Saturday, November 13, 2021

ನಮ್ಮಲ್ಲಿನ ಸ್ಥಳ ಪುರಾಣಗಳು(Myths)- 107

 ಎಡೆಯೂರು (Yadiyur)

ಎಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರ ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದ್ದು ಇದು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಕೇಂದ್ರದಿಂದ (ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ೦ ಕೇವಲ 19 ಕಿ.ಮೀ. ದೂರದಲ್ಲಿದೆ. ಇಲ್ಲಿ ನಾಡಿನ ಪ್ರಮುಖ ಅನುಭಾವಿಗಳಲ್ಲಿ ಒಬ್ಬರಾದ ಶ್ರೀ  ತೋಂಟದ ಸಿದ್ಧಲಿಂಗೇಶ್ವರರು ಜೀವಂತ ಸಮಾಧಿಯಾಗಿದ್ದಾರರೆ.

ಎಡೆಯೂರು ಜಾಗೃತ ಆಧ್ಯಾತ್ಮಿಕ ಪ್ರಜ್ಞೆಯ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಶ್ರೀ ಸಿದ್ದಲಿಂಗೇಶ್ವರನ ಅತ್ಯಂತ ಪೂಜ್ಯ ಗದ್ದಿಗೆಯು ವಿಭೂತಿಯ ರಾಶಿಯಿಂದ ಕೂಡಿದೆ. ಇದು ಲಿಂಗದ ರೂಪದಿಂದ ಮುಚ್ಚಲ್ಪಟ್ಟಿದೆ, ಅದರ ಮೇಲೆ ಮುಖ್ಯ ದ್ವಾರದಲ್ಲಿ ಕಲ್ಲಿನ ಆಕೃತಿಯನ್ನು ಹೋಲುವ ಬೆಳ್ಳಿಯ ಮುಖವಾಡವನ್ನಿರಿಸಲಾಗಿದೆ.  ದೇವಾಲಯದ ಆಭರಣಗಳು, ಗಂಟೆಗಳು, ಪಾತ್ರೆಗಳು ಇತ್ಯಾದಿಗಳ ಮೇಲೆ ಕೆಲವು ಆಸಕ್ತಿದಾಯಕ ಶಾಸನಗಳಿವೆ. ಮುಸ್ಲಿಂ ದಾಳಿಯ ಸಮಯದಲ್ಲಿ ದೇವಾಲಯಕ್ಕೆ ಸೇರಿದ ಕೆಲವು ಗಂಟೆಗಳನ್ನು ಬಾವಿಗೆ ಎಸೆಯಲಾಯಿತು ಮತ್ತು ಮೊಹಮ್ಮದ ಅಮಿಲ್ದಾರ್ ಅವರು ಅವುಗಳನ್ನು ಚೇತರಿಸಿಕೊಂಡಿದ್ದರೂ ಕೂಡ ಕೆಲವೊಂದಷ್ಟು ಸಾಮಗ್ರಿಗಳಿಂದಿಗೂ ನಾಪತ್ತೆಯಾಗಿದೆ. 

ಶೈವರಿಗೆ ಮಹಾ ಪವಿತ್ರವಾದ ಈ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆಯೂ ಅಪಾರ. ಯುಗಾದಿಯ ಬಳಿಕ ಇಲ್ಲಿ ಪ್ರತಿವರ್ಷ ಚೈತ್ರ ಮಾಸದಲ್ಲಿ ಜಾತ್ರೆ ನಡೆಯುತ್ತದೆ. ಕಾರ್ತೀಕ ಮಾಸದಲ್ಲಿ ಲಕ್ಷ ದೀಪೋತ್ಸವ, ಅಡ್ಡ ಪಲ್ಲಕ್ಕಿ ಉತ್ಸವ ಜರುಗುತ್ತದೆ. ಆಗ ನಡೆಯುವ ಬಾಣ ಬಿರುಸಿನ ವೈಭವ ಕಣ್ಮನ ಸೆಳೆಯುತ್ತದೆ. ಈಗ ಭಕ್ತರಿಂದ ದೇಣಿಗೆ ಬಂದ ಚಿನ್ನದಿಂದ ಶ್ರೀಸಿದ್ಧಲಿಂಗೇಶ್ವರರಿಗೆ 9 ಲಕ್ಷ ರುಪಾಯಿ ಮೌಲ್ಯದ ಚಿನ್ನದ ಮುಖವಾಡ ಮಾಡಲಾಗಿದೆ. 320 ಕೆ.ಜಿ. ತೂಕದ ಬೆಳ್ಳಿಯ ರಥವೂ ಸಿದ್ಧಗೊಂಡಿದೆ. ರಥದಲ್ಲಿನ ಕೆತ್ತನೆ ಕಣ್ಮನಸೆಳೆಯುತ್ತದೆ.

