Tuesday, May 30, 2017

"ತಾಯಿ ಎನ್ನುವುದು ಒಂದು ಅಪೂರ್ವ ಶಕ್ತಿ" - ಸವಿತಾ ಕೃಷ್ಣಮೂರ್ತಿ

ಸವಿತಾ ಕೃಷ್ಣಮೂರ್ತಿ, ಹೀಗೆಂದರೆ ಬಹಳಷ್ಟು ಜನರಿಗೆ ಯಾರೆಂದೇ ತಿಳಿಯಲಾರದು. ಅದೇ 'ಅಮೃತವರ್ಷಿಣಿ' ಧಾರಾವಾಹಿಯ ಯಶೋಧಾ ಎಂದರೆ ತಕ್ಷಣಕ್ಕೆ ಹೊಳೆಯುತ್ತದೆ.
ಟಿವಿ ಪರದೆಯ ಮೇಲೆ ಆಕೆ ಕಣ್ಣುಗುಡ್ಡೆಗಳನ್ನು ಹೊರಳಿಸುತ್ತಾ, ಮಾತಿನಲ್ಲಿ ಕಾಠಿಣ್ಯ ತುಂಬಿಕೊಂಡು ಮಾತನಾಡುತ್ತಿದ್ದರೆ. ದಿನ ದಿನವೂ ಹೊಸ ಹೊಸ ತಂತ್ರಗಳನ್ನು ಹೆಣೆದು ಒಂದು ಕುಟುಂಬದಲ್ಲಿ ಒಡಕನ್ನು ತರಲು ಪ್ರಯತ್ನಿಸುತ್ತಿದ್ದರೆ ವೀಕ್ಷಕರೆಲ್ಲರೂ ಉಸಿರು ಬಿಗಿ ಹಿಡಿದುಕೊಂಡು ನೋಡುತ್ತಿರುತ್ತಾರೆ. ಕಳೆದ ಐದು ವರ್ಷಗಳಿಂದ ಪ್ರಸಾರವಾಗುತ್ತಿರುವ ಧಾರಾವಾಹಿಯ ನಂಬರ್ ಒನ್ ವಿಲನ್ ಪಾತ್ರಧಾರಿ - ಸವಿತಾ ಕೃಷ್ಣಮೂರ್ತಿ.



ಅಭಿನಯದ ಹಿನ್ನೆಲೆ ಏನೂ ಇಲ್ಲದಿದ್ದರೂ ತಮಗಿದ್ದ ಆತ್ಮವಿಶ್ವಾಸದಿಂದಲೇ ಸಿಕ್ಕಿದ್ದ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡು ಇಂದು ಕಿರು ತೆರೆ ಹಾಗೂ ಚಲನಚಿತ್ರ ರಂಗದಲ್ಲಿ ಯಶಸ್ವಿ ಕಲಾವಿದೆಯಾಗಿ ಬೆಳೆದಿದ್ದಾರೆ. ಇಂತಹಾ ಕಲಾವಿದೆಯನ್ನು ಮದರ್ಸ್ ಡೇ ಸಂದರ್ಭದಲ್ಲಿ ನಾವು ಮಾತಿಗೆ ಆಹ್ವಾನಿಸಿದಾಗ ಸಂತಸದಿಂದ ಒಪ್ಪಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅವರೊಡನೆ ನಡೆಸಿದ ಸಂದರ್ಶನದ ಪ್ರಮುಖ ಭಾಗ ಇಲ್ಲಿದೆ-

