಿದೆ’’ ಇದು ಬಾಲಕೃಷ್ಣ ಪುತ್ರಿ  ಗೀತಾ ಬಾಲಿ ಮಾತು.  2018ರಲ್ಲಿ ಗೀತಾ ಬಾಲಿ ಅವರ ತಮ್ಮ ಶ್ರೀನಿವಾಸ್ ತೀರಿಕೊಂಡರು. 2020ರಲ್ಲಿ ಗಣೇಶ್ ಅವರಿಂದ ಕಾರ್ತಿಕ್ (ಶ್ರೀನಿವಾಸ್ ಮಗ) ಬಲವಂತವಾಗಿ 10 ಎಕರೆ ಜಾಗವನ್ನ ಗಿಫ್ಟ್ ಡೀಡ್ ಆಗಿ ಬರೆಯಿಸಿಕೊಂಡಿದ್ದಾರೆ ಎಂದು ಗೀತಾ ಆರೋಪಿಸಿದ್ದಾರೆ. ಹಾಗೆ ಕಾರ್ತಿಕ್ ಹೆಸರಿಗೆ ಜಾಗ ಬಂದ ನಂತರದಲ್ಲಿ 2021ರಲ್ಲಿ ಕಾರ್ತಿಕ್‌ 14 ಕೋಟಿ (14,37,15,000) ರೂಪಾಯಿಗೆ ಒಂದು ಎಕರೆ ಜಮೀನನ್ನು ಅನಧಿಕೃತವಾಗಿ ಮಾರಾಟ ಮಾಡಿದ್ದಾರೆ ಎಂಬ ಅಂಶ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಬೆಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಬರೆದ ಪತ್ರದಲ್ಲಿದೆ.
ಒಟ್ಟಾರೆಯಾಗಿ ಹೇಲುವುದಾದರೆ ಇನ್ನು ಮುಂಡಾದರೂ ಮೇರುನಟನ ವ್ಯಕ್ತಿತ್ವಕ್ಕೆ ತಕ್ಕಂತೆ ಯಾವ ವಿವಾದ ಅಡೆತಡೆ ಇಲ್ಲದೆ ಸ್ಮಾರಕ ನಿರ್ಮಾಣವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನ್ಮದಿನ, ಪುಣ್ಯತಿಥಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ವಿಷ್ಣುವರ್ಧನ್ ದರ್ಶನ ಪಡೆಯುವಂತಾದರೆ ಅಷ್ಟೇ ಸಾಕು.

ಅಕ್ಟೋಬರ್ 2025"ವಂದೇ ಕರ್ನಾತಕ" ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನ.. 

ಕನ್ನಡ ಸಾಹಿತ್ಯ ಜಗತ್ತಿನ ಮೇರು ’ಪರ್ವ’ತ ಡಾ|| ಎಸ್.ಎಲ್. ಭೈರಪ್ಪ

 - ರಾಘವೇಂದ್ರ ಅಡಿಗ ಎಚ್ಚೆನ್.



