Friday, December 23, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 79

ಗುರುವಾಯೂರು (Guruvayur)

ಕೇರಳ ರಾಜ್ಯದಲ್ಲಿರುವ ಜನಪ್ರೀಯ ಹಾಗೂ ದೇಶದಲ್ಲೆ ಸಾಕಷ್ಟು ಹೆಸರುವಾಸಿಯಾಗಿರುವ ಶ್ರೀ ಗುರುವಾಯೂರು ದೇವಾಲಯ. ಕೃಷ್ಣನು ಗುರುವಾಯೂರಪ್ಪನಾಗಿ ನೆಲೆಸಿರುವ ಪುಣ್ಯ ಕ್ಷೇತ್ರ.  ಗುರುವಾಯೂರು  ತ್ರಿಶ್ಶೂರ್ ನಗರ ಕೇಂದ್ರದಿಂದ 28 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ತ್ರಿಶ್ಶೂರ್ ನಿಂದ ಬಸ್ಸುಗಳು ಹಾಗೂ ರೈಲು ದೊರೆಯುತ್ತದೆ. ಗುರುವಾಯೂರು ತನ್ನದೆ ಆದ ರೈಲು ನಿಲ್ದಾಣವನ್ನೂ ಸಹ ಹೊಂದಿದೆ. ಅಲ್ಲದೆ ಕೊಚ್ಚಿ ಮಹಾನಗರವು ತ್ರಿಶ್ಶೂರ್ ಗೆ ಬಲು ಹತ್ತಿರದಲ್ಲಿರುವುದರಿಂದ ಗುರುವಾಯೂರನ್ನು ಭಾರತದ ಎಲ್ಲ ಪ್ರಮುಖ ನಗರ ಕೆಂದ್ರಗಳಿಂದ ಸುಲಭವಾಗಿ ತಲುಪಬಹುದು.ಇದು ವಿಷ್ಣುವಿನ ದೇವಾಲಯವಾಗಿದ್ದರೂ ಸಹ ಬಾಲ ಕೃಷ್ಣನ ರೂಪದಲ್ಲಿ ಪೂಜಿಸಲಾಗುತ್ತದೆ. ಹಾಗಾಗಿ ಇದನ್ನು ಭೂಲೋಕ ವೈಕುಂಠ ಎಂತಲೂ ಸಹ ಕರೆಯಲಾಗುತ್ತದೆ.

Sri Guruvayurappan  (Lord Sri Krishna in Guruvayur)


ಗುರುವಾಯೂರಪ್ಪನ ವಿಗ್ರಹವು ಚುಂಬಕಾಕರ್ಷಣೆಯಿರುವ ಕಪ್ಪು ಕಲ್ಲಿನಲ್ಲಿ ಅದ್ಭುತವಾಗಿ ಕೆತ್ತಲಾಗಿದೆ. ನಸುಕಿನ ಮೂರು ಘಂಟೆ ಸಮಯದಲ್ಲೆ ದೇವಾಲಯ ಆರಂಭಗೊಳ್ಳುತ್ತದೆ. ಎಳ್ಳೆಣ್ಣೆಯಿಂದ ಮೊದಲಿಗೆ ಅಭಿಷೇಕ ಮಾಡಿ ನಂತರ ಗಿಡಮೂಲಿಕೆಗಳಿಂದ ತಯಾರಿಸಲಾದ ಕಂದು ಬಣ್ಣದ ಲೇಪನವೊಂದನ್ನು ವಿಗ್ರಹಕ್ಕೆ ಹಚ್ಚಲಾಗುತ್ತದೆ. ಇದನ್ನು ವಕ ಎನ್ನುತ್ತಾರೆ.ಈ ಒಂದು ಅಲಂಕಾರಿಕ ದೃಶ್ಯವನ್ನು ನೊಡಲೆಂದೆ ಭಕ್ತಾದಿಗಳು ಸಾಲು ಸಾಲಾಗಿ ನಸುಕಿನ ವೇಳೆಯಲ್ಲೆ ನಿಂತು ಕಾಯುತ್ತಿರುತ್ತಾರೆ. ನಂತರ ವಿಗ್ರಹವನ್ನು ಗುರುವಾಯೂರು ದೇವಾಲಯದ ಕೊಳದ ನೀರಿನಿಂದ ಶುದ್ಧಿಕರಿಸಲಾಗುತ್ತದೆ ಹಾಗೂ ಆ ನೀರನ್ನೆ ತೀರ್ಥವಾಗಿ ಭಕ್ತರು ಪಡೆಯುತ್ತಾರೆ.ಚುಂಬಕ ಶಕ್ತಿಯ ಕಲ್ಲಿನ ಮೇಲೆ ಹರಿದಾಡಿ ನಂತರ ಗಿಡ ಮೂಲಿಕೆಗಳ ಲೇಪನದ ಅಂಶಗಳನ್ನು ಹೊಂದಿರುವುದರಿಂದ ಆ ತೀರ್ಥ ಸಾಕಷ್ಟು ಒಷಧೀಯ ಗುಣಗಳನ್ನು ಹೊಂದಿರುತ್ತದೆ ಎನ್ನಲಾಗುತ್ತದೆ ಹಾಗೂ ಎಲ್ಲ ದೈಹಿಕ ಹೀನತೆಗಳನ್ನು ಹೋಗಲಾಡೈಸಬಲ್ಲುದು ಎಂದು ಬಕ್ತರು ನಂಬುತ್ತಾರೆ.

