Saturday, May 31, 2014

ಭಾರತದಲ್ಲಿದೆ ಎರಡನೇ ಸಂವಿಧಾನ!

ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೆ ನಮಸ್ಕಾರ.

ಮೊನ್ನೆ ತಾನೆ ಚುನಾವಣೆ ಹಣಾಹಣಿಗಳೆಲ್ಲಾ ಮುಗಿದು ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದಿದೆ. ಇಂತಹಾ ಸಮಯದಲ್ಲಿ ಪ್ರಧಾನಿ ಕಾರ್ಯಾಲಯದ ಸಚಿವರಾದ ಜಿತೇಂದ್ರ ಸಿಂಗ್ “ಕಾಶ್ಮೀರಕ್ಕೆ ಒದಗಿದ 370 ನೇ ವಿಧಿಯನ್ನು ರದ್ದುಪಡಿಸುವ ಕುರಿತಂತೆ ಸಮಾಲೋಚಿಸಲು ಸರ್ಕಾರವು ಸಿದ್ದವಿದೆ.” ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಸಚಿವರ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ತಾವು ``ಹಾಗೆ ಮಾಡಿದ್ದಾದಲ್ಲಿ ಮೋದಿ ಆಡಳಿತ ಒಂದು ಕಹಿ ನೆನಪಾಗಿ ಉಳಿಯಲಿದೆ. ಅಲ್ಲದೆ ಆ ಭಾಗ ಭರತದಿಂದ ಬೇರ್ಪಡುವ ಸಾಧ್ಯತೆಯೂ ಇದೆ.” ಎಂದಿದ್ದರೆ. ಈ ಮೂಲಕ ಕಾಶ್ಮೀರ ಹಾಗೂ 370 ನೇ ವಿಧಿಯ ಕುರಿತಾದ ಚರ್ಚೆ ಪುನಃ ಮುನ್ನೆಲೆಗೆ ಬಂದಿದೆ. ಕಾಶ್ಮೀರದ ಸ್ವಾಯತ್ತೆಯ ಕುರಿತಾದ ಈ ಚರ್ಚೆ ಕೇವಲ ಚರ್ಚೆಯಾಗಿರದೆ ವಿವಾದದ ಸ್ವರೂಪ ಪಡೆದುಕೊಂಡಿರುವುದು ನಿಜಕ್ಕೂ ವಿಷಾದದ ಸಂಗತಿ. ಈ ಎಲ್ಲಾ ಹಿನ್ನೆಲೆಯಲ್ಲಿ ಈ 370 ನೇ ವಿಧಿ - ಹಾಗೆಂದರೆ ಏನು? ಅದರ ಹಿನ್ನೆಲೆಗಳನ್ನು ಇದರ ಪರಿಣಾಮಗಳನ್ನು, ಪರಿಹಾರ ಮಾರ್ಗೋಪಾಯಗಳನ್ನು ತಿಳಿಸಿಕೊಡುವ ಪ್ರಯತ್ನವು ಇಲ್ಲಿದೆ.


370 ನೇ ವಿಧಿಯ ಪರಿಭಾಷೆ

ಭಾರತದ ಸಂವಿಧಾನದಲ್ಲಿರುವ 21 ನೇ ಪರಿಚ್ಚೇದವು ಭಾರತದ ಯಾವೊಂದು ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ನೆರವಾಗುತ್ತದೆ. ಇದೇ ಪರಿಚ್ಚೇದದಡಿಯಲ್ಲಿ ಬರುವ ವಿಧಿ 370. ಇದರ ಮೂಲಕ ಯಾವುದೇ ಒಂದು ಪ್ರಾಂತ್ಯಕ್ಕೆ ತತ್ಕಾಲಿಕವಾಗಿ ವಿಶೇಷ ಸ್ಥಾನಮಾನ ಕಲ್ಪಿಸಬಹುದು. ಅಂತಹಾ ಸ್ಥಾನಮಾಮ ಪಡೆದ ರಾಜ್ಯವು ದೇಶದ ಇತರೆ ರಾಜ್ಯಗಳಿಗೆ ಅನ್ವಯಿಸುವ ಕೆಲವು ನಿರ್ದಿಷ್ಟ ಕಾನೂನಿನಿಂದ ಮುಕ್ತವಾಗಿರುತ್ತದೆ. ಕೆಲವೊಂದು ವಿಶೇಷ ಕಾನೂನುಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಸಮಯದಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳ ಅಂತಿಮ ತೀರ್ಮಾನವನ್ನು ಆಯಾ ರಾಜ್ಯದ ವಿಧಾನ ಸಭೆಗೇ ಬಿಡಬೇಕಾಗುತ್ತದೆ.

ವಿಧಿ ಜಾರಿಗೊಂಡ ಹಿನ್ನೆಲೆ

ಅದು 1947 ರ ಸಮಯ. ಭಾರತ ಬ್ರಿಟೀಷರ ದಾಸ್ಯದಿಂದ ಬಿಡುಗಡೆ ಹೊಂದಿತ್ತು. ಇಡೀ ದೇಶ ಸಂಭ್ರಮಾಚರಣೆಯಲ್ಲಿತ್ತು. ಆದರೆ ಕಾಶ್ಮೀರ ಮಾತ್ರ ತನ್ನದೇ ಪ್ರತ್ಯೇಕತೆಯನ್ನು ಸಾರಿತ್ತು! ಅಲ್ಲಿನ ಮಹಾರಾಜ ಹರಿಸಿಂಗ್ ತನ್ನದು ಪ್ರತ್ಯೇಕ ರಾಜ್ಯವೆನ್ನುವುದಾಗಿ ಘೋಷಿಸಿದ್ದನು. ಅದಕ್ಕೆ ಒಪ್ಪಿಕೊಂಡ ಎರಡೂ ದೇಶಗಳು (ಭಾರತ ಹಾಗೂ ಪಾಕಿಸ್ತಾನ)  ಸಹ ತಾವು ಕಾಶ್ಮೀರದ ಮೇಲೆ ಧಾಳಿ ಮಾಡಬಾರದೆನ್ನುವ ತೀರ್ಮಾನಕ್ಕೆ ಬಂದವು. ಆದರೆ ಪಾಕಿಸ್ತಾನವು ಆ ತೀರ್ಮಾನವನ್ನು ಹೆಚ್ಚು ಕಾಲ ಪಾಲಿಸದೆ 1947 ಅಕ್ಟೋಬರ್ 6 ರಂದು `ಆಜಾದ್ ಕಾಶ್ಮೀರ್’ ಗಾಗಿ ಕಾಶ್ಮೀರದ ಮೇಲೆ ಯುದ್ದ ಸಾರಿತು. ಆಗ ಅಲ್ಲಿನ ರಾಜ ಹರಿಸಿಂಗ್ ಭಾರತದ ಸಹಾಯವನ್ನು ಯಾಚಿಸಿದ್ದರು. ಕಾಶ್ಮೀರವು ಸಂಪೂರ್ಣವಾಗಿ ಭಾರತದೊಡನೆ ವಿಲೀನವಾಗುವುದಾದರೆ ಆಗ ಮಾತ್ರ ಭಾರತದ ನೆರವು ನೀಡುವುದಾಗಿ ಅಂದಿನ ಸರ್ಕಾರ ಭರವಸೆ ನೀಡಿತು. ಅದಕ್ಕೊಪ್ಪದೆ ಹೋದ ಮಹಾರಾಜ ಹರಿಸಿಂಗ್ ಗೆ ಭಾರತದ ಪ್ರಧಾನಿಗಳಾಗಿದ್ದ ನೆಹರೂ ರವರು ಭಾರತದೊಡನೆ ಜಮ್ಮು ಕಾಶ್ಮೀರವು ವಿಲೀನಗೊಳ್ಳಬೇಕು. ಸಂವಿಧಾನದ 370 ನೇ ವಿಧಿಯ ಪ್ರಕಾರ ರಕ್ಷಣೆ, ವಿದೇಶಾಂಗ, ಸಂವಹನದ ಕ್ಷೇತ್ರದ ಹೊರತಾಗಿ ಭಾರತದ ಬೇರಾವ ಕಾನೂನುಗಳು ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ. ಎಂಬ ಸಂಧಾನ ಸೂತ್ರವನ್ನು ಮುಂದಿಟ್ಟರು. ಈ ರಾಜೀ ಸೂತ್ರಕ್ಕೆ ಒಪ್ಪಿದ ಮಹಾರಾಜ ಹರಿಸಿಂಗ್ ಒಪ್ಪಂದಕ್ಕೆ ಸಹಿ ಹಾಕಿದರು. ಪಾಕಿಸ್ತಾನದ ಧಾಳಿಯ್ಯನ್ನು ಭಾರತವು ಧೈರ್ಯವಾಗಿ ಹಿಮ್ಮೆಟ್ಟಿಸಿತು. ಅಂದಿನಿಂದಲೂ ಜಮ್ಮು ಕಾಶ್ಮೀರಕ್ಕೆ 370 ನೇ ವಿಧಿಯು ಅನ್ವಯವಾಗಿದೆ.

ವಿಧಿಯ ಪರಿಣಾಮ

ಈ 370 ನೇ ವಿಧಿಯಿಂದಾಗಿ ಭಾರತದ ಸರ್ವೋಚ್ಚ ಸಾಂವಿಧಾನಿಕ ಸಂಸ್ಥೆಯಾದ ಸಂಸತ್ತಿಗೆ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿ ಕಾನೂನನ್ನು ರೂಪಿಸುವ ಅಧಿಕಾರವು ಇರುವುದಿಲ್ಲ. ಒಂದು ವೇಳೆ ಹಾಗೇನಾದರೂ ಕಾನೂನನ್ನು ರೂಪಿಸಬೇಕಾದಲ್ಲಿ ಅದನ್ನು ರಾಷ್ಟ್ರಪತಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮುಟ್ಟಿಸಿ ಆ ರಾಜ್ಯದ ವಿಧಾನ ಸಭೆಯಲ್ಲಿ ಮಂಡಿಸಬೇಕು! ಇನ್ನೂ ಕೆಲವು ಕಾನೂನುಗಳನ್ನು ಅಲ್ಲಿನ ರಾಜ್ಯ ಸರ್ಕಾರದ ಅನುಮತಿ ಪಡೆದು ಸಂಸತ್ತಿನಲ್ಲಿ ಮಂಡನೆ ಮಾಡಬಹುದಾಗಿದೆ. ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನವು ಅಸ್ತಿತ್ವದಲ್ಲಿದೆ. ಈ ಪ್ರತ್ಯೇಕ ಸಂವಿಧಾನವನ್ನು ಅಲ್ಲಿನ ವಿಧಾನ ಸಭೆಯು ಜನವರಿ 26, 1957 ರಂದು ಸರ್ವಾನುಮತದಿಂದ ಅಂಗೀಕರಿಸಿದೆ!

ಇದು ದೇಶದಲ್ಲಿ ಜಾರಿಯಲ್ಲಿರುವ ಎರಡನೇ ಸಂವಿಧಾನ!

ಕಾಶ್ಮೀರದ ಸಂವಿಧಾನವು ತಿದ್ದುಪಡಿಗೊಳ್ಳುವುದೂ ಸಹ ಆ ರಾಜ್ಯದ ವಿಧಾನ ಸಭೆಯಲ್ಲಿಯೇ! ವಿಧಾನ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳನ್ನು ಆ ರಾಜ್ಯ ಅರ್ಕಾರದ ಅನುಮತಿಯೊಡನೆ ರಾಷ್ಟ್ರಪತಿಗಳ ಸಹಿಗಾಗಿ ಕಳುಹಿಸಬಹುದು. 

ಈ 370 ನೇ ವಿಧಿಯ ಪರಿಣಾಮವಾಗಿ ಭಾರತದ ಬೇರೆಲ್ಲಾ ರಾಜ್ಯಗಳಿಗೆ ಅನ್ವಯಿಸುವ ಸಂವಿಧಾನದ 238 ನೇ ವಿಧಿಯು ಜಮ್ಮು ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ. ಅಲ್ಲದೆ ಸಂವಿಧಾನದ 360 ನೇ ವಿಧಿಯನ್ವಯ ದೇಶಾದ್ಯಂತ ಆರ್ಥಿಕ ತುರ್ತು ಸ್ಥಿತಿಯನ್ನು ಘೋಷಿಸುವ ಅಧಿಕಾರವು ಕೇಂದ್ರ ಸರ್ಕಾರಕ್ಕಿದೆ. ಆದರೆ ಈ ಬಗೆಯ ತುರ್ತು ಪರಿಸ್ಥಿತಿಯನ್ನು ಸಹ ಆರಾಜ್ಯದಲ್ಲಿ ಜಾರಿ ಮಾಡುವುದಕ್ಕೆ ಸಾಧ್ಯವಿಲ್ಲ! ಹೊರದೇಶಗಳ ಆಕ್ರಮಣದ ವೇಳೆಯಲ್ಲಿ ಮಾತ್ರವೇ ಅಲ್ಲಿ ತುರ್ತು ಪರಿಸ್ಥಿತಿ ಘೋಷಿಸಲು ಸಾಧ್ಯ! ಇನ್ನು ಒಂದು ವೇಳೆ ಅಂತಹಾ ಸನ್ನಿವೇಶಗಳಿದ್ದು ತುರ್ತು ಸ್ಥಿತಿ ಘೋಷಿಸಲೇ ಬೇಕಾದಲ್ಲಿ ಅದಕ್ಕೆ ಅಲ್ಲಿನ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು! ಭಾರತದ ರಾಷ್ಟ್ರಪತಿಗಳು ಆ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಬೇಕೆಂದು ಕೋರಿ ಅಲ್ಲಿನ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು!

ಇನ್ನೂ ಒಂದು ಮುಖ್ಯ ಸಂಗತಿ ಏನೆಂದರೆ ಬೇರೆ ರಾಜ್ಯದವರು ಈ ರಾಜ್ಯದಲ್ಲಿ ಆಸ್ತಿ ಖರೀದಿಸುವಂತಿಲ್ಲ, ಆದರೆ ಜಮ್ಮು ಕಾಶ್ಮೀರ ರಾಜ್ಯದವರು ಭಾರತದ ಇತರೆ ರಾಜ್ಯಗಳಲ್ಲಿಯೂ ಆಸ್ತಿ ಖರೀದಿಸಬಹುದು! ಜಮ್ಮು ಕಾಶ್ಮೀರದ ನಾಗರಿಕರು ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ! ದೇಶದ ಎಲ್ಲಾ ರಾಜ್ಯಗಳ ಉಚ್ಚ ನ್ಯಾಯಾಲಯಗಳು ಸಹ ಸಂವಿಧಾನದ ವಿಧಿ 226 ರ ಅನುಸಾರ ಸಂವಿಧಾನದ ತಿದ್ದುಪಡಿಯನ್ನು ಮಾಡುವ ಅಧಿಕಾರವನ್ನು ಹೊಂದಿದ್ದರೂ ಜಮ್ಮು ಕಾಶ್ಮೀರ ರಾಜ್ಯದ ಉಚ್ಚ ನ್ಯಾಯಾಲಯವು ಮಾತ್ರ ಇದರಿಂದ ಮುಕ್ತ! ಯಾವೊಂದು ಕಾನೂನನ್ನೂ ಸಹ ಅಸಂವಿಧಾನಿಕವೆನ್ನುವ ಹಕ್ಕು ಆ ನ್ಯಾಯಾಲಕ್ಕಿಲ್ಲ. ಬೇರೆಲ್ಲಾ ರಾಜ್ಯಗಳ ವಿಧಾನ ಸಭೆಗಳ ಆಡಳಿತ ಅವಧಿ 5 ವರ್ಷಗಳಾಗಿದ್ದರೆ ಜಮ್ಮು ಕಾಶ್ಮೀರದ ವಿಧಾನ ಸಭೆ ಆಡಳಿತದ ಅವಧಿ 6 ವರ್ಷಗಳು!  ಆ ರಾಜ್ಯದ ಶಾಶ್ವತ ನಾಗರಿಕರಾದವರಿಗೆ ಮಾತ್ರವೇ ಅಲ್ಲಿ ಆಸ್ತಿ ಖರೀದಿಸುವ ಹಕ್ಕಿದೆ, ಅಲ್ಲಿನ ಸರ್ಕಾರಿ ಹುದ್ದೆಗಳಿಗೆ ನೇಮಕವಾಗುವ ಅಧಿಕಾರವಿದೆ! ಇನ್ನು ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬೇಕಾದರೂ ಸಹ ಅಲ್ಲಿನ ಗವರ್ನರರ ಅನುಮತಿ ಬೇಕು.