ಅಗ್ರಮಾನ್ಯ ಕಾದಂಬರಿಕಾರ ಡಾ|| ಎಸ್.ಎಲ್. ಭೈರಪ್ಪನವರು ಹತ್ತಿರಹತ್ತಿರ ಆರು ದಶಕಗಳ ಅವಧಿಯಲ್ಲಿ ಭೈರಪ್ಪನವರು ನಿರ್ಮಿಸಿರುವ ಇಪ್ಪತ್ತನಾಲ್ಕು ಕಾದಂಬರಿಗಳನ್ನು ಸಾಹಿತ್ಯಜಗತ್ತಿನ ಒಂದು ಅದ್ಭುತ ಅಥವಾ ವಿಸ್ಮಯ. ಕಳೆದ ಎರಡು ಪೀಳಿಗೆಗಳ ಕನ್ನಡ ಓದುಗರನ್ನು ಸೂಜಿಗಲ್ಲಿನಂತೆ ಹಿಡಿದಿರಿಸಿಕೊಂಡಿರುವವರು, ಇಡೀ ಭಾರತದಲ್ಲಿಯೆ ಅತ್ಯಧಿಕ ಪ್ರಮಾಣದಲ್ಲಿ ಮಾರಾಟವಾಗಿರುವ ಕಾದಂಬರಿಗಳ ರಚಯಿತರು, ಭಾರತದ ಅನ್ಯಭಾಷೆಗಳಿಗೆ ಅನುವಾದಗೊಂಡಿರುವ ಅತ್ಯಧಿಕಸಂಖ್ಯೆಯ ಕನ್ನಡ ಕಾದಂಬರಿಗಳನ್ನು ನೀಡಿರುವವರು - ಎಂಬ ರೀತಿಯ ಭೈರಪ್ಪನವರ ಕಾದಂಬರಿಗಳ ಅನನ್ಯತೆಯಂತೂ ಎದ್ದುಕಾಣುವಂಥದಾಗಿದೆ. ಇಂತಹಾ ಮೇರು ವ್ಯಕ್ತಿತ್ವದ ಸಾಹಿತಿ ಎಸ್.ಎಲ್. ಭೈರಪ್ಪ ನಮ್ಮನ್ನೆಲ್ಲಾ ಅಗಲಿದ್ದಾರೆ. ಈ ಅಗಲಿಕೆ ಭಾರತೀಯ ಸಾಹಿತ್ಯ ಲೋಕಕ್ಕೊಂದು ದೊಡ್ಡ ನಷ್ಟವನ್ನುಂಟುಮಾಡಿದೆ.  ಭೈರಪ್ಪ ಕನ್ನಡ ಸಾಹಿತ್ಯದಲ್ಲಿ ದಾರ್ಶನಿಕತೆ, ಇತಿಹಾಸ, ಸಮಾಜದ ಒಳನೋಟಗಳನ್ನು ಸೃಜನಾಶೀಲ ರೂಪದಲ್ಲಿ ಮಾಡಿಕೊಂಡು ಬರೆಯುವ ಮೂಲಕ ವಿಶಿಷ್ಟ ಸ್ಥಾನ ಹೊಂದಿದ್ದರು. ತೊಗಲುಬೊಂಬೆಯ ಆಟದ ಸೂತ್ರಧಾರ ಬೊಂಬೆಗಳನ್ನು ತನಗೆ ಬೇಕಾದಂತೆ  ಕುಣಿಸಿದಂತೆ, ತಮ್ಮ ಕಾದಂಬರಿಗಳಲ್ಲಿ ಪಾತ್ರಗಳನ್ನು ಭೈರಪ್ಪ ಅವರು ಕುಣಿದುತ್ತಿದ್ದರೀನ್ನಬೇಕು.
ಎಸ್.ಎಲ್. ಭೈರಪ್ಪ ಅವರ ಪೂರ್ಣ ಹೆಸರು ಸಂತೆಶಿವರ ಲಿಂಗಣ್ಣಯ್ಯ ಭೈರಪ್ಪ. 1931ರ ಆ.20ರಲ್ಲಿ ಹಾಸನ ಜಿಲ್ಲೆ ಸಂತೆಶಿವರ ಗ್ರಾಮದಲ್ಲಿ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಭೈರಪ್ಪನವರು, ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣವನ್ನ ಪಡೆದಿದ್ದರು. ಕಿತ್ತು ತಿನ್ನುವ ಬಡತನದ ನಡುವೆಯೂ ತಾಯಿಯಿಂದ ಪ್ರಭಾವಿತರಾಗಿದ್ದ ಅವರು, ಗಾಂಧೀಜಿ ಮೌಲ್ಯಗಳಿಗೂ ಮಾರಿ ಹೋಗಿದ್ದರು. ಸ್ವಾತಂತ್ರ್ಯ ಚಳುವಳಿಗೆ ತೊಡಗಿಸಿಕೊಂಡಾಗ ಅವರಿಗೆ ಆಗಿನ್ನೂ ಕೇವಲ 13 ವರ್ಷ. ಬಳಿಕ ಪ್ರೌಢ ಶಿಕ್ಷಣ ಮತ್ತು ಕಾಲೇಜು ದಿನಗಳನ್ನ ಮೈಸೂರಿನಲ್ಲಿ ಪೂರೈಸಿದ್ದ ಭೈರಪ್ಪನವರು, ಸುವರ್ಣ ಪದಕದೊಂದಿಗೆ ಎಂ.ಎ ತೇರ್ಗಡೆಯಾಗಿದ್ದರು. ಇಂಗ್ಲೀಷ್ನಲ್ಲಿ ರಚಿಸಿದ “ಸತ್ಯ ಮತ್ತು ಸೌಂದರ್ಯ” ಎಂಬ ಮಹಾ ಪ್ರಬಂಧಕ್ಕೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಗಳಿಸಿದ್ದರು. ಹುಬ್ಬಳ್ಳಿ, ಗುಜರಾತ್, ದೆಹಲಿಯಲ್ಲಿ ಉಪನ್ಯಾಸಕ ವೃತ್ತಿ ಕೈಗೊಂಡಿದ್ದರು. ʻಧರ್ಮಶ್ರೀʼ ಕಾದಂಬರಿಯಿಂದ ಹಿಡಿದು ಇತ್ತೀಚಿನ ವರ್ಷಗಳಲ್ಲಿ ಮೂಡಿಬಂದ ʻಉತ್ತರಕಾಂಡʼದವರೆಗೆ ಜೀವನದ ವಿವಿಧ ಸ್ತರಗಳ ಕುರಿತು ಚಿಂತನೆ ಮಾಡುವಂತಹ ಬೃಹತ್‌ ಕಥಾನಕಗಳನ್ನು ಕೊಡುಗೆಯಾಗಿ ನೀಡಿರುವ ಕರುನಾಡಿನ ಜೀವಂತ ಸಾಹಿತ್ಯ ದಂತಕಥೆ ಎಂದರೆ ಅವರೇ ಎಸ್.ಎಲ್. ಭೈರಪ್ಪ.
ಭೈರಪ್ಪ ಓರ್ವ  ಭಾರತೀಯರ ಪರಂಪರೆಯ ಹಿನ್ನೆಲೆಯಿಂದ ಬಂದವರು. ಮೇಲಾಗಿ  ಒಬ್ಬ ತತ್ತ್ವಶಾಸ್ತ್ರಜ್ಞರೂ ಆಗಿದ್ದರು. ಹಾಗಾಗಿ ಅವರ ಮಾತುಗಳು ಚರ್ಚೆಗೆ ಆಸ್ಪದ ನೀಡುವಂತಿರುತ್ತಿತ್ತು. ಅಲ್ಲಚೆ ಭಾರತ ಪರಂಪರೆಯ ಮೂಲವೇ ಚರ್ಚೆ. ನಮ್ಮ ವೇದ, ಉಪನಿಷತ್ ಗಳು ಚರ್ಚೆಯ ಮೂಲಕ ಕುದ್ದು ಪಾಕವಾದ ಅಂಶಗಳನ್ನು ಪಡೆದುಕೊಂಡವುಗಳು. ಹಾಗೆಯೇ  ಭೈರಪ್ಪ ಅವರ ಕೃತಿಗಳಲ್ಲಿ ಸಹ ಇಂತಹಾ ಚರ್ಚೆಯ ವಸ್ತುಗಳಿದ್ದವು  ಅವರ ನಾನೇಕೆ ಬರೆಯುತ್ತೇನೆ ಕೃತಿಯಲ್ಲಿ ಹೇಳುತ್ತಾರೆ. ನನ್ನ ಕಾದಂಬರಿಯ ಪಾತ್ರದ ವಿಷಯಗಳು ಕುದ್ದು ಪಾಕವಾಗಿ ಹದಕ್ಕೆ ಬಂದ ನಂತರವೇ ಬರಹಕ್ಕೆ ಕೂರುತ್ತೇನೆ ಅದರ ಓಘ ಕೂಡ ತಾನಾಗಿಯೇ ಚರ್ಚೆ ಮಾಡಿಕೊಂಡು ಮುಂದೆ ಹೋಗುತ್ತದೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ.  ಹಾಗಾಗಿ ಭೈರಪ್ಪ ಕೇವಲ ಒಬ್ಬ ಕಾದಂಬರಿಕಾರರಲ್ಲ ಬದಲಾಗಿ ತತ್ತ್ವಜ್ಞಾನಿಯಾಗಿ ತರ್ಕಶಾಸ್ತ್ರ ಪ್ರವೀಣರಾಗಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಹಾಗೆಯೇ ಭೈರಪ್ಪ ಉತ್ತರ ಧ್ರುವದಿಂದ ದಕ್ಷಿಣ ಧ್ರುವದವರೆಗೂ ಪ್ರಯಾಣ ಬೆಳೆಸಿದ್ದವರು. ಸುತ್ತಾಡದೆ ಅವರು ಏನನ್ನೂ ಬರೆದವರಲ್ಲ. ಹಾಗಾಗಿಯೇ ಅವರ ಸಾಹಿತ್ಯ ಅವರ ಜೀವನಾನುಭವದ ಕಣಜವಾಗಿದೆ.
ವಿಶೇಷ ಎಂದರೆ ಕೊನೆಯ ದಿನಗಳಲ್ಲಿ ವಿಶ್ವೇಶ್ವರ ಭಟ್ಟರು ಮತ್ತು ಅವರ ಶ್ರೀಮತಿಯವರು ಭೈರಪ್ಪನವರನ್ನು ತಂದೆಯಂತೆ ಗೌರವಿಸಿದರು. ಪುಟ್ಟ ಮಗುವಿನಂತೆ ಆರೈಕೆ ಮಾಡಿದರು.  ಯಾವುದೋ ಕಾರಣಗಳಿಗೆ ಮೈಸೂರು ತೊರೆದು ಬಂದಿದ್ದ ಭೈರಪ್ಪ ಕಳೆದ ಕೆಲವು ತಿಂಗಳುಗಳಿಂದ ಭಟ್ಟರ ಮನೆಯಲ್ಲಿದ್ದರು.
ಭೈರಪ್ಪ ಅವರ ಸೇವೆ ಕೇವಲ ಸಾಹಿತ್ಯ ಲೋಕಕ್ಕೆ ಮಾತ್ರವೇ ಸೀಮಿತವಲ್ಲ ಎನ್ನುವುದು ಗಮನಾರ್ಹ. ಅವರು ತಮ್ಮ ಹುಟ್ಟೂರಾದ ಸಂತೇಶಿವರ ಗ್ರಾಮದ ಅಭಿವೃದ್ಧಿಗಾಗಿ ತಮ್ಮ ಕೊನೆಯ ಕನಸನ್ನು ಈಡೇರಿಸಿಕೊಂಡರು. 90ರ ವಯಸ್ಸಿನಲ್ಲೂ ಅವರು ಸಂತೇಶಿವರದ ಅಭಿವೃದ್ಧಿಗಾಗಿ ಚಿಂತನೆ ಮಾಡಿ, ಕಾರ್ಯಾಚರಣೆಗೆ ತೊಡಗಿದ್ದರು. ಅವರ ಕೊನೆಯ ಆಸೆಯಾಗಿ, ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದು ಇತ್ತು. ಈ ಉದ್ದೇಶದಿಂದ ಅವರು ಸರ್ಕಾರಕ್ಕೆ 25 ಕೋಟಿ ರೂಪಾಯಿ ಅನುದಾನಕ್ಕಾಗಿ ಮನವಿ ಮಾಡಿದ್ದರು. ಈ ಮನವಿಯನ್ನು ಆದ್ಯತೆಯಿಂದ ಪರಿಗಣಿಸಿದ ಬಿಜೆಪಿ ಸರ್ಕಾರವು ಸಂತೇಶಿವರ ಮತ್ತು ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆಗಳನ್ನು ತುಂಬಿಸುವ ನೀರಾವರಿ ಯೋಜನೆಗೆ ಅನುಮೋದನೆ ನೀಡಿತು. ನಂತರ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 25 ಕೋಟಿ ರೂಪಾಯಿ ಬಿಡುಗಡೆ ಮಾಡಿ, ಯೋಜನೆಯನ್ನು ಜಾರಿಗೊಳಿಸಿತು. ಪಕ್ಷಾತೀತವಾಗಿ ಎಲ್ಲರ ಸಹಕಾರದಿಂದ ಈ ಯೋಜನೆ ಪೂರ್ಣಗೊಂಡು, ಕೆರೆಗಳು ನೀರಿನಿಂದ ತುಂಬಿದವು. ಈ ಸಾಧನೆಯನ್ನು ಭೈರಪ್ಪ ಅವರು ತಮ್ಮ ಊರಿಗೆ ಭೇಟಿ ನೀಡಿ, ಕೆರೆಯ ನೀರಿನ ಮೇಲೆ ದೇವಿಯ ವಿಹರವನ್ನು ಮಾಡಿ ಆಚರಿಸಿದರು.
ಇದರೊಡನೆ ಭೈರಪ್ಪ ಅವರು ತಮ್ಮ ದುಡಿದ ಹಣವನ್ನು ಸಮಾಜ ಸೇವೆಗೆ ಮೀಸಲಾಯಿಸಲು ‘ಡಾ. ಎಸ್.ಎಲ್. ಭೈರಪ್ಪ ಪ್ರತಿಷ್ಠಾನ’ ಸ್ಥಾಪಿಸಿದ್ದರು. ಈ ಪ್ರತಿಷ್ಠಾನದ ಮೂಲಕ ಅವರು ಸಂತೇಶಿವರದಲ್ಲಿ ‘ಗೌರಮ್ಮಾ ಟ್ರಸ್ಟ್’ ಸ್ಥಾಪಿಸಿ, ಗ್ರಂಥಾಲಯ ಮತ್ತು ಸಭಾಂಗಣವನ್ನು ನಿರ್ಮಿಸಿದರು. ಇದರೊಂದಿಗೆ ಗ್ರಾಮದ ಶಿಕ್ಷಣ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಒಂದು ಹೊಸ ಆಯಾಮ ನೀಡಿದರು. ನೀರಾವರಿ ಯೋಜನೆಯನ್ನು ‘ಡಾ. ಎಸ್.ಎಲ್. ಭೈರಪ್ಪ ಏತ್ ನೀರಾವರಿ ಯೋಜನೆ’ ಎಂದು ನಾಮಕರಣ ಮಾಡಲಾಗಿದ್ದು, ಅವರ ಕೊಡುಗೆಯನ್ನು ಶಾಶ್ವತಗೊಳಿಸಿದೆ.
ಇನ್ನು ಭೈರಪ್ಪ ಆವರ ಸಾಹಿತ್ಯ ಕೃಷಿಯನ್ನು ಗಮನಿಸಿ ಇವರಿಗೆ 2023ರಲ್ಲಿ ಕೇಂದ್ರ ಸರ್ಕಾರ, ಪದ್ಮಭೂಷಣ ಗೌರವ ನೀಡಿತ್ತು. , ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಗೌರವ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ , ಎನ್ ಟಿ ಆರ್ ರಾಷ್ಟ್ರೀಯ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಗುಲಬರ್ಗಾ ವಿವಿಯಿಂದ ಗೌರವ ಡಾಕ್ಟರೇಟ್ ಮುಂತಾದ ಗೌರವಗಳನ್ನು ಅವರು ಪಡೆದಿದ್ದಾರೆ.  ಅವರ ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ಮತದಾನ, ವಂಶವೃಕ್ಷ ಕಾದಂಬರಿಗಳು ಚಲನಚಿತ್ರಗಳಾಗಿವೆ.  ಅವರ ಪರ್ವ ಕಾದಂಬರಿಯು ಅನೇಕ ಚರ್ಚೆಗಳಿಗೆ ನಾಂದಿ ಹಾಡಿತ್ತು. ಮಹಾಭಾರತದ ಕಾಲದ ಸಮಾಜವನ್ನು ಒರೆಗೆ ಹಚ್ಚುವಂಥ ಕೆಲಸವನ್ನು ಆ ಕಾದಂಬರಿಯಲ್ಲಿ ಭೈರಪ್ಪನವರು ಮಾಡಿದ್ದರು. ಅದು ಹೆಚ್ಚು ಚರ್ಚೆಗೆ ಒಳಗಾಗಿತ್ತು.
ಅಂತಿಮವಾಗಿ ಭೈರಪ್ಪ  ಅವರ ಬಗ್ಗೆ ಬರೆಯುವುದೆಂದರೆ ಅದೊಂದು ಅಪೂರ್ಣ ಬರಹವೇ ಆಗುತ್ತದೆ. ಏಕೆಂದರೆ ಏನನ್ನು ಎಷ್ಟು ಬರೆದರೂ ಅದು ಮುಗಿಯುವುದಿಲ್ಲ. ಮತ್ತೇನೋ ಇದೆ ಎನ್ನಿಸುವಂತಾಗಿದೆ. ಹಾಗಾಗಿ ಈ ಲೇಖನವನ್ನೂ ಸಹ ನಾನು ಪರಿಪೂರ್ಣ ಲೇಖನ ಎನ್ನುವುದಿಲ್ಲ ಇದೊಂದು ಅಪೂರ್ಣ ಲೇಖನ. ಭೈರಪ್ಪ ಅವರ  ವ್ಯಕ್ತಿತ್ವದ ಅಗಾಧತೆ ಹಾಗಿದೆ.  ಅವರು ಭೌತಿಕವಾಗಿ ನಮ್ಮನ್ನು ತೊರೆದರೂ ಕನ್ನಡ ಸಾಹಿತ್ಯದೊಂದಿಗೆ ಅವರ ಮೇರು ಕಾಣಿಕೆಗಳ ರೂಪದಲ್ಲಿ ಸದಾ ಕಾಲ ಜೀವಂತವಿರಲಿದ್ದಾರೆ.
ಎಸ್ಎಲ್ ಭೈರಪ್ಪ ಕಾದಂಬರಿಗಳು
ಭೀಮಕಾಯ
ಬೆಳಕು ಮೂಡಿತು
ಧರ್ಮಶ್ರೀ
ದೂರ ಸರಿದರು
ಮತದಾನ
ವಂಶವೃಕ್ಷ
ಜಲಪಾತ  
ನಾಯಿ ನೆರಳು
ತಬ್ಬಲಿಯು ನೀನಾದೆ ಮಗನೆ
ಗೃಹಭಂಗ
ನಿರಾಕರಣ
ಗ್ರಹಣ
ದಾಟು
ಅನ್ವೇಷಣ
ಪರ್ವ
ನಲೆ
ಸಾಕ್ಷಿ
ಅಂಚು
ತಂತು
ಸಾರ್ಥ
ಮಂದ್ರ
ಆವರಣ
ಕವಲು
ಯಾನ
ಉತ್ತರಕಾಂಡ
ಸಿನಿಮಾಗಳಾದ ಕಾದಂಬರಿಗಳು
ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ, ನಾಯಿನೆರಳು.
ಭೈರಪ್ಪ ಅವರಿಗೆ ಒಲಿದು ಬಂದಿರುವ ಪ್ರಶಸ್ತಿಗಳು - 2010ರಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ 2015ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್, 2016ರಲ್ಲಿ ಪದ್ಮಶ್ರೀ, ಮತ್ತು 2023ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಕ್ಟೋಬರ್ 2025"ವಂದೇ ಕರ್ನಾತಕ" ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನ..

