Thursday, February 18, 2016

ಓ ಎನ್ ವಿ ಕುರುಪ್ - ಒಂದು ನುಡಿ ನಮನ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಖ್ಯಾತ ಮಲಯಾಳಿ ಕವಿ, ಸಾಹಿತಿ ಮತ್ತು ಪರಿಸರವಾದಿ ಒ.ಎನ್‌.ವಿ ಕುರುಪ್‌ (84) ಅವರು 13-2-2016ರಂದು ನಿಧನ ಹೊಂದಿದರು. ಈ ಸಮಯದಲ್ಲಿ ಕನ್ನಡದ ಜ್ಞಾನಪೀಠ ಪುರಸ್ಕೃತ ಸಾಹಿತಿ ದಿ. ಯು.ಆರ್. ಅನಂತಮೂರ್ತಿಯವರು ಕುರುಪ್ ಮತ್ತು ಮಲಯಾಳಂ ಸಾಹಿತ್ಯದ ಕುರಿತು ಮಂಡಿಸಿದ್ದ ವಿಚಾರಗಳನ್ನು ನಾನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
***

ಜನಪ್ರಿಯರೂ, ಜನಪರರೂ ಆದ ಕವಿ ಓ.ಎನ್.ವಿ. ಕುರುಪ್

ನಾನು ಕೊಟ್ಟಾಯಂನಲ್ಲಿ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿ ಆಗಿದ್ದಾಗ ನನಗೆ ಬಹಳ ಹತ್ತಿರವಾದವರಲ್ಲಿ ಓ.ಎನ್.ವಿ. ಕುರುಪ್‌ರು ಒಬ್ಬರು. ನಾನು ಅವರನ್ನು ಹುಡುಕಿಕೊಂಡು ಹೋದದ್ದುಂಟು. ಅವರು ಹಲವು ಬಾರಿ ನಮ್ಮ ವಿಶ್ವವಿದ್ಯಾಲಯಕ್ಕೆ ಬಂದದ್ದುಂಟು. ಹಲವು ಸೆಮಿನಾರ್‌ಗಳಲ್ಲಿ ಮತ್ತು ವಿದ್ವತ್ ಸಭೆಗಳಲ್ಲಿ ಅವರನ್ನು ನೋಡಿದ್ದೇನೆ. ಈ ಕಾಲದ ಮಲಯಾಳಿ ಸಾಹಿತ್ಯ ವಲಯದಲ್ಲಿ ಎಲ್ಲರೂ ಇಷ್ಟಪಡುವ ಕವಿಯೆಂದರೆ ಓ.ಎನ್.ವಿ.ಯವರು.
ನನಗೆ ಅವರಲ್ಲಿ ಬಹಳ ಇಷ್ಟವಾದ ಪದ್ಯವೊಂದಿದೆ. ಆಶ್ಚರ್ಯವೆಂದರೆ ಅಡಿಗರ ಭೂಮಿಗೀತದಂತೆಯೇ ಭೂಮಿಯ ಬಗ್ಗೆ ಬರೆದ ದೀರ್ಘವಾದ ಪದ್ಯ ಇದು. ಈ ಎರಡು ಪದ್ಯಗಳ ನಡುವಿನ ವ್ಯತ್ಯಾಸವೂ ನನಗೆ ಕುರುಪ್‌ರ ಕಾವ್ಯಮಾರ್ಗವನ್ನು ಅರಿಯಲು ಸಹಾಯಕವಾಗಿತ್ತು. ಅಡಿಗರಲ್ಲಿ ಭೂತಾಯಿಯ ನಿಜವಾದ ಮಕ್ಕಳು ಹುಲಿ, ಚಿರತೆ, ಆನೆ ಕೋಡಗ ಕತ್ತೆ ಇಂತಹ ಪ್ರಾಣಿಗಳು. ಡಿ.ಎಚ್. ಲಾರೆನ್ಸ್ ಅವನದೊಂದು ಸ್ನೇಕ್ ಎನ್ನುವ ಪದ್ಯದಲ್ಲಿ ಹಾವನ್ನು ‘ಲಾರ್ಡ್ ಆಫ್ ಲೈಫ್’ (Lord of Life) ಎನ್ನುತ್ತಾರೆ. ಮನುಷ್ಯ Lord of Life ಅಲ್ಲ. ಲಾರೆನ್ಸ್‌ನಿಂದ ಪ್ರೇರಿತರಾದ ಅಡಿಗರು ಮನುಷ್ಯ-ಭೂಮಿ ಮತ್ತು ಆಕಾಶದ ಸಂಗಮದಿಂದಾಗಿ ಎಡಬಿಡಂಗಿಯಾಗಿ ಕಾಣಿಸುತ್ತಾನೆ ಎಂದು ಭೂಮಿಗೀತದಲ್ಲಿ ನಿರೂಪಿಸುತ್ತಾರೆ. ಮಲಯಾಳಂ ಓದಲು ಬಾರದ ನನ್ನ ಸುಮಾರು ಎರಡು ದಶಕಗಳ ಹಿಂದಿನ ನೆನಪಿನಿಂದ ಹೇಳುವುದಾದರೆ ಮಾರ್ಕ್ಸ್‌ವಾದದಿಂದ ಪ್ರಭಾವಿತರಾದ ಓ.ಎನ್.ವಿ.ಯವರಿಗೆ ಈ ಭೂಮಿ ತಾಯಿಯಿದ್ದಂತೆ. ಅಡಿಗರಿಗೆ ಮಲತಾಯಿಯಿದ್ದಂತೆ. ಈ ದೃಷ್ಟಿಯಿಂದ ಓ.ಎನ್.ವಿ.ಯವರು ನಮ್ಮ ನವೋದಯದ ಜೀವನವನ್ನು ಕೀರ್ತಿಸುವ ಕವಿಗಳ ಸಾಲಿನವರು.