ಇದಕ್ಕೆ ಪರಿಹಾರವೇನು?

ಹೀಗೆ ನಾನಾ ಕಾರಣಗಳಿಂದ ಪ್ರತ್ಯೇಕವಾದ ಸಂವಿಧಾನದೊಡನೆ ಗುರುತಿಸಿಕೊಂಡಿರುವ ಕಾಶ್ಮೀರವನ್ನು ಭಾರತದ ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ತರಲು ಎಂದಿಗೂ ಸಾಧ್ಯವಿಲ್ಲವೆ? ಹಿಗೊಂದು ಪ್ರಶ್ನೆ ನಿಮ್ಮಲ್ಲೇನಾದರೂ ಇದ್ದಿತಾದರೆ ಅದಕ್ಕೆ ಉತ್ತರ, ನಾಯಕರಲ್ಲಿ ನಿಜವಾದ ಇಚ್ಚಾಶಕ್ತಿಯಿದ್ದರೆ ಅದು ಸಾಧ್ಯವಿದೆ.  ಇದಕ್ಕೆ ಮೊದಲ ಹೆಜ್ಜೆಯಾಗಿ ಜಮ್ಮು ಕಾಶ್ಮೀರದ ವಿಧಾನ ಸಭೆಯು ಸರ್ವಾನುಮತದ ನಿರ್ಣಯವನ್ನು ಮಂಡಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಆ ಬಳಿಕ ಕೇಂದ್ರವು ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಅದು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಮೂರನೇ ಎರಡರಷ್ಟು ಬಹುಮತಗಳೊಂದಿಗೆ ಅಂಗೀಕಾರವಾಗಬೇಕು. ನಂತರ ಅದಕ್ಕೆ ರಾಷ್ಟ್ರಪತಿಗಳ ಸಹಿಯು ಬೀಳುವ ಮೂಲಕ ಕಾಯ್ದೆಯು ಜಾರಿಯಾಗಬಲ್ಲುದು.

ಆದರೆ ಈ ಕಾಯ್ದೆ ತಿದ್ದುಪಡಿ ವಿಚಾರಗಳ ಕುರಿತ ಹಾಗೆ ಸಂವಿಧಾನ ತಜ್ಞರುಗಳೇ ಬೇರೆ ಬಗೆಯಲ್ಲಿ ವಾದಗಳನ್ನು ಮುಂದಿಡುತ್ತಾರೆ. ಅವರುಗಳ ಪ್ರಕಾರವಾಗಿ ಈ ಸಮಸ್ಯೆಯ ಪರಿಹಾರವು ಈ ಮೇಲೆ ಹೇಳಿರುವಷ್ಟು ಸುಲಭ ಸಾಧ್ಯವಲ್ಲ! ಸಂವಿಧಾನ ತಿದ್ದುಪಡಿಗಾಗಿ ಸಂಸತ್ತಿಗಿರುವ ಅಧಿಕಾರವು ಯಾವುದೇ ಕಾರಣದಿಂದ ಮುಕ್ತವಾಗಿ ಇಲ್ಲ. ಕಾನೂನನ್ನು ತಿದ್ದುಪಡಿಗೊಳಿಸಲು ಸಂವಿಧಾನದ 368 ನೇ ವಿಧಿಯು ಸಂಸತ್ತಿಗೆ ಅಧಿಕಾರವನ್ನು ನೀಡಿದ್ದರೂ ಸಹ 7 ನೇ ಅನುಸೂಚಿಯ ತಿದ್ದುಪಡಿಗೆ ಇದೇ ವಿಧಿಯು ಸಂಸತ್ತಿನ ಅಧಿಕಾರವನ್ನು ಮೊಟಕುಗೊಳಿಸಿದೆ! ಭಾರತ ದೇಶದ ಅರ್ಧಕ್ಕಿಂತಲೂ ಹೆಚ್ಚಿನ ರಾಜ್ಯಗಳ ಶಾಸಕಾಂಗಗಳಿಂದ ಅಂಗೀಕಾರ ದೊರೆಯದ ಹೊರತಾಗಿ 7 ನೇ ಅನುಸೂಚಿ ಪಟ್ಟಿಗೆ ಸಂಸತ್ತು ಬದಲಾವಣೆ ತರುವುದು ಅಸಾಧ್ಯ!

ಇನ್ನು ದೇಶದ ಇತರೆ ಕೆಲವು ರಾಜ್ಯಗಳಲ್ಲಿಯೂ ಸಹ ಇಂತಹುದೇ ಕಾಯ್ದೆಗಳು ಜಾರಿಯಲ್ಲಿದೆ. ಅಂಡಮಾನ್ ಮತ್ತು ನಿಕೋಬಾರ್, ನಾಗಾಲ್ಯಾಂಡ್, ಮಿಜೋರಾಂ, ಅರುಣಾಚಲ ಪ್ರದೇಶಗಳಲ್ಲಿ ಸಹ ರಾಜ್ಯದ ವಿಧಾನಸಭೆಗೆ ವಿಶೇಷಾಧಿಕಾರ ಇರುವಂತೆ ಕಾನೂನುಗಳು ಜಾರಿಯಲ್ಲಿದೆ. ಅದಕ್ಕೆ ಉದಾಹರಣೆ ಎಂದರೆ ಸಂವಿಧಾನದ 371 (ಜೆ) ವಿಧಿಯ ಅನುಸಾರ ಮಿಜೋರಾಂ ಶಾಸಕಾಂಗದ ಒಪ್ಪಿಗೆ ಇಲ್ಲದೆ ಸದರಿ ರಾಜ್ಯದ ಭೂಮಿಯ ಒಡೆತನ ಹಾಗೂ ವರ್ಗಾವಣೆಗೆ ಸಂಸತ್ತಿಗೆ ಯಾವುದೇ ಅಧಿಕಾರವಿಲ್ಲ!


370 ನೇ ವಿಧಿ ಎನ್ನುವುದು 1947 ರ ಸಮಯದಲ್ಲಿ ಅನಿವಾರ್ಯಾವಾಗಿತ್ತು. ಅಂದು ಆ ವಿಧಿಯು ಕಾಶ್ಮೀರಿಗಳ ಆತ್ಮಗೌರವದ ವಿಚಾರವಾಗಿತ್ತು. ಆದರೆ ಆ ವಿಧಿ ಇದ್ದರೂ, ಇಲ್ಲದಿದ್ದರೂ ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವೆನ್ನುವುದರಲ್ಲಿ ಎರಡನೇ ಮಾತಿಲ್ಲ. ರಾಜ್ಯದ ಕೆಲವು ಪ್ರದೇಶಗಳಾನ್ನು ನೆರೆ ರಾಷ್ಟ್ರ ಪಾಕಿಸ್ತಾನ ತನ್ನ ವಶದಲ್ಲಿಟ್ಟುಕೊಂಡಿದ್ದು ಆ ಬಗ್ಗೆ ಭಾರತದ ವಿರೋಧವು ಇದ್ದೇ ಇದೆ. ಹಾಗೆನ್ನುವ ಮಾತ್ರಕ್ಕೆ ಕಾಶ್ಮೀರ ರಾಜ್ಯಕ್ಕೆ ಮಾತ್ರವೇ ಬೇರೆ ಯಾವ ರಾಜ್ಯಕ್ಕಿಲ್ಲದ ಸ್ವಾಯತ್ತೆಯನ್ನು ನೀಡಬೆನ್ನುವುದು ಸರ್ವಥಾ ಸರಿಯಲ್ಲ. ಒಂದೇ ದೇಶದಲ್ಲಿ ಮತ್ತೊಂದು ದೇಶದ ಪರಿಕಲ್ಪನೆ, ಒಂದು ಸಂವಿಧಾನವನ್ನು ಸರ್ವೋಚ್ಚ ಎಂದು ಸಾರುವ ದೇಶದಡಿಯಲ್ಲಿಯೇ ಇನ್ನೊಂದು ಪ್ರತ್ಯೇಕ ಸಂವಿಧಾನವಿರುವುದು ಎಷ್ಟರ ಮಟ್ಟಿಗೆ ಸರಿಯಾದುದು? ಹೀಗಾಗಿ ಇದೀಗ ಅಧಿಕಾರಕ್ಕೆ ಬಂದಿರುವ ಭಾರತೀಯ ಜನತಾ ಪಕ್ಷದ ಸರ್ಕಾರದ ಅವಧಿಯಲ್ಲಿಯೇ ಈ ವಿಧಿಯನ್ನು ರದ್ದುಪಡಿಸಬೇಕೋ? ಇಲ್ಲವೇ ಮುಂದುವರಿಸಿಕೊಂಡು ಹೋಗಬೇಕೋ ಎನ್ನುವುದರ ಬಗ್ಗೆ ವಿಚಾರಪೂರ್ಣವಾದ ಚರ್ಚೆಯಾಗಲಿ, ಹಾಗೆ ಚರ್ಚೆ, ವಿಚಾರ ವಿನಿಮಯಗಳ ನಡೆದು ಅಂತಿಮ ತೀರ್ಮಾನವಾಗಲಿ ಎನ್ನುವುದು ಬಹುತೇಕ ಎಲ್ಲಾ ಭಾರತೀಯರ ಆಶಯ. ಇಂತಹಾ ವಿಚಾರಗಳಲ್ಲಿ ಭಾವೋದ್ವೇಗಕ್ಕೆ ಅವಕಾಶ ಕೊಡದೆ ಸಮಚಿತ್ತದಿಂದ ವಿಶ್ಲೇಷಿಸಿ ತೀರ್ಮಾನಗಳನ್ನು ಕೈಗೊಳ್ಳಬೇಕು.

 ನಮಸ್ಕಾರ.

Saturday, May 24, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು (Myths) – 24

ಲೇಪಾಕ್ಷಿ (Lepakshi)

ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಲೇಪಾಕ್ಷಿ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಕ್ಷೇತ್ರವಾಗಿದೆ. ಈಗಾಗಲೇ ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನವನ್ನು ಪ್ಡೆದಿರುವ ಪ್ರವಾಸಿ ತಾಣದ ವೀಕ್ಷಣೆಗೆ ದಿನನಿತ್ಯವೂ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಲೇಪಾಕ್ಷಿಯಲ್ಲಿನ ವೀರಭದ್ರೇಶ್ವರ ಸ್ವಾಮಿ ದೇವಾಲಯ, ನಾಗಲಿಂಗೇಶ್ವರ ದೇವಾಲಯಗಳು ತಮ್ಮಲ್ಲಿನ ಅದ್ಭುತ ಶಿಲ್ಪಕಲೆಗಳಿಂದಾಗಿ ಗಮನ ಸೆಳೆಯುತ್ತವೆ. ಇದರೊಂದಿಗೆ ಇಲ್ಲಿರುವ ಬೃಹತ್ ನಂದಿ ವಿಗ್ರಹವೂ ಸಹ ಭಾರತದಲ್ಲಿಯೇ ಅತಿ ದೊಡ್ಡದಾದುದಾಗಿರುವುದು ಹಾಗೂ ಅತ್ಯಂತ ಸುಂದರವಾಗಿರುವುದೂ ಆಗಿದೆ.

***

Nagalingeshwara, Lepakshi

ರಾಮಾಯಣ ಕಾಲದಲ್ಲಿ ಶ್ರೀ ರಾಮನು ವನವಾಸದಲ್ಲಿರಬೇಕಾದರೆ ಲಂಕಾಧಿಪತಿ ರಾವಣನು ಶ್ರೀ ರಾಮನ ಪತ್ನಿ ಸೀತಾದೇವಿಯನ್ನು ಅಪಹರಿಸಿಕೊಂಡು ತನ್ನ ಪುಷ್ಪಕ ವಿಮಾನದಲ್ಲಿ ಕರೆದೊಯ್ಯುತ್ತಿರಬೇಕಾದರೆ ಮಾರ್ಗ ಮದ್ಯದಲ್ಲಿ ಜಟಾಯು ಎನ್ನುವ ಹೆಸರಿನ ಪಕ್ಷಿಯೊಂದು ಎದುರಾಗುತ್ತದೆ. ಪಕ್ಷಿಯು ಸೀತೆಯ ಆರ್ತನಾದವನ್ನು ಕೇಳಿ ರಾವಣನನ್ನು ಸೀತೆಯನ್ನು ಎಲ್ಲಿದ್ದಳೋ ಅಲ್ಲೇ ಬಿಟ್ಟು ಬರುವಂತೆ ಪರಿ ಪರಿಯಾಗಿ ಬೇಡಿಕೊಂಡರೂ ರಾವಣನದಕ್ಕೆ ಒಪ್ಪದೇ ಹೋದಾಗ ತಾನು ಅಸುರನೊಡನೆ ಯುದ್ದಕ್ಕಿಳಿಯುತ್ತದೆ. ಆದರೆ ಬಲಿಷ್ಟ್ನಾಗಿದ್ದ ರಾವಣನೆದುರು ಬಡ ಪಕ್ಷಿಯ ಆಟ ಅದೆಷ್ಟು ಕಾಲ ನಡೆದೀತು? ರಾವಣನು ತಾನು ಪಕ್ಷಿಯ ಎರ್ಡೂ ರೆಕ್ಕೆಗಳನ್ನು ಕಡಿದು ಅದು ನೆಲಕ್ಕುರುಳುವಂತೆ ಮಾಡುತ್ತಾನೆ. ತಾನು ಸೀತೆಯೊಂದಿಗೆ ಲಂಕೆಯ ಮಾರ್ಗ ಹಿಡಿಯುತ್ತಾನೆ.