Friday, November 28, 2025

ಸೃಜನ್ ಲೋಕೇಶ್ ನಿರ್ದೇಶನದ 'ಜಿಎಸ್​ಟಿ' ಸಿನಿಮಾ ವಿಮರ್ಶೆ- 'ಅನ್‌ಲಕ್ಕಿ'ಯೊಬ್ಬನ ಅಳಲಿನ ಕಥೆ

- ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರ: ಜಿಎಸ್​ಟಿ

ನಿರ್ದೇಶನ: ಸೃಜನ್ ಲೋಕೇಶ್

ನಿರ್ಮಾಣ: ಸಂದೇಶ್ ನಾಗರಾಜ್

ತಾರಾಂಗಣ:  ಸೃಜನ್ ಲೋಕೇಶ್, ರಜನಿ ಭಾರದ್ವಾಜ್, ಗಿರಿಜಾ ಲೋಕೇಶ್, ಶೋಭರಾಜ್, ವಿನಯ ಪ್ರಸಾದ್, ರವಿಶಂಕರ್ ಗೌಡ,  ಗಿರೀಶ್ ಶಿವಣ್ಣ ಮುಂತಾದವರು

ರೇಟಿಂಗ್: 2.5/5


ಅವನು ಹೆಸರಿನಲ್ಲಷ್ಟೇ ಲಕ್ಕಿ, ಅವನು ಹುಟ್ಟುತ್ತಲೇ ಅಪ್ಪನ ಫ್ಯಾಕ್ಟರಿಗೆ ಬೆಂಕಿ ಬಿದ್ದಿರುತ್ತದೆ,  ಕುಟುಂಬ ಬೀದಿಗೆ ಬರುತ್ತದೆ. ಶಾಲೆಗೆ ಹೋದರೆ ಕಟ್ಟಡ ಕುಸಿಯುತ್ತದೆ. ಅಂಗಡಿ ಆರಂಭಿದಾಕ್ಷಣ ಲಾಕ್ ಡೌನ್ ಆಗುತ್ತದೆ. ತಾಯಿಯ ಸಾವಿಗೆ ಸಹ ಅವನೇ ಕಾರಣ. ಅಂತಹಾ ಅನ್‌ಲಕ್ಕಿ ವ್ಯಕ್ತಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸ್ಮಶಾನಕ್ಕೆ ತೆರಳಿದಾಗ ಅಲ್ಲಿಊ ಅವನಿಗೆ ಲಕ್ ಕುದುರುವುದಿಲ್ಲ. ಅಲ್ಲಿದ್ದ ದೆವ್ವಗಳು ಅವನು ಸಾಯುವುದನ್ನು ತಡೆಯುತ್ತವೆ! ಅದಕ್ಕೆ ಕಾರಣ ಏನು? ಈ ಸಿನಿಮಾದಲ್ಲಿ ದೆವ್ವಗಳು ಹೇಗೆ ಬರುತ್ತವೆ? ಕಥೆ ಅಂತಿಮವಾಗಿ ಏನಾಗಲಿದೆ ಎನ್ನುವುದನ್ನು ನೋಡಲು ನೀವು ಜಿಎಸ್​ಟಿ ಸಿನಿಮಾ ವೀಕ್ಷಿಸಬೇಕು. 

ಇದು ಸೃಜನ್ ಲೋಕೇಶ್ ನಿರ್ದೇಶನದ ಪ್ರಥಮ ಚಿತ್ರ. ಸೃಜನ್ ಲೋಕೇಶ್ ಜೊತೆ ಅವರ ಅಮ್ಮ ಹಾಗೂ ಹಿರಿಯ ನಟಿ ಗಿರಿಜಾ ಲೋಕೇಶ್ ಹಾಗೂ ಪುತ್ರ ಸುಕೃತ್ ನಟಿಸಿದ್ದಾರೆ. ಈ ಮೂಲಕ ಒಂದೇ ಕುಟುಂಬದ ಮೂರು ತಲೆಮಾರು ಒಂದೇ ಸಿನಿಮಾದಲ್ಲಿದೆ.  ಹಾಸ್ಯ, ಮನರಂಜನೆಯನ್ನೇ ಪ್ರಧಾನವಾಗಿ ಇರಿಸಿಕೊಂಡ ಈ ಚಿತ್ರದ ಮೊದಲರ್ಧ ಏನೂ ವಿಶೇಷತೆ ಇಲ್ಲದೆ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಮಾತ್ರ ಹಾಸ್ಯ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಗ್ಯಾಂಗ್‌ ಒಂದರ ಲೀಡರ್ ಆಗಿರುವ ಶೋಭರಾಜ್, ಬ್ಯಾಂಕ್ ಮ್ಯಾನೇಜರ್ ಪಾತ್ರದಲ್ಲಿ ಮಿಂಚಿರುವ ರವಿಶಂಕರ್ ಗೌಡ ಇಷ್ಟ ಆಗುತ್ತಾರೆ.. ಹಾಗಾಗಿ ಚಿತ್ರದ ದ್ವಿತೀಯಾರ್ಧವೇ ಸಿನಿಮಾದ ಪ್ಲಸ್ ಪಾಯಿಂಟ್. 

ಆದರೆ ಮೊದಲ ನಿರ್ದೇಶನದ ಸಿನಿಮಾ ಆಗಿಯೂ ಸೃಜನ್  ಕಥೆಯಲ್ಲಿ ಯಾವುದೇ ಹೊಸತನವಿಲ್ಲ. ಸಿನಿಮಾ ನಿರೂಪಣೆಯಲ್ಲಿ ಇನ್ನಷ್ಟು ಉತ್ತಮಪಡಿಸಿಕೊಳ್ಳುವ ಅವಕಾಶ ಅವರಿಗೆ ಇತ್ತು. ನಾಯಕಿ ಪಾತ್ರ ನಿರ್ವಹಿಸಿರುವ ರಜನಿ ಇನ್ನಷ್ಟು ಅಭಿನಯದಲ್ಲಿ ಪರಿಣತಿ ಸಾಧಿಸಬೇಕಿದೆ. ಯಾವುದೇ ಹಾಡುಗಳು ಮನಸ್ಸಿನಲ್ಲಿ ಉಳಿಯುವುದಿಲ್ಲ, ಹಿನ್ನೆಲೆ ಸಂಗೀತ ಸಹ ಗಮನ ಸೆಳೆಯುವುದಿಲ್ಲ. ಮೇಕಿಂಗ್​ನಲ್ಲೂ ಚಿತ್ರ ಹೊಸತನವನ್ನು ಹೊಂದಿಲ್ಲ.


Sunday, November 23, 2025

“ತಾಯವ್ವ'ನಾಗಿ ತೆರೆಗ ಬಂದ ಗೀತಪ್ರಿಯಾ

- ರಾಘವೇಂದ್ರ ಅಡಿಗ ಎಚ್ಚೆನ್. 

ಶಿಕ್ಷಣ ಕ್ಷೇತ್ರದಿಂದ ಬಂದು ಚಿತ್ರ ನಿರ್ಮಾಪಕಿಯಾದ ದಿಟ್ಟ ಮಹಿಳೆ ಗೀತಪ್ರಿಯಾರ ಸಾಹಸ ನಿಜಕ್ಕೂ ಮೆಚ್ಚತಕ್ಕದ್ದು. 'ತಾಯವ' ಚಿತ್ರದ ಮೂಲಕ ಇವರು ಮಹಿಳಾ ಪ್ರೇಕ್ಷಕರಿಗೆ ಏನು ಹೇಳಬಯಸುತ್ತಾರೆ.....?

ಇತ್ತಿಚೆಗೆ ಕನ್ನಡವೂ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಸಾಕಷ್ಟು ಸಂಖ್ಯೆಯ ಪ್ರಯೋಗಾತ್ಮಕ ಸಿನಿಮಾಗಳು ಬರುತ್ತಿವೆ. ಅದರಲ್ಲಿಯೂ ಹೊಸ ಪ್ರತಿಭಾವಂತ ನಟ ನಟಿಯರು, ನಿರ್ದೇಶಕರು ಚಿತ್ರೋದ್ಯಮಕ್ಕೆ ಬರುತ್ತಿದ್ದಾರೆ. ಅದರಂತೆ ಚಿತ್ರ ನಿರ್ಮಾಣ ಕ್ಷೇತ್ರದಲ್ಲಿಯೂ ಬಹು ಸಂಖ್ಯೆಯಲ್ಲಿ ಹೊಸಬರ ಆಗಮನವಾಗಿದೆ. ಅದರಲ್ಲಿ ಐಟಿ ಕ್ಷೇತ್ರದವರು, ಶಿಕ್ಷಣ ಕ್ಷೇತ್ರ, ರಿಯಲ್ ಎಸ್ಟೇಟ್ ಸೇರಿದಂತೆ ನಾನಾ ಕ್ಷೇತ್ರದ ವ್ಯಕ್ತಿಗಳು ಚಿತ್ರ ನಿರ್ಮಾಣ ಮಾಡಿದ್ದಾರೆ, ಮಾಡುತ್ತಿದ್ದಾರೆ. 


