Thursday, October 18, 2018

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -94

ಶಿರಡಿ (Shirdi)
ಭಾಗ- 1

"ಓಂ ಸಾಯಿರಾಂ" ನಾಳೆ (ಶುಕ್ರವಾರ 19 ಅಕ್ಟೋಬರ್ 2018) ವಿಜಯದಶಮಿ ದಿನದಂದು ಶಿರಡಿಯ ಮಹಾಸಂತ ಶ್ರೀ ಸಾಯಿಬಾಬಾ ಸಮಾಧಿಸ್ಥರಾಗಿ 100 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ಜೀವನ ಸಂದೇಶಳ ಸಾರುವ ಶಿರಡಿ ಕ್ಷೇತ್ರ ಪರಿಚಯ ಜತೆಗೆ ಸಾಯಿಬಾಬಾ ಜೀವನ, ಬೋಧನೆ, ಪವಾಡಗಳ ಸಂಕ್ಷಿಪ್ತ ನೋಟವನ್ನು "ನಮ್ಮಲ್ಲಿನ ಸ್ಥಳ ಪುರಾಣಗಳು" ಮಾಲಿಕೆಯಲ್ಲಿ ಎರಡು ಭಾಗವಾಗಿ ಬರೆಯುತ್ತಿದ್ದೇನೆ.



ಶಿರಡಿ ನಗರ ಪಂಚಾಯತ ಎಂದು ಪರಿಚಿತವಾಗಿರುವ ಪುರಸಭೆ ಯ ಆಡಳಿತ ವ್ಯಾಪ್ತಿಯಲ್ಲಿ ಬರುವ, ಮಹಾರಾಷ್ಟ್ರದ ಅಹಮದ್‌ನಗರ್ ಜಿಲ್ಲೆಯ ರಾಹತಾ ತಾಲ್ಲೂಕಿನಲ್ಲಿ ಸ್ಥಿತವಾಗಿರುವ ಒಂದು ಪಟ್ಟಣ. ಅಹಮದ್‌ನಗರ್‌ದಿಂದ ಸರಿಸುಮಾರು 83 ಕಿ.ಮಿ. ಮತ್ತು ಕೋಪರಗಾ೦ವನಿಂದ 15 ಕಿ.ಮಿ. ದೂರವಿರುವ ಇದನ್ನು ಅಹಮದ್‌ನಗರ್ - ಮನ್ಮಾಡ್ ರಾಜ್ಯ ಹೆದ್ದಾರಿ ಸಂಖ್ಯೆ 10 ರ ಮೂಲಕ ತಲುಪಬಹುದಾಗಿದೆ.

ಶಿರಡಿ ಪಟ್ಟಣದ ಹೃದಯಭಾಗದಲ್ಲಿ 200 ಚದರ ಮೀ. ವಿಸ್ತೀರ್ಣದಲ್ಲಿರುವ ಶ್ರೀಸಾಯಿಬಾಬಾ ದೇವಸ್ಥಾನ ವಿಶ್ವಾದ್ಯಂತ ಆಗಮಿಸುವ ಭಕ್ತಾದಿಗಳಿಂದ ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಸರಾಸರಿ ದಿನನಿತ್ಯ 20,000 ಭಕ್ತರು ಶ್ರೀ ಸಾಯಿಬಾಬಾ ದರ್ಶನಕ್ಕೆ ಬರುತ್ತಾರೆ.  ಹಬ್ಬದ ಋತುವಿನಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಭಕ್ತಾದಿಗಳು ಮಂದಿರಕ್ಕೆ ಭೇಟಿ ನೀಡುತ್ತಾರೆ. 

1998-99ರಲ್ಲಿ ದೇವಸ್ಥಾನ ಆವರಣವನ್ನು ನವೀಕರಣಗೊಳಿಸಲಾಯಿತು. ಈಗ ದರ್ಶನ ಮಾರ್ಗ, ಪ್ರಸಾದ(ಬೋಜನ, ರಾತ್ರಿಯೂಟ), ದಾನದ ಕೌಂಟರ್, ಪ್ರಸಾದದ ಕೌಂಟರ್, ಕ್ಯಾಂಟೀನ್, ರೈಲ್ವೆ ಮೀಸಲು ಕೌಂಟರ್, ಪುಸ್ತಕದ ಮಳಿಗೆ ಮುಂತಾದ ಸೌಲಭ್ಯಗಳಿಂದ ಸಜ್ಜುಗೊಂಡಿದೆ. ಯಾತ್ರಿಕರಿಗೆ ಸಾಯಿಬಾಬ ಸಂಸ್ಥಾನವು ವಸತಿ ಸೌಲಭ್ಯಗಳನ್ನು ಕೂಡ ಒದಗಿಸುತ್ತದೆ. 