Mahanandi statue, Lepakshi 

ಇತ್ತ ಶ್ರೀ ರಾಮನು ತನ್ನ ಪತ್ನಿಯನ್ನರಸುತ್ತಾ ಬರುತ್ತಿರಲಾಗಿ ಮಾರ್ಗ ಮದ್ಯದಲ್ಲಿ ಜೀವಚ್ಚವವಾಗಿ ಬಿದ್ದಿರುವ ಜಟಾಯುವು ಕಣ್ಣಿಗೆ ಬೀಳುತ್ತದೆ. “ಹಾ...ಸೀತಾ... ” ಎಂದು ಮೊರೆಯಿಡುತ್ತಾ ಬರುತ್ತಿದ್ದ ರಾಮನನ್ನು ನೋಡಿದ ಪಕ್ಷಿಯು ಶ್ರೀ ರಾಮನಿಗೆ ``ಸೀತಾದೇವಿಯನ್ನೂ ಮತ್ತು ನನ್ನ ಪ್ರಾಣಗಳನ್ನೂ ರಾವಣನು ಅಪಹರಣ ಮಾಡಿದನು. ರಾವಣನು ಎತ್ತಿಕೊಂಡಿದ್ದ ಸೀತೆಯನ್ನು ಬಿಡಿಸಲು ಹೋಗಿ ಅವನ ರಥ ಸಾರಥಿ ಬಿಲ್ಲುಗಳನ್ನು ಮುರಿದೆ. ಇದನ್ನು ನೋಡಿ ಕ್ರೋಧದಿಂದ ಸಂತೃಪ್ತನಾದ ರಾವಣನು ಮುಪ್ಪಿನಿಂದ ಮುದಿಯಾದ ನನ್ನ ರೆಕ್ಕೆಗಳನ್ನು ಕತ್ತರಿಸಿ ಸೀತೆಯನ್ನು ಅಪಹರಿಸಿಕೊಂಡು ಹೋದನು..” ಎನ್ನುತ್ತದೆ.  ಅದನ್ನು ಕೇಳಿದ ರಾಮನು ಇನ್ನಷ್ಟು ಭೀತಿಯಿಂದಈಗ ಸೀತೆಯು ಎಲ್ಲಿರುವಳು?” ಎಂದು ಕೇಳಲು ಜಟಾಯುವು  ``ರಾವಣನು ತನ್ನ ಸಾಮರ್ಥ್ಯದಿಂದ ಮೇಘಗಳನ್ನು ಸೃಷ್ಟಿಮಾಡಿ ಕತ್ತಲನ್ನುಂಟು ಮಾಡಿದನು. ಬಳಿಕ ಬಳಲಿದ ನನ್ನ ರೆಕ್ಕೆಗಳನ್ನು ಕತ್ತರಿಸಿ ಸೀತೆಯನ್ನು ಕೊಂಡೊಯ್ದನು. ಅವನು ದಕ್ಷಿಣಕ್ಕೆ ಹೋದನೆಂದು ತೋರುತ್ತದೆ. ……ನನ್ನ ಪ್ರಾಣಗಳು ಊರ್ಧ್ವಮುಖವಾಗುತ್ತಿವೆ. ನೋಟ ಮಂದವಾಗುತ್ತಿದೆ. ರಾವಣನು ವಿಶ್ರವಸ್ಸಿನ ಮಗ; ಕುಬೇರನ ತಮ್ಮಎನ್ನುತ್ತೆನ್ನುತ್ತಲೇ ಪ್ರಾಣ ಬಿಡುತ್ತದೆ. ಹಾಗೆ ಪ್ರಾಣವನ್ನು ಬಿಟ್ಟ ಪಕ್ಷ್ರಾಜ ಜಟಾಯುವಿಗೆ ಶ್ರೀ ರಾಮನು ತಾನೇ ಸ್ವತಃ ಮಂತ್ರಪೂರ್ವಕ ಸಂಸ್ಕಾರ ನಡೆಸುತ್ತಾನೆ. ಅಲ್ಲದೆಲೇ.. ಪಕ್ಷಿ....” ಎಂದೆನ್ನುವ ಮೂಲಕ ಮೋಕ್ಷ ಪ್ರಾಪ್ತಿಯಗುವಂತೆಯೂ ಮಾಡುತ್ತಾನೆ.

ಹಾಗೆ ಜಟಾಯುವಿಗೆ ಮೋಕ್ಷ ಕರುಣಿಸಿದ ಜಾಗವೇ ಇಂದಿನ ಲೇಪಾಕ್ಷಿಯಾಗಿದೆ. ಅಂದು ಶ್ರೀ ರಾಮನು ನುಡಿದಲೇ... ಪಕ್ಷಿ...” ಯು ಕಾಲಾನಂತರದಲ್ಲಿ  “ಲೇಪಾಕ್ಷಿ”  ಆಗಿ ಬದಲಾಗಿದೆ

Tuesday, May 20, 2014

ಭವ್ಯ ಭಾರತಕ್ಕೆ ಎಲ್ಲರೂ ಜೊತೆಯಾಗಬೇಕು

ಭಾರತದ ನೂತನ ಪ್ರಧಾನಿಯಾಗ ಹೊರಟಿರುವ ನರೇಂದ್ರ ಮೋದಿಯವರ ಮೊದಲ ವಿಜಯ ಭಾಷಣವನ್ನು ಎರಡು ದಿನಗಳ ಹಿಂದೆ ‘ಕನ್ನಡ ಪ್ರಭ’ ದಲ್ಲಿ ಪ್ರಕಟಿಸಲಾಗಿತ್ತು. ಯಾರ್ಯಾರು ಪರ್ತಿಕೆಯಲ್ಲಿ ಅದನ್ನೋದಿದ್ದೀರೋ ಅವರಿಗೆಲ್ಲರಿಗೂ ಧನ್ಯವಾದಗಳು.

ಹಾಗೆಯೇ ಯಾರು ಆ ದಿನ ಓದುವುದಕ್ಕೆ ಸಾಧ್ಯವಾಗಿರಲಿಲ್ಲವೋ ಅವರಿಗೂ ಭವಿಷ್ಯದ ಭಾರತದ ಕುರಿತಾಗಿ ಮೋದಿಯವರ ನಿಲುವೇನೆನ್ನುವುದು ಅರಿವಾಗಲಿ ಎನ್ನುವ ಉದ್ದೇಶದಿಂದ ಇಲ್ಲಿ ಆ ಲೇಖನದ ಯಥಾವತ್ ಪ್ರಕಟಿಸುತ್ತಿದ್ದೇನೆ.

ನೀವೆಲ್ಲರೂ ಓದಿ, ಭಾರತದ ಭವ್ಯ ಭವಿಷ್ಯಕ್ಕೆ ಮೋದಿಯವರೊಡನೆ ಕೈಜೋಡಿಸುವಿರೆನ್ನುವ ಭರವಸೆಗಳೊಡನೆ.....

ನಮಸ್ಕಾರ.

***


ಭವ್ಯ ಭಾರತಕ್ಕೆ ಎಲ್ಲರೂ ಜೊತೆಯಾಗಬೇಕು


ಶುಕ್ರವಾರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಹೊರಬಿದ್ದಿವೆ. ಉತ್ತರ ಪ್ರದೇಶದ ವಾರಾಣಸಿಯಿಂದಷ್ಟೇ ಅಲ್ಲದೆ ಗುಜರಾತ್‌ನ ವಡೋದರಾ ಕ್ಷೇತ್ರದಲ್ಲೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸ್ಪರ್ಧಿಸಿದ್ದರು. ವಡೋದರಾದಲ್ಲಿ 5.17 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ ನಂತರ ಅವರು ಮಾಡಿದ ಮೊದಲ ವಿಜಯ ಭಾಷಣದ ಝಲಕು ಇಲ್ಲಿದೆ.

    ವಡೋದರಾದ ನನ್ನ ಪ್ರೀತಿಯ ಸಹೋದರರೇ. ದೇಶದ ಮಾಧ್ಯಮಗಳೆಲ್ಲವೂ ಬೆಳಗ್ಗೆಯಿಂದ ನನ್ನ ಮಾತಿಗಾಗಿ ಕಾದಿದ್ದವು. ಆದರೆ, ಒಂದು ಒಂದು ವೇಳೆ ಮಾತನಾಡುವುದೇ ಆದರೆ ಮೊದಲು ವಡೋದರಾದಲ್ಲೇ ಮಾತನಾಡುತ್ತೇನೆ ಎಂದು ನಾನು ನಿಶ್ಚಯಿಸಿದ್ದೆ.

    ಈ ಚುನಾವಣೆಯಲ್ಲಿ ಎರಡು ಮಹತ್ವಪೂರ್ಣ ಸಂಗತಿಗಳು ನನ್ನೊಂದಿಗೆ ಘಟಿಸಿದವು. ಮೊದಲನೆಯದಾಗಿ, ವಡೋದರಾದಲ್ಲಿ ನಾಮಪತ್ರ ಸಲ್ಲಿಸಿದ ನಂತರ, ಇಲ್ಲಿ ಕೇವಲ ಒಂದೇ ಒಂದು ಸಭೆ ನಡೆಸಲು ಮಾತ್ರ ನನಗೆ ಸಾಧ್ಯವಾಯಿತು. ಈ ನಗರಕ್ಕೆ ನಾನು ಕೇವಲ 50 ನಿಮಿಷಗಳನ್ನು ಕೊಟ್ಟೆ, ಆದರೆ ನೀವು ಲಕ್ಷಾಂತರ ಮತಗಳನ್ನು ಕೊಟ್ಟು ಗೆಲ್ಲಿಸಿದ್ದೀರಿ. ನಾನು ನಿಮಗೆ ಋಣಿಯಾಗಿದ್ದೇನೆ. ವಡೋದರಾದ ಪ್ರತಿಯೊಬ್ಬ ಮತದಾರನೂ ನರೇಂದ್ರ ಮೋದಿಯಾಗಿ ಕೆಲಸ ಮಾಡಿದ್ದಾನೆ. ವಡೋದರಾವನ್ನು ಅಭಿವೃದ್ಧಿಪಡಿಸಿ, ವಿಕಾಸದ ರೂಪದಲ್ಲಿ ಈ ಋಣವನ್ನು ನಾನುತೀರಿಸುತ್ತೇನೆ.

    ಎರಡನೆಯದಾಗಿ, ಬಹುಶಃ ಹಿಂದುಸ್ತಾನದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಅಭ್ಯರ್ಥಿಯೊಬ್ಬ ತನ್ನ ಮತದಾರರೊಂದಿಗೆ ಮಾತನಾಡುವ ಅವಕಾಶದಿಂದ ವಂಚಿತನಾದ ಎನಿಸುತ್ತದೆ. ಬನಾರಸ್ ಜನರ ಮುಂದೆ ನನ್ನ ಮನದಿಂಗಿತವನ್ನು ತೋಡಿಕೊಳ್ಳಲು ಸಾಧ್ಯವಾಗಲಿಲ್ಲ, ಆದರೂ ಅಲ್ಲಿನ ಮತದಾರರು ಮೋದಿಯ ಮೌನಕ್ಕೆ ಮೊಹರು ಒತ್ತಿ ಗೆಲ್ಲಿಸಿದರು.

    ಈ ಚುನಾವಣೆಯಲ್ಲಿ ಗುಜರಾತ್ ಅದ್ಭುತ ರೆಕಾರ್ಡ್ ಸ್ಥಾಪಿಸಿದೆ. 26ರಲ್ಲಿ 26 ಸ್ಥಾನಗಳನ್ನು ನಾವು ಗೆದ್ದಿದ್ದೇವೆ!! ಈ ಹಿಂದೆ ಈ ಸಾಧ್ಯತೆಯ ಬಗ್ಗೆ ಮಾತನಾಡಿದಾಗಲೆಲ್ಲ ಕೆಲವರು ತಮಾಷೆ ಮಾಡಿ ನಗುತ್ತಿದ್ದರು. ಅಪ್ಪಿತಪ್ಪಿ ನಮಗೇನಾದರೂ 26 ರಲ್ಲಿ 25 ಸ್ಥಾನಗಳು ಬಂದುಬಿಟ್ಟಿದ್ದವೆಂದರೆ, "ಬಿಜೆಪಿಯ ಮಾತೆಲ್ಲ ಬರೀ ಟೊಳ್ಳು. ಅದು ಕೇವಲ 25 ಸ್ಥಾನಗಳಲ್ಲಷ್ಟೇ ಗೆದ್ದಿದೆ" ಎಂದು ಇವರೆಲ್ಲ ನಮ್ಮನ್ನು ತೊಳೆದುಹಾಕಿಬಿಡುತ್ತಿದ್ದರೇನೋ?!

    ಸಹೋದರರೆ, ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷವೊಂದಕ್ಕೆ ಸ್ಪಷ್ಟ ಬಹುಮತ ದೊರೆತಿದೆ. ಇನ್ನೊಂದು ವಿಚಾರ- ಸ್ವಾತಂತ್ರ್ಯಾ ನಂತರ ಜನಸಿದವರ ನೇತೃತ್ವದಲ್ಲಿ ಈ ಬಾರಿ ದೇಶ ಮುನ್ನಡೆಯಲಿದೆ. ಸಯ್ಯಾಜಿ ರಾವ್ ಗಾಯಕ್‌ವಾಡ್‌ರ ಈ ನೆಲದಿಂದ ದೇಶವಾಸಿಗಳಿಗೆ ಹೇಳುತ್ತಿದ್ದೇನೆ ಕೇಳಿ: "ನಮಗೆಲ್ಲ ಸ್ವಾತಂತ್ರ್ಯಕ್ಕಾಗಿ ಸಾಯುವ ಸೌಭಾಗ್ಯ ಸಿಗಲಿಲ್ಲ, ಸೆರೆಮನೆಗೆ ಹೋಗುವ ಸೌಭಾಗ್ಯ ಸಿಗಲಿಲ್ಲ. ಆದರೇನಂತೆ, ದೇಶಕ್ಕಾಗಿ ಬದುಕುವ ಸೌಭಾಗ್ಯವಂತೂ ದೊರಿಕಿದೆ. ಶತಕೋಟಿ ಭಾರತೀಯರು ಒಂದು ವೇಳೆ ದೇಶಕ್ಕಾಗಿ ಬದುಕುವ ಸಂಕಲ್ಪ ಕೈಗೊಂಡು ನನ್ನೊಡನೆ ಒಂದು ಹೆಜ್ಜೆ ಮುಂದಿಟ್ಟರೆಂದರೆ, ಈ ದೇಶ ಶತಕೋಟಿ ಹೆಜ್ಜೆ ಮುಂದೆ ಸಾಗುತ್ತದೆ. ಜನಶಕ್ತಿಯ ಸಾಮರ್ಥ್ಯವೇ ಭಾರತದ ಭವಿಷ್ಯ ರೂಪಿಸಲಿದೆ."  

    ನಿಮಗೆ ನನ್ನ ಮೇಲೆ ನಂಬಿಕೆಯಿದೆ, ಅದರಂತೆಯೇ ನನಗೆ ನಿಮ್ಮ ಮೇಲೆ. ಇಂಥ ನಂಬಿಕೆಯೇ ಪ್ರತಿಯೊಬ್ಬ ಭಾರತೀಯನ ಕನಸನ್ನು ಪೂರ್ಣಗೊಳಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದರ ಆಧಾರದ ಮೇಲೆಯೇ ನಾವು ಮುಂದೆ ಸಾಗಬೇಕು.

    ಸರ್ಕಾರ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸೇರಿದ್ದು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕಛ್‌ನಿಂದ ಕಾಮರೂಪದವರೆಗಿನ ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ನಮ್ಮವನು. ಹಾಗಾಗೇ ಎಲ್ಲರನ್ನೂ ಜೊತೆಗೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ, ಸರ್ಕಾರ ಯಾರೋ ಕೆಲವು ವಿಶೇಷ ವ್ಯಕ್ತಿಗಳ ಸ್ವತ್ತಲ್ಲ.  