ಕಿರುತೆರೆಗೆ ಬಂದದ್ದು ಹೇಗೆ?
ನಾನು ಕಂಪ್ಲೀಟ್ ಹೌಸ್ ವೈಫ್! ಅದೊಮ್ಮೆ ಮಲ್ಲೇಶ್ವರದಲ್ಲಿ ಕುಕರಿ ಶೋ ಗಾಗಿ ಆಡಿಷನ್ ಒಂದು ನಡೆದಿತ್ತು. ನನಗೆ ಮೊದಲಿನಿಂದ್ ಅಡಿಗೆಯಲ್ಲಿ ಆಸಕ್ತಿ ಇದ್ದು ನಾನೂ ಭಾಗವಹಿಸಿದ್ದೆ. ಅಷ್ಟೇ ಅಲ್ಲ ಅಲ್ಲಿ ನಾನೊಬ್ಬ ಉತ್ತಮ ಕುಕ್ ಆಗಿ ಆಯ್ಕೆಯಾದೆ. ಅದಾದ ಕೆಲ ದಿನಗಳಲ್ಲಿ  ಜೀ ಕನ್ನಡದವರು. 'ರುಚಿ ಅಭಿರುಚಿ' ಕಾರ್ಯಕ್ರಮಕ್ಕೆ ನನ್ನನ್ನು ಆಯ್ಕೆ ಮಾಡಿದ್ದರು. ಆ ಕಾರ್ಯಕ್ರಮ ಉತ್ತಮವಾಗಿದ್ದು ಜನಪ್ರಿಯ ಕಾರ್ಯಕ್ರಮವಾಗಿ ಮೂಡಿ ಬಂದಿತು. ಆಗ ಅಲ್ಲಿದ್ದ ಒಬ್ಬ ಕ್ಯಾಮರಾಮನ್, ಜೀವ ಅವರು  `ನೀವೇಕೆ ಧಾರಾವಾಹಿಗಳಲ್ಲಿ ನಟಿಸಬಾರದು?' ಎಂದು ನನ್ನನ್ನು ಹುರಿದುಂಬಿಸಿದ್ದರು. ಅವರದೇ ಸಲಹೆಯಂತೆ ನಾನು ಧಾರಾವಾಹಿಯಲ್ಲಿ ಅಭಿನಯಿಸಲು ತೊಡಗಿದೆ.

ಮೊದಲ ಬಾರಿ ಕ್ಯಾಮರಾ ಎದುರಿಸಿದಾಗ ಹೇಗನ್ನಿಸಿತ್ತು?
ನನಗೆ ಯಾವುದೇ ತರಬೇತಿ ಇಲ್ಲದೆ, ಅಭಿನಯದ ಹಿನ್ನೆಲೆಯೂ ಇಲ್ಲ. ಆದರೆ ನೃತ್ಯವೆಂದರೆ ನನಗೆ ಅಚ್ಚು ಮೆಚ್ಚಾಗಿತ್ತು. ಇದು ಹೊರತಾಗಿ ನಾನೇನೂ ನೃತ್ಯಾಭ್ಯಾಸ ಮಾಡಿದವಳೂ ಅಲ್ಲ. ಇಷ್ಟಾಗಿಯೂ ನಾನು ಅಭಿನಯ ರಂಗಕ್ಕಿಳಿದಿದ್ದೆ. ಮೊದಲು ಭಯವಾಗಿದ್ದೇನೋ ನಿಜ. ನಾನು ಮೊದಲು ಅಭಿನಯಿಸಿದ್ದು 'ಪಾಯಿಂಟ್ ಪರಿಮಳ' ಧಾರಾವಾಹಿಯಲ್ಲಿ. ಅದೊಂದು ಫೋನ್ ಕಾಲ್ ಮಾಡುವ ದೃಷ್ಯ. ನನ್ನ ಮನೆ ಮಾತು ಮರಾಠಿ ಆಗಿದ್ದರಿಂದ ಕನ್ನಡವನ್ನು ಸ್ಪಷ್ಟವಾಗಿ ಉಚ್ಚರಿಸುವುದೂ ತುಸು ಕಷ್ಟ ಎನಿಸಿತ್ತು. ಆದರೆ  ಫೋನ್ ಸಂಭಾಷಣೆಯಾಗಿದ್ದ ಕಾರಣ ಅದು ಹೇಗೋ ಟೇಕ್ ಆಗಿ ಹೋಗಿತ್ತು. ಆದರೆ ಇವತ್ತಿಗೂ ಒಂದೊಂದು ಷಾಟ್ ಮಾಡುವಾಗಲೂ ಭಯ ನನ್ನನ್ನು ಕಾಡುತ್ತದೆ. ನನ್ನ ಅಭಿನಯ ಚೆನ್ನಾಗಿ ಬರಬೇಕು ಎನ್ನುವುದೇ ಈ ಭಯದ ಮೂಲ.