ಮುಂಬೈನಿಂದ 161 ಕಿಮೀ, ಪುಣೆಯಿಂದ 100 ಕಿಮೀ, ಹೈದರಾಬಾದ್ 360 ಕಿಮೀ, ಮನ್ಮಾಡ್ 29 ಕಿಮೀ, ಔರಂಗಾಬಾದ್ 66, ಭೋಪಾಲ್ 277 ಕಿಮೀ ಮತ್ತು ಬರೋಡದಿಂದ 202 ಕಿಮೀ ದೂರವಿರುವ ಶಿರಡಿಗೆ  ನೇರಬಸ್ ಸೌಕರ್ಯವಿದೆ.ಹತ್ತಿರದ ರೈಲ್ವೆ ನಿಲ್ದಾಣವು ಮನ್ಮಾಡ್ ಆಗಿದ್ದು, ಕೇಂದ್ರ ರೈಲ್ವೆಯ ಮನ್ಮಾಡ್-ದಾಂಡ್ ವಿಭಾಗದಲ್ಲಿದೆ. ಮುಂಬೈ, ಪುಣೆ, ದೆಹಲಿ, ವಾಸ್ಕೊನಿಂದ ಮನ್ಮಾಡ್ ರೈಲು ಸೌಲಭ್ಯವಿದೆ. ಮುಂಬೈ ಮತ್ತು ಪುಣೆ ಹತ್ತಿರದ ವಿಮಾನ ನಿಲ್ದಾಣಗಳು.

***

ಶಿರಡಿ  ಸಾಯಿ ಬಾಬಾ (ಸಮಾಧಿ – 15 ಅಕ್ಟೋಬರ್ 1918 - ವಿಜಯದಶಮಿ ದಿನ) ತಮ್ಮ ಭಕ್ತರಿಂದ ಅವರವರ ವೈಯಕ್ತಿಕ ಒಲವುಗಳು ಹಾಗು ನಂಬಿಕೆಗಳ ಪ್ರಕಾರ ಒಬ್ಬ ಸಂತ, ಫಕೀರ, ಅವತಾರ ಅಥವಾ ಸದ್ಗುರು ಎಂದು ಪರಿಗಣಿಸಲಾಗಿದ್ದ ಮತ್ತು ಪರಿಗಣಿಸಲಾಗುವ ಒಬ್ಬ ಮಹಾನ್ ಆಧ್ಯಾತ್ಮಿಕ ಗುರುಗಳಾಗಿದ್ದರು. ಅವರು ತಮ್ಮ ಮುಸ್ಲಿಮ ಮತ್ತು ಹಿಂದೂ ಭಕ್ತರಿಂದ ಗೌರವಿಸಲ್ಪಡುತ್ತಿದ್ದರು ಮತ್ತು ತಮ್ಮ ಜೀವನದ ಅವಧಿಯಲ್ಲಿ ಹಾಗು ನಂತರ ಅವರು ಮುಸ್ಲಿಮ್ ಅಥವಾ ಹಿಂದೂಗಳೇ ಎಂಬುದು ಅನಿಶ್ಚಿತವಾಗಿಯೇ ಉಳಿಯಿತು.

ಯಾವುದೇ ವ್ಯಕ್ತಿಯಾದರು ಸರಿ ಜನಿಸಿದ ಮೇಲೆ ತನ್ನನು ತಾನು ಗುರುವಿಗೆ ಸಮರ್ಪಿಸಿಕೊಳ್ಳದಿದ್ದರೆ ಶರಣಾಗತನಾಗದಿದ್ದರೆ ಆತನಿಗೆ ಮುಕ್ತಿ ಹಾಗು ಜೀವನದ ಏಳಿಗೆಗಳೇ ಇರುವುದಿಲ್ಲ ಎಂಬ ಅಂಶವನ್ನು ಶಿರಡಿ ಸಾಯಿಬಾಬಾ ಬಲವಾಗಿ ನಂಬಿದ್ದರು ಮತ್ತು ಅದನ್ನೇ ಬೋದಿಸುತ್ತಿದ್ದರು ಕೂಡ.