    ಜನರ ಜೀವನದಲ್ಲಿ ಬದಲಾವಣೆ ತರುವುದೇ ಸರ್ಕಾರದ ಆದ್ಯತೆಯಾಗಿರುತ್ತದೆ. ಈ ಬದಲಾವಣೆ ಸಾಧ್ಯವಾಗಬೇಕೆಂದರೆ ನಾವು ಪರಿಶ್ರಮದ ಪರಾಕಾಷ್ಠೆಯನ್ನು ತಲುಪಬೇಕಿದೆ. ನನ್ನ ಕಠಿಣ ಪರಿಶ್ರಮದ ಮೇಲೆ ನಿಮಗೇನಾದರೂ ಅನುಮಾನವಿದೆಯೇ? "ನಾನು ಮಜ್ದೂರ್(ಶ್ರಮಿಕ) ನಂಬರ್ 1.  ಮುಂದಿನ 60 ತಿಂಗಳು ದೇಶಕ್ಕೆ ನನ್ನಂಥ ಇನ್ನೊಬ್ಬ ಶ್ರಮಿಕ ಸಿಗುವುದಿಲ್ಲ"

    ನಾಲ್ಕು ಬಾರಿ ನನ್ನನ್ನು ಈ ರಾಜ್ಯದ ಮುಖ್ಯಮಂತ್ರಿಯಾಗಿಸಿದ್ದೀರಿ. ಆದರೆ ಆ ಸಮಯದಲ್ಲಿ ನಾನು ಒಂದೇ ಒಂದು ದಿನವೂ ರಜೆ ತೆಗೆದುಕೊಂಡವನಲ್ಲ. ಏಕೆಂದರೆ, ನನ್ನ ಶರೀರದ ಪ್ರತಿಯೊಂದು ಕಣವನ್ನು ಮತ್ತು ಸಮಯದ ಪ್ರತಿಯೊಂದು ಕ್ಷಣವನ್ನು ನಿಮಗೆಲ್ಲ ಸಮರ್ಪಿಸಿದ್ದೇನೆ. ಎಲ್ಲರೊಂದಿಗೆ ಎಲ್ಲರ ವಿಕಾಸ ಎನ್ನುವುದನ್ನು ನಾವು ಗುಜರಾತ್‌ನಲ್ಲಿ ಸಾಧಿಸಿ ತೋರಿಸಿದ್ದೇವೆ. ಇದೇ ನಮ್ಮ ಕೆಲಸದ ಮೂಲಮಂತ್ರ. ಇವು ಪೊಳ್ಳು ನುಡಿಗಳಲ್ಲ, ನಮ್ಮ ರಾಜ್ಯದ ವರ್ಕ್ ಕಲ್ಚರ್‌ನ ಚೈತನ್ಯವೇ ಹೀಗಿದೆ.

    ಈಗಿನ ನಮ್ಮ ವಿಜಯ ಎಷ್ಟೇ ಭವ್ಯವಾಗಿರಲಿ, ಭಾರತೀಯ ಜನತಾ ಪಾರ್ಟಿಯ ವಿಜಯ ಪತಾಕೆ ಎಷ್ಟೇ ಎತ್ತರದಲ್ಲಿ ಬೇಕಿದ್ದರೂ ಹಾರುತ್ತಿರಲಿ. ಆದರೆ ಇದೆಲ್ಲದರ ಹೊರತಾಗಿಯೂ ದೇಶದ ಪ್ರತಿಯೊಂದು ಪಕ್ಷಗಳನ್ನು-ಅವರು ನಮ್ಮ ಎಷ್ಟೇ ಕಡು ವಿರೋಧಿಗಳಾಗಿರಲಿ- ಜೊತೊಗೊಯ್ಯಬೇಕು ಎಂಬ ಉದ್ದೇಶ ನಮಗಿದೆ. ಆ ಉದ್ದೇಶದ ಈಡೇರಿಕೆಗಾಗಿ ಪ್ರಯತ್ನ ಪಡುತ್ತೇವೆ. ಇಂಥ ಪ್ರಯತ್ನದಲ್ಲಿ ಎಂದಿಗೂ ಹಿಂದೆ ಬೀಳಬಾರದು ಎನ್ನುವುದನ್ನು ನಮ್ಮ ದೇಶದ ಸಂವಿಧಾನ ಮತ್ತು ಪರಂಪರೆ ನಮಗೆಲ್ಲ ಕಲಿಸಿದೆ.

    "ಮೋದೀಜಿ..ಒಂದು ವೇಳೆ ನಿಮಗೆ ಸ್ಪಷ್ಟ ಜನಾದೇಶ ಸಿಗದಿದ್ದರೆ ಏನು ಮಾಡುತ್ತೀರಾ?" ಎಂದು ಹಿಂದೆಯೂ  ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳು ನನ್ನನ್ನು ಅನೇಕ ಬಾರಿ ಪ್ರಶ್ನಿಸಿವೆ. ಆಗ ಕೂಡ ನಾನು ಇದೇ ಮಾತನ್ನು ಹೇಳಿದ್ದೇನೆ: "ಸರ್ಕಾರ ನಡೆಸುವುದಕ್ಕೆ ಸ್ಪಷ್ಟ ಜನಾದೇಶ ಬೇಕು. ಆದರೆ ದೇಶವನ್ನು ಮುನ್ನಡೆಸುವುದಕ್ಕೆ ನಾವು ಎಲ್ಲರನ್ನೂ ಜೊತೆಗೊಯ್ಯುತ್ತೇವೆ" ಎಂದು. -ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳ ಫಲಿತಾಂಶವೂ ಹೊರಬಿದ್ದಿದೆ. ಅಲ್ಲೆಲ್ಲ ವಿಜಯಶಾಲಿಗಳಾದ ಪಕ್ಷಗಳಿಗೆ ನಾನು ಶುಭಕೋರುತ್ತೇನೆ. ಭವ್ಯ ಭಾರತದ ನಿರ್ಮಾಣದಲ್ಲಿ ಆ ಪಕ್ಷಗಳು ಮತ್ತು ಅವುಗಳ ನಾಯಕರು ಯಶಸ್ವಿಯಾಗಲಿ, ಅಂತೆಯೇ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಯಾವುದೇ ಪಕ್ಷದ ಅಭ್ಯರ್ಥಿಗಳಿರಲಿ, ಅವರ ಸಹಯೋಗ ನಮಗೆ ಸಿಗುತ್ತದೆ ಎಂದು ಆಶಿಸುತ್ತೇನೆ.

    ಸಹೋದರರೇ, ನನ್ನ ಮೇಲೆ ನೀವು ಎಷ್ಟು ಪ್ರೀತಿ ಹರಿಸಿದಿರೋ, ಅಷ್ಟೇ ಪ್ರೀತಿಯನ್ನು ವಿರೋಧಿಗಳೂ ಹರಿಸಿದ್ದಾರೆ! ಆದರೆ ನಿಮ್ಮ ಪ್ರೇಮದ ಶುದ್ಧತೆ, ಶಕ್ತಿ ಎಷ್ಟು ಎತ್ತರದಲ್ಲಿದೆಯೆಂದರೆ ಅದರಿಂದ, ವಿರೋಧಿಗಳ ವಿಶಿಷ್ಟ ಪ್ರೀತಿಯನ್ನೂ ಬದಲಾಯಿಸಲು ನಾನು ಸಫಲನಾಗಬಲ್ಲೆ. ಇದಕ್ಕೆ ನಿಮ್ಮ ಆಶೀರ್ವಾದ ಬೇಕಷ್ಟೆ. ಏಕೆಂದರೆ ರಾಜಕೀಯದಲ್ಲಿ ಶತ್ರುಗಳಿರುವುದಿಲ್ಲ. ಇಲ್ಲಿ ಬರೀ ಪ್ರತಿಸ್ಪರ್ಧಿಗಳಿರುತ್ತಾರೆ. ಈ ಪ್ರತಿಸ್ಪರ್ಧೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅವಶ್ಯಕವಿರುತ್ತದೆ. ಇಂಥ ಪ್ರತಿಸ್ಪರ್ಧೆಯೇ ನಮ್ಮ ಲೋಕತಂತ್ರದ ಸಂದೌರ್ಯ.

    ಈ ಚುನಾವಣೆಗಾಗಿ ಲಕ್ಷಾಂತರ ಜನರು ಶ್ರಮಿಸಿದ್ದಾರೆ. 40-45 ಡಿಗ್ರಿ ಉರಿಬಿಸಿಲಲ್ಲಿ ಮತಗಟ್ಟೆಗಳನ್ನು ನಿರ್ವಹಿಸದವರಿಗೆ, ನಮ್ಮ ಪರವಾಗಿ ಮನೆ ಮನೆಗೂ ತೆರಳಿ ಪ್ರಚಾರದ ತಪಸ್ಸನ್ನು ಕೈಗೊಂಡ ಲಕ್ಷಾಂತರ ಕಾರ್ಯಕರ್ತರಿಗೆ ನಾನು ವಂದಿಸುತ್ತೇನೆ.

    ಇನ್ನು ಸಾಮಾಜಿಕ ಜಾಲತಾಣದಲ್ಲಿ ಕಣ್ಣಾಡಿಸುವಲ್ಲಿ ನನಗೆ ತುಸು ಆಸಕ್ತಿಯಿದೆ ಎನ್ನುವುದು ನಿಮಗೆಲ್ಲ ತಿಳಿದಿದೆ.

    ಇತ್ತೀಚೆಗಂತೂ ಯೂಟ್ಯೂಬ್‌ನಲ್ಲಿನ ಕೆಲವು ವೀಡಿಯೋಗಳನ್ನು ಕಂಡು ಆಶ್ಚರ್ಯಗೊಂಡಿದ್ದೇನೆ. ಈಗಷ್ಟೇ ಮಾ, ಪಪ್ಪಾ, ಮಮ್ಮಿ ಎನ್ನುವುದನ್ನು ಕಲಿತಿರುವ 2-3 ವರ್ಷದ ಮಕ್ಕಳೂ ಕೂಡ, "ಅಬ್ ಕೀ ಬಾರ್ ಮೋದಿ ಸರ್ಕಾರ್‌" ಎನ್ನುತ್ತಿವೆ. ಪ್ರಜಾಪ್ರಭುತ್ವದ ಶಕ್ತಿಯಿದು!

    ಒಳ್ಳೆಯ ದಿನಗಳು ಕೊನೆಗೂ ಎದುರಾಗಿವೆ. ನನ್ನ ಮೇಲೆ ನಂಬಿಕೆಯಿಟ್ಟವರಿಗೆ ನಾನು ನಿರಾಸೆ ಮೂಡಿಸುವುದಿಲ್ಲ. ಭಾರತ್ ಮಾತಾಕಿ ಜೈ.

Saturday, May 10, 2014

ವಿಶ್ವ ಅಮ್ಮಂದಿರ ದಿನದ ವಿಶೇಷ ಹಾಡುಗಳು........

ನನ್ನೆಲ್ಲಾ ಆತ್ಮೀಯ ಗೆಳೆಯರಿಗೂ ನನ್ನ ನಮಸ್ಕಾರಗಳು
ಎಲ್ಲಾ ತಾಯಂದಿರಿಗೂ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು...


ನಾಳೆ (ಮೇ 11) ವಿಶ್ವ ಅಮ್ಮಂದಿರ ದಿನ (World’s Mother’s Day), ತಾಯಿ ನಮ್ಮೆಲ್ಲರ ಪ್ರತ್ಯಕ್ಷ ದೇವತೆಯಾಗಿದ್ದಾಳೆ. ಅವಳ ತ್ಯಾಗ, ಮಮತೆಗಳಿಗೆ ಎಂದಿಗೂ ಬೆಲೆ ಕಟ್ಟಲಾಗುವುದಿಲ್ಲ. ಈ ಕಲಿಯುಗದಲ್ಲಿ ದೇವರು ನಮ್ಮೊಂದಿಗೆ ಸದಾ ಕಾಲ ಇರುವುದಕ್ಕೆ ಸಾಧ್ಯವಿಲ್ಲವೆಂದೆ ತಾಯಿಯನ್ನು ಸೃಷ್ಟಿಸಿದ್ದಾನೆ.

ಇಂತಹಾ ತಾಯಿಯನ್ನು ಅವಳು ಸದಾ ನಗುತಿರುವಂತೆ ನೋಡಿಕೊಳ್ಲುವ ಕರ್ತವ್ಯವು ಮಕ್ಕಳಾದ ನಮ್ಮದಾಗಿದೆ.

ಈ ತಾಯಂದಿರ ದಿನದ ಶುಭ ಸಮಯದಲ್ಲಿ ಕನ್ನಡ ಹಾಗೂ ಹಿಂದಿ ಚಲನಚಿತ್ರಗಳಲ್ಲಿ ಬಂದ ತಾಯಿ ಪ್ರಧಾನ ಗೀತೆಗಳ ವೀಡಿಯೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದು ನಿಮಗೂ ಇಷ್ಟವಾಗುತ್ತದೆನ್ನುವುದು ನನ್ನ ನಂಬಿಕೆ.

ನಮಸ್ಕಾರ..

***























Saturday, May 03, 2014

ಶ್ರೀ ಶಂಕರಾಚಾರ್ಯ ಜೀವನ ಸಂದೇಶ

ಭಾರತದಲ್ಲಿ ಹಿಂದೂ ಧರ್ಮವು ಸಂಕಷ್ಟದಲ್ಲಿದ್ದ ಎಂಟನೇ ಶತಮಾನದ ಕಾಲಘಟ್ಟದಲ್ಲಿ, ಹಿಂದೂಗಳಲ್ಲಿದ್ದ ಜಾತಿ ಪದ್ದತಿ, ಮೂಢ ಆಚರಣೆಗಳ ಬಗ್ಗೆ ಆಗ ಪ್ರಬಲರಾಗಿದ್ದ ಬೌದ್ದ ಸನ್ಯಾಸಿಗಳು ಸಾಕಷ್ಟು ನಿಂದನೆಗಳನ್ನು ಮಾಡುತ್ತಿದ್ದ ಕಾಲದಲ್ಲಿ ಹಿಂದೂ ಧರ್ಮೀಯರಲ್ಲಿ ಮತ್ತೆ ಆತ್ಮವಿಶ್ವಾಸ ಹುಟ್ಟಿಸಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿಯನ್ನುಂಟುಮಾಡಿ ಹಿಂದೂ ಧರ್ಮವನ್ನು ಪುನರುತ್ತಾನಗೊಳಿಸಿದವರು ಶ್ರೀ ಶಂಕರಾಚಾರ್ಯರು. ಇದೇ ಮೇ 4 ರಂದು ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿಯನ್ನು ವಿಶ್ವಾದ್ಯಂತ ಆಚರಿಸಾಲಾಗುತ್ತದೆ.

