Sunday, April 23, 2017

ಸ್ಮಶಾನದಲ್ಲೊಂದು ಪಾಠಶಾಲೆ….!


ಸಾಮಾನ್ಯವಾಗಿ ಸ್ಮಶಾನ ಎಂದರೆ ಎಲ್ಲರೂ ಹೆದರಿ ದೂರ ಓಡುತ್ತಾರೆ. ಯಾವುದೇ ಸಾವು ಸಂಬವಿಸಿದ್ದಲ್ಲಿ ಮಾತ್ರವೇ ಸ್ಮಶಾನದತ್ತ ತೆರಳುವ ನಮ್ಮಗಳಿಗೆ ಅಲ್ಲಿಯೇ ನೆಲೆಸಿರುವ ದೇಹವನ್ನು ಮಣ್ಣಾಗಿಸಲು ಸಹಕರಿಸುವವರ ಕುಟುಂಬದ ಕುರಿತಂತೆ ಯಾವ ಭಾವನೆಯೂ ಇರುವುದಿಲ್ಲ. ಸಮಾಜದ ಮುಖ್ಯ ವಾಹಿನಿಯಿಂದ ದೂರವೇ ಉಳಿದ ಕುಟುಂಬಗಳು ಇಂದಿಗೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಕಳೆದ ಐದು ತಲೆಮಾರುಗಳಿಂದ ಸ್ಮಶಾನದ ಕೆಲಸಗಳನ್ನೇ ಮಾಡುತ್ತಾ ಬಂದಿರುವ ಇವರ ಮಕ್ಕಳು ಸಹ ಇತ್ತೀಚಿನವರೆಗೂ ಶಾಲೆ, ಶಿಕ್ಷಣದಿಂದ ದೂರವೇ ಉಳಿದಿದ್ದರು. ಸ್ಮಾಶಾನದಲ್ಲಿನ ಗೋರಿಗಳು, ಬಾವಲಿ, ಗೂಬೆ, ಹಾವು-ಚೇಳಿನ ಸಂಗದಲ್ಲಿಯೇ ಬೆಳೆದ ಮಕ್ಕಳ ಮನೋಭಾವ ಐವತ್ತರ ವಯೋಮಾನದ ವ್ಯಕ್ತಿಗಳಂತಿರುವುದು ಅಚ್ಚರಿಯಾದರೂ ಸತ್ಯ. ಪ್ರತಿನಿತ್ಯವೂ ಸಾವು, ಸಂಕಟವನ್ನು ಕಂಡ ಕಂದಮ್ಮಗಳಿಗೆ ವಯೋಸಹಜವಾಗಿರಬೇಕಾದ ತುಂಟತನ, ಹಾಸ್ಯ, ಆಟದ ಪರಿವೆಯೇ ಇಲ್ಲ. ಬದಲಿಗೆ ಗಂಭೀರತೆಯೇ ಮನತುಂಬಿಕೊಂಡು  ಯಾರ ಒಡನೆಯೂ ಸ್ಥಿತ ಪ್ರಜ್ಞರಂತೆ ವರ್ತಿಸುತ್ತಾರೆ. ಆದರೆ ಇದೀಗ ಇಂತಹಾ ಮಕ್ಕಳಿಗೂ ತಕ್ಕ ಶಿಕ್ಷಣ ದೊರೆಯುವಂತೆ ಮಾಡಿ ಅವರನ್ನು ಸಾಮಾನ್ಯ ಜನರ ನಡುವೆ ಬದುಕುವಂತೆ ಮಾಡಬೇಕೆನ್ನುವ ಸದುದ್ದೇಶ ಹೊಂದಿರುವ ಇಬ್ಬರು ಗೆಳೆಯರು ಬೆಂಗಳೂರಿನ ವಿವಿಧ ಸ್ಮಶಾನಗಳಿಗೆ ತೆರಳಿ ಸ್ಮಶಾನದ ಕೆಲಸಗಾರರ ಮಕ್ಕಳಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುತ್ತಿದ್ದಾರೆ.

