Wednesday, June 26, 2013

ಮಧುಮೇಹ ಚರಿತೆ( The History of Diabetes )

     ನಾಳೆ(ಜೂನ್ ೨೭) ವಿಶ್ವ ಮಧುಮೇಹ ದಿನ(World Diabetes Day)ವಾಗಿ ಆಚರಿಸಲಾಗುತ್ತದೆ. ಇಂದು ಮಾನವ ಜೀವನವನ್ನು ನುಂಗಿ ಹಾಕುತ್ತಿರುವ ಬಹು ಮುಖ್ಯ ಖಾಯಿಲೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಮಧುಮೇಹಕ್ಕೆ ಸಹ ಅದರದೇ ಆದ ಇತಿಹಾಸವಿದೆ, ಅದನ್ನು ತಿಳಿಯಬೇಕೆನಿಸಿದರೆ ಮುಂದೆ ಓದಿ.................
     ಕ್ರಿ.ಪೂ. ೧೫೦೦ ರ ಈಜಿಪ್ಟ್ ನಾಗರಿಕತೆ ಕಾಲದ ಹಸ್ತಪ್ರತಿಗಳಲ್ಲಿ ವಿವರಿಸಲ್ಪಟ್ಟ ಮೊದಲ ರೋಗಗಳ ಪಟ್ಟಿಯಲ್ಲಿ ಮಧುಮೇಹದ ಹೆಸರೂ ಬರುತ್ತದೆ. “too great emptying of the urine.”ಎಂದು ವಿವರಿಸಲಾಗಿರುವ ಇದನ್ನು ಮೊದಲ ಮಾದರಿಯ ಮಧುಮೇಹವೆಂದು ಗುರುತಿಸಲಾಗಿದೆ. ಸುಮಾರು ಇದೇ ಸಂದರ್ಭದಲ್ಲಿ ಭಾರತೀಯ ಪಂಡಿತವರ್ಗದವರು ಕೂಡ ಮಧುಮೇಹ ಒಂದು ಖಾಯಿಲೆ ಎನ್ನುವುದನ್ನು ಪ್ರತಿಪಾದಿಸಿದ್ದಾರೆ, ಅಲ್ಲದೆ ಇದನ್ನು ಮಧು ಇಲ್ಲವೆ ಜೇನು ಮೂತ್ರವೆಂದು ಕರೆದು ಇದರ ರುಚಿಯಿಂದಾಗಿ ಇದು ಇರುವೆಗಳನ್ನು ಆಕರ್ಷಿಸಬಲ್ಲುದು ಎಂದು ಸಾಬೀತುಪಡಿಸಿದ್ದಾರೆ.  ಈ ಬಗೆಯ ಖಾಯಿಲೆಗೆ "ಮಧುಮೇಹ" ಎನ್ನುವ ಪದವನ್ನು ಕ್ರಿ.ಪೂ. ೨೩೦ ರಲ್ಲಿ ಪ್ರಪ್ರಥಮವಾಗಿ ಗ್ರೀಕರು ಬಳಕೆಗೆ ತಂದರು. 
     ರೋಮನ್ ಚಕ್ರಾಧಿಪತ್ಯದ ಕಾಲದಲ್ಲಿ ಮಧುಮೇಹ ಪ್ರಕರಣಗಳು ತೀರಾ ಅಪರೂಪವಾಗಿದ್ದವು. ಅಂದಿನ ಕಾಲದಲ್ಲಿ ಬದುಕಿದ್ದ ಖ್ಯಾತ ವೈದ್ಯ ಗೆಲನ್ ತನ್ನ ವೃತ್ತಿ ಜೀವನದಲ್ಲಿ ಕೇವಲ ಎರಡು ಪ್ರಕರಣಗಳನ್ನು ಮಾತ್ರವೇ ಪತ್ತೆಹಚ್ಚಿದ್ದರು. ಮಧುಮೇಹದಲ್ಲಿನ ಎರಡು ಪ್ರತ್ಯೇಕ ಮಾದರಿಗಳನ್ನು ಕ್ರಿ.ಶ್. ೪೦೦-೫೦೦ ರ ಸುಮಾರಿಗೆ ಭಾರತದ ಖ್ಯಾತ ವೈದ್ಯ ಪಂಡಿತರಾಗಿದ್ದ ಶುಶ್ರುತ ಹಾಗೂ ಚರಕರು ಪತ್ತೆಮಾಡಿ ವರ್ಗೀಕರಿಸಿದರು. ಕ್ರಿ.ಶ ೧೭೦೦ ರ ಸುಮಾರಿಗೆ ಬ್ರಿಟನ್ನಿನ ಬ್ರಿತೈನ್ ಜಾನ್ ರೊಲೆ ಎನ್ನುವ ಸಂಶೋಧಕರು "ಮೆಲ್ಲಿಟೀಸ್()" ಎಂಬ ಇನ್ನೊಂದು ಬಗೆಯನ್ನು ಮಧುಮೇಹಗಳ ವರ್ಗಿಕರಣ ಸರಣಿಗೆ ಸೇರ್ಪಡೆಗೊಳಿಸಿದರು. 
