Thursday, September 19, 2013

ನಮ್ಮಲ್ಲಿನ ಸ್ಥಳ ಪುರಾಣಗಳು(Myths) -7

ಸೋಮನಾಥ(Somanath)
    ಗುಜರಾತ್ ನಲ್ಲಿರುವ ಹಿಂದೂಗಳ ಪ್ರಸಿದ್ದ ಯಾತ್ರಾಕ್ಷೇತ್ರಗಳಲ್ಲಿ ಸೋಮನಾಥ ದೇವಾಲಯವೂ ಒಂದು. ಈ ಹಿಂದೆ ಅಪಾರವಾದ ಸಂಪತ್ತನ್ನು ಹೊಂದಿದ್ದ ಸೋಮನಾಥ ದೇವಾಲಯದ ಮೇಲೆ ಇತಿಹಾಸದುದ್ದಕ್ಕೂ ಮುಸ್ಲಿಮ್ ಬಂಡುಕೋರರಿಂದ ಹತ್ತು ಹಲವು ಬಾರಿ ಧಾಳಿಯಾಗಿದೆ, ಅಲ್ಲದೆ ದೇವಾಲಯವನ್ನು ಸಂಪೂರ್ಣ ಧ್ವಂಸಗೊಳಿಸಲಾಗಿತ್ತು. ಮತ್ತೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಮಾರ್ಗದರ್ಶನ ಮತ್ತು ಸಾರಥ್ಯದಲ್ಲಿ ಬೃಹತ್ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಯಿತು. ಯುಗ ಯುಗಾಂತರಗಳಿಂದಲೂ ಜ್ಯೋತಿರ್ಲಿಂಗ ಸ್ವರೂಪಿಯಾಗಿ ಪರಮೇಶ್ವರನು ತಾನು ಸೋಮನಾಥನೆನ್ನುವ ಹೆಸರಿನಿಂದ ಭಕ್ತಕೋಟಿಯಿಂದ ಆರಾಧಿಸಲ್ಪಡುತ್ತಿರುವ ಪವಿತ್ರ ಕ್ಷೇತ್ರ ಈ ಸೋಮನಾಥ.
     ಬಹಳ ಹಿಂದೊಮ್ಮೆ ದಕ್ಷ ಬ್ರಹ್ಮನು ಭೂಮಿಯನ್ನಾಳುತ್ತಿರಲು ಅವನಿಗೆ ಇಪ್ಪತ್ತೇಳು ಮಂದಿ ಹೆಣು ಮಕ್ಕಳಿದ್ದರು. ಅವರಲ್ಲರನ್ನೂ ಚಂದ್ರನಿಗೆ ಮದುವೆ ಮಾಡಿಕೊಡಲಾಗಿತ್ತು. ಚಂದ್ರನು ಒಬ್ಬೊಬ್ಬರೊಡನೆ ಒಂದೊಂದು ದಿನವಿರಬೇಕೆಂಬ ಒಪ್ಪಂದವೇರ್ಪಟ್ಟಿತ್ತು. ಹೀಗಿರಲು ಚಂದ್ರನಿಗೆ ಆ ಇಪ್ಪತ್ತೇಳು ಜನರಲ್ಲಿ ನಾಲ್ಕನೆಯವಳಾದ ರೋಹಿಣಿಯಲ್ಲಿ ಹೆಚ್ಚಿನ ಒಲವಿತ್ತು. ಹೀಗಾಗಿ ಚಂದ್ರನು ರೋಹಿಣಿಯೊಂದಿಗೆ ತನ್ನ ಸಮಯವನ್ನೆಲ್ಲಾ ಕಳೆಯಲು ಬಯಸಿದನು ಮತ್ತು ಇತರೆ ಇಪ್ಪತ್ತಾರು ಮಡದಿಯನ್ನು ಅಲಕ್ಷಿಸಲು ಪ್ರಾರಂಭಿಸಿದನು. ಆ ಮಡದಿಯರೇನಾದರೂ ಈ ಬಗ್ಗೆ ಚಂದ್ರನಲ್ಲಿ ಕೇಳಿದರೆ ಅವರನ್ನು ನಿಂದಿಸುತ್ತಿದ್ದನು. ಇದರಿಂದ ಬಲು ಬೇಸರಗೊಂಡ ಆ ಇಪ್ಪತ್ತಾರು ಮಡದಿಯರು ತಮ್ಮ ತಂದೆ ದಕ್ಷರಾಜನಲ್ಲಿಗೆ ಹೋಗಿ ತಮ್ಮ ಕಷ್ಟವನ್ನು ತೋಡಿಕೊಂಡರು. ತನ್ನ ಮಕ್ಕಳ ಮಾತುಗಳನ್ನು ಕೇಳಿಸಿಕೊಂಡ ದಕ್ಷನು ಅಳಿಯ ಚಂದ್ರನನ್ನು ಕರೆಸಿಕೊಂಡು ಬುದ್ದಿ ಮಾತುಗಳನ್ನು ಹೇಳಿದನು. ಆದರೂ ಸಹ ತನ್ನ ಮಾವನ ಬುದ್ದಿವಾದಗಳನ್ನು ಗಣನೆಗೆ ತೆಗೆದುಕೊಳ್ಳದ ಚಂದ್ರ ರೋಹಿಣಿಯೊಂದಿಗೆ ಕಾಲಕಳೆಯುವುದನ್ನೇ ಮುಂದುವರಿಸಿದನು. ಅಳಿಯನ ಈ ಬಗೆಯ ನಡತೆಯಿಂದ ಕೋಪಗೊಂಡ ದಕ್ಷರಾಜನು ಚಂದ್ರನಿಗೆ ಕ್ಷಯಿಸುವಂತೆ ಶಾಪವನ್ನಿತ್ತನು. ಈ ಶಾಪದಿಂದ ನೊಂದಂತಹಾ ಚಂದ್ರನು ಪರಿ ಪರಿಯಾಗಿ ಬೇಡಿ ಕಾಡಿದರೂ ಶಾಪದಿಂದ ಪಾರಾಗುವ ದಾರಿಯು ಕಾಣದೆ ಹೋಯಿತು. ಕೊನೆಗೆ ಬೇರೆ ದಾರಿ ಕಾಣದೆ ಸೃಷ್ಟಿಕರ್ತನಾದ ಬ್ರಹ್ಮನಲ್ಲಿಗೆ ಧಾವಿಸಿದ ಚಂದ್ರನು ತನ್ನನ್ನು ಈ ಶಾಪದಿಂದ ಪಾರುಮಾಡಬೇಕೆಂದು ಬೇಡಿಕೊಂಡನು. ಅದಕ್ಕೆ ಉತ್ತರಿಸಿದ ಬ್ರಹ್ಮನು “ನಾನು ಈ ಶಾಪವನ್ನು ಹಿಂಪಡೆಯಲು ಸಾಧ್ಯವಿಲ್ಲ. ನೀನು ಪರಮೇಶ್ವರನ ಮೊರೆ ಹೋಗು, ಅವನಾದಲ್ಲಿ ಏನು ಬೇಕಾದರೂ ಮಡಿಯಾನು” ಎಂದು ಹೇಳಿ ಕಳಿಸಿದನು.
    ಬ್ರಹ್ಮನ ಮಾತಿನಿಂದ ಸಂತೋಷಗೊಂಡ ಚಂದ್ರನು ಶಿವನನ್ನು ಕುರಿತು ಹಲವು ವರ್ಷಗಳ ಕಾಲ ಘೋರ ತಪಸ್ಸನ್ನಾಚರಿಸಿದನು. ಅಂತಿಮವಾಗಿ ಚಂದ್ರನ ತಪಸ್ಸಿಗೆ ಮೆಚ್ಚಿದ ಪರಮೇಶ್ವರನು ಪ್ರತ್ಯಕ್ಷನಾಗಲು ಚಂದ್ರನು ತನ್ನ ಮಾವನು ತನಗಿತ್ತ ಶಾಪದಿಂದ ನನ್ನನ್ನು ಮುಕ್ತನನ್ನಾಗಿ ಮಾಡೆಂದು ಬೇಡಿಕೊಂಡನು. ಅದಕ್ಕೆ ಪರಮೇಶ್ವರನು “ನಾನು ಆ ಶಾಪವನ್ನು ಹಿಂಪಡೆಯಲು ಬರುವುದಿಲ್ಲ. ಆದರೆ ನಾನಿಗೊಂದು ವರವನ್ನು ಕೊಡುವೆನು, ಅದರಂತೆ ನೀನಿ ಒಂದು ತಿಂಗಳಿನಲ್ಲಿ ಹದಿನೈದು ದಿನ ಕ್ಷಯಿಸುತ್ತಾಹೋದರೆ ಮತ್ತೆ ಹದಿನೈದು ದಿನ ವೃದ್ದಿಸುತ್ತೀಯೆ” ಎಂದನು.