***

ಕುರು ವಂಶದ ರಾಜನಾದ ಹಾಗೂ ಅಭಿಮನ್ಯುವಿನ ಮಗನಾದ ಪರೀಕ್ಷಿತ ರಾಜನು ತಕ್ಷಕ ಎಂಬ ವಿಷ ಸರ್ಪದ ಕಡಿತಕ್ಕೆ ಒಳಗಾಗಿ ಪ್ರಾಣ ಬಿಟ್ಟನು. ಅವನ ಮಗನಾದ ಜನಮೇಜಯನಿಗೆ ಇದರಿಂದ ಕೋಪ ಉಂಟಾಗಿ ತಕ್ಷಕ ಸರ್ಪದ ಮೇಲೆ ಪ್ರತಿಕಾರ ತಿರಿಸಿಕೊಳ್ಳಲು ಸರ್ಪಸಾತ್ರ ಎಂಬ ಯಾಗ ಪ್ರಾರಂಭಿಸಿದ.ಈ ಯಾಗದಲ್ಲಿ ಎಲ್ಲ ದಿಕ್ಕುಗಳಿಂದಲೂ ಸರ್ಪಗಳು ತಾವಾಗಿಯೆ ಬಂದು ಅಗ್ನಿಯಲ್ಲಿ ಬಿದ್ದು ಸಾಯಹತ್ತಿದವು. ತಕ್ಷಕ ಸರ್ಪನು ಬಂದನಾದರೂ ಸಾಯಲಿಲ್ಲ. ಕಾರಣ ಆತ ಅಮೃತ ಸೇವಿಸಿದ್ದ. ಆದರೆ ಮಿಕ್ಕ ಸರ್ಪಗಳು ಪ್ರಾಣತೆತ್ತಿದ್ದರ ಪರಿಣಾಮವಾಗಿ ಜನಮೇಜಯನಿಗೆ ಕುಷ್ಠ ರೋಗ ಬಂದು ನರಳಾಡತೊಡಗಿದ.ಎಲ್ಲ ರೀತಿಯ ಉತ್ತಮ ಚಿಕಿತ್ಸೆಗಳನ್ನು ಪಡೆದನಾದರೂ ಗುಣಮುಖನಾಗಲಿಲ್ಲ. ಹೀಗಿರುವಾಗ ಒಮ್ಮೆ ಅವನ ಕನಸಿನಲ್ಲಿ ದತ್ತಾತ್ರೇಯರು ಸ್ವಾಮಿಗಳು ಬಂದು ಗುರುವಾಯುರಪ್ಪನನ್ನು ಕುರಿತು ಪೂಜಿಸುವಂತೆಯೂ ಅದರ ಮಹತ್ವವನ್ನು ವಿವರಿಸಿದರು.  ಇದನ್ನು ತಿಳಿದ ನಂತರ ಜಯಮೇಜಯನು ಶ್ರೀ ಕ್ಷೇತ್ರಕ್ಕೆ ಬಂದು ಕೃಷ್ಣನನ್ನು ಪೂಜಿಸಿದ್ದಲ್ಲದೆ ತನಗೊದಗಿದ್ದ ಮಾರಕ ರೋಗದಿಂದ ಮುಕ್ತನಾದನು. 

