Saturday, November 23, 2013

ಜಗತ್ಪ್ರಸಿದ್ದ ಭಾಷಣಗಳು- 01

ಸಚಿನ್ ತೆಂಡುಲ್ಕರ್(Sachin Tendulkar)

    ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೆ ನನ್ನ ನಮಸ್ಕಾರಗಳು.
    ಇತ್ತೀಚೆಗಷ್ಟೆ ಭಾರತೀಯರಷ್ಟೆ ಅಲ್ಲ ಪ್ರಪಂಚದ ಕ್ರಿಕೆಟ್ ಪ್ರಿಯರಿಗೆಲ್ಲ ‘ಕ್ರಿಕೆಟ್ ದೇವರು’ ಎನಿಸಿದ್ದ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಭಾರತ ಸರ್ಕಾರ ಸಚಿನ್ ಸಾಧನೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ‘ಭಾರತ ರತ್ನ’ ಪ್ರಶಸ್ತಿಯನ್ನು ಘೋಷಿಸಿದೆ.
    ಈ ವೇಳೆಯಲ್ಲಿ ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದದ ಎರಡನೆ ಟೆಸ್ಟ್ ಹಾಗೂ ತಮ್ಮ ಕ್ರಿಕೆಟ್ ಜೀವನದ ಅಂತಿಮ ಟೆಸ್ಟ್ ಪಂದ್ಯವನ್ನಾಡಿ ಮುಗಿಸಿದ ಸಚಿನ್ ನವೆಂಬರ್ 16-11-2013ರಂದು ತಾವು ಮಾಡಿದ ಐತಿಹಾಸಿಕ ವಿದಾಯ ಭಾಷಣದ ಪೂರ್ಣ ಪಾಠ ನಿಮಗಾಗಿ….
………………………..
    ಗೆಳೆಯರೆ, ದಯವಿಟ್ಟು ಶಾಂತವಾಗಿರಿ, ಇಲ್ಲವಾದರೆ ನಾನು ಇನ್ನಷ್ಟು ಭಾವುಕನಾಗುತ್ತೇನೆ!
    22 ಯಾರ್ಡ್ಸ್ ನಡುವಿನ ನನ್ನ 24 ವರ್ಷಗಳ ಬದುಕು ಕೊನೆಯಾಗುತ್ತಿರುವುದನ್ನು ನಂಬಲು ಕಷ್ಟವಾಗುತ್ತಿದೆ.
    ನನ್ನ ಜೀವನ ಯಾನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರಿಗೆ ಕೃತಜ್ಞತೆ ಸಲ್ಲಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ. ನಾನು ಧನ್ಯವಾದ ಹೇಳಲೇಬೇಕಾಗಿರುವ ಹೆಸರನ್ನು ಪಟ್ಟಿ ಮಾಡಿಕೊಂಡು ಬಂದಿರುವೆ. ಯಾರ ಹೆಸರನ್ನೂ ಮರೆಯದೆ ಎಲ್ಲರನ್ನೂ ನೆನಪಿಸಿಕೊಳ್ಳಲು ಬಯಸಿರುವೆ. ಭಾವೋದ್ವೇಗದಿಂದಾಗಿ ಮಾತನಾಡಲು ಸ್ವಲ್ಪ ಕಷ್ಟವಾಗುತ್ತಿದೆ. ಆದರೆ ನಾನು ಮ್ಯಾನೇಜ್ ಮಾಡಬಲ್ಲೆ
    ನನ್ನ ಜೀವನದ ಅತ್ಯಂತ ಪ್ರಮುಖ ವ್ಯಕ್ತಿ ನನ್ನ ತಂದೆ. 1999ರಲ್ಲಿ ಅವರು ನಿಧನರಾದಾಗಿನಿಂದ ನಾನು ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವೆ. ಅವರ ಮಾರ್ಗದರ್ಶನವಿರದಿದ್ದರೆ ನಾನಿಂದು ನಿಮ್ಮ ಮುಂದೆ ನಿಂತಿರುತ್ತಿರಲಿಲ್ಲ. ಅವರು ನನಗೆ 11ನೇ ವಯಸ್ಸಿನಲ್ಲೇ ಸ್ವಾತಂತ್ರ ನೀಡಿದರು. ‘ಕನಸುಗಳನ್ನು ಬೆನ್ನಟ್ಟು. ಎಂದೂ ಅಡ್ಡದಾರಿ ಹಿಡಿಯಬೇಡ. ದಾರಿ ಕಠಿಣವಾಗಿರಬಹುದು, ಆದರೆ ಎಂದೂ ಎದೆಗುಂದಬೇಡ.’ ಎಂದವರು ಹೇಳಿದ್ದರು. ನಾನವರ ಮಾತನ್ನಷ್ಟೇ ಪಾಲಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರು ನನಗೆ ಉತ್ತಮ ವ್ಯಕ್ತಿಯಾಗಿರಲು ಸೂಚಿಸಿದ್ದರು. ನಾನದನ್ನು ಪಾಲಿಸುವ ಪ್ರಯತ್ನವನ್ನು ಮುಂದುವರಿಸುವೆ. ಪ್ರತಿ ಬಾರಿ ವಿಶೇಷ ಸಾಧನೆ ಬಳಿಕ ನನ್ನ ಬ್ಯಾಟನ್ನು ಆಕಾಶದತ್ತ ಪ್ರದರ್ಶಿಸುತ್ತಿದ್ದಿದ್ದು ನನ್ನ ತಂದೆಗಾಗಿ.
