Tuesday, January 12, 2021

ಸ್ವಾಮಿ ವಿವೇಕಾನಂದರ ಅಪ್ಪಟ ಅನುಯಾಯಿ ಹರ್ಷಾನಂದ

 ಬೆಂಗಳುರು ಬಸವನಗುಡಿ ರಾಮಕೃಷ್ಣಾಶ್ರಮದ ಹಿರಿಯ ಸನ್ಯಾಸಿ, ಅಧ್ಯಕ್ಷರೂ ಆಗಿದ್ದ ಸ್ವಾಮಿ ಹರ್ಷಾನಂದಜೀ(91) ನಿನ್ನೆ ವಿಧಿವಶರಾದರು.1989ರಿಂದ ರಾಮಕೃಷ್ಣಾಶ್ರಮದ ಅಧ್ಯಕ್ಷರಾಗಿದ್ದ ಹರ್ಷಾನಂದಜೀ ಮಠದ ಆರನೇ ಅಧ್ಯಕ್ಷರಾಗಿದ್ದ ಸ್ವಾಮಿ ವಿರಾಜಾನಂದರಿಂದ ಮಂತ್ರದೀಕ್ಷೆ ಪಡೆಇದ್ದರು. 1962ರಲ್ಲಿ ಮಠದ ಎಂಟನೇ ಅಧ್ಯಕ್ಷರಾದ ಸ್ವಾಮಿ ವಿಶುದ್ದಾನಂದರಿಂದ ಸನ್ಯಾಸದೀಕ್ಷೆ ಪಡೆದಿದ್ದರು. 

ಮೂಲತಃ ತುಮಕೂರು ಜಿಲ್ಲೆಯ ಪಾವಗಡದವರಾದರೂ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸವಾಗಿದ್ದ ಶ್ರೀ ವೆಂಬಾರ್ ವೆಂಕಟ ಚಾರ್ ಅವರ ಪತ್ನಿ ಶ್ರೀಮತಿ ವೆಂಕಟಲಕ್ಷ್ಮಿ ಅವರು ತಮ್ಮ ತವರೂರಾದ ಆಂಧ್ರಾದ ಕಡಪ ಜಿಲ್ಲೆಯ ಪ್ರುದಟ್ಟೂರ್ ಎಂಬ ಊರಿನಲ್ಲಿ 25 ನೇ ಮಾರ್ಚ್ 1931ರಂದು ಹರ್ಷಾನಂದ ಜನಿಸುತ್ತಾರೆ. ಇವರ ಬಾಲ್ಯದ ಹೆಸರು ಸುಂದರ ಕೃಷ್ಣ.ಇದು ಅವರ ತಾತ ಕೃಷ್ಣಮಾಚಾರುಲು ಎಂಬ ಖ್ಯಾತ ವಕೀಲರ ಹೆಸರೂಮುತ್ತಜ್ಜನ ಹೆಸರು ಸುಂದರಾ ಚಾರ್  ಎಂಬೆರಡು ಹೆಸರಿನ ಸೇರ್ಪಡೆಯಾಗಿತ್ತು. ಮನೆಯವರೆಲ್ಲರ ಪಾಲಿಗೆ ಈ ಬಾಲಕ "ಕಿಟ್ಟು"ವಾಗಿದ್ದ.

ಈ ಕಿಟ್ಟುವಿಗೆ , ಮೂವರು ಸಹೋದರರು ಮತ್ತು ಮೂವರು ಸಹೋದರಿಯರಿದ್ದರು.ಇವನಿಗೆ ಬಾಲ್ಯದಿಂದ ಅತ್ಯಂತ ಚುರುಕಾದ ಬುದ್ದಿ, ತುಂಟತನ ಹಾಗೂ ಕೋಪಿಷ್ಟ ಗುಣಗಳಿದ್ದವು.ಓದಿನಲ್ಲಿ ಮಾತ್ರ ಸದಾ ಮುಂದಿದ್ದ. ಹಾಗಾಗಿ ಸುಂದರ ಕೃಷ್ಣ  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಡೀ ಮೈಸೂರು ರಾಜ್ಯಕ್ಕೆ 3 ನೇ ರ್ಯಾಂಕ್ ಪಡೆದಿದ್ದರು. ಓದು ಮಾತ್ರವಲ್ಲದೆ ಕರ್ನಾಟಕ ಸಂಗೀತಾಭ್ಯಾಸ ಸಹ ಮಾಡಿದ್ದ ಬಾಲಕ ಸುಂದರ ಕೃಷ್ಣಉತ್ತಮ ಗಾಯಕರಾಗಿದ್ದ. ಅಲ್ಲದೆ ಕ್ರಿಕೆಟ್ ನಲ್ಲಿ ಆಸಕ್ತಿ ಹೊಂದಿದ್ದ ಇವರು ಕ್ರಿಕೆಟ್ ತಂಡದ ನಾಯಕರೂ ಆಗಿದ್ದರು.

