Saturday, July 29, 2017

ಬದುಕಿನ ಮೂಲಕ ಕಲೆಯನ್ನು, ಕಲೆಯ ಮೂಲಕ ಬದುಕನ್ನು ವ್ಯಾಖ್ಯಾನಿಸುವ ರಾಧಿಕಾ ಪ್ರಭು



ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ದುಡಿದು ಉತ್ತಮ ಸಾಧನೆ ಮಾಡಿ ಹೆಸರಾಗುವುದು ಸಾಮಾನ್ಯ. ಅದು ಸಾಹಿತ್ಯವಿರಬಹುದು, ಸಂಗೀತ-ನೃತ್ಯವಿರಬಹುದು, ಕೃಷಿಯೂ ಇರಬಹುದು. ಆದರೆ ಒಬ್ಬರೇ ವ್ಯಕ್ತಿ ತಾನು ಇನ್ನೂ ತಾರುಣ್ಯದಲ್ಲಿಯೇ ಒಂದೆರಡಲ್ಲ ಮೂರು ಕ್ಷೇತ್ರಗಳಲ್ಲಿ ಹೆಸರು ಗಳಿಸುವುದು ಅದು ಸಾಮಾನ್ಯವಲ್ಲ. ಇಂತಹಾ ಅಪೂರ್ವ ಅವಕಾಶ ಹಾಗೂ ಪ್ರತಿಭೆ ಎಲ್ಲರಿಗೂ ಒಲಿಯಲಾರದು. ಆದರೆ ಇಲ್ಲೊಬ್ಬ ಸಾಧಕಿ ತನ್ನ ಬದುಕಿನಲ್ಲಿ ಇದನ್ನು ಆಗು ಮಾಡಿ ತೋರಿಸಿದ್ದಾರೆ.
ರಾಧಿಕಾ ಪ್ರಭು



ಕನ್ನಡ ರಂಗಭೂಮಿ ಹಾಗೂ ದೃಷ್ಯ ಮಾದ್ಯಮದ ಹಿನ್ನೆಲೆ ಇರುವ ಕಲಾವಿದರ ಕುಟುಂಬದ ಕುಡಿ ರಾಡಿಕಾ ಮೂಲತಃ ಬೆಂಗಳೂರಿನವರು.ಇವರ ತಂದೆ ಶ್ರೀನಿವಾಸ ಪ್ರಭು ಕನ್ನಡ ರಂಗಭೂಮಿ, ಕಿರುತೆರೆ, ಚ್ಲನಚಿತ್ರ ರಂಗದಲ್ಲಿ ಹೆಸರಾದ ನಟ ಹಾಗೂ ನಿರ್ದೇಶಕರು. ತಾಯಿ ರಂಜನಿ ಪ್ರಭು ಸಹ ಕನ್ನಡದ ಪ್ರತಿಭಾವಂತ ಕವಯಿತ್ರಿಯರಲ್ಲಿ ಒಬ್ಬರಾಗಿದ್ದಾರೆ.           
ಕಿರಿಯ ವಯಸ್ಸಿನಲ್ಲಿಯೇ ಭರತ ನಾಟ್ಯ, ಕ್ಲಾಸಿಕಲ್ ಬ್ಯಾಲೆ ನೃತ್ಯಗಳಲ್ಲಿ ಪ್ರಾವೀಣ್ಯತೆ ಸಾಡಿಸಿರುವ ರಾಧಿಕಾ ಲಂಡನ್ ಪ್ರತಿಷ್ಠಿತ ಚೆಲ್ಸಿಯಾ ಕಾಲೇಜ್ ಆಫ್ ಆರ್ಟ್ ಆಂಡ್ ಡಿಸೈನ್ (Chelsea college of Art and Design, UAL, London )  ನಿಂದ   ಫೈನ್ ಆರ್ಟ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.  ಜತೆಗೆ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಬ್ಯಾಚುಲರ್ ಆಫ್ ವಿಷುವಲ್ ಆರ್ಟ್ಸ್  ಪದವಿ ವ್ಯಾಸಂಗ ಮಾಡಿದ್ದಾರೆ. ಇನ್ನು ತಾಯಿಯಿಂದ ಪ್ರೇರಿತರಾಗಿ ಇದುವರೆಗೆ ಎರಡು ಆಂಗ್ಲ ಕವನ ಸಂಕಲನಗಳನ್ನು ಹೊರ ತಂದಿದ್ದಾರೆ.

ಅಮೆರಿಕಾರ ಓಕ್ಲಹಾಮಾದಲ್ಲಿರುವ ನಾರ್ತ್ ವೆಸ್ಟರ್ನ್ ಓಕ್ಲಹಾಮಾ ಸ್ಟೇಟ್ ಯುನಿವರ್ಸಿಟಿಯಲ್ಲಿ ಕಲಾವಿದೆ ಹಾಗೂ ನೃತ್ಯಗಾರ್ತಿಯಾಗಿ ಸೇವೆ ಸಲ್ಲಿಸಿರುವ ರಾಧಿಕಾ ಬ್ರಿಟನ್ ನಲ್ಲಿ ನಡೆದ ಪ್ರಥಮ ಬಾತ್ - ಭಾರತೀಯ ಸಂಗೀತೋತ್ಸವದಲ್ಲಿ ತಮ್ಮ ವಿಶೇಷ ಪ್ರದರ್ಶನ ನೀಡುವ ಅವಕಾಶ ಗಳಿಸಿದ್ದರು. ಜತೆಗೆ ಭೂತಾನಿನ ಥಿಂಪೂವಿನ ನೆಹರೂ ವಾಂಗ್ ಚೌಕ್ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ವಿಶೇಷ ಆಹ್ವಾನಿತರಾಗಿ ಆಯ್ಕೆ ಆಗಿದ್ದರು.
ಹೀಗೆ ನೃತ್ಯ, ಚಿತ್ರಕಲೆ, ಸಾಹಿತ್ಯ ಮೂರು ರಂಗಗಳಲ್ಲಿಯೂ ಏಕಕಾಲಕ್ಕೆ ತೊಡಗಿಸಿಕೊಂಡು ಅದ್ಭುತ ಸಾಡನೆ ಮಾಡಿರುವ ಪ್ರತಿಭಾವಂತೆ ರಾಧಿಕಾ ಅವರೊಡನೆ ನಡೆಸಿದ ಸಂದರ್ಶನದ ಪ್ರಮುಖ ಭಾಗ ಇಲ್ಲಿದೆ.