ದೇಗುಲದ ಸನಿಹದಲ್ಲೇ ಬಾಳೆಹೊನ್ನೂರು ಮಠದ ಶಾಖಾ ಮಠವಿದೆ. ಸನಿಹದಲ್ಲೇ ಮಾರ್ಕೋನಹಳ್ಳಿ ಜಲಾಶಯವಿದೆ

***

ಹೊಯ್ಸಳರು ರಾಜ್ಯವಾಳುತ್ತಿದ್ದ ಕಾಲಕ್ಕೆ ಈಗಿನ ಹರದನಹಳ್ಳಿಯನ್ನು ತಮ್ಮ ಎರಡನೇ ರಾಜಧಾನಿಯಂತೆ ನಡೆಸಿಕೊಳ್ಳುತ್ತಿದ್ದರು ಹಾಗು ಈ ಪ್ರದೇಶಕ್ಕೆ ಎಣ್ಣೆನಾಡು ಎಂದು ಕರೆಯಲಾಗುತ್ತಿತ್ತು. ವಿವಿಧ ದಾಖಲೆಗಳು ಲಭ್ಯವಾಗಿರುವ ಪ್ರಕಾರ ಇದೇ ಪ್ರದೇಶವನ್ನು 'ಮಗ್ಗೇಯ', 'ಮಾರ್ಗೆಯ್', 'ವಾಣಿಜ್ಯ ಪುರಿ' ಎಂಬ ಹೆಸರುಗಳಿಂದಲೂ ಕರೆಯಲಾಗಿದೆ. ಆದರೆ ಎಲ್ಲಕ್ಕೂ ಮುಂಚಿನ ದಾಖಲೆ ಮೂರನೇ ಬಲ್ಲಾಳನ ಕ್ರಿ.ಶ ೧೩೪೫ ರ ಶಾಸನದಲ್ಲಿ ಈ ಹಳ್ಳಿಯನ್ನು ಮಗ್ಗೇಯ ಎಂದು ಹೆಸರಿಸಲಾಗಿದೆ. ಆದರೆ ಆದೇ ಸಮಯದ ಇನ್ನೊಂದು ತಾಮ್ರದ ಶಾಸನ ಅಡೆ ಹಳ್ಳಿಯನ್ನು 'ವಾಣಿಜ್ಯ ಪುರಿ' ಎಂದೂ ಸಂಭೋದಿಸಿದೆ. 'ವಾಣಿಜ್ಯ ಪುರಿ' ಎಂಬುದು ಸಂಸ್ಕೃತ ಪದವಾಗಿದ್ದು ಅದರದ್ದೇ ಕನ್ನಡ ಪದ 'ಹರದನ ಹಳ್ಳಿ'ಯೂ ಚಾಲ್ತಿಯಲ್ಲಿತ್ತು. ಹರದ ಎಂದರೆ ವ್ಯಾಪಾರಿ ಎಂದರ್ಥ.ಶೈವ ಸಮುದಾಯದ ವ್ಯಾಪಾರಿಗಳನ್ನು ಆ ಪ್ರದೇಶದಲ್ಲಿ 'ವಾಣಿಜ' ರು ಎಂದು ಕರೆಯಲಾಗುತ್ತಿತ್ತು. ಇವರ ವ್ಯಾಪಾರ ಪ್ರಮುಖವಾಗಿ ತಮಿಳುನಾಡಿನೊಂದಿಗೆ ಇರುತ್ತಿತ್ತು, ಆದರಿಂದ ಈ ಹಳ್ಳಿಗೆ ಹರದನ ಹಳ್ಳಿ ಎಂದು ಹೆಸರು ಬಂದಿರಬಹುದು ಎಂದೂ ತರ್ಕಗಳಿವೆ.

