Tuesday, February 20, 2018

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 89

ಜೈನ ಕಾಶಿ ಶ್ರವಣಬೆಳಗೊಳ
ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಪುಟ್ಟ ಗ್ರಾಮ ಶ್ರವಣಬೆಳಗೊಳ ಅಲ್ಲಿನ ಬಾಹುಬಲಿ ಮೂರ್ತಿಯಿಂದ ವಿಶ್ವ ವಿಖ್ಯಾತವಾಗಿದೆ. ಇದು  ಐತಿಹಾಸಿಕ ಧಾರ್ಮಿಕ, ಪ್ರವಾಸಿ ತಾಣವಾಗಿದ್ದು ಜೈನ ಧರ್ಮೀಯರ ಪಾಲಿಗೆ ಪವಿತ್ರ ಭೂಮಿ.

ಶ್ರವಣ ಬೆಳಗೊಳದ ವಿಂಧ್ಯಗಿರಿಯ ಮೇಲೆ ಕಡೆಯಲಾಗಿರುವ ಮೂರ್ತಿಯನ್ನು (58.8 ಅಡಿ ಎತ್ತರ) ಚಾವುಂಡರಾಯನು  ಕ್ರಿ..973ರಲ್ಲಿ ಕೆತ್ತಿಸಿದನು.ಅರಿಷ್ಟ ನೇಮಿ ಎನ್ನುವ ಶಿಲ್ಪಿ ಇದನ್ನು ನಿರ್ಮಾಣ ಮಾಡಿದ್ದನು. ಶಿಲ್ಪಿಯು ಪ್ರಸಿದ್ಧ ಶಿಲ್ಪಿ ಜಕಣಚಾರಿಯ ಶಿಷ್ಯನೆ೦ದು ಹೇಳಲಾಗಿದೆ. ವಿಂಧ್ಯಗಿರಿಯ ಬೆಟ್ಟದ ಮೇಲಕ್ಕೆ ಹೋಗಲು ಸುಮಾರು 700 ಮೆಟ್ಟಿಲುಗಳಿದ್ದು ವಿಂಧ್ಯಗಿರಿಯ ಎದುರಿನಲ್ಲೇ ಚಿಕ್ಕಬೆಟ್ಟ ಅಥವಾ ಚಂದ್ರಗಿರಿ ಬೆಟ್ಟವಿದ್ದು ಇಲ್ಲೂ ಸಹ ಪ್ರಾಚೀನ ಬಸದಿಗಳಿವೆ.



ಶ್ರವಣಬೆಳಗೊಳದಲ್ಲಿನ ಶಿಲಾಲೇಖಗಳ ಮೇಲಿಂದ ಚಂದ್ರಗುಪ್ತ ಮೌರ್ಯ ತನ್ನ ಗುರುವಾದ ಭದ್ರಬಾಹುವಿನ ಸಂಗಡ ಅಲ್ಲಿಗೆ ಬಂದು ಸಲ್ಲೇಖನ ವ್ರತವನ್ನು ಹಿಡಿದು ಮರಣವನ್ನು ಅಪ್ಪಿದನೆಂದು ತಿಳಿದುಬರುತ್ತದೆ.

ಶ್ರವಣಬೆಳಗೊಳದಲ್ಲಿ ಜೈನ ಮಠವಿದ್ದು, ಮಠದ ಪಕ್ಕದಲ್ಲಿಯೇ ಪ್ರಾಚೀನವಾದ ಭಂಡಾರಿ ಹುಳ್ಳ ಬಸದಿ ಹಾಗೂ ಚಂದ್ರನಾಥ ಸ್ವಾಮಿಯ ಬಸದಿಯಿದೆ.

ಶ್ರವಣಬೆಳಗೊಳದ ಬಾಹುಬಲಿಗೆ ಪ್ರತಿ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಬಾರಿ (2018) ರಲ್ಲಿ 88ನೇ ಮಹಾಮಸ್ತಕಾಭಿಷೇಕ ನಡೆಯುತ್ತಿದ್ದು ಫೆ.17ರಿಂದ ಫೆ.25ರವರೆಗೆ ವಿವಿಧ ರೀತಿಯ ಅಭಿಷೇಕಗಳು, ಪೂಜಾ ಕಾರ್ಯಕ್ರಮಗಳು ನೆರವೇರುತ್ತದೆ.

ಬೆಂಗಳೂರಿನಿಂದ ಸುಮಾರು 143ಕಿಮೀ ದೂರದಲ್ಲಿರುವ ಶ್ರವಣಬೆಳಗೊಳಕ್ಕೆ ರಸ್ತೆ ಹಾಗೂ ರೈಲು ಮಾರ್ಗದ ಮೂಲಕ ತಲುಪಬಹುದು.