·        ನೀವು ನೃತ್ಯ, ಚಿತ್ರಕಲೆ, ಬರವಣಿಗೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದೀರಿ. ಏಕಕಾಲದಲ್ಲಿ ಮೂರು ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಹೇಗೆ ಸಾಧ್ಯವಾಯಿತು?
ನಾನು ಯಾವುದನ್ನೂ ಸಾಧನೆ ಮಾಡಬೇಕೆಂದು ಕಲಿಯತೊಡಗಿಲ್ಲ. ನಾನು ಭರತನಾಟ್ಯ ಕಲಿಯಲು ಪ್ರಾರಂಭಿಸಿದ್ದು ನನ್ನ ಸ್ವ ಇಚ್ಚೆಯಿಂದ. ವಿಷುವಲ್ ಆರ್ಟ್ ಸಹ ನನ್ನ ಆಸಕ್ತಿಯಿಂದಲೇ ಕಲಿಯಲು ಪ್ರಾರಂಭಿಸಿದ್ದು. ನಾನು ಅದನ್ನೇ ನನ್ನ ಕರಿಯರ್ ಆಗಿಸಿಕೊಳ್ಳಬೇಕೆಂದು ಯಾವುದನ್ನೂ ಕಲಿಯತೊಡಗಿದ್ದಲ್ಲ. ಹಾಗೆಯೇ ನಾನು ವಿಚಾರದಲ್ಲಿ ಅದೃಷ್ಟವಂತಳೆನ್ನಬೇಕು. ನನಗೆ ನನ್ನ ಕುಟುಂಬ, ಗುರುಗಳು ಎಲ್ಲ ಕಡೆಯಿಂದ ನನಗೆ ಬೇಕಾಗಿದ್ದ ಸಹಾಯ, ಸಹಕಾರ ಅದು ಅವಷ್ಯವಿದ್ದ ಸಮಯದಲ್ಲಿ ದೊರಕಿತು. ಹೀಗಾಗಿ ಇದೆಲ್ಲ ಸಾಧ್ಯವಾಯಿತು.
ನಾನು ಮೊದಲು ನೃತ್ಯವನ್ನೇ ಆಯ್ಕೆ ಮಾಡಿಕೊಂಡಿದ್ದೆ. ಏಳು ವರ್ಷದವಳಿದ್ದಾಗ ನೃತ್ಯಾಭ್ಯಾಸಕ್ಕೆ ತೊಡಗಿದೆ. ಶಾಲಾ ವಿದ್ಯಾಭ್ಯಾಸದ ತರುವಾಯ ಮತ್ತೆ ಅಕಡಮಿಕ್ ವಿಷಯಗಳತ್ತ ವಾಲದೆ ಇನ್ನೊಂದು ಆರ್ತ್ಸ್ ವಿಷಯವನ್ನೇ ಆಯ್ಕೆ ಮಾಡಿಕೊಳ್ಲುವ ಉದ್ದೇಶದೊಂದಿಗೆ ಚಿತ್ರಕಲಾ ಪರಿಷತ್ತಿಗೆ ಸೇರಿ ವಿಷುವಲ್ ಆರ್ಟ್ಸ್ ಪದವಿ ಮಾಡಿದೆ. ಅಲ್ಲಿ ಕಲಿಯುತ್ತಿರುವಾಗ ನನಗೆ ಚಿತ್ರಕಲೆ ಬಗೆಗಿದ್ದ ಆಸಕ್ತಿ ಹೆಚ್ಚಾಯಿತು.

·        ನೀವು ಏಳು ವರ್ಷದವರಿದ್ದಾಗ ಭರತನಾಟ್ಯ ಕಲಿಯಲು ಪ್ರಾರಂಭಿಸಿದ್ದಿರಿ. ನಿಮ್ಮ ಆಗಿನ ಗುರುಗಳು ಯಾರು? ನಿಮ್ಮ ಗುರುಗಳ ಬಗ್ಗೆ ತಿಳಿಸಿ.
ನನ್ನ ಮೊದಲ ನೃತ್ಯ ಗುರುಗಳು ವಸುಂಧರಾ ಕುಮಾರ್ ಅವರಲ್ಲಿ ಕಲಿಯುತ್ತಿದ್ದಾಗಲೇ ನನಗೆ ನೃತ್ಯದ ಕುರಿತಾಗಿ ಹೆಚ್ಚು ಆಸಕ್ತಿ ಮೂಡಿತು. ಇದಾದ ನಂತರ ಶುಭಾ ಧನಂಜಯ್ ಅವರಲ್ಲಿ ಏಳರಿಂದ ಎಂಟು ವರ್ಷಗಳ ಕಾಲ ನೃತ್ಯಾಭ್ಯಾಸ ಮಾಡಿದೆ. ಅವರಲ್ಲಿ ಕಲಿಯುವಾಗಲೇ ನನ್ನ ಮೊದಲ ರಂಗಪ್ರವೇಶ (ಅರ್ರಂಗೇಟ್ರಂ) ನೆರವೇರಿತು. 16ನೇ ವರ್ಷದಲ್ಲಿ ಮೊದಲ ಬಾರಿಗೆ ಸೋಲೋ ಪರ್ಫಾರ್ಮೆನ್ಸ್  (ಏಕವ್ಯಕ್ತಿ ಕಾರ್ಯಕ್ರಮ)  ನೀಡಿದೆ. ಮುಂದೆ ಕಿರಣ್ ಸುಬ್ರಹ್ಮಣ್ಯಂ ಅವರಲ್ಲಿ ವಿದ್ವತ್ ಪದವಿ ಗಳಿಸಿದೆ. ಇದರೊಡನೆ  ಕಥಕ್ನಲ್ಲಿ ಜೂನಿಯರ್, ಸಮಕಾಲೀನ ನೃತ್ಯವನ್ನೂ ಕಲಿತಿದ್ದೇನೆ.  ಈಗ ನಾನು ಸೋಲೋ ಡ್ಯಾನ್ಸರ್ ಆಗಿದ್ದೇನೆ. ಹಲವಾರು ವೇದಿಕೆಗಳಲ್ಲಿ ಸೋಲೋ ಪರ್ಫಾರ್ಮೆನ್ಸ್ ನೀಡಿದ್ದೇನೆ.