ದತ್ತಾತ್ರೇಯರು ಜಯಮೇಜಯನಿಗೆ ತಿಳಿಸಿದ ಗುರುವಾಯೂರು ಸ್ಥಳ ಮಹಿಮೆಯು ಈ ರೀತಿಯಲ್ಲಿದೆ- 

ಬಹಳ ಹಿಂದೆ ಬ್ರಹ್ಮನು ಪದ್ಮ ಕಲ್ಪದಲ್ಲಿ ಸೃಷ್ಟಿ ಹಾಗೂ ಜೀವಿಗಳ ರಚ್ನೆಯ ಕಾರ್ಯದಲ್ಲಿ ತೊಡಗಿದ್ದಾಗ ವಿಷ್ಣು ಪ್ರತ್ಯಕ್ಷನಾದನು. ಇದರಿಂದ ಸಂತಸಗೊಂಡ ಬ್ರಹ್ಮ ಸೃಷ್ಟಿ ಪರಿಪಾಲಕನಾದ ವಿಷ್ಣುನನ್ನು ಕುರಿತು ತನ್ನನ್ನು ಹಾಗೂ ತನ್ನ ಜೀವಿಗಳನ್ನು ಸಂರಕ್ಷಿಸುತ್ತಿರಬೇಕೆಂದು ಕೇಳಿದನು. ಅದಕ್ಕೆ ವಿಷ್ಣು ತನ್ನ ಪ್ರತಿಮೆಯೊಂದನ್ನು ಮಾಡಿ ಅವನಿಗೆ ನೀಡಿದ.

ವರಾಹ ಕಲ್ಪದಲ್ಲಿ ಬ್ರಹ್ಮನು ರಾಜನಾದ ಸುತಪಾಸ ಹಾಗೂ ಪ್ರಸ್ನಿ ದಂಪತಿಗಳಿಗೆ ಆ ವಿಷ್ಣುವಿನ ವಿಗ್ರಹ ನೀಡಿ ಪೂಜಿಸಲು ಹೇಳಿದ. ಹೀಗೆ ಅವರು ಅದನ್ನು ಭಕ್ತಿಯಿಂದ ಪೂಜಿಸ ಹತ್ತಿದಾಗ ವಿಷ್ಣು ಅವರಿಗೆ ದರ್ಶನ ನೀಡಿ ಮುಂದಿನ ನಾಲ್ಕು ಜನ್ಮಗಳಲ್ಲಿ ಅವರಿಗೆ ಪುತ್ರನಾಗಿಯೆ ತಾನು ಜನ್ಮ ಪಡೆಯುವುದಾಗಿ ಅಶ್ವಾಸನೆ ನೀಡಿದ.ಹೀಗೆ ಸತ್ಯಯುಗದಲ್ಲಿ ವಿಷ್ಣು ಪ್ರಸ್ನಿಗರ್ಭನಾಗಿಯೂ, ತ್ರೇತಾ ಯುಗದಲ್ಲಿ ವಾಮನನಾಗಿಯೂ, ರಾಮನಾಗಿಯೂ ಜನ್ಮ ತಳೆದ. ನಂತರ ಕೊನೆಯದಾದಿ ದ್ವಾಪರ ಯುಗದಲ್ಲಿ ಕೃಷ್ಣನಾಗಿಯೂ ಜನ್ಮ ತಳೆದ. ಕೃಷ್ಣನಾಗಿದ್ದಾಗಲೂ ವಿಷ್ಣು ಮಾಡಿದ ಅವನದೆ ಆದ ಪ್ರತಿಮೆಯನ್ನು ಕೃಷ್ಣ ಪೂಜಿಸುತ್ತಿದ್ದ.

