Thursday, June 20, 2013

೯೯ನೇ ವಸಂತಕ್ಕೆ ಕಾಲಿಟ್ಟ ನಾಡೋಜ ಕೈಯ್ಯಾರ ಕಿಞ್ಜಣ್ಣ ರೈ

    "ಏರುತಿಹುದು ಹಾರುತಿಹುದು ನೋಡಿ ನಮ್ಮ ಬಾವುಟ" ಗೀತೆ ಯಾರಿಗೆ ತಾನೆ ನೆನೆಪಿಲ್ಲ ಹೇಳಿ? ಇಂತಹಾ ಗೀತೆಯೊಂದನ್ನ ಬರೆದು ಕನ್ನಡ ತಾಯಿಗೆ ಸಮರ್ಪಿಸಿದ ಶ್ರೀ ಕೈಯ್ಯಾರರು ಮೊನ್ನೆ ತಾನೆ ೯೯ರ ನವ ವಸಂತಕ್ಕೆ ಕಾಲಿಟ್ಟಿದ್ದಾರೆ. 

     ಮೂಲತಹ ಕರ್ನಾಟಕದ ಭಾಗವಾಗಿದ್ದ ಕಾಸರಗೋಡಿನವರಾದ ಕೈಯ್ಯಾರರು ಕನ್ನಡ ನಾಡು ಕಂಡ ಅತ್ಯಂತ ಉಜ್ವಲ ಪ್ರತಿಭೆ. ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಸಾಕಷ್ಟಿದ್ದು ಜೊತೆಗೆ ಕನ್ನಡ ಪರ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ಇವರದು. ಅದರಲ್ಲಿಯೂ ಮುಖ್ಯವಾಗಿ ಕಾಸರಗೋಡು ಪ್ರದೇಶ ಕರ್ಣಾಟಕಕ್ಕೆ ಸೇರಬೇಕೆಂದು ಅಂದಿನಿಂದಿಂದಿನವರೆಗೂ ಹೋರಾಡುತ್ತಲೆ ಬ್ಂದಿರುವುದನ್ನು ಕನ್ನಡಿಗರಾದ ನಾವ್ಯಾರೂ ಮರೆಯಲು ಸಾಧ್ಯವಿಲ್ಲ. 

     ಕಾಸರಗೋಡು ಕರ್ನಾಟಾಕಕ್ಕೆ ಸೇರಿಸಬೇಕೆಂಬ ಹೋರಾಟ ತನ್ನ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಆ ಕಾಲಘಟ್ಟದಲ್ಲಿ "ಮನೆಗೆ ಬೆಂಕಿ ಬಿದ್ದಿದೆ ಏಳಿ ಎದ್ದೇಳಿ" ಎನ್ನುತ್ತಾ ಹೋರಾಟದ ಕಿಚ್ಚು ಹಚ್ಚಿದ್ದ ಕೈಯ್ಯಾರರ ತನುವಿಗೀಗ ೯೯ ರ ಹರೆಯವಾದರೂ ಮನಸ್ಸಿನ್ನೂ ೨೦ ರಷ್ಟೇ ಚೈತನ್ಯದಾಯಕವಾಗಿರುವುದನ್ನು ಕಾಣಬಹುದು. 

    "ತುಳು ಭಾಷೆ ತನ್ನ ಹೆತ್ತ ತಾಯಾದರೆ ಕನ್ನಡ ಸಾಕು ತಾಯಿ" ಎನ್ನುವ ಕೈಯ್ಯಾರರು ತಾನಿರುವಾಗಲೇ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಬಯಸುತ್ತಾರೆ. 

ವ್ಯಕ್ತಿ ಪರಿಚಯ: 

    ಈಗ ಕೇರಳದಲ್ಲಿರುವ ಕಾಸರಗೋಡಿನ ಪೆರಿಯಾಲ ಗ್ರಾಮದಲ್ಲಿ ೧೯೧೫ ಜೂನ್ ೮ ರಂದು ಜನಿಸಿದ ಕೈಯ್ಯಾರ ಕಿಞ್ಜಣ್ಣ ರೈ ಕನ್ನಡದ ಹಿರಿಯ ಸಾಹಿತಿಗಳೂ ಬಹುಭಾಷಾ ವಿದ್ವಾಂಸರೂ ಹೌದು. 

    ಶ್ರೀಮುಖ, ಐಕ್ಯಗಾನ, ಕೊರಗ, ಪುನರ್ನವ, ಶತಮಾನದ ಗಾನ ಇದೇ ಮೊದಲಾದ ಕವನ ಸಂಕಲನಗಳನ್ನಲ್ಲದೆ ಕಾರ್ನಾಡು ಸದಾಶಿವರಾಯರು ಮೊದಲಾದವರ ಬಗೆಗೆ ಜೀವನ ಚರಿ
ತ್ರೆಗಳನ್ನು ಸಹ ಬರೆದು ಪ್ರಕಟಿಸಿರುವ ಕೈಯ್ಯಾರರು ರಷ್ಟ್ರಕವಿ ಗೋವಿಂದ ಪೈಗಳ ಕುರಿತಾದ ೩ ಗ್ರಂಥಗಳನ್ನು ಹೊರತಂದಿದ್ದಾರೆ. ಇಷ್ಟಲ್ಲದೆ ಇವರು ಅನುವಾದ, ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿಯೂ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. "ಪ್ರಭಾತ", "ರಾಷ್ಟ್ರ ಬಂಧು", "ಸ್ವದೇಶಾಭಿಮಾನಿ" ಎನ್ನುವ ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿರುವ ರೈಯವರು "ದುಡಿಮೆಯೇ ನನ್ನ ದೇವರು" ಎನ್ನುವ ಶ್ತ್ಮಕಥನವನ್ನು ಬರೆದು ಪ್ರಕಟಿಸಿದ್ದಾರೆ. 

    ಇಂತಹಾ ಕೈಯ್ಯಾರರ ಕಾಹಿತ್ಯ ಸೇವೆ ಗುರುತಿಸಿ ಸಾಕಷ್ಟು ಪ್ರಶಸ್ತಿಗಳು ಸಂದಿವೆ, ಅವುಗಳಲ್ಲಿ ಪ್ರಮುಖವಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಪಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ಏಕೀಕರಣ ಪುರಸ್ಕಾರ ಮುಂತಾದವು. ಅಲ್ಲದೆ ೨೦೦೫ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಗೆ ಭಾಜನರಾಗಿದ್ದ ರೈಗಳು ೧೯೯೭ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ೬೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 

No comments:

Post a Comment