·        ಕಿರುತೆರೆ ಹಿರಿ ತೆರೆ ಸೇರಿದಂತೆ ರಂಗಭೂಮಿಯಲ್ಲಿ ಹೆಸರಾದ ಶ್ರೀನಿವಾಸ ಪ್ರಭು ಅವರು ನಿಮ್ಮ ತಂದೆ. ಅವರ ಕುರಿತಂತೆ ಏನನ್ನು ಹೇಳ ಬಯಸುತ್ತೀರಿ?
ಮೊದಲಿಗೆ ಅವರ ಮಗಳಾಗಿರಲು ನನಗೆ ಹೆಮ್ಮೆ ಎನಿಸುತ್ತದೆ. ಮುಂದೆ ಒಂದು ದಿನ ಅವರು ಸಹ ನನ್ನ ಬಗ್ಗೆ ಇದೇ ಅಭಿಪ್ರಾಯ ತಾಳುತ್ತಾರೆ ಎನ್ನುವುದು ನನ್ನ ಭಾವನೆ. ಅವರೂ ಸಹ ಕಲಾವಿದರಾಗಿರುವ ಕಾರಣ ಅವರಿಗೆ ಕಲಾ ಪ್ರಪಂಚದ ಅರಿವಿದೆ. ಈ ಕ್ಷೇತ್ರದಲ್ಲಿ  ಮುಂದೆ ಸಾಗಲು ಏನೇನು ಅಗತ್ಯ ಎನ್ನುವುದು ಅವರಿಗಾಗಲೇ ತಿಳಿದಿದ್ದ ಕಾರಣ ನಾನು ಪ್ರತ್ಯೇಕವಾಗಿ ಅವರನ್ನು ಏನೂ ಕೇಳುವ ಅಗತ್ಯವಿರಲಿಲ್ಲ. ಹೀಗಾಗಿ ನಾನು ವಿಷಯದಲ್ಲಿ ಅದೃಷ್ಟವಂತಳೆನ್ನಲು ಅಡ್ಡಿಯಿಲ್ಲ.



·        ನಿಮ್ಮ ತಾಯಿ ರಂಜನಿ ಪ್ರಭು ಸಹ ಉತ್ತಮ ಕವಯಿತ್ರಿ. ಅವರ ಬಗ್ಗೆ ತಿಳಿಸಿ.
ನಾನು ನೃತ್ಯ ಕಲಿಯುವುದಕ್ಕೆ ಕಾರಣ ನನ್ನ ತಾಯಿ. ಅವರಿಗೆ ಡ್ಯಾನ್ಸ್ ಎಂದರೆ ಬಹಳ ಪ್ರೀತಿ. ಅವರ ಕವಿತೆಗಳಿಗೆಭಾವ ನೃತ್ಯ”” ಎನ್ನುವ ನೃತ್ಯ  ಸಂಯೋಜನೆ ಮಾಡಿ ಅಭಿನಯಿಸಿದ್ದೇನೆ. ಅವರ ಕವಿತೆಗಳಿಗೆ ಉಪಾಸನಾ ಮೋಹನ್ ಸಂಗೀತ ನೀಡಿದ್ದರು. ಮೊದಲಿಗೆ ಎರಡು ಮೂರು ಕವಿತೆಗಳಿಗಷ್ಟೇ ಇದ್ದ ಕಾರ್ಯಕ್ರಮ ಈಗ ಬಹುತೇಕ ಕವಿತೆಅಳಿಗೆ ವಿಸ್ತರಿಸಿ ಭಾವಗೀತೆಗಳಿಗಾಗಿ ನೃತ್ಯ ಕಾರ್ಯಕ್ರಮಭಾವ ನೃತ್ಯ”” ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿದೆ. 