ನನ್ನೆಲ್ಲಾ ಸ್ನೇಹಿತರಿಗೂ ಆತ್ಮೀಯ ನಮಸ್ಕಾರಗಳು,
ನಿಮ್ಮೆಲ್ಲರಿಗೂ ಶ್ರೀ ಶಂಕರ ಜಯಂತಿಯ ಹಾರ್ದಿಕ ಶುಭಾಷಯಗಳು.
ಭಾರತದಲ್ಲಿ ಹಿಂದೂ ಧರ್ಮವು ಸಂಕಷ್ಟದಲ್ಲಿದ್ದ ಎಂಟನೇ ಶತಮಾನದ ಕಾಲಘಟ್ಟದಲ್ಲಿ, ಹಿಂದೂಗಳಲ್ಲಿದ್ದ ಜಾತಿ ಪದ್ದತಿ, ಮೂಢ ಆಚರಣೆಗಳ ಬಗ್ಗೆ ಆಗ ಪ್ರಬಲರಾಗಿದ್ದ ಬೌದ್ದ ಸನ್ಯಾಸಿಗಳು ಸಾಕಷ್ಟು ನಿಂದನೆಗಳನ್ನು ಮಾಡುತ್ತಿದ್ದ ಕಾಲದಲ್ಲಿ ಹಿಂದೂ ಧರ್ಮೀಯರಲ್ಲಿ ಮತ್ತೆ ಆತ್ಮವಿಶ್ವಾಸ ಹುಟ್ಟಿಸಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿಯನ್ನುಂಟುಮಾಡಿ ಹಿಂದೂ ಧರ್ಮವನ್ನು ಪುನರುತ್ತಾನಗೊಳಿಸಿದವರು ಶ್ರೀ ಶಂಕರಾಚಾರ್ಯರು. ತಾವು ಬದುಕಿದ್ದು ಕೇವಲ 32 ವರ್ಷಗಳಷ್ಟೇ ಆದರೂ ಆದಿ ಶಂಕರರು ತಾವು ಮಾಡಿದ ಕಾರ್ಯ, ಗಳಿಸಿದ ಕೀರ್ತಿ , ಅಪಾರವಾದುದು. ಶ್ರೀಮದ್ಭಗವದ್ಗೀತೆ, ಉಪನಿಷತ್ತುಗಳು, ಬ್ರಹ್ಮಸೂತ್ರಗಳಿಗೆ ಭಾಷ್ಪಗಳನ್ನು ಬರೆದ ಮೊದಲಿಗರು ಶ್ರೀ ಶಂಕರಾಚಾರ್ಯರು. ಶಂಕರಾಚಾರ್ಯರು ಭಾರತೀಯ ವೈಚಾರಿಕ ರಂಗದಲ್ಲಿ ಕ್ರಾಂತಿಯನ್ನೇ ಮಾಡಿದ್ದವರು. ಇವರು ಯಾವೊಂದು ಹೊಸತಾದ ಮತ, ಪಂಥಗಳನ್ನು ಸ್ಥಾಪಿಸಿಲ್ಲವಾದರೂ ಹಿಂದೂ ಧರ್ಮದಲ್ಲಿನ ವೇದಸಂಪ್ರದಾಯವನ್ನೇ ಎತ್ತಿಹಿಡಿದರು. ವೇದಗಳಲ್ಲಿನ ಸತ್ವವನ್ನೂ, ಸಾರವನ್ನು ತಮ್ಮದೇ ಆದ ನೆಲೆಯಲ್ಲಿ ನಿಷ್ಕರ್ಷಿಸುವ ಮೂಲಕ ಜಗತ್ತಿಗೆ ಪ್ರಕಾಶಪಡಿಸಿದವರು ಆಚಾರ್ಯ ಶಂಕರರು ಎಂದರೆ ತಪ್ಪಾಗಲಾರದು. ಇದೇ ಮೇ 4 ರಂದು ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿಯನ್ನು ವಿಶ್ವಾದ್ಯಂತ ಆಚರಿಸಾಲಾಗುತ್ತದೆ. ಈ ಸುಸಂದರ್ಭದಲ್ಲಿ ಶಂಕರರ ಜೀವನ, ಅವರ ಸಂದೇಶಗಳನ್ನು ನಾವುಗಳೂ ತಿಳಿಯೋಣ.
Sri Adi Shankaracharya


