Monday, July 25, 2016

ಇವರು ಕನ್ನಡದ ಮುದ್ದು...

ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗ ಪ್ರಕಥವಾಯಿತು ಆಕೆಯ ಮೊದಲ ಕವನ ಸಂಕಲನ!
ನಾಲ್ಕನೇ ತರಗತಿಯ ವಿದ್ಯಾರ್ಥಿನಿಯಿಂದಮಂದಾನಿಲಹೆಸರಿನ ಕೈಬರಹದ ಪತ್ರಿಕೆ ಪ್ರಕಟಣೆ.
ದ್ವಿತೀಯ ಪಿಯು ಮುಗಿಸುವ ವೇಳೆಗಾಗಲೇ ರಾಜ್ಯದ ಸಾಹಿತ್ಯ ವಲಯದಲ್ಲಿ ಮಹತ್ವದ ಹೆಸರು ಗಳಿಸಿಕೊಂಡಿರುವ ನಮ್ಮ ಮಾಡಿನ ಪ್ರತಿಭಾವಂತ ಬರಹಗಾರ್ತಿ-
ವಿತಾಶಾ ರಿಯಾ (ಮುದ್ದು ತೀರ್ಥಹಳ್ಳಿ)

ಪಶ್ಚಿಮ ಘಟ್ಟದ ಹಚ್ಚ ಹಸಿರಿನ ನಡುವೆ ನೆಲೆಯಾದ ತೀರ್ಥಹಳ್ಳಿಯ ಸಮೀಪ ಬೆಟ್ಟಮಕ್ಕಿಯವರಾದ ಮುದ್ದು ತೀರ್ಥಹಳ್ಳಿ ಇದುವರೆಗೂ ಮೂರು ಕವನ ಸಂಗ್ರಹ, ಒಂದು ಲಲಿತ ಪ್ರಬಂಧ, ಒಂದು ಕಾದಂಬರಿ ಸೇರಿದಂತೆ ಹತ್ತು ಹಲವು ಅಂಕಣ ಬರಹಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವಪ್ರವೇಶ ಭಾರತಿ, ‘ಕಾವಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಇವರು ಇದಾಗಲೇ ರಾಜ್ಯ ಸಾಹಿತ್ಯ ಅಕಾಡಮಿ, ಅರಳು ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಕಾಸರಗೋಡು ಸಾಸ್ಕøತಿಕ ಪ್ರತಿಷ್ಠಾನದ ಗೌರವ ಸೇರಿದಂತೆ ನಾನಾ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.

ನಾಡಿನ, ಭಾಷೆಯ ಕುರಿತಂತೆ ವಿಚಾರಗಳನ್ನು ಯಾವ ಹಿರಿಯ ಸಾಹಿತಿಗಳಿಗೂ ಕಡಿಮೆ ಇಲ್ಲದಂತೆ ಮಂಡಿಸುವ ಈಕೆಯ ಜತೆಗೆ ನಿಮ್ಮಗೃಹಶೋಭಾವಿಶೇಷ ಸಂದರ್ಶನ ನಡೆಸಿತ್ತು. ನಮ್ಮೆಲ್ಲಾ ಪ್ರಶ್ನೆಗೆಳಿಗೆ ಅರಳು ಹುರಿದಂತೆ ಪಟಪಟನೆ ಉತ್ತರಿಸಿದ್ದ ಮುದ್ದು ಅವರ ಮುದ್ದಾದ ನುಡಿಗಳನ್ನು ಅವರ ಮಾತುಗಳಲ್ಲಿಯೇ ನಿಮ್ಮ ಮುಂದಿಡುತ್ತಿದ್ದೇವೆ-

ನನ್ನ ಹೆಸರು ವಿತಾಶಾ ರಿಯಾ. ಮುದ್ದು ಅಂತ ಮನೆಯಲ್ಲಿ ಕರೀತಾ ಇದ್ದಿದ್ದರಿಂದ ಅದನ್ನೇ ಕಾವ್ಯನಾಮ ಮಾಡಿಕೊಂಡೆ. ನನ್ನ ತಂದೆ ಮೆರೈನ್ ಎಂಜಿನಿಯರ್, ತಾಯಿ ಗೃಹಿಣಿ. ನನಗೊಬ್ಬಳು ಅಕ್ಕ ವಿನಿಶಾ ಸಹ ಬಹುಮುಖ ಪ್ರತಿಭಾವಂತೆ. ಹಾಸ್ಯ ಲೇಖನ ಚೆನನಾಗಿ ಬರೆಯುವ ಅವಳುಎತ್ತಿನಗಾಡಿ ಎಕ್ಸ್ ಪ್ರೆಸ್ಎನ್ನುವ ಹಾಸ್ಯ ಲೇಖನ ಸಂಗ್ರಹವನ್ನು ಹೊರತಂದಿದ್ದಾಳೆ.