ಇತ್ತೀಚೆಗೆ ಬಂದಿರುವ ನವೀನ ಚಿತ್ರಗಳಲ್ಲಿ ಮಾಮೂಲಿಯಾದ ಪ್ರೀತಿ, ಪ್ರೇಮ, ಗ್ಯಾಂಗ್ ವಾರ್ ಅಂತಹ ವಿಷಯಗಳಲ್ಲದೆ ವೈದ್ಯಕೀಯ ಸಂಶೋಧನೆ, ಶಿಕ್ಷಣದ ಮಹತ್ವ, ಅನ್ಯಾಯದ ವಿರುದ್ಧ ನ್ಯಾಯಾಲದಲ್ಲಿ ಕಾನೂನಿನ ಸಮರ ಹೀಗೆ ನಾನಾ ಮಹತ್ವದ ವಿಷಯ ವೈವಿಧ್ಯತೆಗಳಿರುತ್ತವೆ. ಅಂತಹುದೇ ಸಾಲಿನಲ್ಲಿ ಸೇರಬಹುದಾದ ಇತ್ತೀಚಿನ ಒಂದು ಹೊಸಾ ಸಿನಿಮಾ ಎಂದರೆ 'ತಾಯವ್ವ.

ಗ್ರಾಮೀಣ ಸೂಲಗಿತ್ತಿ

'ತಾಯವ್ವ' ಎಂದರೆ ಗ್ರಾಮಗಳಲ್ಲಿರುವ ಸೂಲಗಿತ್ತಿ. ಈ ಸಿನಿಮಾ ಹೇಳಹೊರಟಿರುವುದು ಸಹ ಅದೇ ಸೂಲಗಿತ್ತಿಯ ಕಥೆ. ಇಂದಿನ ಯುವ ಪೀಳಿಗೆಗೆ ಹೆರಿಗೆಗಳೆಂದರೆ ಆಸ್ಪತ್ರೆಗಳಲ್ಲಿ ನಡೆಸುವ ಸಹಜ ಅಥವಾ ಸಿಸೇರಿಯನ್ ಹೆರಿಗೆಗಳ ಕುರಿತಂತೆ ಅರಿವಿರುತ್ತದೆ. ಆದರೆ ನಮ್ಮ ಹಿಂದಿನ ತಲೆಮಾರಿನಲ್ಲಿ ಯಾರೂ ಹೆರಿಗೆಗಾಗಿ ಆಸ್ಪತ್ರೆಗೆ ಹೋದವರಲ್ಲ. ಬದಲಿಗೆ ಆಯಾ ಗ್ರಾಮಗಳಲಿದ್ದ ಸೂಲಗಿತ್ತಿಯರೇ ಹೆರಿಗೆಯನ್ನು ಮಾಡಿಸುತ್ತಿದ್ದರು. ಅವೆಲ್ಲವೂ ಸಹಜ ಹೆರಿಗೆಗಳಾಗಿರುತ್ತಿದ್ದವು.

ಇಂತಹ ಸೂಲಗಿತ್ತಿಯರ ಜೀವನ ಹೇಗಿರುತ್ತದೆ ಎನ್ನುವುದನ್ನು ಇಂದಿನ ಆಧುನಿಕ ಸಮಾಜಕ್ಕೆ ಪರಿಚಯಿಸುವುದಕ್ಕಾಗಿ ಇರುವ ಸಿನಿಮಾ 'ತಾಯವ್ವ.' ಗ್ರಾಮೀಣ ಸೊಗಡಿನ ಕಥಾಹಂದರ, ಸೂಲಗಿತ್ತಿಯ ಬದುಕಿನ ಮೇಲೊಂದು ಚಿತ್ರ ಈ 'ತಾಯವ್ವ.'

ತಾಯವ್ವನಾಗಿ ಉಮಾಶ್ರೀ

ಈ ಹಿಂದೆ ಕಿಚ್ಚ ಸುದೀಪ್‌ ಹಾಗೂ ಉಮಾಶ್ರೀ ಅಭಿನಯದ 'ತಾಯವ್ವ' ಸಿನಿಮಾ ತೆರೆಗೆ ಬಂದಿತ್ತು. ಆದು ಸುದೀಪ್‌ ಚೊಚ್ಚಲ ಸಿನಿಮಾ ಸಹ ಹೌದು. ಈಗ ಮತ್ತೆ ಅದೇ ಹೆಸರಿನಲ್ಲಿ ಈ ಸಿನಿಮಾ ಬಂದಿದೆ. ಈ ಬಾರಿ 'ತಾಯವ್ವ'ನಾಗಿ ಗೀತಪ್ರಿಯಾ ಕಾಣಿಸಿಕೊಂಡಿದ್ದಾರೆ.

'ಆಮರ ಫಿಲಂಸ್ ಮತ್ತು 'ಜಯಶಂಕರ ಟಾಕೀಸ್ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗಿರುವ 'ತಾಯವ್ವ' ಸಿನಿಮಾಕ್ಕೆ ಸಾತ್ವಿಕ್ ಪವನ್‌ ಕುಮಾರ್ ನಿರ್ದೇಶನ ನೀಡಿದ್ದಾರೆ. ಅನಂತ್ ಆರ್ಯನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ 'ತಾಯವ್ವ' ಚಿತ್ರದ ಗೀತೆಗಳಿಗೆ ಸ್ವತಃ ಗೀತಪ್ರಿಯಾ ಆವರೇ ಧ್ವನಿಯಾಗಿದ್ದಾರೆ.

ಬಹುಮುಖ ಪ್ರತಿಭೆ ಗೀತಪ್ರಿಯಾ

ಅಂದಹಾಗೆ ಈ ಗೀತಪ್ರಿಯಾ ಅವರದು ಬಹುಮುಖ ಪ್ರತಿಭೆ. ಶಿಕ್ಷಣ, ಸಮಾಜಸೇವೆ, ಮಹಿಳಾಪರ ಹೋರಾಟ, ಇತರ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಈಕೆ 'ತಾಯವ್ವ' ಚಿತ್ರದ ಮೂಲಕ ನಟಿ, ನಿರ್ಮಾಪಕಿ, ಗಾಯಕಿಯಾಗಿ ಚಿತ್ರರಂಗಕ್ಕೆ ಬಂದಿದ್ದಾರೆ.


ಸಾಮಾನ್ಯ ಕುಟುಂಬದಿಂದ ಬಂದು ಇಷ್ಟೆಲ್ಲಾ ಸಾಧನೆ ಮಾಡಿ ಇನ್ನಷ್ಟು ಮಹಿಳೆಯರಿಗೆ ಸ್ಫೂರ್ತಿಯಾಗಬಲ್ಲ ಗೀತಪ್ರಿಯಾರ ಕಿರುಪರಿಚಯ ಈ ಮುಂದಿದೆ.

ಗೀತಪ್ರಿಯಾರ ಹಿನ್ನೆಲೆ

ಮೂಲತಃ ಚಿಕ್ಕಮಗಳೂರಿನವರಾದ ಗೀತಪ್ರಿಯಾ ಉನ್ನತ ವ್ಯಾಸಂಗ, ವೃತ್ತಿಕ್ಷೇತ್ರದಲ್ಲಿ ಸಾಧನೆ ಮಾಡಿರುವುದೆಲ್ಲವೂ ಬೆಂಗಳೂರಿನಲ್ಲಿಯೇ. 'ಕೃಪಾನಿಧಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಮೂಲಕ ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ ಹಾಗೂ ಸಮಾಜಮುಖಿ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರ ಈ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶದಾದಾದ್ಯಂತ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ರಾಪು ಮೂಡಿಸಿದ್ದಾರೆ.

ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಎಲ್ಲಾ ಹಂತದ ಶಿಕ್ಷಣವನ್ನು ಒಂದೇ ಕಡೆ ಸಿಗುವಂಥ ಸೌಕರ್ಯವನ್ನು ಇಲ್ಲಿ ಕಲ್ಪಿಸಲಾಗಿದೆ. ಇಂಥ ಸಾಧನೆಗಾಗಿ

ಗೀತಪಿ ಯಾರಿಗೆ ದೇಶ ವಿದೇಶಗಳ, ನೂರಾರು ಪ್ರತಿಷ್ಠಿತ ಸಂಘ-ಸಂಸ್ಥೆಗಳು, ಸರ್ಕಾರಗಳು ಪ್ರಶಸ್ತಿ ನೀಡಿ ಗೌರವಿಸಿದೆ.

ಇಂತಹ ಗೀತಪ್ರಿಯಾ ಈಗ 'ತಾಯವ್ವ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಗ್ರಾಮೀಣ ಮಹಿಳೆಯೊಬ್ಬರು ಹೆಣ್ಣುಮಕ್ಕಳ ರಕ್ಷಣೆಗಾಗಿ ಹೇಗೆಲ್ಲಾ ಹೋರಾಟ ನಡೆಸುತ್ತಾರೆ ಎನ್ನುವ ಕಥೆಯನ್ನು 'ತಾಯವ್ವ' ನಮಗೆ ಸಾರಿ ಹೇಳುತ್ತದೆ.