ವೀರಶೈವ ಪಂಥದಲ್ಲಿ ಹರದನಹಳ್ಳಿ ಬಹು ಮುಖ್ಯವಾದದ್ದು. ವೀರಶೈವ ಮಠ ಗಳಲ್ಲಿ ಒಂದಾದ ಶೂನ್ಯ ಸಿಂಹಾಸನ ಪರಂಪರೆಯ ನಿರಂಜನ ಪೀಠ ಈ ಹರದನಹಳ್ಳಿಯ ಮೂಲದ್ದೇ.ಆ ಮಠ ಜನ ಸಾಮಾನ್ಯರಿಂದ ಹರದನಹಳ್ಳಿ ಮಠವೆಂದೇ ಕರೆಸಿಕೊಳ್ಳುತ್ತದೆ. ಅನಾದಿ ಜ್ಞಾನೇಶ್ವರರು ಈ ಮಠದ ಪ್ರಥಮ ಪೀಠಾಧಿಪತಿಗಳು. ಇವರು ಶೂನ್ಯ ಸಿಂಹಾಸನದ ನಾಲ್ಕನೇ ಪೀಠಾಧಿಪತಿಗಳೂ ಹೌದು. ಅಲ್ಲಮಪ್ರಭು, ಚನ್ನಬಸವಣ್ಣ ಹಾಗು ಸೊನ್ನಲಿಗೆ ಸಿದ್ಧರಾಮರು ಅಲಂಕರಿಸಿದ ಶೂನ್ಯ ಪೀಠವನ್ನು ಅಲಂಕರಿಸಿದ್ದ ನಾಲ್ಕನೇ ಶೂನ್ಯ ಸಿಂಹಾಸನಾಧ್ಯಕ್ಷರು. ಇದೇ ಮಠದ ಪರಂಪರೆಯನ್ನು ಇದೀಗ ನಾವು ಕುಂತೂರು, ಸಾಲೂರು, ಗುಬ್ಬಿ,ಸಿದ್ದಗಂಗೆ ಹಾಗು ಎಡೆಯೂರುಗಳಲ್ಲಿ ಕಾಣಬಹುದಾಗಿದೆ.

ಸಿದ್ದಲಿಂಗೇಶ್ವರರು  701 ವಚನಗಳನ್ನು (ಪದ್ಯಗಳು) ಒಳಗೊಂಡಿರುವ ಷಟ್ಸ್ಥಲ ಜ್ಞಾನ ಸಾರಾಮೃತವನ್ನು ಬರೆದಿದ್ದಾರೆ, ಇದು ಸ್ಥಲಗಳನ್ನು (ಮಾರ್ಗ) ಐಕ್ಯವನ್ನು ಸಾಧಿಸಲು ಅಂದರೆ ಬೆಳಕಿನಲ್ಲಿ ತೊಡಗಿಸಿಕೊಳ್ಳಲು ಭಕ್ತರಿಗೆ ಮಾರ್ಗದರ್ಶನ ನೀಡುತ್ತದೆ.