***
ನನ್ನ ಹಾಗೆಯೆ

ಮೊನ್ನೆ ಮೊನ್ನೆ ನಡೆಯಿತಲ್ಲ ಬಾಹುಬಲಿಯ ಮಜ್ಜನ
ಬೆಟ್ಟದಲ್ಲಿ ಕೇಳಿತೊಂದು ಪುಟ್ಟ ಮಗುವು ಅಜ್ಜನ
ಈತನಾರು ತಾತ! ಇಲ್ಲಿ ನಿಂತು ನೋಡುತಿರುವನು
ಇಂದ್ರಗಿರಿಯ ನೆತ್ತಿಯಲ್ಲಿ ಏನು ಮಾಡುತಿರುವನು?’
ಇವನೆ ಬಾಹುಬಲಿಯು ಮಗು! ಧೀರತನದ ಮೂರ್ತಿಯು!
ನುಡಿಯ ಹೊಳೆಗಳಲ್ಲಿ ತುಂಬಿ ಹರಿವುದಿವನ ಕೀರ್ತಿಯು
ಹತ್ತುವವರ ಇಳಿಯುವವರ ನಿಂತು ನೋಡುತಿರುವನು
ನಿಲ್ಲುವವರ ನಡೆಯುವವರ ಲೆಕ್ಕ ಮಾಡುತಿರುವನು
ಬಳಲಿದವರಿಗೆಲ್ಲ ಇಲ್ಲಿ ಕೈಯ ನೀಡುತಿರುವನು
ಇಲ್ಲಿ ಏಕೆ ಬಂದು ನಿಂತ? ಇಷ್ಟು ದೂರ! ಎತ್ತರ!
ಭಯವಾಗದೆ ಇವನಿಗಿಲ್ಲಿ! ಯಾರು ಇಲ್ಲ ಹತ್ತಿರ!’
ಇವನಿಗೆಲ್ಲಿ ಭಯವು ಮಗು ಅಭಯ ಮೂರ್ತಿ ಈತನು
ಭರತ ಚಕ್ರವರ್ತಿ ಇವನ ಅಣ್ಣ ಒಮ್ಮೆ ಆತನು
ಹಮ್ಮಿನಲ್ಲಿ ಬಂದು ಸೆಣಸಿ ತಮ್ಮನಲ್ಲಿ ಸೋತನು
ಗೆದ್ದ ರಾಜ್ಯ ಮರಳಿಸುತ್ತ ನುಡಿದನೊಂದು ಮಾತನು
ನೀನು ಸೋತು ಗೆದ್ದೆ ಅಣ್ಣ! ನಾನು ಗೆದ್ದು ಸೋತೆನು!
ಬೆಟ್ಟ ಕರೆಯುತಿಹುದು ನನ್ನ ಮುಗಿಲು ತನ್ನ ಹತ್ತಿರ
ಯಾವುದುಂಟು ಅಣ್ಣ ಇಲ್ಲಿ ಜೀವವೇರದೆತ್ತರ?
ತಪಸ್ಸೊಂದೆ ತಿಳಿವುದೊಂದೆ ಹುಟ್ಟು ಸಾವಿನುತ್ತರ.
ನಿಂತು ಹಾಗೆ ನಿಂತುಕೊಂಡು ಘೊರ ತಪವ ಮಾಡಲು
ಹುಟ್ಟು ಸಾವಿನಾಚೆಗಿರುವ ಹೊಳೆವ ಹಾದಿ ನೋಡಲು
ಬಿಸಿಲು ಬಂತು ನೆರಳು ಬಂತು ಗಾಳಿ ಬಿಚ್ಚಿ ಬೀಸಿತು
ಒಮ್ಮೆ ಹಸಿರು ಒಮ್ಮೆ ಹೊನ್ನು ಹಚ್ಚಡವನು ಹಾಸಿತು
ಸೂರ್ಯನೊಮ್ಮೆ ಚಂದ್ರನೊಮ್ಮೆ ಸುತ್ತು ಹಾಕಿ ನಡೆದರು
ದೀಪದಂತೆ ನಿಂತ ಇವಗೆನಮೋಎಂದು ನುಡಿದರು
ಇಷ್ಟು ಜನರು ಇಲ್ಲಿಗಿಂದು ಏಕೆ ಬಂದು ನೆರೆದರು?
ಬಾಹುಬಲಿ’’ ‘‘ಬಾಹುಬಲಿ’’ ಎಂದು ಕರೆಯುತಿರುವರು
ಮಗೂ, ಇಂದು ಇವನಿಗಿಲ್ಲಿ ಹಾಲಿನಲ್ಲಿ ಸ್ನಾನವು
ದಾರಿಯಲ್ಲಿ ದಣಿದ ಇವರಿಗೆ, ಇವನದೊಂದೆ ಧ್ಯಾನವು
ಮುದ್ದು ಮುಖದಿ ಮುಗುಳ್ನಕ್ಕು ಸಿದ್ಧನಾಗಿ ನಿಂತಿಹ
ದುಗ್ಧ ಹಾಸದಲ್ಲಿ ನಲಿವ ಮುಗ್ಧ ಮಗುವಿನಂತಿಹ
ತಾತ,
ಎರೆವ ಮುಂಚೆ ಎಣ್ಣೆ ಹಚ್ಚಿ ಅಮ್ಮ ನನಗೆ ಹೀಗೆಯೇ
ನಿಲ್ಲಿಸುವಳು. ಬಾಹುಬಲಿಯು ಕೂಡ ತನ್ನ ಹಾಗೆಯೆ
ನಿಂತು ಕಾಯುತಿರುವ ಕಣ್ಣು ತೆರೆದು ಮೊದಲ ಚೆಂಬಿಗೆ!’
ಗೊಮ್ಮಟೇಶ ನಕ್ಕುಬಿಟ್ಟ ಕಂಡು ಮುಗ್ಧ ನಂಬಿಗೆ
-ಸುಬ್ಬಣ್ಣ ರಂಗಣ್ಣ ಎಕ್ಕುಂಡಿ
***

ಜೈನ ಧರ್ಮದ ಮೊದಲನೆಯ ತೀರ್ಥಂಕರರು ವೃಷಭನಾಥ, ಅವನಿಗೆ ಸುನಂದ ಮತ್ತು ನಂದಾ ಯೆಂಬ ಇಬ್ಬರು ಪತ್ನಿಯರು.ಇವರಿಂದ ನೂರುಜನ ಗಂಡು ಮಕ್ಕಳೂ ಮತ್ತು ಇಬ್ಬರು ಹೆಣ್ಣು ಮಕ್ಕಳೂ ಜನಿಸಿದರುಬಾಹುಬಲಿಯ ತಾಯಿ ಸುನಂದೆ. ಕಾಲ ಸರಿದಂತೆ ವೃಷಭನಾಥನಿಗೆ ವೈರಾಗ್ಯ ಉಂಟಾಗುವುದು. ಆಗ ಆತನು  ಮಕ್ಕಳಿಗೆ ರಾಜ್ಯವನ್ನು ಹಂಚಿ ತಪಸ್ಸಿಗೆ ತೆರಳುತ್ತಾನೆ.