ನಾನು ಎಲ್.ಕೆ.ಜಿ/ ಯು.ಕೆ.ಜಿ ವರೆಗೆ ನಮ್ಮ ಅಜ್ಜಿಯ ಊರಾದ ಸಾಗರ ತಾಲ್ಲೂಕಿನ ಆನಂದಪುರಂನಲ್ಲಿ ಮುಗಿಸಿ ತೀರ್ಥಹಳ್ಳಿಯ ಸಹ್ಯಾದ್ರಿ ಕೇಂದ್ರೀಯ ವಿದ್ಯಾಲಯದಲ್ಲಿ ಐದನೇ ತರಗತಿಯವರೆಗೆ ಓದಿದೆ. ಆನಂತರ ಯಾಕೋ ಕನ್ನಡ ಶಾಲೆಯಲ್ಲೇ ಓದಬೇಕು ಅನಿಸಿತು. ಅದಕ್ಕೆ ಕಾರಣ ಅಂದ್ರೆ ನಾನು  ಯಾವುದಾದರೂ ಕಾರ್ಯಕ್ರಮಗಳಿಗೆ ಹೋದಾಗ  ಅಲ್ಲಿ ಕನ್ನಡದಲ್ಲೇ ಕನ್ನಡದ ಪರವಾಗಿ ಮಾತನಾಡ್ತಿದ್ದೆ. ಎಲ್ಲಾ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೂ ಕನ್ನಡ ಭಾಷೆಯ ಮೇಲೆ ಎಂಥಾ ಹಿಡಿತವಿದೆ ಭೇಷ್! ಅಂತಿದ್ರು. ನಮ್ಮ ಭಾಗದಲ್ಲಿ ಎಲ್ಲರೂ ಬಹಳ ಸುಂದರವಾಗಿ ಕನ್ನಡವನ್ನ ಮಾತನಾಡ್ತಾರೆ. ಅದೂ ಅಲ್ಲದೆ ನಾನು ಒಂದು ಎರಡನೇ ತರಗತಿಯಲ್ಲೇ ಚಿಕ್ಕ ಚಿಕ್ಕ ಕವಿತೆ ಕಥೆ ಬರೀತಾ ಇದ್ದಿದ್ದೂ ಅಲ್ಲದೆ ಮೂರನೇ ತರಗತಿಯಲ್ಲಿ ನನ್ನ ಮೊದಲ ಸಂಕಲನಹೂಗೊಂಚಲುಪ್ರಕಟವಾಯಿತು ನಾಲ್ಕು ಐದನೇ ತರಗತಿಯಲ್ಲೇ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವಪ್ರವೇಶ ಭಾರತಿಮತ್ತುಕಾವಪರೀಕ್ಷೆಗಳನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದೆ. ನಾಲ್ಕನೇ ತರಗತಿಯಲ್ಲಿ ನನ್ನ ಎರಡನೇ ಸಂಕಲನಕಾನನ ಕಲರವಪ್ರಕಟವಾಯಿತು. ಅಲ್ಲದೆ ನನ್ನ ಅಕ್ಕನ ಜೊತೆ ಸೇರಿಮಂದಾನಿಲಅನ್ನುವ ಕೈ ಬರಹದ ಪತ್ರಿಕೆ ನಡೆಸಲು ಆರಂಭ ಮಾಡಿದ್ದೆ. ಹೀಗಾಗಿ ಕನ್ನಡವೇನೋ ಚೆನ್ನಾಗಿಯೇ ಬರುತ್ತಿತು. ಆದರೆ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಾ ಕನ್ನಡದ ಪರ ಮಾತನಾಡುವಾಗ ಒಳಗೆ ಏನೋ ಇರಿದ ಅನುಭವವಾಗ್ತಿತ್ತು. ಅದಕ್ಕೆ ಹಟ ಹಿಡಿದು ನಮ್ಮ ಮನೆಯ ಹತ್ತಿರದಲ್ಲೇ ಇದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಕೊಂಡೆ.

ಅಲ್ಲಿ ಸೇರಿದ ನಂತರ ನನಗೆ ನಿಜಕ್ಕೂ ಸಮೃದ್ಧ ಬಾಲ್ಯ, ಮಕ್ಕಳ ಹಕ್ಕುಗಳು, ಬಡತನ, ಕಷ್ಟ ಇವೆಲ್ಲದರ ಅರಿವು ಆಗತೊಡಗಿತು. ಏಕೆಂದರೆ ಸರಕಾರಿ ಶಾಲೆಯಲ್ಲಿ ಇದ್ದವರೆಲ್ಲ ಬಡ, ದಲಿತ ಮಕ್ಕಳು. ಒಬ್ಬ ಪೋಲಿಯೋ ಪೀಡಿತ ಹುಡುಗನೂ ಇದ್ದ ನನ್ನ ತರಗತಿಯಲ್ಲಿ. ನಿಜಕ್ಕೂ ನನ್ನ ಮನೋ ವಿಕಾಸ ಅಂತೇನಾದ್ರೂ ಆಗಿದೆ ಎಂದರೆ ಅದು ಸರಕಾರಿ ಶಾಲೆ ಸೇರಿದಮೇಲೆ ಆಗಿದ್ದು. ಅಲ್ಲಿ ಒಂದು ಕವಿತಾ ಸಂಕಲನಎಷ್ಟು ಬಣ್ಣದ ಇರುಳು!’ ಪ್ರಕಟಿಸಿದೆ. ಮಂದಾನಿಲ ಪತ್ರಿಕೆಯಲ್ಲಿ ಶಾಲೆಯ ಅನುಭವಗಳನ್ನೆಲ್ಲ ಬರೆಯುತ್ತಾ ಇದ್ದೆ. ಏಳನೇ ತರಗತಿಯಲ್ಲಿ ನಮ್ಮ ಸರಕಾರಿ ಶಾಲೆಯಿಂದ ಇನ್ಸ್ಫೈರ್ ಅವಾರ್ಡ್ಗೆ ಪ್ರಾಜೆಕ್ಟ್ ವಿಭಾಗದಲ್ಲಿ ಆಯ್ಕೆಯಾಗಿ ರಾಷ್ಟ್ರ ಮಟ್ಟಕ್ಕೆ ದೆಹಲಿವರೆಗೂ ಹೋಗಿ ಬಂದೆ. ಮುಂದೆ ಎಂಟನೇ ತರಗತಿಗೆ ಬಂದಾಗ ನನ್ನ ಬಿಡಿ ಬಿಡಿ ಲಲಿತ ಪ್ರಬಂಧಗಳನ್ನೆಲ್ಲಒಂದು ಚಂದ್ರನ ತುಂಡುಪುಸ್ತಕವಾಗಿ ಪ್ರಕಟಿಸಿದ್ದಾಯ್ತು.