***

ಶ್ರೀ ಸಿದ್ಧಲಿಂಗೇಶ್ವರರು ಜನಿಸಿದ್ದು ಈಗಿನ ಚಾಮರಾಜ ನಗರ ಜಿಲ್ಲೆಯ, ಅದೇ ತಾಲೂಕಿನ ಹರದನ ಹಳ್ಳಿ ಎಂಬ ಗ್ರಾಮದಲ್ಲಿ.ಮಲ್ಲಿಕಾರ್ಜುನ ಮತ್ತು ಜ್ಞಾನಾಂಬೆ ಎಂಬ ಶಿವ ಶರಣ ದಂಪತಿಗಳಿಗೆ ವಿವಾಹವಾಗಿ ಬಹಳ ಕಾಲಗಳು ಉರುಳಿದರೂ ಸಂತಾನ ಭಾಗ್ಯವಿರಲಿಲ್ಲ. ಇದಕ್ಕಾಗಿ ನಿತ್ಯವೂ ಭಕ್ತಿ ಭಾವಗಳಿಂದ ಶಿವನನ್ನು ಪ್ರಾರ್ಥಿಸುತ್ತಾ , ಅತಿಥಿ, ಯೋಗಿಗಳ ಸೇವೆಯನ್ನು ಶ್ರದ್ಧಾ ಭಕ್ತಿಗಳಿಂದ ಮಾಡಿಕೊಂಡು ಜೀವನ ನಡೆಸಿಕೊಂಡು ಹೋಗುವಾಗಲೇ ಅವರಿಗೆ ಸಿದ್ಧಲಿಂಗೇಶ್ವರರ ಜನನವಾಗುತ್ತದೆ. ವಿಶೇಷವೆಂದರೆ ಅವರು ಗರ್ಭಾಶಯದಿಂದ ಜನಿಸಲಿಲ್ಲ, ಮಲ್ಲಿಕಾರ್ಜುನ ಮತ್ತು ಜ್ಞಾನಾಂಬೆಗೆ  ಆನುವಂಶಿಕ ಉತ್ತರಾಧಿಕಾರಿಗಳಿಲ್ಲದ ಶಿಶುವಾಗಿ ಕಾಣಿಸಿಕೊಂಡರು. ಅವರ ಜೀವಿತಾವಧಿಯಲ್ಲಿ ಅವರು ತೋಟದಲ್ಲಿ (ತೋಟ) 12 ವರ್ಷಗಳ ತಪಸ್ಸು ಮಾಡಿದರು ಮತ್ತು ಆದ್ದರಿಂದ ಅವರನ್ನು ತೋಂಟದ ಸಿದ್ದಲಿಂಗೇಶ್ವರ ಸ್ವಾಮಿ ಎಂದು ಗುರುತಿಸಲಾಯಿತು.ಸಿದ್ಧಲಿಂಗೇಶ್ವರರು ಎಂಟು ವರ್ಷದವರಾಗಿದ್ದಾಗ ಅವರ ತಂದೆ ತಾಯಿಗಳು ಅವರನ್ನು ಚೆನ್ನಬಸವೇಶ್ವರರ ಗೋಸಲ ಮಠಕ್ಕೆ ವಿಧ್ಯಾಭ್ಯಾಸಕಾಗಿ ಕಳುಹಿಸುತ್ತಾರೆ.ಅಧ್ಯಾತ್ಮಿಕ, ದೈವೀಕ ಜ್ಞಾನಗಳಲ್ಲಿ ತನ್ನ ವಯಸ್ಸಿಗೆ ಮೀರಿದ ಜ್ಞಾನಿಯಾಗಿದ್ದ ಬಾಲಕ ಸಿದ್ದಲಿಂಗನನ್ನು ಕಂಡು ಗುರು ಚೆನ್ನ ಬಸವೇಶ್ವರರು ಆಶ್ಚರ್ಯ ಚಕಿತರಾಗುತ್ತಾರೆ.ಗುರುಗಳು ಕೂಡಲೇ ಬಾಲಕನಿಗೆ ಸನ್ಯಾಸತ್ವ ದೀಕ್ಷೆ ನೀಡಿ, ತಮ್ಮ ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ. ಹಳೆಯ ಗುರುಕುಲ ಪದ್ಧತಿಯಲ್ಲಿ ತರಗತಿಗಳಿಗೆ ಹಾಜರಾಗಿ ಪಡೆಯುವ ಜ್ಞಾನಕ್ಕಿಂತ ಲೋಕ ಸಂಚಾರ ಮಾಡುತ್ತಾ ಗಳಿಸುವ ಜ್ಞಾನ ಮಹತ್ತರವಾದದ್ದು ಎಂಬ ನಂಬಿಕೆಯಿತ್ತು. ಹೀಗಾಗಿ ಲೋಕ ಸಂಚಾರ ಮಾಡುತ್ತಲು ಜ್ಞಾನ ಸಂಪಾದಿಸಿಕೊಳ್ಳುವುದು ಶಿಕ್ಷಣದ ಒಂದು ಮುಖ್ಯ ಭಾಗವಾಗಿತ್ತು. ಅದೇ ರೀತಿ ಸಿದ್ಧಲಿಂಗೇಶ್ವರರು ಚೆನ್ನ ಬಸವೇಶ್ವರರ ಮಾರ್ಗದರ್ಶನದಲ್ಲಿ ವಿಧ್ಯಾಭ್ಯಾಸ ಮುಗಿಸಿದ ಮೇಲೆ, ಗುರುಗಳ ಅಪ್ಪಣೆಯ ಮೇರೆಗೆ ಲೋಕ ಸಂಚಾರ ಹೊರಟು ನಿಲ್ಲುತ್ತಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆವಿಗೂ, ಪಶ್ಚಿಮಘಟ್ಟಗಳಿಂದ ಅರುಣಾಚಲ ಪ್ರದೇಶದ ವರೆವಿಗೂ ಇಡೀ ಭಾರತವನ್ನು ಸಂಚಾರ ಮಾಡಿ ಶಿವಯೋಗ, ಶಿವಭಕ್ತಿಯನ್ನು ಪ್ರಸಾರ ಮಾಡುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. 

ಎಡೆಯೂರಿನ ಸಮೀಪವಿರುವ ಮಾರ್ಕೋನಹಳ್ಳಿ ಜಲಾಶಯ.

ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದಿದ್ದ ವಚನ ಕ್ರಾಂತಿಯ ಕೀರ್ತಿಗೆ ಪುನಶ್ಚೇತನ ನೀಡಿದ ಸಿದ್ಧಲಿಂಗೇಶ್ವರರು 'ಷಟ್ ಸ್ಥಲ ಜ್ಞಾನ ಸಾರಾಮೃತ' ಎಂಬ ವಚನ ಸಂಚಿಕೆಯನ್ನು ರಚಿಸಿದರು. ೭೦೧ ವಚನಗಳಿಂದ ಕೂಡಿದ್ದ ಈ ಗ್ರಂಥ ಷಟ್ (ಆರು) ಸ್ಥಳಗಳನ್ನು(ಮೂಲಗಳನ್ನು) ಐಕ್ಯದೆಡೆಗೆ ಕೊಂಡೊಯ್ಯುವ ವಿಚಾರಗಳಿಂದ ಕೂಡಿದ ಗ್ರಂಥವಾಗಿದೆ. ಸಿದ್ದಲಿಂಗೇಶ್ವರರ ಅಂಕಿತ 'ಮಹಾಲಿಂಗ ಗುರು ಶ್ರೀ ಸಿದ್ದೇಶ್ವರ ಪ್ರಭು'.

ಈಗಿನ ತುಮಕೂರು ಜಿಲ್ಲೆಯ ಕಗ್ಗೆರೆ ಗ್ರಾಮ ಹಾಗು ಸುತ್ತಮುತ್ತಲಿನ ಗ್ರಾಮಗಳಿಗೆ ಮಾಂಡಲೀಕರಾಗಿದ್ದವರು ವಕ್ಕಲಿಗರ ನಂಬಿಯನ. ಸಿದ್ಧಲಿಂಗೇಶ್ವರರು ಲೋಕ ಸಂಚಾರ ಮಾಡುತ್ತಾ ಈ ನಂಬಿಯನ ತೋಟದಲ್ಲಿ ಬೀಡು ಬಿಡುತ್ತಾರೆ. ಅದಾಗಲೇ ಸಿದ್ಧಲಿಂಗೇಶ್ವರರ ಬಗ್ಗೆ ಕೇಳಿ ತಿಳಿದಿದ್ದ ನಂಬಿಯನ ಖುದ್ದು ತಾನೇ ಬಂದು ಸ್ವಾಮಿಯವರನ್ನು ಭೇಟಿಯಾಗುತ್ತಾನೆ ಹಾಗು ತಮ್ಮ ಮನೆಗೆ ಆಗಮಿಸಿ ಆತಿಥ್ಯವನ್ನು ಸ್ವೀಕರಿಸಿ ಊರಿನ ಜನಗಳನ್ನು ಆಶಿರ್ವದಿಸಬೇಕಾಗಿ ಕೇಳಿಕೊಳ್ಳುತ್ತಾನೆ. ಇದಕ್ಕೆ ಒಪ್ಪಿದ ಸಿದ್ಧಲಿಂಗೇಶ್ವರರು ಮತ್ತೊಮ್ಮೆ ನಂಬಿಯನ ಬಂದು ಕರೆಯುವವರೆಗೂ ತಾವು ಅದೇ ತೋಟದಲ್ಲಿ ಇರುವುದಾಗಿ ತಿಳಿಸುತ್ತಾರೆ. ಸಂತೋಷದಿಂದ ನಂಬಿಯನ ತನ್ನ ಮನೆಗೆ ಹಿಂದಿರುಗಿ ಸ್ವಾಮಿಯವರ ಸೇವೆಗೆ ಅಣಿ ಮಾಡಲು ಮೊದಲಾಗುತ್ತಾನೆ. ಇದೇ ಸಮಯಕ್ಕೆ ಬಹಳ ವರ್ಷಗಳಿಂದ ಆ ಊರಿನೊಂದಿಗೆ ವೈರತ್ವ ಸಾಧಿಸುತ್ತಿದ್ದ ದಕ್ಷಿಣ ಪ್ರಾಂತ್ಯದ ಗುಡ್ಡಗಾಡು ಪ್ರದೇಶದ ಬೇಡರ ಗುಂಪು ಕಗ್ಗೆರೆ ಮತ್ತಿತರ ಪ್ರದೇಶಗಳ ಮೇಲೆ ಯುದ್ಧ ಸಾರುತ್ತದೆ. ಯುದ್ಧದಲ್ಲಿ ಪ್ರಬಲರಾಗಿದ್ದ ಬೇಡರ ಪಡೆ ಯುದ್ಧದಲ್ಲಿ ವಿಜಯಿಗಳಾಗಿ ಅಲ್ಲಿನ ಮಾಂಡಲೀಕರು ಸೇರಿದಂತೆ ಎಲ್ಲರನ್ನು ಸೆರೆಯಾಳುಗಳನ್ನಾಗಿ ಹೊತ್ತೊಯ್ಯಲಾಗುತ್ತದೆ. ಮುಂದೆ ಈ ಸಂಕಷ್ಟದಿಂದ ಪಾರಾಗಲು ಅವರಿಗೆ ಸುಮಾರು ಹನ್ನೆರಡು ವರ್ಷಗಳೇ ಬೇಕಾಗುತ್ತವೆ. ಇಷ್ಟು ಸುಧೀರ್ಘ ಅವಧಿ ಬಂಧನದಲ್ಲಿ ಕಳೆದಿದ್ದ ಅವರ್ಯಾರಿಗೂ ನಂಬಿಯನು ಸಿದ್ಧಲಿಂಗೇಶ್ವರರನ್ನು ಆಹ್ವಾನಿಸಿದ ವಿಷಯ ನೆನಪೇ ಇರಲಿಲ್ಲ.