ಪಿಯುಸಿ ಓದುತ್ತಿದ್ದಾಗ ಬೆಂಗಳೂರಿನ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮದ ಸಂಪರ್ಕಕ್ಕೆ ಬಂದ್ದಿದ್ದಲ್ಲದೇ, ಆಗ್ಗಿಂದ್ದಾಗ್ಗೆ ಅವರ ಸ್ನೇಹಿತರ ಜೊತೆಯಲ್ಲಿ ಅಲ್ಲಿನ ಸಂಜೆಯ ಪ್ರಾರ್ಥನೆಗಳಿಗೆ ಹಾಜರಾಗುವ ಮೂಲಕ ಧಾರ್ಮಿಕ ವಿಷಯಗಳನ್ನು ಕಲಿಯುವುದರಲ್ಲಿ ಆಸಕ್ತಿಯನ್ನು ತೋರಿದ್ದರು. 1949 ರಲ್ಲಿ ತಮ್ಮ ಪಿಯೂಸಿ ಪರೀಕ್ಷೆಗೆ ಕೆಲ ತಿಂಗಳುಗಳ ಮುನ್ನ ಮನೆ ಬಿಟ್ಟು ಕೋಲ್ಕತ್ತಾದ ಬೇಲೂರು ಮಠಕ್ಕೆ ಹೋಗಿದ್ದ ಸುಂದರ ಕೃಷ್ಣ ಅವರಿಗೆ ಅಲ್ಲಿನ ಹ್ರಿಯ ಸ್ವಾಮೀಜಿ "ಮೊದಲು ಓದು ಮುಗಿಸು ಆಮೇಲೆ ಇಚ್ಚೆ ಬಲವಾಗಿದ್ದರೆ ಸನ್ಯಾಸ ಸ್ವೀಕರಿಸು" ಎಂದು ಹೇಳಿ ಬೆಂಗಳೂರಿಗೆ ವಾಪಾಸ್ ಕಳಿಸಿದ್ದರು. ಆ ನಂತರ ಸುಂದರ ಕೃಷ್ಣ 1949 ರಲ್ಲಿ ರಾಜ್ಯಕ್ಕೇ 5 ನೇ ರ್ಯಾಂಕ್ ಮೂಲಕ ಯಶಸ್ವಿಯಾಗಿ ಪಿಯು ಮುಗಿಸಿದ್ದರು.