ಮಲಯಾಳದಲ್ಲಿ ಎಲ್ಲ ಬಗೆಯ ಕಾವ್ಯವೂ ಇದೆ. ನವೋದಯ, ಬಂಡಾಯ, ನವ್ಯ- ಎಲ್ಲವೂ ಪ್ರಸ್ತುತವಾಗಿಯೇ ಉಳಿದಿವೆ. ಗತಿಸಿದ ಅಯ್ಯಪ್ಪ ಫಣಿಕ್ಕರ್‌ರಲ್ಲಿ ಹಾಗೂ ಗತಿಸಿದ ಕಡಮನಾಟ್ ರಾಮಕೃಷ್ಣನ್ ಕವಿಯಲ್ಲಿ ಎರಡು ಬಗೆಯಾಗಿ ಕಾವ್ಯ ಹರಿಯುತ್ತದೆ. ಅಯ್ಯಪ್ಪ ಫಣಿಕ್ಕರ್‌ರಲ್ಲಿ ಮತ್ತು ಸಚ್ಚಿದಾನಂದನ್ ಅವರಲ್ಲಿ ಕಾವ್ಯ ಹಲವು ಪ್ರಯೋಗಗಳ ನವ್ಯವಾಗಿದೆ. ಆದರೆ ಕಡಮನಾಟ್ ರಾಮಕೃಷ್ಣರಲ್ಲಿ ಕವಿತಾರಚನೆ ಆದಿಮ ಶಕ್ತಿಯ ಪುರಾಣಗಳನ್ನು ಸೃಷ್ಟಿಸುವ ಕಾವ್ಯವಾಗಿದೆ. ಇಂಥವರ ನಡುವೆ ಓ.ಎನ್.ವಿ. ತಮ್ಮದೇ ಜೀವಪರವಾದ ನಿಲುವುಗಳನ್ನು ಹಾಡುವಂತೆ ಪಠಿಸಬಲ್ಲ ಘನೋದ್ದೇಶದ ಕವಿಗಳಾಗಿ ಉಳಿದಿದ್ದಾರೆ.
ಸುಮಾರು ಹತ್ತು ವರ್ಷಗಳಿಂದ ನಾನು ಇವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬಹುದೆಂದು ನಿರೀಕ್ಷಿಸಿದ್ದೆ.
ಎಂಬತ್ತೇಳರಲ್ಲಿ ನಾನು ಕೇರಳ ತಲುಪಿದಾಗ ಮೊದಲು ನನ್ನನ್ನು ಭೇಟಿಯಾದವರಲ್ಲಿ ಓ.ಎನ್.ವಿ. ಮುಖ್ಯರು. ಮೇಲೆ ಹೆಸರು ಹೇಳಿದ ಕವಿಗಳ ಪರಿಚಯ ಮಾತ್ರ ನನಗಿತ್ತು. ಓ.ಎನ್.ವಿ. ನನ್ನನ್ನು ಕಂಡೊಡನೆಯೇ ಮಲಯಾಳಂ ಲಿಪಿಯನ್ನು ಕಲಿವ ಸುಲಭವಾದ ಮಾರ್ಗವೊಂದನ್ನು ಹೇಳಿಕೊಟ್ಟರು. ನಿನಗೆ ಗೊತ್ತಿರುವ ಕನ್ನಡ ಲಿಪಿಯನ್ನು ಕೊಂಚ ಬಲಕ್ಕೋ ಎಡಕ್ಕೋ ವಾಲಿಸಿ ಅದರಲ್ಲಿ ಕನ್ನಡ ಲಿಪಿಯ ಛಾಯೆಯನ್ನು ಗುರುತಿಸುವುದನ್ನು ಕಲಿ; ನಿನಗೆ ಆಗ ಕ್ರಮೇಣ ಮಲಯಾಳಂ ಲಿಪಿಯನ್ನು ಗುರುತಿಸುವುದು ಸಾಧ್ಯವಾಗುತ್ತದೆ ಎಂದು. ಓ.ಎನ್.ವಿ. ಹೇಳಿದ್ದನ್ನು ಸತತವಾಗಿ ನಾಲ್ಕು ವರ್ಷಗಳ ಕಾಲವೂ ನಾನು ಗಮನಿಸುತ್ತಲೇ ಹೋಗಿ ಅಷ್ಟಿಷ್ಟು ಓದಲು ಕಲಿತಿದ್ದೆ. ಬಹಳ ಹಿಂದೆ ಕೇರಳದಲ್ಲಿ ಬದುಕಿದ ನನ್ನ ಅಜ್ಜ ನಾಮಫಲಕಗಳನ್ನು ಗಮನಿಸುತ್ತ ನನಗಿಂತ ಚೆನ್ನಾಗಿ ಮಲಯಾಳಂನ್ನು ಓದಬಲ್ಲವರಾಗಿದ್ದರು. ಕೇರಳದಲ್ಲಿ ಗೆಳೆಯ ರಷೀದ್ ಬಗ್ಗೆ ನಾನು ಹೇಳಿದ್ದನ್ನು ಈಗಲೂ ನೆನೆಯುವವರಿದ್ದಾರೆ. ಅನಕ್ಷರಸ್ಥನಾದ ಮಲಯಾಳಿ ಇವನೊಬ್ಬನೇ ಎಂದು ಸೆಮಿನಾರ್ ಸಂದರ್ಭದಲ್ಲಿ ನಾನು ಹೇಳಿದ್ದೆ.