    ನನ್ನ ಅಮ್ಮ ಹೇಗೆ ನನ್ನಂತ ತುಂಟ ಮಗನನ್ನು ನಿಭಾಯಿಸಿದರೆಂದು ಗೊತ್ತಿಲ್ಲ. ನನ್ನನ್ನು ನೋಡಿಕೊಳ್ಳುವುದು ಸುಲಭವಾಗಿರಲಿಲ್ಲ. ಆಕೆಯ ತಾಳ್ಮೆ ಅಪಾರ. ತಾಯಿಯೊಬ್ಬಳಿಗೆ ಮಗನ ಯೋಗಕ್ಷೇಮವೇ ಮುಖ್ಯ. ನನ್ನ 24 ವರ್ಷಗಳ ವೃತ್ತಿಜೀವನದಲ್ಲಿ ನನ್ನಮ್ಮ ಪ್ರತೀ ದಿನ ನನ್ನ ಬಗ್ಗೆಯೇ ಕಾಳಜಿ ಹೊಂದಿದ್ದರು. ನಾನು ಆಟವಾಡಲು ಆರಂಭಿಸಿದ ದಿನದಿಂದಲೂ ಆಕೆ ನನಗಾಗಿ ಪ್ರಾರ್ಥಿಸುತ್ತಾ ಬಂದಿದ್ದಾರೆ. ಅಮ್ಮನ ಪ್ರಾರ್ಥನೆ ಮತ್ತು ಆಶೀರ್ವಾದವೇ ನನಗೆ ಮೈದಾನಕ್ಕಿಳಿದು ಉತ್ತಮ ನಿರ್ವಹಣೆ ತೋರಲು ಸಾಮರ್ಥ್ಯ ನೀಡಿದೆ. ಅಮ್ಮನ ಎಲ್ಲಾ ತ್ಯಾಗಗಳಿಗಾಗಿ ನನ್ನ ದೊಡ್ಡ ವಂದನೆ.
    ನನ್ನ ಶಾಲೆ ಮನೆಯಿಂದ ಸಾಕಷ್ಟು ದೂರದಲ್ಲಿದ್ದ ಕಾರಣ ನಾಲ್ಕು ವರ್ಷಗಳ ಕಾಲ ನಾನು ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಮನೆಯಲ್ಲಿದ್ದೆ. ಅವರು ನನ್ನನ್ನು ಅವರ ಮಗನಂತೆಯೇ ನೋಡಿಕೊಂಡರು. ದಿನವಿಡೀ ಆಟವಾಡಿ ಸುಸ್ತಾಗಿ ಅರೆನಿದ್ರೆಗೆ ಜಾರಿದ ಬಳಿಕವೂ ಚಿಕ್ಕಮ್ಮ ನನ್ನ ಬಾಯಿಗೆ ತುತ್ತು ತಿನ್ನಿಸುತ್ತಿದ್ದರು. ಇದರಿಂದಾಗಿ ಮರುದಿನ ನಾನು ಮತ್ತೆ ಹೊಸ ಚೈತನ್ಯದಿಂದ ಆಟಕ್ಕಿಳಿಯುತ್ತಿದ್ದೆ. ನಾನು ಆ ದಿನಗಳ್ನ್ನೆಂದೂ ಮರೆಯಲಾರೆ. ನಾನವರ ಮಗನಿದ್ದಂತೆ.
    ನನ್ನ ಹಿರಿಯ ಅಣ್ಣ ನಿತಿನ್ ಹಾಗೂ ಅವನ ಕುಟುಂಬವೂ ನನಗೆ ಯಾವಾಗಲೂ ಪ್ರೋತ್ಸಾಹ ತುಂಬಿದೆ. ನನ್ನ ಹಿರಿಯಣ್ಣ ಹೆಚ್ಚು ಮಾತನಾಡುವವರಲ್ಲ. ಆದರೆ ಒಂದು ಮಾತು ಮಾತ್ರ ಅವರು ಯಾವಾಗಲೂ ನನಗೆ ಹೇಳುತ್ತಿರುತ್ತಾರೆ. ‘ನೀನು ಏನೇ ಮಾಡಿದರೂ ಶೇ. 100ರಷ್ಟು ಮನಸ್ಸಿಟ್ಟು ಮಾಡುವೆ ಎನ್ನುವುದು ನನಗೆ ಗೊತ್ತು. ನಿನ್ನ ಮೇಲೆ ನನಗೆ ಪೂರ್ಣ ನಂಬಿಕೆ ಮತ್ತು ವಿಶ್ವಾಸವಿದೆ.’ ಅವರ ಪ್ರೋತ್ಸಾಹ ನನ್ನ ಪಾಲಿಗೆ ಸಾಕಷ್ಟು ಅಮೂಲ್ಯ.