ಬಾಬಾರವರು ತಮ್ಮ ಜೀವಿತಾವಧಿಯಲ್ಲಿ ಯಾವುದೇ ಒಂದು ಜಾತಿಗಾಗಲಿ ಅಥವಾ ಧರ್ಮಕ್ಕಾಗಲಿ ಬೆಲೆ ಕೊಟ್ಟವರಲ್ಲ. ಅವರು ಕೊಡುತ್ತಿದ್ದ ಬೆಲೆ ಒಂದೇ ಒಂದು ಧರ್ಮಕ್ಕೆ ಮಾತ್ರ. ಅದು “ಮನುಷ್ಯ” ಧರ್ಮ. ಹೀಗಾಗಿ ಅವರ ವ್ಯಕ್ತಿತ್ವ ಧರ್ಮಾತೀತ ಹಾಗು ಜಾತ್ಯಾತೀತ. ಅವರು ಭಕ್ತರಿಗೆ ಬೋಧಿಸುತ್ತಿದ್ದ ಅಂಶಗಳು ಹಿಂದೂ ಹಾಗು ಮುಸ್ಲಿಂ ಧರ್ಮಗಳ ತತ್ವಗಳಿಂದ ಪಕ್ವವಾಗಿ ಮನುಕುಲದ ಏಳಿಗೆಗೆ ಮಾರ್ಗದರ್ಶಿಗಳಾಗಿದ್ದವು ಎನ್ನಲಡ್ಡಿಯಿಲ್ಲ.

ಸಾಯಿ ಬಾಬಾ ಬದುಕಿದ್ದು ಮುಸ್ಲೀಮರ ಸಾಮಾನ್ಯ ಮಸೀದಿಯಲ್ಲಿ, ಆದರೆ ಅದೇ ಮಸೀದಿಗೆ ‘ದ್ವಾರಕಾಮಾಯಿ’ ಎಂಬ ಹಿಂದೂ ಹೆಸರು ನಾಮಕರಣ ಮಾಡಿ ಹಿಂದೂ ಮುಸ್ಲೀಮರ ಸಾಮರಸ್ಯದ ಜೀವನಕ್ಕೆ ನಾಂದಿ ಹಾಡಲು ಪ್ರಯತ್ನಿಸಿದ್ದರು. ಇವಿಷ್ಟೇ ಅಲ್ಲದೆ ದಿನ ನಿತ್ಯದ ಜೀವನದಲ್ಲೂ ಬಾಬಾ ಅನೇಕ ಹಿಂದೂ ಆಚರಣೆಗಳನ್ನು ಮತ್ತು ಮುಸ್ಲೀಂ ಆಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದರು.

ಬಾಬಾರವರ ಒಂದು ಸುಪ್ರಸಿದ್ಧ ಉಕ್ತಿ “ಸಬ ಕಾ ಮಾಲಿಕ್ ಏಕ್ ಹೈ”(ಸರ್ವರ ಮಾಲೀಕನು ಒಬ್ಬನೇ). ಇದು ಹಿಂದೂ, ಇಸ್ಲಾಂ ಹಾಗು ಸೂಫಿ ತತ್ವಗಳನ್ನು ಒಳಗೊಂಡಿದೆ. ಅವರು ಸದಾ ಕಾಲ ಭಕ್ತರಿಗೆ ಕೊಡುತ್ತಿದ್ದ ಅಭಯ ವಾಕ್ಯಗಳೆಂದರೆ “ನನ್ನನ್ನು ನಂಬಿ, ನಿಮ್ಮ ಪ್ರಾರ್ಥನೆಗಳಿಗೆ ನನ್ನಲ್ಲಿ ಉತ್ತರಗಳಿವೆ” ಹಾಗು “ಅಲ್ಲಾ ಮಾಲಿಕ್ “(ದೇವರೇ ಮಾಲೀಕ).