·        ನೀವು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನ ನೀಡಿದವರು. ನಿಮ್ಮ ಮೊದಲ ವಿದೇಶ ಪ್ರವಾಸ ಹೇಗಿತ್ತು? ಅದಕ್ಕೆ ಅವಕಾಶ ಒದಗಿದ ಸನ್ನಿವೇಶದ ಕುರಿತು ತಿಳಿಸಿ.
ನಾನು ಮೊದಲು ವಿದೇಶಕ್ಕೆ ಹೋದದ್ದು ನನ್ನ ಟೀಚರ್ ಜತೆಗೆ. ಆಗ ನಾನು ನೃತ್ಯ ತಂಡದ ಒಬ್ಬ ಸದಸ್ಯಳಾಗಿದ್ದೆ. ಇಂಡೋ-ಚೈನಾ ಕಲ್ಚರಲ್ ಎಕ್ಸ್ ಚೇಂಜ್ (ಭಾರತ - ಚೀನಾ ಸಾಂಸ್ಕೃತಿಕ ವಿನಿಮಯ) ಕಾರ್ಯಕ್ರಮದಲ್ಲಿ ಬಾಗವಹಿಸಲು ನನಗೆ ಅವಕಾಶ ಸಿಕ್ಕಿತ್ತು. ಅಂದು ತರಗತಿಗೆ ಹೋದಾಗ ನಾವು ಮೂವರು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಯ್ಕೆ ಆಗಿದ್ದದ್ದು ತಿಳಿಯಿತು. ಮತ್ತು ಅಲ್ಲಿ ಒಳ್ಳೆಯ ಪ್ರತಿಕ್ರಿಯೆ ದೊರಕಿತು. ಅಲ್ಲಿನವರಿಗೆ ನಮ್ಮ ಭಾಷೆ ಅರ್ಥವಾಗದಿದ್ದರೂ ಸಹ ನಾವು ನೀಡಿದ ಕಾರ್ಯಕ್ರಮಗಳಲ್ಲೆಲ್ಲಾ ಸಭಾಂಗಣದ ತುಂಬಾ ಜನ ಜಮಾಯಿಸುತ್ತಿದ್ದರು. ಕಲಾವಿದರನ್ನು ಮಾತನಾಡಿಸಿ ಅವರ ನೃತ್ಯದ ಕುರಿತಂತೆ ತಿಳಿದುಕೊಳ್ಳುವುದೂ ಸೇರಿದಂತೆ ನಮ್ಮ ಮತ್ತು ಅವರ ನಡುವೆ ಬಹು ವಿಧದ ವಿಚಾರ ವಿನಿಮಯಗಳು ನಡೆದವು. ಒಟ್ಟಾರೆ ಪ್ರವಾಸದ ಅನುಭವವು ಅದ್ಭುತವಾಗಿತ್ತು.
ಮುಂದೆ ನಾನು ಸೋಲೋ ಆರ್ಟಿಸ್ಟ್ ಆಗಿ ಭಾರತದೆಲ್ಲೆಡೆ ಪ್ರದರ್ಶನ ನೀಡಿದ್ದೇನೆ. ಅಮೆರಿಕಾ, ಬ್ರಿಟನ್ ಗಳಲ್ಲಿ ನಡೆದ ಡ್ಯಾನ್ಸ್ ಫೆಸ್ಟಿವಲ್ ಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಮೊದಲ ಪ್ರವಾಸದ ಅನುಭವ ಮಾತ್ರ ಎಂದೂ ಮರೆಯಲಾಗದ್ದು.

·        ನೀವು ಇದುವರೆಗೂ ಎರಡು ಆಂಗ್ಲ ಕವನ ಸಂಗ್ರಹಗಳನ್ನು ಹೊರತಂದಿದ್ದೀರಿ. ನೀವು ನೃತ್ಯ, ಚಿತ್ರಕಲೆ ಎಲ್ಲದರೊಡನೆ ಬರವಣಿಗೆಯಲ್ಲಿಯೂ ತೊಡಗಿಸಿಕೊಳ್ಳಲು ಕಾರಣಾವಾದ ಪ್ರೇರಣೆ ಯಾವುದು?
ಚಿಕ್ಕವಳಿದ್ದಾಗಲೇ ನನಗೆ ಬರವಣಿಗೆಯ ಕುರಿತಂತೆ ಆಸಕ್ತಿ ಇತ್ತು. ನನ್ನ ಗುರುಗಳಾದ ಕೃಷ್ಣ ಸರ್,  ಅವರು ನನ್ನ ಚಿತ್ರಕಲಾ ಗುರುಗಳು. ೨೦೧೧ ರಲ್ಲಿ ಲೀಲಾ ಪ್ಯಾಲೇಸ್ ನಲ್ಲಿ ನನ್ನ ಪ್ರಥಮ ಏಅಕವ್ಯಕ್ತಿ ಚಿತ್ರ ಪ್ರದರ್ಶನ ಏರ್ಪಾಟಾಗಿತ್ತು. ಆಗ ಗುರುಗಳು ನೀನು ಹೇಗೂ ಚಿತ್ರದೊಂದಿಗೇ ಕವನಗಳನ್ನೂ ಬರೆಯುತ್ತಿದ್ದಿ, ಅದನ್ನು ಪ್ರಕಟಿಸು ಎಂದು ಸಲಹೆ ನೀಡಿದರು. ಸಲಹೆಗೆ ಒಪ್ಪಿ ನಾನು ನನ್ನ ಕವನ ಸಂಗ್ರಹವನ್ನು ಪ್ರಕಟಿಸಿದ್ದೆ. ಇನ್ನು ನನ್ನ ತಾಯಿ ಸಹ ಒಳ್ಳೆಯ ಕವಯಿತ್ರಿ. ಇದೂ ಸಹ ನನ್ನ ಬರವಣಿಗೆಗೆ ಪರೋಕ್ಷವಾಗಿ ಸ್ಪೂರ್ತಿಯಾಗಿದೆ ಎನ್ನುವುದು ಸುಳ್ಳಲ್ಲ.
ಈವರೆಗೆ ಎರಡು ಕವನ ಸಂಗ್ರಹ ಹೊರತಂದಿದ್ದೇನೆ. ”Snatches of Sunshine” (2011), “Mid Light – The Prologue” (2014) ಮುಂದೆಿನ್ನೂ ಉತ್ತಮ ಸಂಗ್ರಹ ತರಬೇಕು. ರಾಷ್ಟ್ರಮಟ್ಟದ ಪ್ರಕಾಶನ ಸಂಸ್ಥೆಯಿಂದ ಪರಕಟಿಸಬೇಕು ಎನ್ನುವ ಇಚ್ಚೆ ಇದೆ.

·        ನೀವು ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿದ್ದಿರಾ?
ಇಲ್ಲ, ನಾನು ಓದಿದ್ದು ಆಂಗ್ಲ ಮಾದ್ಯಮದಲ್ಲಿ. ನನ್ನ ಶಾಲೆಯಲ್ಲಿ ಕನ್ನಡ ಪಠ್ಯವಿರಲಿಲ್ಲ. ಒಂದು ವೇಳೆ ನಾನು  ಕನ್ನಡ ಸಾಹಿತ್ಯವನ್ನು ಓದಿದ್ದರೆ  ಕನ್ನಡದಲ್ಲಿಯೂ ಬರೆಯುತ್ತಿದೆ ಎನಿಸುತ್ತಿದೆ.