ಕುಕರಿ ಶೋ ಕುರಿತು ಹೇಳಿ...
ಏರಿಯಾ ಚಾಲೆಂಜಿಂಗ್ ಕ್ವೀನ್ ಅನ್ನೋ ಕುಕರಿ ಕಾಂಟೆಸ್ಟ್ ಮಲ್ಲೇಶ್ವರದಲ್ಲಿ ನಡೆದಾಗ ನಾನು ಅದರಲ್ಲಿ ಭಾಗವಹಿಸಿ ಮಲ್ಲೇಶ್ವರ ಏರಿಯಾ ಚಾಲೆಂಜ್ ಗೆದ್ದಿದ್ದೆ. ಅಲ್ಲಿಂದ ನನ್ನ ಈ ಕುಕರಿ ಶೋ ಜರ್ನಿ ಪ್ರಾರಂಭವಾಗಿತ್ತು. ಮೊದಲು  ಜೀ ಕನ್ನಡದ 'ರುಚಿ ಅಭಿರುಚಿ' ನಲ್ಲಿ ಭಾಗವಹಿಸಿದ್ದೆ. ಇತ್ತೀಚೆಗೆ ಸುವರ್ಣ ಅವರು 'ಮನೆ ಅಡಿಗೆ' ಕಾರ್ಯಕ್ರಮದಲ್ಲಿ ನನಗೆ ಅವಕಾಶ ನೀಡಿದ್ದರು. ಅದು ಒಂದು ಆರೇಳು ತಿಂಗಳು ನ್ಡೆಯಿತು. ಅದೊಂದು ಉತ್ತಮ ಅನುಭವವಾಗಿದೆ. ಮತ್ತು ನನಗೆ ಸಾಕಷ್ಟು ಜನಪ್ರಿಯತೆಯನ್ನೂ ತಂದಿದೆ. ಆದರೆ ನಾನು ಒಪ್ಪಿಕೊಂಡದ್ದೇ ಕೆಲವು ಎಪಿಸೋಡ್ ಮಾತ್ರ. ಆದರೆ ಇನ್ನು ಮುಂದೆ ಯಾವುದೇ ಕುಕರಿ ಶೋ ನಲ್ಲಿ ಅವಕಾಶ ದೊರೆತರೆ ಭಾಗವಹಿಸುತ್ತೇನೆ.

