Sunday, March 18, 2018

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 91

ಕಾಂಚೀಪುರ (Kanchipuram)
ಭಾಗ - 2
ಕಂಚಿ, ಕಾಂಚೀಪುರ - ತಮಿಳುನಾಡಿನಲ್ಲಿರುವ ಭಾರತದ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದು. ದೇವಾಲಯಗಳ ನಗರಿ, ಪ್ರಾಚೀನ ಶಿಕ್ಷಣ ಕೇಂದ್ರ, ರೇಷ್ಮೆ ಉತ್ಪಾದನೆ, ಪಲ್ಲವರ ರಾಜಧಾನಿ ಇಹೀಗೆ ನಾನಾ ಕಾರಣಗಳಿಂಡ ಹೆಸರಾಗಿರುವ ಪಟ್ಟಣದ ಸೊಗಸೇ ಅವರ್ಣನೀಯವಾದದ್ದು.

ಚೆನ್ನೈನಿಂದ ನೈಋತ್ಯಕ್ಕೆ 75 ಕಿಮೀ ದೂರದಲ್ಲಿ, ಪಾಲಾರ್ ನದಿಯ ದಡದಲ್ಲಿ ಚೆಂಗಲ್ಪಟ್ಟಿಗೆ 35 ಕಿಮೀ ದೂರದಲ್ಲಿರುವ ನಗರಿ  ಪ್ರಾಚೀನ ಕಾಲದಿಂದಲೂ ಅನೇಕ ಸಂತರು, ಭಕ್ತರು, ಕಲಾವಿದರು, ರಾಜಕಾರಣಿಗಳು, ಸಂಗೀತಗಾರರು. ಶ್ರವಣರು ಹಾಗೂ ತಾತ್ತ್ವಿಕರಿಗೆ ವಿದ್ಯಾಕೇಂದ್ರವೂ ಜನ್ಮಸ್ಥಳವೂ ಆಗಿದೆ.  ಅರ್ಥಶಾಸ್ತ್ರ ರಚಿಸಿದ ಚಾಣಕ್ಯ ಮತ್ತು ಕರ್ಣಾಟಕ ಸಂಗೀತದ ಪಿತಾಮಹಾರೆನಿಸಿದ ಶಾಮಶಾಸ್ತ್ರಿಗಳ ಜನ್ಮಸ್ಥಳ ಇದೇ ಕಾಂಚೀಪುರ.

ಶ್ರೀ ಏಕಾಮ್ರನಾಥ ಸ್ವಾಮಿ


ಶಿವಕಂಚಿ, ವಿಷ್ಣುಕಂಚಿ ಎಂದು ನಗರದಲ್ಲಿ ಎರಡು ಭಾಗಗಳಿದ್ದು ಶಿವಕಂಚಿಯಲ್ಲಿ ಸುಪ್ರಸಿದ್ಧ ಕಾಮಾಕ್ಷಿ, ಏಕಾಂಬರೇಶ್ವರ, ಕೈಲಾಸನಾಥ ದೇವಸ್ಥಾನಗಳಿವೆ. ಶಂಕರಾಚಾರ್ಯರ ಪೀಠಗಳಲ್ಲಿ ಒಂದಾದ ಕಾಮಕೋಟಿ ಪೀಠವಿದೆ.  ವಿಷ್ಣುಕಂಚಿಯಲ್ಲಿ ವರದರಾಜಸ್ವಾಮಿ ದೇವಸ್ಥಾನವಿದೆ. ವರ್ಷಂಪ್ರತಿ ಇಲ್ಲಿ ನಡೆಯುವ ಉತ್ಸವಗಳಿಗೆ ದಕ್ಷಿಣ ಭಾರತದಿಂದಲೇ ಅಲ್ಲದೆ ಉತ್ತರ ಭಾರತದಿಂದಲೂ ಅಸಂಖ್ಯಾತ ಯಾತ್ರಾರ್ಥಿಗಳು ಆಗಮಿಸುತ್ತಾರೆ.

ಕಾಂಚೀಪುರ ರೇಷ್ಮೆ ನೇಯ್ಗೆಯಲ್ಲಿ ಜಗದ್ವಿಖ್ಯಾತವೆನಿಸಿದೆ. ಇಲ್ಲಿ ತಯಾರಾದ ರೇಷ್ಮೆ ಸೀರೆಗಳಿಗೆ ವಿದೇಶಗಳಿಂದ ಹೆಚ್ಚಿನ ಬೇಡಿಕೆಯಿದೆ. ಇಲ್ಲಿ 8,000 ಕ್ಕೂ ಮೇಲ್ಪಟ್ಟು ರೇಷ್ಮೆ ಕೈಮಗ್ಗಗಳಿವೆ.

