Tuesday, January 15, 2019

ಶತಮಾನ ಕಂಡ ‘ಪಾಪು’, ಕನ್ನಡ ಕಣ್ಮಣಿ ಪಾಟೀಲ ಪುಟ್ಟಪ್ಪ

ಕರ್ನಾಟಕ, ಕನ್ನಡದ ಜನರು ಪುಟ್ಟಪ್ಪ ಎಂಬ ಹೆಸರಿನ ಇಬ್ಬರು ವ್ಯಕ್ತಿಗಳನ್ನು ಎಂದಿಗೂ ಮರೆಯುವಂತಿಲ್ಲ. ಅದರಲ್ಲಿ ಒಬ್ಬರು ಕನ್ನಡ ಸಾಹಿತ್ಯ ದಿಗ್ಗಜರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಅವರಾದರೆ ಇನ್ನೊಬ್ಬರೇ ಕನ್ನಡ ಪತ್ರಿಕೋದ್ಯಮದ ಧೀಮಂತ ಪಾಟೀಲ ಪುಟ್ಟಪ್ಪ.
ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ಗಣ್ಯರಾದ ಪಾಟೀಲ ಪುಟ್ಟಪ್ಪನವರಿಗೆ ಇಂದು (14 2019.) ನೂರನೇ ಜನ್ಮದಿನ. ಕನ್ನಡಿಗರೆಲ್ಲರಿಗೆ `ಪಾಪು’ ಎಂದೇ ಗುರ್ತಿಸಲ್ಪಡುವ ಇವರು ಕನ್ನಡ ಪರ ಹೋರಾಟಗಳು, ಕಾಳಜಿಗಳಿಂದ ಜನಮಾನಸದಲ್ಲಿ ನೆಲೆಯಾದವರು. ಇವರ ಕನ್ನಡದ ಬಗೆಗಿನ ಮಗುವಿನಂತಹಾ ಪ್ರೀತಿ ಕನ್ನಡದ ಕುರಿತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಒಳನೋಟ, ಅಪಾರವಾದ ಪಾಂಡಿತ್ಯ ಎಲ್ಲವೂ ಶ್ರೇಷ್ಠಮಟ್ಟದ್ದೆನ್ನುವುದರಲ್ಲಿ ಅನುಮಾನವಿಲ್ಲ. ಇಂತಹಾಮೇರು ವ್ಯಕ್ತಿತ್ವ ಇಂದು ನೂರನೇ ವಸಂತಕ್ಕೆ ಕಾಲಿಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಜೀವನ ಯಾತ್ರೆಯ ಕಿರುಪರಿಚಯ ಇಲ್ಲಿದೆ.
14 ಜನವರಿ 1919ರಲ್ಲಿ , ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ ಜನಿಸಿಸಿದ ಪುಟ್ಟಪ್ಪ ಅವರ ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ.ಸ್ವಗ್ರಾಮ ಹಾಗೂ ಹಾವೇರಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಲಿಂಗರಾಜ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆಇದ್ದಾರೆ.ವಿಜಯಪುರದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ ಪುಟ್ಟಪ್ಪ ಅಲ್ಲಿ ಸರಿಯಾದ ಕಕ್ಷಿದಾರರು ಸಿಕ್ಕದೆ ಊಟಕ್ಕೆ ಸಹ ಪರದಾಡುವಂತಹಾ ಕಷ್ಟಕರ ಬದುಕು ನೋಡಬೇಕಾಗಿತ್ತು. ಬಳಿಕ ಅಲ್ಲಿಂದ ಜೀವನ ಅರಸಿ ಮುಂಬೈಗೆ ತೆರಳಿದ ಇವರು ಅಲ್ಲಿ ನ್ಯಾಯಾಲಯಕ್ಕಿಂತ ಹೆಚ್ಚು ಪತ್ರಿಕಾ ಕಛೇರಿಗಳಲ್ಲಿ ಸಮಯ ಕಳೆದಿದ್ದರು.
ಫ್ರೀ ಪ್ರೆಸ್ ಜರ್ನಲ್‌ದ ಸದಾನಂದ, ಬಾಂಬೆ ಕ್ರಾನಿಕಲ್ ಪತ್ರಿಕೆಯು ಸೈಯದ್ ಅಬ್ದುಲ್ಲಾ ಮತ್ತು ಎ.ಜಿ.ತೆಂಡೂಲ್ಕರ್ ಅವರೊಡನೆ ಸ್ನೇಹ ಬೆಳೆಸಿದ ಪುಟ್ಟಪ್ಪ ತಾವೂ ಪತ್ರಿಕೋದ್ಯಮಿಯಾಗಬೇಕೆಂಬ ಹಂಬಲಕ್ಕೆ ಬಿದ್ದು ಕ್ಯಾಲಿಫೋರ್ನಿಯಾಗೆ ತೆರಳಿ ಪತ್ರಿಕೋದ್ಯಮದ ಎಂ.ಎ ಪದವಿ ಪಡೆದಿದ್ದರು.