ಇಂಥ ಸಿನಿಮಾ ಮಾಡುವುದಕ್ಕೆ ನಿಮಗೇನು ಪ್ರೇರಣೆ ಎಂದು ಕೇಳಿದಾಗ - ''ನನಗೆ ಮೊದಲಿನಿಂದಲೂ ಕಲಾತ್ಮಕ ಸಿನಿಮಾಗಳ ಕಡೆ ಒಲವಿತ್ತು. ಸಾಮಾಜಿಕ ಸಂದೇಶವಿರುವ ಚಿತ್ರಗಳು ವಿಶೇಷವಾಗಿ ಮಹಿಳಾ ಪ್ರೇಕ್ಷಕರ ಮನ ಮುಟ್ಟುತ್ತದೆ ಎಂದು ನಾನು ಭಾವಿಸಿದ್ದೇನೆ. ಹಾಗಾಗಿ 'ತಾಯವ್ವ' ಸಿನಿಮಾ ನಿರ್ಮಿಸಿದ್ದೇನೆ,'' ಎಂದರು. 'ತಾಯವ್ವ' ಸಿನಿಮಾ ಎಲ್ಲಿಯೂ ಕೃತಕತೆಯಿಂದ ಕೂಡಿಲ್ಲ. ಎಲ್ಲವನ್ನೂ ಸಹಜವಾಗಿ ತೋರಿಸಲಾಗಿದೆ. ಈ ಸಿನಿಮಾ ಪ್ರೇಕ್ಷಕರಿಗೆ ಆಲೋಚಿಸುವಂತೆ ಮಾಡುತ್ತದೆ. ಸಾಮಾನ್ಯ ಮಹಿಳೆಯೊಬ್ಬಳ ಹಿಂದಿನ ಮಹಾನ್ ಶಕ್ತಿಯ ಕುರಿತು ಇಲ್ಲಿ ತೋರಿಸಿರುವುದಾಗಿ ನಿರ್ಮಾಪಕಿ, ನಟಿ ಗೀತಪ್ರಿಯಾ ಹೇಳಿದ್ದಾರೆ.

ಗೀತಪ್ರಿಯಾರ ಮೊದಲ ಚಿತ್ರ

'ಈ ಚಿತ್ರದ ಮೂಲಕ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ. ಇದು ನನಗೆ ಮೊದಲು ಸಿನಿಮಾ ಆಗಿದ್ದರೂ ಸಹ ಕಥೆ, ಕಲಾವಿದರ ಆಯ್ಕೆಯಿಂದ ಹಿಡಿದು ಸಿನಿಮಾ ಬಿಡುಗಡೆಗಾಗಿ ಏನೆಲ್ಲಾ ಪರಿಶ್ರಮ ಪಡಬೇಕಾಗುತ್ತದೆ ಎನ್ನುವುದನ್ನು ನಾನು ಈ 'ತಾಯವ್ವ'ನಿಂದ ಕಲಿತಿದ್ದೇನೆ," ಎಂದು ಹೇಳುತ್ತಾರೆ.

ಇನ್ನು 'ತಾಯವ್ವ' ಸಿನಿಮಾ ಆರಂಭವಾದಾಗಿನಿಂದ ಬಿಡುಗಡೆಯಾಗುವವರೆಗೂ ಸಾಕಷ್ಟು ಸಂಖ್ಯೆಯ ಗಣ್ಯರು ಗೀತಪ್ರಿಯಾರ ಬೆಂಬಲಕ್ಕೆ ನಿಂತಿದ್ದಾರೆ. ಇವರಿಗೆಲ್ಲಾ ಗೀತಪ್ರಿಯಾ ಧನ್ಯವಾದ ಹೇಳುತ್ತಾರೆ. 


ಗಣ್ಯರ ಹಾರೈಕೆ

'ನನಗೆ ಮೊದಲಿನಿಂದ ಇಲ್ಲಿಯವರೆಗೆ ಹಲವಾರು ಗಣ್ಯರು ಬೆಂಬಲಿಸಿದ್ದಾರೆ. ನನ್ನ ಈ ಕೆಲಸಕ್ಕೆ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ. ಹಿರಿಯ ನಟಿ ಉಮಾಶ್ರೀ ಮತ್ತು ಮಾಜಿ ಡಿಸಿಎಂ ಆರ್. ಅಶೋಕ್, ನಟ ಕಿಚ್ಚ ಸುದೀಪ್, ಹಿರಿಯ ನಟ ಪ್ರಯಣರಾಜ ಶ್ರೀನಾಥ್, ಪದ್ಮಶ್ರೀ ಪ್ರಶಸ್ತಿ ವಿಜೇತ ವೈದ್ಯೆ ಡಾ. ಕಾಮಿನಿ ರಾವ್ ಇಂತಹವರಲ್ಲಿ ಕೆಲವರು. ಇವರೆಲ್ಲಾ ನನ್ನ 'ತಾಯವ್ವ' ಸಿನಿಮಾವನ್ನು ನಾನಾ ಹಂತಗಳಲ್ಲಿ ಬೆಂಬಲಿಸಿ ಬೆನ್ನು ತಟ್ಟಿದ್ದಾರೆ. ಅವರಿಗೆ ನನ್ನ ಹೃತ್ತೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ,'' ಎಂದು ಗೀತಪ್ರಿಯಾ ಹೇಳುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಇಂದು ಚಿತ್ರಗಳ ಪೈಪೋಟಿ ಸಂಖ್ಯೆ ದೊಡ್ಡದಾಗಿದೆ. ಆದರೆ ಮೌಲ್ಯಯುತ ಸಿನಿಮಾಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರವೇ ಎಂದರೆ ಅದು ತಪ್ಪಲ್ಲ. ಅಂತಹ ಒಂದು ಮೌಲ್ಯಯುತವಾದ ಸಿನಿಮಾ 'ತಾಯವ್ವ' ಈಗ ಪ್ರೇಕ್ಷಕರ ಬೆಂಬಲ ಬಯಸಿದೆ. ನಮ್ಮಸಿನಿ ರಸಿಕರು ಇಂಥ ಸಿನಿಮಾಗಳನ್ನು ಬೆಂಬಲಿಸುವ ಮೂಲಕ ಮುಂಬರುವ ದಿನಗಳಲ್ಲಿ ಗೀತಪ್ರಿಯಾ ಹಾಗೂ ಅವರಂಥ ಇತರೆ ಸಾಧಕಿಯರ ಸಾಕಷ್ಟು ಸಂಖ್ಯೆಯಲ್ಲಿ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಕಾರಣವಾಗಬೇಕಿದೆ.

ಇದೇ ಸಂದರ್ಭದಲ್ಲಿ ಬಹುಮುಖ ಪ್ರತಿಭಾವಂತ ಮಹಿಳೆಯ ಗೀತಪ್ರಿಯಾರ ಮು೦ದಿನ ಯೋಜನೆಗಳು ಸಫಲವಾಗಲಿ ಎಂದು 'ಗೃಹಶೋಭಾ' ಹಾರೈಸುತ್ತಾಳೆ.


ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ ಭರತನಾಟ್ಯ ಕಲಾವಿದೆ ವಿದುಷಿ ದೀಕ್ಷಾ ವಿ

 - ರಾಘವೇಂದ್ರ ಅಡಿಗ ಎಚ್ಚೆನ್.

ಭರತನಾಟ್ಯದಲ್ಲಿ ಖ್ಯಾತಿ ಗಳಸುವುದೇ ಕಷ್ಟ, ಹಾಗಿರುವಾಗ ಸತತ 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನದ ಮೂಲಕ ಹೊಸ ವಿಶ್ವದಾಖಲೆ ಬರೆದು, ವಿದುಷಿ ದೀಕ್ಷಾ ವಿ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ.....!


ಭಾರತದ ಹೆಸರಿನೊಂದಿಗೇ ಬೆರೆತಿರುವ ಹೆಸರು ಭರತಮುನಿಯದು. ಭರತನ 'ನಾಟ್ಯಶಾಸ್ತ್ರ' ಎಲ್ಲಾ ಸಂಗೀತ, ನೃತ್ಯಕಲೆಗಳಿಗೆ ಒಂದು ಪ್ರಮುಖ ಆಧಾರ ಗ್ರಂಥವಾಗಿದೆ. ಭರತನಾಟ್ಯ ಅವುಗಳಲ್ಲೆಲ್ಲಾ ಅತ್ಯಂತ ಹೆಚ್ಚಿನ ಪ್ರಮುಖ ಸ್ಥಾನ ಪಡೆದ ನೃತ್ಯ ಪ್ರಕಾರ. ಅಂತಹ ಭರತನಾಟ್ಯದಲ್ಲಿ ಹೊಸ ವಿಶ್ವ ದಾಖಲೆ ಬರೆದಿರುವರು ಉಡುಪಿಯ ವಿದುಷಿ ದೀಕ್ಷಾ.

ಸತತ 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನದ ಮೂಲಕ ಹೊಸ ವಿಶ್ವದಾಖಲೆ ಬರೆದಿರುವ ವಿದುಷಿ ದೀಕ್ಷಾ ವಿ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ.

ಆಗಸ್ಟ್ 21 ರಂದು ಪ್ರತಿ ಮೂರು ಗಂಟೆಗೆ 15 ನಿಮಿಷಗಳ ವಿರಾಮ ನಿಯಮಕ್ಕೆ ಅನುಗುಣವಾಗಿ ಭರತನಾಟ್ಯ ಪ್ರದರ್ಶನವನ್ನು ವಿದುಷಿ ದೀಕ್ಷಾ ವಿ. ಆರಂಭಿಸಿದ್ದು, ಆಗಸ್ಟ್ 30ರ ಮಧ್ಯಾಹ್ನ 3.30ಕ್ಕೆ ನೃತ್ಯ ಪ್ರದರ್ಶನ ಅಂತ್ಯಗೊಂಡಿತ್ತು. ಸತತ 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನದ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಹೆಡ್ ಮನೀಶ್ ಬಿಷ್ಟೋಮ್, ವಿದುಷಿ ದೀಕ್ಷಾ ವಿ. ಅವರ ದಾಖಲೆಯ ಬಗ್ಗೆ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ 'ಗೃಹಶೋಭಾ' ಅವರನ್ನು ಮಾತಿಗೆಳೆದಿತ್ತು. ಅವರೊಂದಿಗೆ ನಡೆಸಿದ ಆ ಮಾತುಕತೆಯ ಸಾರಾಂಶ ಇಲ್ಲಿದೆ.

ನಾನು ಹುಟ್ಟಿದ್ದು ಉಡುಪಿಯ ಬ್ರಹ್ಮಾವರ ಹಾಕಿದ ಆಲೂರು ಗುಮದಲ್ಲಿ, ತಂದೆ ವಿಠಲ, ತಾಯಿ ತುಭು, ಗೊಂದು ವರ್ಷದ ಹಿಂದೆ ಮದುವೆಯಾಗಿ, ನನ್ನ ಪತಿ ಸಿವಿಲ್ ಇಂದು‌ ಬಹಳ ಹೀಗೆ ದೀಕ್ಷಾ ತಮ್ಮ ಹಾಗೂ ಕುಟುಂಬದ ಕುರಿತು ಚಿಕ್ಕದಾಗಿ ಪರಿಚಯಿಸಿಕೊಂಡರು.