ಸ್ವಾಮಿ ಹರ್ಷಾನಂದರು ವಿಶ್ವೇಶ್ವರಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ವಿಜೇತರಾಗಿ ಪದವಿ ಪಡೆದವರು. ಪಿಯು ಆದ ನಂತರ ಅಂದಿನ ಪ್ರಸಿದ್ದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್  ಸೇರ್ಪಡೆಯಾಗಿದ್ದ ಸುಂದರ ಕೃಷ್ಣ 1953 ರಲ್ಲಿ ಮೊದಲನೇ ರ‌್ಯಾಂಕ್ ನೊಂದಿಗೆ ಚಿನ್ನದ ಪದಕ ಪಡೆದು ತಮ್ಮ ಪದವಿಯನ್ನು ಮುಗಿಸಿದ್ದರು. ಆ ನಂತರ  ಎಚ್‌ಎಎಲ್‌ನಲ್ಲಿ ತರಬೇತಿಗಾಗಿ ಸೇರಿ ಆರು ತಿಂಗಳ ಕಾಲದ ತರಭೇತಿಯ  ಬಳಿಕ ಕೆಲಸ ಖಾಯಂ ಅಗುವುದರಲ್ಲಿತ್ತು ಆದರೆ ಅವರ ಮನಸ್ಸೆಲ್ಲಾ ರಾಮಕೃಷ್ಣ ಮಠದತ್ತಲೇ ಇದ್ದು ಮನೆಯವರಿಗೆ ಅರಿವಿಗೂ ಬಾರದಂತೆ ಶ್ರೀ ತ್ಯಾಗೇಶ್ವರಾನಂದಜಿ ಅವರನ್ನು ಸಂಪರ್ಕಿಸಿ  ಅವರ ಒಪ್ಪಿಗೆಯ ಅನುಸಾರ ಲೌಕಿಕ ಜೀವನವನ್ನು ತ್ಯಜಿಸಿ ಸನ್ಯಾಸತ್ವವನ್ನು ಸ್ವೀಕರಿಸುವ ನಿರ್ಧಾರ ಮಾಡುತ್ತಾರೆ. ಅದರಂತೆ , ಸುಂದರ ಕೃಷ್ಣ ಅವರನ್ನು ಅಂತಿಮವಾಗಿ 1 ನೇ ಮಾರ್ಚ್ 1954 ರಂದು ರಾಮಕೃಷ್ಣ ಮಠಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳಗಾಗುತ್ತದೆ. ಆ ನಂತರ ಬೆಂಗಳೂರಿನ ರಾಮಕೃಷ್ಣ ಆಶ್ರಮದಲ್ಲಿ ಸುಮಾರು 4 ವರ್ಷಗಳ ಕಾಲ ಕಳೆದ ನಂತರ ಸುಂದರ ಕೃಷ್ಣ ಅವರಿಗೆ, ಬ್ರಹ್ಮಚಾರಿ ಸೂರ್ಯ ಚೈತನ್ಯ ಎಂದು ಮರುನಾಮಕರಣ ಆಗುತ್ತದೆ. ಅಲ್ಲಿಂದ ಅವರನ್ನು ಮಂಗಳೂರಿನ ಆಶ್ರಮಕ್ಕೆ6 ವರ್ಷಗಳ ಕಾಲ (1954-1960)  ಕಳುಹಿಸಲಾಗಿತ್ತದೆ.  ಅಲ್ಲಿ ಸುಮಾರು 4 ವರ್ಷಗಳ ನಂತರ, ಮಠದ ಆದೇಶಾನುಸಾರ ಅವರಿಗೆ ಸ್ವಾಮಿ ಹರ್ಷಾನಂದ ಎಂದು ಹೆಸರಿಸಲಾಯಿತು

ಸ್ವಾಮಿ ಹರ್ಷಾನಂದರು ಸ್ವಾಮಿ ವಿವೇಕಾನಂದರ ಬೋಧನೆಗಳಿಂದ ಪ್ರೇರಿತರಾದರು. ಅವರು 1954 ರಲ್ಲಿ ರಾಮಕೃಷ್ಣ ಮಿಷನ್‌ಗೆ ಸೇರಿದರು, ಅಲ್ಲಿ ಅವರಿಗೆ ರಾಮಕೃಷ್ಣ ಮಿಷನ್‌ನ ಬೆಂಗಳೂರು ಶಾಖೆಯ ಆರನೇ ಅಧ್ಯಕ್ಷ ಸ್ವಾಮಿ ವಿರಾಜಾನಂದ ಮಾರ್ಗದರ್ಶನ ನೀಡಿದರು ಅವರು ಬೇಲೂರು ಮಠ,(ರಾಮಕೃಷ್ಣ ಮಿಷನ್‌ನ ಪ್ರಧಾನ ಕಚೇರಿ) ಮೈಸೂರು, ಮಂಗಳೂರು, ಮತ್ತು ಅಲಹಾಬಾದ್‌ನಲ್ಲಿ ಕೆಲಸ ಮಾಡಿದ್ದರು.