ಬಂಧನಮುಕ್ತರಾಗಿ ಊರಿಗೆ ಹಿಂದಿರುಗಿದ ಎಲ್ಲರಿಗೂ ನಂಬಿಯನ ತೋಟದಲ್ಲಿ ಹುತ್ತ ಬೆಳೆದಿರುವುದು ಕಂಡಿತ್ತು. ಆದರೆ ಅದರ ಬಗ್ಗೆ ಯಾರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ಆದರೆ ಅಲ್ಲೊಂದು ಆಶ್ಚರ್ಯ ನಡೆಯಲು ಶುರುವಾಗುತ್ತದೆ. ಮೇಯಲು ಬಿಟ್ಟಿದ್ದ ದನಗಳ ಗುಂಪಿನಿಂದ ತಪ್ಪಿಸಿಕೊಂಡ ಹಸುವೊಂದು ಬಿರುಸಾಗಿ ಓಡಿ ನಂಬಿಯನ ತೋಟದಲ್ಲಿರುವ ಹುತ್ತದ ಮೇಲೇರಿ ತನ್ನಷ್ಟಕ್ಕೆ ತಾನೇ ಹುತ್ತಕ್ಕೆ ಹಾಲು ಕರೆಯಲು ಆರಂಭಿಸುತ್ತದೆ. ಇದನ್ನು ಆರಂಭದಲ್ಲಿ ಕಂಡ ಅಲ್ಲಿನ ದನಗಾಹಿಗಳು ಅದನ್ನು ಹಗುರವಾಗಿ ಪರಿಗಣಿಸಿದ್ದರು, ಆದರೆ ಹಸುಗಳು ಸರತಿಯ ಪ್ರಕಾರ ದಿನವೂ ಹೋಗಿ ಸ್ವಪ್ರೇರಿತವಾಗಿ ನಂಬಿಯನ ತೋಟದಲ್ಲಿರುವ ಹುತ್ತಕ್ಕೆ ಹಾಲು ಎರೆಯುವುದನ್ನು ಕಂಡು ಅಲ್ಲೇನೂ ವಿಶೇಷವಿರಬಹುದು ಎಂದು ಭಾವಿಸಿದ ದನಗಾಹಿಗಳು ಹುತ್ತವನ್ನು ಒಡೆಯಲು ಮುಂದಾಗುತ್ತಾರೆ. ಆದರೆ ಅಲ್ಲಿ ಭಯಂಕರ ವಿಷ ಸರ್ಪಗಳು ಓಡಾಡುತ್ತಿದುದನ್ನು ಕಂಡು ಭಯದಿಂದ ದೂರ ಸರಿದು ಈ ವಿಷಯವನ್ನು ಕೂಡಲೇ ಊರಿಗೆ ತಿಳಿಸುತ್ತಾರೆ. ಊರ ಜನರ ಸಮೇತ ನಂಬಿಯನ ತೋಟಕ್ಕೆ ಬಂದು ಕೂಲಂಕುಶವಾಗಿ ಹುತ್ತದ ಹತ್ತಿರ ನಿಂತು ಪರಿಶೀಲಿಸಿದಾಗ ಹುತ್ತದ ಒಳಗಿಂದ 'ಓಂ ನಮಃ ಶಿವಾಯ' ಎಂದು ಶಿವ ಪಂಚಾಕ್ಷರಿ ಮಂತ್ರ ನಿರಂತರವಾಗಿ ಕೇಳಿಬರುತ್ತಿದ್ದುದನ್ನು ಗ್ರಹಿಸುತ್ತಾರೆ. ಊರಿನ ಜನರೆಲ್ಲಾ ಇಲ್ಲಿ ಯಾರೋ ಮಹಾತ್ಮರು ತಪಸ್ಸು ಮಾಡುತ್ತಿರಬಹುದು ಎಂದು ತಮ್ಮ ತಮ್ಮಲ್ಲೇ ಮಾತಾಡಿಕೊಂಡಾಗ ನಂಬಿಯನ ತಾನು ಸಿದ್ಧಲಿಂಗೇಶ್ವರರಿಗೆ ವರ್ಷಾನು