·        ಪೇಂಟಿಂಗ್ಸ್ ಗಳಲ್ಲಿ ಹಲವಾರು ವಿಧಗಳಿವೆ. ನಿಮಗೆ ಇತ್ಯಂತ ಪ್ರಿಯವಾದ ಪೇಂಟಿಂಗ್ಸ್ ಯಾವ ಬಗೆಯದ್ದು? ನೀವು ಹೆಚ್ಚಾಗಿ ಯಾವ ಮೀಡಿಯಂ ಪೇಂಟಿಂಗ್ಸ್ ಮಾಡಿದ್ದೀರಿ?
ನಾನು ಇತ್ತೀಚಿನವರೆಗೂ ಆಯಿಲ್ ಪೇಂಟಿಂಗ್ಸ್ ಬಿಟ್ಟು ಬೇರೇನನ್ನೂ ಟ್ರೈ  ಮಾಡಿರಲಿಲ್ಲ. ಈಗ ಮಿಕ್ಸ್ ಮೀಡಿಯಾ ಪೇಂಟಿಂಗ್ಸ್ ಮಾಡುತ್ತಿದ್ದೇನೆ. ಇದು ಚಾರ್ಕೋಲ್ ಪೇಸ್ಟ್, ದ್ರೈ ಪೇಸ್ಟ್ ಹಾಗೂ ವಾಟರ್ ಕಲರ್ ಗಳ ಮಿಶ್ರಣವಾಗಿದೆ. ಆದರೆ ನನ್ನ ಮೀಡಿಯಂ ಮಾತ್ರ ಯಾವಾಗಲೂ ಕಾನ್ವಾಸ್ ಪೇಂಟಿಂಗ್ ಆಗಿದೆ. ಕ್ಯಾನ್ವಾಸ್ ಮೇಲೆ ಯಾವ ಬಗೆಯ ಪೇಂಟಿಂಗ್ಸ್ ಹೇಗೆ ಕಾಣಿಸುತ್ತದೆ ಎನ್ನುವುದೇ ಮುಖ್ಯ.



·        ನೀವು ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿನಿ. ಪರಿಷತ್ತಿನಲ್ಲಿ ವಾರ್ಷಿಕವಾಗಿ ನಡೆಯುವ ಚಿತ್ರ ಸಂತೆಯಲ್ಲಿ ಭಾಗವಹಿಸಿದ್ದಿರಾ? ಅದರ ಅನುಭವ ತಿಳಿಸಿ.
ಚಿತ್ರಕಲಾ ಪರಿಷತ್ತಿನಲ್ಲಿ ಇದ್ದಾಗ ನಾವು ಚಿತ್ರ ಸಂತೆಯಲ್ಲಿ ಸ್ವಯಂಸೇವಕರಾಗಿ ಭಾಗವಹಿಸುತ್ತಿದ್ದೆವು. ಮೊದಲೆಲ್ಲ ಕಲಾವಿದರಿಗೆ ಸ್ಟಾಲ್ ಹಾಕಿಕೊಡುವುದಕ್ಕೆ ಸಹಕಾರ ನೀಡುತ್ತಿದ್ದೆ. ನಂತರದ ನಾಲ್ಕೈದು ವರ್ಷಗಳ ಕಾಲ ನನ್ನದೇ ಸ್ಟಾಲ್ ಸಹ ಇಟ್ಟು ನನ್ನ ಪೇಂಟಿಂಗ್ಸ್ ಪ್ರದರ್ಶಿಸಿದ್ದೆ. ಈಗ ನಾನು ಸ್ಟಾಲ್ ಇಡಲ್ಲ. ಬೇರೆ ಕಲಾವಿದರ ಪೇಂಟಿಂಗ್ಸ್ ಗಳನ್ನು ನೋಡಿ ಬರಲಿಕ್ಕಾಗಿ ಚಿತ್ರ ಸಂತೆಗೆ ತೆರಳುತ್ತೇನೆ.