Ottaplakkal Neelakandan Velu Kurup (27 May 1931 – 13 February 2016),

ಲಿಪಿಯನ್ನು ಮಾತ್ರವಲ್ಲದೇ ಕೆಲವು ವಾಕ್ಯಗಳನ್ನೂ ಮಾತಾಡಲು ಓ.ಎನ್.ವಿ. ನನಗೆ ಕಲಿಸಿದ್ದರು. ನಾನು ಸೆನೆಟ್ ಸಭೆಯಲ್ಲಿ ಮಲಯಾಳಂ ಭಾಷೆ ವಿದ್ಯಾಭ್ಯಾಸದ ಮೊದಲ ಭಾಷೆಯಾಗಬೇಕು ಎಂದು ತೀರ್ಮಾನಿಸಿದ್ದೆ. ಇದರಿಂದ ಓ.ಎನ್.ವಿ. ಪುಳಕಿತರಾಗಿ ಅವರು ಮಾತಾಡಿದ ಅನೇಕ ಸಭೆಗಳಲ್ಲಿ ಕನ್ನಡಿಗನೊಬ್ಬ ಮಲಯಾಳಂ ಭಾಷೆಯ ಪ್ರಾಧಾನ್ಯಕ್ಕೆ ಶ್ರಮಿಸಿದ್ದನ್ನು ಪ್ರೀತಿಯಿಂದ ನೆನೆಯುತ್ತಿದ್ದರು. ಹಾಗೆಯೇ ಕೆಲವು ವರ್ಷಗಳ ಹಿಂದೆ ಶ್ರೀ ಆಂಟೋನಿ ಮುಖ್ಯಮಂತ್ರಿಯಾಗಿದ್ದಾಗ ಪ್ರೈಮರಿ ಶಾಲೆಯ ಅಧ್ಯಯನದಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು ಎನ್ನುವ ಶಿಕ್ಷಣ ಸುಧಾರಣಾ ಸಮಿತಿಯ ಅಧ್ಯಕ್ಷನನ್ನಾಗಿ ನನ್ನನ್ನು ಮಾಡಿದ್ದರು. ವಿದ್ಯಾರ್ಥಿಗಳು ಕ್ರಮೇಣ ಕಡಿಮೆಯಾಗುತ್ತಿರುವ, ಆದರೆ ನಿಜವಾದ ಒಳ್ಳೆಯ ಅಧ್ಯಾಪಕರಿರುವ ಸರಕಾರಿ ಶಾಲೆಗಳಿಗೆ ಮತ್ತೆ ವಿದ್ಯಾರ್ಥಿಗಳು ಸೇರುವಂತೆ ಮಾಡಲು ನಾನೊಂದು ಉಪಾಯ ಸೂಚಿಸಿದ್ದೆ. ‘ಮೊದಲ ಮೂರು ವರ್ಷ ಇಂಗ್ಲಿಷನ್ನು ಓದಲು ಬರೆಯಲು ಕಲಿಸುವುದು ಬೇಡ. ಆದರೆ ಸಾಧ್ಯವಿದ್ದಷ್ಟು ಮಾತಾಡುವುದನ್ನು ಮಕ್ಕಳಿಗೆ ಕಲಿಸೋಣ; ಆದರೆ ಅವರು ಕಲಿಯಬೇಕಾದ ಎಲ್ಲ ವಿಷಯವನ್ನೂ ಮಲಯಾಳಿ ಮಾಧ್ಯಮದಲ್ಲಿ ಮಾತ್ರ ಕಲಿಸೋಣ’ ಎಂದು. ಈ ನನ್ನ ಸಲಹೆಗೆ ಕಾರಣ ಇಂಗ್ಲಿಷ್ ಮಾಧ್ಯಮದ, ಇಂಗ್ಲಿಷ್ ವ್ಯಾಮೋಹದ, ಕೆಟ್ಟ ರೀತಿಯ ಶಿಕ್ಷಣದ, ಖಾಸಗೀ ಶಾಲೆಗಳು ಮಕ್ಕಳ ತಂದೆ-ತಾಯಿಗಳಿಗೆ ಆಕರ್ಷಕವಾಗದಂತೆ ಮಾಡುವುದಾಗಿತ್ತು. ಅಲ್ಲದೇ ಎಲ್ಲಾದರೂ ಹೋಗಿ ಬದುಕಬೇಕಾದ ಮಲಯಾಳಿಗಳನ್ನು ಎರಡು ಭಾಷೆಗಳಲ್ಲೂ ಸಲ್ಲುವವರಂತೆ ಮಾಡುವುದೂ ಆಗಿತ್ತು. ವ್ಯಾಪಾರೀ ಮನೋವೃತ್ತಿಯ ಇಂಗ್ಲಿಷ್ ಮಾಧ್ಯಮದ ಖಾಸಗೀ ಶಾಲೆಗಳ ಹಾವಳಿಯಿಂದ ಪಾರು ಮಾಡುವ ಈ ಕ್ರಮಕ್ಕೆ ಖಾಸಗೀ ವಲಯದಿಂದ ತುಂಬ ವಿರೋಧ ಬಂದಿತ್ತು. ಈ ವಿರೋಧದ ನಡುವೆಯೂ ನನ್ನ ವಿಚಾರದ ಪರವಾಗಿ ದನಿಯೆತ್ತಿ ಮಾತಾಡಿದವರು ನನಗೆ ಹಿರಿಯರಾದ ಓ.ಎನ್.ವಿ.ಯವರು. ಇವರು ಕವಿ ಮಾತ್ರರಾಗಿ ಉಳಿಯಲಿಲ್ಲ. ಒಬ್ಬ ನಾಗರಿಕ ಪ್ರಜೆ ಆಡಬೇಕಾದ್ದನ್ನು ಅಂಜದಂತೆ ಆಡಬಲ್ಲವರಾಗಿದ್ದರು.
ಓ.ಎನ್.ವಿ. ಜನಪರ ಕವಿ ಮಾತ್ರವಲ್ಲ. ಜನಪ್ರಿಯ ಕವಿಯೂ, ಘನಪಂಡಿತರೂ ಎನ್ನಬಹುದು. ಒಟ್ಟಾಗಿ ಈ ಮೂರು ಶಬ್ದಗಳನ್ನು ಹಲವರ ಬಗ್ಗೆ ಹೇಳುವುದು ಸಾಧ್ಯವಿಲ್ಲ.