***
ಏಕಾಮ್ರನಾಥ ದೇವಾಲಯದ ಹಿಂಭಾಗದಲ್ಲಿರುವ 3500 ವರ್ಷ ಹಳೆಯ ಪವಿತ್ರ ಏಕಾಮ್ರ(ಮಾವಿನ ಮರ)

ಏಕಾಂಬರೇಶ್ವರ ಅಥವಾ ಏಕಾಮ್ರನಾಥ ದೇವಾಲಯ ಕಾಂಚೀಪುರದ ಅತಿ ದೊಡ್ಡ ದೇವಾಲಯ. ಇದರ ಹಿಂಭಾಗದಲ್ಲಿರುವ ಮಾವಿನ ಮರವು ಪವಿತ್ರ ಮಾವಿನ ಮರವಾಗಿದೆ. ಇದು 3500 ವರ್ಷಗಳ ಪ್ರಾಚೀನತೆಯನ್ನು ಹೊಂದಿದೆ ಎನ್ನಲಾಗಿದ್ದು ಇದರ ನಾಲ್ಕು ಗೆಲ್ಲುಗಳು ನಾಲ್ಕು ವೇದಗಳ ಸಂಕೇತ ಎನ್ನಲಾಗುತ್ತದೆ. ನಾಲ್ಕೂ ಗೆಲ್ಲುಗಳಲ್ಲಿ ಬಿಡುವ ಎಲೆ, ಹಣ್ಣುಗಳು ವಿಭಿನ್ನ ರುಚಿ ಹೊಂದಿದೆ ಎನ್ನುವುದು ಇನ್ನೊಂದು ವಿಸ್ಮಯಕಾರಿ ಸಂಗತಿ.

***

ಒಮ್ಮೆ ಪಾರ್ವತಿ ದೇವಿಯು ಕುಚೋದ್ಯಕ್ಕೆನ್ನುವಂತೆ ಶಿವನ ಹಿಂದಿನಿಂದ ಆಗಮಿಸಿ ಅವನ ಎರಡೂ ಕಣ್ಣುಗಳನ್ನು ಮುಚ್ಚುತ್ತಾಳೆ. ಹಾಗೆ ಶಿವನ ಕಣ್ಣನ್ನು ಮುಚ್ಚಿದಾಗ ದೊಡ್ಡ ಅನಾಹುತವೇ ಸಂಭವಿಸುತ್ತದೆ. ಸೂರ್ಯ, ಚಂದ್ರ ಅಗ್ನಿಗಳನ್ನೇ ಕಣ್ಣಾಗಿ ಉಳ್ಳ ಪರಮೇಶ್ವರನ ಕಣ್ಣು ಮುಚ್ಚಲು ಲೋಕವೆಲ್ಲಾ ಅಂಧಕಾರದಲ್ಲಿ ಮುಳುಗಿತು.

ಶ್ರೀ ಏಕಾಮ್ರನಾಥ ಸ್ವಾಮಿ ಮತ್ತು ಶ್ರೀ ಕಾಮಾಕ್ಷಿ ಅಂಬಾಳ್



ಏಕಾಮ್ರನಾಥ ದೇವಾಲಯ ಪುಷ್ಕರಿಣಿ
ಆಗ ಲೋಕವನ್ನೆಲ್ಲಾ ತಾಮಸ ಶಕ್ತಿಗಳು ಆವರಿಸಿಕೊಂಡವು. ಮಾನವರ ಪಾಪಗಳೆಲ್ಲಾ ಕರಿನೆರಳಾಗಿ ಪಾರ್ವತಿಯನ್ನು ಸುತ್ತಿಕೊಂಡವು. ಬಿಳುಪಾದ ಆಕೆಯ ಮೈಬಣ್ಣವು ಗಾಢ ಕರಿವರ್ಣಕ್ಕೆ ತಿರುಗಲ್ಪಟ್ಟಿತು. ಒಂದೇ ಒಂದು ಕ್ಷಣದಲ್ಲಿ ಆಕೆ ಅಂಧಕಾರದ ಸ್ವರೂಪಳಾಗಿ ಮಾರ್ಪಟ್ಟಳು.

"ಶಿವ ಶಿವಾ! ಇದೇನು ಹೀಗಾಗುತ್ತಿದೆ? ನನ್ನ ಮೈ ಬಣ್ಣವೇಕೆ ಕಪ್ಪಗಾಗಿದೆ?" ಪಾರ್ವತಿ ಪರಮೇಶ್ವರನನ್ನು ಕೇಳುವಳು.

"ದೇವಿ, ಇದು ಬಣ್ಣವಲ್ಲ, ಜೀವರಾಶಿಗಳ ಪಾಪಸಾಗರ." ಪರಮೇಶ್ವರ ಉತ್ತರಿಸಿದ್ದ.