'ಸಾಯಿ' ಪದದ ಹಿನ್ನೆಲೆ

ಸಾಯಿಬಾಬಾ ರವರ ನಿಜವಾದ ಹೆಸರಿನ ಹಾಗು ಜನ್ಮ ಸ್ಥಳದ ಬಗ್ಗೆ ಯಾವುದೇ ಯಾವುದೇ ಸ್ಪಷ್ಟ ಉಲ್ಲೇಖಗಳಿಲ್ಲ. ಇದರ ಬಗ್ಗೆ ಬಾಬಾರವರನ್ನೇ ಕೇಳಿದಾಗ ಯಾವುದೇ ಸೂಕ್ತವಾದ ಸ್ಪಂದನೆ ಸಿಕ್ಕಿಲ್ಲವೆಂದೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಸಾಯಿಬಾಬಾರು ಶಿರಡಿಗೆ ಆಗಮಿಸಿ ದಾಗ ಅವರಿಗೆ ಯಾವ ಹೆಸರಿತ್ತು ಎಂಬ ಬಗ್ಗೆ ಇತಿಹಾಸದಲ್ಲಿ ಸ್ಪಷ್ಟ ಉಲ್ಲೇಖವಿಲ್ಲ.

ಆದರೆ ಸ್ಥಳೀಯ ಖಂಡೋಬ ದೇವಳದ ಆಗಮಿಕರು ಅವರನ್ನು ಕಂಡು ‘ಯಾ ಸಾಯಿ'(ಸಾಯಿ ಸುಸ್ವಾಗತ) ಎಂದು ಉದ್ಘರಿಸಿದರಂತೆ. ಅಂದಿನಿಂದ ಅವರ ಹೆಸರು ಸಾಯಿ ಬಾಬಾ ಎಂದೇ ಪ್ರಸಿದ್ಧಿಯಾಗಿದೆ. ‘ಸಾಯಿ’ ಎನ್ನುವ ಪದವು ಪೆರ್ಶಿಯಾ ಭಾಷೆಯಲ್ಲಿ ಸೂಫಿ ಸಂತರು ಗಳಿಗೆ ಕೊಡುತ್ತಿದ್ದ ಒಂದು ಬಿರುದಾಗಿತ್ತುಹಾಗು ಅದು ‘ಬಡ ವ್ಯಕ್ತಿ ‘ ಎಂಬ ಅರ್ಥ ಹೊಂದಿತ್ತು.

ಬಂಜಾರ ಭಾಷೆಯಲ್ಲಿ ಸಾಯಿ ಎಂದರೆ ‘ಒಳ್ಳೆಯ’ ಎಂಬ ಅರ್ಥವಿದೆ. ಬಾಬಾ ಎಂದರೆ ಭಾರತೀಯ ಭಾಷೆಯಲ್ಲಿ ತಂದೆಯ ತಂದೆ ಸ್ಥಾನ ಅಥವಾ ಹಿರೀಕರು ಎಂಬರ್ಥವಿದೆ. ಹೀಗಾಗಿ ಸಾಯಿ ಬಾಬಾ ಎಂದರೆ ‘ಒಳ್ಳೆಯ ಗುರು’ ‘ಪವಿತ್ರ ಗುರು’ ‘ಸಂತ ಪಿತಾಮಹ’ ಎಂಬಂತಹ ಅರ್ಥಗಳು ಬರುತ್ತವೆ. 

ಇತಿಹಾಸ ಮೂಲಗಳು

ಸಾಯಿ ಬಾಬಾ ಜೀವನ ಚರಿತ್ರಕಾರರು (ಉದಾಹರಣೆಗೆ: ಗೋವಿಂದ ರಾವ್ ರಘುನಾಥ ದಾಬೋಲ್ಕರ್, ಆಚಾರ್ಯ ಎಕ್ಕಿರಾಳ ಭಾರದ್ವಾಜ್, ಸ್ಮ್ರಿತಿ ಶ್ರೀನಿವಾಸ್, ಆಂತೋನಿಯೋ ರಿಗೊಪೋಲಾಸ್) ಅವಲೋಕಿಸಿರುವ ಪ್ರಾಥಮಿಕ ಮೂಲವೆಂದರೆ ಶಿರಡಿಯಲ್ಲಿ ದೊರೆತ ಒಂದು ಡೈರಿ. ಈ ಡೈರಿಯನ್ನು ಬರೆದಿದ್ದು ‘ಗಣೇಶ ಶ್ರೀಕೃಷ್ಣ ಕಪರ್ದೆ’ ಎನ್ನುವರು. ಇವರು ಪ್ರತಿ ದಿನವು ಶಿರಡಿಯಲ್ಲೇ ಇದ್ದುಕೊಂಡು ಡೈರಿಯನ್ನು ಬರೆದಿದ್ದಾರೆ ಎನ್ನಲಾಗಿದೆ.