ಗಟ್ಟಲೆಗಳ ಹಿಂದೆ ಕೊಟ್ಟಿದ್ದ ವಚನ ಜ್ಞಾಪಕವಾಗುತ್ತದೆ. ತನ್ನಿಂದ ಅತಿ ದೊಡ್ಡ ಪ್ರಮಾದವಾಗಿ ಈ ಅಚಾತುರ್ಯಕ್ಕೆ ಕಾರಣವಾಯಿತು ಎಂದು ಬಹಳ ಬೇಸರ ಪಟ್ಟುಕೊಳ್ಳುತ್ತಾನೆ. ಕೂಡಲೇ ಹುತ್ತದ ಹೊರಗೆ ನಿಂತುಕೊಂಡೆ ಸಿದ್ಧಲಿಂಗೇಶ್ವರರನ್ನು ಕರೆಯುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ಸಿದ್ಧಲಿಂಗೇಶ್ವರರು ತನ್ನ ಸುತ್ತಲು ಇರುವ ಹುತ್ತದಲ್ಲಿ ಅನೇಕ ಜೀವಿಗಳು ವಾಸಿಸುತ್ತಿರುವುದರಿಂದ ಹುತ್ತವನ್ನು ಒಡೆದರೆ ಅವುಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಅವುಗಳು ಈ ಸ್ಥಳ ಬಿಟ್ಟು ತೆರಳಿದ ನಂತರ ನೀವು ಹುತ್ತವನ್ನು ಕೆಡವಬಹುದು ಎಂದು ಆಜ್ಞಾಪಿಸುತ್ತಾರೆ. ಅಪ್ಪಣೆ ಅನುಸರಿಸಲು ಅಲ್ಲೇ ನಿಲ್ಲುವ ನಂಬಿಯನ ಅಲ್ಲಿನ ವಿಷಪೂರಿತ ಹಾವುಗಳು, ಇಲಿ ಹೆಗ್ಗಣಗಳು, ಕಪ್ಪೆಗಳು, ಗೆದ್ದಲು ಹುಳುಗಳು, ಮುಂತಾದ ಜೀವಿಗಳು ಆ ಹುತ್ತವನ್ನು ತೊರೆಯುವ ತನಕ ಕಾದು ಅನಂತರ ಇದೇ ಹುತ್ತವನ್ನು ಹಸುವಿನ ಹಾಲಿನಿಂದ ಕರಗಿಸಿ ತನ್ನಿಂದ ಆದ ಪ್ರಮಾದವನ್ನು ಮನ್ನಿಸುವಂತೆ ಸಿದ್ಧಲಿಂಗೇಶ್ವರರನ್ನು ಭಿನ್ನವಿಸಿಕೊಳ್ಳುತ್ತಾನೆ. ಭಕ್ತನೊಬ್ಬನಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಸಲುವಾಗಿ ಕುಳಿತ ಜಾಗದಿಂದ ಕದಲದೇ ಹನ್ನೆರಡು ವರ್ಷಗಳ ಕಾಲ ತೋಟವೊಂದರಲ್ಲಿ ತಪೋನಿಷ್ಠರಾಗಿದ್ದ ಸಿದ್ಧಲಿಂಗೇಶ್ವರರು ಜಗತ್ತು ಕಂಡ ಮಹಾ ಶರಣ ಹಾಗು ಪವಾಡ ಪುರುಷ, ಹಾಗಾಗಿ ಅವರಿಗೆ ‘ತೋಂಟದ ಸಿದ್ಧಲಿಂಗೇಶ್ವರ’ ಎಂಬ ಹೆಸರು ಪ್ರಾಪ್ತವಾಯಿತು.