Monday, February 15, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 67

ಶನಿಶಿಂಗಾಪುರ (Shanisingapur)

ಶನಿಶ್ಚರ ಕ್ಷೇತ್ರವಾಗಿ ಜಗತ್ಪ್ರಸಿದ್ದಿ ಪಡೆದಿರುವ, ಇತ್ತೀಚಿನವರೆಗೂ ಇಡೀ ಊರಿನ ಯಾರ ಮನೆಗೂ ಕಿಟಕಿ-ಬಾಗಿಲುಗಳಿಲ್ಲದೆ, ಕಳ್ಳ ಕಾಕರ ಭಯವಿಲ್ಲದೆ ಜನರು ಬದುಕುತ್ತಿರುವ ಊರು ಶನಿಶಿಂಗಾಪುರ. ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯಲ್ಲಿನ ನಿವಾಸ್ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರವು ಮುಂಬೈ ಮಹಾನಗರದಿಂದ ಸುಮಾರು 296 ಕಿ.ಮೀ. ದೂರದಲ್ಲಿದೆ. ಶ್ರೀ ಸಾಯಿಬಾಬಾ ಪವಾಡ ಕ್ಷೇತ್ರವಾದ ಶಿರಡಿಯಿಂದ 72 ಕಿ.ಮೀ ದೂರದಲ್ಲಿದೆ. 