ದೀಕ್ಷಾ ಲಿಟಲ್ ರಾಜ್ ಇಂಡಿಯನ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದಾಭ್ಯಾಸ ನಡೆಸಿದ್ದಾರೆ. ಹೆಬ್ರಿಯ ಅಮೃತ ಭಾರತೀ ಪಿಯು ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸ ನಡೆಸಿರುವ ಅವರು, ಡಾ. ಜಿ..ಶಂಕರ್‌ ಮಹಿಳಾ ಕಾಲೇಜು, ಅಜ್ಜರಕಾಡಿನಲ್ಲಿ ಪದವಿ ಪೂರೈಸಿದರು. ಪ್ರಸ್ತುತ ಡಾ.ಟಿ.ಎಂ.ಎ. ಪೈ ಎಜುಕೇಶನ್ ಕಾಲೇಜು, ಕುಂಜಿಬೆಟ್ಟುನಲ್ಲಿ ಬಿ.ಎಡ್. ವ್ಯಾಸಂಗ ಮಾಡುತ್ತಿದ್ದಾರೆ.


ನಾನು ಚಿಕ್ಕವಳಿದ್ದಾಗ ಭರತನಾಟ್ಯ ಹಾಗೂ ನೃತ್ಯದಲ್ಲಿ ನನಗೆ ಯಾವ ಆಸಕ್ತಿ ಇರಲಿಲ್ಲ. ಆದರೆ ಆಮ್ಮನಿಗೆ ನಾನು ನೃತ್ಯ ಕಲಿಯಬೇಕೆನ್ನುವ ಆಸೆ ಇತ್ತು. ಇದಕ್ಕಾಗಿ ಅವರು ನನಗಿನ್ನೂ ಮೂರು ವರ್ಷವಾಗಿದ್ದಾಗಲೇ ನನ್ನನ್ನು ಡ್ಯಾನ್ಸ್‌ ತರಗತಿಗೆ ಸೇರಿಸಲು ಮುಂದಾದರು. ಆದರೆ ಅಲ್ಲಿನ ಶಿಕ್ಷಕರು ನಾನಿನ್ನೂ ಚಿಕ್ಕವಳು, ಹಾಗಾಗಿ ಇನ್ನೂ ಸ್ವಲ್ಪ ಸಮಯ ಬಿಟ್ಟು ಬರಲು ಹೇಳಿದ್ದರು. ಆ ನಂತರ ನನಗೆ ಯಾವುದೇ ಆಸಕ್ತಿ ಇಲ್ಲದಿದ್ದರೂ ಒಂದನೇ ತರಗತಿಯಲ್ಲಿ ಕಲಿಯುವಾಗ, ಅಮ್ಮ ಮತ್ತೆ ನನ್ನನ್ನು ಡ್ಯಾನ್ಸ್ ತರಬೇತಿಗಾಗಿ ಸೇರಿಸಿದರು, ಎಂದು ದೀಕ್ಷಾ ತಮ್ಮ ನೃತ್ಯಾಭ್ಯಾಸದ ಮೊದಲ ದಿನಗಳನ್ನು ಬಾಲ್ಯದ ದಿನವನ್ನು ಮೆಲುಕು ಹಾಕಿದರು.

ಇದಾದ ನಂತರ ವಿದುಷಿ ಶೃತಿ ರಾಘವೇಂದ್ರ ಭಟ್‌ರವರಲ್ಲಿ ದೀಕ್ಷಾ ನೃತ್ಯಾಭ್ಯಾಸ ಮುಂದುವರಿಸಿದರು. ಅಲ್ಲಿಂದ ದೀಕ್ಷಾ ಭರತನಾಟ್ಯವನ್ನು ಆಸಕ್ತಿಯಿಂದ ಕಲಿಯಲು ತೊಡಗಿದರು. ಭರತನಾಟ್ಯದಲ್ಲಿ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾದ ದೀಕ್ಷಾ, ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆಗಾಗಿ ವಿದ್ಯಾನ್ ಶ್ರೀಧರರಾವ್ ಬನ್ನಂಜೆಯವರಲ್ಲಿ ಅಧ್ಯಯನ ಮುಗಿಸಿದ್ದಾರೆ. 

ವಿಶ್ವದಾಖಲೆಗೆ ಪ್ರೇರಣೆ

ದೀಕ್ಷಾ, ಶ್ರೀಧರರಾವ್‌ರಲ್ಲಿ ಅಧ್ಯಯನ ನಡೆಸುತ್ತಿದ್ದಾಗ ಒಮ್ಮೆ ವಿದ್ವಾನ್ ಯಶವಂತ್ ಎಂ.ಜಿ.ಯವರೊಡನೆ ಆಕಸ್ಮಿಕ ಭೇಟಿಯಾಗಿತ್ತು ಯಶವ೦ತ್ ಸತತ 24 ಗಂಟೆಗಳ ಕಾಲ ಎಸ್.ಪಿ. ಬಾಲಸುಬ್ರಹ್ಮಣ್ಯರ ಹಾಡುಗಳನ್ನು ಹಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾರೆ. ಅವರನ್ನು ಭೇಟಿಯಾಗಿದ್ದ ದೀಕ್ಷಾಗೆ ತಾನೂ ಸಹ ಏಕೆ ವಿಶ್ವದಾಖಲೆ ಮಾಡಬಾರದು ಎನ್ನುವ ಮನಸ್ಸಾಗಿತ್ತು.

ಆದರೆ ಬಿ.ಎಡ್ ವ್ಯಾಸಂಗ ಮಾಡುತ್ತಿದ್ದುದ್ದರಿ೦ದ ತಕ್ಷಣವೇ ಈ ಸಂಬಂಧ ಮುಂದುವರಿಯಲು ಅವರಿಗೆ ಆಗಿರಲಿಲ್ಲ. ಆದರೆ ಬಿ.ಎಡ್. ಮೂರನೇ ಸೆಮಿಸ್ಟರ್ ಮುಗಿದ ನಂತರದಲ್ಲಿ ಒಂದು ತಿಂಗಳ ವಿರಾಮವಿದ್ದ ಕಾರಣ ಅದನ್ನೇ ಸದುಪಯೋಗ ಪಡಿಸಿಕೊಂಡ ದೀಕ್ಷಾ ಈಗ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ. ಹೀಗೆ ದೀಕ್ಷಾರಿಗೆ ವಿಶ್ವದಾಖಲೆ ನಿರ್ಮಿಸಲು ವಿದ್ವಾನ್ ಯಶವಂತ್ ಪ್ರೇರಣೆಯಾಗಿದ್ದರು.


ದೀಕ್ಷಾ ಈಗ ಭರತನಾಟ್ಯದಲ್ಲಿ ಪ್ರವೀಣರಾಗಿದ್ದು, ನೂಪುರನಾದ ಕಲಾಕೇಂದ್ರ ಎಂಬ ತರಬೇತಿ ಕೇಂದ್ರವನ್ನೂ ನಡೆಸುತ್ತಿದ್ದು, ಇದುವರೆಗೆ ಎಪ್ಪತ್ತೈದಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳು ಇವರಿಂದ ತರಬೇತಿ ಹೊಂದಿದ್ದಾರೆ. ಅಲ್ಲದೆ, ಪ್ರಸ್ತುತದಲ್ಲಿ ಸುಮಾರು ಮೂವತ್ತೈದು ವಿದ್ಯಾರ್ಥಿಗಳು ದೀಕ್ಷಾರಿಂದ ತರಬೇತಿ ಪಡೆಯುತ್ತಿದ್ದಾರೆ.

ಯಕ್ಷಗಾನ, ಚಂಡೆ ಮದ್ದಳೆಗೂ ಸೈ

ದೀಕ್ಷಾ ಕೇವಲ ಭರತನಾಟ್ಯದಲ್ಲಿ ಮಾತ್ರವಲ್ಲದೆ, ಯಕ್ಷಗಾನ, ಚಂಡೆ ಮದ್ದಳೆ ವಾದನಗಳಲ್ಲಿಯೂ ಸಹ ಪರಿಣಿತಿ ಹೊಂದಿದ್ದಾರೆ. ಚೇರ್ಕಾಡಿ ಮಂಜುನಾಥ ಪ್ರಭುರವರಲ್ಲಿ ದೀಕ್ಷಾ ಯಕ್ಷಗಾನ ತರಬೇತಿ ಪಡೆದಿದ್ದಾರೆ. ಅಷ್ಟು ಮಾತ್ರವಲ್ಲದೆ, ಚಂಡೆ ಮದ್ದಳೆಗಳನ್ನು ಸಹ ಅವರಲ್ಲಿಯೇ ತರಬೇತಿ ಪಡೆಯುತ್ತಿದ್ದಾರೆ.

ದೀಕ್ಷಾ ಕರ್ನಾಟಕ ಸಂಗೀತ ಸಹ ಅಭ್ಯಾಸ ನಡೆಸಿದ್ದು, ಅದರಲ್ಲಿ ಸೀನಿಯರ್ ವಿಭಾಗದ ತರಬೇತಿ ಪಡೆದುಕೊಳ್ಳುತ್ತಿದ್ದು ವೀಣಾ ವಾದನ ಸಹ ಕಲಿಯುತ್ತಿದ್ದಾರೆ. ವಿದುಷಿ ಸುಮಾ ಐತಾಳರಲ್ಲಿ ದೀಕ್ಷಾ ಸಂಗೀತ ಹಾಗೂ ವೀಣಾವಾದನದ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ಮಗುವಿನಂತೆ ಕಾತ್ತಾರೆ.

ನಾನು ಇಷ್ಟೆಲ್ಲಾ ಸಾಧನೆ ಮಾಡಲು ನನ್ನ ಕುಟುರಿತು ನನಗೆ ನೀಡಿದ ಸಹಕಾರವೇ ಪ್ರಮುಖ ಕಾರಣ, ಎನ್ನುವ ದೀಕ್ಷಾ ತಮ್ಮ ಕುಟುಂಬದ ಬೆಂಬಲಕ್ಕಾಗಿ ಧನ್ಯವಾದ ಹೇಳುತ್ತಾರೆ, ತಾಯಿ, ತಂದೆ, ಪತಿ ಸೇರಿದಂತೆ ಮನೆಯವರೆಲ್ಲಾ ನನಗೆ ಸಂಪೂರ್ಣ ಬೆಂಬಲ ಕೊಡುತ್ತಿದ್ದಾರೆ. ನನಗೆ ವಿವಾಹವಾಗಿದ್ದರೂ ವಿದ್ಯಾರ್ಥಿ ಜೀವನ ಮುಂದುವರಿಸಿದ್ದೇನೆ. ಎಲ್ಲರೂ ನನ್ನನ್ನು ಮಗುವಿನಂತೆ ನೋಡಿಕೊಳ್ಳುತ್ತಾರೆ. ಅವರಿಗೆಲ್ಲಾ ನನ್ನ ಹೃತ್ತೂರ್ವೆಯಿ ಧನ್ಯವಾದಗಳು, ಎಂದು ದೀಕ್ಷಾ ಹೇಳಿದ್ದಾರೆ.