ಜೀವನ
ಅದು ಎಂಟು-ಒಂಭತ್ತನೇ ಶತಮಾನಗಳ ಮಧ್ಯದ ಅವಧಿ. ಭಾರತ ದಕ್ಷಿಣ ಸಮುದ್ರ ತೀರದ ಕೇರಳ ರಾಜ್ಯದ ಕಾಲಟಿ ಎಂಬೊಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿ ಶಿವಗುರು ಹಾಗೂ ಆರ್ಯಾಂಬರೆನ್ನುವ ಬಡ ಬ್ರಾಹ್ಮಣಾ ದಂಪತಿಗಳು ವಾಸವಾಗಿದ್ದರು. ಊಟ, ವಸತಿಗಳಎಲ್ಲಾ ಅದು ಹೇಗೋ ದಿನನಿತ್ಯವೂ ನಡೆಯುತ್ತಿದ್ದರೂ ಆ ದಂಪತಿಗಳೈಗೆ ‘ತಮ್ಮದಾದ ಒಂದು ಮಗುವಿಲ್ಲ, ತಮಗೆ ಸಂತಾನಭಾಗ್ಯವಿಲ್ಲ’ ಎನ್ನುವ ಚಿಂತೆಯು ಬಲವಾಗಿ ಕಾಡುತ್ತಿತ್ತು. ಹೀಗಿರಲು ಇದೇ ಚಿಂತೆಯಲ್ಲಿ ಆ ಈರ್ವರೂ ತಾವು ಈ ಕುರಿತು ಪರಮೇಶ್ವರನ ಮೊರೆಹೋಗಲು ತೀರ್ಮಾನಿಸಿ ಅದರಂತೆ ಪರಮೇಶ್ವರನನ್ನು ಶ್ರದ್ದಾ ಭಕ್ತಿಗಳಿಂದ ಆರಾಧಿಸಿಲು ಮುಂದಾದಾರು. ಅದೊಂದು ದಿನ ಪರಮೇಶ್ವರನು ತಾನು ಶಿವಗುರುವಿನ ಕನಸಿನಲ್ಲಿ ಕಾಣಿಸಿಕೊಂಡು- “ಭಕ್ತಾ, ನಿನ್ನ ಪೂಜೆಗೆ ಮೆಚ್ಚಿದ್ದೇನೆ. ನಿನ್ನ ಕೋರಿಕೆಯನ್ನು ನಾನು ಈಡೇರಿಸಲಿದ್ದೇನೆ, ನಿನಗೆಂತಹಾ ಮಗನು ಬೇಕು? ಮಹಾನ್ ಜ್ಞಾನಿಯಾದ, ಆದರೆ ಅಲ್ಪಾಯುವದ ಮಗನು ಬೇಕೋ, ಇಲ್ಲವೇ ಅಲ್ಪ ಜ್ಞಾನಿಯಾದ ದೀರ್ಘಾಯುವಾದ ಮಗನು ಬೇಕೋ?” ಎಂದೆನ್ನಲು ಶಿವಗುರುವು ತಾನು ಕ್ಷಣಕಾಲವೂ ಯೋಚಿಸದೆ- “ನನಗೆ ಮಹಾಜ್ಞಾನಿಯಾದ ಮಗನು ಬೇಕು” ಎಂದೆನ್ನಲು “ತಥಾಸ್ತು” ಎಂದ ಪರಮೇಶ್ವರನು ತಾನು ಅಂತರ್ಧಾನನಾದನು. ಅದಾದ ಕೆಲ ತಿಂಗಳಿನಲ್ಲಿಯೇ ಮಾತೆ ಆರ್ಯಾಂಬಾ ಜನ್ಮತಃ ಮಹಾಜ್ಞಾನಿಯಾದ ಶಂಕರನಿಗೆ ಜನ್ಮವಿತ್ತಳು.
ಕೆಲ ಕಾಲಾ ನಂತರದಲ್ಲಿ ಶಂಕರನಿಗೆ ಮೂರು ವರ್ಷಗಳಿರಲು ಅವನ ತಂದೆ ಶಿವಗುರುವು ತಾನು ಇಹದ ಯಾತ್ರೆಯನ್ನು ಪೂರೈಸಿದನು. ಮುಂದೆ ಶಂಕರನು ಪೂರ್ಣವಾಗಿ ತಾಯಿಯ ಆರೈಕೆಯಲ್ಲಿಯೇ ಬೆಳೆಯುವಂತಾಯಿತು. ಹುಟ್ಟು ಜ್ಞಾನಿಯಾಗಿದ್ದ ಶಂಕರನಿಗೆ ವಿದ್ಯಾಭ್ಯಾಸದ ಹಂಗಿರಲಿಲ್ಲ. ಆದರೂ ತಾನು ಕೆಲ ಕಾಲ ವೇದ ಶಾಸ್ತ್ರಗಳ ಅಧ್ಯಯನದಲ್ಲಿ ತೊಡಗಿದ್ದನು. ಹೀಗೆ ತಾನು ವಿದ್ಯಾಭ್ಯಾಸಕ್ಕೆಂದು ಹೋಗುವ ದಾರಿಯಲ್ಲಿ ಇದ್ದ ಒಬ್ಬ ಹಳೆಯ ಮುದುಕಿಯ ಮನೆಯಿತ್ತು. ಆ ಮುದುಕಿ ಬಾಲಕ ಶಂಕರ ಬಂದಾಗ ತಿನ್ನಬಹುದಾದ ವಸ್ತು ತನ್ನಲ್ಲೇನಿರುತ್ತಿತ್ತೋ ಅದರಲ್ಲೊಂದು ಭಾಗವನ್ನು ಅವನಿಗೆ ತಪ್ಪದೇ ನೀಡುತ್ತಿದ್ದಳು. ಅದೊಂದು ದಿನ ಶಂಕರ ಬಂದ ಸಮಯದಲ್ಲಿ ಮುದುಕಿಗೆ ಅವನಿಗಾಗಿ ನೀಡಲು ಏನೇನೂ ಇರಲಿಲ್ಲ. ಅದನ್ನು ಆಕೆಯು ತಾನು ವಿನಮ್ರಳಾಗಿ ಶಂಕರನಿಗೆ ತಿಳಿಸಲು ಶಂಕರನು ತಾನು ಅದೇ ಸ್ಥಳದಲ್ಲಿ ‘ಶ್ರೀ ಕನಕಧಾರಾ ಸ್ತೋತ್ರ’ವನ್ನು ಪಠಿಸಿ ಸಾಕ್ಷಾತ್ ಲಕ್ಷ್ಮಿದೇವಿಯಿಂದ ಬಂಗಾರದ ನಾಣ್ಯಗಳ ಮಳೆಯನ್ನು ಸುರಿಸಿದನು.
ಸುಮಾರು ಇದೇ ಸಮಯದಲ್ಲಿ ಬಾಲಕ ಶಂಕರನ ಜ್ಞಾನ ಮಹತ್ತಿನ ಅರಿವುಂಟುಮಾಡುವ ಘಟನೆಯೊಂದು ಜರುಗಿತು. ಆ ಸಮಯದಲ್ಲಿ ಕೇರಳವನ್ನಾಳುತ್ತಿದ್ದ ರಾಜಾ ರಾಜಶೇಖರನು ತಾನೊಮ್ಮೆ ಶಂಕರನನ್ನು ಆಸ್ಥಾನಕ್ಕೆ ಕರೆತರಲು ಆದೇಶಿಸಿದಮು. ಮತ್ತು ಆ ಬಾಲಕನ ಅಗಾಧವಾದ ಪಾಂಡಿತ್ಯವನ್ನು ಪರೀಕ್ಷಿಸಲು ಬಯಸಿದನು. ಶಂಕರನನ್ನು ಆಸ್ಥಾನಕ್ಕೆ ಕರೆದು ತರಲು ತನ್ನ ಪ್ರಧಾನ ಮತ್ತು ಆನೆಯ ಜೊತೆಗೆ ಆಮಂತ್ರಣವನ್ನು ಕಳುಹಿಸಿದನು. ಆಮಂತ್ರಣವನ್ನು ನೋಡಿದ ಬಾಲಕ ಶಂಕರನು "ಉಪಜೀವನ ಮಾಡಲು ಭಿಕ್ಷೆಯೇ ಯಾರ ಸಾಧನೆಯಾಗಿದೆಯೋ, ತ್ರಿಕಾಲ ಸಂಧ್ಯಾ ಈಶ್ವರ ಚಿಂತನಪೂಜೆ-ಅರ್ಚನೆ ಮತ್ತು ಗುರುಸೇವೆಯೇ ಯಾರ ಜೀವನದ ನಿತ್ಯ ವ್ರತವಾಗಿದೆಯೋ ಅವರಿಗೆ ಈ ಆನೆಯ ಸವಾರಿ ಯಾಕೆ? ನಾಲ್ಕು ವರ್ಣದ ಸರ್ವ ಕರ್ತವ್ಯಗಳ ಪಾಲನೆ ಮಾಡಿ ಬ್ರಾಹ್ಮಣಾದಿ ಧರ್ಮಮಯ ಜೀವನ ಜೀವಿಸಲು ವ್ಯವಸ್ತೆ ಮಾಡುವುದು ರಾಜನ ಕರ್ತವ್ಯವಾಗಿದೆ. ನನ್ನ ಈ ಸಂದೇಶವನ್ನು ನಿನ್ನ ಸ್ವಾಮಿಗೆ ಹೇಳು", ಎನ್ನುವ ಮೂಲಕ ಆಮಂತ್ರಣವನ್ನು ನಿರಾಕರಿಸಿದನು.
ಇದಾದ ನಂತರ ರಾಜನು ತಾನೇ ಸ್ವತಃ ಶಂಕರನನ್ನು ಭಾಟಿಯಾಗಲು ನಿರ್ಧರಿಸಿ ಹೊರಟನು. ಹಾಗೆ ಆದಂತಹಾ ಭಾಟಿ ಮತ್ತು ಆ ವೇಳೆಯಲ್ಲಿ ನಡೆಸಿದ ಧಾರ್ಮಿಕ ಚರ್ಚೆಗಳಿಂದ ಮಹಾರಾಜನಲ್ಲಿ ವಿಶೇಷವಾದ ವಿಚಾರ ಶಕ್ತಿಯ ಅನುಭವವಾಯಿತು. ರಾಜನು ತನ್ನ ಭಾಟಿಯ ಅಂತ್ಯದಲ್ಲಿ ರತ್ನದ ಮುದ್ರೆಗಳನ್ನು ಶಂಕರನಿಗೆ ಕೊಡುಗೆ ನೀದಲು ಮುಂದಾದಾಗ ಬಾಲಕನು ಅವುಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾ- "ಮಹಾರಾಜರೇ, ನಾನು ಬ್ರಾಹ್ಮಣ ಮತ್ತು ಬ್ರಹ್ಮಚಾರಿಯಾಗಿದ್ದೇನೆ, ಇದರಿಂದ ನನಗೇನು ಉಪಯೋಗವಿದೆ? ನೀವು ದೇವರ ಪೂಜೆಗೆ ಕೊಟ್ಟಿರುವ ಭೂಮಿ ನನಗೆ ಮತ್ತು ನನ್ನ ತಾಯಿಗೆ ಸಾಕು. ನಿಮ್ಮ ಕೃಪೆಯಿಂದ ನನಗೆ ಯಾವ ಪ್ರಕಾರದ ಅಭಾವವಾಗಿಲ್ಲ" ಎಂದುತ್ತರಿಸಿದನು.  ಶಂಕರನ ಉತ್ತರ ರಾಜನಿಗೆ ತಿಳಿಯಲಿಲ್ಲ. ಕೊನೆಗೆ ರಾಜನು ಶಂಕರನಿಗೆ ಕೈಮುಗಿದು "ನಿಮ್ಮ ದರ್ಶನದಿಂದ ನಾನು ಧನ್ಯನಾದೆ", ಎಂದು ಹೇಳಿ ಅವರಿಗೆ ದುಡ್ಡನ್ನು ಅರ್ಪಣೆಮಾಡಿ "ಒಂದು ಸಲ ಅರ್ಪಣೆ ನೀಡಿ ಅದನ್ನು ಮತ್ತೆ ನಾನು ತೆಗೆದುಕೊಳ್ಳುವುದು ಸರಿಯಲ್ಲ, ಅದಕ್ಕೆ ನೀವೇ ಆ ಹಣವನ್ನು ಯೋಗ್ಯ ವ್ಯಕ್ತಿಗೆ ಕೊಡಿರಿ", ಎಂದನು. ಮುಗುಳ್ನಗುತ್ತಾ ಶಂಕರರು "ಮಹಾರಾಜರೆ, ನೀವು ರಾಜರಾಗಿದ್ದು ಯಾರು ಸುಪಾತ್ರರು, ಯಾರು ಯೋಗ್ಯರಂದು ನಿಮಗೆ ತಿಳಿದಿರಬೇಕು, ನನ್ನಂಥ ಬ್ರಹ್ಮಚಾರಿಗೇನು ಇಂಥಹ ಜ್ಞಾನ ಇರಬಹುದು? ವಿದ್ಯಾದಾನವೇ ಬ್ರಾಹ್ಮಣನ ಧರ್ಮ ಮತ್ತು ಸತ್ಪಾತ್ರೆದಾನವೇ ರಾಜಧರ್ಮವಾಗಿದೆ. ನೀವೆ ಯೋಗ್ಯ ಸತ್ಪಾತ್ರನಿಗೆ ಈ ಧನವನ್ನು ನೀಡಿ"ಎಂದರು. ರಾಜನು ನಿರುತ್ತರನಾಗಿ ಶಂಕರನಿಗೆ ವಂದಿಸಿ ಅಲ್ಲಿರುವ ಬ್ರಾಹ್ಮಣರಿಗೆ ಆ ಧನವನ್ನು ಹಂಚಿದನು.
ಇದಾಗಿ ಶಂಕರನು ತಾನು ವಿದ್ಯಾಭ್ಯಾಸಗಳನ್ನೆಲ್ಲಾ ಪೂರೈಸುತ್ತಲೂ ತಾನು ಸನ್ಯಾಸ ಸ್ವೀಕರಿಸುವುದಾಗಿ ತಾಯುಯಲ್ಲಿ ಅಪ್ಪಣೆ ಬೇಡಿದರು. ಆದರೆ ತಾಯಿಗೆ ಮಗನು ಸನ್ಯಾಸಿಯಾಗುವುದು ಇಷ್ಟವಿರಲಿಲ್ಲ. ‘ಇದ್ದ ಒಬ್ಬನೇ ಮಗನು ಸನ್ಯಾಸಿಯಾದರೆ ನಮ್ಮ್ ಅವಂಶಗ ಗತಿಯೇನು, ನಾನು ಒಮ್ಮೆ ತೀರಿಹೋದಲ್ಲಿ ನನಗೆ ಮೋಕ್ಷ ಕೊಡಿಸುವವರಾರು?’ ಎಂಬ ಚಿಂತೆ ಅವಳ ಮನವನ್ನು ಕೊರೆಯುತ್ತಿರಲು ತಾಯಿಯು ಮಗನ ಸನ್ಯಾಸ ದೀಕ್ಷೆಯ ಅಬಿಲಾಷೆಯನ್ನು ಮುಂದೂಡುತ್ತಾ ಬಂದಳು.
ಶಂಕರರು ತಾವು ಸನ್ಯಾಸಿಯಾಗುವುದಾಗಿ ನಿರ್ಧರಿಸಿಯಾಗಿತ್ತು. ಅದಕ್ಕಾಗಿ ತಾಯಿಯ ಮನವೊಲಿಸಲು ಪರಿಪರಿಯಾಗಿ ಪ್ರಯತ್ನಿಸಿದರೂ ಸಾಧ್ಯವಾಗದಿರಲು ಅದೊಂದು ದಿನ ತಾವು ನದಿಯಲ್ಲಿ ಸ್ನಾನಕ್ಕಾಗಿ ಇಳಿದಿರಲು ಅಲ್ಲಿದ್ದ ಒಂದು ಮೊಸಳೆಯು ಶಂಕರರ ಕಾಲನ್ನು ಬಲವಾಗಿ ಹಿಡಿದುಕೊಂಡಿತು. ಅದಾಗ ರಕ್ಷಣೆಗಾಗಿ ಎಂಬಂತೆ ತಾಯಿಯನ್ನು ಕೂಗಿದ ಶಂಕರರು ತಾಯಿಗೆ- “ಅಮ್ಮಾ ಈ ಮೊಸಳೆಯು ನನ್ನನ್ನು ನುಂಗಿ ಹಾಕುವುದರಲ್ಲಿದೆ, ನೀನೇನಾದರೂ ನಾನು ಸನ್ಯಾಸಿಯಾಗುವುದಕ್ಕೆ ಒಪ್ಪಿಕೊಳ್ಳುವುದಾದಲ್ಲಿ ಮಾತ್ರವೇ ನಾನು ಈ ಮೊಸಳೆಯ ಹಿಡಿತದಿಂದ ಪಾರಾಗಬಲ್ಲೆ, ಇಲ್ಲವಾದಲ್ಲಿ ನಿನ್ನ ಮಗ ಇದೇ ಕ್ಷಣ ಮೊಸಳೆಯ ಪಾಲಾಗುತ್ತಾನೆ”, ಎಂದಾಗ ಮಾತೆ ಆರ್ಯಾಂಬಾ ತಾನು ವಿಧಿಯಿಲ್ಲದೆ ಮಗನ ಸನ್ಯಾಸಕ್ಕೆ ಅಪ್ಪಣೆ ಕೊಡಬೇಕಾಯಿತು. ತಕ್ಷಣವೇ ಮೊಸಳೆಯು ಶಂಕರರ ಕಾಲನ್ನು ಬಿಟ್ಟಿತು. ಶಂಕರರು ತಾಯಿಯ ಆಶೀರ್ವಾದವನ್ನು ಪಡೆದು ಸನ್ಯಾಸಿಯಾಗಿ ದೇಶಪರ್ಯಟನೆಗೆ ಹೊರಟರು. ಹಾಗೆ ಹೊರಡುವ ಮುನ್ನ ತಾಯಿಗೆ- “ನಾನೆಲ್ಲೇ ಇದ್ದರೂ ನಿನ್ನ ಅಂತಿಮ ಕ್ಷಣಗಳಲ್ಲಿ ನಿನ್ನೊಂದಿಗಿರುತ್ತೇನೆ” ಎನ್ನುವ ವಚನವನ್ನಿತ್ತರು. ಮತ್ತು ಮುಂದೊಂದು ದಿನ ಮಾತೆ ಆರ್ಯಾಂಬಾರವರು ಸಾವಿನ ನಿರೀಕ್ಷೆಯಲ್ಲಿದ್ದಾಗ ಅಲ್ಲಿಗಾಗಮಿಸಿದ ಶಂಕರರು ತಾವು ತಾಯಿಯವರ ಅಂತಿಮ ಕ್ಶಣಗಳಲ್ಲಿ ಅವರೊಡನಿದ್ದುದಲ್ಲದೆ ಅವರ ಅಂತಿಮ ವಿದ್ಜಿಗಳನ್ನೂ ಸಹ ನೆರವೇರಿಸಿ ಅವರ ಶಾಶ್ವತ ಮೋಕ್ಷಕ್ಕೆ ಕಾರಣರಾದರು.
ಶ್ರೀ ಶಂಕರರು ಸನ್ಯಾಸ ಸ್ವೀಕರಿಸುವುದರೊಡನೆ ಅವರ ಜೀವನವು ನೂತನ ತಿರುವನ್ನು ಪಡೆಯಿತು. ಅಷ್ತರ ಬಳಿಕ ಶಂಕರರು ದೇಶ ದೇಶಗಳನ್ನು ತಿರುಗುತ್ತಾ ನರ್ಮದಾ ನದಿ ತೀರಕ್ಕೆ ಬಂದರು. ಅಲ್ಲಿ ನೆಲೆಯಾಗಿದ್ದ ಶ್ರೀ ಗೋವಿಂದ ಭಗವತ್ಪಾದರನ್ನು ತಮ್ಮ ಗುರುವಾಗಿ ಸ್ವೀಕರಿಸಿದ ಶಂಕರರು ಅವರಲ್ಲಿ ಯೋಗ, ವೇದ, ಉಪನಿಷತ್, ವೇದಾಂತ ಶಾಸ್ತ್ರಗಳನ್ನು ಅಭ್ಯಾಸ ನಡೆಸಿದರು. ನರ್ಮದೆ ತಟದಲ್ಲಿನ ಗುಹೆಯೊಂದರಲ್ಲಿ ಧ್ಯಾನದಲ್ಲಿದ್ದಾಗಲೇ ಶಂಕರರು ತಮ್ಮ `ಅದ್ವೈತ’ ತತ್ವ ಸ್ವರೂಪದ ಜ್ಞಾನವನ್ನು ಕಂಡುಕೊಂಡರು. ಮತ್ತು ಅದನ್ನು ದೇಶದಾದ್ಯಂತ ಪ್ರಚುರಪಡಿಸಲಿಕ್ಕಾಗಿ ದೇಶಾತನೆಗೈಯ್ಯಲು ನಿರ್ಧರಿಸಿದರು. ಶಂಕರರು ಗುರುಗಳ ಆಶೀರ್ವಾದ ಪಡೆದು ಕಾಶಿಗೆ ಹೊರಟರು. ಅಲ್ಲಿ ಸನಂದನನೆಂಬ ತಮಿಳು ದೇಶದ  ಯುವ ಸಂನ್ಯಾಸಿ ಇವರ ಶ್ಯಿಷ್ಯನಾದನು. ಕಾಶಿಗೆ ತೆರಳಿದ ಶ್ರೀ ಶಂಕರರು ಅಲ್ಲಿ ಕೆಲ ಶಿಷ್ಯರನ್ನು ಸೇರಿಸಿಕೊಂಡು ಅವರಿಗೆ ವೇದ ಶಾಸ್ತ್ರಗಳ ಪಾಠವನ್ನು ಬೋಧಿಸಿದರು.
ಕಾಶಿಯಲ್ಲಿ ವಿಶ್ವೇಶ್ವರ ದೇವಾಲಯಕ್ಕೆ ಹೋಗುವಾಗ ನಡೆದ ಒಂದು ಘಟನೆ ಹೀಗಿದೆ-  ಒಬ್ಬ ಅಸ್ಪೃಷ್ಯ ವ್ಯಕ್ತಿಯು ನಾಲ್ಕೈದು ಕುರಿಗಳೊಡನೆ ಅಡ್ಡವಾಗುತ್ತಾನೆ. ಆಗ ಶಂಕರರು ಅವನನ್ನು ಕುರಿತು “ಪಕ್ಕಕ್ಕೆ ಸರಿದು ದಾರಿ ಮಾಡಿಕೊಡು, ನಾನು ದೇವರ ದರ್ಶನಕ್ಕೆ ಹೋಗಬೇಕಿದೆ” ಎನ್ನಲು ಆ ವ್ಯಕ್ತಿಯು ತಕ್ಷಣಕ್ಕೆ “ನೀವು ಹೇಳಿದ್ದು ಯಾರಿಗೆ, ನನ್ನ ದೇಹಕ್ಕೋ? ಆತ್ಮಕ್ಕೋ?” ಎಂದು ಪ್ರಶ್ನಿಸುತ್ತಾನೆ. ಇದರಿಂದ ಎಚ್ಚರಗೊಂಡ ಶಂಕರರು ತಾವೇ ಕಂಡುಕೊಂಡ ಅದ್ವೈತ ಸಿದ್ದಾಂತವನ್ನು ನಮ್ಮದೇ ಜೀವನದಲ್ಲಿ ಕಾರ್ಯಗತಗೊಳಿಸುವುದಕ್ಕಾಗಿ ಸಾಕ್ಷಾತ್ ಪರಮೇಶ್ವರನು ಈ ರೂಪದಲ್ಲಿ ಬಂದಿರುವನೆನ್ನುವುದನ್ನು ಅರಿತು ‘ಮನೀಷಿ ಪಂಚಕ’ ಎಂಬ ಸ್ತೋತ್ರದೊಡನೆ ಪರಮೇಶ್ವರನನ್ನು ಸ್ತುತಿಸುತ್ತಾರೆ.
ಶ್ರೀ ಶಂಕರಾಚಾರ್ಯರಿಗೆ ಹದಿನಾರರ ವಯಸ್ಸಿನಲ್ಲಿರುವಾಗ, ಅವರಿಗೆ ವೇದವ್ಯಾಸರ ಅನುಗ್ರಹವಾಯಿತು. ಅದೊಂದು ದಿನ ಒಬ್ಬ ಹಳೆಯ ವೃದ್ದರೋರ್ವರು ಶಂಕರರು ರಚಿಸಿದ್ದ ‘ಬ್ರಹ್ಮಸೂತ್ರ ಬಾಷ್ಯ’ದ ಕುರಿತಾಗಿ ವಿಮರ್ಶಾತ್ಮಕ ಚರ್ಚೆಗೆ ತೊಡಗಿದರು. ಶಂಕರ ಹಾಗೂ ಆ ವಯೋವೃದ್ದ್ರ ನಡುವಿನ ಚರ್ಚೆಯು ದಿನಗಳನ್ನು ಪೂರೈಸಿತು. ಹೀಗಿರಲು ಶಂಕರಾಚಾರ್ಯರಿಗೆ ಒಮ್ಮೆಲೇ ತಾನು ವಾದ ಹೂಡಿರುವುದು ಸ್ವತಃ ಬ್ರಹ್ಮಸೂತ್ರದ ಕತೃವಾದ ವೇದವ್ಯಾಸ ಮಹರ್ಷಿಗಳೊಡನೆ ಎನ್ನುವುದು ಅರಿವಿಗೆ ಬಂದಿತು. ತಕ್ಷಣವೇ ತನ್ನಿಂದಾದ ತಪ್ಪಿಗಾಗಿ ವ್ಯಾಸಮಹರ್ಷಿಗಳ ಚರಣಗಳಿಗೆರಗಿದ ಶಂಕರರು ಅವರಲ್ಲಿ ಕ್ಷಮೆಯನ್ನು ಯಾಚಿಸಿದರು. ಇದಕ್ಕೆ ಪ್ರತಿಕ್ರಯಿಸಿದ ವ್ಯಾಸರು ಶಂಕರರಿಗೆ ಮತ್ತೆ 16 ವರ್ಷಗಳ ಆಯಸ್ಸನ್ನು ವರವಾಗಿ ನೀಡಿ “ನೀನು ನಿನ್ನಲ್ಲಿರುವ ಜ್ಞಾನವನ್ನು ಇಡೀ ದೇಶಕ್ಕೆ ಪಸರಿಸು. ಇದರಿಂದ ಒಳಿತಾಗುತ್ತದೆ. ನೀನು ರಚಿಸಿದ ಈ ಬ್ರಹ್ಮಸೂತ್ರ ಬಾಷ್ಯಕ್ಕೆ ನನ್ನ ಸಂಪೂರ್ಣ ಸಹಮತವಿದೆ” ಎನ್ನುವುದಾಗಿ ಅನುಗ್ರಹಿಸಿದರು.
ಮುಂದೆ ಶ್ರೀ ಶಂಕರಾಚಾರ್ಯರು ದೇಶದ ನಾನಾ ಮೂಲೆಗಳಾನ್ನು ತಿರುಗಿ ವಿವಿಧ ಪಂಗಡಗಳಾ ಮುಖಂಡರ್ನ್ನೂ ವಿವಿಧ ಧಾರ್ಮಿಕ ವಿಚಾರವಾದಿಗಳನ್ನೂ ಸಂಧಿಸಿದ್ದಲ್ಲದೆ ಹಲವಾರು ಜನರನ್ನು ಆಧ್ಯಾತ್ಮಕ್ಕೆ ಸಂಬಂಧಪಟ್ಟ ವಾದದಲ್ಲಿ ಸೋಲಿಸಿದರು. ಕುಮಾರಿಲ ಭಟ್ಟ, ಮಂಡನ ಮಿಶ್ರರಾದಿಯಾಗಿ ನಾನಾ ವಿದ್ವಾಂಶರನ್ನು ವಾದದಲ್ಲಿ ಮಣಿಸಿದ ಶಂಕರರು ತಾವು ಸರ್ವಜ್ಞಪೀಠವನ್ನೇರಿದರು. ಹಾಗೆಯೇ ಮುಂದೆ ಹಿಂದೂ ಧರ್ಮ ಜಾಗೃತಿ ಮೂಡಿಸುವ ಸಲುವಾಗಿ, ತಾವು ಕಂಡುಕೊಂಡ ‘ಅದ್ವೈತ’ ತತ್ವದ ಪ್ರಚಾರಕ್ಕಾಗಿ ದೇಶದ ನಾಲ್ಕು ಮೂಲೆಗಳಲ್ಲೆ ನಾಲ್ಕು ಆಮ್ನಾಯ ಪೀಠ (ಉತ್ತರದಲ್ಲಿ ಬದರಿ ಉತ್ತರಾಮ್ನಾಯ ಜ್ಯೋತಿರ್ಪೀಠ, ದಕ್ಷಿಣದಲ್ಲಿ ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠ, ಪೂರ್ವದಲ್ಲಿ ಪುರಿ ಪೂರ್ವಾಮ್ನಾಯ ಪೀಠ ಹಾಗೂ ಪಶ್ಚಿಮದಲ್ಲಿ ದ್ವಾರಕೆ ಪಶ್ಚಿಮಾಮ್ನಾಯ ಪೀಠ)ಗಳನ್ನು ಸ್ಥಾಪಿಸಿದರು. ಆ ನಾಲ್ಕೂ ಮಠಗಳು ಇಂದಿಗೂ ತಮ್ಮ ಪರಂಪರೆಯನ್ನು ಮುಂದುವರಿಸಿದ್ದು ಅಸಂಖ್ಯಾತ ಶಿಷ್ಯವರ್ಗವನ್ನು ಹೊಂದಿವೆ. ಮುಂದೆ ಶ್ರೀ ಶಂಕರಾಚಾರ್ಯರು ತಾವು ಬ್ರಹ್ಮಸೂತ್ರ, ಉಪನಿಷತ್ತು, ಭಗವದ್ಗೀತೆಗಳಿಗೆ ಬಾಷ್ಯಗಳನ್ನು ಬರೆದರು. ಇವರು ರಚಿಸಿದ ‘ಭಜಗೋವಿಂದಂ’, ‘ಸೌಂದರ್ಯ ಲಹರೀ’, ‘ಕನಕಧಾರಾ ಸ್ತೋತ್ರ’ ಗಳು ಬಹು ಪ್ರಸಿದ್ದವಾಗಿವೆ.
ಹೀಗೆ ಹಿಂದೂ ಧರ್ಮದ ಉದ್ದಾರಕರಾಗಿ, ಧರ್ಮ ಸಂಸ್ಥಾಪನೆಗಾಗಿ ಮಠಗಳ ಮೂಲಕ ಧಾರ್ಮಿಕ ಜಾಗೃತಿಯನ್ನುಂಟುಮಾಡಿದ ದಿವ್ಯ ಚೇತನ ಶ್ರೀ ಶಂಕರಾಚಾರ್ಯರು ತಾವು ತಮ್ಮ 32 ನೇ ವಯಸ್ಸಿನಲ್ಲಿ ಶ್ರೀ ಬದರೀ ಕ್ಷೇತ್ರದಲ್ಲಿ ಮಹಾಸಮಾಧಿಯನ್ನು ಹೊಂದಿದರು.