ಆನಂತರ ಒಂಬತ್ತನೇ ತರಗತಿಯ ರಜೆಯಲ್ಲಿಕಾಡಹಾದಿಯ ಹೂಗಳುಕಾದಂಬರಿ ಬರೆದೆ. ಈಗ ಕೊಂಕಣಿ ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಎರಡುಮೂರು ಪತ್ರಿಕೆಗಳಿಗೆ ಅಂಕಣ ಬರೆಯುತ್ತಾ ಇದ್ದೇನೆ.



ಹತ್ತನೇ ತರಗತಿಯಲ್ಲಿ ಡಿಸ್ಟಿಂಗ್ಷನ್ನಲ್ಲಿ ಪಾಸಾಗಿ ತೀರ್ಥಹಳ್ಳಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗ ಆಯ್ಕೆ ಮಾಡಿಕೊಂಡು ಇದೀಗ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಸಹ ಡಿಸ್ಟಿಂಗ್ಷನ್ನಲ್ಲಿ ಪಾಸಾಗಿರುತ್ತೇನೆ.

ಸಾಹಿತ್ಯದಲ್ಲಿ ಆಸಕ್ತಿ ಮೂಡಲು ಕಾರಣವಾದ ಸನ್ನಿವೇಶ
ನಾನು ಹುಟ್ಟಿದಾಗಿನಿಂದ ಯು.ಕೆ.ಜಿ. ತನಕ ನಮ್ಮಜ್ಜಿಯ ಮನೆಯಲ್ಲೇ ಇದ್ದೆ. ನಮ್ಮಜ್ಜಿ ಅಜ್ಜ ಒಳ್ಳೆ ಕೊಂಕಣಿ ಜಾನಪದ ಹಾಡುಗಳನ್ನೂ ಕಥೆಗಳನ್ನೂ ಹೇಳುತ್ತಿದ್ದರು. ಕಥೆ ಹೇಳದೆ ಊಟ ನಿದ್ರೆ ಏನೂ ಮಾಡ್ತಿರಲಿಲ್ಲ. ನಮ್ಮ ಅಜ್ಜ ತುಂಬ ಹಾಸ್ಯದ ಕಥೆ ಹೇಳುತ್ತಿದ್ದರು. ನಮ್ಮಜ್ಜಿ ಹಾಗಲ್ಲ ಅವರು ಭಾರೀ ಸೆಂಟಿಮೆಂಟ್ಸು ಇರುವ ಮನ ಕಲಕುವ ಕಥೆಗಳನ್ನು ಕಣ್ಣಲ್ಲಿ ನೀರು ಧಾರೆಯಾಗಿ ಇಳಿಯಬೇಕು ಹಾಗೆ ವರ್ಣಿಸಿ ಹೇಳುತ್ತಿದ್ದರು.

ನಮ್ಮ ಅಜ್ಜನಿಗೆ ಮಲೆನಾಡಿನ ಇಂಚಿಂಚೂ ಗೊತ್ತಿತ್ತು. ಅವರೊಂದು ಅನುಭವದ ಮೂಟೆ. ಅದನ್ನೆಲ್ಲ ಹೆಳುತ್ತಾ ಇದ್ದರು. ಇದನ್ನೆಲ್ಲ ಕೇಳುತ್ತಾ ನನ್ನ ಒಳಗೆ ಒಂದು ಕಲ್ಪನಾ ಲೋಕ ಅರಳುತ್ತಿತ್ತು. ನನಗೆ ಹಾಡುಗಳು ಇಷ್ಟ. ನನಗೆ ನಾನೇ ಏನೇನೋ ಕಥೆ ಕಟ್ಟಿ ಹಾಡಿಕೊಳ್ಳೋದು ಮಾಡುತ್ತಿದ್ದೆ. ಮುಂದೆ ಒಂದನೇ ತರಗತಿಗೆ ಸೇರಲು ಅಮ್ಮ ಅಪ್ಪನ ಜೊತೆ ಬಂದಾಗ ಅಲ್ಲಿ ಅಜ್ಜಿ ಅಜ್ಜ ಹೇಳುವ ಕಥೆಗಳು ಇಲ್ಲ. ಅದಕ್ಕೇ ಅಕ್ಕನಿಗೆ ಅಂತ ತರಿಸುತ್ತಿದ್ದ ಕಥೆ ಪುಸ್ತಕಗಳು, ನಿಯತಕಾಲಿಕಗಳು ಇದನ್ನೆಲ್ಲ ಓದುವ ಗೀಳು ಹಿಡಿಸಿಕೊಂಡೆ. ಮೌನ ಪ್ರಿಯವಾಯಿತು. ಮೌನದೊಳಗೆ ಏನೇನೋ ಮಾತು. ಮತ್ತೆ ಅದನ್ನು ಅಕ್ಷರಕ್ಕೆ ಇಳಿಸುವುದು. ಇದೇ ಕೆಲಸವಾಯ್ತು. ಅಮ್ಮನಿಗೆ ಅಲ್ಲಿ ಇಲ್ಲಿ ನಾನು ಗೀಚಿದ್ದ ಕವಿತೆಗಳು ಸಿಕ್ಕು ಎಲ್ಲ ಜೋಡಿಸಿ ಇಟ್ಟುಕೊಳ್ಳೋಕೆ ಪ್ರಾರಂಭಿಸಿದರು. ನಾನು ಒಂದನೇ ತರಗತಿ ಮುಗಿಸಿದ ರಜೆಯಲ್ಲಿ ತೀರ್ಥಹಳ್ಳಿ ತಾಲ್ಲೂಕು ಸಾಹಿತ್ಯ ಪರಿಷತ್ತಿನಿಂದ ಒಂದು ವಸಂತ ಕವಿಗೋಷ್ಠಿ ಏರ್ಪಡಿಸಿದ್ದರು. ಅಲ್ಲಿ ನನಗೆ ಕವಿತೆ ಓದುವ ಅವಕಾಶ ದೊರೆಯಿತು. ಹೊರಲೋಕಕ್ಕೆ ನಾನಿಟ್ಟ ಮೊದಲ ಹೆಜ್ಜೆ ಇದಾಗಿತ್ತು.್ತ. ಎಲ್ಲ ನನ್ನ ಕವಿತೆ ಮೆಚ್ಚಿ ಪ್ರೋತ್ಸಾಹಿಸಿದರು.

