Tuesday, December 05, 2023

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಪತ್ರಕರ್ತ ಬಿ,ಎನ್, ಸುಬ್ರಮಣ್ಯಗೆ ತವರಿನ ಗೌರವ

 ಕೇಂದ್ರ ಸರಕಾರ ನೀಡುವ 69ನೇ ರಾಷ್ಟ್ರೀಯ ಚಲನಚಿತ್ರ   ಪ್ರಶಸ್ತಿ ಸಿನಿಮಾ ಪತ್ರಕರ್ತರಿಗೆ ನೀಡುವ ‘ಅತ್ಯುತ್ತಮ ಸಿನಿಮಾ ವಿಮರ್ಶಕ  (ಸ್ಪೆಷಲ್ ಮೆನ್ಷನ್ ಕ್ರಿಟಿಕ್) ಪ್ರಶಸ್ತಿಯ ಪಡೆದ ಕನ್ನಡದ ಹಿರಿಯ ಸಿನಿಮಾ ಪತ್ರಕರ್ತ ಸುಬ್ರಮಣ್ಯ ಬಾಡೂರು (ಬಾನಾಸು) ಅವರಿಗೆ ತವರಿನ ಗೌರವ ದೊರಕಿದೆ. ರಂಗ ಚಿನ್ನಾರಿ ಕಾಸರಗೋಡು ಮತ್ತು ಇತರ ಸಂಘಟನೆಗಳು ತನ್ನೂರಿನ ಸಾಧಕರಿಗೆ ಗೌರವಿಸಿವೆ.


ಕಾಸರಗೋಡು  ಪದ್ಮಗಿರಿ ಕಲಾಕುಟೀರ ಕರಂದಕ್ಕಾಡುವಿನಲ್ಲಿ ನಡೆದ ಹುಟ್ಟುರ ಗೌರವ ಕಾರ್ಯಕ್ರಮದಲ್ಲಿ ಸಚ್ಚಿದಾನಂದ ಭಾರತಿ ಸ್ವಾಮಿ, ಕಾಸರಗೋಡು ಶಾಸಕರಾದ ಎನ್.ಎ.ನೆಲ್ಲಿಕುನ್ನು, ಮಾಜಿ ಸಚಿವೆ, ನಟಿ ಉಮಾಶ್ರೀ, ನಿರ್ದೇಶಕ ಶಿವಧ್ವಜ್ ಮತ್ತು ಖ್ಯಾತ ಪತ್ರಕರ್ತ ರವೀಂದ್ರ ಜೋಶಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಾನಾಸು ಅವರಿಗೆ ಸನ್ಮಾನಿಸಿದ್ದಾರೆ.

ಕರ್ನಾಟಕಸಮಿತಿ ಕಾಸರಗೋಡು, ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟ, ಕೂಡ್ಲು ಯುವಜನ ಸಂಘ, ಕನ್ನಡ ಭವನ ಮತ್ತು ಗ್ರಂಥಾಲಯ, ಯುವನಿಕಾ ಕಾಸರಗೋಡು, ಗಮಕ ಕಲಾ ಪರಿಷತ್ತು, ತರುಣ ಕಲಾ ವೃದ್ಧ ಉಪ್ಪಳ, ಗೀತಾ ವಿಹಾರ ಕಾಸರಗೋಡು, ಗಡಿನಾಡ ಕಲಾವಿದರು ಹೀಗೆ 24ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಬಾನಾಸು ಅವರಿಗೆ ಸನ್ಮಾನಿಸಿ ಗೌರವಿಸಿವೆ. ವರ್ಣರಂಜಿತ ಈ ಸಮಾರಂಭದಲ್ಲಿ ಕಾಸರಗೋಡು ಚಿನ್ನಾ, ಸತೀಶ್ಚಂದ್ರ, ಸತ್ಯನಾರಾಯಣ ಕೆ. ಮನೋಹರ್ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ನಾಲ್ಕು ದಶಕಗಳಿಂದ ಸಿನಿಮಾ ಪತ್ರಕರ್ತರಾಗಿ, ವಿಶ್ಲೇಷಕರಾಗಿ, ವಿಮರ್ಶಕರಾಗಿ ಗುರುತಿಸಿಕೊಂಡಿರುವ ಸುಬ್ರಮಣ್ಯ ಬಾಡೂರು, ಕನ್ನಡ ಸಿನಿಮಾ ರಂಗಕ್ಕೆ ಬಾ.ನಾ.ಸುಬ್ರಮಣ್ಯ ಎಂದೇ ಖ್ಯಾತರಾದವರು. ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿ, ಸಂಪಾದಕರೂ ಆದವರು.

ಈ ಹಿಂದೆ ಎರಡು ಬಾರಿ ಸ್ಪೆಷಲ್ ಮೆನ್ಷನ್ ಕ್ರಿಟಿಕ್ ಪ್ರಶಸ್ತಿಯು ಕನ್ನಡಿಗರ ಪಾಲಾಗಿತ್ತು,  ಬ್ಯಾಂಕ್ ಉದ್ಯೋಗಿಯಾಗಿದ್ದ ಎನ್.ಕೆ ರಾಘವೇಂದ್ರ, ಉಪನ್ಯಾಸಕರಾಗಿದ್ದ ಮನು ಚಕ್ರವರ್ತಿ ಅವರು ಈ ಹಿಂದೆ ಇದೇ ಪ್ರಶಸ್ತಿಯನ್ನು ಪಡೆದಿದ್ದಾರೆ. ಆದರೆ, ಪತ್ರಿಕೋದ್ಯಮದಲ್ಲೇ ಹಲವು ದಶಕಗಳ ಕಾಲ ಕೆಲಸ ಮಾಡಿದ ಪತ್ರಕರ್ತರಿಗೆ ಇದೇ ಮೊದಲ ಬಾರಿಗೆ ಈ ಪ್ರಶಸ್ತಿ ಸಂದಿದೆ ವಿಶೇಷ.


No comments:

Post a Comment