'ಅಮೃತವರ್ಷಿಣಿ' ಧಾರಾವಾಹಿ, ಅದರ ಟೀಂ ಕುರಿತು ತಿಳಿಸಿ...
ಅಮೃತವರ್ಷಿಣಿಯಲ್ಲಿ ನನ್ನ ಪಾತ್ರ ಅದು ಕೇವಲ ವಿಲನ್ ಮಾತ್ರವಲ್ಲ ಅದಕ್ಕೆ ಬೇರೆ ಬೇರೆ ಶೇಡ್ಸ್ ಇದೆ. ನನ್ನ ಪಾತ್ರದಲ್ಲಿ ಸಾಕಷ್ಟು ವೈವಿದ್ಯತೆಗಳಿದೆ. ನಾನು ಆ ಎಲ್ಲ ಸ್ಟೇಜ್ ನಲ್ಲಿಯೂ ಪಾತ್ರಕ್ಕೆ ನ್ಯಾಯ ಒದಗಿಸಿ ಕೊಡಬೇಕಾಗಿದೆ.
ಟೀಂ ಬಗ್ಗೆ ಹೇಳಬೇಕೆಂದರೆ ಅದೊಂದು ಕಾಮಧೇನು ಹಸುವಿನಂತೆ. ಅಲ್ಲಿ ಇರುವವರೆಲ್ಲರೂ ಸೂಕ್ಷ್ಮ ಸ್ವಭಾವದವರು. ಒಳ್ಳೆಯ ಮನಸ್ಸಿನವರು. ನಿರ್ಮಾಪಕರು, ಇರ್ದೇಶಕ ರವಿ ಗರಣಿ ಸೇರಿ ಎಲ್ಲರೂ ಬಹಳ ಉತ್ತಮ ವ್ಯಕ್ತಿತ್ವದವರು. ಕಳೆದ ಐದು ವರ್ಷಗಳಿಂದ ನಾನು ಈ ತಂಡದಲ್ಲಿದ್ದು ಬಹಳ ಒಳ್ಳೆಯ ಅಂಶಗಳನ್ನು ಕಲಿತಿದ್ದೇನೆ. ಇನ್ನೂ ಮುಂದೆ ಬಹಳ ಕಲಿಯಲಿಕ್ಕೆ ಸಾಧ್ಯವಿದೆ. ಒಟ್ತಾರೆ ಒಳ್ಳೆಯ ತಂಡ. ಎಂದೂ ಮರೆಯಲಾರದಷ್ಟು ಒಳ್ಳೆಯ ಅನುಭವ ನನಗಿಲ್ಲಿ ಸಿಕ್ಕಿದೆ.
ಪ್ರಾರಂಭದಲ್ಲಿ ನನ್ಗೆ ಎದುರಾಳಿ ಪಾತ್ರದಲ್ಲಿ ಹೇಮಾ ಚೌಧರಿ ಅವರು ಅಭಿನಯಿಸಿದ್ದು ನನಗೆ ಸ್ವಲ್ಪ ಭಯವೇ ಆಗಿತ್ತು. ಅಂತಹಾ ಹಿರಿಯ ಕಲಾವಿದೆಯ ಎದುರು ನಾನು ಅಭಿನಯಿಸುತ್ತಿರುವುದು. ಆದರೆ ಅವರು ನಮಗೆ ತಾಯಿಯಂತಿದ್ದರು. ನಾವು ಅಮ್ಮಾ ಎಂದೇ ಕರೆಯುತ್ತಿದ್ದೆವು. ಇನ್ನು ಎಲ್ಲಾ ನಟರು, ಟೆಕ್ನಿಷಿಯನ್ಸ್ ಎಲ್ಲರೂ ಒಳ್ಳೆಯ ಟೀಂ ಆಗಿದ್ದಾರೆ. ನಾನುಐಂತಹಾ ಟೀಂ ನಲ್ಲಿರುವುದು ನನ್ನ ಅದೃಷ್ಟ.

ಇತರೆ ಧಾರಾವಾಹಿಗಳು, ಬೆಳ್ಳಿತೆರೆಯಲ್ಲಿನ ಅಭಿನಯ ಹೇಗಿತ್ತು?
ನಾನು ಅಭಿನಯಿಸಿದ್ದ ಇತರೆ ಧಾರಾವಾಹಿಗಳೆಂದರೆ `ಪಾರ್ವತಿ ಪರಮೇಶ್ವರ', `ಪತಿ ಪತ್ನಿ ಗುಲಾಮ’,  `ಚಕ್ರವಾಕ' ಚಕ್ರವಾಕ ಧಾರಾವಾಹಿಯ ಪಾತ್ರ ಸೊಗಸಾಗಿತ್ತು. ಅದರಿಂದಲೇ `ಅಮೃತವರ್ಷಿಣಿ’ ಯಿಂದ ಕರೆ ಬಂತು.
'ಬಿಂದಾಸ್ ಹುಡುಗಿ' ನನ್ನ ಮೊದಲ ಚಿತ್ರ. `ಹುಲಿ’, `ಪ್ರಿನ್ಸ್’ `ಗಾಡ್‌ಫಾದರ್’, `ಜನವರಿ 1 ಬಿಡುಗಡೆ’, `ಮದುವೆ ಮನೆ~, `ಗೌರಿಪುತ್ರ' ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇತ್ತೀಚೆಗೆ ಹಿಂದಿ ಚಿತ್ರದಲ್ಲಿಯೂ ಅವಕಾಶ ದೊರಕುತ್ತಿದೆ. ಅಮೀರ್ ಖಾನ್ ಸಹೋದರ ಫೈಜಲ್ ಕಾನ್ ಅವರ ಚಿತ್ರ 'ಡೇಂಜರ್' ನಲ್ಲಿಯೂ ಒಂದು ಒಳ್ಳೆಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಗೌರವಾನ್ವಿತ ಪಾತ್ರಗಳಿಗೆ ಪ್ರಾಮುಖ್ಯ ನೀಡುತ್ತೇನೆ. ಅಂತಹಾ ಪಾತ್ರಗಳ್ಲ್ಲಿ ಅಭಿನಯಿಸಲು ಅವಕಾಶ ದೊರೆತರೆ ಹಿಂದೇಟು ಹಾಕುವುದಿಲ್ಲ.