ಏಕಾಮ್ರನಾಥ ದೇವಾಲಯದಮುಖ್ಯ ಗೋಪುರಗಳಲ್ಲಿ ಒಂದು
ಪಾರ್ವತಿ ಕರಿಯ ಪಾಪಕೂಪಗಳಿಂದ ದಹಿಸತೊಡಗಿದ್ದಳು. ಇದರಿಂದ ಪಾರುಮಾಡುವಂತೆ ತನ್ನ ಪತಿಯನ್ನು ಕೇಳಿದಳು.  "ಪ್ರಿಯೆ, ಇದು ಲೋಕಕಲ್ಯಾಣಾರ್ಥವಾಗಿ ಸಂಭವಿಸಿದೆ. ನೀನೀಗ ಬಬದರಿನಾಥಕ್ಕೆ ತೆರಳಬೇಕು. ಅಲ್ಲಿ ನೀನು ಮಗುವಿನ ರೂಪದಲ್ಲಿ ಕಾಣಿಸಿಕೊಳ್ಳಬೇಕು. ಕ್ಷೇತ್ರದಲ್ಲಿರುವ ಕಾತ್ಯಾಯನ ಮುನಿಯು ನಿನ್ನನ್ನು ಒಯ್ದು ಸಲಹುತ್ತಾರೆ. ನೀನು ಯಾರೆನ್ನುವುದನ್ನು ಆತ ಯೋಗಜ್ನಾನದಿಂಡ ಅರಿತಾಗ ನಿನಗೆ ಯೋಗದಂಡ, ಕಮಂಡಲ, ರುದ್ರಾಕ್ಷಿ, ಪಾತ್ರೆಗೆಳು, ಕೊಡೆ, ಚಾಮರ, ಹುರಿದ ಬೀಜಗಳು ಇದೇ ಮೊದಲಾದ ತಪಸ್ಸಿಗೆ ಅನುಕೂಲವಾಗುವ ಸಾಧನಗಳನ್ನು ನೀಡುವನು.

ಏಕಾಮ್ರನಾಥ ದೇವಾಲಯ
"ಅವುಗಳನ್ನು ತೆಗೆದುಕೊಂಡ ನೀನು ಕಾಶಿಗೆ ತೆರಳಬೇಕು. ಅಲ್ಲಿ ಕ್ಷಾಮದಿಂದ ಜನರು ಹಾಹಾಕಾರ ಪಡುತ್ತಿರುವರು.ಅವರ ಕಷ್ಟಗಳನ್ನು ನೀನು ಪರಿಹರಿಸಲು ಬೇಕು. ಅದಕ್ಕಾಗಿ ಕಾಶಿಯಲ್ಲಿ ನೀನು ಅನ್ನಪೂರ್ಣೆಯಾಗಿ ಹನ್ನೆರಡು ವರ್ಷಗಳ ಕಾಲ ನೆಲೆಸಬೇಕು.

"ಬಳಿಕ ಮತ್ತೆ ದಕ್ಷಿಣಕ್ಕೆ ತೆರಳಬೇಕು. ದಕ್ಷಿಣ ದಿಕ್ಕಿಗಿರುವ ಒಂದು ಸ್ಥಳದಲ್ಲಿ ಮುನಿಯು ನಿನಗೆ ಕೊಟ್ಟ ತಪಓ ಪರಿಕರಗಳು ಅಚ್ಚರಿ ಎನ್ನುವಂತೆ ಬದಲಾಗುತ್ತದೆ. ರುದ್ರಾಕ್ಷಿ ಮಾಲೆಯು ಬಿಲ್ವ ಮಾಲೆಯಾಗಿ, ಕೊಡೆಯು ನಾಗಭೂಷಣವಾಗಿ, ಯೋಗದಂಡವು ತ್ರಿಶೂಲವಾಗಿ, ಕಮಂಡಲುವಿನ ಜಲವು ಹಾಲಾಗಿ, ಬೀಸಣಿಗೆಯು ಗಿಳಿಯಾಗುತ್ತದೆ. ಚಾಮರವು ಷೋಡಶ ಕನ್ಯೆಯರಾಗುತ್ತಾರೆ. ಹುರಿದ ಬೀಜಗಳು ಮೊಳಕೆಯೊಡೆಯುತ್ತದೆ. ಅದುವೇ ಕಂಚಿ ಕ್ಷೇತ್ರ.