ತಂದೆ ತಾಯಿ ಬೆಂಬಲ
ನಮ್ಮ ಮನೆಯಲ್ಲಿ ಯಾರೂ ಸಾಹಿತಿಯಲ್ಲ. ಹಾಗಾಗಿ ಏನು ಮಾಡಿದರೂ ಮೊದಲು ಬೈಯೋದೇ. ಆಮೇಲೆ ಯಾರಾದರೂ ಮನೆಗೆ ಬಂದವರು ನನ್ನ ಹೊಗಳಿದ್ದೇ ನಮ್ಮಮ್ಮ ಅಪ್ಪ ಮೆತ್ತಗಾಗಿ ನಿಧಾನಕ್ಕೆನೀನು ಬರಿ ಓದು ಆದ್ರೆ ಶಾಲೆ ಪಾಠ ಮೊದಲು ಇದೆಲ್ಲ ಆಮೇಲೆಅನ್ನೋದು. ಆಮೇಲಾಮೇಲೆ ಪತ್ರಿಕೆಗಳಲ್ಲಿ ನನ್ನ ಹೆಸರು ಬರತೊಡಗಿದ್ದೇ ಹೆಮ್ಮೆ ಪಡತೊಡಗಿದರು. ಆದರ್ರೆ ಬಹಳ ಜನ ನನಗೆಇದು ನೀನೇ ಬರೆದಿದ್ದಾ? ನಿಮ್ಮಪ್ಪ ಅಮ್ಮ ಬರೆದುಕೊಡ್ತಾರಾ?” ಅಂತೆಲ್ಲ ಕೇಳುವಾಗ ನಮ್ಮಮ್ಮ ಸಿಟ್ಟು ಮಾಡಿಕೊಳ್ಳುತ್ತಿದ್ದರು. ಅಳುತ್ತಿದ್ದರು ಮತ್ತೆ ಸಮಾಧಾನ ಮಾಡಿಕೊಳ್ಳುತ್ತಿದ್ದರು. ಇಷ್ಟಾದ್ರೂ ಎಷ್ಟೇ ಕಷ್ಟವಾದ್ರೂ ಸಾಹಿತ್ಯದ  ಕಾರ್ಯಕ್ರಮಗಳಿಗೆ, ನನಗೆ ಕವಿತೆ ಬರೆಯೋದಕ್ಕೆ ಪ್ರೇರಣೆ ಸಿಗುವ ಜಾಗಗಳಿಗೆ ಕರೆದುಕೊಂಡು ಹೋಗೋದು, ಬೇಕಾದ ಪುಸ್ತಕಗಳನ್ನು ತರಿಸಿಕೊಡೋದು ಸಹ ಮಾಡುತ್ತಿದ್ದರು. ಈಗ ಪರಿಸ್ಥಿತಿ ಸುಧಾರಿಸಿದೆ. ಆದ್ರೂ ಅಪ್ಪ ಅಮ್ಮ ನಮ್ಮ ಮಗಳು ಇಷ್ಟೆಲ್ಲ ಮಾಡಿದಾಳೆ ಅಂತ ಯಾವತ್ತೂ ಬೀಗಿದ್ದೇ ಇಲ್ಲ. ಖುಷಿ ನೋವು ಏನಿದ್ರೂ ಒಳಗೇ ಅಡಗಿಸಿಕೊಳ್ಳುತ್ತಾರೆ.

ಶಾಲೆ, ಕಾಲೇಜು, ಮೇಷ್ಟ್ರು ಇತ್ಯಾದಿ
ನಾನು ಯಾವಾಗಲೂ ಶಾಲೆಯಲ್ಲಿ ನಾನೊಬ್ಬ ಸಾಹಿತ್ಯಾಸಕ್ತೆ ಅಂತ ತೋರಿಸಿಕೊಳ್ಳಲು ಹೋಗೋದೇ ಇಲ್ಲ. ಎಲ್ಲ ವಿದ್ಯಾರ್ಥಿಗಳ ಜೊತೆ ಅವರಂತೆ ಸಿಂಪಲ್ ಆಗಿ ಇರುತ್ತೇನೆ. ನನ್ನ ತಂದೆ ತಾಯಿ ನನ್ನನ್ನು ಅಡ್ಮಿಶನ್ ಮಾಡಿಸುವಾಗಲೇ ಶಾಲೆಯ ಮುಖ್ಯೋಪಾದ್ಯಾಯರ ಹತ್ತಿರನಮ್ಮ ಮಗಳನ್ನು ಎಲ್ಲ ಮಕ್ಕಳ ತರಹ ಸಹಜವಾಗಿ ನೋಡಿಕೊಳ್ಳಿ. ಅವಳನ್ನು ತರಗತಿಯಲ್ಲಿ ಹೊಗಳೋದು, ಇತರ ಮಕ್ಕಳನ್ನು ಇವಳ ಜೊತೆ ಹೋಲಿಸಿ ಮಾತಾಡೋದು ಮಾಡೋದ್ರಿಂದ ಇತರ ಮಕ್ಕಳಿಗೆ ಕೀಳರಿಮೆ ಬರುವಂತಿರಬಾರದು, ನಮ್ಮ ಮಗಳಿಗೂ ಅಹಂಕಾರ ಮೂಡಿಸುವ ಹಾಗಾಗಬಾರದುಅಂತ ಹೇಳುತ್ತಿದ್ದರು. ಶಾಲೆಯಲ್ಲಿ ನನ್ನ ಸಹಪಾಠಿಗಳು, ಶಿಕ್ಷಕರು ಎಲ್ಲರೂ ನನ್ನನ್ನು ತುಂಬ ಪ್ರೀತಿಸುತ್ತಿದ್ದರು. ಶಾಲೆ, ಕಾಲೇಜಲ್ಲಿ ಭಾಷಣ ಮುಂತಾದ ಜವಾಬ್ದಾರಿಗಳನ್ನು ಕೊಡುತ್ತಿದ್ದ್ರು. ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಯಿರಲಿ ನಮ್ಮ ವಿತಾಶಾ ಇದ್ದಾಳಲ್ಲ ಅಂತ ಕೆಲಸ ನನಗೇ ವಹಿಸುತ್ತಿದ್ದರು. ಸರಕಾರಿ ಶಾಲೆಗಳಲ್ಲಿ ಓದಿದ್ದರಿಂದ ಅಲ್ಲಿನ ಶಿಕ್ಷಕರ ಗಾಢ ಪ್ರಭಾವ ನನ್ನ ಮೇಲಾಗಿದೆ.