Lord Sri Krishna temple in Guruvayur
ಕೃಷ್ಣನು ಇಹ ಲೋಕ ತ್ಯಜಿಸುವ ಸಮಯ ಬಂದಾಗ ಉದ್ಧವನನ್ನು ಕರೆದು ದ್ವಾರಕೆಯು ಮುಳುಗುವುದಾಗಿಯೂ ತದನಂತರ ವಿಷ್ಣುವಿನ ವಿಗ್ರಹವನ್ನು ಬೃಹಸ್ಪತಿಯಾದ ಗುರು ಮತ್ತು ವಾಯು ದೇವರಿಗೆ ಕೊಡಬೇಕೆಂದು ಹೇಳಿದನು. ತರುವಾಯ ಅದೆ ರೀತಿಯಾಗಿ ಉದ್ಧವನು ಆ ವಿಗ್ರಹವನ್ನು ಗುರು ಮತ್ತು ವಾಯುವಿನ ಸುಪರ್ದಿಯಲ್ಲಿ ನೀಡಿ ತಪಸ್ಸಿಗೆಂದು ತೆರಳಿದ.ಗುರು ಮತ್ತು ವಾಯು ದಕ್ಷಿಣದೆಡೆ ತಮ್ಮ ಪ್ರಯಾಣ ಆರಂಭಿಸಿ ಇಂದಿನ ಗುರುವಾಯೂರಿನತ್ತ ಬಂದು ಇಲ್ಲಿನ ಪ್ರಕೃತಿ ಸೊಬಗಿನಿಂದ ಮೂಕವಿಸ್ಮಿತರಾದರು. ನಂತರ ಈ ಒಂದು ಸ್ಥಳದಲ್ಲಿಯೆ ಶಿವನು ವಿಷ್ಣುವಿನನ್ನು ಪೂಜಿಸಿದುದರ ಕುರಿತು ತಿಳಿದರು ಹಾಗೂ ಆ ವಿಗ್ರಹವನ್ನು ಇಲ್ಲಿಯೆ ಪ್ರತಿಷ್ಠಾಪಿಸಲು ತಿರ್ಮಾನಿಸಿದರು.ಹಾಗಾಗಿ ವಿಶ್ವಕರ್ಮನನ್ನು ಕರೆಸಿ ಇಲ್ಲಿ ಒಂದು ದೇವಾಲಯ ನಿರ್ಮಾಣ ಮಾಡಲು ಸೂಚಿಸಿದರು. ಅದರಂತೆ ವಿಶ್ವಕರ್ಮನು ಕೆಲವೆ ನಿಮಿಷಗಳಲ್ಲಿ ಇಲ್ಲೊಂದು ಸುಂದರವಾದ ದೇವಾಲಯ ನಿರ್ಮಾಣ ಮಾಡಿದ. ಹೀಗೆ ಗುರು ಮತ್ತು ವಾಯುವಿನಿಂದ ಪ್ರತಿಷ್ಠಾಪಿಸಲಾದ ಇದು ಗುರುವಾಯೂರು ದೇವಾಲಯವಾಗಿ ಪ್ರಸಿದ್ಧವಾಯಿತು.

ಗುರುವಾಯೂರು ಪಟ್ಟಣವು ದೇವಾಲಯದಿಂದಾಗಿಯೆ ಜೀವಕಳೆ ಹೊಂದಿರುವ ಪಟ್ಟಣವಾಗಿ ಕಂಗೊಳಿಸುತ್ತದೆ. ಅಪ್ಪನ್ ಎಂದರೆ ತಂದೆ ಅಥವಾ ದೇವ ಎಂಬ ಭಾವಾರ್ಥ ಬರುವುದರಿಂದ ಈ ಊರಿಗೆ ಒಡೆಯನಾಗಿ, ಅಪ್ಪನಾಗಿ, ದೇವರಾಗಿ ಗುರುವಾಯೂರಪ್ಪನ್ ನೆಲೆಸಿದ್ದಾನೆ.

Wednesday, December 07, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 78

ಕುಂಬಾಶಿ (Kumbhashi)

ಕುಂದಾಪುರಕ್ಕೆ 9 ಕಿಮೀ ದೂರದಲ್ಲಿ ನೆಲೆಗೊಂಡಿರುವ ನೆಗುಡ್ಡೆ ವಿನಾಯಕ ದೇವಸ್ಥಾನ ಕುಂಬಾಶಿಯು ಆನೆಗುಡ್ಡೆ ವಿನಾಯಕ ಮಂದಿರಕ್ಕೆ ಪ್ರಖ್ಯಾತಿ ಪಡೆದಿದೆ. ಈ ಸ್ಥಳದ ಹೆಸರು  ಕುಂಬಾಸುರನಿಂದ ಜನ್ಯವಾಗಿದೆ. ಶಾಸನಗಳಲ್ಲಿ ಕುಂಭಾ-ಕಾಶಿ ಎಂದೇ ಈ ಸ್ಥಳವನ್ನು ವರ್ಣಿಸಲಾಗಿದೆ. ಪರಶುರಾಮ ಸೃಷ್ಟಿ ಎಂದು ಕರೆಯುವ ಏಳು ಸ್ಥಳಗಳ ಪೈಕಿ ಇದೂ ಕೂಡ ಯಾತ್ರಾಸ್ಥಳವಾಗಿದೆ. ಬೆಟ್ಟದಲ್ಲಿ ನೆಲೆಗೊಂಡಿರುವ ಆನೆಗುಡ್ಡೆ ವಿನಾಯಕ ದೇವಸ್ಥಾನವು ಅನೇಕ ಮಂದಿ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ. ಆನೆಗುಡ್ಡೆಯೆಂದರೆ ಆನೆ ಸೊಂಡಿಲಿನ ದೇವರು ವಿನಾಯಕನ ಆವಾಸಸ್ಥಾನ.  ಎಂದು ಅರ್ಥವಿದೆ. ಈ ಕ್ಷೇತ್ರವು ಪರಶುರಾಮ ಮಹರ್ಷಿಯ ಸೃಷ್ಟಿಯೆಂದು ಹೇಳಲಾಗಿದೆ. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ. 