ಸಕಲ ಕಲೆಗಳ ಕಲಾ ಅಕಾಡು ಕನಸು

ದೀಕ್ಷಾ ಭವಿಷ್ಯದಲ್ಲಿ ಎಲ್ಲಾ ವಿಧವಾದ ಕಲೆಗಳ ಅಕಾಡೆಮಿ ಪ್ರಾರಂಭಿಸುವ ಉದ್ದೇಶ ಹೊಂದಿದ್ದಾರೆ. ಈ ಅಕಾಡೆಮಿ ಮೂಲಕ ಬಡ, ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ನೆರವು ದೊರಕಬೇಕೆನ್ನುವುದು ದೀಕ್ಷಾರ ಮನದಾಳದ ಬಯಕ ಆಗಿದೆ.

ವಿಶ್ವದಾಖಲೆ ಬರೆದಿದ್ದಕ್ಕೆ ಹೆಚ್ಚು ಪ್ರಚಾರ

ದೀಕ್ಷಾರ ವಿಶ್ವದಾಖಲೆ ಪ್ರಮಾಣ ಪತ್ರ ಪ್ರದಾನ, ಸಮಾರೋಪ : ಮಣಿಪಾಲ ರತ್ನ ಸಂಜೀವ ಕಲಾಮಂಡಲದ ಸಹಭಾಗಿತ್ವದಲ್ಲಿ ಡಾ. ಜಿ. ಶಂಕರ್ ಮಹಿಳಾ ಪ್ರರ್ಥ ದರ್ಜೆ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದಿದ್ದು, ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿ ಅಭಿನಂದನೆ ಸಲ್ಲಿಸಿದರು.

ನಾಡೋಜ ಡಾ. ಜಿ. ಶಂಕರ್, ಸಂಸದ ಕೋಟಿ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಎ. ಸುವರ್ಣ, ಗುರ್ಮ ಸುರೇಶ್ ಶೆಟ್ಟಿ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮುಖಂಡರಾದ ಎಂ.ಎ. ಗಫೂರ್, ಶಂಕರ ಪೂಜಾರಿ, ಪ್ರಸಾದ್ ರಾಜ್ ಕಾಂಚನ್, ಮುನಿಯಾಲು ಉದಯ ಶೆಟ್ಟಿ, ಡಾ. ರೋಶನ್ ಕುಮಾರ್ ಶೆಟ್ಟಿ, ಗುರು ಶ್ರೀಧರ್ ಬನ್ನಂಜೆ, ವಿದುಷಿ್ ಉಷಾ ಹೆಬ್ಬಾರ್, ಗೀತಾಂಜಲಿ ಸುವರ್ಣ, ಮಹೇಶ್‌ ಠಾಕೂರ್, ತಂದೆ ವಿಠಲ ಪೂಜಾರಿ, ತಾಯಿ ಶಂಬಾ, ಭವಿ ರಾಜಲ್, ಕಿಶೋರ್ ಕುಮಾರ್‌ ಕುಂದಾಪುರ, ವಿದ್ವಾನ್ ಯಶವಂತ್ ಎಂ.ಜೆ., ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಹೆಡ್ ಮುನೀಶ್ ಬಿಡೋಮ್‌ ಮುಂತಾದವರು ಉಪಸ್ಥಿತರಿದ್ದರು. ಅವಿನಾಶ್ ಕಾಮತ್‌ ಕಾರ್ಯಕ್ರಮದ ನಿರೂಪಕರಾಗಿದ್ದರು. ಈ ಕಾರ್ಯಕ್ರಮದ ಕುರಿತಂತೆ ದೀಕ್ಷಾ ಹೇಳುವುದು ಹೀಗೆ " ನಾನು ಇದುವರೆಗೆ ಭರತನಾಟ್ಯ ಕಲಿತರೂ, ವಿದ್ಯಾರ್ಥಿಗಳಿಗೆ ತರಬೇತಿ ಕೊಡುತ್ತಾ ಬಂದಿದ್ದರೂ ಸಾಕಷ್ಟು ಮುಟ್ಟಿನ ಪ್ರಚಾರ ದೊರಕಿರಲಿಲ್ಲ. ಆದರೆ ಈಗ ವಿಶ್ವದಾಖಲೆ ನಿರ್ಮಾಣ ಮಾಡಿದ ಕಾರಣ ಎಲ್ಲೆಡೆ ಪ್ರಚಾರ ಸಿಕ್ಕುತ್ತಿದೆ. ಇದು ನನಗೆ ಬಹಳ ಖುಷಿ ತಂದಿದೆ."


ಹಿಂದಿನ ಪರಂಪರೆ ತಿಳಿದಿರಬೇಕು.

ಇಂದಿನ ಯುವಪೀಳಿಗೆ ಬಗ್ಗೆ ಮಾತನಾಡುವ ದೀಕ್ಷಾ, ಭವಿಷ್ಯದ ಪೀಳಿಗೆಗೆ ನಮ್ಮ ಪರಂಪರೆಯ ಕುರಿತು ತಿಳಿದಿರಬೇಕು. ಪಾಶ್ಚಾತ್ಯರು ಸಹ ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ನಮ್ಮಯುವಜನತೆ ಅದರಿಂದ ವಿಮುಖರಾಗುತ್ತಿದ್ದಾರೆ. ಆದರೆ ಹಾಗಾಗಬಾರದು. ಯುವ ಪೀಳಿಗೆ ನಮ್ಮ ಸಂಸ್ಕೃತಿಯನ್ನು ಅರಿತು ಅದನ್ನು ಉಳಿಸಿಕೊಂಡು ಹೋಗಬೇಕಿದೆ. ನಾನು ನನ್ನ ಪೂರ್ವಜರ ಹೆಜ್ಜೆಯನ್ನೇ ಅನುಸರಿಸುತ್ತೇನೆ. ಅದರಂತೆ ಇಂದಿನ ಯುವ ಪೀಳಿಗೆ ಸಹ ನಮ್ಮ ಪವಿತ್ರ ಸಂಸ್ಕೃತಿಯ ಆಚರಣೆಯನ್ನು ಬೆಳೆಸಿಕೊಂಡು ಹೋಗಬೇಕಿದೆ ಎನ್ನುತ್ತಾರೆ.

ದೀಕ್ಷಾ ಮುಂಬರುವ ದಿನಗಳಲ್ಲಿ ಮತ್ತಷ್ಟು ಉನ್ನತ ಸಾಧನೆಗಳು ಮಾಡುವಂತಹ ಅವಕಾಶಗಲು ಬರಲಿ. ಅವರಿಂದ ಮತ್ತಷ್ಟು ವಿದ್ಯಾರ್ಥಿಗಳು ಭರತನಾಟ್ಯ, ನೃತ್ಯಾಭ್ಯಾಸ ಕಲಿತು ಹೆಸರುಗಳಿಸಲಿ ಎಂದು ಗೃಹಶೋಭಾ ಹಾರೈಸುತ್ತಾಳೆ. 


Monday, November 17, 2025

ಕನ್ನಡ ರಾಜ್ಯೋತ್ಸವ: ಇದು ನಿಮ್ಮ ವಾಹಿನಿ ಕಲಾ ವೇದಿಕೆಯಿಂದ 19ನೇ ಸಾಂಸ್ಕೃತಿಕ ಸಿಂಚನ

 

  • ರಾಘವೇಂದ್ರ ಅಡಿಗ ಎಚ್ಚೆನ್.

ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ 19ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮವನ್ನು ನವಂಬರ್ 16ರ ಭಾನುವಾರದಂದು ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಸಲಾಯಿತು..



ಈ ಕಾರ್ಯಕ್ರಮದಲ್ಲಿ ಹಲವಾರು ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಡಲಾಯಿತು.. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ , ನಿವೃತ್ತ ಪೊಲೀಸ್ ಅಧಿಕಾರಿ ಶ್ರೀ ಎಸ್ ಕೆ ಉಮೇಶ್ , ಸಂಗೀತ ನಿರ್ದೇಶಕರು ಹಾಗೂ ಗಾಯಕರಾದ ಮಾನಸ ಹೊಳ್ಳ, ಉದಯೋನ್ಮುಖ ನಟ ಪುನೀತ್ ಕುಮಾರ್ ದೀಪ ಬೇಕಾಗುವ ಮೂಲಕ ಜೊತೆಗೆ ಕನ್ನಡಾಂಬೆಗೆ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು..




ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಸ್ ಕೆ ಡಿ ಎಂ ಎ ಅಧ್ಯಕ್ಷರಾದ ಗಂಡಸಿ ಸದಾನಂದ ಗೌಡ ಅವರು , ಕೆಜಿಎಫ್ ಖ್ಯಾತಿಯ ಚೋಟ ರಾಖಿ ಬಾಯ್ ಅನ್ಮೋಲ್ ವಿಜಯ್ ಭಟ್ಕಲ್ , ಹಾಗೂ ಪವರ್ ಟಿವಿ ಯ ಮೂವರು ಮುಖ್ಯಸ್ಥರನ್ನು ಗುರುತಿಸಿ ಸನ್ಮಾನಿಸಲಾಯಿತು..




ಕಾರ್ಯಕ್ರಮದಲ್ಲಿ ಹಲವಾರು ಕಲಾತಂಡಗಳು ಭಾಗವಹಿಸಿದ್ದು ನೂರಾರು ಪ್ರತಿಭಾನ್ವಿತರು ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭಾ ಪ್ರದರ್ಶನವನ್ನ ನಡೆಸಿದ್ದು ವಿಶೇಷವಾಗಿತ್ತು.


ಈ ಒಂದು ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿದ್ದು, ಕನ್ನಡವನ್ನ ಉಳಿಸಿ ಬೆಳೆಸುವ ಜೊತೆಗೆ , ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರತಿಭೆಗಳನ್ನು ಗುರುತಿಸುವ ಕೆಲಸ ನಡೆಯಲಿದೆ ಎಂದು ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಅವರು ತಿಳಿಸಿದರು


Wednesday, November 05, 2025

ಪದವಿಪೂರ್ವ ಚಿತ್ರದ ಬೆಡಗಿ ಯಶಾ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ನಟ

 ಈಗಾಗಲೇ ಸಣ್ಣಪುಟ್ಟ ಪಾತ್ರಗಳಲ್ಲಿ ಬಂದು, ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಿ ಕನ್ನಡದಲ್ಲಿ ನಟಿಸುತ್ತಿರುವ ಅಪ್ಪಟ ಕನ್ನಡತಿ ಯಶಾ ಶಿವಕುಮಾರ್ ಇಲ್ಲ ತಮ್ಮ ಬಗ್ಗೆ ಏನು ಹೇಳಿಕೊಂಡಿದ್ದಾರೆ....?