ಏಕಾಮ್ರನಾಥ ದೇವಾಲಯದ ಆವರಣ
"ಅಲ್ಲಿ ಒಂದು ಮಾವಿನ ಮರದ ಕೆಳಗೆ ಉದ್ಭವ ಲಿಂಗವು ಕಾಣುವುದು. ಅದು ನನ್ನದೇ ಸ್ವರೂಪ. ನೀನು ಅದನ್ನು ಹಾಲಿನಿಂದ ತೊಳೆದು ನಾಗಭೂಷಣದಿಂದ ಅಲಂಕರಿಸಿ, ಬಿಲ್ವದ ಮಾಲೆ ಹಾಕಿ ಪೂಜಿಸು. ಷೋಡಶ ಕನ್ಯೆಯರನ್ನು ಲಿಂಗದ ಸೇವೆಗಾಗಿ ನಿಲ್ಲಿಸಿ ಕೈಯಲ್ಲಿ ಗಿಳಿಯನ್ನು ಹಿಡಿದು ಪಂಚಾಗ್ನಿ ವೇದಿಕೆಯ ಮೇಲೆ ನಿಂತು ತಪಸ್ಸು ಮಾಡಬೇಕು. ಅಲ್ಲಿ ನಾವು ಇನ್ನೊಮ್ಮೆ ಸಮಾಗಮ ಹೊಂದುವೆವು. ಆಗ ನಿನಗೆ ಆವರಿಸಿದ ಕರಿಛಾಯೆಯು ಮಾಯವಾಗುವುದು, ಬಂಗಾರದ ವರ್ಣ ಮೂಡಿ ಬರುವುದು" ಪರಮೇಶ್ವರ ವಿವರಿಸಿದನು.

ಏಕಾಮ್ರನಾಥ ದೇವಾಲಯದ ಹೊರಸುತ್ತಿನಲ್ಲಿರುವ ವಿವಿಧ ಗಾತ್ರದ ಲಿಂಗಗಳು
(ಇಲ್ಲಿ ಒಟ್ಟು 1008 ಲಿಂಗಗಳಿವೆ)
ಪಾರ್ವತಿಯು ಅಂತೆಯೇ ಮಾಡಿದಳು. ತಾನು ಕಾತ್ಯಾಯಿನೀ ಸ್ವರೂಪ ಧರಿಸಿ ಕಾಶಿಗೆ ಬಂದು ಅಲ್ಲಿ ಅನ್ನಪೂರ್ಣೆಯಾಗಿ ಅಲ್ಲಿಂದ ದಕ್ಷಿಣಕ್ಕೆ ಬಂದು ಶಿವನು ಸೂಚಿಸಿದ ಉದ್ಭವ ಲಿಂಗಕ್ಕೆ ಪೂಜೆ ಸಲ್ಲಿಸಿ ತಪೋನಿರತಳಾದಳು.

ಆದರೆ ಆಕೆ ಎಷ್ಟು ಕಾಲ ತಪಸ್ಸು ಮಾಡಿದರೂ ಶಿವ ಪ್ರತ್ಯಕ್ಷನಾಗಲಿಲ್ಲ. ಅದಾಗ ಒಮ್ಮೆ ಅಲ್ಲಿಗೆ ಬಂದ ನಾರದರು ಕಾತ್ಯಾಯಿನಿಗೆ 'ಪಂಚಪಾನ ಮಂತ್ರ' ವನ್ನು ಉಪದೇಶಿಸಿದರು. ಮಂತ್ರೆ ಬಲದಿಂದ ಶಿವನಲ್ಲಿ ಕಾಮೋದ್ದೀಪನವಾಯಿತು. ಕಾಮನ ಉರಿ ತಾಳಲಾಗದೆ ಪರಮೇಶ್ವರ ಗಂಗೆಯನ್ನು ದಕ್ಷಿಣಕ್ಕೆ ಕಳಿಸಿದ. ಗಂಗೆ ಎಲ್ಲವನ್ನೂ ಮುಳುಗಿಸುತ್ತಾ ಸಾಗಿದ್ದಳು. ಆದರೆ ಪಾರ್ವತಿಯು ಕಾಳಿ ಸ್ವರೂಪವನ್ನು ತಾಳಿ ಗಂಗೆಯನ್ನು ತನ್ನ ಕಪಾಲದಲ್ಲಿ ತುಂಬಿಸಿಕೊಂಡಳು.

ಏಕಾಮ್ರನಾಥ ದೇವಾಲಯ
ಆಗ ಶಿವನು ತಾನು ಪ್ರಳಯರುದ್ರನಾಗಿ ಅವಳ ಮೇಲೆ ನುಗ್ಗಿದನು. ಆದರೆ ಕಾತ್ಯಾಯಿನಿಯು ಪ್ರಳಯದಲ್ಲಿ ತಾನು ಪೂಜಿಸುತ್ತಿದ್ದ ಲಿಂಗವು ಮುಳುಗಬಾರದೆನ್ನುವ ಕಾರಣಕ್ಕೆ ಅದನ್ನು ಎತ್ತಿ ತನ್ನ ಎದೆ ಭಾಗದಲ್ಲಿರಿಸಿಕೊಂಡಳು.