ಆಗ ಸಹಜವಾಗಿ ಹಿರ್ಯ ಮಗನಾದ ಭರತ ರಾಜ್ಯದ ಅರಸನಾಗುತ್ತಾನೆ. ಆತ ತಾನು ಚಕ್ರವರ್ತಿ ಎನಿಸಿಕೊಳ್ಳಬೇಕೆಂದು ಬಯಕೆ ಹೊತ್ತು ದಿಗ್ವಿಜಯ ಕೈಗೊಂಡನು. ನಾನಾ ದೇಶಗಳ, ಕೋಶಗಳ ಗೆದ್ದ ಬಳಿಕ ಅವನು ಪುನಃ ತನ್ನ ರಾಜ್ಯ ಪ್ರವೇಶಿಸುವಾಗ ಅವನ ಬಳಿಯಲ್ಲಿದ್ದ ಕ್ರರತ್ನವು ಪುರ ಪ್ರವೇಶ ಮಾಡಲಿಲ್ಲಆಗ ಭರತನ ರಾಜಪುರೋಹಿತರು ಭರತ ಬೇರೆಲ್ಲಾ ರಾಜರನ್ನು ಜಯಿಸಿದ್ದರೂ ತನ್ನ ಸೋದರರನ್ನು ಜಯಿಸಲಿಲ್ಲ, ಕಾರಣ ಚಕ್ರರತ್ನವು ಪುರ ಪ್ರವೇಶ ಮಾಡಿಲ್ಲ ಎನ್ನುತ್ತಾರೆ.


ಆಗ ಭರತ ತನ್ನೆಲ್ಲಾ ಸಹೋದರರಿಗೆ ಕಾಣಿಕೆಗಳೊಡನೆ ಬಂದು ತನಗೆ ಶರಣಾಗುವಂತೆ ಕರೆ ಕಳಿಸುತ್ತಾನೆ. ಉಳಿದೆಲ್ಲ ಸೋದರರೂ ತಾವು ಭರತನನ್ನು ಎದುರಿಸಲಾಗುವುದಿಲ್ಲವೆಂದು ತಿಳಿದು ಅವರ ತಂದೆಯಾದ ವೃಷಭನಾಥರ ಬಳಿ ಹೋಗಿ ದೀಕ್ಷೆ ಪಡೆಯುತ್ತಾರೆ. ಆದರೆ ಬಾಹುಬಲಿ ಮಾತ್ರವೇ ' ತ೦ದೆಯ ಹೊರೆತು ಇನ್ನಾರಿಗೂ ತಲೆ ಬಾಗುವುದಿಲ್ಲ, ತಂದೆಯಿಂದ ಪಡೆದ ರಾಜ್ಯವನ್ನು ನಾನು ಬಿಟ್ಟುಕೊಡುವುದಿಲ್ಲ. ಇದಕ್ಕಾಗಿ ಯುದ್ಧಕ್ಕೆ ಸಹ ಸಿದ್ಧನಿದ್ದೇನೆ' ಎಂದು ಹೇಳಿ ಕಳಿಸುತ್ತಾನೆ.
ಭರತ ತಮ್ಮನ ಆಹ್ವಾನ ಸ್ವೀಕರಿಸುತ್ತಾನೆ. ಯುದ್ಧಕ್ಕೆ ಸೈನ್ಯಗಳು ಸಿದ್ದವಾಗುತ್ತದೆ. ಆದರಠೀಗೆ ಯುದ್ಧ ಪ್ರಾರಂಭಕ್ಕೆ ಮುನ್ನ ಮಂತ್ರಿಗಳು ಸಮಾಲೋಚನೆ ನಡೆಸಿ ಭರತ, ಬಾಹುಬಲಿ ಇಬ್ಬರೂ ವಜ್ರದೇಹಿಗಳಾಗಿರುವುದರಿ೦ದ ವೃಥಾ ಸ್ಯೆನ್ಯ ನಾಶವಾಗುವುದಲ್ಲದೆ ಇಬ್ಬರಿಗೂ ಏನೂ ಆಗುವುದಿಲ್ಲ. ಆದ್ದರಿ೦ದ ಇಬ್ಬರ ಮಧ್ಯೆಯೆ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧ ನಡೆಯಲಿ ಎಂದು ತೀರ್ಮಾನಿಸಿದರು.

ಕಣ್ಣ ರೆಪ್ಪೆಯಾಡಿಸದೆ ಒಬ್ಬರನ್ನೊಬ್ಬರು ನೋಡುವುದು ದೃಷ್ಟಿಯುದ್ಧ. ಒಬ್ಬರಿಗೊಬ್ಬರು ಮುಖಕ್ಕೆ ತಾಗುವ೦ತೆ ನೀರೆರೆಚುವುದು ಜಲಯುದ್ಧ. ಪರಸ್ಪರ ಬಾಹು ಯುದ್ಧ ಜಟ್ಟಿಕಾಳಗ ವಾಡುವುದು ಮಲ್ಲಯುದ್ಧ. ಅಣ್ಣ ತಮ್ಮಂದಿರು ಸರಿಸಮನಾಗಿ ಮೂರೂ ಯುದ್ಧಗಳಲ್ಲಿ ಹೋರಾಡಿದರು. ಆದರೆ ಅಂತಿಮವಾಗಿ ಅಪ್ರತಿಮ ವೀರನಾಗಿದ್ದ ಬಾಹುಬಲಿಯು ಎಲ್ಲಾ ಯುದ್ಧಗಳನ್ನು ಗೆದ್ದನು. . ಅಣ್ಣ ಭರತನನ್ನು ಮಲ್ಲಯುದ್ಧದಲ್ಲಿ ಸೋಲಿಸಿದ ಬಾಹುಬಲಿ ಅವನನ್ನು ತನ್ನ ತೋಳುಗಳಿಂದ ಮೇಲೆತ್ತಿ ಕೆಳಕ್ಕೆಸೆಯುವುದರಲ್ಲಿದ್ದನು. ಆದರೆ ಕ್ಷಣದಲ್ಲಿ ಬಾಹುಬಲಿಗೆ ವೈರಾಗ್ಯ ಉದಯಿಸಿತ್ತು. ತಾನು ಹೀಗೆ ಮಾಡಬಾರದೆಂದೆನಿಸಿ  ಭರತನನ್ನು ನಿಧಾನವಾಗಿ ಕೆಳಗಿಳಿಸಿದನು.