ಕುಟುಂಬದ ಬಗ್ಗೆ ತಿಳಿಸಿ.
ನನ್ನ ಈ ಯಶಸ್ಸಿಗೆ ನನ್ನ ಕುಟುಂಬವೇ ಕಾರಣ. ನನ್ನ ಪತಿ ಕೃಷ್ನಮೂರ್ತಿ, ಮಕ್ಕಳಾದ ಐಶ್ವರ್ಯಾ, ಲಕ್ಷ್ಮಿ ಹಾಗೂ ಮೋಹನ್ ಈ ಎಲ್ಲರ ನಿರಂತರ ಪ್ರೊತ್ಸಾಹದಿಂದಾಗಿಯೇ ನಾನಿಂದು ಈ ಮಟ್ಟಕ್ಕೆ ಬರಲು ಸಾಧ್ಯವಾಗಿದೆ.
ಇನ್ನು ನನ್ನ ತಾಯಿ, ತಂದೆ ಮತ್ತು ನನ್ನ ಇಬ್ಬರು ಸೋದರರು ಸಹ ನನ್ನ ಅಚ್ಚು ಮೆಚ್ಚಿನ ಕುಟುಂಬದವರಾಗಿದ್ದಾರೆ. ಅದರಲ್ಲಿ ತಾಯಿಯಂತೂ ಬಹಳ ಕಷ್ಟ ಪಟ್ಟು ನನ್ನನ್ನು ಸಾಕಿದ್ದಾರೆ. ನಾನು ಇವತ್ತಿಗೂ ಅವರನ್ನು ಬಹಳ ಪ್ರೀತಿಸ್ತೀನಿ. ಅವರೂ ನನ್ನ ಬಗ್ಗೆ ಅತ್ಯಂತ ಹೆಚ್ಚಿನ ಪ್ರೀತಿ ತೋರಿಸ್ತಾರೆ.

ಮದರ್ಸ್ ಡೇ ಸಂದರ್ಭದಲ್ಲಿ ತಾಯಿಯಾಗಿ ಇನ್ನೊಬ್ಬ ತಾಯಿಗೆ ನಿಮ್ಮ ಸಂದೇಶ ಏನು?
ತಾಯಿ ಎನ್ನುವುದು ಒಂದು ಅಪೂರ್ವ ಶಕ್ತಿ. ಅವಳು ತಾನು ತನ್ನನ್ನು, ತನ್ನ ಮಕ್ಕಳು, ಕುಟುಂಬವನ್ನು ಪ್ರೀತಿಸಬೇಕು. ಪ್ರೀತಿ ಯನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನೀಡಬಲ್ಲವಳು ತಾಯಿ. ಅದನ್ನು ಓರ್ವ ಸ್ತ್ರೀ ಅರ್ಥೈಸಿಕೊಂಡರೆ ಆಕೆ ತನ್ನ ಕುಟುಂಬ ಜೀವನದಲ್ಲಿ ಅತ್ಯಂತ ಯಶಸ್ಸು ಕಾಣುತ್ತಾಳೆ. 

ತಾಯಿಯಾಗುವ ಹೆಣ್ಣಿಗೆ ಬೇಕಿರುವುದು ಮುಖ್ಯವಾಗಿ ತಾಳ್ಮೆ, ಪ್ರೀತಿ. ಅವಳು ತನ್ನ ಕುಟುಂಬವನ್ನು ಅತ್ಯಂತ ಹೆಚ್ಚಾಗಿ ತಾಳ್ಮೆ ಹಾಗೂ ಪ್ರೀತಿಯಿಂದ ಕಾಣಬೇಕು. ಅದೇ ಅವಳ ಜೀವನದ ಯಶಸ್ಸಿಗೆ ಅಡಿಪಾಯವಾಗಬಲ್ಲದು. 

(ಈ ಲೇಖನವು ಕನ್ನಡದ ಖ್ಯಾತ ಮಾಸಪತ್ರಿಕೆ ಗೃಹಶೋಬಾ ದ ಮೇ 2017 ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. )