ನನ್ನ ಅಕ್ಕ ಸವಿತಾ ಮತ್ತು ಆಕೆಯ ಕುಟುಂಬವೂ ಭಿನ್ನವಲ್ಲ. ನನ್ಗೆ ಮೊದಲ ಕ್ರಿಕೆಟ್ ಬ್ಯಾಟ್ ಉಡುಗೊರೆ ಕೊಟ್ಟವರು ನನ್ನ ಅಕ್ಕ. ಅದೊಂದು ಕಾಶ್ಮೀರಿ ಮರದ ಬ್ಯಾಟ್. ಅಲ್ಲಿಂದಲೇ ನನ್ನ ಪ್ರಯಾಣ ಆರಂಭಗೊಂಡಿದ್ದು. ನಾನು ಬ್ಯಾಟಿಂಗ್ ಮಾಡುವಾಗ ಉಪವಾಸ ಮಾಡುವ ಎಷ್ಟೋ ಜನರಲ್ಲಿ ನನ್ನಕ್ಕ ಕೂಡ ಒಬ್ಬರು.
    ಅಜಿತ್ ಬಗ್ಗೆ ನಾನೇನು ಹೇಳಲಿ? ನಾವಿಬ್ಬರು ಈ ಕನಸನ್ನು ಜತೆಯಾಗಿ ಅನುಭವಿಸಿದ್ದೇವೆ. ಅವರು ನನಗಾಗಿ ನನ್ನ ವೃತ್ತಿ ಜೀವನವನ್ನೇ ತ್ಯಾಗ ಮಾಡಿದ್ದಾರೆ. ನನ್ನಲ್ಲಿದ್ದ ಕ್ರಿಕೆಟ್ ಆಸಕ್ತಿಯನ್ನು ಗುರುತಿಸಿ ಅಜ್ರೇಕರ್ ಸರ್ ಬಳಿಗೆ ನನ್ನ ೧೧ನೇ ವಯಸ್ಸಿನಲ್ಲೇ ಕರೆದೊಯ್ದಲ್ಲಿಂದ ಎಲ್ಲವೂ ಆರಂಭಗೊಂಡಿತು. ಅಲ್ಲಿಂದ ಮುಂದೆ ನನ್ನ ಜೀವನವೇ ಬದಲಾಯಿತು. ಶುಕ್ರವಾರ ರಾತ್ರಿಯೂ ಅವರು ನನಗೆ ಕರೆಮಾಡಿ ನಾನು ಔಟಾದ ರೀತಿಯ ಬಗ್ಗೆ ಚರ್ಚಿಸಿದರು. ಅದು ನಾವು ಬೆಳೆಸಿಕೊಂಡು ಬಂದಿರುವ ಅಭ್ಯಾಶ. ಬಹುಷಃ ಮುಂದೆ ನಾನು ಆಟವಾಡದ ದಿನಗಳಲ್ಲಿಯೂ ನಾವಿಬ್ಬರು ತಾಂತ್ರಿಕತೆಗಳ ಕುರಿತು ಚರ್ಚಿಸಬಹುದು. ನಾವೂ ವಾಗ್ವಾದ ನಡೆಸಿದ್ದೇವೆ ಮತ್ತು ಅಭಿಪ್ರಾಯ ಭೇದ ಬಂದಿವೆ. ಆದರೆ ನಾನು ಜೀವ್ನದಲ್ಲಿ ಇಂಥದ್ದನ್ನೆಲ್ಲಾ ಪಾಲಿಸಿಕೊಂಡು ಬಂದಿದ್ದರೆ ನಾನು ಇಷ್ಟು ಉತ್ತಮ ಕ್ರಿಕೆಟಿಗನಾಗುತ್ತಿರಲಿಲ್ಲ.
    ನನ್ನ ಜೀವನದ ಅತ್ಯಂತ ಸುಂದರವಾದ ಘಟನೆ ಎಂದರೆ 1990ರಲ್ಲಿ ನಾನು ಅಂಜಲಿಯನ್ನು ಭೇಟಿಯಾದದ್ದು. ಅವು ವಿಶೇಷ ವರ್ಷಗಳು ಮತ್ತು ಈಗಲೂ ಮುಂದುವರಿದಿವೆ ಮತ್ತು ಯಾವಾಗಲೂ ಇದೇ ರೀತಿ ಮುಂದುವರಿಯುತ್ತದೆ. ನನಗೆ ಗೊತ್ತಿದೆ.... ಓರ್ವ ವೈದ್ಯೆಯಾಗಿ ಅಂಜಲಿಯ ಎದುರು ಬಹು ದೊಡ್ಡ ವೃತ್ತಿಜೀವನವಿತ್ತು. ಆದರೆ, ನಮ್ಮ ಕುಟುಂಬಕ್ಕಾಗಿ ಅಂಜಲಿ ತನ್ನ ಕನಸಿನಿಂದ ಹಿಂದೆ ಸರಿದಳು. ‘ತಾನೇ ಕುಟುಂಬದ ಎಲ್ಲಾ ಜವಾಬ್ದಾರಿ ಹೊತ್ತುಕೊಂಡು ನಾನು ನಿಶ್ಚಿಂತೆಯಿಂದ ಕ್ರಿಕೆಟ್ ಆಡುವಂತೆ ನೋಡಿಕೊಂಡಳು.’ ನನ್ನೆಲ್ಲಾ ಪೂರ್ವ ಮತ್ತು ಹತಾಶೆಗಳನ್ನು ಮತ್ತು ನಾನಾಡಿದ ಎಲ್ಲಾ ಅಸಂಬದ್ದ ಮಾತುಗಳನ್ನು ಸಹಿಸಿಕೊಂಡದ್ದಕ್ಕೆ ಧನ್ಯವಾದಗಳು. ಅಂಜಲಿ ನನ್ನೆಲ್ಲಾ ಏಳು ಬೀಳುಗಳಲ್ಲಿ ಹೆಗಲು ಕೊಟ್ಟಿದ್ದಾಳೆ. ನನ್ನ ಜೀವನದ ಅತ್ಯುತ್ತಮ ಜತೆಯಾಟ ನಿನ್ನೊಂದಿಗೆ ಬಂದಿದೆ.