ಅವಮಾನಿತನಾದ ಭರತ ತನ್ನಲ್ಲಿದ್ದ ಚಕ್ರರತ್ನವನ್ನು ಬಾಹುಬಲಿಯ ಮೇಲೆ ಪ್ರಯೋಗಿಸಿದನು. ಆದರೆ ಚಕ್ರರತ್ನವು ಬಾಹುಬಲಿಗೆ ಮೂರು ಪ್ರದಕ್ಷಿಣೆ ಬಂದು ಅವನ ಬಲಭಾಗದಲ್ಲಿ ನಿಂದುಬಿಟ್ಟಿತು. ಬಾಹುಬಲಿ ವಿಜಯಿಯಾದನು. ಬಾಹುಬಲಿಗೆ ಎಲ್ಲರೂ ಜಯಕಾರ ಮಾಡಿದರು. ಆದರೆ ಬಾಹುಬಲಿ ರಾಜ್ಯ ಕೋಶಗಳನ್ನು ಆಳಲು ನಿರಾಕರಿಸಿದನುವೈರಾಗ್ಯವನ್ನು ತಾಳಿ ರಾಜ್ಯವನ್ನು ತೊರೆದು ತ೦ದೆ ವೃಷಭನಾಥರ ಬಳಿ ದೀಕ್ಷೆಯನ್ನು ಪಡೆದು ತಪಸ್ಸಿಗೆ ತೊಡಗಿದನು.

ಆದರೆ ಬಹುಕಾಲ ತಪಸ್ಸು ನಡೆಸಿದರೂ ಕೇವಲಜ್ಞಾನವನ್ನು ಪಡೆಯುವುದು ಬಾಹುಬಲಿಗೆ ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ 'ತಾನು ಅಣ್ಣನ ಭೂಮಿಯಲ್ಲಿ ನಿ೦ತಿರುವೆನೆ೦ಬ ಚಿ೦ತೆ' ಆಗಿತ್ತು. ಇದನ್ನು ಅರಿತ ಭರತನು ಬಾಹುಬಲಿಯತ್ತ ಧಾವಿಸಿ 'ನೀನು ನೆಲವನ್ನು ಗೆದ್ದು ನನಗೆ ನೀಡಿರುವೆ. ನಿನ್ನ ನೆಲವನ್ನು ನಾನು ಆಳುತ್ತಿದ್ದೇನೆ. ನೀನು ಮನದಲ್ಲಿರುವ ಶಂಕೆಯನ್ನು ತೊರೆದು ಬಿಡೆಂ’ ದು ಬೇಡಿದನು.

ನಂತರ ಬಾಹುಬಲಿಯು ನಿರ್ಮಲವಾದ ಮನದಿ೦ದ ತಪಸ್ಸನ್ನು ಮಾಡಿ ಕೇವಲಜ್ಞಾನ ಪಡೆದನು.


ಕರ್ನಾಟಕದ ಇತರೆಡೆಗಳಲ್ಲಿ ಬಾಹುಬಲಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೆರಡು ಗೊಮ್ಮಟೇಶ್ವರ ಮೂರ್ತಿಗಳಿವೆ. ಕ್ರಿ.ಶ. 1432ರಲ್ಲಿ ವೀರಪಾಂಡ್ಯ ಕಾರ್ಕಳದಲ್ಲಿ ಪ್ರತಿಷ್ಠಿಸಿದ ಮೂರ್ತಿ 42' ಎತ್ತರವಿದೆ.ವೇಣೂರಿನಲ್ಲಿ ಚಾವುಂಡರಾಯನ ವಂಶಸ್ಥನಾದ ತಿಮ್ಮರಾಜ ಕ್ರಿ.ಶ. 1604ರಲ್ಲಿ 35`ಎತ್ತರವಿರುವ ಇನ್ನೊಂದು ಮೂರ್ತಿಯನ್ನು ನಿಲ್ಲಿಸಿದ.

ಇತ್ತೀಚೆಗೆ ಗೊಮ್ಮಟೇಶ್ವರನ ಮತ್ತೊಂದು ಬೃಹನ್ ಮೂರ್ತಿಯನ್ನು ಧರ್ಮಸ್ಥಳದಲ್ಲಿ ಪ್ರತಿಷ್ಠಾಪಿಸಲಾಗಿದೆ.. ಈ ಮೂರ್ತಿ ಸುಮಾರು 48'ಗಳಷ್ಟು ಎತ್ತರವಿದ್ದು ಅದನ್ನು ಪೀಠದ ಮೇಲೆ ನಿಲ್ಲಿಸಿದಾಗ 60`ಗಳಷ್ಟು ಎತ್ತರದ ಅದ್ಭುತ ಶಿಲಾಪ್ರತಿಮೆಯಾಗಿದ್ದು ಕಂಗೊಳಿಸುತ್ತಿದೆ. ಈ ವಿಗ್ರಹವನ್ನು ರೂಪಿಸಿದ ಶಿಲ್ಪಿ ರಂಜಾಳ ಗೋಪಾಲ ಶೆಣೈ. ಕಾರ್ಕಳದಲ್ಲಿ ಈ ಮೂರ್ತಿ ಸಿದ್ದವಾಗಿದ್ದು ಧರ್ಮಸ್ಥಳದಲ್ಲಿ ಪ್ರತಿಷ್ಠಾಪಿಸಲಾಗಿದೆ.

 ಮೈಸೂರು ಜಿಲ್ಲೆ. ಕೃಷ್ಣರಾಜನಗರ ತಾಲ್ಲೂಕಿನ ಬಸ್ತಿ ಹಳ್ಳಿ ಎಂಬಲ್ಲಿರುವ ಸುಮಾರು 20` ಎತ್ತರವಿರುವ ಬಳಪದ ಕಲ್ಲಿನ ಒಂದು ಮೂರ್ತಿಯನ್ನು ವಿಷ್ಣುವರ್ಧನನ ಕಾಲದಲ್ಲಿ ಆತನ ದಂಡನಾಯಕ ಪುಣಿಸಮಯ್ಯ ಪ್ರತಿಷ್ಠಿಸಿದುದಾಗಿ ತೋರುತ್ತದೆ. ಮೈಸೂರು ತಾಲ್ಲೂಕಿನ ಗೊಮ್ಮಟಗಿರಿಯ ಮೇಲೆ ನಿಂತಿರುವ ಇನ್ನೊಂದು ಮೂರ್ತಿಯನ್ನು ಯಾರು ಯಾವಾಗ ಸ್ಥಾಪಿಸಿದರು ಎಂಬುದು ತಿಳಿಯದು. ಮದ್ದೂರು ತಾಲ್ಲೂಕಿನಲ್ಲಿ ಬಸ್ತಿತಿಪ್ಟೂರಿನ ಬಳಿ ಗುಡ್ಡ ಒಂದರ ಮೇಲೆ ನಿಂತಿರುವ ಮತ್ತೊಂದು ಗೊಮ್ಮಟೇಶ್ವರನ ಮೂರ್ತಿ ಈಚೆಗೆ ಪತ್ತೆಯಾಗಿದೆ.