·        ನೀವು ಭರತನಾಟ್ಯದೊಡನೆ ಕ್ಲಾಸಿಕಲ್ ಬ್ಯಾಲೆ ಪ್ರಕಾರದಲ್ಲಿಯೂ ಪ್ರೌಢ ಕಲಾವಿದೆ ಎನಿಸಿದ್ದೀರಿ. ಬ್ಯಾಲೆ ಎಂದರೆ ಸಾಮಾನ್ಯವಾಗಿ ಪಾಶ್ಚಾತ್ಯ ನೃತ್ಯ ಪದ್ದತಿ ಎಂದು ತಿಳಿದಿರುವಾಗ ಕ್ಲಾಸಿಕಲ್ ಬ್ಯಾಲೆ ಅದಕ್ಕಿಂತ ಹೇಗೆ ವಿಭಿನ್ನವಾಗಿದೆ?
ಭರತನಾಟ್ಯ ಹೇಗೆ ಭಾರತೀಯ ಸಾಂಸ್ಕೃತಿಕ ನೃತ್ಯ ಪ್ರಕಾರವೋ ಹಾಗೆಯೇ ಕ್ಲಾಸಿಕಲ್ ಬ್ಯಾಲೆ ಸಹ ಪಾಶ್ಚಾತ್ಯ ಶೈಲಿಯ ನೃತ್ಯ. ಭರತನಾಟ್ಯಕ್ಕೂ ಕ್ಲಾಸಿಕಲ್ ಬ್ಯಾಲೆಗೂ ಸಾಕಷ್ಟು ವ್ಯತ್ಯಾಸವಿಲ್ಲ. ಭರತನಾಟ್ಯದಲ್ಲಿರುವ ಬಹುತೇಕ ತಂತ್ರಗಾರಿಕೆ ಬ್ಯಾಲೆಯಲ್ಲಿಯೂ ಇದೆ.
ಯಾನಾ ಲೂಯಿಸ್ ಅವರಲ್ಲಿ. ನಾನು ಕ್ಲಾಸಿಕಲ್ ಬ್ಯಾಲೆ ಅಭ್ಯಾಸ ನಡೆಸಿದೆ. ಅವರು ಮೂಲತಃ ಲಂಡನ್ ಅವರಾಗಿದ್ದು ಅವರು ಬ್ಯಾಲೆ ನೃತ್ಯದಲ್ಲಿ ಸಾಕಷ್ಟು ಅನುಭವ ಗಳಿಸಿದ್ದರಲ್ಲದೆ ಬೆಂಗಳೂರಿನಲ್ಲಿ ಬ್ಯಾಲೆ ನೃತ್ಯಶಾಲೆಯನ್ನು ತೆರೆದಿದ್ದಾರೆ. ಅವರಲ್ಲಿ ನಾನು ನಾಲ್ಕೈದು ವರ್ಷಗಳ ಕಾಲ ತರಬೇತಿ ಪಡೆದಿದ್ದೇನೆ. ನನಗೆ ಮೊದಲೇ ಭರತನಾಟ್ಯವೂ ತಿಳಿದಿದ್ದರಿಂದ ನನಗೆ ಬ್ಯಾಲೆ ಕಲಿಯುವುದಕ್ಕೇನೂ ಕಷ್ಟವಾಗಿರಲಿಲ್ಲ. ಮುಂದಿನ ದಿನಗಳಲ್ಲಿ  ನಾನು ಲಂಡನ್ ರಾಯಲ್ ಅಕಾಡಮಿ ಆಫ್ ಡ್ಯಾನ್ಸ್ ಸಂಸ್ಥೆಯಲ್ಲಿ ಮತ್ತೆ ಬ್ಯಾಲೆ ನೃತ್ಯ ಕುರಿತಂತೆ ಹೆಚ್ಚಿನ ತರಬೇತಿಯನ್ನೂ ಪಡೆದುಕೊಂಡೆ.
ಅಂದಹಾಗೆ ಭರತನಾಟ್ಯದಲ್ಲಿ ನವರಸಗಳನ್ನು ಅಭಿವ್ಯಕ್ತಿಸುವಂತೆಯ ಬ್ಯಾಲೆಡ್ ನಲ್ಲಿಯೂ ಮಾಡಬಹುದು. ಅಲ್ಲಿನ ಕೆಲವು ತಂತ್ರಗಳನ್ನು ಭರತನಾಟ್ಯಕ್ಕೂ ಅನ್ವಯಿಸಿಕೊಳ್ಳಬಹುದು ಎನ್ನುವುದು ನನಗೆ ತಿಳಿಯಿತು. ನಾನು ಅಂತಹಾ ಪ್ರಯೋಗಗಳನ್ನು ಎರಡೂ ಪ್ರಕಾರಗಳಲ್ಲಿ ಮಾಡಿದ್ದು ಅದು ಯಶಸ್ವಿಯಾಗಿದೆ.
ಒಬ್ಬ ಕಲಾವಿದ ಕೇವಲ ಒಂದೇ ಬಗೆಯ ನೃತ್ಯ ಕಲಿಯುವುದಕ್ಕಿಂತ ಎರಡು ಅಥವಾ ಹೆಚ್ಚು ಪ್ರಕಾರದ ನೃತ್ಯ ಅಭ್ಯಸಿಸುವುದು ಉತ್ತಮ. ದೇಹವು ಬೇರೆ ಬೇರೆ ವಿಧಾನದ ನೃತ್ಯಗಳಿಗೆ ಹೇಗೆ ಪ್ರತಿಕ್ರಯಿಸುತ್ತದೆ ಎನ್ನುವುದು ಅದರಿಂದ ತಿಳಿಯಬಹುದು. ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆಗಳಿಗೂ ಇದು ಪರಿಹಾರ ದೊರಕಿಸಬಲ್ಲದು.

·        ನಿಮ್ಮ ತಂದೆ ಚಲನಚಿತ್ರ, ಕಿರುತೆರೆ ನಟ ಮತ್ತು ನಿರ್ದೇಶಕರು. ನೀವು ಸಹ ಕೆಲವಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೀರಿ.
ಹೌದು! ನಾನು ೧೯೯೬ ರಿಂದ ೨೦೧೦ರ ವರೆಗೂ ಕೆಲವು ಧಾರಾವಾಹಿಗಳಲ್ಲಿ ಬಾಲ ನಟಿಯಾಗಿಯೂ, ಸಹ ಕಲಾವಿದೆಯಾಗಿಯೂ ನಟಿಸಿದ್ದೇನೆ. . ಹೀಗೆ ನಟಿಸುವ ಅನುಭವವೂ ಸಹ ವಿಭಿನ್ನವಾಗಿತ್ತು. ನಾನು ಕಲಾವಿದೆಯಾದದ್ದು ತಂದೆಯವರ ಸಹಕಾರದಿಂದ ಎನ್ನಬಹುದು. ನನ್ನ ತಂದೆಯ ನಿರ್ದೇಶನದಲ್ಲಿಯೇ ನಾನು ಮೊದಲು ಧಾರಾವಾಹಿಯಲ್ಲಿ ಅಭಿನಯಿಸಿದ್ದು!  ಮಾಮರ’, ‘ಅಂತರಗಂಗೆ’, ‘ಆಸರೆ’ ಧಾರಾವಾಹಿಗಳಲ್ಲಿ ಬಾಲನಟಿಯಾಗಿದ್ದೆ. ‘ಮುಕ್ತ’, ‘ಮಂಜು ಮುಸುಕಿದ ಹಾದಿ’ ಧಾರಾವಾಹಿಗಳಲ್ಲಿ ಸಹ ಕ್ಲಾವಿದೆಯಾಗಿ ಅಭಿನಯಿಸಿದ್ದೇನೆ. ‘ದೇವಗಂಗಾ’, ‘ತಾಮ್ರ ಪತ್ರ’ ಎನ್ನುವ ಟೆಲಿ ಚಿತ್ರಗಳಲ್ಲಿಯೂ ನಟಿಸಿದ್ದೆ. ಇದರಲ್ಲಿ ಮೊದಲ ಮೂರು ಧಾರಾವಾಹಿಗಳು ಮತ್ತುತಾಮ್ರ ಪತ್ರ’ ನನ್ನ ಅಪ್ಪಾಜಿಯವರ ನಿರ್ದೇಶನದಲ್ಲಿಯೇ ಬಂದದ್ದು ವಿಶೇಷ.  ‘ಶಿಪ್ ಆಫ್ ಫೂಲ್ಸ್’, ‘ಕರ್ಣ ಭಾರ’ ಹಾಗೂಶಾಂತೆ’ ಎನ್ನುವ ನಾಟಕಗಳಲ್ಲಿ ಸಹ ವೈವಿದ್ಯಮಯ ಪಾತ್ರಗಳಲ್ಲಿ ನಟಿಸಿದ್ದೇನೆ