ಪರಮೇಶ್ವರನನ್ನು ದಹಿಸುತ್ತಿದ್ದ ಕಾಮಾಗ್ನಿಯು ಕಾತ್ಯಾಯಿನಿಯ ಸಂಗಮದಿಂದ ಶಾಂತಗೊಂಡಿತು. ಕ್ಷಣವೇ ಕಾತ್ಯಾಯಿನಿ ಸ್ವರೂಪದ ಪಾರ್ವತಿಗೆ ಆವರಿಸಿದ್ದ ಕರಿಛಾಯೆ ತೊಲಗಿ ಹೋಯಿತು. ಶಿವನು ತನ್ನ ನಿಜ ಸ್ವರೂಪದಲ್ಲಿ ಕಾತ್ಯಾಯಿನೀ ಸ್ವರೂಪದ ಪಾರ್ವತಿಗೆ ಕಾಣಿಸಿದ. ದೇವಾನುದೇವತೆಗಳು ಸಂದರ್ಭದಲ್ಲಿ ಹರ್ಷಚಿತ್ತರಾಗಿ ಹೂಮಳೆಗೆರೆದರು. ಅವರು ಕಾಂಚೀಪುರದಲ್ಲಿ ಶಿವ ಪಾರ್ವತಿಯರ ಕಲ್ಯಾಣ ಮಹೋತ್ಸವ ನೆರವೇರಿಸಲು ಉದ್ಯುಕ್ತರಾದರು.

ಹಾಗೆ ಶಿವ ಪಾರ್ವತಿಯರ ಕಲ್ಯಾಣವು ಒಂಭತ್ತು ದಿನಗಳ ಕಾಲ ನಡೆಯಿತು. ಹತ್ತನೇ ದಿನಕ್ಕೆ ಶಿವನು ಏಕಾಮ್ರನಾಥ* ಸ್ವರೂಪದಲ್ಲಿಯೂ, ಪಾರ್ವತಿಯು ಕಾಮಾಕ್ಷಿ ಸ್ವರೂಪದಲ್ಲಿಯೂ ವೇದಿಕೆ ಮೇಲೆ ಕುಳಿತರು.

ಬ್ರಹ್ಮ, ಮಹಾವಿಷ್ಣು, ಲಕ್ಷ್ಮಿದೇವಿಯರು ವಿವಾಹದ ಮುಖ್ಯ ಆದ್ವರ್ಯರಾಗಿದ್ದರು. ಹೀಗೆ ದೇವಾನು ದೇವತೆಗಳ ಸಮ್ಮುಖದಲ್ಲಿ ಏಕಾಮ್ರನಾಥನು ಕಾಮಾಕ್ಷಿಯ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದನು. ಶ್ರೀ ಕಾಮಾಕ್ಷೀ-ಏಕಾಮ್ರನಾಥರ ವಿವಾಹ ಸಂಪನ್ನವಾಯಿತು.

ಏಕಾಮ್ರನಾಥ ದೇವಾಲಯ ಭವ್ಯ ನೋಟ


*ಏಕಾಮ್ರ - ಏಕ ಎಂದರೆ ಒಂದು, ಆಮ್ರ ಎಂದರೆ ಮಾವಿನ ಮರ. ಏಕಾಮ್ರ ಎಂದರೆ ಒಂದು ಮಾವಿನ ಮರ. ಪಾರ್ವತಿಯು ಶಿವಲಿಂಗವನ್ನು ಪೂಜಿಸಿ ತಪೋನಿರತಳಾಗಿದ್ದ ಮಾವಿನ ಮರವನ್ನು ಇದು ಸೂಚಿಸುವುದು.



Friday, March 16, 2018

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 90

ಕಾಂಚೀಪುರ (Kanchipuram)
ಭಾಗ - 1

ಕಂಚಿ, ಕಾಂಚೀಪುರ - ತಮಿಳುನಾಡಿನಲ್ಲಿರುವ ಭಾರತದ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದು. ದೇವಾಲಯಗಳ ನಗರಿ, ಪ್ರಾಚೀನ ಶಿಕ್ಷಣ ಕೇಂದ್ರ, ರೇಷ್ಮೆ ಉತ್ಪಾದನೆ, ಪಲ್ಲವರ ರಾಜಧಾನಿ ಇಹೀಗೆ ನಾನಾ ಕಾರಣಗಳಿಂಡ ಹೆಸರಾಗಿರುವ ಈ ಪಟ್ಟಣದ ಸೊಗಸೇ ಅವರ್ಣನೀಯವಾದದ್ದು.

ಚೆನ್ನೈನಿಂದ ನೈಋತ್ಯಕ್ಕೆ 75 ಕಿಮೀ ದೂರದಲ್ಲಿ, ಪಾಲಾರ್ ನದಿಯ ದಡದಲ್ಲಿ ಚೆಂಗಲ್ಪಟ್ಟಿಗೆ 35 ಕಿಮೀ ದೂರದಲ್ಲಿರುವ ನಗರಿ  ಪ್ರಾಚೀನ ಕಾಲದಿಂದಲೂ ಅನೇಕ ಸಂತರು, ಭಕ್ತರು, ಕಲಾವಿದರು, ರಾಜಕಾರಣಿಗಳು, ಸಂಗೀತಗಾರರು. ಶ್ರವಣರು ಹಾಗೂ ತಾತ್ತ್ವಿಕರಿಗೆ ವಿದ್ಯಾಕೇಂದ್ರವೂ ಜನ್ಮಸ್ಥಳವೂ ಆಗಿದೆ.  ಅರ್ಥಶಾಸ್ತ್ರ ರಚಿಸಿದ ಚಾಣಕ್ಯ ಮತ್ತು ಕರ್ಣಾಟಕ ಸಂಗೀತದ ಪಿತಾಮಹಾರೆನಿಸಿದ ಶಾಮಶಾಸ್ತ್ರಿಗಳ ಜನ್ಮಸ್ಥಳ ಇದೇ ಕಾಂಚೀಪುರ.