Monday, February 05, 2018

ತಿರುಪತಿ ಎಂದರೆ ವೆಂಕಟೇಶ್ವರನಷ್ಟೇ ಅಲ್ಲ....!

ತಿರುಮಲ, ತಿರುಪತಿ ಎಂದರೆ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯವಿರುವ ಸ್ಥಳ ಎಂದಷ್ಟೇ ಬಹುತೇಕ ಜನರ ಭಾವನೆ. ವೆಂಕಟೇಶ್ವರ ದೇವಾಲಯವು ಅಲ್ಲಿನ ಪ್ರಧಾನ ಆಕರ್ಷಣೆಯೂ ಹೌದು, ಆದರೆ ತಿರುಮಲ ಬೆಟ್ಟ ಹಾಗೂ ತಿರುಪತಿ ನಗರದ ಸುತ್ತ ಮುತ್ತ ಸಾಕಷ್ಟು ಪ್ರಕೃತಿ ರಮಣೀಯ ತಾಣಗಳೂ ಇದೆ. ಜಲಪಾತಗಳು, ನದಿ ತೀರ, ವನ್ಯಜೀವಿಧಾಮ ಸೇರಿ ಅನೇಕ ಸುಂದರ ಪ್ರವಾಸಿ ಆಕರ್ಷಣೀಯ ತಾಣಗಳು ಅಲ್ಲಿದೆ. ಅಂತಹಾ ಕೆಲವು ತಾಣಗಳ ಪರಿಚಯ ಇಲ್ಲಿದೆ.

ತಲಕೋನ ಜಲಪಾತ
ತಲಕೋನ ಎಂದರೆ 'ಶಿಖರದ ತಲೆ' ಎನ್ನುವ ಅರ್ಥವಿದ್ದು ಇದು ತಿರುಮಲ ಪರ್ವತ ಶ್ರೇಣಿಗಳ ಆರಂಭದ ಹಂತೆ ಎನ್ನಲಾಗುತ್ತದೆ. ತಲಕೋನ ಜಲಪಾತ ತಿರುಪತಿ ಪಟ್ಟಣದಿಂದ 58 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ 235 ಕಿಮೀ ದೂರದಲ್ಲಿದೆ. ಇಲ್ಲ್ಲಿ ಸುಮಾರು 270 ಅಡಿಗಳಷ್ಟು ಎತ್ತರದಿಂದ ಜಲಧಾರೆ ಧುಮುಕುವುದನ್ನು ಕಾಣಬಹುದು. ಇದು ಆಂದ್ರ ಪ್ರದೇಶದಲ್ಲಿನ ಅತಿ ಎತ್ತರದ ಜಲಪಾತವೆನಿಸಿದ್ದು  ಚಿತ್ತೂರು ಜಿಲ್ಲೆ ಮತ್ತು ಆಂದ್ರ ಪ್ರದೇಶದ ಜನಪ್ರಿಯ ಪ್ರವಾಸಿ ತಾಣವಾಗಿದೆ.
ಇಲ್ಲಿನ ನೀರಿಗೆ ಔಷಧೀಯ ಗುಣವಿರುವುದಾಗಿ ಹೇಳಲಾಗುತ್ತದೆ. 1990 ರಲ್ಲಿ ಪ್ರದೇಶವನ್ನು ಜೈವಿಕ-ಖನಿಜ ರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು. ಇಲ್ಲಿ ಅನೇಕ ವಿಧದ ಅಪರೂಪದ ಸಸ್ಯಗಳು ಕಾಣಸಿಗುತ್ತದೆ. ಜತೆಗೆ ಇಲ್ಲಿ ಚಿರತೆ, ಭಾರತೀಯ ದೈತ್ಯ ಅಳಿಲು, ಮುಳ್ಳು ಹಂದಿ, ಚುಕ್ಕೆ ಜಿಂಕೆಗಳು ಇನ್ನೂ ಹಲವಾರು ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿಗಳನ್ನು ನಾವು ಕಾಣಬಹುದಾಗಿದೆ.
ಜಲಪಾತ ನೋಡಲು ನಡೆದುಕೊಂಡು ಹೋಗಬಹುದಾಗಿದ್ದು ಸುಮಾರು 240 ಮೀ. ಉದ್ದದ ರೋಪ್ ವೇ ಇದೆ. ಸುಮಾರು 35  ರಿಂದ 40 ಅಡಿಗಳಷ್ಟು ಎತ್ತರದಲ್ಲಿರುವ ಇದರ ಮೇಲೆ ನಡೆಯುವುದೆಂದರೆ ನಿಜಕ್ಕೂ ರೋಮಾಂಚಕ ಅನುಭವ. ರೂಪ್ ವೇ ನಲ್ಲಿ ನಡೆಯುವಾಗ  ಪಕ್ಷಿಗಳು ಮಂಗಗಗಳು ಕಾಣುತ್ತವೆ. ಜತೆಗೆ  ಬೃಹತ್ ಮರಗಳು ಇವೆ. ಜಲಪಾತದ ಬಳಿ ತಲುಪಲು  ಹಲವಾರು ಟ್ರಕ್ಕಿಂಗ್ ಮಾರ್ಗಗಳಿದ್ದು  ಪ್ರವಾಸಿಗರು ತಮಗೆ ಅನುಕೂಲವಾದ ಮಾರ್ಗವನ್ನು ಆಯ್ಕೆ ಮಾಡಬಹುದು. ಇನ್ನು  ಪರ್ವತಗಳ ನಡುವೆ ಹಲವಾರು ಗುಹೆಗಳು ಕೂಡ ಇದೆ.
ಜಲಪಾತದ ಸಮೀಪವೇ ಸಿದ್ದೇಶ್ವರ ಸ್ವಾಮಿ ದೇಗುಲವೂ ಇದೆ. ದೇಗುಲ ವನ್ನು 1811 ರಲ್ಲಿ ಅಪ್ಪ ಸ್ವಾಮಿ ಎನ್ನುವ ಭಕ್ತರೊಬ್ಬರು ನಿರ್ಮಾಣ ಮಾಡಿದರೆನ್ನಲಾಗುತ್ತದೆ. ದೇಗುಲದಿಂದ 2 ಕಿಮೀ ಚಾರಣದ ಮೂಲಕ ಪ್ರವಾಸಿಗರು ಜಲಪಾತವನ್ನು ತಲುಪಬಹುದಾಗಿದ್ದು ಚಾರಣವು ಬೆಟ್ಟ, ಕಾಡಿನ ನಡುವೆ ಜಾರು ರಸ್ತೆಯಲ್ಲಿ ಸುಮಾರು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದು ಜಲಪಾತಕ್ಕೆ ಸಮೀಪದ ಮೋಟಾರ್ ವಾಹನ ಮಾರ್ಗವಾಗಿದೆ.