    ನನ್ನ ಜೀವನದ ಎರಡು ಅಮೂಲ್ಯ ವಜ್ರಗಳು ನನ್ನ ಮಕ್ಕಳಾದ ಸಾರಾ ಮತ್ತು ಅರ್ಜುನ್. ಅವರು ಈಗಾಗಲೇ ಬೆಳೆದಿದ್ದಾರೆ. ನನ್ನ ಮಗಳಿಗೆ 16 ಮತ್ತು ಮಗನಿಗೆ 14 ವರ್ಷ. ನಾನು ಅವರ ಹುಟ್ಟುಹಬ್ಬ, ರಜಾದಿನಗಳು, ಶಾಲಾ ವಾರ್ಷಿಕೋತ್ಸವ, ಕ್ರೀಡಾದಿನಗಳಂತಹಾ ವಿಶೇಷ ಸಂದರ್ಭಗಳನ್ನು ತಪ್ಪಿಸಿಕೊಂಡಿದ್ದೇನೆ. ನನ್ನನ್ನು ಅರ್ಥ ಮಾಡಿಕೊಂಡಿರುವುದಕ್ಕೆ ಧನ್ಯವಾದಗಳು. ನೀವಿಬ್ಬರು ನನ್ನ ಪ್ಲಿಗೆ ಎಷ್ಟು ವಿಶೇಷವಾದವರೆಂದರೆ ಅದನ್ನು ವಿವರಿಸಲು ಪದಗಳಿಲ್ಲ. ನಾನು ಮುಂದಿನ 16 ವರ್ಷ ಅಥವಾ ಇನ್ನುಳಿದ ಸಮಯವನ್ನು ನಿಮಗಾಗಿ ಮೀಸಲಿಡುತ್ತೇನೆ.
    ನನ್ನ ಅತ್ತೆ-ಮಾವ ನನಗೆ ಸಾಕಷ್ಟು ಬೆಂಬ್ಲ, ಪ್ರೀತಿ ಕೊಟ್ಟಿದ್ದಾರೆ. ನಮಗೆ ಯಾವಾಗಲೂ ಬೆಂಬಲ ನೀಡುವ ಮತ್ತು ಮಾರ್ಗದರ್ಶನವನ್ನು ನೀಡುವ ಕುಟುಂಬವನ್ನು ಹೊಂದುವುದು ಪ್ರಮುಖವಾದುದು. ಅವರು ಮಾಡಿದ ಅತ್ಯಂತ ಪ್ರಮುಖ ಕೆಲಸವೆಂದರೆ ನನಗೆ ತಮ್ಮ ಮಗಳು ಅಂಜಲಿ ಜತೆ ಮದುವೆಯಾಗಲು ಅವಕಾಶ ನೀಡಿದ್ದು....! 