ಲಲಿತಾ ತ್ರಿಪುರಸುಂದರೀ ಶ್ರೀ ಕಾಮಾಕ್ಷಿ ಅಂಬಾಳ್


ಶಿವಕಂಚಿ, ವಿಷ್ಣುಕಂಚಿ ಎಂದು ನಗರದಲ್ಲಿ ಎರಡು ಭಾಗಗಳಿದ್ದು ಶಿವಕಂಚಿಯಲ್ಲಿ ಸುಪ್ರಸಿದ್ಧ ಕಾಮಾಕ್ಷಿ, ಏಕಾಂಬರೇಶ್ವರ, ಕೈಲಾಸನಾಥ ದೇವಸ್ಥಾನಗಳಿವೆ. ಶಂಕರಾಚಾರ್ಯರ ಪೀಠಗಳಲ್ಲಿ ಒಂದಾದ ಕಾಮಕೋಟಿ ಪೀಠವಿದೆ.  ವಿಷ್ಣುಕಂಚಿಯಲ್ಲಿ ವರದರಾಜಸ್ವಾಮಿ ದೇವಸ್ಥಾನವಿದೆ. ವರ್ಷಂಪ್ರತಿ ಇಲ್ಲಿ ನಡೆಯುವ ಉತ್ಸವಗಳಿಗೆ ದಕ್ಷಿಣ ಭಾರತದಿಂದಲೇ ಅಲ್ಲದೆ ಉತ್ತರ ಭಾರತದಿಂದಲೂ ಅಸಂಖ್ಯಾತ ಯಾತ್ರಾರ್ಥಿಗಳು ಆಗಮಿಸುತ್ತಾರೆ. 

ಕಾಂಚೀಪುರ ರೇಷ್ಮೆ ನೇಯ್ಗೆಯಲ್ಲಿ ಜಗದ್ವಿಖ್ಯಾತವೆನಿಸಿದೆ. ಇಲ್ಲಿ ತಯಾರಾದ ರೇಷ್ಮೆ ಸೀರೆಗಳಿಗೆ ವಿದೇಶಗಳಿಂದ ಹೆಚ್ಚಿನ ಬೇಡಿಕೆಯಿದೆ. ಇಲ್ಲಿ 8,000 ಕ್ಕೂ ಮೇಲ್ಪಟ್ಟು ರೇಷ್ಮೆ ಕೈಮಗ್ಗಗಳಿವೆ. 

***


ಕಾಮಾಕ್ಷಿ ಅಂಬಾಳ್ ದೇವಾಲಯ

ಕಾಮಾಕ್ಷಿ - ಲಲಿತಾ ತ್ರಿಪುರಸುಂದರಿಯ ಸ್ವರೂಪಿಯ ಮೇರು ದೇವತೆ. ಹೊಂದಿದ ಸುಂದರ ಸ್ವರೂಪಿಣಿ. ಈಕೆ ಸೌಂದರ್ಯ ಹಾಗೂ ಶಾಂತಿಯ ಮೇರು ದೇವತೆ. ಕಾಮಾಕ್ಷಿ - ಶಿವನನ್ನು ಕಾಮಿಸುವ ಕಣ್ಣಿಂದ ಕಾಣುವವಳು. ಆಕರ್ಷಕ ಕಾಮಭರಿತ ಕಣ್ಣುಗಳುಳ್ಳ ದೇವಿ.  'ಕಾ' ಎಂದರೆ ಸರಸ್ವತಿ, 'ಮಾ' ಎಂದರೆ ಲಕ್ಷ್ಮಿ, ಲಕ್ಷ್ಮಿ ಹಾಗೂ ಸರಸ್ವತಿಯರನ್ನೇ ಕಣ್ಣುಗಳನ್ನಾಗಿ ಹೊಂದಿದವಳು ಕಾಮಾಕ್ಷಿ.

ಇಂತಹಾ ಅಪರೂಪದ ಸನ್ನಿಧಾನವಿರುವುದು ಕಂಚಿಯಲ್ಲಿ. ಕಾಮಾಕ್ಷಿಯ ಗರ್ಭಗೃಹವನ್ನು 'ಗಾಯತ್ರೀ ಮಂಟಪ' ಎನ್ನಲಾಗುತ್ತದೆ. ಇದನ್ನು 'ಕಾಮಾಕ್ಷಿ ರಹಸ್ಯ'ದ ಅನುಸಾರ ದೇವತೆಗಳು ನಿರ್ಮಿಸಿದ್ದಾರೆ.