ಪಾಪವಿನಾಶನಂ
ಪಾಪವಿನಾಶನಂ ತೀರ್ಥ, ಪಾಪವಿನಾಶನಂ ಜಲಪಾತ ಎನ್ನುವುದು ತಿರುಮಲ ಸುತ್ತಲಿನ ಇನ್ನೊಂದು ಸುಂದರ ಪ್ರವಾಸಿ ತಾಣ. ತಿರುಮಲದಿಂದ  2 ಮೈಲುಗಳಷ್ಟು ದೂರದಲ್ಲಿರುವ ಜಲಪಾತದ ರಮ್ಯ ನೋಟಕ್ಕೆ ಮರುಳಾಗದೆ ಇರಲಿಕ್ಕಾಗದು. ಇದರಲ್ಲಿ ಸ್ನಾನ ಮಾಡಿದ್ದಾದರೆ ಮಾಡಿದ್ದ ಪಾಪವೆಲ್ಲವೂ ನಾಶವಾಗುತ್ತದೆ ಎನ್ನುವುದು ಇಲ್ಲಿ ಬರುವ ಭಕ್ತರ ನಂಬಿಕೆಯಾಗಿದೆ. ಇನ್ನು ಇಲ್ಲಿಗೆ ಸಮೀಪದಲ್ಲಿರುವ ಅಣೆಕಟ್ಟೆ, ಜಲಾಶಯದಿಂದ ಇಲ್ಲಿಗೆ ಸದಾ ಕಾಲ ನೀರು ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ.
ಇನ್ನು ಅಣೆಕಟ್ಟೆಯಲ್ಲಿ ಹಲವು ಸುಂದರ ಮೀನುಗಳನ್ನು ಸಾಕಲಾಗಿದೆ. ಜತೆಗೆ ಅಲ್ಲೇ ಸುತ್ತಲಿನ ಪ್ರದೇಶದಲ್ಲಿ ಹಲವಾರು ಉದ್ಯಾನವನಗಳೂ ಇದೆ. ಪ್ರವಾಸಿಗರು ತಾವು ಉದ್ಯಾನದಲ್ಲಿ ವಿಹರಿಸುವ ಮೂಲಕ ಪ್ರಕೃತಿ ಮಡಿಲಿನಲ್ಲಿ ಆನಂದಾನುಭೂತಿ ಹೊಂದಬಹುದು.
ಪರ್ವತದ ಕೆಳಗೆ ಹರಿಯುವ ಹಲವಾರು ಶುದ್ಧ ನೀರಿನ ತೊರೆಗಳು ಇದ್ದು ಸಮ್ಮೋಹನಗೊಳಿಸುವ ನೈಸರ್ಗಿಕ ಸೌಂದರ್ಯವನ್ನು ಹೊಂದಿವೆ ಇನ್ನು ಜಲಪಾತದ ಬಳಿ ತಲುಪಲು ಪ್ರಕೃತಿಯ ಮಧ್ಯೆ ಕಲ್ಲಿನ ಜಾಡುಗಳ ಮೇಲೆ ನಡೆಯುವುದು ಒಂದು ಉಲ್ಲಾಸಕರ ಅನುಭವ ಆಗಿದೆ.

ಕಪಿಲ ತೀರ್ಥ
ಕಪಿಲ ತೀರ್ಥ ಅಥವಾ ಕಪಿಲೇಶ್ವರ ಸ್ವಾಮಿ ದೇವಸ್ಥಾನ ತಿರುಪತಿ ಪಟ್ಟಣದಿಂದ 5.5 ಕಿಮೀ ದೂರದಲ್ಲಿದೆ.   ಇದೊಂದು ಶಿವನ ದೇಗುಲವಾಗಿದ್ದು ಕಪಿಲ ಮುನಿ ಇಲ್ಲಿ ಶಿವನನ್ನು ಪ್ರತಿಷ್ಠಾಪನೆ ಮಾಡಿದನೆನ್ನುವ ನಂಬಿಕೆ ಇದೆ ದೇವಾಲಯವು ತಿರುಮಲ  ಪರ್ವತದ ಗುಹೆಯ ಪ್ರವೇಶದ್ವಾರದಲ್ಲಿದೆ. ಇಲ್ಲಿ ಪರ್ವತದ ಮೇಲಿನಿಂದ ಬೀಳುವ ನೀರ ಧಾರೆ ನೇರವಾಗಿ ದೇಗುಲದ ಪುಷ್ಕರಣಿಗೆ ಬೀಳುವುದನ್ನು ಕಾಣುತ್ತೇವೆ. ಇದನ್ನು 'ಕಪಿಲ ತೀರ್ಥ' ಎನ್ನಲಾಗುತ್ತದೆ. ನಾಲ್ಕನೇ ಶತಮಾನದಲ್ಲಿ ಪಲ್ಲವರು ದೇಗುಲ ಕಟ್ಟಿಸಿದ್ದರೆನ್ನಲಾಗಿದೆ. ದೇಗುಲವು ದ್ರಾವಿಡ ಶೈಲಿಯಲ್ಲಿದ್ದು ಪ್ರವೇಶದ್ವಾರದಲ್ಲಿನ ಸುಂದರ ನಂದಿ ವಿಗ್ರಹವು ಕಲೆ, ವಾಸ್ತು ಶಿಲ್ಪ ಪ್ರಿಯರನ್ನು ತನ್ನತ್ತ ಆಕರ್ಷಿಸುತ್ತದೆ.