ಸುಕ್ಷಿತ ಕುಟುಂಬದ ಹಿನ್ನೆಲೆ ಹೊಂದಿರುವ ಗ್ಲೀಡಾ ಡಿ' ಸಿಲ್ವಾ ಮತ್ತು ಸ್ಯಾಮ್ಯುಯಲ್ ಗ್ಲಾಡ್ಸನ್ ಎನ್ನುವ ಗೆಳೆಯರು ತಾವು ವಿಭಿನ್ನ ಪರಿಸರದಲ್ಲಿ ವಾಸವಿರುವ ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸಿಕೊಡುತ್ತಿದ್ದಾರೆ. ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ ಇಬ್ಬರು ಗೆಳೆಯರಿಗೆ ಮೊದಲಿನಿಂದಲೂ ತಾವು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎನ್ನುವ ತುಡಿತವಿತ್ತು. ಅದರಂತೆ ಇಬ್ಬರೂ ಎಂ.ಎಸ್.ಬ್ಫ್ಲ್ಫ್ಯೂ. ವ್ಯಾಸಗಂಗ ಪೂರೈಸಿ ತಮ್ಮ ಕನಸಿಗೆ ಸಾಕಾರ ರೂಪ ಕೊಡಲು ಮುಂದಾದರು. ಗ್ಲೀಡಾ ಅವರು ಮುಂಬೈ ನಲ್ಲಿ ಸ್ನಾತಕ ಪದವಿ ಪೂರೈಸಿದರೆ ರೈಲ್ವೆ ಅಧಿಕಾರಿಯ ಮಗನಾದ ಸ್ಯಾಮ್ಯುಯಲ್ ಬೆಂಗಳೂರಿನಲ್ಲಿ ತಮ್ಮ ವ್ಯಾಸಂಗ ಮುಗಿಸಿದರು. ಮನೆಯವರ ವಿರೋಧವನ್ನೂ ಲೆಕ್ಕಿಸದೆ ತಮ್ಮ ಇಷ್ಟದ ಸಾಮಾಜಿಕ ಕಾರ್ಯವನ್ನು ಮಾಡಲು ಮುಂದಾದ ಯುವಕರ ಕೆಲಸ ಸ್ವಾಗತಾರ್ಹ. ಪ್ರತಿನಿತ್ಯವೂ ಬೆಂಗಳೂರಿನ ಕಾಕ್ಸ್ ಟೌನ್ ಸಮೀಪದ ಕಲಪನಹಳ್ಳಿ ಸ್ಮಶಾನ, ಶಾಂತಿನಗರದ ಸ್ಮಶಾನಕ್ಕೆ ತೆರಳಿ ಅಲ್ಲಿನ ಮಕ್ಕಳಿಗೆ ಶೈಕ್ಷಣಿಕ ತರಬೇತಿ ನೀಡುತ್ತಾರೆ.


ಸಾವಿನಲ್ಲಿ ಸಿಕ್ಕಿತು ಪ್ರೇರಣೆ
ಸ್ಮಾಶಾನವನ್ನು ಗುರುಕುಲವನ್ನಾಗಿ ಮಾಡ ಹೊರಟ ಇವರಿಬ್ಬರ ಕೆಲಸಕ್ಕೆ ಪ್ರೇರಣೆ ದೊರಕಿದ್ದದ್ದು ಸಾವಿನಿಂದ!
ಗ್ಲೀಡಾ ಅವರ ತಂದೆ ವಿಪರೀತ ಮದ್ಯ ವ್ಯಸನಿಯಾಗಿದ್ದರು. ತಾಯಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತಂದೆಯ ಚಟದಿಂದ ಗ್ಲೀಡಾ ಮತ್ತವರ ತಾಯಿ ಅನುಭವಿಸಿದ ಅವಮಾನ, ನೋವು ವಿಪರೀತವಾಗಿತ್ತು. ಮುಂದೆ  ಅದೇ ಕುಡಿತದ ಚಟ  ಅವರನ್ನು ಬಲಿ ತೆಗೆದುಕೊಂಡಿತು. ಗ್ಲೀಡಾ ಅವರಿಗೆ ಇದು  ದೊಡ್ಡ ಪಾಠವಾಯಿತು. ಬದುಕಿನಲ್ಲಿ ಕಂಡ ಏರಿಳಿತಗಳೇ ಅವರಲ್ಲಿ ನಿಸ್ವಾರ್ಥ ಸೇವಾ ಮನೋಭಾವ ಬೆಳೆಯಲು ಕಾರಣವಾಯಿತು.
