Thursday, July 24, 2025

ದಕ್ಷಿಣ ಭಾರತದ ಭಾಷೆಗಳ ಮಹಾಸಂಗಮಕ್ಕೆ ಬೆಂಗಳೂರು ಸಜ್ಜು: ಆಗಸ್ಟ್ 8-10 ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ 2025

 ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ-2025 ಆಗಸ್ಟ್.‌8ರಿಂದ 10ರವರೆಗೆ ನಗರದ ಕೋರಮಂಗಲದಲ್ಲಿರುವ ಸೇಂಟ್‌ ಜಾನ್ಸ್‌ ಸಭಾಂಗಣದ ಆವರಣದಲ್ಲಿ ನಡೆಯಲಿದೆ. 

ದಕ್ಷಿಣ ಭಾರತದ ಭಾಷೆಗಳ ಈ ಮಹಾಸಂಗಮಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಉಚಿತ ಪ್ರವೇಶವಿರಲಿದೆ. ಸಾಹಿತ್ಯಾಸಕ್ತರು www.bookbrahmalitfest.com ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. 

ಪ್ರತಿ ವರ್ಷ ಆಗಸ್ಟ್. ಎರಡನೇ ಶುಕ್ರವಾರ, ಶನಿವಾರ, ಭಾನುವಾರ ನಡೆಯಲಿರುವ ಈ ಸಾಹಿತ್ಯ ಉತ್ಸವದಲ್ಲಿ ದೇಶ-ವಿದೇಶದ 350ಕ್ಕಿಂತಲೂ ಹೆಚ್ಚು ಸಾಹಿತಿಗಳು, ಕಲಾವಿದರು ಹಾಗೂ ತಜ್ಞರು ಭಾಗವಹಿಸಲಿದ್ದಾರೆ. 


ಕಳೆದ ವರ್ಷ ನಡೆದ ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವದ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿ ಇದನ್ನು ಇನ್ನೂ ವಿಸ್ತರಣೆ ಮಾಡಲಾಗಿದೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳು ಮತ್ತು ಇಂಗ್ಲಿಷ್‌ ಒಳಗೊಂಡು ಒಟ್ಟು ಐದು ಭಾಷೆಗಳಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. 

ದಕ್ಷಿಣ ಭಾರತದಲ್ಲದ ಭಾಷೆಗಳಿಗೆ ಸ್ಥಾನ ನೀಡುವ ಸಲುವಾಗಿ ಈ ವರ್ಷದಿಂದ ಭಾರತದ ಇನ್ನೊಂದು ಭಾಷೆಯನ್ನು ಆಹ್ವಾನಿತ ಭಾಷೆಯಾಗಿ ಪರಿಗಣಿಸುವ ಸಂಪ್ರದಾಯ ಆರಂಭಿಸಲಾಗಿದೆ. 

ಈ ಬಾರಿ ಮರಾಠಿ ಆಹ್ವಾನಿತ ಭಾಷೆಯಾಗಿದ್ದು, ಮುಂದಿನ ವರ್ಷ ಬಂಗಾಲಿ ಅಥವಾ ಇನ್ಯಾವುದೋ ಒಂದು ಭಾಷೆಯನ್ನು ಆಹ್ವಾನಿತ ಭಾಷೆಯಾಗಿ ಕರೆಯಲಾಗುವುದು ಎಂದು ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವದ ನಿರ್ದೇಶಕ ಸತೀಶ್‌ ಚಪ್ಪರಿಕೆ ತಿಳಿಸಿದ್ದಾರೆ. 

ಎಲ್ಲಾ ಸಾಹಿತ್ಯಾಸಕ್ತರಿಗೆ ಪ್ರವೇಶ ಉಚಿತವಾಗಿದೆ. ಆಸಕ್ತರು ತಮ್ಮ ಹೆಸರನ್ನು ಮುಕ್ತವಾಗಿ ನೋಂದಾಯಿಸಿಕೊಳ್ಳಬಹುದು. ಮೂರು ದಿನಗಳ ಎಲ್ಲಾ ಗೋಷ್ಠಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. 