ಸಂದೇಶ
ಸಂಸ್ಕೃತದಲ್ಲಿ "ದ್ವಿ" ಎಂದರೆ ಎರಡು ಎಂದರ್ಥ. ಹಾಗಾಗಿ "ಅ"+"ದ್ವೈತ" ಅಂದರೆ "ಎರಡಲ್ಲದ್ದು" ಎಂದು ಅರ್ಥೈಸಬಹುದು. ಅದ್ವೈತ ಸಿದ್ದಾಂತದ ಸಾರವೇ ಇದು. ಆತ್ಮನಲ್ಲಿಯೇ ಪರಮಾತ್ಮನಿದ್ದಾನೆ. ಆತ್ಮನಿಗೂ ಪರಮಾತ್ಮನಿಗೂ ಭೇಧವಿಲ್ಲ. “ಅಹಂ ಬ್ರಹ್ಮಾಸ್ಮಿ”(ನನ್ನೊಳಗೇ ಬ್ರಹ್ಮನಿದ್ದಾನೆ/ನಾನೇ ಬ್ರಹ್ಮನಾಗಿದ್ದೇನೆ) “ತತ್ ತ್ವಮ್ ಅಸೀ”(ನೀನು ಸಹ ಅದೇ ಆತ್ಮನ ಅಂಶದಿಂದ ಕೂಡಿದ್ದೀಯೆ)-ಇವು ‘ಅದ್ವೈತ’ಸಿದ್ದಾಂತದ ಮೂಲ ಸಾರವನ್ನು ತಿಳಿಸುವ ಉಕ್ತಿಗಳು. ಶ್ರೀ ಆದಿಶಂಕರಾಚಾರ್ಯರು ಹೇಳುವಂತೆ “ಸರ್ವಂ ಬ್ರಹ್ಮಮಯಂ ಜಗತ್”- ಜಗತ್ತೆಲ್ಲವೂ ಬ್ರಹ್ಮನಿಂದ ಆಗಲ್ಪಟ್ಟಿದೆ. ಆತ್ಮನೇ ಪರಮಾತ್ಮನೂ ಆಗಿದ್ದಾನೆ, ಅದು ಮಾತ್ರವೇ ಸತ್ಯವಾದುದು. ವಿಶ್ವದಲ್ಲಿನ ಮಿಕ್ಕೆಲ್ಲವೂ ಮಿಥ್ಯ.
ಅದ್ವೈತ ಸಿದ್ಧಾಂತದ ಎಂಟು ಮೂಲ ತತ್ವಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು-
1. ಬ್ರಹ್ಮ ಒಂದೇ ಸತ್ಯ ; ಈಜಗತ್ತು ಮಿಥ್ಯ ; ಜೀವನು ಬ್ರಹ್ಮನಿಂದ ಬೇರೆಯಲ್ಲ.
2.ಆತ್ಮವು ಸ್ವತಃ ಸಿದ್ಧವಾಗಿದೆ. ಅದು ಇದೆ ಎಂದು ಸಾಧಿಸಲು ಬೇರೆ ಪ್ರಮಾಣಗಳು ಬೇಕಾಗಿಲ್ಲ ; ಕಾರಣ ನಿರಾಕರಿಸುವವನೇ ಆತ್ಮ ಸ್ವರೂಪನಾಗಿದ್ದಾನೆ. ನಾನು ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. .
3.ಬ್ರಹ್ಮವು ಜ್ಞಾನಕ್ಕೆ ವಿಷಯವಾಗಲಾರದು
4 ಬ್ರಹ್ಮವು ಸತ್ ಚಿತ್ ಆನಂದ ಸ್ವರೂಪ ವಾಗಿದೆ ..
5. ಬ್ರಹ್ಮವು ನಿರಾಕಾರ ನಿರ್ಗುಣ ; ಅದು ಇಂದ್ರಿಯ ಮನಸ್ಸುಗಳ ಆಚೆ ಇರುವಂತಹದು. ಇಂದ್ರಿಯ ಗೋಚರವಾದವು ಅನಿತ್ಯವಾಗಿದೆ.
6. ತ್ರಿವಿಧ ಸತ್ತೆಗಳು :
                 1.ಪ್ರಾಪಂಚಿಕ ಸತ್ತೆ : ಅನುಭವಕ್ಕೆ ಬರುವುದು ಸತ್ಯವೇ ಆಗಿರುತ್ತದೆ. ಸ್ವಲ್ಪ ಕಾಲ ಇದ್ದು , ಆನಂತರ ಇಲ್ಲವಾಗುವುದು ಅನಿತ್ಯವಾದವುಗಳು ; ಅದು ಈ ನಮ್ಮ ಅನುಭವಕ್ಕೆ ಬರುವ ಪ್ರಪಂಚಕ್ಕೆ ಅನ್ವಯಿಸುತ್ತದೆ. ಇದು ಪ್ರಾಪಂಚಿಕ ಸತ್ಯ ಅಥವಾ ವ್ಯವಹಾರಿಕ ಸತ್ಯ. ಆದ್ದರಿಂದ ನಾವು ಕಾಣವ ಈ ಜಗತ್ತು ಮತ್ತು ಅದರ ಅನುಭವ ಪೂರ್ಣ ಬ್ರಮೆಯಲ್ಲ. ಪೂರ್ಣ ಸತ್ಯವೂ ಅಲ್ಲ. ಅವು ಅನಿತ್ಯವಾದುದರಿಂದ ಮಿಥ್ಯೆ. ಭೂ, ಭವಿಷ್ಯತ್, ವರ್ತಮಾನ ಈ ತ್ರಿಕಾಲದಲ್ಲೂ ಇರುವುದಲ್ಲ. ಮಿಥ್ಯೆ ಎಂದರೆ ಬಂಜೆಯ ಮಗನಂತೆ ಪೂರ್ಣ ಸುಳ್ಳಲ್ಲ
                         2.ಪ್ರಾತಿಭಾಸಿಕ ಸತ್ತೆ : ಇದು ತಿರಾ ಕೆಳಗಿನ ಹಂತದ ಸತ್ಯ. ನಂಬುಗೆ ಇರುವ ವರೆಗೆ ಮಾತ್ರ ಇರುತ್ತದೆ. ಉದಾಹರಣೆಗೆ ಹಗ್ಗವನ್ನು ಹಾವೆಂದು ತಿಳಿಯುವುದು. ಹಾವು ಅನುಭವಕ್ಕೆ ಬರುವುದರಿಂದ ಇಲ್ಲವೆನ್ನುವಂತಿಲ್ಲ; ಅನುಭವ ಇರುವವರೆಗೂ     ಸತ್ಯವಾಗೇ ಇರುತ್ತದೆ. ಇದು ಪ್ರಾತಿಭಾಸಿಕ ಸತ್ಯ
                        3.ಪಾರಮಾರ್ಥಿಕ ಸತ್ತೆ : ಇದು ತ್ರಿಕಾಲಾಬಾಧಿತ ಸತ್ಯ. ಭೂತ ಭವಿಷ್ಯತ್ ವರ್ತಮಾನಗಳಲ್ಲೂ ಬಾಧಿತವಾಗದೆ ಇರುವುದು. ಎಚ್ಚರ ಕನಸು ನಿದ್ದೆ ಈಮೂರೂ ಅವಸ್ಥೆಗಳಲ್ಲೂ ಸಾಕ್ಷಿರೂಪದಲ್ಲಿ ಒಂದೇ ರೀತಿಯಾಗಿರುವುದು. ಮೂರೂ ಕಾಲಗಳಲ್ಲಿ ಮೂರೂ ಅವಸ್ಥೆಗಳಲ್ಲಿ ಬದಲಾವಣೆ ಆಗುವುದಿಲ್ಲ ; ಒಂದೇರೀತಿಇರುತ್ತದೆ. ಇದು ಪಾರಮಾರ್ಥಿಕ ಸತ್ಯ. ಈ ಗುಣವನ್ನು ಹೊಂದಿರುವುದು, ಈತತ್ವಕ್ಕೆ ಅರ್ಹವದುದು ಬ್ರಹ್ಮವೊಂದೇ. ಆದ್ದರಿಂದ ಬ್ರಹ್ಮ ವೊಂದೇ ಪಾರಮಾರ್ಥಿಕ ಸತ್ಯ ವಾಗಿದೆ.