    ಕಳೆದ 24 ವರ್ಷಗಳಲ್ಲಿ ನಾನು ಭಾರತ ತಂಡದ ಪರ ಆಡುವಾಗ ಹಲವು ಹೊಸ ಗೆಳೆಯರನ್ನು ಸಂಪಾದಿಸಿದ್ದೇನೆ. ಆದರೆ ಅದಕ್ಕೆ ಮುನ್ನ ಬಾಲ್ಯದಿಂದಲೂ ನಾನು ಗೆಳೆಯರನ್ನು ಹೊಂದಿದ್ದೆ. ಅವರೆಲ್ಲರ ಕೊಡುಗೆ ಅಪಾರ. ನೆಟ್ಸ್ ನಲ್ಲಿ ಬೌಲಿಂಗ್ ಮಾಡಲು ಕರೆದಾಗಲೆಲ್ಲಾ ಅವರು ತಮ್ಮ ಕೆಲಸವನ್ನು ಬದಿಗಿಟ್ಟು ಬಂದು ನನಗೆ ನೆರವಾಗಿದ್ದಾರೆ. ರಜಾದಿನಗಳನ್ನು ನನ್ನೊಂದಿಗೆ ಕಳೆದಿರುವುದು ಮಾತ್ರವಲ್ಲದೆ, ಕ್ರಿಕೆಟ್ ಬಗ್ಗೆ ನನ್ನೊಂದಿಗೆ ಚರ್ಚಿಸಿದ್ದಾರೆ. ನಾನು ಮಾನಸಿಕ ಒತ್ತಡಕ್ಕೊಳಗಾದಾಗ ಅಥವಾ ಉತ್ತಮ ನಿರ್ವಹಣೆಗಾಗಿ ವಿಶ್ಲೇಷಣೆ ಬಯಸಿದಾಗ ನನಗೆ ನೆರವಾಗಿದ್ದಾರೆ. ನಾನು ಗಾಯಗೊಂಡಿದ್ದ ದಿನಗಳಲ್ಲಿ ನನಗೆ ನಿದ್ದೆ ಬರುತ್ತಿರಲಿಲ್ಲ ಮತ್ತು ನನ್ನ ವೃತ್ತಿಜೀವನ ಮುಗಿದು ಹೋಯ್ತೆಂದು ಚಿಂತಿತನಾಗಿದ್ದೆ. ಆದರೆ ನನ್ನ ಗೆಳೆಯರು ಮುಂಜಾನೆ 3 ಗಂಟೆಗೂ ನನ್ನ ಜತೆ ಡ್ರೈವ್ ಗೆ ಬಂದು ನನ್ನ ವೃತ್ತಿಜೀವನ ಮುಗಿದಿಲ್ಲ ಎನ್ನುವ ಭರವಸೆಯ ಮಾತನ್ನಾಡುತ್ತಿದ್ದರು. ಆ ಗೆಳೆಯರ ಹೊರತಾಗಿ ನನ್ನ ಜೀವನ ಅಪೂರ್ಣ.
    ನನಗೆ 11 ವರ್ಷವಾಗಿದ್ದಾಗ ನನ್ನ ಕ್ರಿಕೆಟ್ ಜೀವನ ಆರಂಭವಾಯಿತು. ನನ್ನ ಅಣ್ಣ ಅಜ್ರೀಕರ್ ಸರ್ ಬಳಿಗೆ ಕರೆದೊಯ್ದದ್ದೇ ಜೀವನದ ಟರ್ನಿಂಗ್ ಪಾಯಿಂಟ್. ನಾನಿಲ್ಲಿ ಅವರನ್ನು ಸ್ಟ್ಯಾಂಡ್ ನಲ್ಲಿ ನೋಡಿ ಅಪಾರ ಖುಷಿಪಟ್ಟೆ. ಸಾಮಾನ್ಯವಾಗಿ ಅವರು ಟಿವಿ ಮುಂದೆ ಕುಳಿತು ನಾನಾಡುವ ಪಂದ್ಯಗಳನ್ನು ನೋಡುತ್ತಾರೆ. ನನಗೆ 11/12 ವರ್ಷವಾಗಿದ್ದ ಸಮಯದಲ್ಲಿ ಅವರ ಸ್ಕೂಟರ್ ಮೇಲೆ ಕುಳಿತು ಸವಾರಿ ನಡೆಸುತ್ತಿದ್ದೆ ಮತ್ತು ಒಂದೇ ದಿನದಲ್ಲಿ ಕೆಲ ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದೆ. ಶಿವಾಜಿ ಪಾರ್ಕ್ ನಲ್ಲಿ ಒಂದು ಇನ್ನಿಂಗ್ಸ್ ನ ಅರ್ಧ ಭಾಗ ಆಡಿದರೆ, ಉಳಿದರ್ಧವನ್ನು ಆಜಾದ್ ಮೈದಾನದ ಮತ್ತೊಂದು ಪಂದ್ಯದಲ್ಲಾಡುತ್ತಿದ್ದೆ. ನನಗೆ ಮ್ಯಾಚ್ ಪ್ರ್ಯಾಕ್ಟೀಸ್ ಸಿಗಬೇಕೆಂದು ಅವರು ನನ್ನನ್ನು ಮುಂಬೈನೆಲ್ಲೆಡೆ ಕರೆದೊಯ್ಯುತ್ತಿದ್ದರು. ಇನ್ನು ತಮಾಷೆಯಾಗಿ ಹೇಳುವುದಿದ್ದರೆ ಕಳೆದ 29 ವರ್ಷಗಳಲ್ಲಿ ನಾನು ‘ಉತ್ತಮವಾಗಿ ಆಡಿದ್ದೇನೆ’ ಎಂದು ಸರ್ ಎಂದೂ ಹೇಳಿಲ್ಲ. ಏಕೆಂದರೆ ನನಗೆ ಸಂತೃಪ್ತಿಯ ಮೈಮರೆವಿನಿಂದ ಪರಿಶ್ರಮ ಪಡುವುದನ್ನು ಬಿಟ್ಟುಬಿಡಬಹುದು ಎಂಬುದು ಕಳವಳವಾಗಿತ್ತು. ಆದರೆ ಈಗಲಾದರೂ ಅವರು ನನ್ನನ್ನು ಹೊಗಳಬಹುದು. ಯಾಕೆಂದರೆ ನಾನು ಇನ್ನು ಯಾವುದೇ ಪಂದ್ಯ ಆಡುವುದಿಲ್ಲ. ನನ್ನ ಜೀವನದಲ್ಲಿ ನಿಮ್ಮ ಕೊಡುಗೆ ಅಪಾರ, ಹೀಗಾಗಿ ಧನ್ಯವಾದಗಳು.