ಆಕಾಶಗಂಗೆ
ಆಕಾಶ ಗಂಗೆ ಅಥವಾ ಆಕಾಶ ಗಂಗಾ ಎನ್ನುವುದು ತಿರುಮಲ ಪರ್ವತ ಸಾಲಿನ ಇನ್ನೊಂದು ಸುಂದರ ಜಲಪಾತ. ತಿರುಮಲದಿಂದ ಸುಮಾರು ಒಂದೂವರೆ ಮೈಲು ಅಂತರದಲ್ಲಿ ಪ್ರಕೃತಿ ರಮ್ಯ ತಾಣವಿದ್ದು ಇಲ್ಲಿನ ನೀರು ಸಹ ಅತ್ಯಂತ ಶುದ್ದವಾಗಿರುವುದು, ಆರೋಗ್ಯದಾಯಕವಾಗಿರುವುದು ವಿಶೇಷ. ಪ್ರವಾಸಿಗರು ಆಕಾಶಗಂಗೆ ಜಲಪಾತಕ್ಕೆ ಇಳಿಯಲು ಮೆಟ್ಟಿಲುಗಳಿದ್ದರೂ ಮಳೆಗಾಲದ ಸಮಯದಲ್ಲಿ ಹೆಚ್ಚಿನ ರಭಸವಿರುವ ಕಾರಣ ಮೆಟ್ಟಿಲಿನಲ್ಲಿಳಿಯಲು ಅವಕಾಶಗಳಿರುವುದಿಲ್ಲ. ಇಲ್ಲಿ ಜಲಪಾತದ ಪಕ್ಕದಲ್ಲಿಯೇ ಅಂಜನಾದೇವಿ ಸನ್ನಿಧಿಯೂ ಇದ್ದು ಆಂಜನೇಯನ ತಾಯಿಯಾದ ಅಂಜನಾದೇವಿ ಇಲ್ಲಿ ತಪಸ್ಸಾಚರಿಸಿದ್ದಳು ಎನ್ನಲಾಗುದೆ. ಒಟ್ಟಾರೆ ಇದೊಂದು ಪ್ರಕೃತಿ ಪ್ರಿಯ ಪ್ರವಾಸಿಗರ ಮೆಚ್ಚಿನ ತಾಣವೆನ್ನುವುದು ಸತ್ಯ


ಶಿಲಾತೋರಣ
ತಿರುಮಲ ಬೆಟ್ಟದ ದೇವಾಲಯದಿಂದ ಒಂದು ಕಿಮೀ. ದೂರದಲ್ಲಿರುವ ಇಲ್ಲಿ ಬಂಡೆಗಳು ಕಮಾನಿನ ಆಕಾರ ತಳೆದಿದೆ. ಇವು 8 ಮೀ. ಅಗಲ 3 ಮೀ. ಎತ್ತರವನ್ನು ಹೊಂದಿದ್ದು ಇವು ನೈಸರ್ಗಿಕವಾಗಿ ರೂಪುಗೊಂಡ ತೋರಣದಂತಹಾ ಆಕೃತಿಯಾಗಿದೆ. ಸುಮಾರು 2500 ವರ್ಷಗಳಷ್ಟು ಹಳೆಯ ಶಿಲಾ ರಚನೆಗಳು ಇದಾಗಿದ್ದು ನೈಸರ್ಗಿಕ ಶಿಲೆಗಳೇ ತೋರಣದ ರೀತಿ ಜೋಡಿಸಲ್ಪಟ್ಟಿವೆ ಎನ್ನುವುದು ವಿಶೇಷ. ಸಾಕಷ್ಟು ಹಿಂದೆ ಪ್ರಾಕೃತಿಕ ಸವಕಳಿ ಉಂಟಾದ ಘಟ್ಟದಲ್ಲಿ ತಿರುಮಲದ ಪರಿಸರದಲ್ಲಿ ರೂಪುಗೊಂಡದ್ದೇ ಶಿಲಾತೋರಣ ಅಥವಾ ಶಿಲಾ ಸೇತು. ಇದು ತಿರುಮಲ ಪ್ರವಾಸಿಗರ ಇನ್ನೊಂದು ಮುಖ್ಯ ಆಕರ್ಷಣೀಯ ತಾಣ. ಸುಂದರ, ವಿಸ್ತಾರ ಉದ್ಯಾನವನ ಜತೆಗೆ ಚಕ್ರತೀರ್ಥ ಎಂದು ಕರೆಯಲ್ಪಡುವ ಕೊಳವೊಂದರ ಪಕ್ಕದಲ್ಲಿ ಶಿಲಾತೋರಣವಿದೆ.

ಚಕ್ರ ತೀರ್ಥ
ಚಕ್ರ ತೀರ್ಥ ತಿರುಮಲ ದಲ್ಲಿನ ಒಂದು ಪ್ರಸಿದ್ಧ ಕೊಳವಾಗಿದ್ದು, ಇದು ಶಿಲಾತೋರಣದ ಪಕ್ಕದಲ್ಲಿದೆ. ಸ್ಥಳದಲ್ಲಿ ಸ್ವಯಂಭು ಲಿಂಗವಿದ್ದು  ತಿರುಪತಿಯಲ್ಲಿ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಇದೂ ಒಂದಾಗಿದೆ. ವಿಷ್ಣುವಿನ ಸುದರ್ಶನ ಚಕ್ರ ಇಲ್ಲಿ ಬಿದ್ದ ಕಾರಣದಿಂದ ಕೊಳಕ್ಕೆ ಚಕ್ರ ತೀರ್ಥ ಎನ್ನುವ ಹೆಸರಾಗಿದೆ.