·        ಇಂದಿನ ದಿನಗಳಲ್ಲಿ ಎಲ್ಲಾ ಟಿವಿ ವಾಹಿನ್ಯವರೂ ಒಂದಿಲ್ಲೊಂದು ರಿಯಾಲಿಟಿ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಮಕ್ಕಳ್ಗಾಗಿ ಬಹಳ ಸಂಖ್ಯೆಯ ರಿಯಾಲಿಟಿ ಶೋ ಇದೆ. ನಿಮ ಪ್ರಕಾರ ಕ್ಲಾಸಿಕಲ್ ಡ್ಯಾನ್ಸ್, ಭರತನಾಟ್ಯದಂತಹಾ ನೃತ್ಯಕ್ಕೆ ಾವುಗಳೆಷ್ಟು ಸಹಕಾರಿ ಆಗಿದೆ?
ಇದೊಂದು ಉತ್ತಮ ಅವಕಾಶ ಎನ್ನುವುದರಲ್ಲಿ ಅನುಮಾನವಿಲ್ಲ. ಎಲ್ಲರೂ ಇಂತಹಾ ಶೋ ವೀಕ್ಷಿಸುತ್ತಾರೆ. ನಿಜವಾದ ಪ್ರತಿಭಾವಂತರಿಗೆ ಇದು ಉತ್ತಮ ಅವಕಾಶ ಒದಗಿಸುತ್ತದೆ. ಆದರೆ ಇಂದು ಕ್ಲಾಸಿಕಲ್ ಡ್ಯಾನ್ಸ್ ಅಥವಾ ಭರತನಾಟ್ಯದಂತ ನೃತ್ಯ ಪ್ರಕಾರಕ್ಕೆ ಯಾವ ರಿಯಾಲಿಟಿ ಶೋಗಳೂ ಅಷ್ಟು ಒತ್ತು ಕೊಡುತ್ತಿಲ್ಲ. ಇಂದು ಜನಪ್ರಿಯವಾಗಿರುವ ಇಂತಹಾ ರಿಯಾಲಿಟಿ ಶೋ ಗಳಲ್ಲಿ ಕ್ಲಾಸಿಕಲ್ ಪ್ರಕಾರಗಳಿಗೂ ತಕ್ಕಷ್ಟು ಅವಕಾಶ ಲಭಿಸಬೇಕಿದೆ.

·        ನೃತ್ಯ, ಬರವಣಿಗೆ ಆರ್ಟ್ಸ್ ಎಲ್ಲದರ ಹೊರತಾಗಿ ರಾಧಿಕಾಗೆ ಏನು ಇಷ್ಟ?
ರಾತ್ರಿಯ ನೀರವತೆ, ನಿಶ್ಯಬ್ದ ವಾತಾವರಣ ಹೆಚ್ಚು ಇಷ್ಟ. ಪ್ರಾಣಿಗಳು ಎಂದರೆ ಬಲು ಪ್ರೀತಿ. ಚಿಕ್ಕವಳಿದ್ದಾಗ ನಾಯಿ, ಬೆಕ್ಕುಗಳನ್ನ ಇಷ್ಟ ಪಡುತ್ತಿದ್ದೆ. ನಾನು ಆಗೆಲ್ಲ ಯಾರು ಕೇಳಿದರೆ ಪಶು ವೈದ್ಯಳಾಗ್ತೀನಿ ಅಂತ ಹೇಳುತ್ತಿದ್ದೆ.