    ಮುಂಬೈ ಪರ ನನ್ನ ಆಟ ಇದೇ ಕ್ರೀದಾಂಗಣದಲ್ಲಿ ಆರಂಭಗೊಂಡಿತು. ಮುಂಬೈ ಕ್ರಿಕೆಟ್ ಸಂಸ್ಥೆ ನನಗೆ ಆಪ್ತವಾದುದು. ಬೆಳಗಿನ ಜಾವ 4 ಗಂಟೆಗೆ ನ್ಯೂಜಿಲ್ಯಾಂಡಿನಿಂದ ಆಗಮಿಸಿದ ಬಳಿಕ 8 ಗಂಟೆಗೆ ಇಲ್ಲಿಗೆ ಪಂದ್ಯ ಆಡಲು ಬಂದ ದಿನ ನನಗೆ ನೆನಪಿದೆ. ನನ್ನನ್ನು ಆಗ ಆಡುವಂತೆ ಬಲವಂತ ಮಾಡಿರಲಿಲ್ಲ. ಬದಲಿಗೆ ಮುಂಬೈ ಕ್ರಿಕೆಟ್ ಮೇಲಿನ ಪ್ರೀತಿಯೇ ಕಾರಣವಾಗಿತ್ತು. ತಮ್ಮ ತಂಡದೊಂದಿಗೆ ನನ್ನ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ಮತ್ತು ನನ್ನ ಕ್ರಿಕೆಟ್ ಮೇಲೆ ಗಮನ ಹರಿಸಿದ್ದಕ್ಕಾಗಿ ಎಂಸಿಎ. ಅಧ್ಯಕ್ಷರಿಗೆ ಧನ್ಯವಾದಗಳು.
    ಭಾರತ ತಂಡ ಪ್ರತಿನಿಧಿಸುವುದೇ ಒಂದು ಕನಸಾಗಿತ್ತು. ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ದಿನದಿಂದಲೇ ಬಿಸಿಸಿಐ. ಜತೆಗಿನ ಸಂಬಂಧ ವೃದ್ದಿಸಿತು. ನನ್ನ ಪ್ರತಿಭೆಗೆ ಸೂಕ್ತ ಬೆಂಬಲವೂ ಸಿಕ್ಕಿತು. 16ನೇ ವಯಸ್ಸಿನಲ್ಲಿರುವಾಗ ನನ್ನನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿ ಅವಕಾಶ ಕಲ್ಪಿಸಿದ್ದು ನನ್ನ ವೃತ್ತಿಜೀವನದ ಪ್ರಮುಖ ಹೆಜ್ಜೆ. ಅಂದಿನಿಂದ ಈ ವರೆಗಿನ ಆಯ್ಕೆ ಸಮಿತಿಗಳ ಎಲ್ಲಾ ಸದಸ್ಯರಿಗೆ ಧನ್ಯವಾದ. ಬಿಸಿಸಿಐ. ಕೂಡ ಎಲ್ಲಾ ಸಂದರ್ಭಗಳಲ್ಲಿ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯ ನೀಡಿದ್ದನ್ನು ಈ ಕ್ಷಣದಲ್ಲಿ ಸ್ಮರಿಸಿಕೊಳ್ಳುತ್ತೇನೆ. ನಾನು ಗಾಯಾಳುವಾದಾಗ ಚೇತರಿಸಿಕೊಳ್ಳಲು ನೆರವಾದ ಸಂದರ್ಭಗಳನ್ನು ಸ್ಮರಿಸಿಕೊಳ್ಳುತ್ತೇನೆ. ಸಹಕರಿಸಿದ ಎಲ್ಲರಿಗೂ ಕೃತಜ್ಞ.
    24 ವರ್ಷಗಳ ಸುದೀರ್ಘ ವೃತ್ತಿಜೀವನ ನನ್ನ ಪಾಲಿಗೆ ವಿಶೇಷ. ಈ ವೇಳೆಯಲ್ಲಿ ಅನೇಕ ಹಿರಿಯ ಕ್ರಿಕೆಟಿಗರ ಜತೆ ಆಡುವ್ ಅವಕಾಶ ನನಗೆ ಸಿಕ್ಕಿದೆ. ಅವರಿಂದ ಸ್ಪೂರ್ತಿಯನ್ನೂ ಪಡೆದುಕೊಂಡಿದ್ದೇನೆ. ಸನ್ಮಾರ್ಗದಲ್ಲಿ ಕ್ರಿಕೆಟ್ ಸಾಧನೆಗೆ ದಾರಿ ತೋರಿದವರಿಗೆ ಥ್ಯಾಂಕ್ಸ್. ರಾಹುಲ್, ಲಕ್ಷ್ಮಣ್, ಸೌರವ್ ಮತ್ತು ಅನಿಲ್ ಸೇರಿದಂತೆ ತಂಡದ ಸದಸ್ಯರೆಲ್ಲರೂ ನನ್ನ ಮನೆಯ ಸದಸ್ಯರಿದ್ದಂತೆ. ನಿಮ್ಮೊಂದಿಗೆ ಅನೇಕ ಮಧುರ ಕ್ಷಣಗಳನ್ನು ಕಳೆದಿದ್ದೇನೆ. ಡ್ರೆಸ್ಸಿಂಗ್ ರೂಮ್ ನಲ್ಲಿ ನಿಮ್ಮೊಂದಿಗೆ ಕಳೆದ ಕ್ಷಣಗಳನ್ನು ಎಂದೆಂದೂ ಮರೆಯಲಾರೆ. ಅನೇಕ ತರಬೇತುದಾರರಿಂದ ಅನೇಕ ವಿಚಾರಗಳನ್ನು ತಿಳಿದುಕೊಂಡಿದ್ದೇನೆ.