ಪ್ರಾರಂಭದ ದಿನಗಳು

ಶ್ರೀ ಸಾಯಿಬಾಬಾ ಅವರ ಏಕೈಕ ಲಭ್ಯ ಜೀವನ ಚರಿತ್ರೆ "ಶ್ರೀ ಸಾಯಿ ಸತ್‌ಚರಿತೆ"ಯನ್ನು 1914ರಲ್ಲಿ ಶ್ರೀ ಅನ್ನಾ ಸಾಹೇಬ್ ಧಾಬೋಲ್ಕರ್ ಎಂಬವರು ಬರಹರೂಪಕ್ಕಿಳಿಸಿದ್ದರು.

ಒಂದು ನಂಬಿಕೆಯ ಪ್ರಕಾರ, ಮಹಾರಾಷ್ಟ್ರದ ಪರ್‌ಭನಿ ಜಿಲ್ಲೆಯ ಪಾಥರಿ ಎಂಬ ಗ್ರಾಮದಲ್ಲಿ ಸಾಯಿಬಾಬಾ ಅವರ ಜನನವು 1835ರಲ್ಲಿ ಆಯಿತು. (ಶಿರಡಿ ಸಾಯಿಬಾಬಾ ಅವರ ಜನನವು ಪಾಥರಿ ಗ್ರಾಮದಲ್ಲಿ 1830ರ ಡಿಸೆಂಬರ್ 27ರಂದು ಆಗಿತ್ತು ಎಂದು ಸತ್ಯ ಸಾಯಿಬಾಬಾ ಅವರು ಹೇಳಿದ್ದಾರೆ.)

1835ರಿಂದ 1846ರವರೆಗಿನ 12 ವರ್ಷ ಪೂರ್ತಿ ಸಾಯಿಬಾಬಾ ಅವರು ತಮ್ಮ ಮೊದಲ ಗುರು ರೋಶನ್‌ಷಾ ಫಕೀರರ ನಿವಾಸದಲ್ಲೇ ಇದ್ದರು ಎಂದು ಹೇಳಲಾಗುತ್ತಿದೆ. ತದನಂತರ 1854ರವರೆಗೆ ಬಾಬಾ ಅವರು ಬೇಂಕುಷ್ ಆಶ್ರಮದಲ್ಲಿದ್ದರು ಎನ್ನಲಾಗುತ್ತಿದೆ.

"ಸಾಯಿ ಸಚ್ಚರಿತ್ರೆ” ಗ್ರಂಥದಲ್ಲಿ ದಾಖಲಾಗಿರುವ ಪ್ರಕಾರ ಸಾಯಿ ಬಾಬಾ ತಮ್ಮ 16ನೆ ವಯಸ್ಸಿನಲ್ಲಿ ಶಿರಡಿ ಪ್ರವೇಶ ಮಾಡಿದರು. ಶಿರಡಿ ಗ್ರಾಮವು ಈಗಿನ ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಜಿಲ್ಲೆಯಲ್ಲಿದೆ. ಸಾಯಿಬಾಬ ಒಂದು ಬೇವಿನ ಮರದ ಕೆಳಗೆ ಧ್ಯಾನಸ್ಥ ಭಂಗಿಯಲ್ಲಿ ಶಿರಡಿಯ ನಿವಾಸಿಗಳ ಕಣ್ಣಿಗೆ ಬಿದ್ದರು.