ಕಾದಂಬರಿ ಕುರಿತು.
ನಾನು ತೀರಾ ಸಣ್ಣ ವಯಸ್ಸಲ್ಲೇ ತೇಜಸ್ವಿಯವರು ಬರೆದ, ಅನುವಾದಿಸಿದ ಬಹುತೇಕ ಎಲ್ಲಾ ಕೃತಿಗಳು, ಕುವೆಂಪು ಅವರ ಎರಡೂ ಕಾದಂಬರಿಗಳು, ಶಿವರಾಮ ಕಾರಂತರ ಬೆಟ್ಟದ ಜೀವ, ಮೂಕಜ್ಜಿನ ಕನಸುಗಳು, ಕುಡಿಯರ ಕೂಸು. ಸರಸಮ್ಮನ ಸಮಾಧಿ, ಆರ್. ಕೆ. ನಾರಾಯಣ್ ಅವರ ಸ್ವಾಮಿ ಅಂಡ್ ಹಿಸ್ ಫ್ರೆಂಡ್ಸ್, ಜಪಾನಿನ ತೆತ್ಸುಕೋ ಕೊರಿಯಾನಾಗಿಯ ತೊತ್ತೋಚಾನ್, ರಸ್ಕಿನ್ ಬಾಂಡ್ ಇವರ ಬಹುತೇಕ ಎಲ್ಲ ಕೃತಿಗಳು, ಹೀಗೆ ಭಾರತೀಯ - ಪಾಶ್ಚಾತ್ಯ ದೇಶಗಳ ಖ್ಯಾತನಾಮರ ಅನೇಕ ಕೃತಿಗಳನ್ನು ಓದಿದ್ದೆ

ಹಾಗಾಗಿ ದೊಡ್ಡ ಕಾದಂಬರಿ ಬರೀಬೇಕು ಅನ್ನೋ ಹುಚ್ಚು ತಲೆಗೆ ಹತ್ತಿ ಏನೇನೋ ಒಂದಷ್ಟು ಬರೆಯೋದು ಎರಡು ಮೂರು ಅಧ್ಯಾಯ ಮಾಡಿ ಕೈಬಿಡೋದು ಹೀಗೆಯೇ ಆಗುತ್ತಿತ್ತು. ನಮ್ಮಜ್ಜ ಹೇಳುತ್ತಿದ್ದ ಮಲೆನಾಡ ಅತ್ಯಂತ ಕುತೂಹಲಕಾರಿ ಅನುಭವಗಳನ್ನು ಹೇಗಾದ್ರೂ ಕಾದಂಬರಿ ಬರೆದು ಅದರಲ್ಲಿ ಹಿಡಿದಿಡಬೇಕು ಅಂತ ಹಟ. ಅದಕ್ಕೆ ಸರಕಾರಿ ಶಾಲೆಯ ವಾತಾವರಣ ನನಗೆ ಇನ್ನಷ್ಟು ಪೂರಕವಾಗಿತ್ತು ಅನಿಸುತ್ತೆ. ಒಟ್ಟಿನಲ್ಲಿಹುಚ್ಚುಬಳ್ಳಿಯ ಹಾದಿಯಲ್ಲಿಅಂತ ಕಾದಂಬರಿ ರಚಿಸೋದು, ಅಧ್ಯಾಯಗಳನ್ನು ಹೀಗೆಯೇ ವಿಂಗಡಿಸಬೇಕು, ಇಂತಿಂತಹ ಸಂಗತಿಗಳನ್ನು ಅದರಲ್ಲಿ ತರಲೇಬೇಕು ಅಂತೆಲ್ಲ ಅಂದುಕೊಂಡು ತೀರ್ಥಹಳ್ಳಿಯ ಸುತ್ತಮುತ್ತಲಿನ ಕಾಡು, ಹಳ್ಳಿ ಎಲ್ಲ ಸುತ್ತುಹಾಕಿ ಬಂದಿದ್ದಾಗಿತ್ತು. ಬರೆಯಲು ಕೂತಾಗೆಲ್ಲ ಸಮಯಾಭಾವದ ಏನೇನೋ ಅಡಚಣೆಗಳು ಬೇರೆ. ಹೀಗಿರುವಾಗ ನನ್ನಒಂದು ಚಂದ್ರನ ತುಂಡುಲಲಿತ ಪ್ರಬಂಧ ಓದಿದ ಪ್ರೊ.ಎಲ್ ಎನ್ ಮುಕುಂದರಾಜ್ ಇವರು ಮುದ್ದು ನಿನ್ನ ಸರಕಾರಿ ಶಾಲೆಯ ಅನುಭವಗಳನ್ನು ಒಂದು ಕಾದಂಬರಿಯಾಗಿ ಬರೆದುಕೊಡ್ತೀಯಾ? ಚೆನ್ನಾಗಿದ್ದರೆ ಸಿನೆಮಾ ಮಾಡ್ತೇವೆ ಅಂದ್ರು. ಆಗ ಇದೇಹುಚ್ಚುಬಳ್ಳಿಯ ಹಾದಿಯಲ್ಲಿಶೀರ್ಷಿಕೆಯನ್ನು ಬದಲಿಸಿ ಕಥೆಯನ್ನೂ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡುಕಾಡಹಾದಿಯ ಹೂಗಳುಕಾದಂಬರಿ ಬರೆದೆ. ಮುಂದೆ ಅದು ಅದೇ ಹೆಸರಿನಲ್ಲಿ ಸಿನೆಮಾ ಆಯ್ತು.