ಇಲ್ಲಿಗೆ ಪ್ರತಿನಿತ್ಯವೂ ಭೇಟಿ ನೀಡುವ ಸಾವಿರ ಸಂಖ್ಯೆಯ ಭಕ್ತಾದಿಗಳು ಶನಿ ದೇವರಿಗೆ ಎಳ್ಳೆಣ್ಣೆಯನ್ನು ಸಮರ್ಪಿಸಿ ಕೃತಾರ್ಥರಾಗುತಾರೆ. 
***

ಸುಮಾರು ನೂರಿನ್ನೂರು ವರ್ಷಗಳ ಹಿಂದೆ ಇದೀಗ ಕ್ಷೇತ್ರವಾಗಿರುವ ಹಳ್ಳಿಯ ಪಕ್ಕದಲ್ಲಿನ ನದಿಯಲ್ಲಿ ಭೀಕರವಾದ ಪ್ರವಾಹ ಉಂಟಾಗಿತ್ತು. ಆ ಪ್ರವಾಹದ ಸಮಯದಲ್ಲಿ 



ಶನಿದೇವರ್ ಫಲಕವು ನೀರಿನಲ್ಲಿ ತೇಲಿ  ಬಂದಿತು. ಕೆಲ ದಿನಗಳ ಬಳಿಕ ಪ್ರವಾಹವು ಇಳಿಮುಖವಾಗಲು ಅಲ್ಲಿನ ಭಕ್ತನೊಬ್ಬನ ಕನಸಿನಲ್ಲಿ ಕಾಣಿಸಿಕೊಂಡ ಶನಿಶ್ಚರನು "ಈ ಊರಿನಲ್ಲಿ ವಾಸವಾಗಿರುವ ಸೋದರಳಿಯಾ ಹಾಗೂ ಸೋದರ ಮಾವಂದಿರು ಸೇರಿ ನನ್ನ ಫಲಕವನ್ನು ಊರ ಮಧ್ಯೆ ಸ್ಥಾಪನೆ ಮಾಡಬೇಕು. ಸಮೀಪದಲ್ಲಿ ಬೇವಿನ ಮರ ನೆಡಬೇಕು, ಆದರೆ ಬೇವಿನ ಮರದ ಕೊಂಬೆಗಳು ನನ್ನ ಫಲಕಕ್ಕೆ ತಾಗಬಾರದು." ಎಂದು ಆದೇಶಿಸಿದನು. 

"ನೀನೇನಾದರೂ ಹೀಗೆ ನಡೆದುಕೊಂದಲ್ಲಿ, ಈ ಊರಿನ ರಕ್ಷಣಾ ಭಾರ ನನ್ನದು. ನಿಮ್ಮ ನಿಮ್ಮ ಮನೆಗಳಿಗೆ ಕಿಟಕಿ-ಬಾಗಿಲುಗಳಿರಕೂಡದು." ಎಂದೂ ಅಭಯವನ್ನಿತ್ತನು. 

ಶನಿಶ್ಚರನ ಆದೇಶದ ಅನುಸಾರ ಅವನ ಫಲಕವನ್ನು ಸ್ಥಾಪಿಸಿ ಊರಲ್ಲಿದ್ದ ಮನೆಗಳನ್ನೆಲ್ಲಾ ಬಾಗಿಲು-ಕಿಟಕಿಗಳಿಲ್ಲದ ಮನೆಗಳನ್ನಾಗಿ ಪರಿವರ್ತಿಸಲಾಯಿತು. ಅಲ್ಲಿಂದ ಮುಂದೆ ಈ ಊರಲ್ಲಿ ಕಳ್ಳತನವಾಗಿರುವ ವರದಿ ಇರಲಿಲ್ಲ! ಒಂದೊಮ್ಮೆ ಯಾರಾದರೂ ಕಳ್ಳರು ಕಳ್ಳತನವೆಸಗಿದ್ದೇ ಆದರೆ ಅವರು ತಮ್ಮ ಕಣ್ಣುಗಳನ್ನು ಕಳೆದುಕೊಂಡು ಅದೇ ಊರಿನಲ್ಲಿ ಸುತ್ತುತ್ತಿರಬೇಕಾಗಿ ಬರುತ್ತದೆ ಎನ್ನಲಾಗಿತ್ತು. 

Wednesday, February 03, 2016

ಕನ್ನಡ ಕಥಾಲೋಕದ ಸಾರ್ಥಕ ಕೃತಿ - "ಜುಗಾರಿ ಕ್ರಾಸ್"