ಭಾರತೀಯ ಭಾಷೆಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಪ್ರಯತ್ನವಾಗಿದ್ದು, ಸಾಹಿತ್ಯಾಸಕ್ತರೆಲ್ಲರೂ ಇದರಲ್ಲಿ ಭಾಗಿಯಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಈ ಬಾರಿಯ ಸಾಹಿತ್ಯ ಉತ್ಸವದಲ್ಲಿ 8 ವಿವಿಧ ಸಮಾನಾಂತರ ವೇದಿಕೆಗಳಿದ್ದು, 180ಕ್ಕೂ ಹೆಚ್ಚು ಗೋಷ್ಠಿಗಳು, 8 ಸಾಂಸ್ಕೃತಿಕ ಕಾರ್ಯಕ್ರಮಗಳು, 6 ಭಾಷೆಗಳ ಕೃತಿಗಳನ್ನು ಒಳಗೊಂಡ ಪುಸ್ತಕ ಮಳಿಗೆ, ಮಕ್ಕಳ ಸಾಹಿತ್ಯ ಉತ್ಸವ, ಜನಪದ ಮಾರುಕಟ್ಟೆ, ಆಹಾರ ಮಳಿಗೆಗಳು ಇರಲಿವೆ. 


ಬೂಕರ್‌ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್‌, ದೀಪಾ ಭಾಸ್ತಿ, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ದಾಮೋದರ ಮೌಜೋ, ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಟಿ.ಎಂ.ಕೃಷ್ಣ, ಕುಂ ವೀರಭದ್ರಪ್ಪ, ಎಸ್.ದಿವಾಕರ, ಅಡೂರ್‌ ಗೋಪಾಲಕೃಷ್ಣನ್‌, ಅಮರೇಶ್‌ ನುಗಡೋಣಿ, ಬಿ.ಜಯಮೋಹನ್‌, ಗಿರೀಶ್‌ ಕಾಸರವಳ್ಳಿ, ಎಚ್.ಎಸ್.ಶಿವಪ್ರಕಾಶ್‌, ಹರೀಶ್‌ ಭಟ್‌, ಇಮಯಂ, ಜಯಂತ ಕಾಯ್ಕಿಣಿ, ಕೆ.ಪಿ.ರಾವ್‌, ಕೆ.ಸಚ್ಚಿದಾನಂದನ್‌, ಮಕರಂದ ಸಾಥೆ, ವಿಶ್ವಾಸ್‌ ಪಾಟೀಲ್‌ ಮನು ಪಿಳ್ಳೈ, ಎನ್.ಎಸ್.ಮಾಧವನ್‌, ಪಾಲ್‌ ಝಕಾರಿಯಾ, ಪೆರಿಮಾಳ್‌ ಮುರುಗನ್‌, ಪ್ರಶಾಂತ್‌ ಪ್ರಕಾಶ್‌, ರವಿ ಮಂತ್ರಿ, ಶಿಲ್ಪಾ ಮುಡಬಿ, ಸುಧೀಶ್‌ ವೆಂಕಟೇಶ್‌, ವಸುಧೇಂದ್ರ, ಜೋಗಿ, ವಿವೇಕ್‌ ಶಾನಭಾಗ, ವೋಲ್ಗಾ ಅವರನ್ನು ಒಳಗೊಂಡು 350ಕ್ಕೂ ಹೆಚ್ಚು ಸಾಹಿತಿಗಳು ವಿವಿಧ ಗೋಷ್ಠಿಗಳಲ್ಲಿರುತ್ತಾರೆ. 

ಲಕ್ಷ್ಮೀ ಚಂದ್ರಶೇಖರ, ಬಿ.ಜಯಶ್ರೀ ತಂಡ, ಪ್ರವೀಣ್‌ ಗೋಡ್ಕಿಂಡಿ, ಮಾನಸಿ ಪ್ರಸಾದ್‌, ಟಿ.ಎಂ.ಕೃಷ್ಣ, ಗಣಪತಿ ಭಟ್‌ ಹಸಣಗಿ ಬಿ ಸ್ಟುಡಿಯೋ ಮತ್ತು ಬೆಂಗಳೂರು ಕ್ಲಬ್‌ ಆಫ್‌ ಕಥಕ್ಕಳಿ ಅವರಿಂದು ಒಟ್ಟು 8 ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರು ದಿನಗಳ ಅವಧಿಯಲ್ಲಿ ನಡೆಯಲಿವೆ.

No comments:

Post a Comment