ನನ್ನ ಮಟ್ಟಿಗೆ ಒಳ್ಳೆ ಕೃತಿ
ನನ್ನ ಮಟ್ಟಿಗೆ ಒಳ್ಳೆ ಕೃತಿ ಎಂದರೆ ಅದು ಮಾನವೀಯತೆ, ಸಮಾನತೆ, ಸಾಮರಸ್ಯ, ಪ್ರೀತಿ ಇಂತಹ ಜೀವನ ಮೌಲ್ಯಗಳನ್ನು ಎತ್ತಿಹಿಡಿಯುವಂಥದ್ದಾಗಿರಬೇಕು. ಒಂದು ಕೃತಿ ನಮ್ಮ ಅರಿವಿನ ವಿಸ್ತಾರಗೊಳಿಸುವಂತಿರಬೇಕು. ಕತ್ತಲಿಂದ ಬೆಳಕಿನ ಕಡೆ, ಹಿಂದಿನಿಂದ ಮುಂದಕ್ಕೆ ಕರೆದುಕೊಂಡು ಹೋಗುವಂಥದ್ದಾಗಿರಬೇಕು. ಅದು ಹಳೆಯ ಹುಣ್ಣುಗಳನ್ನು ಕೆದಕಿ ಇಂದಿನ ಹಾಗೂ ಮುಂದಿನ ಬಾಳಿನ ಗ್ಯಾಂಗ್ರೀನ್ ಅನ್ನಾಗಿಸುವಂತಿರಬಾರದು. ಸಾಮಾಜಿಕ ನ್ಯಾಯವನ್ನು, ನೆಲ ಜಲ, ನಾಡು ನುಡಿಯ ಪ್ರೇಮವನ್ನೂ, ಮನುಜಕುಲದ ಏಳಿಗೆಯನ್ನೂ ಎಲ್ಲಕ್ಕಿಂತ ಮುಖ್ಯವಾಗಿ ಕೃತಿ ನಮಗೆ ಪ್ರಶ್ನಿಸುವ ಮನೋಭಾವವನ್ನೂ, ವೈಜ್ಞಾನಿಕ ನೋಟವನ್ನೂ ಕಲಿಸಿ ಬೆಳೆಸುವಂಥದ್ದಿರಬೇಕು.

ನನಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾಗೋದು ಕುವೆಂಪು ಕಾವ್ಯ. ಇಲ್ಲಿ ನನ್ನ ಚೇತನ ಆಗು ನೀ ಅನಿಕೇತನಅನ್ನುವ ಮೂಲಕ ವಿಶ್ವಮಾನವ ಸಂದೇಶವನ್ನು ಸಾರುತ್ತಾರೆ. ಮನುಜ ಮತ ವಿಶ್ವ ಪಥಅನ್ನುವ ವಿಶ್ವಮಾನವ ಸಂದೇಶವೇ ಅತ್ಯಂತ ಮಹೋನ್ನತವಾದದ್ದು, ಅವರುಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿಅಂತ ಕರೆಕೊಡುತ್ತಾರೆ. ‘ಬಾರಿಸು ಕನ್ನಡ ಡಿಂಡಿಮವಅಂತ ಕನ್ನಡ ಪ್ರೇಮವನ್ನು ಜಾಗೃತಗೊಳಿಸುತ್ತಾರೆ. ನಮ್ಮ ನಾಡಗೀತೆಯನ್ನು ಅವರದೆಷ್ಟು ಪರಿಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ನಮ್ಮ ದೇಶದ ಬೆನ್ನೆಲುಬು ಅಂತ ಕರೆಸಿಕೊಳ್ಳುವ ಅನ್ನದಾತನ ಕುರಿತಉಳುವ ಯೋಗಿಯ ನೋಡಲ್ಲಿಎಂಥಾ ಅದ್ಭುತ ಗೀತೆಯದು. ಹೀಗೆ ಅವರ ಯಾವುದೇ ಕವಿತೆಯನ್ನು ತೆಗೆದುಕೊಂಡರೂ ನಮ್ಮ ವೈಚಾರಿಕತೆಯನ್ನು ಉದ್ದೀಪಿಸುವ ಕಾವ್ಯ ಅವರದು. ಅಷ್ಟೇ ಅಲ್ಲ, ಅವರ ಕಾವ್ಯ ಕಟ್ಟುವ ಸೈಲಿ, ಸಮೃದ್ಧ ಭಾಷಾ ಬಳಕೆ, ಪ್ರಕೃತಿಯ ವೈಭವದ ವರ್ಣನೆ. ಹೀಗೆ ಎಲ್ಲ ದೃಷ್ಟಿಯಿಂದಲೂ ನನಗೆ ಕುವೆಂಪು ಕಾವ್ಯ ಬಹಳ ಉನ್ನತ ಮಟ್ಟದ್ದು ಅನಿಸುತ್ತದೆ.