ಕಂಚಿ ಭಾರತದ ಐವತ್ತೊಂದು ಶಕ್ತಿಪೀಠಗಳಲ್ಲಿ ಒಂದು, ಇಲ್ಲಿ ಸತಿದೇವಿಯ ನಾಭಿಸ್ಥಾನವಿದೆ. ಕಾಂಚೀಪುರ ಜಗತ್ತಿನ ನಾಭಿಸ್ಥಾನ. ವಿಶ್ವದ ನಾಡಿಗಳೆಲ್ಲಾ ಸೇರುವ ಸ್ಥಳ. 

***

ಶಿವನೊಲುಮೆಗೆ ಪಾರ್ವತಿ ತಪಸ್ಸಿನಲ್ಲಿ ನಿರತಳಾಗಿದ್ದಳು. ಆಗ ಪರಮೇಶ್ವರನೂ ತಪೋನಿರತನಾಗಿದ್ದ. ಭೂಮಂಡಲದಲ್ಲಿ ತಾರಕಾಸುರನ ಅಟ್ಟಹಾಸ ಮೇರೆ ಮೀರಿತ್ತು. ಅವನನ್ನು ಅಡಗಿಸಲು ಶಿವ-ಪಾರ್ವತಿಯರು ಒಂದಾಗಬೇಕಾದದ್ದು ಅನಿವಾರ್ಯವಾಗಿತ್ತು. ಆಗ ದೇವತೆಗಳು ಶಿವನ ತಪೋಭಂಗ ಮಾಡಲು ಮನ್ಮಥನನ್ನು ಕಳಿಸಿದರು. ಆದರೆ ತನ್ನ ಧ್ಯಾನಕ್ಕೆ ಭಂಗವಾಗಿದ್ದರಿಂದ ಕ್ರೋಧಗೊಂಡ ಶಿವ ಅವನ ಮೂರನೇ ಕಣ್ಣಿನಿಂದ ಮನ್ಮಥನನ್ನು ಸುಟ್ಟು ಹಾಕಿದ. 

ಶಿವಗಣನಾದ ಚಿತ್ರಸೇನನಿಗೆ ಕಾಮದೇವ (ಮನ್ಮಥ)ನ ಮೇಲೆ ಕರುಣೆ ಬಂದಿತು. ಅವನು ಮನ್ಮಥನ ಸುಟ್ಟ ಭಸ್ಮದಿಂಡ ಒಂದು ಮಾನವ ರೂಪ ರಚನೆ ಮಾಡಿದ್ದ. ಶಿವನ ಕೋಪ ತಣಿದ ಬಳಿಕ ಆ ಮಾನವ ರೂಪದ ಭಸ್ಮದ ಗೊಂಬೆಯನ್ನು ಶಿವನ ಬಳಿ ತಂದು ಅದಕ್ಕೆ ಜೀವವನ್ನೀಯಲು ಹೇಳಿದ. ಶಿವ ಆ ಗೊಂಬೆಗೆ ಪ್ರಾಣವಾಯು ನೀಡಿ ಜೀವ ತುಂಬಿದ. ಭಸ್ಮದಿಂಡ ಜನ್ಮಿಸಿದ ಆ ಮಾನವಾಕೃತಿಗೆ 'ಭಂಡ' ಎಂದು ಹೆಸರಾಗಿತ್ತು. ಮನ್ಮಥನ ಗುಣ ಸ್ವಭಾವಗಳು ಆ ವ್ಯಕ್ತಿಯಲ್ಲಿ ಅಡಕವಾಗಿದ್ದವು.

ಚಿತ್ರಸೇನನೇ ಆತನಿಗೆ ವೇದ ವೇದಾಂಗಗಳನ್ನು ಕಲಿಸಿದ. ಭಂಡ ಮುಂದೊಂದು ದಿನ ಘೋರ ತಪಸ್ಸು ಮಡಿ ಶಿವನನ್ನು ಒಲಿಸಿಕೊಂಡು ಮಹಾ ಶಕ್ತಿಗಳನ್ನು ಪಡೆದ. ಯೋನಿ ಜನ್ಯರಾದ ಯಾರಿಂದಲೂ ತನ್ನನ್ನು ಕೊಲ್ಲಲು ಸಾಧ್ಯವಾಗಬಾರದು ಎನ್ನುವುದು ಆ ವರದಲ್ಲಿ ಒಂದಾಗಿತ್ತು.