ಇನ್ನು ಸ್ಯಾಮ್ಯುಯಲ್ ಗ್ಲಾಡ್ಸನ್ ಅವರ ಅನುಭವವೇ ವಿಭಿನ್ನ. ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಸಾಮಾಜಿಕ ಕಾರ್ಯ ವಿಷಯ ಕಲಿಯುತ್ತಿರುವಾಗಲೇ ಸಂಶೋದನೆಗಾಗಿ ಇವರು ಸ್ಮಶಾನದಲಿ ವಾಸಿಸುವ ಕುಟುಂಬಗಳ ಜೀವನ ಸ್ಥಿತಿ ಗತಿಗಳ ವಿಷಯವನ್ನು ಆಯ್ಕೆ ಮಾಡಿಕೊಂಡರು. ಆದರೆ ಕಾಲೇಜಿನ  ಉಪನ್ಯಾಸಕರು ತಾವು ಕ್ಷೇತ್ರ ಕಾರ್ಯಕ್ಕೆ ಸಹಕರಿಸಲು ನಿರಾಕರಿಸಿದರು. ಇದರಿಂದ ಸ್ಯಾಮ್ಯುಯಲ್ ತಾವು ನಿರ್ಧಾರದಿಂದ ವಿಚಲಿತರಾಗಿರಲಿಲ್ಲ. ಅದೇ ಸಮಯದಲ್ಲಿ ಅವರ ತಾತನ ಸಾವು ಸಂಬವಿಸಿತ್ತು. ಅದಾಗ ಸ್ಮಶಾನಕ್ಕೆ ಭೇಟಿ ಕೊಟ್ಟಿದ್ದ ಸ್ಯಾಮ್ಯುಯಲ್ ಗೆ ಅಲ್ಲಿ ಗುಂಡಿ ತೋಡಿದ್ದ ವ್ಯಕ್ತಿ ತಾನು ಮಾಡಿದ್ದ ಕೆಲಸ ನಿಮಗೆ ತೃಪ್ತಿಯಾಗಿದ್ದಲ್ಲಿ ನಿಮ್ಮ ಕೈಲಾದ ಸಹಾಯ ಮಾಡಿರೆಂದು ದಯನೀಯವಾಗಿ ಬೇಡಿದ. ಇದು ಸ್ಯಾಮ್ಯುಯಲ್ ಅವರ ಮನ ಕಲುಕಿತು. ಮುಂದೆ ಇವರ ವಿಚಾರವಾಗಿ ಇನ್ನೂ ಹೆಚ್ಚು ತಿಳಿಯಬೇಕು. ಇವರ ಜೀವನವನ್ನು ಸುಧಾರಿಸಲು ಏನಾದರೂ ಸಹಾಯ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದ ಸ್ಯಾಮ್ಯುಯಲ್ ಬೆಂಗಳೂರಿನ ಹಿಂದೂ, ಕ್ರೈಸ್ತ, ಮುಸ್ಲಿಂ ಸ್ಮಶಾನಗಳನ್ನೆಲ್ಲ ಸುತ್ತಿ ಅಲ್ಲಿ  ನೆಲೆಸಿರುವ  ಕುಟುಂಬಗಳ ಬಗೆಗೆ ವಿವರ  ಕಲೆ ಹಾಕಿದರು.