ಇಂದಿನ ಕನ್ನಡ ಸಾಹಿತ್ಯ ಮತ್ತುಇಸಂಗಳು.
ಇಂದು ಸಾಕಷ್ಟು ಸಂಖ್ಯೆಯಲ್ಲಿ ಕೃತಿಗಳ ರಚನೆಯಾಗುತ್ತಿದೆ. ಪುಸ್ತಕ ವ್ಯಾಪಾರವೂ ಜೋರಾಗಿಯೇ ಇದೆ. ಸಾಮಾಜಿಕ ಜಾಲತಾಣಗಳೂ ಮುದ್ರಣ ಮಾಧ್ಯಮದಿಂದ ಅಸಡ್ಡೆಗೆ, ನಿರ್ಲಕ್ಷ್ಷ್ಯಕ್ಕೆ ಗುರಿಯಾದ ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆಗಳಾಗಿವೆ. ದಿನೇ ದಿನೇ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವವರ ಕೈಗಳು ಮಾಗುತ್ತಿವೆ. ಅಲ್ಲಿ ನಡೆಯುವ ಸಾಕಷ್ಟು ವೈಚಾರಿಕ Zರ್ಚೆಗಳು ಅರಿವಿನ ವಿಸ್ತಾರವನ್ನು ಹೆಚ್ಚಿಸುತ್ತಿವೆ. ಒಂದು ಪತ್ರಿಕೆಗೆ ಕವಿತೆಯನ್ನು ಕಳಿಸಿ ತಿಂಗಳು ಗಟ್ಟಲೆ ಕಾಯುತ್ತ ಕೂತು ಪ್ರಕಟವಾಗದಿದ್ದಾಗ ನೊಂದುಕೊಳ್ಳುವ ಪರಿಸ್ಥಿತಿ ಈಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬರಹ ಹಾಕಿ ತಕ್ಷಣಕ್ಕೇ ತನ್ನ ವಿಚಾರವನ್ನು ತಲುಪಿಸಿ ಅದಕ್ಕೆ ತಕ್ಕ ಪ್ರತಿಕ್ರಿಯೆ ಪಡೆಯುವ ಅವಕಾಶದಿಂದ ಇನ್ನಷ್ಟು ಉಮೇದಿನಿಂದ ಬರೆದುಕೊಳ್ಳುವುದು ಕಾಣುತ್ತಿದೆ.



ಸಾಹಿತ್ಯ ಲೋಕದಲ್ಲಿಇಸಂಗಳು ಹೊಸದಾಗಿ ಹುಟ್ಟಿಕೊಂಡಿದ್ದೇನಲ್ಲ. ಅವು ಮೊದಲಿಂದಲೇ ಇದ್ದವು. ಈಗ ಇವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ.. ಇಸಂಗಳು ಪಂಗಡಗಳಾಗಿ ನಮ್ಮನ್ನು ಒಡೆಯುತ್ತಿವೆ. ಆದರೆ ಈಗ ನಮ್ಮ ದೇಶದ ಸಂವಿಧಾನ, ಕಾನೂನು, ಏಕತೆ, ಸಮಾನತೆ, ಸೌಹಾರ್ದ, ದೂರದೃಷ್ಟಿ, ಸಾಮಾಜಿಕ ನ್ಯಾಯ, ದೇಶದ ಏಳಿಗೆ ಇಂಥ ಮೌಲ್ಯಗಳನ್ನು ಎದುರಿಟ್ಟುಕೊಂಡು ಇಸಂಗಳನ್ನು ತಿಳಿಗೊಳಿಸಿ ಒಂದುಗೂಡುವ ಕೆಲಸವಾಗಬೇಕಿದೆ. ಹೀಗೆ ಒಂದುಗೂಡಿ ದುರಿತ ಕಾಲವನ್ನು ಎದುರಿಸುವ ಬಗೆಯನ್ನು ಸಾಹಿತಿಗಳಾದವರು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಗಿದೆ.

 ರೋಲ್ ಮಾಡೆಲ್
ನನಗೆ ರೋಲ್ ಮಾಡೆಲ್ ಅನ್ನುವ ಪದಗಳಲಿ ಹೆಚ್ಚು ನಂಬಿಕೆಯಿಲ್ಲ. ಒಬ್ಬರಿಗೆ ಒಬ್ಬರೇ ರೋಲ್ ಮಾಡೆಲ್ ಎಂದೂ ಹೇಳಲು ಕಷ್ಟ. ನನಗೆ ಲಿಯೋ ಟಾಲ್ ಸ್ಟಾಯ್, ಅಂಬೇಡ್ಕರ್, ಗಾಂಧೀಜಿ, ಕುವೆಂಪು, ಚೆಗುವೆರಾ, ಮದರ್ ತೆರೆಸಾ, ಚಿನುವಾ ಅಚಿಬೆ, ಲಂಕೇಶ್, ತೇಜಸ್ವಿ ಇವರೆಲ್ಲಾ ಒಂದೊಂದು ಕಾರಣಕ್ಕೆ ಆದರ್ಶಪ್ರಾಯರಾಗಿ ಹತ್ತಿರವಾದವರು.

ಈಗಿನ ನನ್ನ ಬರವಣಿಗೆ
ಸಾಕಷ್ಟು ಪ್ರಕಟಿತ ಬಿಡಿ ಕಥೆ, ಕವಿತೆಗಳಿವೆ. ಸಮಯಾಭಾವದಿಂದ ಪುಸ್ತಕ ಪ್ರಕಟಣೆಗೆ ಕಳಿಸಲು ಸಾಧ್ಯವಾಗುತ್ತಿಲ್ಲ. ಶಿವಮೊಗ್ಗೆಯಎಚ್ಚರಿಕೆಎನ್ನುವ ಪತ್ರಿಕೆಗೆ ಸುಮಾರು 13 ತಿಂಗಳ ಕಾಲ ವಾರದ ಅಂಕಣ ಬರೆದೆ. ಅಂಕಣ ಬರಹಗಳ ಸಂಕಲನ ತರಲು ಬಾಕಿಯಿದೆ. ನಾನು ಕೊಂಕಣಿ ಭಾಷೆಯಲ್ಲೂ ಬರೆಯುತ್ತೇನೆ. ಕೊಂಕಣಿಯನಮಾನ್ ಬಾಳೋಕ್ ಜೆಜುಪತ್ರಿಕೆಗೆ ಕಳೆದ ಎರಡು ವರ್ಷಗಳಿಂದ ಮಾಸಿಕ ಅಂಕಣ ಬರೆಯುತ್ತಾ ಇದ್ದೇನೆ. ಒಂದು ಕಾದಂಬರಿ ಬರೆದಾಗಿದೆ. ಪ್ರಕಟಣೆಗೆ ಕಳಿಸುವುದು ಬಾಕಿಯಿದೆ. ಮತ್ತೆ ಕೆಲವು ವೆಬ್ ಪತ್ರಿಕೆಗಳಿಗೆ ಆಗಾಗ ಬರೆಯುವುದು ಇದೆ.