ಆಶ್ಚರ್ಯವಾಗಬಹುದು! ಸಹಸ್ರಾರು ಚದರ ಮೈಲಿ ವಿಸ್ತಾರದ ಕಾಡಿನ ನಟ್ಟನಡುವೆ ನಾಲ್ಕಾರು ದಾರಿ ಕೂಡುವ ಸರ್ಕಲ್ಲಿಗೆ ಯಾಕೆ ಜುಗಾರಿ ಕ್ರಾಸ್ ಎಂದು ಹೆಸರಿಟ್ಟಿದ್ದಾರೆ ಎಂದು! ನಿರ್ಜನ ಪ್ರದೇಶದಲ್ಲಿ ಯಾವ ಗಿರಾಕಿ ಸಿಕ್ಕುತ್ತದೆಂದು ಕಾಯುತ್ತಾ ಬಾಡಿಗೆ ಟ್ಯಾಕ್ಸಿಗಳು ನಿಂತಿರುತ್ತವೆಂದು! ಕೂಡು ರಸ್ತೆಗಳಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು, ಉಡುಪಿ, ಕಾರ್ಕಳ ಮುಂತಾದಲ್ಲಿಗೂ ಹೋಗುವ ರಸ್ತೆಗಳಿರುವುದರಿಂದ ಅಲ್ಲಿಗೆ ಹೋಗುವವರು ಟ್ಯಾಕ್ಸಿ ಮಾಡಿಕೊಂಡು ಹೋಗುತ್ತಾರೇನೋ ಎಂದು ಶಂಕಿಸಬಹುದು. ಪುಣ್ಯಕ್ಷೇತ್ರಗಳಿಗೆ ಹೋಗಬಹುದೆಂಬುದೇನೋ ನಿಜ! ಆದರೆ ಅಲ್ಲಿಗೆ ಬಂದು ಟ್ಯಾಕ್ಸಿ ಮಾಡಿಕೊಂಡು ಹೋಗುವವರು ಯಾರು? ಪ್ರಶ್ನೆಗೆ ಮಾತ್ರ ಉತ್ತರ ಕೇಳಬೇಡಿ! ಅಲ್ಲಿ ಫಾರೆಸ್ಟ್ ಚೆಕ್ ಪೋಸ್ಟಿನ ಬಳಿ ಒಂದು ದೊಡ್ಡ ಚಾ ಹೋಟೆಲ್ಲು ಸದಾ ನೊಣ ಹೊಡೆಯುತ್ತಾ ಬಿದ್ದಿರುತ್ತದೆ. ಅಲ್ಲಿರುವ ಇಬ್ಬರೇ ಗಿರಾಕಿ, ಫಾರೆಸ್ಟರ್ ಮತ್ತು ಗಾರ್ಡಿಗೆ ಹಡಬಿಟ್ಟೀ ಚಾ ಒದಗಿಸುತ್ತಾ ಅದನ್ನು ನಡೆಸುತ್ತಿರುವವರು ಯಾರು? ಅದನ್ನು ಕಟ್ಟಿಸಿದವರು ಯಾರು? ಹೀಗೆ ಭಯಂಕರ ಏಕಾಂತದ ಜುಗಾರಿ ಕ್ರಾಸ್ ನೋಡಿದವರಿಗೆ ನೂರಾರು ಕೌತುಕದ ಪ್ರಶ್ನೆಗಳು ಕಾಡುವುದರಲ್ಲಿ ಅನುಮಾನವೇ ಇಲ್ಲ.




ಜುಗಾರಿ ಕ್ರಾಸಿನ ಎಲ್ಲಾ ದಾರಿಗಳಿಗೂ ಒಂದೊಂದು ಬಲವಾದ ಗಳುವನ್ನು ಅಡ್ಡಲಾಗಿ ಕವೆಗೋಲಿನ ಮೇಲೆ ಕೂರಿಸಿರುತ್ತಾರ್ರೆ. ಮೊದಲು ಬಿದಿರು ಬೊಂಬುಗಳಿಗೆ ಒಂದೊಂದು ಕೆಂಪು ಲಾಟೀನನ್ನು ಹೋಗಿ ಬರುವ ವಾಹನಗಳಿಗೆ ಸುಲಭವಾಗಿ ಗುರುತಿಸಲು ಸಾಧ್ಯವಾಗಲೆಂದು ಕಟ್ಟಿರುತ್ತಿದ್ದರು. ಆದರೆ ಅಲ್ಲಿ ನಡೆಯುವ ಕಾಳ ವ್ಯವಹಾರದ ದಂಧೆ ಇವ್ಯಾವುದನ್ನೂ ಗಮನಿಸುವ ಸ್ಥಿತಿಯಲ್ಲಿ ಇಲ್ಲದ್ದರಿಂದ ದಿನಕ್ಕೊಂದು ಬೊಂಬು ಮುರಿದು, ಲಾಟೀನು ಪುಡಿಪುಡಿಯಾಗಿ, ಅರಣ್ಯಿಲಾಖೆಗೆ ಲುಕ್ಸಾನು ತಡೆಯಲಾಗದೆ ಲಾಟೀನು ಕಟ್ಟುವುದನ್ನು ಖೈದು ಮಾಡಿ........................