ಮುಂದೆ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವಾಗಲೂ ಇದೇ ವಿಷಯವನ್ನು ಸಂಶೋಧನೆಗೆ ಆಯ್ದುಕೊಂಡು ವರದಿ ತಯಾರಿಸಿ ಉಪನ್ಯಾಸಕರಿಗೆ ನೀಡಿದಾಗ ಬಹಳ ಮೆಚ್ಚುಗೆ ವ್ಯಕ್ತವಾಯಿತು. ಕೆಲವು ತಿಂಗಳು ಉರುಳಿದವು. ಮತ್ತೆ ಸ್ಮಶಾನದ ಕಡೆಗೆ ಹೋಗುವ ಆಲೋಚನೆ ಇದ್ದರೂ ಸಾಧ್ಯವಾಗಿರಲಿಲ್ಲ. ಯಾವುದೇ ಕೆಲಸ ಪ್ರಾರಂಭಿಸುವ ಸ್ಪಷ್ಟತೆ ಹೊಳೆದಿರಲಿಲ್ಲ. ಅದೇ ವೇಳೆ ಡಾರ್ಜಲಿಂಗ್ ನಿಂದ ಬಂದಿದ್ದ ಸ್ಯಾಮ್ಯುಯಲ್ ಅವರ ಗೆಳತಿಯೊಬ್ಬರು ರಕ್ತದ ಕ್ಯಾನ್ಸರ್ ನಿಂದ ಮೃತಪಟ್ಟರು. ಅವರ ಅಂತ್ಯ ಸಂಸ್ಕಾರಕ್ಕೆ ಸ್ಮಶಾನಕ್ಕೆ ತೆರಳಿದ್ದ ಸ್ಯಾಮ್ಯುಅಯಲ್ ಅವರನ್ನು ಅಲ್ಲಿ ನೆಲೆಸಿದ್ದ ಕುಟುಂಬ ಸದಸ್ಯರು ಗುರುತಿಸಿದ್ದರು. ಅವರ ಮಕ್ಕಳು ಸಹ ಗುರುತಿಸಿ ಮಾತನಾಡಿಸಿದ್ದರು. ಇಅದರಿಂದ ಸ್ಯಾಮ್ಯುಯಲ್ಈ ಅವರಿಗೆ ಮಕ್ಕಳ ಶ್ರೇಯೋಭಿವೃದ್ಫ್ದಿಗೆ ಏನಾದರೂ ಮಾಡಬೇಕೆನ್ನುವ ಕಲ್ಪನೆ ಮೊಳೆಯಿತು. ಅದರಂತೆ ಸ್ಮಶಾನದಲ್ಲಿಯೇ ಶೈಕ್ಷಣಿಕ ತರಬೇತಿ ನೀಡಲು ಪ್ರಾರಂಭ ಮಾಡಿಅದ್ರು.

ಗೋರಿಯ ಮೇಲೆ ಪಾಠ
ಗ್ಲೀಡಾ ಮತ್ತು ಸ್ಯಾಮ್ಯುಯಲ್ ತಾವು ತರಬೇತಿ ಕೊಡಲು ಪ್ರಾರಂಭಿಸಿದ ಮಕ್ಕಳ ಪೋಷಕರು ಸ್ಮಶಾನದಲ್ಲಿ ಗುಂಡಿ ತೋಡುವ, ಗೋರಿಗಳ ಮೇಲೆ ಹೆಸರು ಕೆತ್ತುವ, ಶವಪೆಟ್ಟಿಗೆ ತಯಾರಿಸುವ ಕಾಯಕ ಮಾಡುತ್ತಾ ಬಂದಿದ್ದಾರೆ. ಇಂದಿನ ವರೆಗೂ ಯಾರೂ ಶಾಲೆಯ ಮುಖ ಕಂಡವರಿಲ್ಲ. ಆದರೆ ಈಗಿನ ಕೆಲವು ಮಕ್ಕಳು ಸಮೀಪದ ಸರ್ಕಾರಿ, ಖಾಸಗಿ ಶಾಲೆಗಳಿಗೆ ತೆರಳಿ ಶಿಕ್ಷಣ ಪಡೆಯುತ್ತಿದ್ದಾರಾದರೂ ಶೈಕ್ಷಣಿಕ ಪ್ರಗತಿ ತೀರಾ ಅಲ್ಪ ಪ್ರಮಾಣದಲ್ಲಿದೆ. ಮಕ್ಕಳು ಬೆಳೆಯುತ್ತಿರುವ ಪರಿಸರವೇ ಇದಕ್ಕೆ ಕಾರಣವೆಂದು ಬಗೆದ ಗೆಳೆಯರು  ಇಂತಹವರಿಗೆ ಅವರಿದ್ದ ಸ್ಥಳದಲ್ಲಿಯೇ ಶಿಕ್ಷಣ ನೀಡಲು ಪ್ರಾರಂಭಿಸಿದರು. ಸ್ಮಶಾನದ ಗೋರಿಗಳೇ ವಿದ್ಯಾರ್ಥಿಗಳ ಬೆಂಚಾಗಿತ್ತು. ಅದೇ ಸ್ಮಶಾನದ ಮರಗಳೇ ಶಾಲೆಯ ಸೂರಾಗಿದ್ದವು!  