7.ಮನ, ಬುದ್ಧಿ, ಅಹಂಕಾರ, ಚಿತ್ತ, ಈ ಅಂತಃಕರಣ ದಿಂದ ಆವರಿಸಲ್ಪಟ್ಟ ಮೂಲ ಚೈತನ್ಯವೇ ಜೀವ. ಮಾಯೆಯಿಂದ ಆವರಿಸಲ್ಪಟ್ಟ ಬ್ರಹ್ಮ ಮಾಯೆಯ ಉಪಾದಿಯಿಂದ ಈಶ್ವರನೆನಿಸಿ ಕೊಳ್ಳುತ್ತಾನೆ. ಅದೇ ಅಜ್ಜ್ಞಾನದ ಉಪಾದಿಯಿಂದ ಜೀವನೆನಿಸುತ್ತಾನೆ. ಜೀವನಿಗೆ ಈ ಉಪಾದಿಗಳಿಂದ ಸ್ಥೂಲ, ಸೂಕ್ಷ್ಮ, ಕಾರಣಗಳೆಂಬ ಮೂರು ಶರೀರಗಳು. ಜಗ್ರತ್, ಸ್ವಪ್ನ, ಸುಷುಪ್ತಿ ಗಳೆಂಬ ಮೂರು ಅವಸ್ಥೆಗಳು. ಅವಿದ್ಯೆಯಿಂದ ಅಥವಾ ಅಜ್ಞಾನದಿಂದ ಬಿಡುಗಡೆಯಾದರೆ ಜೀವವು ಬ್ರಹ್ಮದಲ್ಲಿ ಲೀನವಾಗುವುದು- ಅಪರೋಕ್ಷಾನುಭೂತಿಯಾದಾಗ ತಾನೇ ಬ್ರಹ್ಮ ವೆಂಬ ಅನುಭವವಾಗುವುದು ; ತಾನು ಸಚ್ಚಿದಾನಂದ ರೂಪವೆಂಬ ಅನುಭವವಾಗುವುದು. ಇದು ಪಾರಮಾರ್ಥಿಕ ಸತ್ಯ.
8.ಈ ಸಂಸಾರವು ಅಥವಾ ಬೇರೆ ಬೇರೆ, ಅನೇಕ, ಎಂಬ ಭಾವವು ಅವಿದ್ಯೆ [ಅಜ್ಞಾನ]ಯಿಂದ ಉಂಟಾದುದು. ಜ್ಞಾನದಿಂದ ಮಾತ್ರ ತನ್ನ ನಿಜವಾದ ರೂಪವನ್ನು ಅರಿಯಬಹುದು. ಕರ್ಮಯೋಗ, ರಾಜಯೋಗ, ಭಕ್ತಿಯೊಗ ಇವು ಸಾಧಕನ ಮನಸ್ಸನ್ನು ಶುದ್ಧಿಗೋಳಿಸಲು ಪ್ರಯೋಜನ. ಅವಿದ್ಯೆ ಅಥವ ಅಜ್ಞಾನ ದೂರವಾದರೆ ತಾನೇ ಜ್ಞಾನವಾಗುವುದು.
“ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಂ”
ಅದ್ವೈತ ವೇದಾಂತದ ಸಾರವು ಈ ಉಕ್ತಿಯಲ್ಲಿದೆ. . ಜಗತ್ತು ಅನುಭವಗಮ್ಯ. ಅನುಭವದ ಆಧಾರದಲ್ಲಿ ಜಗತ್ತಿನ ವ್ಯವಹಾರಗಳು ಪ್ರವಹಿಸುತ್ತದೆ. ಆತ್ಮನ ಸತ್ಯತ್ವವು ಅನುಭವದ  ಆಧಾರದ ಮೇಲೆ ಇರುತ್ತದೆ. ಜ್ಞಾತರೂಪದಲ್ಲಿ ಆತ್ಮನ ಉಪಲಬ್ಧಿಯನ್ನು ತೋರಿಸಲಿಕ್ಕಾಗುವುದಿಲ್ಲ. ವಿಷಯದ ರೂಪದಿಂದ ಇದನ್ನು ತಿಳಿಸಲಾಗುತ್ತದೆ, ಎನ್ನುತ್ತದೆ ಅದ್ವೈತ ಸಿದ್ದಾಂತ. ಆತ್ಮನ ಅಸ್ತಿತ್ವ ವಿಷಯದಲ್ಲಿ ಯಾರಿಗೂ ಸಂದೇಹವಿರುವುದಿಲ್ಲ. ಆತ್ಮನ ಅಸ್ತಿತ್ವವು ಪ್ರಸಿದ್ದವಿಲ್ಲದಿದ್ದಲ್ಲಿ ಸರ್ವರೂ ತಮ್ಮ ಅಸ್ತಿತ್ವದಲ್ಲಿ ನಂಬಿಕೆ ತಾಳುತ್ತಿರಲಿಲ್ಲ. ಆದರೆ ಲೋಕದಲ್ಲಿ ಹೀಗೆ ಆಗಲ್ಲಿಲ್ಲ ಆದ್ದರಿಂದ ಆತ್ಮನ ಅಸ್ತಿತ್ವವು ಸ್ಪಷ್ಟವಾಗಿ ಪ್ರಾಮಾಣಿಕವಾಗುತ್ತದೆ. ಈ ಆತ್ಮಾಸ್ತಿತ್ವದ ವಿಷಯದಲ್ಲಿ ಯಾರೂ ಸಂದೇಹಪಡಲು ಕಾರಣವಿಲ್ಲ. ಇದುವೇ ಉಪನಿಷತ್ತುಗಳು ಹೇಳಿದ ತತ್ವವಾಗಿದೆ. ಬ್ರಹ್ಮವು ಅಖಂಡವಾದುದು, ಅದನ್ನು ತುಂಡು ತುಂಡಾಗಿಸಲು ಬರುವುದಿಲ್ಲ. ಭೇದಗಳು ವ್ಯವಹಾರಕ್ಕಾಗಿ ಕಲ್ಪಿತವಾದವುಗಳು.
ಉಪನಿಷತ್ತು ಬ್ರಹ್ಮವನ್ನು ನಿರ್ಗುಣ ಮತ್ತು ಸಗುಣವೆಂದು ಎರಡು ರೂಪಗಳಲ್ಲಿ ವರ್ಣಿಸಿದೆ. ಬ್ರಹ್ಮವು ಜಗತ್ತಿಗೆ ಸಮಾನವಾಗಿ ಮಾಯಾವಿಶಿಷ್ಟವಾಗಿ ಮಾಯಿಕ ತತ್ವವನ್ನು ಧಾರಣೆ ಮಾಡುತ್ತದೆ. ಬ್ರಹ್ಮನು ಜಗತ್ತಿಗೆ ಕಾರಣನು ಮತ್ತು ಪದಾರ್ಥಾಂತರಗಳಿಂದ ಅವಿಭಕ್ತನಾಗಿದ್ದಾನೆ. ಸತ್, ಚಿತ್, ಆನಂದಸ್ವರೂಪಿಯಾಗಿದ್ದಾನೆ. ಇದೇ ಬ್ರಹ್ಮನ ಸ್ವರೂಪಲಕ್ಷಣ. ಆದರೆ ಮಾಯೆಯಿಂದ ಆವೃತನಾದರೆ ಸಗುಣಸ್ವರೂಪವನ್ನು ತಾಳುತ್ತಾನೆ. ಈ ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನಾಗಿ ಅಪರಬ್ರಹ್ಮ ಇಲ್ಲವೆ ಈಶ್ವರನೆಂದು ಕರೆಯಲ್ಪಡುತ್ತಾನೆ.
ಜಗತ್ತಿನಲ್ಲಿನ ಸಾಮಾನ್ಯ ಜೀವಿಗಳ ಉಪಾಸನೆಗಾಗಿ ನಿರ್ವಿಶೇಷ ಬ್ರಹ್ಮನು ಸವಿಶೇಷರೂಪವನ್ನು ಧರಿಸುತ್ತಾನೆ. ಎಲ್ಲಿ ನಿರ್ವಿಶೇಷ ಬ್ರಹ್ಮನನ್ನು ಆತ್ಮರೂಪವೆಂದು ಹೇಳಿದೆಯೋ ಅಲ್ಲಿ ಏಕತ್ವರೂಪವಾದ ಮೋಕ್ಷವೇ ಫಲವಾಗಿದೆ. ಆದರೆ ಎಲ್ಲಿ  ವಿಗ್ರಹಗಳ ಉಪಾಸನೆಯ ಪ್ರಸಂಗಬರುವುದೋ ಅಲ್ಲಿ ಸಂಸಾರಗೋಚರವಾದ ಫಲವು ಭಿನ್ನ ಭಿನ್ನವಾದ ಉಪಾಸ್ಯ ಉಪಾಸಕ ಭೇದದ ದೃಷ್ಟಿಯಿಂದ ಕಲ್ಪಿತಗಳಾಗಿವೆ. ಜೀವ ಮತ್ತು ಈಶ್ವರರೊಳಗೆ ಅಂಶ-ಅಂಶೀ ಕಲ್ಪನೆಯನ್ನು ಅದ್ವೈತ ಸಿದ್ದಾಂತವು ಪ್ರತಿಪಾದಿಸುತ್ತದೆ. ಇವುಗಳಲ್ಲಿ ಸಮಾನಧರ್ಮಗಳು ವಿದ್ಯಮಾನವಾಗಿದ್ದರೂ ಅವಿದ್ಯಾದಿವ್ಯವಧಾನದಿಂದ ತಿರೋಹಿತವಾಗಿದೆ. ಈಶ್ವರನನ್ನು ಧ್ಯಾನ ಮಾಡುವುದರಿಂದ ಸಾಧಕರಲ್ಲಿ ಅಲೌಕಿಕ ಶಕ್ತಿಗಳು ಪ್ರಾಪ್ತವಾಗುತ್ತವೆ. ಆದರಿಂದ ಅವರು ಹೊಸ ಸೃಷ್ಟಿಯನ್ನು ಮಾಡಲು ಸಮರ್ಥರಾಗುತ್ತಾರೆ. ತಿರೋಹಿತವಾದ ಶಕ್ತಿಯು ಉದಯವಾಗುವುದೇ ಜಪ, ತಪ ಮತ್ತು ಯೋಗಗಳ ಫಲ. ಈಶ್ವರನ ಸ್ವರೂಪದ ಅಜ್ಞಾನದಿಂದ ಜೀವನಿಗೆ ಬಂಧನವಾಗುತ್ತದೆ. ಎನ್ನುವುದು ಆದಿಶಂಕರಾಚಾರ್ಯರ ಅಭಿಪ್ರಾಯ.
“ಮುಮುಕ್ಷೋ ಸತ್ತ್ವ ಶುದ್ದ್ಯರ್ಥಂ”
ಮೋಕ್ಷದಲ್ಲಿ ಕಾತುರವುಳ್ಲವನ ಮನಸನ್ನು ಕರ್ಮಗಳು ಶುದ್ದಗೊಳಿಸುತ್ತವೆ, ನಾವು ಸಾಮಾನ್ಯವಾಗಿ ಮಾಡುವ ಕೆಲಸಗಳಾಲ್ಲಿ ಅಹಂಕಾರವು ಜಾಗೃತವಾಗಿರುತ್ತದೆ- ಎಂದರೆ ಯಾವೊಂದು ಕೆಲಸವನ್ನಾಗಲೀ ಮಾಡಿ ಮುಗಿಸಿದಾಗ ಸಾಮಾನ್ಯ ವ್ಯಕ್ತಿಯೋರ್ವನಿಗೆ ‘ನಾನು ಈ ಕೆಲಸವನ್ನು ಮಾಡಿದೆ’ ಎನ್ನುವ ಭಾವನೆ ಮೂಡುತ್ತದೆ. ಆದರೆ ಯಾರು ಜ್ಞಾನಿಗಳಿರುತ್ತಾರೋ ಅವರಲ್ಲಿ ಅಂತಹಾ ಭ್ರಮೆಯು ಇರುವುದಕ್ಕೆ ಸಾಧ್ಯವಿಲ್ಲ. ಕರ್ಮವು ಜ್ಞಾನದ ಪ್ರಾಪ್ತಿಗಾಗಿರುವ ಸಾಧನವಾಗಿದೆ.
“ಯದಿ ಅನಾತ್ಮಜ್ಞಸತ್ತ್ವಂ ತದಾ ಆತ್ಮಶುದ್ದರ್ಥಂ ತತ್ತ್ವವಿತ್ ಚೇತ್ ಲೋಕಸಂಗ್ರಹಾರ್ಥಂ”
ಯಾವೊಬ್ಬ ವ್ಯಕ್ತಿಯು ಆತ್ಮಜ್ಞಾನವನ್ನು ಪಡೆದವನಲ್ಲವೋ ಆತನು ತನ್ನ ಚಿತ್ತ ಶುದ್ದಿಗಾಗಿ ಕರ್ಮಗಳನ್ನು ಮಾಡಬೇಕು, ಯಾರು ಆತ್ಮಜ್ಞಾನವನ್ನು ಹೊಂದಿರುತ್ತಾರೆಯೋ ಅಂತಹವರು ಲೋಕಸಂಗ್ರಹಕ್ಕಾಗಿ ಕರ್ಮಗಳನ್ನು ಮಾಡತಕ್ಕುದು, ಎಂದರೆ ಯಾರೊಬ್ಬರೂ ಕರ್ಮಗಳನ್ನು ನಿರಾಕರಿಸುವಂತಿಲ್ಲ. ಅವರವರಿಗೆ ಅವರವರ ಕರ್ಮಗಳು ವಿಧಿಸಲ್ಪಡುತ್ತವೆ, ಆ ಕರ್ಮಗಳ ಹಿಂದೆ ಅದರದೇ ಆದ ಉದ್ದೇಶಗಳೂ ಇರುತ್ತವೆ. ಆದುದರಿಂದ ಪ್ರತಿಯೊಬ್ಬರೂ ಕರ್ಮಗಳನ್ನು ಮಾದಬೇಕು.
ಮಾಯೆ ಮತ್ತು ಅವಿದ್ಯೆಗಳು ಸಮಾನ ಅರ್ಥವನ್ನು ಕೊಡುವ ಶಬ್ದಗಳಾಗಿವೆ. ಅಗ್ನಿಯಿಂದ ಬೇರೆಯಾಗದ ದಾಹಶಕ್ತಿಗೆ ಅನುರೂಪವಾಗಿ ಮಾಯೆಯು ಬ್ರಹ್ಮನ ಅನ್ವರ್ಥಭೂತವಾದ ಶಕ್ತಿ. ತ್ರಿಗುಣಾತ್ಮಕವಾದ ಮಾಯೆಯು ಜ್ಞಾನವಿರೋಧಿಯಾದ ಭಾವರೂಪವಾಗಿದೆ. ಮಾಯೆಯು ಸದ್ ರೂಪ ಅಸದ್ ರೂಪವೆರಡನ್ನೂ ಮೀರಿದೆ. ಅದನ್ನು ವರ್ಣಿಸಲು ಸಾಧ್ಯವಿಲ್ಲದುದರಿಂದ ಅನಿರ್ವಚನೀಯವೆನ್ನುತ್ತಾರೆ. ಮಾಯೆಯು ಪರಮಾತ್ಮನ ಅವ್ಯಕ್ತ ಶಕ್ತಿ. ಅದಕ್ಕೆ ಆದಿಯಿಲ್ಲ. ಗುಣತ್ರಯದಿಂದ ಅವಿದ್ಯೆ. ಅವರ ಕಾರ್ಯದಿಂದ ಅದು ತಿಳಿಯಲ್ಪಡುತ್ತದೆ. ಅದು ಜಗತ್ತನ್ನು ಸೃಷ್ಟಿಸುತ್ತದೆ. ಮಾಯೆಗೆ ಎರಡು ಶಕ್ತಿಗಳಿವೆ. ಆವರಣ ಮತ್ತು ವಿಕ್ಷೇಪ. ಇದರಿಂದ ಬ್ರಹ್ಮನ ಅಮೃತವಾದ ವಾಸ್ತವರೂಪವು ಅದರಲ್ಲಿ ಅವಸ್ಥಾರೂಪವಾದ ಜಗತ್ತಿನ ಪ್ರತೀತಿಯು ಉದಯವಾಗುತ್ತದೆ.
ಹೀಗೆ ಶಂಕರಾಚಾರ್ಯ ಪ್ರತಿಪಾದಿತ ಅದ್ವೈತ ತತ್ವವು ಮಾನವರಲ್ಲಿನ ಸಾವಿನ ಭಯವನ್ನು ದೂರಮಾಡಬಲ್ಲ ಶಕ್ತಿಯನ್ನು ಹೊಂದಿದೆ. ಯಾರು ಈ ಮೂಲ ತತ್ವವನ್ನು ಅರ್ಥೈಸಿಕೊಳ್ಳುತ್ತಾರೋ ಅಂತಹವರು ಎಂದಿಗೂ ಯಾವುದಕ್ಕೂ ಅಳುಕುವುದಿಲ್ಲ. ಸೃಷ್ಟಿಯ ಪ್ರತಿಯೊಂದು ಅಣು ಅಣುವಿನಲ್ಲಿಯೂ ಪರಮಾತ್ಮ ಸ್ವರೂಪಿಯಾದ ಬ್ರಹ್ಮವು ತಾನು ಇರುವುದರಿಂದಲೂ, ಆತ್ಮನೂ ಬ್ರಹ್ಮನೂ ಏಕವಾದುದರಿಂದಲೂ ನನ್ನೊಳಗೇ ಪರಬ್ರಹ್ಮದ ಅಂಶವಿರುವುದರಿಂದಲೂ ಯಾವ ಜೀವಿಯೂ ತಾನು ಮೇಲು, ಕೀಳು ಎನ್ನುವ ಹಾಗಿಲ್ಲ. ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವೂ ಅಲ್ಲ. ಜಗತ್ತೆಲ್ಲವೂ ಏಕಸ್ವರೂಪವಾಗಿದ್ದರೂ ಮಾಯೆಯಿಂದಾವೃತರಾದವರ ಕಣ್ಣುಗಳಿಗೆ ನಾನಾ ವಿಧಗಳಲ್ಲಿ ಕಾಣಿಸುತ್ತದೆ ಎನ್ನುವುದು ಅದ್ವೈತ ತತ್ವ. ಹೀಗಾಗಿ ಮಾನವರಾದಿಯಾಗಿ ಯಾರೂ ಸಾವಿಗೆ ಭಯಪಡಬೇಕಿಲ್ಲ. ಸಾವು ಅಂತ್ಯವಲ್ಲ, ಏಕೆಂದರೆ ಬ್ರಹ್ಮಕ್ಕೆ ಯಾವುದೇ ಅಂತ್ಯವಿಲ್ಲ. ಅದು ಅನಂತವಾದುದು.