ಶ್ರೀ ವೆಂಕಟೇಶ್ವರ ಜೈವಿಕ ಪಾರ್ಕ್
ಶ್ರೀ ವೆಂಕಟೇಶ್ವರ ಜೈವಿಕ ಪಾರ್ಕ್ 1987 ಸೆಪ್ಟೆಂಬರ್ 29ರಂದು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಯಿತು. 5,532 ಎಕರೆ ಪ್ರದೇಶದಲ್ಲಿ ಜೈವಿಕ ಪಾರ್ಕ್ ವ್ಯಾಪಿಸಿಕೊಂಡಿದೆ. ಪಾರ್ಕ್ ನಲ್ಲಿ ಆನೆ, ನವಿಲು, ಜಿಂಕೆ, ಗಿಳಿ, ಚಿರತೆ ಇತರೆ ವನ್ಯ ಜೀವಿ ಗಳನ್ನು ನಾವು ಕಾಣಬಹುದು.
ಜೈವಿಕ ಉದ್ಯಾನಕ್ಕೆ ವಯಸ್ಕರಿಗೆ 20, ಮಕ್ಕಳಿಗೆ 10 ರೂ. ಟಿಕೆಟ್ ದರ ನಿಗದಿಪಡಿಸಲಾಗಿದ್ದು ಬೇಸಿಗೆ ದಿನಗಳಲ್ಲಿ ಬೆಳಗ್ಗೆ 8.30ರಿಂದ ಸಂಜೆ 5.30, ಮಳೆಗಾಲದಲ್ಲಿ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಉದ್ಯಾನ ತೆರೆದಿರುತ್ತದೆ. ಇಲ್ಲಿಗೆ ವಾಹನದಲ್ಲಿ ಬರುವ ಪ್ರವಾಸಿಗರು ಪ್ರತ್ಯೇಕವಾಗಿ ವಾಹನ ನಿಲುಗಡೆ ಶುಲ್ಕ ಭರಿಸಬೇಕಾಗುತ್ತದೆ.


ತುಂಬುರು ತೀರ್ಥ
ತುಂಬುರು ತೀರ್ಥ, ವೆಂಕಟೇಶ್ವರ ದೇವಾಲಯದಿಂದ 12 ಕಿಮೀ. ಮತ್ತು ಪಾಪ ವಿನಾಶನಂ ನಿಂದ 7 ಕಿಮೀ. ದೂರದಲ್ಲಿದೆ. ಇದು ಸಹ ಒಂದು ಮನಮೋಹಕ ಜಲಪಾತವಾಗಿದ್ದು ಪಾಪವಿನಾಶನಂ ಗೆ ಬಂದ ಪ್ರವಾಸಿಗರು ಇಲ್ಲಿಗೂ ಭೇಟಿ ನೀಡುತ್ತಾರೆ.

ತಿರುಮಲದ ಆಕಾಶಗಂಗೆಯಲ್ಲಿ ನಾನು ಮತ್ತು ನನ್ನ ಆತ್ಮೀಯ ಬಂಧುಗಳಾದ ಶ್ರೀರಾಮ್ ಮತ್ತು ರಾಘವೇಂದ್ರ ಉಡುಪ
ತುಂಬುರ ತೀರ್ಥಕ್ಕೆ ಪಾಪವಿನಾಶನಂ ಮೂಲಕ ಕಾಲ್ನಡಿಗೆಯಲ್ಲಿ ಸಾಗಿದರೆ ಮಾರ್ಗ ಮದ್ಯೆ ಸುಮಾರು ಐದು ಜಲಪಾತಗಳನ್ನು ಕಾಣಲು ಸಿಗುತ್ತದೆ. ಆದರೆ ಹಾಗೆ ಕಾಲ್ನಡಿಗೆ ಮಾರ್ಗದಲ್ಲಿ ತೆರಳುವವರು ಅವಶ್ಯವಾದಷ್ಟು ನೀರು ಮತ್ತು ಆಹಾರವನ್ನು ತಾವೇ ತೆಗೆದುಕೊಂಡು ಹೋಗಬೇಕು. ಮಾರ್ಗದ ನಡುವೆ ಯಾವ ಬ್ಗೆಯ ನೀರು ಹಾರಗಳು ಲಭಿಸುವುದಿಲ್ಲ.

ಮೇಲಿನ ಸ್ಥಳಗಳಲ್ಲದೆ ಶ್ರೀ ವೆಂಕಟೇಶ್ವರ ವಸ್ತು ಸಂಗ್ರಹಾಲಯ (ಇದು ವಾರದ ಏಳು ದಿನವೂ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ), ವೇಣುಗೋಪಾಲಸ್ವಾಮಿ ದೇವಾಲಯ, ಶ್ರೀವಾರಿಪಾದ, ತಿರುಚಂದೂರ್ನ ಪದ್ಮಾವತಿ (ಅಲಮೇಲು ಮಂಗಮ್ಮ) ಸನ್ನಿಧಿಬೇಡಿ ಆಂಜನೇಯ ಸ್ವಾಮಿ ದೇವಸ್ಥಾನ, ಜಾಪಾಲಿ ತೀರ್ಥ, ಗೋವಿಂದರಾಜಸ್ವಾಮಿ ದೇವಾಲಯಗಳನ್ನು ಪ್ರವಾಸಿಗರು ಸಂದರ್ಶಿಸಬಹುದು.

ಹೀಗೆ ಒಟ್ಟಾರೆ ತಿರುಪತಿ ಪ್ರವಾಸವೆನ್ನುವುದು ಕೇವಲ ವೆಂಕಟೇಶ್ವರ ಭಕ್ತರಿಗಷ್ಟೇ ಅಲ್ಲದೆ ಪ್ರಕೃತಿ ಪ್ರಿಯರಿಗೆ ಸಹ ಸಾಕಷ್ಟು ಚಾರಣ ಅವಕಾಶವನ್ನು ಒದಗಿಸುತ್ತದೆ ಎನ್ನುವುದನ್ನು ನಾವು ಗಮನಿಸಬೇಕಿದೆ.

(ಈ ನನ್ನ ಲೇಖನವು 'ಕನ್ನಡಪ್ರಭ ಡಾಟ್ ಕಾಂ'ನಲ್ಲಿ  17 ನವೆಂಬರ್ 2017ರಂದು ಪ್ರಕಟವಾಗಿತ್ತು.  http://bit.ly/2EIqdxe)