ಆಟದೊಂದಿಗೆ ಪಾಠ ಕಲಿಸುವ ಯೋಜನೆ ನಿರ್ಮಾಣವಾಯಿತು. ಮಕ್ಕಳ ಮನೋಭಾವ, ಶೈಕ್ಷಣಿಕ ಶ್ರೇಣಿಯನ್ನು ಗುರುತಿಸಿ ಅವರ ಆಸಕ್ತಿಗೆ ತಕ್ಕಂತೆ ವಿವಿಧ ವಿಷಯಗಳನ್ನು ಬೋಧಿಸಲು ಪ್ರಾರಂಭ ಮಾಡಿದರು. ಒರಟು ಸ್ವಭಾವದ ಹಿಂಸಾ ಮನೋಭಾವವೇ ಹೆಚ್ಚಾಗಿದ್ದ ಮಕ್ಕಳು ಶಾಲೆಯಲ್ಲಿದ್ದ ಇತರೆ ಮಕ್ಕಳೊಡನೆ ಸಹಜವಾಗಿ ಬೆರೆಯುತ್ತಿರಲಿಲ್ಲ. ಅಲ್ಲದೆ ಇವರು ಶಾಲಾ ಪರೀಕ್ಷೆಗಳಲ್ಲಿಯೂ 'ಡಿ' ದರ್ಜೆಗಿಂತ ಮೇಲೆ ಬರುತ್ತಿರಲಿಲ್ಲ. ಆದರೆ ಗ್ಲೀಡಾ ಹಾಗೂ ಗ್ಲ್ಯಾಡ್ಸನ್ ಅವರ ಸತತ ಪ್ರಯತ್ನದಿಂದ ಇದೀಗ ಮಕ್ಕಳು '' ಮತ್ತು 'ಬಿ' ಗ್ರೇಡ್ ಪಡೆಯುತ್ತಿದ್ದಾರೆ. ಹಾಗೆಯೇ ತಮ್ಮ ಮೂಲ ಸ್ವಭಾವದಲ್ಲಿಯೂ ಸಾಕಷ್ಟು ಬದಲಾವಣೆ ಹೊಂದಿದ್ದಾರೆಇನ್ನು ಕೆಲವರು ಶಾಲಾ ಶಿಕ್ಷಣದಲ್ಲಿ ಅನುತ್ತೀರ್ಣರಾಗಿ ತಂದೆಯ ಕೆಲಸದಲ್ಲಿ ಸಹಾಯಕ್ಕೆ ನಿಂತಿದ್ದಾರೆ. ಗ್ಲೀಡಾ ಮತ್ತವರ ಗೆಳೆಯ ಸ್ಯಾಮ್ಯುಯಲ್ ಅವರಿಗೂ ಸಹ ಅವರ ಸೃಜನಶೀಲತೆಗೆ ಅನುಸಾರವಾಗಿ ತರಬೇತಿ ನೀಡುತ್ತಿದ್ದಾರ್ರೆ.