ಬೇವಿನ ಮರದಡಿಯಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿದ್ದ ತೇಜೋಮಯನಾದ ಬಾಲಕನನ್ನು ಕಂಡೊಡನೆ ಶಿರಡಿಯ ನಿವಾಸಿಗಳು ಆಶ್ಚರ್ಯಭರಿತರಾದರು ಮತ್ತು ಆತನು ಯಾರೆಂಬುದನ್ನು ತಿಳಿಯಲು ಮೊದಲಾದರು. ಅಷ್ಟು ಸಣ್ಣ ವಯಸ್ಸಿನಲ್ಲಿ ಚಳಿ, ಗಾಳಿ, ಮಳೆ, ಹಗಲು, ಇರುಳುಗಳಿಗೆ ಹೆದರದೆ ಧ್ಯಾನ ಮಾಡುತ್ತಿದ್ದವನ ಕಂಡಿದ್ದೇ ಅವರೆಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು.

ಇದಾದ ಮೇಲೆ ಶಿರಡಿಯ ಧಾರ್ಮಿಕ ನಂಬಿಕೆ ಗಳಿದ್ದ ಜನರೆಲ್ಲರೂ ಬಾಬಾರನ್ನು ಸದಾ ಸಂಧಿಸುತ್ತಿದ್ದರು. ಇನ್ನುಳಿದ ಜನರು ಆ ತರುಣನನ್ನು ಹುಚ್ಚನಿರಬಹುದೆನ್ದೇ ಭಾವಿಸಿ ಕಲ್ಲು ತೂರುತ್ತಿದ್ದರು. ಈ ಘಟನೆಗಳ ನಂತರ ಸಾಯಿ ಬಾಬಾ ಶಿರಡಿಯಿಂದ ನಿರ್ಗಮಿಸಿದರು ಎನ್ನುತ್ತದೆ ಇತಿಹಾಸ. ಸಾಯಿ ಬಾಬಾ ಜೀವನ ಚರಿತ್ರೆ ಬರೆದಿರುವ ನರಸಿಂಹ ಸ್ವಾಮೀಜಿಯವರು ಸಾಯಿಬಾಬಾ ಬ್ರಾಹ್ಮಣ ದಂಪತಿಗಳಿಗೆ ಜನಿಸಿದವರೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ರಾಹ್ಮಣ ಕುಲದಲ್ಲಿ ಜನಿಸಿದರೂ ಫಕೀರರೊಬ್ಬರ ಆಶ್ರಯದಲ್ಲಿ ಬೆಳೆದಿದ್ದುದರಿಂದ ತಮ್ಮ ಆಚರಣೆಯಲ್ಲಿ ಮುಸ್ಲೀಮರ ಕೆಲವು ಆಚರಣೆಗಳನ್ನು ಒಳಗೂಡಿಸಿಕೊಂಡಿರಬಹುದು ಎಂದು ನರಸಿಂಹ ಸ್ವಾಮೀಜಿ ತಮ್ಮ ವಾದವನ್ನು ಮುಂದಿಡುತ್ತಾರೆ. ವಾದಗಳು ಏನೇ ಆದರು ‘ಸಾಯಿ ಸಚ್ಚರಿತ್ರೆ’ ಯಲ್ಲಿ ಅಧಿಕೃತವಾಗಿ ಇರುವ ಪ್ರಕಾರ ಸಾಯಿಬಾಬಾ ರ ಜನ್ಮಸ್ಥಳ, ಜನ್ಮ ದಿನಾಂಕ ಹಾಗು ಅವರ ಪೂರ್ವಾಶ್ರಮದ ಸಂಬಂಧಗಳ ಯಾವುದೇ ನಿಖರ ಉಲ್ಲೇಖಗಳು ಇಲ್ಲ.