ಯಶಾ ಶಿವಕುಮಾರ್ ಕನ್ನಡದ ಒಬ್ಬ ಅಪರೂಪದ ನಟಿ, ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಜಂಟಿಯಾಗಿ ನಿರ್ಮಿಸುತ್ತಿರುವ 'ಪದವಿಪೂರ್ವ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

ಶಿವರಾಜ್ ಕುಮಾರ್, ಪೃಥ್ವಿ ಅಂಬಾ‌ ಮುಖ್ಯ ಭೂಮಿಕೆಯಲ್ಲಿರುವ 'ಬೈರಾಗಿ,' ಧನಂಜಯ್‌ ಅಭಿನಯದ 'ಮಾನ್‌ಸೂನ್ ರಾಗ' ಸಿನಿಮಾಗಳಲ್ಲಿ ಈಗಾಗಲೇ ಸಣ್ಣ ಪುಟ್ಟ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದರು.


ಆ ಪೈಕಿ 'ಮಾನ್‌ಸೂನ್ ರಾಗ' ಇವರಿಗೆ ಹೆಚ್ಚಿನ ಹೆಸರು ತಂದುಕೊಟ್ಟಿತು. ಮಾಡೆಲಿಂಗ್ ಮಾಡುತ್ತಿದ್ದ ಇವರು ಬೆಂಗಳೂರಿನ ಹುಡುಗಿ. ಮೂಡಬಿದರೆ ಆಳ್ವಾಸ್ ಕಾಲೇಜ್‌ನಲ್ಲಿ ಎಂಜಿನಿಯರಿಂಗ್ ಮಾಡಿದ್ದು, ಆ ಸಮಯದಲ್ಲೇ ರಾಜ್ ಬಿ ಶೆಟ್ಟಿಯವರ 'ಸೌಂಡ್ಸ್ & ಲೈಟ್ಸ್' ಎನ್ನುವ ತುಳು ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದರು.

ಸೌಂದರ್ಯ ಸ್ಪರ್ಧೆಗಳಲ್ಲಿ ಮುಂದು

2019ರ ವರ್ಷದಲ್ಲಿ 'ಫ್ಯಾಷನ್ ಎಬಿಸಿಡಿ' ಸಂಸ್ಥೆ ಆಯೋಜಿಸಿದ್ದ 'ಮಿಸ್ ಬೆಂಗಳೂರು 2019, ಮಿಸ್ ಕರ್ನಾಟಕ ಇಂಟರ್ ನ್ಯಾಷನಲ್ 2019' ಹಾಗೂ ಮುಂಬೈನಲ್ಲಿ ನಡೆದ 'ಮಿಸ್ ಗ್ಲೋರಿ ಆಫ್ ಗ್ಯಾಲಕ್ಸಿ 2019' ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದರು.

ನಾಟ್ಯ ಕಲೆಯಲ್ಲಿ ಪ್ರವೀಣೆ

ಇವರು ನೃತ್ಯ ಕಲಾವಿದೆಯೂ ಹೌದು. ಭರತನಾಟ್ಯ, ಕಥಕ್, ಫ್ರೀ ಸ್ಟೈಲ್, ಮಣಿಪುರಿ, ಜಾನಪದ ಕಲಾ ನೃತ್ಯಗಳಲ್ಲಿ ಇವರು ಪರಿಣಿತರಾಗಿದ್ದಾರೆ. ದೇಶದ ಅತ್ಯಂತ ಸುಪ್ರಸಿದ್ಧ ವಸ್ತ್ರ ವಿನ್ಯಾಸಕರು ಮತ್ತು ಛಾಯಾಗ್ರಾಹಕರುಗಳೊಂದಿಗೆ ಕೆಲಸ ಮಾಡಿರುವ ಅನುಭವವನ್ನೂ ಇವರು ಹೊಂದಿದ್ದಾರೆ. 


ತೆಲುಗಿನಲ್ಲೂ ಮಿಂಚುತ್ತಿರುವ ಯಾ

ಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲಿ ಕೂಡ ಯಶಾ ಅಭಿನಯಿಸಿದ್ದಾರೆ, ಸಾಯಿರಾಮ್ ಶಂಕರ್ ನಾಯಕನಾಗಿರುವ 'ವೆ ದುವೆಯ ಸಿನಿಮಾದಲ್ಲಿ ಯಶಾ ನಾಯಕಿಯಾಗಿ ಅಭಿನಯಿಸಿದ್ದಾರೆ.

 'ದಂತಕಥೆ' ಎನ್ನುವ ಸಿನಿಮಾದಲ್ಲಿ ಸಹ ಅವರದು ಪ್ರಮುಖ ಪಾತ್ರ, ಉತ್ತಮ ಕಂಟೆಂಟ್ ಇರುವಂಥ, ಜನರ ಮೆರೆಸ್ಸಿನಲ್ಲಿ ಉಳಿಯುವ ಪಾತ್ರ ಮಾಡುವ ಆಸೆ ಇರುವ ನಟಿ ಯಶಾ.

ಇಷ್ಟಾನಿಷ್ಟಗಳು

ಈಕೆಗೆ ಸ್ನೇಹಿತರೆಂದರೆ ತುಂಬಾ ಇಷ್ಟ, ಹಾಗೆಯೇ ನಾಯಿ ಅಂದ್ರೆ ಬಹಳ ಇಪ್ಪ ಶಾಪಿಂಗ್ ಕ್ರೇಜ್ ಇದೆ. ಡಾನ್ ಅಂದ್ರೆ ಪಂಚಪ್ರಾಣ ಎನ್ನುವುದು ವಿಶೇಷ.

ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲೇ ಓದಿದ್ದೂ ಅಲ್ಲಿಯೇ ಮೊದಲಿನಿಂದಲೂ ನನಗೆ ನಟನೆ, ಭರತನಾಟ್ಯದಲ್ಲಿ ಆಸಕ್ತಿ ಇತ್ತು. ಡಿಗ್ರಿ ಮಾಡಲು ಮೂಡಬಿದಿರೆಯ ಆಳ್ವಾಸ್ ಕಾಲೇಜಿಗೆ ಸೇರಿದೆ. ಅಲ್ಲಿ ಕಥಕ್, ಮಣಿಸರಿ ಮೊದಲಾದ ನೃತ್ಯಗಳನ್ನು ಕಲಿತುಕೊಂಡೆ. 

ತುಳು ಚಿತ್ರದಲ್ಲೂ ನವನ

ಜೊತೆಗೆ ತುಳು ಭಾಷೆಯನ್ನೂ ಚೆನ್ನಾಗಿ ಕಲಿತುಕೊಂಡೆ. ಇದರಿಂದಾಗಿ ನನಗೆ ರಾಜ್‌, ಬಿ. ಶೆಟ್ಟಿ ಅವರ ತಂಡ ನಿರ್ಮಾಣ ಮಾಡುತ್ತಿರುವ 'ರಾಜ್ ಸೌಂಡ್ಸ್ & ಲೈಟ್ ಎನ್ನುವ ತುಳು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು, ಎನ್ನುತ್ತಾರೆ.

ಇಲ್ಲಿಂದ ನನ್ನ ಸಿನಿ ಜರ್ನಿ ಶುರುವಾಯಿತು. ಇದಾದ ನ೦ತರ ನಾನು ಮಾಡೆಲಿಂಗ್‌ನಲ್ಲಿ ಇರುವಾಗಲೇ ಯೋಗರಾಜ್‌ ಭಟ್‌ರನ್ನು ಭೇಟಿಯಾಗಿ ಆಡಿಷನ್ ಕೊಟ್ಟು ಬಂದಿದೆ. ಕೆಲವು ದಿನಗಳ ನಂತರ ಅವರು ಕಾಲ್ ಮಾಡಿ ನಾನು ಆಯ್ಕೆಯಾಗಿರುವ ವಿಷಯ ತಿಳಿಸಿದರು. 

ಅಧಿಕೃತ ಎಂಟ್ರಿ

ಮೊದಲ ಚಿತ್ರ 'ಪದವಿಪೂರ್ವ'ದ ಮೂಲಕ ಅಧಿಕೃತವಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದುಕೊಂಡೆ ಎಂದು ನಟಿ ಯಶಾ ತಮ್ಮ ಚಿತ್ರರಂಗದ ಎಂಟ್ರಿ ಕುರಿತು ಹೇಳಿಕೊಂಡಿದ್ದಾರೆ.

ನಿರ್ವಹಿಸಿದ ಪಾತ್ರಗಳು


ಕಳೆದ ವರ್ಷ ತೆರೆಕಂಡಿದ್ದ ಕಿರಣ್ ರಾಜ್ ನಾಯಕನಾಗಿ ನಟಿಸಿರುವ 'ಭರ್ಜರಿ ಗಂಡು ಚಿತ್ರದಲ್ಲಿ ನಾಯಕಿಯಾಗಿ ಯಶಾ

ಅಭಿನಯಿಸಿದ್ದರು. ಪ್ರಸ್ತುತ ವರ್ಷ ತೆರೆಗೆ ಬಂದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿರುವ 'ಗಣ' ಸಿನಿಮಾದಲ್ಲಿ ನಾಯಕಿಯಾಗಿ ಯಶಾ ಅಭಿನಯಿಸಿದ್ದಾರೆ. 

ಕನ್ನಡ, ತೆಲುಗು, ತುಳು ಭಾಷೆಯ ಸಿನಿಮಾಗಳ ಆಫರ್‌ಗಳು ಯತ್ನಾಗೆ ಬರುತ್ತಿದ್ದು, ಸದ್ಯ ಸಾಕಷ್ಟು ಬ್ಯುಸಿ ನಟಿ ಎನಿಸಿದ್ದಾರೆ. ಯಶಾ ಮು೦ದಿನ ಜೀವನದಲ್ಲಿ ಮತ್ತಷ್ಟು ಯಶಸ್ಸು ಬರಲಿ ಎನ್ನುವುದು ಗೃಹಶೋಭಾ ಓದುಗರ ಹಾರೈಕೆ.

ಗೃಹಶೋಬಾ | ಏಪ್ರಿಲ್ 2025ರಲ್ಲಿ ಪ್ರಕಟವಾಗಿದ್ದ ನನ್ನ ಲೇಖನ...