ಮೈಸೂರಿಗೆ ಆಗಮಿಸಿದ ಹರ್ಷಾನಂದರು 1969 ರವರೆಗೆ ಮೈಸೂರು ಆಶ್ರಮದಲ್ಲಿದ್ದರು.  ಕಲ್ಕತ್ತಾದ ಪ್ರಧಾನ ಕಚೇರಿಯಾದ ಬೇಲೂರು ಮಠಕ್ಕೆ ವರ್ಗಾಯಿಸಲಾಗಿ ಅವರು ಅಲ್ಲಿ 3 ವರ್ಷಗಳ ಕಾಲ ಇದ್ದ ಹರ್ಷಾನಂದ 1973ರಲ್ಲಿ  ಮತ್ತೆ ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಅವರು  RIMSE (Ramakrishna Institute of Moral & Spiritual Education) ಮತ್ತು ಇನ್ನೊಂದು  BEd ಕಾಲೇಜನ್ನು ಪ್ರಾರಂಭಿಸಿದ್ದರು. ಅಲ್ಲಿಂದ ಹೈದರಾಬಾದ್ ಗೆ ತೆರಳಿದ ಹರ್ಷಾನಂದರು ಹೈದರಾಬಾದಿನ ಮಠದಲ್ಲಿನ ಹೊಸ ಕಟ್ಟಡಗಳ ನಿರ್ಮಾಣದ ಸಮಯದಲ್ಲಿ ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡುವ ಮೂಲಕ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಕಟ್ಟಡಗಳು ಪೂರ್ಣಗೊಳಿಸುವ ಮೂಲಕ  ಇಂದಿಗೂ ಹೈದರಾಬಾದ್ ನಗರದ ಒಂದು ಹೆಗ್ಗುರುತಾಗುವಂತೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಡೆಹ್ರಾಡೂನ್‌ನ ಕಿಶನ್ ಪುರಕ್ಕೆ, ಅಲಹಾಬಾದ್ ಗೆ ವರ್ಗಾಯಿಸಲ್ಪಟ್ಟ ಹರ್ಷಾನಂದ ಅಲಹಾಬಾದ್ ಮಠದ ಮುಖ್ಯಸ್ಥರಾಗಿ  ನೇಮಕವಾದರು. ಅಲ್ಲಿ ನಾಲ್ಕು ವರ್ಷ ಕಾಲ ತಂಗಿದ್ದ ಸ್ವಾಮಿಗಳು  1989 ರಲ್ಲಿ ಅವರ ತವರೂರಾದ ಬೆಂಗಳೂರಿನ ಆಶ್ರಮ ಮುಖ್ಯಸ್ಥರಾದರು. ರಾಮಕೃಷ್ಣ ಮಠದಲ್ಲಿ ಸ್ವಾಮಿ ರಂಗನಾಥನಂದರ ನಂತರ ಅತ್ಯುತ್ತಮ ಭಾಷಣಕಾರರೆಂದೇ ಹರ್ಷಾನಂದರು ಪ್ರಸಿದ್ಧರಾಗಿದ್ದರು. ಅವರು ಕನ್ನಡ, ತೆಲುಗು, ಹಿಂದಿ, ಬೆಂಗಾಲಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಿರರ್ಗಳವಾಗಿ ಅದ್ಭುತವಾದ ಭಾಷಣಕಾರರಾಗಿದ್ದರು

ಅವರು ಬಹುಭಾಷಾ ಮತ್ತು ಸಂಸ್ಕೃತ, ಕನ್ನಡ, ತೆಲುಗು, ಹಿಂದಿ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರುಸ್ವಾಮಿ ಹರ್ಷಾನಂದರು ಹಿಂದೂ ಸಾಹಿತ್ಯಕ್ಕೂ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಅವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ "ಎ ಕನ್ಸೈಸ್ ಎನ್ಸೈಕ್ಲೋಪೀಡಿಯಾ ಆಫ್ ಹಿಂದೂ ಧರ್ಮ" ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

 ಹರ್ಷಾನಂದರ ಹಲವು ವಿಸ್ತಾರವಾದ ಪ್ರಬಂಧಗಳೆಲ್ಲಾ ಕಿರುಹೊತ್ತಿಗೆಗಳ ರೂಪುಗೊಂಡು ದೇಶವಿದೇಶಗಳ ಭಕ್ತಾದಿಗಳಿಗೆ ಹಲವಾರು ಭಾಷೆಗಳಲ್ಲಿ ಲಭ್ಯವಿವೆ. ಭಜನೆಗಳನ್ನು ಹಾಡುವುದೆಂದರೆ ಅವರಿಗೆ ಬಲು ಖುಷಿ. ಕರ್ನಾಟಕ ಹಾಗೂ ಹಿಂದೂಸ್ಥಾನಿ ಶೈಲಿಗಳಲ್ಲಿಸುಶ್ರಾವ್ಯವಾಗಿ ಹಾಡುತ್ತಿದ್ದರು.ಅವುಗಳೆಲ್ಲಾ ಕ್ಯಾಸೆಟ್ ಹಾಗೂ ಸಿ.ಡಿ ಗಳ ರೂಪದಲ್ಲಿ ಹೊರಬಂದಿವೆ. '

No comments:

Post a Comment