    ಧೋನಿಯವರಿಂದ ಟೆಸ್ಟ್ ಕ್ಯಾಪ್ ಪಡೆದುಕೊಂಡ ಕ್ಷಣದಲ್ಲೇ ತಂಡಕ್ಕೊಂದು ಸಂದೇಶ ನೀಡಿದ್ದೇನೆ. ಈಗಲೂ ಅದನ್ನೇ ಹೇಳಲಿಚ್ಚಿಸುತ್ತೇನೆ. ನಾವೆಲ್ಲರೂ ಭಾರತೀಯ ಕ್ರಿಕೆಟ್ ನ ಭಾಗವಷ್ಟೆ, ದೇಶಕ್ಕಾಗಿ ಎಲ್ಲರೂ ದುಡಿಯೋಣ. ತಂಡದ ಸದಸ್ಯರೆಲ್ಲರೂ ಸೇರಿ ದೇಶಕ್ಕಾಗಿ ಮೌಲ್ಯಗಳನ್ನು ಉಳಿಸಿಕೊಂಡು ಸನ್ಮಾರ್ಗದಲ್ಲಿ ಆಡುತ್ತಾರೆನ್ನುವ ಆತ್ಮವಿಶ್ವಾಸ ನನಗಿದೆ. ಉತ್ತಮ ಕ್ರಿಕೆಟ್ ಉಳಿಸಿಕೊಂಡು ಬೆಳೆಸುವ ಜವಾಬ್ದಾರಿ ನಿಮ್ಮ ಮೇಲಿದೆ. ಹಾಗೇ ಪ್ರತಿ ಕಾಲಘಟ್ಟದ ಯುವಕರ ಮೇಲೂ ಈ ಜವಾಬ್ದಾರಿ ಇದ್ದೇ ಇರುತ್ತದೆ. ನಿಮಗೆಲ್ಲ ಶುಭವಾಗಲಿ.
    ನನ್ನ ಫಿಟ್ ನೆಸ್ ಕಾಪಾಡಿಕೊಳ್ಲಲು ಸಹಕರಿಸಿದ ವೈದ್ಯರುಗಳಿಗೆ, ಫಿಸಿಯೋಗಳಿಗೆ, ಟ್ರೇನರ್ ಗಳಿಗೆ ಥ್ಯಾಂಕ್ಸ್. ನಿಮ್ಮ ವಿಶೇಷವಾದ ಸಹಕಾರವಿಲ್ಲದೆ ನನ್ನಿಂದ ಈ ಸಾಧನೆ ಮಾಡಲು ಸಾಧ್ಯವಗುತ್ತಿರಲಿಲ್ಲ.
    ಆತ್ಮೀಯ ಸ್ನೇಹಿತರೇ, ನನ್ನ ಮೊದಲ ಮ್ಯಾನೇಜರ್ ಮಾರ್ಕ್ ಮುಸ್ಯೆರೆನಾಸ್, ೨೦೦೧ರಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಅವರು ಕ್ರಿಕೆಟ್ ನ ಗ್ರೇಟ್ ವೆಲ್ ವಿಷರ್. ಅದರಲ್ಲೂ ಭಾರತೀಯ ಕ್ರಿಕೆಟ್ ಎಂದರೆ ಪಂಚಪ್ರಾಣವಾಗಿತ್ತು. ದೇಶಕ್ಕಾಗಿ ನಾನು ಯಾವ ಸಂದರ್ಭದಲ್ಲಿ ಹೇಗೆ ಆಡಬೇಕೆನ್ನುವುದನ್ನು ಬಹಳ ಸೂಕ್ಷ್ಮವಾಗಿ ವಿವರಿಸುತ್ತಿದ್ದರು. ನನ್ನಿಂದ ಯಾವ ಸಂದರ್ಭದಲ್ಲಿ ಯಾವ ಸಂದೇಶ ಹೋಗಬೇಕೆನ್ನುವುದನ್ನು ಸೊಗಸಾಗಿ ನನಗೆ ವಿವರಿಸುತ್ತಿದ್ದರು. ಇಂದು ನಾನವರನ್ನು ಕಳೆದುಕೊಂಡಿದ್ದೇನೆ. ಆದರೂ ನಾನವರನ್ನು ಸ್ಮರಿಸಿಕೊಳ್ಳುವುದು ನನ್ನ ಕರ್ತವ್ಯ. ಈಗ ನನ್ನ ಮ್ಯಾನೇಜರ್ ಡಬ್ಲ್ಯೂ.ಎಸ್.ಜಿ ಮಾರ್ಕ್ ಏನೆಲ್ಲಾ ಮಾಡುತ್ತಿದ್ದರೋ ಆ ಎಲ್ಲಾ ಕೆಲಸವನ್ನು ಈಗ ಇವರಿಂದ ಮಾಡಿಸಿಕೊಳ್ಳುತ್ತಿದ್ದೇನೆ. ಕಳೆದ ೧೪ ವರ್ಷಗಳಿಂದ ವಿನೋದ್ ನಾಯ್ಡು ನನ್ನ ಮ್ಯಾನೇಜರ್ ಆಗಿದ್ದಾರೆ. ನನ್ನ ಕುಟುಂಬಕ್ಕೂ ಹತ್ತಿರದ ವ್ಯಕ್ತಿ. ನನ್ನ ಕೆಲಸಕ್ಕಾಗಿ ಅವರ ಕುಟುಂಬದ ಅನೇಕ ಸಮಯವನ್ನು ವ್ಯಯಿಸಿದ್ದಾರೆ. ಅವರಿಗೂ ಥ್ಯಾಂಕ್ಸ್.