ಮಹಾ ಪವಾಡ ಪುರುಷರಾದ ಯತಿಗಳು ಲಿಂಗೈಕ್ಯರಾಗಿದ್ದು ಈಗಿನ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರಿನಲ್ಲಿ. (ಕಲ್ಕೆರೆಯಲ್ಲಿಯೇ ಅವರು ಐಕ್ಯರಾದುದು ಅಂತಲೂ ಜನ ಹೇಳುತ್ತಾರೆ.)

***

ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗಳು ಮಹಾದೇವನ ಅಂಶ, ಅವತಾರವೆಂದು ಹೇಳಲಾಗುತ್ತದೆ. ಅವರು ದೂರ ದೂರದ ಊರುಗಳಿಗೆ ಪ್ರಯಾಣಿಸಿ ಅಲ್ಲಿನ ಜನರಿಗೆ ಶಾಶ್ವತ ಸತ್ಯವನ್ನು ಬೋಧಿಸಿದರು ಅಲ್ಲದೆ ಜಾತಿ, ಉಪಜಾತಿಗಳ, ಧರ್ಮವನ್ನು ಲೆಕ್ಕಿಸದೆ  ಅನೇಕ ಜನರಿಗೆ ಅನೇಕ ಬಗೆಯಲ್ಲಿ ಒಳಿತನ್ನು ಮಾಡಿದ್ದರು.

ಸಿದ್ದಗಂಗಾ ಕ್ಷೇತ್ರವು ಬರಡು ಮತ್ತು ಬಂಜರು ಪ್ರದೇಶವಾಗಿದೆ ಎಂದು ಹೇಳಿದ ಶ್ರೀಗಳು ಳಕ್ಕೆ ಭೇಟಿ ನೀಡಿದಾಗ, ಅಲ್ಲಿ ಜನರಿಗೆ ನೀರಿನ ಒರತೆ ಕೊಡಿಸುವ ಮೂಲಕ ಪವಾಡ ಮೆರೆದರು. ಅವರ  ಪಾದದ ಕೆಳಗಿನಿಂದ ನೀರಿನ ಚಿಲುಮೆ ಹೊರಹೊಮ್ಮಿತು. ಸಿದ್ದಲಿಂಗೇಶ್ವರನ ಕುರಿತಾದ ಒಂದು ಕಥೆಯು ಎಡೆಯೂರು  ಸಮೀಪದ ಕಗ್ಗೆರೆಗೆ ಸಂಬಂಧಿಸಿದೆ, ಅಲ್ಲಿ ಶ್ರೀಗಳು ನಂಬಿಯಣ್ಣ ಎಂಬ ಭಕ್ತನ ಮನೆಯಲ್ಲಿ  ಜೆಯನ್ನು ಮಾಡಲು ಒಪ್ಪಿಕೊಂಡನು. ಪೂಜೆಯನ್ನು ವಿರೋಧಿಸಿ ಬುಡಕಟ್ಟು ಮುಖಂಡರು ದಾಳಿ ಮಾಡಿದರು, ಇದರಿಂದ ಗ್ರಾಮಸ್ಥರು ಗ್ರಾಮದಿಂದ ಓಡಿಹೋದರು (ಗುಳೆಹೊದರು). ಹನ್ನೆರಡು ವರ್ಷಗಳು ಕಳೆದವು ಮತ್ತು ಶ್ರೀಗಳು ತನ್ನ ಆಳವಾದ ಧ್ಯಾನವನ್ನು ಮುಂದುವರೆಸಿದರು.  ಅವರ ಸುತ್ತಲೂ ಹುತ್ತ ಬೆಳೆದಿತ್ತು.ಆದರೆ ನಂಬಿಯಣ್ಣನ ಹಸುವೊಂದು ಆ ಹುತ್ತದಲ್ಲಿದ್ದ ಶ್ರೀಗಳಿಗೆ ನಿತ್ಯ ಹಾಲೂಡಿಸುತ್ತಿತ್ತು.ಇದನ್ನು ಕಂಡ ಗ್ರಾಮಸ್ಥರು ಶ್ರೀಗಳ ಬಗೆಗಿನ ತಮ್ಮ ತಪ್ಪು ಅಭಿಪ್ರಾಯಗಳನ್ನು ದೂರ ಮಾಡಿ ಅವರಿಗೆ ಶರಣಾದರು.


No comments:

Post a Comment