ಅಲ್ಲಿಂದ ಹಿಂತಿರುಗಿದ ಮೇಲೆ 1947ರಲ್ಲಿ ವಿಶಾಲ ಕರ್ನಾಟಕ, 1952ರಲ್ಲಿ ನವಯುಗ, 1954ರಲ್ಲಿ ಪ್ರಪಂಚ ಸಾಪ್ತಾಹಿಕ,1956ರಲ್ಲಿ ಸಂಗಮ ಮಾಸಿಕ,1959ರಲ್ಲಿ ವಿಶ್ವವಾಣಿ ದೈನಿಕ, 1961ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, 1964ರಲ್ಲಿ ಸ್ತ್ರೀ ಮಾಸಿಕ ಸೇರಿ ಣಾನಾ ಕಡೆಗಳಲ್ಲಿ ನಾನಾ ಪತ್ರಿಕೆಗಳಲ್ಲಿ ದುಡಿದ ಇವರು  ಪತ್ರಿಕೋದ್ಯಮದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದರು ಜತೆಗೆ ಪ್ರಜಾವಾಣಿ, ಕನ್ನಡಪ್ರಭ ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಗುರುತಿಸಿಕೊಂಡರು.
ಪತ್ರಿಕಾ ಸಂಪಾದಕರಾಗಿ ಮನೆಮಾತಾದ ಪುಟ್ಟಪ್ಪ ಸಾರ್ವಜನಿಕ ರಂಗಗಳಲ್ಲಿ ಸಹ ಸಾಕಷ್ಟು ದುಡಿದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ರಾಜ್ಯ ಸಭೆಯ ಸದಸ್ಯ, ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ಸಂಸ್ಥಾಪನಾ ಅಧ್ಯಕ್ಷ, ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ನಾನಾ ಹೋರಾಟದಲ್ಲಿ ಭಾಗವಹಿಸಿದ್ದ್ದಾರೆ. ಇಷ್ಟೇ ಅಲ್ಲದೆ  ವಿದ್ಯಾರ್ಥಿಯಾಗಿದ್ದಾಗಲೇ 1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಕರ್ನಾಟಕ ಕಾಲೇಜಿನ ಮುಖಂಡರಾಗಿ ಬ್ರಿಟಿಷ್ ಅಧ್ಯಾಪಕರಿಗೆ ಬಲವಂತವಾಗಿ ಗಾಂಧೀ ಟೋಪಿ ಹಾಕಿ ಆ ಕಾರಣಕ್ಕೆ ಕಾಲೇಜಿನಿಂದ ಹೊರಹಾಕಲ್ಪಟ್ಟಿದ್ದರು., ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿಗಳ ನೇತೃತ್ವ ವಹಿಸಿದ್ದ ಇವರು ನೂರರ ವಸಂತ ತಲುಪಿದ ಇಂದಿಗೂ ಕನ್ನಡದ ಪರ ಜಾಗೃತ ಮನಸ್ಸುಳ್ಳವರಾಗಿದ್ದಾರೆ.
ಸಾಹಿತಿಯಾಗಿ ನಏಕ ಪುಸ್ತಕಗಳನ್ನು ಪ್ರಕಟಿಸಿರುವ ಪುಟ್ಟಪ್ಪ ಅವರ ಪ್ರಮುಖ ಕೃತಿಗಳೆಂದು ಇವನ್ನು ಹೆಸರಿಸಬಹುದು- ನಮ್ಮ ದೇಶ ನಮ್ಮ ಜನ, ನನ್ನದು ಈ ಕನ್ನಡ ನಾಡು, ಕರ್ನಾಟಕದ ಕಥೆ, ಪಾಪು ಪ್ರಪಂಚ, ಶಿಲಾಬಾಲಿಕೆ ನುಡಿದಳು, ಗವಾಕ್ಷ ತೆರೆಯಿತು, ಸಾವಿನ ಮೇಜವಾನಿ
ಕನ್ನಡದ ಪ್ರಮುಖ ಸಾಹಿತಿ, ಪತ್ರಿಕೋದ್ಯಮಿ, ಹೋರಾಟಗಾರರಾಗಿ ಪುಟ್ಟಪ್ಪನವರ ಸಾಧನೆಗೆ ಮನ್ನಣೆಯಾಗಿ ಅನೇಕ ಗೌರವ, ಪ್ರಶಸ್ತಿಗಳು ಲಭಿಸಿದೆ. ಅವುಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ರಾಜ್ಯಸಭಾ ಸದಸ್ಯತ್ವ, 2003ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಸವಶ್ರೀ ಪ್ರಶಸ್ತಿ, ಟಿ.ಎಸ್.ಆರ್. ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ , ನೃಪತುಂಗ ಪ್ರಶಸ್ತಿಗಳು ಪ್ರಮುಖವಾಗಿದೆ. ಇದಲ್ಲದೆ ಪಾಪು ಅಭಿಮಾನಿಗಳೂ ಸಮರ್ಪಿಸಿದ  ಗೌರವಗ್ರಂಥ ‘ಪ್ರಪಂಚದ ಪಾಪು’ ಮತ್ತು ‘ನಾನು ಪಾಟೀಲ ಪುಟ್ಟಪ್ಪ.’ ಸಹ ಅವರ ಜೀವನ ಸಾಧನೆಗೆ ಹಿಡಿದ ಕನ್ನಡಿ.
ಇಂತಹಾ ಮೇರು ವ್ಯಕ್ತಿ ಇನ್ನಷ್ಟು ವರ್ಷ ಕಾಲ ಬಾಳಲಿ, ಕನ್ನಡ ನಾಡು, ನುಡಿಗೆ ಇನ್ನಷ್ಟು ಸೇವೆ ಅವರಿಂದ ಲಭಿಸಲಿ ಎನ್ನುವುದು "ಕನ್ನಡಪ್ರಭ ಡಾಟ್ ಕಾಂ" ನ ಹಾರೈಕೆ.

(ನನ್ನ ಈ ಲೇಖನವು 14 Jan 2019 06:49 PMಗೆ "ಕನ್ನಡಪ್ರಭ ಡಾಟ್ ಕಾಂ" ನಲ್ಲಿ ಪ್ರಕಟಗೊಂಡಿದೆ)