ಇದು ಪುರಾತನವಾದ ಮತ್ತು ನಾಡಿನಾದ್ಯಂತ ಭಕ್ರಸಾಗರವನ್ನು ಹೊಂದಿರುವ ದೇವಾಲಯವಾಗಿದೆ. ಆನೆಗುಡ್ಡೆ ದೇವಸ್ಥಾನದಲ್ಲಿ ವಿನಾಯಕ ರ್ಮೂತಿಯು ನಿಂತಿರುವ ಭಂಗಿಯಲ್ಲಿ ಭಕ್ತಾದಿಗಳಿಗೆ ದರ್ಶನವನ್ನು ಕೊಟ್ಟಿರುತ್ತಾನೆ. ರ್ಮೂತಿಯ ನಾಲ್ಕು ಹಸ್ತದಲ್ಲಿ ಎರಡು "ವರದ ಹಸ್ತ"ವು ಭಕ್ತರು ಬೇಡಿದ ವರಗಳನ್ನು ಕೊಡಲೂ, ಇನ್ನೆರೆಡು ಹಸ್ತವು ಶರಣಾಗತಿಯಾಗಿರ ಬೇಕೆಂಬುದನ್ನು ತೋರಿಸುತ್ತದೆ. ಈ ದೇವಾಲಯವು ಅತೀ ಪುರಾತನವಾಗಿದ್ದು, ಅಲ್ಲಿಯೇ ಹತ್ತಿರದಲ್ಲಿ ನಾಗಾಚಲ ಅಯ್ಯಪ್ಪ ಸ್ವಾಮಿ ದೇವಾಲಯ ಹಾಗೂ ಇತರ ದೇವಾಲಯಗಳಿವೆ. ವಿನಾಯಕನ ಸನ್ನಿದಾನದಲ್ಲಿ ಪ್ರತಿನಿತ್ಯ ಅನ್ನದಾನ ಸೇವೆ ನಡೆಯುತ್ತದೆ.

***

\ಕುಂಭಾಸಿಗೆ ಹರಿಹರಕ್ಷೇತ್ರ, ಮಧುಕಾನನ, ಗೌತಮಕ್ಷೇತ್ರ, ನಾಗಾಚಲ, ಆನೆಗುಡ್ಡೆ, ಕುಂಭಕಾಶಿ ಮುಂತಾದ ಹೆಸರುಗಳಿವೆ. ಪ್ರತಿ ಹೆಸರಿನ ಹಿಂದೆಯೂ ಪೌರಾಣಿಕ ಕಥೆಗಳಿವೆ. ಹಿಂದೆ ಮಹಾತೇಜಸ್ವಿಯಾದ ಕುಂಭಾಸುರನೆಂಬ ರಾಕ್ಷಸನು ರಾಮಚಂದ್ರನಿಗೆ ಭಯಪಟ್ಟು ಮಹೇಂದ್ರಗಿರಿಯಲ್ಲಿ ಅವಿತುಕೊಂಡಿದ್ದನು. ಕಾಲಾಂತರದಲ್ಲಿ ಅಲ್ಲಿಂದ ಹೊರಟು ನಾರದನ ಮಾತಿನಂತೆ ಈಶ್ವರನನ್ನು ಮೆಚ್ಚಿಸಿ ವರಪಡೆದು ಮದೋನ್ಮತ್ತನಾಗಿ ಶ್ರೀ ಕ್ಷೇತ್ರಕ್ಕೆ ಬಂದು ಸಿಕ್ಕಿದ ಜನರನ್ನೆಲ್ಲ ದಂಡಿಸಿ ಸೇನಾಸಮೇತನಾಗಿ ರಾಜ್ಯ ಸ್ಥಾಪನೆ ಮಾಡಿ ರಾಜ್ಯಭಾರ ನಡೆಸತೊಡಗಿದನು.