ಇವರು ಪ್ರಾರಂಭಿಸಿರುವ ಕಾರ್ಯಕ್ರಮದಲ್ಲಿ ಪ್ರತಿ ದಿನ ಸಂಜೆ ನಾಲ್ಕರಿಂದ ಸ್ಮಶಾನದಲ್ಲಿ ನಿತ್ಯವೂ ಪಾಠ ಪ್ರವಚನ ನಡೆಯುತ್ತದೆ. ಪ್ರತೀ ಭಾನುವಾರದಂದು ವಿಶೇಷ ತರಗತಿಗಳು, ಪರಿಣತ ಕಲಾವಿದರು, ಚಿತ್ರಕಾರರಿಂದ ಕಾರ್ಯಾಗಾರ ಹಮ್ಮಿಕೊಳ್ಲಲಾಗುತ್ತದೆ. ಜತೆಗೆ ಬೇಸಿಗೆ ಶಿಬಿರ ಏರ್ಪಡಿಸಿದ್ದಲ್ಲದೆ. "ಜಂಗಲ್ ಬುಕ್" ಚಿತ್ರ ಬಂದ ಸಮಯದಲ್ಲಿ ಮಕ್ಕಳನ್ನು ಚಿತ್ರಮಂದಿರಕ್ಕೆ ಕರೆದೊಯ್ದ ಚಿತ್ರ ವೀಕ್ಷಣೆ ಅವಕಾಶ ಮಾಡಿಕೊಟ್ಟರು. ಅದಾಗ ಎಷ್ಟೋ ಮಕ್ಕಳು ತಾವು ಪ್ರಥಮ ಬಾರಿಗೆ ಚಿತ್ರಮಂದಿರಕ್ಕೆ ಬಂದಿದ್ದರೆನ್ನುವುದು ಇಲ್ಲಿ ವಿಶೇಷ.
ಪ್ರಸ್ತುತ ಬೆಂಗಳೂರಿನ ಹಿಂದೂ, ಕ್ರೈಸ್ತ ಸ್ಮಶಾನಗಳಲ್ಲಿ ವಾಸಿಸುತ್ತಿರುವ 16 ಕುಟುಂಬಗಳ ನಲವತ್ತೊಂದು ಮಕ್ಕಳನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಲಲಾಗಿದ್ದು ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆಸಬೇಕು ಎನ್ನುವ ಯೋಜನೆ ಇವರದು. ಇಲ್ಲಿ ತರಬೇತಿ ಹೊಂದಿದ ಮಕ್ಕಳು ಮುಂದೆ ತಮ್ಮ ಸಮುದಾಯದವರಿಗೆ ತರ್ಬೇತಿ ನೀಡುವಂತಾಗಬೇಕು ಎನ್ನುವುದು ಇವರ ಅಭಿಲಾಷೆ.

ಹ್ಯಾಂಡ್ ಇನ್ ಹ್ಯಾಂಡ್
ಮಹತ್ವದ ಯೋಜನೆಗೆ ಸರಿಯಾದ ಹಣಕಾಸಿನ ನೆರವು ಸಿಗುತ್ತಿದ್ದಿಲ್ಲ. ಸಾಕಷ್ಟು ಸಂಖ್ಯೆಯ ಸ್ವಯಂಸೇವಕರ ಅಗತ್ಯವೂ ಇದಕ್ಕಿದೆ. ಹೀಗಾಗಿ ಗ್ಲೀಡಾ ಮತ್ತು ಗ್ಲ್ಯಾಡ್ಸನ್, ಗ್ಲ್ಯಾಡ್ಸನ್ ಅವರ ಸ್ನೇಹಿತರೊಬ್ಬರು ಸ್ಥಾಪಿಸಿದ 'ಹ್ಯಾಂಡ್ ಇನ್ ಹ್ಯಾಂಡ್ ಚಾರಿಟಬಲ್ ಟ್ರಸ್ಟ್' ಅಡಿಯಲ್ಲಿ ತಮ್ಮ ಕಾರ್ಯಚಟುವಟಿಕೆ ನಡೆಸುತ್ತಿದ್ದಾರೆ. ಇದರಿಂದ ಅದೆಷ್ಟೋ ಸಹೃದಯರಿಗೆ ಇವರ ಕಾರ್ಯಕ್ರಮದ ವಿವರ ತಿಳಿದು ತಾವು ಸ್ವತಹ ಸ್ಮಶಾನಕ್ಕೆ ಭೇಟಿ ನೀಡುವುದಲ್ಲದೆ ಮಕ್ಕಳಿಗೆ ಊಟ, ಬಟ್ಟೆಗಳನ್ನು ನೀಡಿ ಗೆಳೆಯರ  ಕಾರ್ಯಕ್ಕೆ ಪ್ರೋತ್ಸಾಹ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ಸ್ಮಶಾನದಲ್ಲಿ ವಾಸಿಸುವ ಕುಟುಂಬದಲ್ಲಿನ ಮಹಿಳೆಯರಿಗೂ ಯುವಕರು ವಿವಿಧ ಕರಕುಶಲ ತರಬೇತಿಗಳನ್ನು ನೀಡುತ್ತಾರೆ. ಅವರು ತಯಾರಿಸಿದ ಕುಸುರಿ ವಸ್ತುಗಳು, ಪೇಪರ್ ಬ್ಯಾಗ್, ಕ್ಯಾಂಡಲ್ ಗಳಿಗೆ ಮಾರುಕಟ್ಟೆ ಒದಗಿಸುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸುವುದಲ್ಲದೆ ಆದಾಯದ ಒಂದಂಶವನ್ನು ಮಕ್ಕಳ ಶಿಕ್ಷಣ ಯೋಜನೆಗೆ ಬಳಸಿಕೊಳ್ಳುತ್ತಿದ್ದಾರೆ.