ಯುವ ಬರಹಗಾರರಿಗೆ ಸಂದೇಶ
ಈಗಿರುವ ಯುವ ಬರಹಗಾರರಲ್ಲಿ ಬಹುಷಃ ನಾನೇ ಕಿರಿಯಳು. ಅವರೆಲ್ಲ ನನಗಿಂತ ಹೆಚ್ಚು ಸಾಧಿಸಿದವರು, ಬಹಳ ಜವಾಬ್ದಾರಿಯಿಂದ ನನಗಿಂತ ಚೆನ್ನಾಗಿ ಬರೆಯುತ್ತಾರೆ. ನನಗಿಂತ ಹೆಚ್ಚು ಒಳ್ಳೊಳ್ಳೆ ಸಂಗತಿಗಳನ್ನು ಚರ್ಚಿಸುತ್ತಾರೆ. ನಾನು ತಿಳಿದ ದೊಡ್ಡ ಸಂಖ್ಯೆಯ ಯುವ ಬರಹಗಾರರು ಸರಿಯಾದ ದಿಸೆಯಲ್ಲಿ ಯೋಚಿಸುತ್ತಿದ್ದಾರೆ. ಅವರು ಸಮರ್ಥವಾಗಿ ದೇಶ ಕಟ್ಟುವ ಹಾಗೂ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ತೊಡಗಿದ್ದಾರೆ. ನಾನು ಅವರಿಗೆಲ್ಲ ಶುಭ ಹಾರೈಸುತ್ತೇನೆ. ಅವರಿಗೆಲ್ಲ ಸಂದೇಶ ಕೊಡುವಷ್ಟು ದೊಡ್ಡ ವ್ಯಕ್ತಿ ನಾನು ಅಲ್ಲವೆಂದೇ ನನ್ನ ಭಾವನೆ.  


ಪ್ರಕಟಿಸಿದ ಕೃತಿಗಳು         ಹೂ ಗೊಂಚಲು (ಕತೆ ಮತ್ತು ಕವನಗಳು- 2006)
ಕಾನನ ಕಲರವ (ಕವನಗಳು- 2008)
ಎಷ್ಟು ಬಣ್ಣದ ಇರುಳು! (ಕವನಗಳು -2010)
ಒಂದು ಚಂದ್ರನ ತುಂಡು (ಲಲಿತ ಪ್ರಬಂಧಗಳು- 2011)
ಕಾಡ ಹಾದಿಯ ಹೂಗಳು (ಕಾದಂಬರಿ -2013) (ಪ್ರೊ.ಎಲ್. ಎನ್. ಮುಕುಂದರಾಜ್ ನಿರ್ದೇಶನದಲ್ಲಿ ಕಾದಂಬರಿ ಆಧಾರಿತಕಾಡ ಹಾದಿಯ ಹೂಎಂಬ ಚಲನಚಿತ್ರ ನಿರ್ಮಾಣವಾಗಿದೆ)
ಹೊರಡಿಸುತ್ತಿದ್ದ ಪತ್ರಿಕೆ  _ ಮಂದಾನಿಲ ಮಾಸ ಪತ್ರಿಕೆ (2008 ಆರಂಭವಾಗಿ 5 ವರ್ಷಗಳ ಕಾಲ ನಡೆಸಿದ್ದು)
ಪ್ರಶಸ್ತಿಗಳು
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(ವಾಪಸ್ ಮಾಡಿದ ಪ್ರಶಸ್ತಿ)
ಅರಳು ಪ್ರಶಸ್ತಿ (ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು)
ಕೇರಳ ಕಾಸರಗೋಡು ಸಾಂಸ್ಕøತಿಕ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ
ಅಡ್ವೈಸರ್ ಪ್ರಶಸ್ತಿ (ಮಂಡ್ಯ ಅಡ್ವೈಸರ್ ಪತ್ರಿಕೆ ಪ್ರಶಸ್ತಿ)
ಕಾವ್ಯಾನಂದ ಪುರಸ್ಕಾರ (ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್, ಬೆಂಗಳೂರು)
ಬೇಂದ್ರೆ ಪುಸ್ತಕ ಬಹುಮಾನ (ಬೇಂದ್ರೆ ಪ್ರತಿಷ್ಠಾನ ಧಾರವಾಡ)
ಶಾರದಾ ಆರ್.ರಾವ್ ದತ್ತಿ ಪ್ರಶಸ್ತಿ (ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು)
ವಿದ್ಯಾ ಸಾಗರ ಬಾಲ ಪುರಸ್ಕಾರ (ಸಂಧ್ಯಾ ಸಾಹಿತ್ಯ ವೇದಿಕೆ,ಗುಲ್ಬರ್ಗ )
ಕನ್ನಡಶ್ರೀ ಪ್ರಶಸ್ತಿ (ಜನರಲ್ ನಾಲೆಜ್ ಅಕಾಡೆಮಿವತಿಯಿಂದ 2013 ರಲ್ಲಿ ಪ್ರದಾನ ಮಾಡಿದ್ದು )
2014 ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನಜ್ಯೋತಿ ಪುರಸ್ಕಾರಯುವ ಪ್ರಶಸ್ತಿ 

ಸಾಧಾರಣ ಪ್ರತಿಭೆ ಪ್ರಶಸ್ತಿ -2008 ರಲ್ಲಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಪ್ರಶಸ್ತಿ

(ಈ ನನ್ನ ಲೇಖನವು ಕನ್ನಡದ ಹೆಸರಾಂತ ಮಹಿಳಾ ಮಾಸಿಕ "ಗೃಹಶೋಭಾ"ದ ಜುಲೈ 2016ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.)