***

"ಜುಗಾರಿ ಕ್ರಾಸ್" ಪೂರ್ಣಚಂದ್ರ ತೇಜಸ್ವಿಯವರ ಮಹತ್ವದ ಕಾದಂಬರಿಕನ್ನಡ ಸಾಹಿತ್ಯ ಲೋಕದಲ್ಲಿ ಛಾಪು ಮೂಡಿಸಿದ ಒಂದು ವಿಶಿಷ್ಟ ಕಾದಂಬರಿ. ಕಾಡುಗಳ್ಳರ ಕಾಳದಂಧೆಗಳ ಕುರಿತು ಕೃತಿಯಲ್ಲಿ ತೇಜಸ್ವಿಯವರು ಮಾತನಾಡುತ್ತಾ ಪ್ರಾಕೃತಿಕ ಸಂಪತ್ತನ್ನು ಕಾಪಾಡುವ ಬಗೆಗೆ ತಮ್ಮದೇ ನೆಲೆಯಲ್ಲಿ ಚಿಂತನೆ ನಡೆಸುತ್ತಾರೆ. ತೇಜಸ್ವಿಯವರೇ ಹೇಳಿಕೊಂಡಿರುವಂತೆ ಒಂದು ಕ್ಷಣಕ್ಕೆ ರೊಮ್ಯೋಂಟಿಕ್ ಥ್ರಿಲ್ಲರ್ ಎಂದೆನಿಸಬಹುದಾದ ಕೃತಿ ಬದಲಾಗುತ್ತಿರುವ ಸನ್ನಿವೇಶಗಳು ಉಂಟುಮಾಡುತ್ತಿರುವ ಅವಾಂತರ ಅಪಾಯಗಳನ್ನೂ, ಅಭಿವದ್ಧಿಶೀಲ ರಾಷ್ಟ್ರಗಳ ಪ್ರದೇಶಗಳಲ್ಲಿ ಜಾಗತಿಕ ಪರಿಣಾಮಗಳು ಸೃಷ್ಟಿಸಬಹುದಾದ ತಲ್ಲಣಗಳನ್ನೂ ಎಳೆಎಳೆಯಾಗಿ ಪ್ರೇಕ್ಷಕರ ಮುಂದಿಡುತ್ತಾ ಹೋಗುತ್ತದೆ. ಕೇವಲ 24 ಗಂಟೆಗಳ ಅವಧಿಯ ಕಥೆ ನಿಜವಾಗಿಯೂ ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯಬಹುದಾದ ವಾಸ್ತವಿಕ ಸಾಮಾಜಿಕ ಕಾದಂಬರಿ. ಕುವೆಂಪು ಅವರ ಕಾನೂರು ಹೆಗ್ಗಡತಿ, ಕಾರಂತರ ಮರಳಿ ಮಣ್ಣಿಗೆ ಕಾಲದ ಸಹ್ಯಾದ್ರಿ ಕಾಡುಗಳಿಗೂ ಇವತ್ತಿನ ಪರಿಸ್ಥಿತಿಗೂ ಇರುವ ಅಜಗಜಾಂತರ ವ್ಯತ್ಯಾಸಕ್ಕೆ ಕಾದಂಬರಿಯೇ ಉದಾಹರಣೆ.  ಮಲೆನಾಡಿನ ದಟ್ಟ ಕಾಡೇ ಕಾಳ ದಂಧೆಗಳ ತವರೂರಾಗುವುದು, ವ್ಯವಹಾರಗಳ ಜೊತೆಜೊತೆಗೇ ಡ್ರಗ್ಸ್ ಮಾಫಿಯಾ ಜೂಜು ಸೇರಿ, ಏಲಕ್ಕಿ ಮಾರಲೆಂದು ಹೊರಟ ವಿದ್ಯಾವಂತ ರೈತ ದಂಪತಿ ಸುರೇಶ ಮತ್ತು ಗೌರಿ ವ್ಯೆಹದಲ್ಲಿ ಸಿಕ್ಕಿಹಾಕಿಕೊಳ್ಳುವುದು, ಜುಗಾರಿ ಕ್ರಾಸ್ ಎಂಬ ಊರಿನಲ್ಲಿ ನಡೆಯುತ್ತಿದ್ದ ರಹಸ್ಯ ಕಾಳ ಧಂಧೆಯ ಕುರಿತು ಹೇಳುತ್ತಾ ಒಬ್ಬ ಅಮಾಯಕ ಸುರೇಶ ತನಗೆ ಗೊತ್ತಿಲ್ಲದಂತೆ ಕಾಳ ಧಂಧೆಗೆ ಸೇರಿಬಿಡುತ್ತಾನೆ. ಹಾಗೆ ಸೇರುವ ಮುನ್ನ ಹಾಗೂ ತದನಂತರದ ಸರಣಿ ಕಥೆಗಳನ್ನು ಅತ್ಯಂತ ಕ್ರೀಯಾಶೀಲತೆಯಿಂದ ಹೆಣೆದಿದ್ದಾರೆ. ಸುರೇಶ ಮತ್ತು ಗೌರಿ ಕಾಳ ಧಂಧೆಗೆ ಆಕಸ್ಮಿಕ ವಾಗಿ ಸಿಕ್ಕು ಪಟ್ಟ ಕಷ್ಟಗಳು ಹಾಗೂ ಅದರಿಂದ ಹೊರಬಂದ ಪರಿ ಕಥೆಯ ಸಾರಾಂಶ