    ಅದರಂತೆಯೇ ಮುಂದೆ ಎಂದೆಂದಿಗೂ ಚಂದ್ರನು ತಿಂಗಳೊದರಲ್ಲಿ ಹದಿನೈದು ದಿನ ಕ್ಷಯಿಸಿದರೆ, ಮತ್ತೆ ಹದಿನೈದು ದಿನ ವೃದ್ದಿಯಾಗುತ್ತಾನೆ. ಶಿವನು ನೀಡಿದ ಈ ವರದಾನದಿಂದ ಹರ್ಷಿತನಾದ ಚಂದ್ರನು ಪರಮೇಶ್ವರನಿಗಾಗಿ ಸೌರಾಶ್ಟ್ರದ ಕಡಲ ತಡಿಯ ಸುಂದರ ಪ್ರದೇಶದಲ್ಲಿ ಸ್ವರ್ಣಮಂದಿರವನ್ನು ನಿರ್ಮಾಣ ಮಾಡಿಕೊಟ್ಟನು. ಅದರಿಂದ ಸಂತುಷ್ಟನಾದ ಪರಮೇಶ್ವರನು ತಾನು ಜ್ಯೋತಿರ್ಲಿಂಗ ಸ್ವರೂಪಿಯಾಗಿ ಅಲ್ಲಿ ನೆಲೆನಿಂತು ತನ್ನ ಭಕ್ತರ ಅಭೀಷ್ಠೆಯನ್ನು ಈಡೇರಿಸಲು ಮುಂದಾದನು. 
    ಚಂದ್ರನಿಗೆ ವರನೀಡಿದ ಕಾರಣ ಚಂರನಿಂದ ನಿರ್ಮಾಣಗೊಂಡ ಈ ಕ್ಷೇತ್ರ ಸೋಮನಾಥವೆಂದು ಪ್ರಖ್ಯಾತಗೊಂದಿದೆ. 

No comments:

Post a Comment