ಈ ವಿಚಾರವಾಗಿ ಕೆಲ ಭಕ್ತರು ಬಾಬಾರನ್ನೇ ಪ್ರಶ್ನಿಸಿದಾಗ ಅವರು ಈ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದನ್ನು ಹಲವಾರು ಭಕ್ತರು ಒಪ್ಪಿಕೊಂಡಿದ್ದಾರೆ. ಬಾಬಾರು ಶಿರಡಿಯಿಂದ ನಿರ್ಗಮಿಸಿದ ಮೇಲೆ ಯಾರಿಗೂ ಅವರ ಬಗ್ಗೆ ಅಷ್ಟಾಗಿ ಮಾಹಿತಿಗಳು ಇರುವುದಿಲ್ಲ. ಆದರೂ ಶಿರಡಿಯಿಂದ ಹೊರಟ ಬಾಬ ಅನೇಕ ಸಂತರನ್ನು ಹಾಗೂ ಫಕೀರರನ್ನು ಭೇಟಿ ಮಾಡುತ್ತಾ ಅವರಿಂದ ಆಧ್ಯಾತ್ಮಿಕ ಜ್ಞಾನ ಸಂಪಾದನೆ ಮಾಡುತ್ತಾ ನೇಯ್ಗೆಯ ಕೆಲಸವನ್ನು ಮಾಡುತ್ತಾ ಕಾಲ ಕಳೆದಿರಬಹುದು ಎಂಬ ನಂಬಿಕೆ ಇದೆ.

ಮತ್ತೊಂದು ಮೂಲದ ಪ್ರಕಾರ ಅವರು ಭಾರತದಲ್ಲಿ ಸಿಪಾಯಿ ದಂಗೆ ಯಾಗುವ ಹೊತ್ತಿಗೆ ಅಂದರೆ 1857ರ ಆಸು ಪಾಸು ಝಾನ್ಸಿ ರಾಣಿ ಲಕ್ಷ್ಮಿಬಾಯಿಯ ಸೇನೆಯಲ್ಲಿ ಗುರುತಿಸಿಕೊಂಡಿದ್ದರು.ಐತಿಹ್ಯಗಳ ಪ್ರಕಾರ ಸಾಯಿಬಾಬ ಶಿರಡಿಯಲ್ಲಿ 3 ವರ್ಷಗಳಿದ್ದು 1 ವರ್ಷ ಮಾತ್ರ ಶಿರಡಿಯಿಂದ ಹೊರಗೆ ಕಳೆದಿದ್ದಾರೆ. ಇದಾದ ನಂತರ 1858ರ ಆಸು ಪಾಸಿನಲ್ಲಿ ಶಿರಡಿಗೆ ಮರಳಿ ಅನಂತರ ಶಾಶ್ವತವಾಗಿ ಅಲ್ಲಿಯೇ ಉಳಿದರು ಎನ್ನಲಾಗಿದೆ.

ಶಿರಡಿಗೆ ಪುನರಾಗಮನ

1858ರಿಂದ 1918ರ ಅಕ್ಟೋಬರ್ 15ರಂದು ದೇಹತ್ಯಾಗ ಮಾಡುವವರೆಗೂ ಬಾಬಾ ಅವರು ಶಿರಡಿಯಲ್ಲಿ ನೆಲೆನಿಂತು ತಮ್ಮ ಲೀಲೆಗಳಿಂದ ಭಗವದ್ಭಕ್ತರನ್ನು ಹರಸುತ್ತಿದ್ದರು.

1858ರಲ್ಲಿ ಬಾಬಾ ಶಿರಡಿಗೆ ಹಿಂದಿರುಗಿದಾಗ ಅವರ ಉಡುಗೆಯ ಶೈಲಿ ಸಂಪೂರ್ಣ ಬದಲಾಗಿತ್ತು. ಮುಕ್ಕಾಲು ತೋಳು ಇರುವ ಮಂಡಿಯವರೆವಿಗೂ ಇರುವ ಕಪನಿಯನ್ನು ಧರಿಸಿ ಕಾಲುಗಳಿಗೆ ಶ್ವೇತ ವರ್ಣದ ಒಂದು ವಸ್ತ್ರ ಹಾಗು ತಲೆಗೆ ಶ್ವೇತವರ್ಣದ ಬಟ್ಟೆಯೊಂದನ್ನು ಸುತ್ತಿಕೊಂಡಿರುತ್ತಿದ್ದರು. ಮುಂದೆ ಬಾಬಾರು ಈ ಶೈಲಿಯನ್ನೇ ಅನುಸರಿಸಿದರು. ಅವರ ಈ ಧರಿಸಿನ ಶೈಲಿ ಯಥಾವತ್ತಾಗಿ ಸೂಫಿ ಶೈಲಿಯನ್ನೇ ಹೋಲುತ್ತಿದ್ದು ಗಮನಾರ್ಹ.

No comments:

Post a Comment