·        ನಿಮ್ಮ ಭವಿಷ್ಯದ ಯೋಜನೆಗಳೇನು?
ನಾನೀಗಾಗಲೇರಾಧಿಕಾ ಪ್ರಭು ಆರ್ಟ್ಸ್ ಅಕಾಡೆಮಿಸ್ಥಾಪಿಸಿ  ಭರತನಾಟ್ಯ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಜತೆಗೆ ನಾನು ಮತ್ತು ಅಪ್ಪಾಜಿ ಸೇರಿ ಕೆಲವು ವರ್ಕ್ ಶಾಪ್ ಮಾಡುತ್ತೇವೆ. ಅವರು ರಂಗಭೂಮಿ ತಂತ್ರಗಾರಿಕೆ ಬಗ್ಗೆ ತಿಳಿಸಿದರೆ ನಾನು ನೃತ್ಯದ ಬಗೆಗೆ ಹೇಳುತ್ತೇನೆ. ಆರು ವರ್ಷದ ಮೇಲ್ಪಟ್ಟವರು ಯಾರು ನೃತ್ಯದಲ್ಲಿ ಆಸಕ್ತಿ ತಾಳುತ್ತಾರೆಯೋ ಅವರಿಗೆ ನಾನು ತರಬೇತಿ ನೀಡುತ್ತೇನೆ.
ಇನ್ನು ವರ್ಕ್ ಶಾಪ್ ಗಳಲ್ಲಿ ಭಾಗವಹಿಸುವವರಿಗೆ ಬಾಡಿ ಲಾಂಗ್ವೇಜ್, ಮೂಮೆಂಟ್ ಸೇರಿದಂತೆ ನವರಸಗಳ ಕುರಿತಂತೆ ನೃತ್ಯ ಹಾಗೂ ರಂಗಕಲೆಯಲ್ಲಿ ಬರುವ ವಿವಿಧ ವಿಚಾರಗಳ ಪ್ರಾಥಮಿಕ ತಿಳುವಳಿಕೆ ನೀಡುತ್ತೇವೆ. ಇತ್ತೀಚೆಗೆ ಲಾಲ್ ಬಾಗ್ ರಸ್ತೆಯಲ್ಲಿರುವ ಶೂನ್ಯ ಸೆಂಟರ್ ನಲ್ಲಿ ಇಂತಹಾ ವರ್ಕ್ ಶಾಪ್ ನಡೆಸಲಾಗಿತ್ತು. ಆನ್ ಲೈನ್ ಆರ್ಟ್ ಮ್ಯಾಗಜೀನ್ ಪ್ರಾರಂಭಿಸುವ ಯೋಜನೆ ಇದೆ. ಮೂಲಕ ದೇಶದ ನಾನಾ ಭಾಗದ ಕಲಾವಿದರಿಗೆ ಒಂದು ವೇದಿಕೆ ಕಲ್ಪಿಸಬೇಕೆನ್ನುವುದು ನನ್ನ ಅಭಿಲಾಷೆ.
ಇದರೊಂದಿಗೇ ನನ್ನ ತಂದೆಯೊಂದಿಗೆ ಸೇರಿ ನಮ್ಮದೇ ಸ್ವಂತ ಪ್ರೊಡಕ್ಷನ್ ಸಂಸ್ಥೆಯೊಂದನ್ನು ಪ್ರಾರಂಭಿಸುವ ಯೋಜನೆ ಇದೆ. ಆದರೆ ಇದೆಲ್ಲವೂ ಇನ್ನೂ ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತದೆ. ಸದ್ಯಕ್ಕೆ ದೇಶದಾದ್ಯಂತ ಸಂಚರಿಸಿ ಸೋಲೋ ಪರ್ಫಾರ್ಮೆನ್ಸ್ ನೀಡುವುದೇ ನನ್ನ ಗುರಿಯಾಗಿದೆ.

***




ರಾಧಿಕಾ ಪ್ರಭು ಅವರ ಕೊರಿಯಾಗ್ರಫಿಯಲ್ಲಿ ಮೂಡಿ ಬಂದಿರುವ ನೃತ್ಯ ರೂಪಕಗಳು
"ಆಫ್ಟರ್" ಎನ್ನುವ ಪ್ರಯೋಗಾತ್ಮಕ ನೃತ್ಯ ರೂಪಕ
"ಭಾವ ನೃತ್ಯ" ಭಾವಗೀತೆಗಳಿಗೆ ನೃತ್ಯ ಸಂಯೋಜನೆ ಮಾಡುವ ಮೂಲಕ ಭರತನಾಟ್ಯ ಮತ್ತು ಭಾವಗೀತೆಗಳನ್ನು ಒಂದಾಗಿಸಿದ ಹೊಸ ಶೈಲಿಯ ನೃತ್ಯ ರೂಪಕಗಳ್ ಸರಣಿ.
"ಆದ್ಯ" ಭರತನಾಟ್ಯ, ವಿಷುವಲ್ ಆರ್ಟ್ ಹಾಗೂ ಕವಿತೆಗಳ ಸಂಯೋಗದ ವಿಶಿಷ್ಟ ನೃತ್ಯ ಸಂಯೋಜಿತ ಕಾರ್ಯಕ್ರಮ.
ಪ್ರಶಸ್ತಿ ಗೌರವಗಳು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ೨೦೦೬ನೇ ಸಾಲಿನ ಅರಳು ಮಲ್ಲಿಗೆ ಪ್ರಶಸ್ತಿ
ಹರ್ಷ ಕ್ರಿಯಾ ಫೌಂಡೇಷನ್ ಅವರಿಂದ ೨೦೧೦ನೇ ಸಾಲಿನಲ್ಲಿ ನಾಟ್ಯ ಶ್ರೀ ಪ್ರಶಸ್ತಿ
ನವೀನ್ ಕೇಳ್ಕರ್ ಫೇಸ್ಟಿವಲ್ ನಲ್ಲಿನ ಅತ್ಯುತ್ತಮ ಪ್ರದರ್ಶನಕ್ಕಾಗಿ ೨೦೧೧ ನೇ ಸಾಲಿನಲ್ಲಿ ನೃತ್ಯ ಜ್ಯೋತಿ ಪ್ರಶಸ್ತಿ
ನೃತ್ಯ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗಾಗಿ ೨೦೧೧ ನೇ ಸಾಲಿನಲ್ಲಿ ನೃತ್ಯ ಭೂಷಣ ರಾಷ್ಟ್ರೀಯ ಪುರಸ್ಕಾರ
೨೦೧೪ ರಲ್ಲಿ ದೂರದರ್ಶನ ರಾಷ್ಟ್ರೀಯ ವಾಹಿನಿಯಲ್ಲಿ "" ಗ್ರೇಡ್ ಕಲಾವಿದೆ ಆಗಿ ಆಯ್ಕೆ



(ಈ ಲೇಕನವು ಜುಲೈ 2017 ರ 'ಗೃಹಶೋಭಾ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.)