ಈತನಿಗೆ ಭಯಪಟ್ಟು ಅಲ್ಲಿನ ಜನರು ಓಡಿಗೋಗಬೇಕಾಗಿ ಬಂತು.. ಆ ಸಮಯ ಪಾಂಡವರು ದ್ರೌಪದಿ ಸಹಿತ ವನವಾಸಿಗಳಾಗಿ ತೀರ್ಥಯಾತ್ರೆ ಮಾಡುತ್ತಾ ತುಂಗಭದ್ರಾ ತೀರದಲ್ಲಿರುವುದನ್ನು ತಿಳಿದ ಗೌತಮಾದಿ ಮುನಿಗಳು ಅಲ್ಲಿಗೆ ಹೋಗಿ ತಮ್ಮ ಸಂಕಷ್ಟವನ್ನು ಪಾಂಡವರಲ್ಲಿ ತೊಡಿಕೊಂದರು. ಪರಿಸ್ಥಿತಿಯನ್ನರಿತ ಧರ್ಮರಾಯನು ಸೋದರರೊಡನೆ ಕೂಡಿಕೊಂಡು ಭಾರ್ಗವ ಕ್ಷೇತ್ರವನ್ನು ಸೇರಿ ಮಧುವನಕ್ಕೆ ಬಂದು ಕ್ಷೇತ್ರದ ದರ್ಶನ ಮಾಡಿದನು. ಸ್ವಲ್ಪ ದಿನಗಳಲ್ಲಿ ನಾಗಾಚಲಕ್ಕೆ ಬಂದು ಗಣೇಶನನ್ನು ಅರ್ಚಿಸಿ ಭೀಮಾದಿಗಳನ್ನು ರಾಕ್ಷಸರ ಸಂಹಾರಕ್ಕೆ ಕಳುಹಿಸಿಕೊಟ್ಟನು.

ಭೀಮಾದಿಗಳು ಶಂಖನಾದ ಮಾಡುತ್ತಾ ಮುಂದುವರೆಯಲು ಕುಂಭಾಸುರನು ಯುದ್ಧಕ್ಕೆ ಬಂದನು. ಭೀಮನಿಗೂ ಕುಂಭಾಸುರನಿಗೂ ಭಯಂಕರ ಗದಾಯುದ್ಧ ನಡೆಯಿತು. ಅದರಲ್ಲಿ ರಾಕ್ಷಸನೇ ಜಯಶಾಲಿಯಾಗುವಂತಿದ್ದಾಗ ಅಶರೀರವಾಣಿಯೊಂದುಂಟಾಯಿತು. ಕೂಡಲೇ ಭೀಮನು ಗಣೇಶನನ್ನು ಮನದಲ್ಲೇ ಸ್ಮರಿಸಿ, ಪ್ರಸಾದ ರೂಪವಾದ ಖಡ್ಗವನ್ನು ಧರಿಸಿ ಕುಂಭಾಸುರನನ್ನು ಸಂಹಾರ ಮಾಡಿ ಮತ್ತುಳಿದ ರಾಕ್ಷಸರನ್ನು ನಿರ್ನಾಮಗೊಳಿಸಿದನು. ಶರೀರವಾಣಿಯಂತೆ ಖಡ್ಗದ ಶಕ್ತಿಯಿಂದ ಅಸುರನ್ನು ಸಂಹಾರ ಮಾಡಿದ್ದರಿಂದ ಈ ಕ್ಷೇತ್ರ ಕುಂಭ+ಅಸಿ(ಖಡ್ಗ)= ಕುಂಭಾಸಿ ಎಂದು ಸುಪ್ರಸಿದ್ಧವಾಯಿತು.

Saturday, December 03, 2016

82ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಭಾಷಣ - ನಾಡೋಜ ಬರಗೂರು ರಾಮಚಂದ್ರಪ್ಪ

ರಾಯಚೂರಿನಲ್ಲಿ ನಡೆಯುತ್ತಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಥಮ ದಿನದಂದು ಸಮ್ಮೇಳನಾಧ್ಯಕ್ಷರಾದ ನಾಡೋಜ ಬರಗೂರು ರಾಮಚಂದ್ರಪ್ಪನವರು ಮಾಡಿದ ಅಧ್ಯಕ್ಷೀಯ ಭಾಷಣದ ಪೂರ್ಣ ಪಾಠವನ್ನು ನಾನು ನಿಮ್ಮ ಅವಗಾಹನೆಗಾಗಿ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. 
***