     ೧೭೭೬ ರಲ್ಲಿ ಮ್ಯಾಥ್ಯೂ ಡೋಬ್ಸನ್ ರವರು ಮಧುಮೇಹಿಗಳ ಮೂತ್ರ ಹಾಗೂ ರಕ್ತಗಳಲ್ಲಿ ಸಿಹಿಯ ಅಂಶವು ಅಧಿಕವಾಗಿರುತ್ತದೆ ಎನ್ನುವುದನ್ನು ಧೃಢೀಕರಿಸಿದರು. ಕ್ರಿ.ಶ. ೧ ನೇ ಶತಮಾನದವನಾದ ಗ್ರೀಕ್ ದೇಶದವನಾದ ಅರೇಟಿಯಸ್ ಎನ್ನುವ ವೈದ್ಯನು ಮಧುಮೇಹದ ಕುರಿತಾಗಿ ಪ್ರಥಮ ಬಾರಿಗೆ ಪರಿಪೂರ್ಣ ಸ್ವರೂಪದ ವೈದ್ಯಕೀಯ ವಿವರಣೆಗಳನ್ನು ನೀಡಿರುತ್ತಾನೆ. ಅವನು ಹೇಳುವಂತೆ ಮೂತ್ರದಲ್ಲಿ ಸಿಹಿಯ ಅಂಶವು ವ್ಯಾಪಕ ಪ್ರಮಾಣದಲ್ಲಿ ಸೇರಿಕೊಳ್ಳುವುದನ್ನು ”ಮಧುಮೇಹ”ವೆಂದು ಕರೆಯಲಾಗುತ್ತದೆ. ಅಂದಿನ ಕಾಲದಲ್ಲಿ ಇದನ್ನು ಒಂದು ಮಾರಣಾಂತಿಕ ಖಯಿಲೆ ಎಂದು ಬಗೆಯಲಾಗುತ್ತಿತ್ತು, ಆದರೆ ಕ್ರಮೇಣ ಇದು ಮಾರಣಾಂತಿಕವಾದ ಖಾಯಿಲೆಯಲ್ಲ  ಹಾಗೆಂದು ಸಂಪೂರ್ಣ ಗುಣಪಡಿಸಲು ಸಾಧ್ಯವಿರದೆಂಬ ತೀರ್ಮಾನಕ್ಕೆ ಬರಲಾಯಿತು. 