ಸಮಾಜದ ಹೊಣೆ
ಹೇಳಬೇಕೆಂದರೆ, ಸ್ಮಶಾನದಲ್ಲಿ ಕೆಲಸ ಮಾಡುವವರಿಗೆ ಬಿಬಿಎಂಪಿ ವತಿಯಿಂದ ಸಂಬಳ ಸಂದಾಯವಾಗುತ್ತಿದೆ. ಆದರೆ ಅದೆಷ್ಟೋ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳು ಇಲ್ಲ. ಶೌಚಾಲಯದಂತಹಾ ಅಗತ್ಯ ಸೌಲಭ್ಯವೇ ಇಲ್ಲದಿರುವುದು ಕಾಣಿಸುತ್ತದೆ. ಇನ್ನು ಎಷ್ಟೋ ಕಡೆ ಸರಿಯಾದ ವಾಸದ ಮನೆಗಳಿಲ್ಲ. ಸಾಮಾಜಿಕ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಸಮಾಜದ ಇತರೆ ಸಮುದಾಯದ ಬಹುತೇಕರು ಇಂದಿಗೂ ಸ್ಮಶಾನ ವಾಸಿಗಳಾದ ಇವರನ್ನು ಪ್ರತ್ಯೇಕ ವಾಗಿಯೇ ಕಾಣುತ್ತಿದ್ದಾರೆ. ಧೋರಣೆ ಬದಲಾಗಬೇಕು.
ಸ್ಮಶಾನವು ಸ್ಪೂರ್ತಿಯ ತಾಣವಾಗಬೇಕು. ಸ್ಮಶಾನದಲ್ಲಿ ದುಡಿಯುವವರೂ ಸಮಾಜದ ಮುಖ್ಯವಾಹಿನಿಯ ಒಂದು ಭಾಗವೆನ್ನುವುದನ್ನು ಅರಿತುಕೊಳ್ಲಬೇಕು. ನಿಟ್ಟಿನಲ್ಲಿ ನಮ್ಮ ಕೆಲಸ ಸಾಗಿದೆ. ಎನ್ನುವುದು ಗ್ಲೀಡಾ ಮತ್ತು ಸ್ಯಾಮ್ಯುಅಯಲ್ ಅವರ ಮಾತು.
ಭವಿಷ್ಯದಲ್ಲಿ  ಅವರ ಸದುದ್ದೇಶದ ಕಾರ್ಯ ಯಶಸ್ವಿಯಾಗಿ ಸಾಗಲಿ, ಇವರ ಕೆಲಸದಿಂದ ಸ್ಪೂರ್ತಿ ಪಡೆದು ಇನ್ನಷ್ಟು ಯುವಕರು ಇಂತಹಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ. ವಿದ್ಯೆಯ ಬೆಳಕು ಎಲ್ಲೆಲ್ಲೂ ಪಸರಿಸಿ ಎಲ್ಲರ ಮನೆ ಮನಗಳನ್ನು ಬೆಳಗಲಿ.....


(ಈ ಲೇಖನವು ಕನ್ನಡದ ಖ್ಯಾತ ಮಾಸಪತ್ರಿಕೆ ಗೃಹಶೋಬಾ ದ ಏಪ್ರಿಲ್ 2017 ರ ಸಂಚಿಕೆಯಲ್ಲಿ  ಪ್ರಕಟಗೊಂಡಿದೆ. )