ಹುಸಿ ಕ್ರಾಂತಿಕಾರಿ ಗಂಗೂಲಿ, ಅರವತ್ತು ಸಾವಿರ ಲಂಚ ಕೊಟ್ಟು ಅದನ್ನು ಗಿಟ್ಟಿಸಲು ಪೇಚಾಡುವ ಇಕ್ಬಾಲ್, ಇಪ್ಪತ್ತು ರೂಪಾಯಿಗೂ ಖೂನಿ ಮಾಡಬಲ್ಲ ಜಾನಿ ಹೆನ್ರಿ, ಅನಧಿಕೃತವಾಗಿ ಚೆಕ್ಗಳನ್ನು ಕ್ಯಾಷ್ ಮಾಡುವ ಶೇಷಪ್ಪ ಪಾತ್ರಗಳಂತೆ ಕಾಣದೆ ಪ್ರೇಕ್ಷಕರ ನಡುವೆ ಇರುವ ಸಹಜ ವ್ಯಕಿಗಳಂತೆ ಗೋಚರಿಸುತ್ತಾರೆ.
ಪರಸ್ಪರ ವೈರುಧ್ಯಗಳನ್ನೇ ಅದೃಶ್ಯ ತಂತುಗಳಿಂದ ಸಂಯೋಜಿಸುತ್ತ ಸಾಗುವ ಕಾದಂಬರಿಯೊಂದು ವಿಚಿತ್ರ ಮತ್ತು ಅಸಾಧಾರಣ ಕೃತಿ. ಜೀವನದ ವಿರಾಟ್ ಅರ್ಥ ಹೀನತೆಯ ಪರಿಧಿಯೊಳಗೆ ಅದರ ಅರ್ಥಪೂರ್ಣತೆಯನ್ನು ಅನ್ವೇಷಿಸುತ್ತದೆ. ಅಸಂಗತ ಘಟನಾವಳಿಗಳ ಸರಣಿಯನ್ನೇ ಸುಸಂಗತ ಕಥೆಯನ್ನಾಗಿ ನೇಯುತ್ತದೆ. ಚರಿತ್ರೆಯ ಅಪಹಾಸ್ಯವನ್ನು ತಿಳಿಹಾಸ್ಯ ಮತ್ತು ವಿನೋದಗಳಿಂದ ಪ್ರತಿರೋಧಿಸುತ್ತದೆ. ಶತಮಾನದ ಕಥೆಯನ್ನು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರತಿಮಿಸುತ್ತದೆ. ಜೀವನವನ್ನು ಎದುರಿಸಲು ಆಶಾವಾದ, ನಿರಾಶವಾದ ಇವುಗಳೆಲ್ಲವನ್ನೂ ಮೀರಿದ ಗಂಭೀರ ಎದೆಗಾರಿಕೆಯನ್ನು ಇದು ನಮಗೆ ತೋರಿಸಿ ಕೊಡುತ್ತದೆ
ಸಂಪೂರ್ಣ ಕೃತಿಯು ಮಲೆನಾಡಿನ ಆಡುಭಾಷೆಯಲ್ಲೆ ಬರೆಯಲ್ಪಟ್ಟಿದ್ದು ಓದುವರಿಗೆ ಬಹಳ ಮನರಂಜನೆಯನ್ನು ಕೊಡುತ್ತದೆ. ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಮಲೆನಾಡಿನ ಜೇವನ, ಪರಿಸರ ಹಾಗು ಅಲ್ಲಿನ ಕಷ್ಟ-ಸುಖಗಳನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ. ಕಥೆಯು ಕಾಲ್ಪನಿಕವಾದರೂ, ನೈಜತೆಗೆ ಬಹಳ ಹತ್ತಿರವಾಗಿದೆ. ಮಲೆನಾಡಿನ ದಟ್ಟ ಕಾಡುಗಳಲ್ಲಿ ಬದುಕುತ್ತಿರುವ ಜನರ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕೃತಿಯಲ್ಲಿ ಚಿತ್ರಿಸಲಾಗಿದೆ. ಕೃತಿ ಮಲೆನಾಡಿನಲ್ಲಿ ನಡೆಯುತ್ತಿರುವ ಅರಣ್ಯನಾಶದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.
ಒಟ್ತಾರೆ ಇದೊಂದು ಸಾಹಸಮಯ ಪತ್ತೇದಾರಿ ಕಾದಂಬರಿಯಂತಿದ್ದು  ಕಾದಂಬರಿಯನ್ನು ಓದುತ್ತಾ ಹೋದಂತೆ ಕಲ್ಪನಾ ಜಗತ್ತಿನಲ್ಲಿ ನಿಂತು ನೋಡುತ್ತಿರುವಂತೆ ತಾನು ಅದರಲ್ಲಿನ ಪಾತ್ರವೆಂಬಂತೆ ಓದುಗನಿಗೆ ಭಾಸವಾಗುತ್ತದೆ