     ಮದ್ಯಯುಗದ ಪರ್ಷಿಯಾದ ವೈದ್ಯ ಸಂಶೋಧಕನಾದ ಅವಿಸೆನ್ನಾ ”ವಿಪರೀತ ಹಸಿವು ಹಾಗೂ ಲೈಂಗಿಕ ಕ್ರಿಯೆಗಳಲ್ಲಿನ ತೀವ್ರ ನಿರಾಸಕ್ತಿ” ಕುರಿತಾಗಿ ವಿವರಿಸಿ ಇದು ಮಧುಮೇಹ ರೋಗಿಗಳಲ್ಲಿ ಕಂಡುಬರುವ ಒಂದು ರೋಗ ಲಕ್ಷಣವೆಂದು ತಿಳಿಸಿದ್ದಾನೆ. ಇವನು ಸಹ ಅರೇಟಿಯಸ್ ನಂತೆಯೇ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಮಧುಮೇಹವನ್ನು ಪತ್ತೆಹಚ್ಚುತ್ತಾನೆ, ಮತ್ತು ಮಧುಮೇಹ ಗ್ಯಾಂಗ್ರಿನ್ ಕುರಿತಾಗಿಯೂ ಮಾಹಿತಿ ಒದಗಿಸುತ್ತಾನೆ. ಮೆಂತ್ಯದ ಸೊಪ್ಪಿನ ಮಿಶ್ರಣವನ್ನು ಬಳಸಿಕೊಳ್ಳುವ ಮೂಲಕ ಮಧುಮೇಹ ಪೀಡಿತರಲ್ಲಿನ ಮೂತ್ರದಲ್ಲಿ ಸಕ್ಕರೆ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ವಿಧಾನವನ್ನು ಸಹ ಇವನು ಪ್ರಯೋಗ ನಡೆಸಿದ್ದು ಆ ಬಗೆಯ ಔಷಧವನ್ನು ಇಂದಿನ ಆಧುನಿಕ ಯುಗದಲ್ಲಿಯೂ ಸಹ ಪರಿಣಾಮಕಾರಿ ರೋಗ ನಿರೋಧಕವೆಂದು ಪರಿಗಣಿಸಲಾಗಿದೆ. ಆಧುನಿಕ ಕಾಲದಲ್ಲಿ ಕ್ರಿ.ಶ. ೧೯೦೦ ರಬಳಿಕ  ಮಧುಮೇಹದ ಕುರಿತಾಗಿ ಸಾಕಷ್ಟು ಸಂಶೋಧನೆಗಳು ನಡೆದವು. ಸರ್ ಎಡ್ವರ್ಡ್ ಅಲ್ಬರ್ಟ್ ಶಾಫೆ ಷೆಫರ್ಡ್ ರವರು ೧೯೧೦ ರಲ್ಲಿ ನಡೆಸಿದ ಸಂಶೊಧನೆಯೊಂದರಲ್ಲಿ ಮಾನವನ ದೇಹದಲ್ಲಿನ ಮೇದೋಜೀರಕ ಗ್ರಂಥಿಯಲ್ಲಿ ಸ್ರವಿಸುವ ಇನ್ಸುಲಿನ್ ಪ್ರಮಾಣದಲ್ಲಿನ ಏರಿಳಿತಗಳಿಂದ ಮಧುಮೇಹವು ತಲೆದೋರುತ್ತದೆ ಎಂದು ಕಂಡುಕೊಂಡರು. 
     ಇಷ್ಟಾದರೂ ಸಹ  ಮಧುಮೇಹಕ್ಕೆ ಒಂದು ಪರಿಣಾಮಕಾರಿಯಾದ ಪರಿಹಾರೋಪಾಯವನ್ನು ಯಾರಿಂದಲೂ ಕಂಡುಕೊಳ್ಳಲಾಗಲಿಲ್ಲ. ೧೯೨೧-೨೨ ರಲ್ಲಿ ಕೆನಡಾ ಮೂಲದವರಾದ ಫ್ರೆಡ್ರಿಕ್ ಬ್ಯಾಂಟಿಂಗ್ ಹಾಗೂ ಚಾರ್ಲ್ಸ್ ಎನ್ನುವವರು ಪ್ರಥಮ ಬಾರಿಗೆ ಪರಿಣಾಮಕಾರಿಯಾದ ಇನ್ಸುಲಿನ್ ಒಂದನ್ನು ಕಂಡುಹಿಡಿದರು, ಈ ಸಂಶೋಧನೆಗಾಗಿ ಬ್ಯಾಂಟಿಂಗ್ ಹಾಗೂ ಪ್ರಯೋಗಾಲಯ ನಿರ್ದೇಶಕರಾಗಿದ್ದ ಜಾನ್ ಮ್ಯಾಕ್ಸಿಯೋಡ್ ಈರ್ವರೂ ೧೯೨೩ ರ ಶರೀರ ಶಾಸ್ತ್ರಕ್ಕಾಗಿನ ನೋಬೆಲ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು. ಅದೇ ಮುಂದೆ ೧೯೪೦ ರ ದಶಕದಲ್ಲಿ ಮಧುಮೇಹಕ್ಕೆ ಬಹಳವೇ ಪರಿಣಾಮಕಾರಿಯಾದ ಔಷಧವಾಗಿ ಜಗತ್ತಿನಾದ್ಯಂತ ವ್ಯಾಪಕವಾಗಿ ಬಳಕೆಗೆ ಬಂದಿತು.  

No comments:

Post a Comment