    ನನ್ನ ಶಾಲಾ ದಿನಗಳಿಂದ ನಾನು ಉತ್ತಮ ಪ್ರದರ್ಶನ ನೀಡಿದಾಗಲೆಲ್ಲಾ ಬೆನ್ನು ತಟ್ಟಿ, ಈ ಕ್ಷಣದವರೆಗೂ ಪ್ರೋತ್ಸಾಹಿಸುತ್ತ ಬಂದ ಮಾದ್ಯಮಗಳಿಗೂ ಥ್ಯಾಂಕ್ಸ್. ಇನ್ನು ನನ್ನೆಲ್ಲಾ ಆಟಗಳಿಗೆ ಸಾಕ್ಷಿಯಾದ ಎಲ್ಲಾ ಛಾಯಾಗ್ರಾಹಕರಿಗೂ ಥ್ಯಾಂಕ್ಸ್ ಸೋ ಮಚ್.
    ನನಗೆ ಗೊತ್ತು ಈ ಸಂದರ್ಭದಲ್ಲಿ ನನ್ನ ಭಾಷಣ ಬಹಳ ಸುದೀರ್ಘವಾಗುತ್ತಿದೆ ಎಂದು. ಆದರೆ ಕಡೆಯದಾಗಿ ಒಂದು ಮಾತನ್ನು ಹೇಳಲು ಇಷ್ಟ ಪಡುತ್ತೇನೆ. ನಾನು 0 ರನ್ನಿಗೆ ಔಟಾದಗಲೂ ಸಹಿಸಿಕೊಂಡು,  100 ರನ್ ಮಾಡಿದಾಗ್ ಶ್ಲಾಘಿಸಿದ ನನ್ನೆಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಅಭಾರಿಯಾಗಿದ್ದೇನೆ. ನಿಮ್ಮ ಬೆಂಬಲವನ್ನು ಎಂದೆಂದೂ ಮರೆಯಲು ಸಾಧ್ಯವಿಲ್ಲ. ನಿಮ್ಮ ಬೆಂಬಲವೇ ಈ ಸಾಧನೆಗೆ ಪ್ರಮುಖ ಕಾರಣ. ನನ್ನ ಯಶಸ್ಸಿಗಾಗಿ ಅನೇಕರು ದೇವರಲ್ಲಿ ಪ್ರಾರ್ಥಿಸುತ್ತಾರೆ. ನನ್ನ ಪರ ಧ್ವನಿ ಎತ್ತುತ್ತಾರೆ. ನನ್ನ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿರುತ್ತಾರೆ. ನನ್ನ ಸಾಧನೆಯ ಹಿಂದೆ ಅವರೆಲ್ಲರ ಪಾತ್ರವಿದೆ. ನಿಮ್ಮೆಲ್ಲರ ಪ್ರೀತಿಗೆ ಚಿರಋಣಿಯಾಗಿದ್ದೇನೆ. ನೀವೆಲ್ಲರೂ ನನ್ನ ನೆನಪುಗಳಿಂದ ದೂರ ಉಳಿಯಲು ಸಾಧ್ಯವಿಲ್ಲ. ಅದರಲ್ಲೂ ನಿಮ್ಮ ‘ಸಚಿನ್... ಸಚಿನ್...’ ಉದ್ಘಾರ ಉಸಿರಿರುವವರೆಗೂ ನನ್ನ ಕಿವಿಯಲ್ಲಿ ಅನುರಣಿಸುತ್ತಲೇ ಇರುತ್ತದೆ.
    ಯಾರನ್ನಾದರೂ ಸ್ಮರಿಸಲು ಮರೆತಲ್ಲಿ ಕ್ಷಮಿಸಿ. ನನ್ನ ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ
    ಎಲ್ಲರಿಗೂ ಧನ್ಯವಾದ. 

(ಆಧಾರ: ವಿಜಯವಾಣಿ ದಿನಪತ್ರಿಕೆ(17/11/13)

No comments:

Post a Comment