ಕಾಮಾಕ್ಷಿ ಅಂಬಾಳ್ ದೇವಾಲಯ

ಮುಂದೆ ಆತ ಮಹಾ ಅಹಂಕಾರಿ, ದುಷ್ಟನಾಗಿ ಬೆಳೆದ. ದೇವತೆಗಳಿಗೆ ಕಿರುಕುಳ ನೀಡಿ ಅವರ ಸ್ವರ್ಗದ ಮೇಲೆ ದಾಳಿ ನಡೆಸಿದ್ದ. ಆಗ ದೇವತೆಗಳು ಮತ್ತೆ ಶಿವನ ಮೊರೆ ಹೋಗಬೇಕಾಯಿತು. ಪರಮೇಶ್ವರನು ಅವರಿಗೆ "ಕೈಲಾಸದ ಗೋಮುಖದ ಮುಖೇನ ಭೂಗರ್ಭದ ಗುಹೆ ಪ್ರವೇಶ ಮಾಡಿ ಸುರಂಗದಲ್ಲಿ ಸಾಗಿರಿ, ಸುರಂಗದ ಇನ್ನೊಂದು ತುದಿಗೆ ಕಾಂಚೀಪುರ ಎನ್ನುವ ಸ್ಥಳವಿದೆ. ಅಲ್ಲಿ ತೆರಳಿ ದೇವಿಯನ್ನು ಪ್ರಾರ್ಥಿಸಿ. ಆಕೆ ನಿಮ್ಮ ಸಹಾಯಕ್ಕೆ ಆಗಮಿಸುತ್ತಾಳೆ" ಎಂದನು.

ದೇವತೆಗಳು ಅಂತೆಯೇ ಕಾಂಚೀಪುರಕ್ಕೆ ಆಗಮಿಸಿ ದೇವಿಯ ಪ್ರಾರ್ಥನೆ ನಡೆಸಿದರು. ಆಗ ನಡೆಸಿದ್ದ ಯಜ್ಞದ ಪೂರ್ಣಾಹುತಿ ವೇಳೆ ಯಜ್ಞಕುಂಡದಿಂಡ ಶ್ರೀಚಕ್ರ ಹಾಗೂ ಕಾಮಾಕ್ಷಿ ಸ್ವರೂಪಿಣಿಯಾದ ದೇವಿ ಉದ್ಭವಿಸಿದಳು.

ತ್ರಿಪುರಸುಂದರಿಯಾದ ದೇವಿ ಭಂಡಾಸುರನ ಸೈನ್ಯದ ಮೇಲೆದಾಳಿ ನಡೆಸಲು ಶಕ್ತಿ ಹಾಗೂ ಮಾತೃಕೆಯರನ್ನು ಕಳಿಸಿದಳು. ಭಂಡಾಸುರನು ತನ್ನ ಸಿನ್ಯವನ್ನು ಕಳೆದುಕೊಂಡ ತರುವಾಯ ಮಾಯಾ ಯುದ್ಧಕ್ಕೆ ಇಳಿದನು. ಆಗ ಕಾಮಾಕ್ಷಿ ಉಗ್ರ ಸ್ವರೂಪ ಹೊಂದಿ ತನ್ನ ಕಾಲನ್ನೊಮ್ಮೆ ನೆಲಕ್ಕೆ ಅಪ್ಪಳಿಸಿದಳು. ಈ ಹೊಡೆತಕ್ಕೆ ಭೂಮಂಡಲ ಕಂಪಿಸಿ ಹೋಗಿತ್ತು. ಭಂಡಾಸುರ ಮುಗ್ಗರಿಸಿ ಬಿದ್ದನು. ದೇವಿಯು ಆತನ ರುಂಡವನ್ನು ಚೆಂಡಾಡಿದಳು.

ಕಾಮಾಕ್ಷಿ ಅಂಬಾಳ್ ದೇವಾಲಯ

ಹೀಗೆ ಭಂಡಾಸುರನ ವಧೆಯಾಯಿತು. ಆ ಬಳಿಕ ದೇವಿಯ ಆದೇಶದಂತೆ ಒಂದು ಗುಂಡಿಯನ್ನು ತೋಡಿ ಅದರಲ್ಲಿ ಭಂಡಾಸುರನ ದೇಹವನ್ನಿಟ್ಟು ಸಮಾಧಿ ಮಾಡಲಾಯಿತು. ಆಗ ದೇವಿ ಆ ಸಮಾಧಿಯ ಮೇಲೆ ಒಂದು ವಿಜಯ ಸ್ಥಂಭವನ್ನು ನೆಟ್ಟಳು. ದೇವತೆಗಳು ತಾಯಿ ಕಾಮಾಕ್ಷಿಯ ಗೌರವಾರ್ಥ ಆ ನಗರದಲ್ಲಿ ಒಂದು ದೇವಾಲಯ ನಿರ್ಮಾಣ ಮಾಡಿದರು.

ಅದುವೇ ಕಂಚಿ ಕಾಮಾಕ್ಷಿ ಅಂಬಾಳ್ ದೇವಾಲಯ.